ಚಂದ್ರಹಾಸ (ನಾಟಕ)

ರಂಗಭೂಮಿ ಗ್ರಂಥಮಾಲೆ

ಚಂದ್ರಹಾಸ

(ನಾಟಕ)

ಲೇಖಕರು

ಶ್ರೀ| ಕೆ ವಿ ಪುಟ್ಟಪ್ಪ, ಎಂ ಎ

(ಕುವೆಂಪು)
ಮೈಸೂರು.

ಪ್ರಕಾಶಕರು
ರಂಗಭೂಮಿ ಕಾರ್ಯಾಲಯ,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

ಮುದ್ರಣಕಾರರು
ಬಿ. ಶ್ರೀನಿವಾಸಯ್ಯಂಗಾರ್,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

~ ಮುನ್ನುಡಿ

ಮುನ್ನುಡಿ

'ಕವಿಚೂತವನ ಚೈತ್ರ'ನಾದ ಲಕ್ಷ್ಮೀಶನು ಅಶ್ವಮೇಧಯಾಗವೇ ಮುಖ್ಯ ಕಥೆಯಾಗಿರುವ ತನ್ನ 'ಜೈಮಿನಿ ಭಾರತ'ದಲ್ಲಿ ನಡುನಡುವೆ ಕೆಲವು ರಸಪೂರ್ಣವಾಗಿರುವ ಉಪಕಥೆಗಳನ್ನ್ ಸುಮನೋಹರವಾಗಿ ನೆಯ್ದಿದಾನೆ. ಅವುಗಳಲ್ಲಿ ಚಂದ್ರಹಾಸನ ಕಥೆಯೂ ಒಂದು. ಮರಳಿ ಮರಳಿ ಓದಿ ಸುಖಾನುಭವವನ್ನು ಹೊಂದಿದ ನನಗೆ ಅದನ್ನು 'ದೃಶ್ಯರೂಪದಲ್ಲಿ ಬರೆದರೆ ಚೆನ್ನಾಗಬಹುದೋ ಏನೋ? ನೋಡೋಣ' ಎಂಬ 'ಹುಚ್ಚು' ಹಿಡಿಯಿತು. ಆ ಹುಚ್ಚಿನ ಪ್ರತಿಫಲವೇ ಈ "ಚಂದ್ರಹಾಸ" ನಾಟಕವು.

ಕಥೆಯನ್ನು ದೃಶ್ಯರೂಪಕ್ಕೆ ತಿರುಗಿಸುವಾಗ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಿದರೆ ರೂಪಕಕ್ಕೆ ರಸಪುಷ್ಟಿ ದೊರಕಬಹುದು ಎಂದು ನನಗೆ ತೋರಿತು. ಅದರಂತೆ, ಮಸ್ತುವಿನಲ್ಲಿ ಹಲ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವೆನು. ಲಕ್ಷ್ಮೀಶ ಕವಿಯ ಸುಂದರ ಮಂಜುಳ ಶೈಲಿಯು ನನ್ನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದಂತೆ ಇದ್ದುದರಿಂದ ನಾಟಕವನ್ನು ಬರೆಯುವಾಗ ಕವಿವರ್ಯನ ಪದ ಪದ್ಯಭಾಗಗಳನ್ನು ಅಲ್ಲಲ್ಲಿ ಉಚಿತ ತೋರಿದಂತೆ ಅನಿವಾರ್ಯವಾಗಿ ಉಪಯೋಗಿಸಿಕೊಂಡಿದ್ದೇನೆ. 'ಜೈಮಿನಿ ಭಾರತ'ವನ್ನು ಪ್ರೀತಿಸುವ ಕನ್ನಡಿಗರಿಗೆ ಈ ನಾಟಕವು ಒಂದಿನಿತಾದರೂ ಸಂತೋಷದಾಯಕವಾದರೆ ನನ್ನ ಅಲ್ಪ ಪ್ರಯತ್ನಕ್ಕೆ ಮಹಾಫಲವು ಲಭಿಸಿತೆಂದು ತಿಳಿದು ವಿನೀತನಾಗುವೆನು.

ಕೆ ವಿ ಪುಟ್ಟಪ್ಪ.
ಶ್ರೀ ರಾಮಕೃಷ್ಣಾಶ್ರಮ,
ಮೈಸೂರು,
೧೧ನೆ ನವೆಂಬರು ೧೯೨೯

ದೃಶ್ಯ ೧

ನಮೋ ಭಗವತೇ ಶ್ರೀರಾಮಕೃಷ್ಣಾಯ ||
ಚಂದ್ರಹಾಸ
(ನಾಟಕ)
ಆದಿರಂಗಂ

ದೃಶ್ಯ ೧

[ಕುಂತಳನಗರದ ಒಂದು ಬೀದಿ. ಚಂದ್ರಹಾಸನೇ ಮೊದಲಾದ ಮೂವರು ಹುಡುಗರು ಧೂಳಾಟವಾಡುತ್ತಿರುವರು.]

೧ನೆ ಬಾಲಕ:- ನಾನೊಂದು ಹಣ್ಣು ಬರೆದೆನು; ನೋಡಿ!
೨ನೆ ಬಾಲಕ:- ನೋಡಿಲ್ಲಿ ನಾನೊಂದು ಹಕ್ಕಿಯನು ಕೆತ್ತಿಹೆನು; ಹಾರುತಿದೆ!
ಹಾರಿಹೋಗುವ ಮುನ್ನ ಬನ್ನಿ; ನೋಡಿ!
ಚಂದ್ರ:- ಸುಭಟನೋರ್ವನು ಬಿಲ್ಲು ಬಾಣಂಗಳನು ಪಿಡಿದು ಕದನಕೈದುವ ಚಿತ್ರವನು ಕೆತ್ತಿಹೆನು! ನೋಡಿ!
೧ನೆ:- ಎಲ್ಲಿ? ಎಲ್ಲಿ?
೨ನೆ:- ನನಗು ತೋರಿಸು; ಎಲ್ಲಿ?
ಚಂದ್ರ:- ಹೆದರದಿರಿ! ಹಣ್ಣು ಹಕ್ಕಿಗಳೆಂದು ತಿಳಿಯದಿರಿ!

(ಬಂದು ನೋಡುವರು)

೨ನೆ:- ಅವನ ಬೆನ್ನಿನ ಮೇಲೆ ತೂಗಾಡುತಿಹುದೇನು?
ಚಂದ್ರ:- ಬತ್ತಳಿಗೆ! ನಿನ್ನ ಹಕ್ಕಿಯದೆಲ್ಲಿ?
೧ನೆ:- ಹೋಯಿತದು ಹಾರಿ ನಿನ್ನ ಸುಭಟನ ಕಂಡು
೨ನೆ:- ಹಣ್ಣೆಲ್ಲಿ?
ಚಂದ್ರ:- ಹಸಿದ ತಿರ ತಿಂದು ತೇಗಿದಳೆಂದು ತೋರುವುದು! ಕೇಳಣ್ಣ ಕೋಗಿಲೆಯು ಹಾಡುತಿದೆ ಮಾಮರದ ತಳಿರಲ್ಲಿ!

[ಎಲ್ಲರೂ ಕೋಗಿಲೆಯನ್ನು ಅನುಕರಿಸುತ್ತಾ ಮಳಲಲ್ಲಿ ಆಡಲಾರಂಭಿಸುವರು. ಚಂದ್ರಹಾಸನಿಗೆ ಒಂದು ಸಾಲಗ್ರಾಮ ಶಿಲೆ ಸಿಕ್ಕುವುದು. ಚಂದ್ರಹಾಸನು ಹಿಗ್ಗಿ] ಸಿಕ್ಕೆತೆನಗೊಂದೊಡವೆ! [ಎದ್ದುನಿಂತು ಬಾಯಲ್ಲಿ ಬಚ್ಚಿಟ್ಟೂಕೊಳ್ಳುವನು]

೧ನೆ:- ಏನಿದು?
೨ನೆ:- ನೋಡೋಣ! (ಚಂದ್ರಹಾಸನು ತೋರಿಸುತ್ತಾ)
ಚಂದ್ರ:- ಬಟ್ಟಗಲ್ಲಿಂಟು ವರ್ತುಳದಿಂದೆ ಚೆಲ್ವಾಗಿ ಪುಟ್ಟುವದೆ ಪೊಸತು! ಕಟ್ಟೆಸಕದಿಂದ ಕಾಣಿಸುತಿಹುದು ರಮಣೀಮಾಗಿ!
೨ನೆ:- ಗೋಲಿಯಾಟಕೆ ಸೊಗಸು!
೧ನೆ:- ಪೂಜಿಸುವರೀತೆರದ ಕಲ್ಲೊಂದ ನಮ್ಮ ಮನೆಯಲ್ಲಿ. ಸಾಲಗ್ರಾಮ
ವೆಂದದನು ಕರೆಯುವರು. ದೇವರಲ್ಲಿಹನಂತೆ.
(ಚಂದ್ರಹಾಸನು ಮರಳಿ ಬಾಯಲ್ಲಿಡುವನು) ಎಂಜಲಾಗುವುದದಕೆ!
ಚಂದ್ರ:- ಇಡಲೆನಗೆ ತಾವಿಲ್ಲ [ದೂರ ನೋಡಿ] ಯಾರವರು ಮಾರದೊಳು ಬರುತಿಹರು?
೨ನೆ:- ತಿಳಿಯದೆ? ದುಷ್ಟಬುದ್ಧಿ.
ಚಂದ್ರ:- ಯಾರವನು?
೧ನೆ:- ನಮ್ಮ ರಾಜ್ಯದ ಮಂತ್ರಿ.
ಚಂದ್ರ:- ಅವನ ಸಂಗಡ ಬರುವ ಬಾಲಕರದಾರು?
೨ನೆ:- ಮದನನೆಂಬುವನೊಬ್ಬ ಮಂತ್ರಿಸುತ. ಮಂತ್ರಿಸುತೆ ಗಾಲವನ ಕೈಹಿಡಿದು ಬಹ ವಿಷಯೆ.
ಚಂದ್ರ:- (ಕೈತೋರಿಸಿ) ಅವನಾರು?
೧ನೆ:- ಗಾಲವನು ರಾಜರ ಪುರೋಹಿತನು. ಕೈತೋರಬೇಡ, ಕೆಡುಕಾಗುವುದು.

[ದುಷ್ಟಬುದ್ಧಿ. ಬಾಲಕನಾದ ಮದನ. ಬಾಲೆಯಾದ ವಿಷಯೆ ಪುರೋಹಿತನಾದ ಗಾಲವ ಇವರು ಬರುವರು. ಬಾಲಕರು ಹಿಂಜರಿವರು. ಗಾಲವನು ನಿಂತು ಚಂದ್ರಹಾಸನನ್ನು ಎವೆಯಿಕ್ಕದೆ ನೋದುತ್ತಾ ನಿಲ್ಲುವನು]

ದುಷ್ಟ:- ಗಾಲವ ಪುರೋಹಿತರೆ ನಿಂತೇನ ನೋಡುವಿರಿ?
ಗಾಲವ:- (ತೋರಿಸುತ್ತಾ) ನೋಡಲ್ಲಿ ಮಣ್ಣಾಟವಾಡುತಿಹ ಬಾಲಕರ ಗುಂಪಿನೊಳು ತಾರೆಗಲ ನಡುವೆಯಿಹ ಹಿಮಕರನ ಹೋಲುತಿಹ ಬಾಲಕನು ನಿಂತಿಹನು!
ದುಷ್ಟ:- ಅದರಲ್ಲಿ ಅತಿಶಯವದೇನು?
ಗಾಲವ:- ಆರ ಸುತನೀತರುಣ?
ಎಲ್ಲಿಂದ ಬಂದಿಹನು?
ದುಷ್ಟ:- ಈಪರಿಯೊಳೆನಿತಿಲ್ಲ ಅನಾಥರಾಗಿಹ ಬಾಲರೀ ಮಹಾಪುರದಲ್ಲಿ! ಎತ್ತಣವ ನಾರಸುತನೆಂದರಿಯೆ. ರಾಜಕಾರ್ಯದೊಳಗಿಹ ನಮಗೇತಕಿದರ ಚಿಂತೆ?
ಗಾಲವ:- ಹಾಗಲ್ಲ ನೋಡವನ; ರಾಜಚಿಹ್ನೆಗಳೆಂತು ಶೋಭಿಪವು ಮೈಯಲ್ಲಿ. ಮೊಗದ ಕಾಂತಿಯ ನೋಡು!
ಎಂದಿರ್ದೊಡಂ ಚಾರು ಲಕ್ಷಣದೊಳೋ ಪೊಳಲ್ಗೀ ಕುಂತಳಾಧೀಶನಾಳ್ವ ನಮ್ಮೀ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದು.
ದುಷ್ಟ:- (ಚಿಂತಿಸಿ) ಕರೆದವನ ಕೇಳೋಣ. ಯಾರೆಂದು?

[ಗಾಲವನು ಕೈಸನ್ನೆಯಿಂದ ಚಂದ್ರಹಾಸನನ್ನು ಕರೆಯುವನು. ಚಂದ್ರಹಾಸನು ವಿಸ್ಮಯದಿಂದ ಬಳಿಗೆ ಬರುವನು. ಮದನ, ವಿಷಯೆ ಇಬ್ಬರೂ ಹತ್ತಿರಕ್ಕೆ ಹೋಗುವರು.]

ಮಗುವೆ, ನೀನಾರವಂ?
ಚಂದ್ರ:- ನಾನರಿಯೆ!
ಗಾಲವ:- ನಿನ್ನ ಹೆಸರೇನು?
ಚಂದ್ರ:- ನನಗದೂ ಗೊತ್ತಿಲ್ಲ.
ಗಾಲವ:- ನಿನ್ನ ಪಿತನಾರು? ನಿನ್ನ ಹೆತ್ತವಳಾರು?
ಚಂದ್ರ:- ನಾನೊಂದನರಿಯೆ.
ಗಾಲವ:- ನಿನಗುಣಿಸನಿಕ್ಕುವರದಾರು?
ಚಂದ್ರ:- ನನ್ನಜ್ಜಿ!
ಗಾಲವ:- ಯಾರಾಕೆ? ಎಲ್ಲಿಹಳು?
ಚಂದ್ರ:- (ದೂರ ಕೈತೋರಿಸಿ) ಅಲ್ಲಿಹಳು!
ದುಷ್ಟ:- ಗಾಲವರೆ, ಈಗಿರಲಿ, ಆಮೇಲೆ ನೋಡೋಣ ಬನ್ನಿ ಹೊತ್ತಾಯ್ತು, ರಾಜಕಾರ್ಯಕ್ಕೆ. ಬಾಲಕನೆ ಬಹಳ ಸಂತಸವಾಯ್ತು ನಿನ್ನ ನೋಡಿ! ಹೋಗು ನಿನ್ನಜ್ಜಿಗಿದನರಹು.

[ಚಂದ್ರಹಾಸನು ತೆರಳುವಾಗ ವಿಷಯೆಯು ಕೈಲಿದ್ದ ಹೂವೊಂದನ್ನು ಕೊಡುವಳು. ಎಲ್ಲರೂ ಹೋಗುವರು. ಚಂದ್ರಹಾಸನು ಮಾತ್ರ ನಿಲ್ಲುವನು. ಉಳಿದಿಬ್ಬರು ಬಾಲಕರು ಹತ್ತಿರಕ್ಕೆ ಓಡಿಬಂದು ಜೂವನ್ನು ನೋಡಿ]

೧ನೇ:- ಯಾರಿತ್ತರೀಹೂವ?
ಚಂದ್ರ:-ವಿಷಯೆ.
೨ನೇ: ರನ್ನದಲಿ ಕೆತ್ತಿದುದು!
೧ನೇ: ಬಾರಣ್ಣ ಕೇಳಿಲ್ಲ ಅಮ್ಮ ಕೂಗುವಳು.

[ಹೊರಡುವರು. ಚಂದ್ರಹಾಸನು ಹೂವನ್ನೂ ಸಾಲಿಗ್ರಾಮವನ್ನೂ ನೋಡುತ್ತ ನಿಲ್ಲುವನು]
(ಪರದೆ ಬೀಳುವುದು)

ದೃಶ್ಯ ೨

ದೃಶ್ಯ ೨
[ದುಷ್ಟಬುದ್ಧಿಯ ಮನೆಯ ಒಂದು ಕೊಠಡಿಯಲ್ಲಿ ಅವನು ಚಿಂತಾಕ್ರಾಂತನಾಗಿ ಕುಳಿತುರುವನು.]

ದುಷ್ಟ:- ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನ
ಗೇಕಾಧಿಪತ್ಯಮಾಗಿರ್ದಪುದು, ಮುಂದಿವಂ
ಭೂಕಾಂತನಾದಪಂ ಗಡ! ವಿಪ್ರರೆಂದ ನುಡಿ
ತಪ್ಪದದು! ಎನ್ನಾತ್ಮಜರ್ಗೆ ಬೇಕಾದ
ಸಂಪದಂ ಬಯಲಾಗು ಪೋದಪುದೇ? ಗಾಲವನು
ಏನೆಂದ! ದುಷ್ಟಬುದ್ಧಿಯ ನಾಮವನ್ವರ್ಥ
ವಾಗದಿರೆ ಎನ್ನ ಬಾಳಿದು ವ್ಯರ್ಥ! ಎನ್ನಿಳೆಗೆ,
ಎನ್ನಾತ್ಮಜರ್ಗೆ ಮುಡುಪಾದ ಈ ಪೊಳಲಿಂಗೆ
ಅವನೊಡೆಯನಾಗುವನೆ. ಇಲ್ಲ, ಎಂದೂ ಇಲ್ಲ!
ವಿಪ್ರನಾಡಿದ ಮಾತು ಪುಸಿಯಪ್ಪುವಂತೆಸಗಿ
ಚಾಂಡಾಲರಿಂದಾ ತರಳನಂ ಕೊಲ್ಲಿಪೆಂ!
ಅರಸುಗುವರಿಯನೆನ್ನ ಮುದ್ದು ಮಗ ಮದನಂತೆ
ಕೈಹಿಡಿಸಿ ಪಟ್ಟಗಟ್ಟುವೆನವಗೆ. ಕಿಂಕರನು
ಕಟುಕರಿನ್ನೇಕಿನ್ನು ತರಲಿಲ್ಲ. ಕಾಲೊಳಿಹ
ಕಂತಕವ ಕಿತ್ತಹೊರತೆನಗೆ ಸುಖವಿಲ್ಲ.
ಎನ್ನ ಬಾಳಿನ ಶಾಂತಿ ಬಾಲಕನ ಕೊಲೆಯಲ್ಲಿ
ಮಲಗಿಹುದು. [ಮದನ ವಿಷಯೆ ಬರುವರು]

ಮದನ:- ಅಪ್ಪಾ, ಆ ಬಾಲಕನು ಯಾರು?

ವಿಷಯೆ:- ನಮ್ಮ ಜೊತೆಗಾಡುವವರಾರಿಲ್ಲ. ಅವನಿದ್ದ
ರಾಟವಾಡಲು ಆಗುತಿತ್ತಪ್ಪಾ. ಕರೆಸವನ.
ದುಷ್ಟ:- (ಮಗಳನ್ನು ಎತ್ತಿಕೊಂಡು) ಕರೆಸುವೆನು ತಾಳಮ್ಮ ಎನ್ನ ಮುದ್ದಿನ ಗಿಣಿಯೆ.

[ದುಷ್ಟಬುದ್ಧಿಯ ಹೆಂಡತಿ ತಾರಕಾಕ್ಷಿಯು ಬಂದು]

ತಾರ:- ಕರ್ಣನಂ ಮೀರಿಹಳು ದಾನದಲಿ, ವಿಷಯೆ
ಇಂದೊಂದು ರನ್ನದಲರನು ಯಾರಿಗೋ ಕೊಟ್ಟು ಬಂದಿಹಳು!
ವಿಷಯೆ:- ಯಾರಿಗಿಲ್ಲಪ್ಪಾ ಅವನಿಗೇ!
ನೀಕರೆದು ದಾರಿಯಲಿ ಮಾತನಾಡಿದೆಯಲ್ಲಾ
ಅವನಿಗೇ?
ತಾರಾ:- ಮುಂದವನೆ ಗಂಡನಾಗುವನೇನೋ ನಿನಗೆ?
ದುಷ್ಟ:- ಕೇಳಿದೆಯ ತಾರಾ ಪುರೋಹಿತನು
ಪೇಳ್ದುದನು? ಬೀದಿಯಲಿ ಸಂಚರಿಪ ದೇಸಿಗನು
ಮುಂದೆಮ್ಮ ನಾಡಿಗೆ ದೊರಯಪ್ಪನಂತೆ.
ತಾರಾ:- ಸರಿ, ಗಾಲವನ ಮಾತು. ಕಟ್ಟುಕತೆಗಳ ಕಾಲ
ವೆಂದರಿತನೇನವನು?
ದುಷ್ಟ:- ತಪ್ಪುವದೆ ಹೇಳು
ವಿಪ್ರರೆಂದಾಮಾತು. ಗಾಲವನು ಪ್ರಾಕೃತನೆ?
ತಾರಾ:- ಅವನ ಹಣೆಯಲ್ಲಿ ಬರೆದಂತಾದರೇನಮಗೆ?
ದುಷ್ಟ:- ಯೋಚಿಸಾಡುವೆ ಏನು? ಬಹುದೂರವಿಹುದೆನ್ನ
ನೋಟ.ಹೆಂಗಸು ನೀನು! ನಿನಗೇನು ಗೊತ್ತು?
ಈ ಕುಂತಳೇಂದ್ರಂಗೆ ಸುತರಿಲ್ಲ. ನಮ್ಮ ಮಗ
ಮದಂಗೆ ಪಟ್ಟಾಭಿಷೇಕವಂ ಮಾಡಿ
ಅರಗುವರಿಯಂ ತಂದು ಮದುವೆಯಂ ಮಾಡಿ
ಆತನರಸನಾಗಬೇಕೆಂಬಾಸೆ ಎನಗಿಹುದು
ನನ್ನ ನಿನ್ನೊಳಗಿರಲಿ ಬಯಲಾಗದಿರಲಿ ಇದು.
ಅದಕೆ ಬೇಕಾದೆಲ್ಲ ಯತ್ನಗಳ ನೆಸಗುವೆನು.
ನರಕವಾದರು ಸರಿಯೆ ಈಜುವೆನು ಪೂಣ್ಕಿಯಿದು!
ಹಿಂದಿನಿಂದೆಲ್ಲವನು ನಿನಗೊರೆವೆ. ಮಕ್ಕಳನು
ಕರೆದುಕೊಂಡೀಗ ನೀಹೊರಡು. ಗುಟ್ಟಾದ
ಕಜ್ಜವಿಹುದೆನಗೆ. [ಮಾತನಾಡದೆ ಅವರು ಹೊರಡುವರು]
ನೆತ್ತರಿಗೆ ಹಸಿದಿಹೆನು
ಬಾಲನಾದೊಡೆ ಏನು? ಚೇಳು ಮರಿಯಾದೊದೇಂ?
ಆಳ್ಕರಿಂದಪ್ಪಿದೊಡೆ ಕಚ್ಚದೇ? ಹುಲಿ ಹಸುಳೆ ಎಂದು
ಹಾಲೂಡಿ ಸಾಕಿದರೆ ವಿಶ್ವಾಸಿಯಾಗುವುದೆ?
ಬೆಳೆವ ಮುಳ್ಳನು ಮೊಳೆಯುವಾಗಲೇ ಮುರಿಯುವುದು
ಮತಿವಂತರಿಗೆ ಲೇಸು! [ಕಾಕರನು ಮೂವರು ಚಾಂಡಾಲರನ್ನು
ಕರೆದುಕೊಂಡು ಬರುವನು]
ಏಕಿಷ್ಟು ಹೊತ್ತಾಯ್ತು!
ನಿಮ್ಮ ಮೈ ಕೈಗಲಲಿ ನೆತ್ತರಿನ ಕಲೆಯೇನು?
ಭೀಷಣ:- ಸೆರೆಹಿಡಿದ ಬೇಹುಗಾರನೀಗಲೇ ಕೊಂದು
ಬಂದಿಹೆವು. ಕೈ ತೊಳೆಯಲೂ ಕೂಡ ಸಮಯ
ಸಿಗಲಿಲ್ಲ. ಮುಂದೇನು ತಮ್ಮಾಜ್ಞೆ?
ದುಷ್ಟ:- (ಕಿಂಕರನಿಗೆ) ಕಿಂಕರಾ
ಆಚೆನಡೆ. (ಅವನು ಹೋಗುವನು) ಭೀಷಣಾ ಬಳಿಗೆ ಬಾ
ಇಂದೊಂದು ಕೊಲೆಯಾಗಬೇಕು. ಆಯಾಸದ ಕೊಲೆಯಲ್ಲ,
ಬಲಿಯ ಮಿಗವಾಗುವನು ಬಾಲಕನು.
ಭೀಷಣ:- ಅದಕೇನು ಮಾಸಾಮಿ. ಬೆಸಸಿದೆಡೆ ಕಾರ್ಯ ಕೈಗೂಡಿದಂತೆ.
ಯಾರವನು? ಎಲ್ಲಿಹನು?
ದುಷ್ಟ:- ತಂದೆತಾಯಿಲ್ಲದೇ ಬೀದಿಗಳಲಲೆಯುತಿಹ ದೇಸಿಗನು.
ಭೀಷಣ:- ಯಾವ ಅಪರಧ?
ದುಷ್ಟ:- ನಿನಗೇಕೆ ಆ ಚಿಂತೆ, ಸೇವಕರು ಬೇಕು
ಬೇಡನ್ನದೆ ಕಾರ್ಯಕನುವಾಗಬೇಕು.
"ಹೇಳುವುದಕವರಲ್ಲ! ಕೇಳುವುದಕವರಲ್ಲ;
ಮಾಡಿ ಮಡಿವುದಕವರು!" ತಿಳಿಯಿತೇ ಭೀಷಣ;
ಭೀಷಣ:- ತಪ್ಪಾಯ್ತು ನನ್ನೊಡೆಯ.
ದುಷ್ಟ:- ಈ‌ಪುರದ ಬೀದಿಯೊಂದೊಳೋರ್ವ ಮುದುಕಿಯ ಕೂಡಿ
ವಾಸಿಸುವನೋರ್ವ ತೇಜಸ್ವಿಯಾಗಿಹ ತರಳಂ
ಹೊಸಬರವರಲ್ಲಿಗೈತಂದು ಬಹು ಕಾಲವಾಗಿಲ್ಲ. ನೀವವರ ನೆಲೆಯರಿತು ಮುದುಕಿಯಂ
ಕೊಂದೆಲ್ಲೆ ಕಾನನಾಂತರದೊಳಾತರಳನಂ ಸಂಹರಿಸಿ ಕುರುಪು ತಂದೆನಗೆ
ತೋರುವುದು ಯಾರರಿಯದಂತೆ;
ಭೀಷಣ:- ಕುಂದಲ್ಲದಂತೆ ಕೊಲೆ ಮಾಡುವೆವು
ದುಷ್ಟ:- ತರಳನಂದವಕಂಡು ಎದೆಗರಗಬೇಡಿ.
ಭೀಷಣ:- ಎದೆಗರಗುವುದೆ? ಮರುಗಕವೆಂಬುದನರಿಯೆ.
ದುಷ್ಟ:- ರೋದನಕೆ ಮರುಳಾಗಬೇಡಿ.
ಭೀಷಣ:- ರೋದನವ ಕೇಳಿಕೇಳೆಮ್ಮ ಕರ್ಣಗಳು ಕಿವುಡಾಗಿ ಹೋಗಿಹವು; [ಕಟುಕರು ಹೋಗುವರು]
ದುಷ್ಟ:- ನೆತ್ತರಿನ ಕಡಲಲ್ಲಿ ಅರೆವಾಸಿಜಿಹೆನು, ಹಿಂಜರಿವುದೇಕಿನ್ನು. ತೀರವನು
ಸೇರುವೆನು. ಇಲ್ಲವಾದರೆ ನಡುವೆ ಮುಳುಗುವೆನು!

(ಪರದೆ ಬೀಳುವುದು)