ಸಿನಿಮಾ

ಸಿನಿಮಾ

ಗೋಡೆಯ ಆಚೆಯಿಂದ ಈಚಿನ ಕಥೆ

Shawshank Redemption ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)

ಡರಬೌನ್ಟ್ ನಿರ್ದೇಶಿತ ಮೊದಲ ಚಿತ್ರವಾದ ಇದು ಆತನ ಆಗಲೇ ಪ್ರಸಿದ್ಧವಾಗಿದ್ದ ಬರವಣಿಗೆ ಹಾಗೂ ಇತರ ಚಿತ್ರನಿರ್ಮಾಣ ಸಂಬಂಧೀ ಕುಶಲತೆಗಳ ಪಟ್ಟಿಗೆ ಇನ್ನೊಂದು ಗರಿಯನ್ನಿಟ್ಟಿತು. ಮಾನವನ ಮೂಲಭೂತ ಭಾವನೆಗಳು ಪರೀಕ್ಷೆಗಿಟ್ಟಾಗ ಹೇಗೆ ಬೇರೆ ಬೇರೆ ರೂಪಗಳಿಂದ ಚಿಮ್ಮಿ ಹೊರಹೊಮ್ಮುತ್ತದೆ ಎನ್ನುವುದು ಈ ಕಥೆಯ ಕಥನ. ನಮ್ಮ ಮನಸ್ಸನ್ನಾವರಿಸಿ ಮುದಕೊಡುವ ಕಥೆಗಳು ಶ್ರೀಸಾಮಾನ್ಯರಿಂದಲ್ಲ (ಸ್ಟೀರಿಯೋ ಟೈಪ್) ಅವರೊಳಗಿನ ಒಬ್ಬೊಬ್ಬ ವಿಶೇಷ ವ್ಯಕ್ತಿಯಿಂದ (ಆರ್ಖಿಟೈಪ್) ಹುಟ್ಟುತ್ತವೆ ಎಂದು ಒಮ್ಮೆ ಓದಿದ್ದೆ. ಆನ್ಡಿ ಡುಫ್ರ್ರೆನ್ಸ್ ಅಂಥಾ ಒಬ್ಬ ಕಥಾನಾಯಕ. ಆತ ತೀರಾ ಸರಳ, ಸಾಮಾನ್ಯ ಸಜ್ಜನ. ಮೇಲ್ನೋಟಕ್ಕೆ ತೀರಾ ಸಾಧಾರಣ ವ್ಯಕ್ತಿ. ಆದರೆ ಪರಿಸ್ಥಿತಿ ಕೂಡಿಬಂದಾಗ ಆವರೆಗೆ ಅಡಗಿದ್ದ ಒಂದು ಅದಮ್ಯ ಶಕ್ತಿ ಹೊರಬಂದು ಪವಾಡಗಳನ್ನು ಆತ ಸಾಧಿಸುತ್ತಾನೆ.

ಪ್ರಪಂಚದಾದ್ಯಂತ ಇರುವ ಅನೇಕ ಬಂದೀಖಾನೆಗಳಂತೆ ಶ್ವಶಾಂಕ್ ಬಂದೀಖಾನೆಯೂ ಒಂದು. ಇಲ್ಲಿನ ವಾರ್ಡನ್ ಮುಂಗೋಪಿ, ಅತಿ ಉಗ್ರ ಶಿಕ್ಷೆಗಳನ್ನು ನಾಲಗೆಯ ತುದಿಯಲ್ಲೇ ಇಟ್ಟುಕೊಂಡು ತಿರುಗುವಾತ. ಅಲ್ಲಿನ ಸಿಬ್ಬಂದಿಗಳೆಲ್ಲರೂ ಖೈದಿಗಳನ್ನು ಹುಳಗಳಂತೆ ನೋಡುವವರು. ಇಲ್ಲಿ ದೇಶದ ಮೂಲೆ ಮೂಲೆಗಳಿಂದ ಖೈದಿಗಳು ಬಂದು ಸೇರಿದ್ದಾರೆ. ನರಕಕ್ಕೇ ಇನ್ನೊಂದು ಹೆಸರೇ ಆಗಿರುವ ಜಾಗ ಇದು. ಸಲಿಂಗಕಾಮಿಗಳ, ಕೊಲೆಪಾತಕಿಗಳ ಪ್ರಪಂಚ ಇದು. ಅಂತೆಯೇ ತಪ್ಪಿ ಬಂದ ಅನೇಕ ನಿರ್ದೋಶಿ, ಅಮಾಯಕರು ಇರುವ ಜಾಗ! ಚಿತ್ರದುದ್ದಕ್ಕೂ ಬರುವ ಖೈದಿಗಳ ಮೆಚ್ಚಿನ ಹಾಸ್ಯವೆಂದರೆ, “ಇಲ್ಲಿ ಎಲ್ಲರೂ ನಿರಪರಾಧಿಗಳು!” ಆಂಡಿ ಡುಫ್ರ್ರೆನ್ಸ್ ಒಂದೆಡೆ ಚಿತ್ರದಲ್ಲಿ ಹೇಳುವಂತೆ ನಾನು ಹೊರಗಿದ್ದಷ್ಟು ದಿನ ಒಳ್ಳೆಯವನಾಗಿದ್ದೆ. ಕೆಟ್ಟವನಾಗಲು ಜೈಲು ಸೇರಬೇಕಾಯಿತು ಎಂನ್ನುವಂಥಾ ಪರಿಸ್ಥಿತಿ. ಇಲ್ಲಿ ಬದುಕಬೇಕಾದರೆ ಅನೈತಿಕ ಮಾರ್ಗಹಿಡಿಯುವುದು ಅನಿವಾರ್ಯ ಎಂಬ ಸ್ಥಿತಿ. ಇಂಥದ್ದರಲ್ಲಿ ಸಿಲುಕಿ ಹಾಕಿಕೊಂಡ ಸಂದರ್ಭದಲ್ಲಿ ಎಂಥವರಾದರೂ ಧ್ರಿತಿ ಕಳೆದುಕೊಳ್ಳುತ್ತಾರೆ. ಆದರೆ ಆಂಡೀ ಡುಫ್ರ್ರೆನ್ಸ್ ಎಲ್ಲರಂತಲ್ಲ!

ಜೈಲಿನೊಳಗಿದ್ದೂ ಹೊರಗಿನಿಂದ ಸಣ್ಣಪುಟ್ಟ ಸಾಮಾನುಗಳನ್ನು ತರಿಸುವ ಚಾಣಾಕ್ಷ `ರೆಡ್' ಆಂಡೀ ಡುಫ್ರ್ರೆನ್ಸ್ ಹತ್ತಿರದ ಗೆಳೆಯನಾಗುತ್ತಾನೆ. ಈತನಿಂದ ಡುಫ್ರ್ರೆನ್ಸ್ ಒಂದು ಸಣ್ಣ ಸುತ್ತಿಗೆಯನ್ನು ತರಿಸುತ್ತಾನೆ. ಯಾರಿಗೂ ತಿಳಿಯದಂತೆ ಇಲ್ಲಿಂದ ಡುಫ್ರ್ರೆನ್ಸನ ಪಲಯನ ಉಪಾಯ ನಿಧಾನಕ್ಕೆ ಆರಂಭವಾಗುತ್ತದೆ. ಜೈಲಿನ ಎಲ್ಲಾ ಕಟ್ಟು-ನಿಟ್ಟಿನ ನಡುವೆ ಮಾನವ ಮನಸ್ಸಿನ ಹುಳುಕುಗಳನ್ನು ಹುಡುಕುವುದು ಡುಫ್ರ್ರೆನ್ಸಗೆ ಸಾಧ್ಯವಾಗುತ್ತದೆ. ಇದರಿಂದ ಚತುರ ಬ್ಯಾಂಕ್ ಉದ್ಯೋಗಿಯಾಗಿದ್ದ ಆತ ತನ್ನ ಬ್ಯಾಂಕಿಂಗ್ ಚತುರತೆಯಿಂದಲೇ ಬಂದೀಖಾನೆ ಉದ್ಯೋಗಿಗಳ ಗೌರವಕ್ಕೆ ಒಳಗಾಗುತ್ತಾನೆ, ಅವರ ಬ್ಯಾಂಕಿಂಗ್ ಅಗತ್ಯಗಳನ್ನು ಆಗಿಂದಾಗ್ಗೆ ಪೂರೈಸುತ್ತಾ ಅವರ ಹಣಕಾಸು ಸಂಬಂಧೀ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾ ಹೋಗುತ್ತಾನೆ. ಇನ್ನೊಂದೆಡೆ ತನ್ನ ಸರಳತೆ, ಹಠಮಾರಿತನಗಳಿಂದ ಅನೇಕ ವರ್ಷಗಳಿಂದ ಧೂಳು ಹಿಡಿದಿದ್ದ ಬಂದೀಖಾನೆಯ ಗ್ರಂಥಾಲಯವನ್ನು ಸ್ವಪ್ರಯತ್ನದಿಂದ ಪುನರುಜ್ಜೀವಿತಗೊಳಿಸುತ್ತಾನೆ. ಇದರಿಂದ ತನ್ನ ಸಹ ಖೈದಿಗಳ ಮನಸ್ಸನ್ನೂ ಗೆಲ್ಲುತ್ತಾನೆ. ಗ್ರಂಥಾಲಯ ನಿಧಾನಕ್ಕೆ ಬಂದೀಖಾನೆಯ ಜೀವನದ ಆಶಾಕಿರಣವಾಗಿ ರೂಪಗೊಳ್ಳುತ್ತಾ ಹೋಗುತ್ತದೆ. ಬಂದೀಖಾನೆ ಉದ್ಯೋಗಿಗಳ ಗೌರವವನ್ನು ತನ್ನ ಪಲಾಯನಕ್ಕೆ ಬಳಸುವ, ತಾನು ಹೊರಬರುತ್ತಿದ್ದಂತೆಯೇ ಬಂದೀಖಾನೆಯ ಒಳಗಿನ ಆಗುಹೋಗುಗಳನ್ನು ಹೊರಗೆಳೆಯುತ್ತಾನೆ. ದೇಶದಾದ್ಯಂತ ಈ ಬಂದೀಖಾನೆಯಲ್ಲಿನ ಅವ್ಯವಹಾರಗಳ ಬಗ್ಗೆ ಗಲಭೆ ಉಂಟಾಗುತ್ತದೆ. ಬಂದೀಖಾನೆ ವಾರ್ಡನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಆಂಡೀ ಡುಫ್ರ್ರೆನ್ಸ್ ಸ್ವತಂತ್ರವಾಗಿ ಹಾರಿಹೋಗುತ್ತಾನೆ.

ಇದಾಗಿ ಅನೇಕ ವರುಷಗಳ ನಂತರ ಬಿಡುಗಡೆಗೊಂಡ ರೆಡ್ ತನ್ನ ಗೆಳೆಯನ ಊರಿನೆಡೆಗೆ ಹೋಗುತ್ತಾನೆ. ದಾರಿಯಲ್ಲಿ ಆಂಡೀ ಡುಫ್ರ್ರೆನ್ಸ್ ಬಗ್ಗೆ ಯೋಚಿಸುತ್ತಾ ಕೆಲವು “ಹಕ್ಕಿಗಳ ರೆಕ್ಕೆಯನ್ನು ತಡೆಯುವುದು ಸಾಧ್ಯವೇ ಇಲ್ಲ” ಎನ್ನುವಾಗ ಚಿತ್ರ ವೀಕ್ಷಿಸುತ್ತಿರುವ ನಮ್ಮ ಕಣ್ಣುಗಳಲ್ಲಿ ಇಡೀ ಚಿತ್ರವನ್ನು ಮತ್ತೊಮ್ಮೆ ತೋರಿಸಿಬಿಡುತ್ತದೆ. ಶ್ವಶಾಂಕ್‌ನ ಒಂದೊಂದು ಕ್ಷಣವೂ, ಒಂದೊಂದು ಮೂಲೆಯೂ ನಮಗೆ ಕಂಡುಬರುತ್ತದೆ.

ಈ ಚಿತ್ರವನ್ನು ಬಂದೀಖಾನೆ ಪಲಾಯನ ಚಿತ್ರ ಎಂದು ವರ್ಗೀಕರಿಸುವಷ್ಟು ಈ ವಿಷಯದಲ್ಲಿ ಚಿತ್ರಗಳು ನಿರ್ಮಾಣವಾಗಿವೆ. ಆದರೆ ಶ್ವಶಾಂಕ್ ಇತರ ಅನೇಕ ಕಾರಣಗಳಿಂದಾಗಿ ನನಗೆ ಆಪ್ತವಾಯಿತು. ಬಂದೀಖಾನೆಯಲ್ಲಿ ಐವತ್ತು ವರುಷಗಳಿಗೂ ಮೊದಲಿನಿಂದ ಬರದೇ ಇದ್ದ ಪುಸ್ತಕಗಳನ್ನು ಬರುವಂತೆ ಮಾಡುವ ಛಲದಿಂದ ಆಂಡೀ ಡುಫ್ರ್ರೆನ್ಸ್ ಸರಕಾರಕ್ಕೆ ದಿನಕ್ಕೊಂದು ಕಾಗದ ಬರೆಯಲಾರಂಭಿಸುತ್ತಾನೆ. ಆರು ವರುಷಗಳ ನಂತರ ೨೦೦ ಡಾಲರ್ ಚೆಕ್ ಹಾಗೂ ಒಂದಷ್ಟು ಹಳೆಯ ಪುಸ್ತಕಗಳು ಬರುತ್ತವೆ. ಪಟ್ಟ ಪ್ರಯತ್ನಕ್ಕೆ ತಕ್ಕ ಫಲ ಇದಲ್ಲದಿದ್ದರೂ, ಪ್ರಯತ್ನಕ್ಕೆ ಫಲವಿದೆ ಎಂದು ಇದು ಸಾಧಿಸುತ್ತದೆ. ಇದರಿಂದ ಪ್ರೇರಿತನಾದ ಆಂಡೀ ಡುಫ್ರ್ರೆನ್ಸ್ ದಿನಕ್ಕೆ ಎರಡು ಪತ್ರ ಬರೆಯಲಾರಂಭಿಸುತ್ತಾನೆ. ಈತನ ಒತ್ತಡೆ ತಡೆಯಲಾಗದ ಸರಕಾರ ಬಂದೀಖಾನೆಗೆ ಒಂದು ಗ್ರಂಥಾಲಯವನ್ನೂ ವಾರ್ಷಿಕ ಅನುದಾನವನ್ನೂ ಮಂಜೂರು ಮಾಡುತ್ತದೆ! ಪುಡಿಗಳ್ಳನಾಗಿ ತನ್ನ ೧೩ನೇ ವಯಸ್ಸಿನಿಂದ ಬಂದೀಖಾನೆಯ ಒಳಗೆ-ಹೊರಗೆ ತಿರುಗಾಡುತ್ತಿದ್ದ ಬಾಲಕನೊಬ್ಬ ಆಂಡೀ ಡುಫ್ರ್ರೆನ್ಸ್ ಸಂಪರ್ಕದಿಂದಾಗಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿ ಬಂದೀಖಾನೆಯಿಂದಲೇ ಪರೀಕ್ಷೆಬರೆದು ಉತ್ತೀರ್ಣನಾಗುತ್ತಾನೆ. ರೆಡ್ ಹಾಗೂ ಅವನಂಥಾ ಅನೇಕ ಸಹ ಖೈದಿಗಳಲ್ಲಿ ತನ್ನ ಸರಳ, ಮೌನ ವಿಧಾನಗಳಿಂದ ಬದುಕುವ ಹೊಸ ಆಸೆಯನ್ನು ಆಂಡಿ ಡುಫ್ರ್ರೆನ್ಸ್ ಮೂಡಿಸುತ್ತಾನೆ. ಇಷ್ಟೆಲ್ಲಾ ಆದರೂ ಆಂಡೀ ಡುಫ್ರ್ರೆನ್ಸನ್ನು ಒಬ್ಬ ಅತಿಮಾನವನಾಗಿ ಚಿತ್ರ ಎಲ್ಲೂ ತೋರಿಸುವುದಿಲ್ಲ. ಆಂಡೀ ಡುಫ್ರ್ರೆನ್ಸ್ಯ ಮಾತಿನಲ್ಲೇ ಹೇಳುವುದಾದರೆ, ಆತ ಒಬ್ಬ ಸರಳ ಆದರೆ ಚಾಣಾಕ್ಷ ಚೆಸ್ ಆಟಗಾರ ಅಷ್ಟೆ. ಇದರಿಂದ ಚಿತ್ರ ಉದ್ದಕ್ಕೂ ವಾಸ್ತವತೆಯ ಛಾಯೆಯನ್ನು ಉಳಿಸಿಕೊಂಡೇ ಹೋಗುತ್ತದೆ. ನಿಜ ಜೀವನದಲ್ಲೂ ನೈಜ ನಾಯಕರು ಹೀಗೇ ಅಲ್ಲವೇ?

ಬಂದೀಖಾನೆಯ ಗೋಡೆಗಳು ವಿಚಿತ್ರ. ಇದರ ಒಳಗಡೆ ನಮಗೆ ಬೆಲೆ ಇದೆ. ಇದರಿಂದ ಹೊರಗಡೆ ಹೋದೊಡನೆ ನಾವು ಯಾರೂ ಗುರುತಿಸದ, ಗುರುತಿಸಿದರೂ ಮಾಜೀ ಖೈದಿ ಎಂದು ಗುರುತಿಸುವ ಸಮಾಜ ಕಾದಿದೆ ಎಂದು ಶ್ವಶಾಂಕ್ ಖೈದಿಗಳಿಗೆಲ್ಲಾ ತಿಳಿದಿದೆ. ಐವತ್ತು ವರ್ಷಗಳನ್ನು ಇಲ್ಲೇ ಕಳೆದ ಬ್ರೂಕ್ ಎಂಬ ವೃದ್ಧ ಬಂದೀಖಾನೆಯಿಂದ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹೊರಗಿನ ಬದುಕಿಗೆ ಹೊಂದಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ರೆಡ್ ಬಿಡುಗಡೆ ಹೊಂದಿದಾಗಲೂ ಅದೇ ತರಹದ ಭಾವನೆಗಳಿಂದ ಹಾದು ಹೋಗುತ್ತಾನೆ. ೪೦ ವರ್ಷ ತನ್ನ ಪ್ರತಿಯೊಂದು ಕೆಲಸಕ್ಕೂ ಅನುಮತಿ ಪಡೆದು ಅಭ್ಯಾಸವಾಗಿದ್ದ ರೆಡ್ ಹೊರಜಗತ್ತಿನಲ್ಲಿ ಮೂತ್ರವಿಸರ್ಜಿಸಲು ಅನುಮತಿಪಡೆಯುವಾಗ ನಮಗೆ ಅದು ನಗೆ ತರಿಸಬಹುದಾದರೂ, ಅದರ ಹಿಂದಿನ ಕ್ರೌರ್ಯ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಬಂದೀಖಾನೆಯಿಂದ ಹೊರಗಿನ ಜೀವನದಲ್ಲಿ ರೆಡ್ ತೀವ್ರ ನಿರಾಸೆ ಅನುಭವಿಸುತ್ತಾನೆ. ಆದರೆ ಆತ ಗೆಳೆಯ ಆಂಡೀ ಡುಫ್ರ್ರೆನ್ಸಗೆ ನೀಡಿದ ಮಾತು ಉಳಿಸಲಿಕ್ಕಾಗಿ ಅವನನ್ನು ಹುಡುಕಿಕೊಂಡು ಹೋಗುತ್ತಾನೆ.

ರೆಡ್ ತಾನು ಕನಸಿನಲ್ಲಿ ಕಂಡ ನೀಲ ಸಾಗರದ ದಂಡೆಯಲ್ಲೇ ಡುಫ್ರ್ರೆನ್ಸನ್ನು ಮತ್ತೆ ಭೇಟಿಮಾಡುತ್ತಾನೆ. ಬಂದೀಖಾನೆಯ ಗೆಳೆಯರು ಬಂದೀಖಾನೆಯ ಹೊರಗೆ ಭೇಟಿಯಾಗುತ್ತಾರೆ. ಇಲ್ಲಿ ರೆಡ್ ಸ್ವಾತಂತ್ರ್ಯದ ಸವಿಯನ್ನು ಸ್ವತಂತ್ರ ಮನುಷ್ಯನಷ್ಟೇ ಅರಿಯುತ್ತಾನೆ ಎನ್ನುವಾಗ ಸ್ವಾತಂತ್ರಕ್ಕೆ ಒಂದು ಹೊಸ ಅರ್ಥ ಮೂಡುತ್ತದೆ.

ಬಂದೀಖಾನೆ ಎಂಬ ಕಲ್ಪನೆ ಸಮಾಜದ ನಿರ್ಮಾಣದೊಂದಿಗೇ ರೂಪಿತವಾದ ಒಂದು ವ್ಯವಸ್ಥೆ. ಮಾನವನು ಮಾನವನಿಗೆ ಕೊಡುವ ಶಿಕ್ಷೆಯ ಬಗ್ಗೆ ಬಹಳ ಕಾಲದಿಂದ ಚರ್ಚೆಗಳು ನಡೆದೇ ಇವೆ. ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತೋರಿಸುವ ಅನೇಕ ಕಾದಂಬರಿಗಳು, ಕಥೆಗಳು ಬಹುಕಾಲದಿಂದ ನಡೆಯುತ್ತಾ ಬಂದಿವೆ. ಹಿಂದಿಯ ಕಾಲಾಪಾನಿ ಚಿತ್ರವಾಗಲೀ ೧೯೭೩ರಲ್ಲಿ ತಯಾರಾದ ಪ್ಯಾಪಿಲಾನ್ ಚಿತ್ರವಾಗಲೀ ಒಂದಲ್ಲ ಒಂದು ರೀತಿಯಲ್ಲಿ ಬಂದೀಖಾನೆಯೊಳಗಿನ ಬೇನೆಯನ್ನು ಹೊರಸಮಾಜಕ್ಕೆ ಪರಿಚಯಿಸಿವೆ. ಶ್ವಶಾಂಕ್ ರಿಡೆಂಪ್ಶನ್ ಇಂಥದ್ದೇ ಇನ್ನೊಂದು ಚಿತ್ರ. ಈ ರೀತಿಯಲ್ಲಿ ವಿಷಯದಲ್ಲಿ ತೀರಾ ಹೊಸತನವನ್ನು ಇದು ಹೊಂದಿಲ್ಲ ಎಂದು ನಾವು ಹೇಳಬಹುದಾದರೂ, ಅಮೇರಿಕನ್ ಸಿನೆಮಾದ ಪ್ರತೀಕವಾದ ನಯವಾಗಿ ದೃಶ್ಯದಿಂದ ದೃಶ್ಯಕ್ಕೆ ಹರಿದುಕೊಂಡು ಹೋಗುವ ಸಂಕಲನ, ಎಲ್ಲವೂ ಬಿಡಿಸಿಟ್ಟ ಚಿತ್ರದಂತೆ ಕಾಣುವ ಚಿತ್ರೀಕರಣ, ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅದನ್ನೇ ಅನುಸರಿಸುತ್ತಾ ಸಾಗುವ ಸಿನೆಮಾ ತಂತ್ರಜ್ಞಾನ ಇವೆಲ್ಲವೂ ಶ್ವಶಾಂಕ್ ರಿಡೆಂಪ್ಶನ್ ಚಿತ್ರವನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ಚಿತ್ರ ಮುಗಿಯುತ್ತಿದ್ದಂತೆ ಈ ಚಿತ್ರ ಆಲನ್ ಗ್ರೀನ್‌ಗೆ ಅರ್ಪಣೆ ಎಂದು ಓದಿದ ನಾನು ಈ ಆಲನ್ ಗ್ರೀನ್ ಯಾರು ಎಂದು ಹೊಳೆಯದೇ ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿದೆ. ಬಹಳ ಹುಡುಕಾಟದ ನಂತರ ತಿಳಿಯಿತು ಆತ ನಿರ್ದೇಶಕ ಡೆರಬೌನ್ಟ್‌ನ ಏಜೆಂಟ್ ಹಾಗೂ ಆತನ ಗೆಳೆಯನಾಗಿದ್ದ. ಬಹುಕಾಲ ಇವರಿಬ್ಬರು ಒಟ್ಟಿಗಿದ್ದು ಡೆರಬೌನ್ಟನ ಮೊದಲ ಚಿತ್ರ ಶ್ವಶಾಂಕ್ ಮುಗಿಯುವ ಮುನ್ನವೇ ಗ್ರೀನ್ ತೀರಿಕೊಂಡಿದ್ದನು. ಹಾಗಾಗಿ ಆತನ ನೆನಪಿಗೆ ಈ ಚಿತ್ರ ಅರ್ಪಿತವಾಯಿತು. ಈ ಚಿತ್ರವೂ ವಿಚಿತ್ರ ಪರಿಸ್ಥಿತಿಯಲ್ಲಿ ಭೇಟಿಯಾಗಿ ಮಿತ್ರತ್ವವನ್ನೇ ಜೀವಿಸುವ ಆಸರೆಯನ್ನಾಗಿಸಿಕೊಳ್ಳುವ ಇಬ್ಬರ ಕಥೆಯಲ್ಲವೇ! ಮಹಾ ಪಲಾಯನ ಚಿತ್ರಗಳಲ್ಲಿ ಇದು ನನಗೆ ಮುದನೀಡಿದ ಒಂದು ಚಿತ್ರ. ನೀವೂ ನೋಡಿ ಆನಂದಿಸಿ.

ಹಕ್ಕಿಗಳಿಗೆ ಮುನಿಸ್ಯಾಕೋ?

`ದಿ ಬರ್ಡ್ಸ್‌'

ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರೀಪರ್ಸ್‌ನಂಥ ಕಲ್ಪನೆಗಳು ಒಂದು ಕಾಲದಲ್ಲಿ ಹಾಲಿವುಡ್‌ ಹಾರರ್‌ ಸಿನಿಮಾಗಳೆಂದರೆ ತುದಿಗಾಲಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನಗಳ ಮೇಲಾಟವೇ ಹಾರರ್‌ ಆಗಿಬಿಟ್ಟಿದೆ. ರಿಲೀಫ್‌ಗೆ ಇರಲಿ ಅಂತಲೋ ಏನೋ, ಅದಕ್ಕೊಂದಿಷ್ಟು ಶೃಂಗಾರ ಭರಿತ ಒರಟು ಲೈಂಗಿಕತೆಯ ಲೇಪನವೂ ಆಗಿ ಹಾರರ್‌ ಅದೋ ಇದೋ ಎಂಬ ಗೊಂದಲಕ್ಕೂ ಪ್ರೇಕ್ಷಕ ಬೀಳಬೇಕಾಗುತ್ತದೆ. ಇಲ್ಲಿ ಬಳಕೆಯಾಗಿರುವ ತಾಂತ್ರಿಕತೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದೇ ಹೊರತು ಬೆಚ್ಚಿ ಬೀಳುವ ಅಥವಾ ಭಯಪಡುವ ಅಗತ್ಯವಿರುವುದಿಲ್ಲ!

ಅಕರಾಳ ವಿಕರಾಳ ಮುಖಗಳಿದ್ದರಷ್ಟೇ ಹಾರರ್‌ ಸಿನಿಮಾಗಳಾಗುತ್ತವೆ ಎಂಬ ಕಲ್ಪನೆಯನ್ನು ತುಸು ಪಕ್ಕಕ್ಕಿಟ್ಟು, ಅಲ್ಬರ್ಟ್‌ ಹಿಚ್‌ಕಾಕ್‌ ಅವರ `ದಿ ಬರ್ಡ್ಸ್‌' ಚಿತ್ರವನ್ನು ನೋಡಬೇಕು. ಮೇಲ್ನೋಟಕ್ಕೆ ಇದೊಂದು ಲವ್‌ ಸ್ಟೋರಿ. ಕನ್ನಡ ಸಿನಿಮಾಗಳ ಭಾಷೆಯಲ್ಲಿ ಹೇಳುವುದಾದರೆ ಮದರ್‌ ಸೆಂಟಿಮೆಂಟ್‌ ಕೂಡ ಇರುವ ಒಂದು `ಕೌಟುಂಬಿಕ' ಚಿತ್ರ (ಹಾಲಿವುಡ್‌ನ ಸಿದ್ಧ ಮಾದರಿ ಸೂತ್ರಗಳಲ್ಲಿ ತುಸು ಹೆಚ್ಚೇ ಬಳಕೆಯಾಗುವ `ಅಶ್ಲೀಲತೆ'ಯ ನೆರಳೂ ಈ ಚಿತ್ರದಲ್ಲಿಲ್ಲ ಎಂಬ ಮಾತಿನ ಹಿನ್ನೆಲೆಯಲ್ಲಿಯೇ ಈ `ಕೌಟುಂಬಿಕ' ಪದದ ವ್ಯಾಪ್ತಿಯನ್ನು ಗ್ರಹಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು). ಈ ಪ್ರೀತಿ, ಸೆಂಟಿಮೆಂಟ್‌ಗಳ ನಡುವೆ ಒಂದು ಹಂತದಲ್ಲಿ, ತಣ್ಣಗೆ, ಸುಮ್ಮನೆ ತಲೆಯ ಮೇಲೆ ಹಾರಾಡುವ ಪಕ್ಷಿಗಳು ಇದ್ದಕ್ಕಿದ್ದಂತೆ ಗುಂಪು ಗುಂಪಾಗಿ ಬಂದು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತವೆ. ಮನುಷ್ಯರ ತಲೆ ಕಂಡಲ್ಲೆಲ್ಲ ಕುಕ್ಕಿ ಕುಕ್ಕಿ ಸಾಯಿಸತೊಡಗುತ್ತವೆ. ಕ್ರಮೇಣ ಆ ಹಕ್ಕಿಗಳೇ ಮನುಷ್ಯರ ಬೆನ್ನಿಗೆ ಬಿದ್ದ ಸಾವಿನ ಹಾಗೆ ಕಾಣಿಸತೊಡಗಿದಾಗ ಮಾತ್ರ ಪ್ರೇಕ್ಷಕ ಬೆಚ್ಚಿಬೀಳಬೇಕಾಗುತ್ತದೆ. ಈ ಪಕ್ಷಿಗಳ ಆಟಾಟೋಪ ಯಾವ ಹಾರರ್‌ ಸಿನಿಮಾಗಳಿಗೂ ಕಮ್ಮಿಯಿಲ್ಲ. ಇದಕ್ಕೆ ಒತ್ತು ನೀಡುವಂತೆ ಚಿತ್ರದಲ್ಲೇ ಬರುವ ಒಂದು ಕುಡುಕನ ಪಾತ್ರ ಪದೇ ಪದೇ ಕೂಗಿಕೊಳ್ಳುತ್ತದೆ: `ದಿಲ್‌ ಈಸ್‌ ಎಂಡ್‌ ಆಫ್‌ ದಿ ವರ್ಲ್ಡ್‌!'

***

`ದಿ ಬರ್ಡ್ಸ್‌' ಬಿಡುಗಡೆಯಾಗಿದ್ದು 1963ರಲ್ಲಿ. ಪೆಟ್‌ಶಾಪ್‌ನಲ್ಲಿ ನಾಯಕಿ ಮೆಲಾನಿ ಡೇನಿಯಲ್ಸ್‌ ಲವ್‌ ಬರ್ಡ್ಸ್‌ ಖರೀದಿಗೆ ಬರುವುದರೊಂದಿಗೆ ಚಿತ್ರದ ಆರಂಭ. ಅಲ್ಲಿ ನಾಯಕ, ವಿವಾಹಿತ ಮಿಚ್‌ ಬ್ರೆನ್ನರ್‌ ಆಕೆಯ ಕಣ್ಣಿಗೆ ಬೀಳುತ್ತಾನೆ. ಅವನನ್ನು ಸೆಳೆಯುವ ಸಲುವಾಗಿ ತಾನು ಸ್ಟೋರ್‌ ಅಸಿಸ್ಟೆಂಟ್‌ ಎಂದು ಹೇಳಿಕೊಳ್ಳುವ ಮೆಲಾನಿ ನಾಟಕ ಮಿಚ್‌ಗೆ ತಿಳಿದು, ಅವಳಿಗೆ ನಿರಾಸೆಯಾದರೂ, ಅವನನ್ನು ಮತ್ತೆ ಭೇಟಿಯಾಗುವ ಸಲುವಾಗಿ ಲವ್‌ ಬರ್ಡ್ಸ್‌ನ ಉಡುಗೊರೆಯೊಂದಿಗೆ ಅವನಿರುವ ಬೊಡೆಗಾ ಬೇ ಎಂಬಲ್ಲಿಗೆ ತೆರಳುತ್ತಾಳೆ. ಅಲ್ಲಿ ಒಂಟಿಯಾಗಿ ನದಿ ದಾಟಿ, ಲವ್‌ ಬರ್ಡ್‌ಗಳನ್ನು ಅವನಿಗೆ ಗೊತ್ತಾಗದಂತೆ ಅವನ ಮನೆಯಲ್ಲಿಟ್ಟು ಮತ್ತೆ ನದಿ ದಾಟಿ ವಾಪಾಸ್‌ ಬರುವಾಗ ಅಚಾನಕ್ಕಾಗಿ ಆಗಸದಲ್ಲಿ ಹಾರಾಡುತ್ತಿದ್ದ ಒಂದು ಹದ್ದು ಮೆಲಾನಿಯನ್ನು ಕುಕ್ಕುತ್ತದೆ.

ಈ ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ಮೆಲಾನಿಯನ್ನು ಮಿಚ್‌ ಪಕ್ಕದ ರೆಸ್ಟೋರೆಂಟ್‌ ಒಂದಕ್ಕೆ ಕರೆದುಕೊಂಡು ಹೋಗಿ ಟ್ರೀಟ್‌ ಮಾಡುತ್ತಾನೆ. ಅದಾಗಲೇ ಅಲ್ಲಿ ಇಲ್ಲಿ ಹಕ್ಕಿಗಳು ಅಟ್ಯಾಕ್‌ ಮಾಡಿದ ಸುದ್ದಿ ಬರುತ್ತದೆ. ಆ ರೆಸ್ಟೋರೆಂಟ್‌ನ ಹೊರಗೆ ಕೂಡ ಹಕ್ಕಿಗಳು ಜಮಾಯಿಸತೊಡಗುತ್ತವೆ. ರೆಸ್ಟೋರೆಂಟ್‌ನಲ್ಲಿದ್ದ ಕೆಲವರು ಅಪರಿಚಿತ ಮೆಲಾನಿಯ ಕಾರಣದಿಂದಲೇ ಈ ಘಟನೆ ಸಂಭವಿಸುತ್ತಿದೆ ಎಂತಲೂ ದೂಷಿಸುತ್ತಾರೆ. ಹಕ್ಕಿಗಳ ದಾಳಿ ಉಗ್ರ ಸ್ವರೂಪ ತಳೆಯುತ್ತದೆ. ಕೆಲವರು ಸಾಯುತ್ತಾರೆ, ಹಲವರು ಗಾಯಗೊಳ್ಳುತ್ತಾರೆ. ಗಾಯಗೊಂಡ ಮೆಲಾನಿಯನ್ನು ಮಿಚ್‌ ಮನೆಗೆ ಕರೆತರುತ್ತಾನೆ.

ಮಿಚ್‌ ತಾಯಿಗೆ ಮೆಲಾನಿ ಇಷ್ಟವಾಗುವುದಿಲ್ಲ. ಆದರೂ ಸಹಿಸಿಕೊಳ್ಳುತ್ತಾಳೆ. ಕ್ರಮೇಣ ಹಕ್ಕಿಗಳ ದಾಳಿ ಇಮ್ಮಡಿಸುತ್ತದೆ. ಒಂದು ಸಲ ಮಿಚ್‌ನ ಮಗಳನ್ನು ಕರೆತರಲು ಶಾಲೆಗೆ ಹೋದ ಮೆಲಾನಿ ಮತ್ತು ಶಾಲಾ ಮಕ್ಕಳ ಮೇಲೆ ಹಕ್ಕಿಗಳು ದಾಳಿ ಮಾಡುತ್ತವೆ. ಮಿಚ್‌ನನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಆತನ ಗೆಳತಿಯೊಬ್ಬಳು ಹಕ್ಕಿಗಳ ದಾಳಿಗೆ ತುತ್ತಾಗಿ ಭೀಕರವಾಗಿ ಕೊಲೆಯಾಗುತ್ತಾಳೆ. ಹಕ್ಕಿಗಳಿಂದ ತಪ್ಪಿಸಿಕೊಳ್ಳಲು ಮಿಚ್‌, ಮೆಲಾನಿ, ತಾಯಿ ಮತ್ತು ಮಗಳು ಮನೆಯಲ್ಲೇ ಉಳಿಯುತ್ತಾರೆ. ಮನೆಗೆ ಬಾಗಿಲುಗಳು, ಕಿಟಕಿಗಳಿಗೆ ಸೂಕ್ತ ಬಂದೋಬಸ್ತ್‌ ಮಾಡಿದರೂ ಅವುಗಳನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಹಕ್ಕಿಗಳು ದಾಳಿ ಮಾಡಲೆತ್ನಿಸುತ್ತವೆ. ಈ ನಡುವೆ, ಮನೆಯ ಮಹಡಿ ಮೇಲೆ ಏನೋ ಸದ್ದಾಗುತ್ತಿದ್ದುದನ್ನು ನೋಡಲು ಹೋದ ಮೆಲಾನಿ ಮೇಲೆ ಹಕ್ಕಿಗಳು ಮತ್ತೆ ಮಾರಣಾಂತಿಕ ದಾಳಿ ಮಾಡುತ್ತವೆ. ಮಿಚ್‌ ಅವಳನ್ನು ರಕ್ಷಿಸುತ್ತಾನೆ.

ಕೊನೆಗೆ ಎಲ್ಲರೂ ಆ ಮನೆಯನ್ನೇ ತೊರೆಯುವ ನಿರ್ಧಾರಕ್ಕೆ ಬಂದು, ಹಕ್ಕಿಗಳ ಗಮನಕ್ಕೆ ಬಾರದಂತೆ ನಿಧಾನವಾಗಿ ಮನೆ ತೊರೆದು ಹೋಗುತ್ತಾರೆ. ಮಿಚ್‌ನ ತಾಯಿ ಮೆಲಾನಿಯನ್ನು ತನ್ನ ಸೊಸೆಯನ್ನಾಗಿ ಸ್ವೀಕರಿಸುತ್ತಾಳೆ.
ಒಂದೆಡೆ ಹಕ್ಕಿಗಳ ದಾಳಿ, ಇನ್ನೊಂದೆಡೆ ಬಲಿಯುತ್ತಿರುವ ಪ್ರೀತಿ, ಮತ್ತೊಂದೆಡೆ ಈ ಪ್ರೀತಿಯ ಬಗ್ಗೆ ಅಸಮಾಧಾನ- ಈ ಮೂರನ್ನೂ ಹಿಚ್‌ಕಾಕ್‌ ಬ್ಯಾಲೆನ್ಸ್‌ ಮಾಡುವ ರೀತಿಯನ್ನು ಮೆಚ್ಚಿಕೊಳ್ಳಬೇಕು. ಇಲ್ಲಿ ಹಕ್ಕಿಗಳೇ ಸಂಬಂಧಗಳನ್ನು ಬೆಸೆಯುತ್ತವೆ, ಒಡೆಯುತ್ತವೆ, ಮತ್ತೆ ಬೆಸೆಯುತ್ತವೆ.

ಇಡೀ ಚಿತ್ರದ ಶಕ್ತಿ ಇರುವುದು ಕಾಗೆ, ಹದ್ದು, ಪಾರಿವಾಳಗಳಂಥ ಪಕ್ಷಿಗಳನ್ನು ಬಳಸಿಕೊಂಡ ರೀತಿಯಲ್ಲಿ. ಮಿಚ್‌ನ ಮಗಳನ್ನು ಶಾಲೆಯಿಂದ ಕರೆತರಲು ಹೋದ ಮೆಲಾನಿ ಶಾಲೆಯ ಹೊರಗೆ ಒಂದೆಡೆ ಕುಳಿತುಕೊಂಡಾಗ, ಅವಳ ಗಮನಕ್ಕೆ ಬಾರದಂತೆ ಪಕ್ಕದ ಎಲೆಕ್ಟ್ರಿಕ್‌ ಪೋಲ್‌ ಮೇಲೆ ಒಂದೊಂದೇ ಹಕ್ಕಿಗಳು ಬಂದು ನೂರಾರು ಸಂಖ್ಯೆಯಲ್ಲಿ ಸೇರಿಕೊಳ್ಳುತ್ತವೆ. ಇದ್ಯಾವುದರ ಪರಿವೆಯೇ ಇಲ್ಲದಂತೆ ಶಾಲೆಯ ಒಳಗೆ ಮಕ್ಕಳು ಸುಂದರ ಹಾಡೊಂದನ್ನು ಹಾಡುತ್ತಿದ್ದಾರೆ. ಹೊರಗಡೆ ಮುಂದೆ ಘಟಿಸಬಹುದಾದ ಅನಾಹುತಕ್ಕೆ ಹಕ್ಕಿಗಳು ಸಿದ್ಧವಾಗುತ್ತಿವೆ- ಚಿತ್ರದ ಅತೀ ಇಷ್ಟವಾಗುವ ಅಪೂರ್ವ ಸನ್ನಿವೇಶಗಳಲ್ಲಿ ಇದೂ ಒಂದು. ಹಾಗೆಯೇ ಮನೆಯ ಬಾಗಿಲು, ಕಿಟಕಿಗಳನ್ನು ಹಕ್ಕಿಗಳು ಕೊಕ್ಕಿನಿಂದ ಕುಕ್ಕಿ ಒಡೆದು ದಾಳಿ ಮಾಡುವ ಸನ್ನಿವೇಶಗಳಿಗೆ ಭಯದ ಪರಾಕಾಷ್ಠೆಯನ್ನೇ ತಲುಪಿಸಿಬಿಡುವ ಸಾಮರ್ಥ್ಯವಿದೆ. ಕೊನೆಯ ದೃಶ್ಯವನ್ನಂತೂ ಉಸಿರು ಬಿಗಿಹಿಡಿದು ನೋಡಬೇಕು. ಶೆಡ್‌ನಲ್ಲಿರುವ ತನ್ನ ಕಾರನ್ನು ಹೊರತರಲು ಹೊರಡುವ ಮಿಚ್‌ ಮನೆ ಮುಂದೆ ಲಕ್ಷಾಂತರ ಪಕ್ಷಿಗಳು ಕೂತಿವೆ! ಆ ಮೌನವನ್ನು ಭೇದಿಸದೆ ಮಿಚ್‌ ಮನೆಯಿಂದ ಹೊರಬಂದು, ಕಾರನ್ನು ಹೊರತೆಗೆದು, ಉಳಿದವರನ್ನೂ ಜೊತೆಗೆ ಕರೆದುಕೊಂಡು ಹೋಗುವವರೆಗಿನ ಹದಿನೈದು ನಿಮಿಷಗಳ ಕಾಲ ಹಕ್ಕಿಗಳ ಗುಟುರು, ರೆಕ್ಕೆ ಬಡಿಯುವ ಸದ್ದು ಬಿಟ್ಟರೆ ನೀರವ ವೌನ. ಮೌನವನ್ನೂ ಭಯ ಹುಟ್ಟಿಸುವ ಮಾರ್ಗವನ್ನಾಗಿ ಈ ಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.

ಇಂಥ ಹಲವು ದೃಶ್ಯಗಳು ಚಿತ್ರದಲ್ಲಿವೆ. ಹಾಗೆ ನೋಡಿದರೆ, ಯಾವುದೇ ಅಡ್ವಾನ್ಸ್ಡ್‌ ಟೆಕ್ನಾಲಜಿಯಾಗಲೀ, ಗ್ರಾಫಿಕ್ಸ್‌ನ ಗಿಮಿಕ್‌ ಆಗಲೀ ಅಭಿವೃದ್ಧಿ ಕಾಣದ ಕಾಲವದು. ಹಾಗಿದ್ದರೂ ದಾಳಿ ಮಾಡುವ ಪಕ್ಷಿಗಳು ಮತ್ತು ಅದನ್ನು ಸೆರೆಹಿಡಿದಿರುವ ರೀತಿ ಅದ್ಭುತ. ಅಷ್ಟೊಂದು ನೈಜ ಪಕ್ಷಿಗಳನ್ನು ಹಾಗೆ ಒಂದೆಡೆ ಸೇರಿಸಿದ್ದೊಂದು ಸಾಹಸವೇ. ಇದಕ್ಕೆ ಹಿನ್ನೆಲೆಯಲ್ಲೂ ಈಗಿನ ಹಾಗೆ ಕಿವಿಗಡಚಿಕ್ಕುವ ಸಂಗೀತವಿಲ್ಲ. ಇಡೀ ಚಿತ್ರದಲ್ಲಿ ಪಕ್ಷಿಗಳ ಕಲರವ, ಕೂಗು, ರೆಕ್ಕೆ ಬಡಿಯುವ ಪಟ ಪಟ ಸದ್ದು- ಇವಿಷ್ಟೇ ಸಂಗೀತ. ಮೊದ ಮೊದಲು ಸುಮಧುರವಾಗಿ ಕೇಳಿಸುವ ಈ ಸದ್ದುಗಳು ಕೊನೆ ಕೊನೆಗೇ ತೀರಾ ಭಯ ಹುಟ್ಟಿಸುವ ಮಟ್ಟಕ್ಕೆ ಹೋಗುತ್ತವೆ ಎಂದರೆ, ಇಡೀ ಚಿತ್ರ ನೀಡುವ ಒಟ್ಟಾರೆ ಪರಿಣಾಮದ ಹಿಂದೆ ಈ ಸದ್ದುಗಳ ಮಹತ್ವವನ್ನು ಅರಿಯಬಹುದು.

ಇಷ್ಟಕ್ಕೂ ಇದ್ದಕ್ಕಿದ್ದಂತೆಯೇ ಈ ಪಕ್ಷಿಗಳು ಮನುಷ್ಯರ ಮೇಲೆ ದ್ವೇಷ ಸಾಧಿಸಲು ಹೊರಟವರಂತೆ ವರ್ತಿಸುವುದಾದರೂ ಏತಕ್ಕೆ? ಇದಕ್ಕೆ ಚಿತ್ರದಲ್ಲಿ ಸ್ಪಷ್ಟ ಉತ್ತರವಿಲ್ಲ. ಒಂದು ವರದಿಯ ಪ್ರಕಾರ, ತನ್ನ ಮೂಲ ಸ್ಕ್ರಿಪ್ಟ್‌ನಲ್ಲಿ ಅದಕ್ಕೊಂದು ಉತ್ತರ ಹೇಳಲು ಹೊರಟ ಹಿಚ್‌ಕಾಕ್‌ ಕೊನೆಗೆ ಅದನ್ನು ಹೇಳದೇ ಹಾಗೇ ಬಿಟ್ಟಿದ್ದಾನೆ; ಹಾಗೆ ಉತ್ತರ ಹೇಳಿದರೆ ಚಿತ್ರದ ಒಟ್ಟಾರೆ ಅಂದ ಕೆಡಬಹುದು ಎಂಬ ಕಾರಣಕ್ಕೆ. ಹಾಗಾಗಿ ಚಿತ್ರ ನೋಡುವ ಪ್ರೇಕ್ಷಕನ ಊಹೆಯಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಒಂದು ಊಹೆಯ ಪ್ರಕಾರ, `ಲವ್‌ ಬರ್ಡ್ಸ್‌'ಗೂ ಈ ಪಕ್ಷಿಗಳ ದಾಳಿಗೂ ಏನೋ ಸಂಬಂಧವಿದೆ. ಇನ್ನೊಂದು ವಾದವೆಂದರೆ, ಮನುಷ್ಯ ಪ್ರಕೃತಿಯ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಪ್ರಕೃತಿ ಮುನಿಸಿಕೊಂಡು ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ. ಈ ಎರಡೂ ವಾದಗಳು ಸಮಂಜಸವಲ್ಲ ಎಂದು ವಾದಿಸುವ ಮತ್ತೊಂದು ಗುಂಪಿನವರು ಹೇಳುವುದು: ಮನುಷ್ಯ ಸಂಬಂಧಗಳ ನಡುವೆ ಬಿರುಕು ಕಾಣಿಸಿಕೊಂಡ ಸಂದರ್ಭಗಳಲ್ಲೆಲ್ಲ ಪಕ್ಷಿಗಳು ದಾಳಿ ಮಾಡುತ್ತವೆ.

ಊಹೆಗಳು, ವಾದಗಳು ಬೇರೆ ಬೇರೆಯಾದರೂ ಅವೆಲ್ಲ ಒಟ್ಟಾರೆ ಈ ಚಿತ್ರ ಬೀರಬಹುದಾದ ಪರಿಣಾಮದ ಮೇಲಂತೂ ದುಷ್ಪರಿಣಾಮ ಬೀರುವುದಿಲ್ಲ. ನೋಡುವ ಸಹನೆ ಇದ್ದರೆ, ಕೊನೇ ಪಕ್ಷ ಮನರಂಜನೆಯ ದೃಷ್ಟಿಯಿಂದ ನೋಡಿದರೂ ಇದೊಂದು ಅತ್ಯುತ್ತಮ ಚಿತ್ರವೇ ಆಗುತ್ತದೆ.

-ಸುರೇಶ್‌ ಕೆ.

ಸಕಾಲದಲ್ಲಿ ಮುಂಗಾರು ಮಳೆ

ಅಷ್ಟು ಚೆನ್ನಾಗಿದೆ ಇಷ್ಟು ಚೆನ್ನಾಗಿದೆ ಎಂದೆಲ್ಲಾ ಕೇಳಿ ಕೇಳಿ ಸಾಕಾಗಿ ಇನ್ನು ನೋಡದೇ ಕಳೀದು ಎಂದಂದುಕೊಂಡು ಇಂದು ನಾನು ಮುಂಗಾರು ಮಳೆ ನೋಡೇ ಬಿಟ್ಟೆ. ಮಂಗಳೂರಿನ ಜನ ಕನ್ನಡ ಸಿನೆಮಾ ನೋಡುವುದೇ ಇಲ್ಲ ಎಂದಂದುಕೊಂಡು ನಾನು ಥ್ಯೇಟರಿಗೆ ಹೋದೆ. ನೋಡಿದರೆ ಬಾಲ್ಕನಿ ಫುಲ್! ಈ ಸಿನೆಮಾ ಇದೇ ಥ್ಯೇಟರಿನಲ್ಲಿ ಆಗಲೇ ಕನಿಷ್ಟ ೫ ವಾರದಿಂದ ಓಡುತ್ತಿದೆ. ಕೆಳಗೆ ಕೂತರೆ ಅದೂ ಆಲ್‍ಮೋಸ್ಟ್ ಫುಲ್. ನಾನು ಕೂತ ಕೆಲವು ಸಮಯದಲ್ಲೇ ದೀಪ ಆರಿತು ಸಿನೆಮಾ ಆರಂಭವಾಯಿತು.

ಟೈಟಲ್ ಆದ ಮೇಲೆ ತೀರಾ ಸಾದಾರಣ ಎನ್ನುವ ಓಪನಿಂಗ್ ಆಗುತ್ತೆ ಸಿನೆಮಾಕ್ಕೆ. ಗಣೇಶ್ ಪಾತ್ರ ಯಾಕೆ ಹೀಗಿದ್ದಾನೆ? ಮಡಿಕೇರಿಯ ಹುಡುಗಿ ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾಳೆ? ರೇಡಿಯೋ ಮಿರ್ಚಿಗೆ ದೂರವಾಣಿಸಿದ ಕೂಡಲೇ ಲೈನ್ ಸಿಗುವುದು! ಶುದ್ಧ ನಾಲಾಯಕ್ಕಾದ ಮಗನಿದ್ದೂ ಅಮ್ಮ ಅವನಿಗೆ ಸಹಕಾರ ಕೊಡುವುದು, ಅಪ್ಪ ಮಗನಿಗೆ ಹೆದರುವುದು! ಈ ರೀತಿ ವಿಚಿತ್ರವಾಗಿ ಸಿನೆಮಾ ಆರಂಭವಾಗುತ್ತದೆ. ಮುಂದೆ ಸಿನೆಮಾದುದ್ದಕ್ಕೂ ಈ ವಿಚಿತ್ರಗಳ ಸರಮಾಲೆ ಮುಂದುವರೆಯುತ್ತದೆ. ಎಷ್ಟೋ ಕಡೆ ಸ್ಕ್ರಿಪ್ಟ್ ವೀಕ್ ಅನ್ನಿಸುತ್ತದೆ. ನಟನೆ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸುತ್ತದೆ. ಚಿತ್ರದ ನಡುವೆ ಪಂಜಾಬಿ ನೃತ್ಯ ಅನಗತ್ಯ ಅನ್ನಿಸುತ್ತದೆ. ಸಿನೆಮಾದ ಕಥೆ ಮೊದಲೇ ಅನೇಕ ಛಾಯೆಗಳಲ್ಲಿ ಹಿಂದಿಯಲ್ಲಿ ಬಂದಿದೆ ಅನ್ನಿಸುತ್ತೆ. ಪ್ರಸಿದ್ಧ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಇದೇ ಕಥೆಯ ಎಳೆಯಲ್ಲವೇ? (ಇದು ಅದರ ನಕಲು ಎಂದಲ್ಲ ನಾನು ಹೇಳುತ್ತಿರುವುದು) ಹೀಗೆ ಅನೇಕ ವಿಷಯಗಳು ಮಾಮೂಲು ಎಂದನ್ನಿಸುತ್ತದೆ. ಆದರೆ ನಾನು ಇದನ್ನೇ ಪಟ್ಟಿಮಾಡಿದರೆ ತಪ್ಪು ಮಾಡಿದಂತಾಗುತ್ತದೆ.

ಮೇಲೆ ಬರೆದ ಎಲ್ಲಾ ವಿಷಯಗಳ ಹೊರತಾಗಿಯೂ ಈ ಸಿನೆಮಾ ನನಗೆ ಸಂತೋಷ ಕೊಟ್ಟಿತು. ಸಿನೆಮಾ ಮುಗಿಸಿ ಹೊರಗೆ ಬರುವಾಗ ಒಂದು ಭಾವದ ಬುತ್ತಿಯನ್ನು ಈ ಚಿತ್ರ ಕಟ್ಟಿ ಕೊಟ್ಟಿತು. ಸಿನೆಮಾ ಮಾಡಿದ ಪ್ರತಿಯೊಬ್ಬರಲ್ಲಿ ಅದ್ಭುತವಾದ ಒಂದು ಪ್ರಾಮಾಣಿಕತೆ ಕಾಣುತ್ತದೆ. ಕಥೆಯೊಂದನ್ನು ಹೇಳುವ ತುಡಿತ ಕಾಣುತ್ತದೆ. ಕಣ ಕಣದಲ್ಲೂ ಚಿತ್ರ ತಂಡದ ಪ್ರಯತ್ನ ಕಾಣುತ್ತದೆ. ಪ್ರಾಮಾಣಿಕತನವೊಂದಿದ್ದರೆ ಉಳಿದದ್ದೆಲ್ಲವೂ ಸರಿಯಾಗುತ್ತೆ ಅಂತಾರಲ್ಲಾ, ಹಾಗೇ ಮುಂಗಾರು ಮಳೆ ಹಿಟ್ಟ್ ಆಗಿದೆ. ಮುದನೀಡುವ ಚಿತ್ರವಾಗಿಯೂ ರೂಪಗೊಂಡಿದೆ. ಬರೇ ಲಾಂಗು ಮಚ್ಚು ಎಂದು ಸಿನೆಮಾ ಬರುತ್ತಿರುವ ಸಮಯದಲ್ಲಿ ಹೀಗೊಂದು ಚಿತ್ರ ಮಾಡುವ ಧೈರ್ಯವೇ ಇಡೀ ಚಿತ್ರ ತಂಡ ಚಿತ್ರದ ಬಗ್ಗೆ ಎಷ್ಟು ನಂಬಿಕೆ ಇಟ್ಟಿತ್ತು ಎನ್ನುವುದಕ್ಕೆ ಸಾಕ್ಷಿ.

ಚಿತ್ರದ ಒಂದು ಮುಖ್ಯ ವಿಷಯವೆಂದರೆ ಸಂಗೀತ ಹಾಗೂ ಹಾಡಿನ ಸಾಹಿತ್ಯ. ಇಷ್ಟು ಹಿತವಾದ ಹಾಗೂ ಅರ್ಥಭರಿತ ಸಾಹಿತ್ಯ ಕನ್ನಡದಲ್ಲಿ ಬಹಳ ಕಾಲದ ನಂತರ ನಾನು ಕೇಳಿದ್ದು. ಜಯಂತ ಕಾಯ್ಕಿಣಿ, ಕವಿರಾಜ್, ಶಿವ ಹಾಗೂ ಸ್ವತಃ ಯೋಗರಾಜ್ ಭಟ್ಟ್ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಂಗೀತವೂ ಹಿತವಾಗಿದೆ. ಜೋಗವನ್ನು ಭಿನ್ನವಾಗಿ ಚಿತ್ರೀಕರಿಸಿದ್ದಾರೆ ಎಂದು ಬಹಳವಾಗಿ ಹೇಳಲ್ಪಟ್ಟಿತ್ತು. ಆದರೆ ಜೋಗದವರೆಗೆ ಮೊದಲಬಾರಿಗೆ 'ಜಿಮಿಜಿಪ್ ಕ್ರೇನ್' ತಲುಪಿಸಿದ್ದು ಬಿಟ್ಟರೆ ಬೇರೇನೂ ನನಗೆ ವಿಶೇಷ ಏನೂ ಅನ್ನಿಸಲಿಲ್ಲ. ಆದರೆ ಸಿನೆಮಟೋಗ್ರಾಫರ್‍ನ ಕಂಪೊಸಿಷನ್ ಸೆನ್ಸ್ ನನಗೆ ಹಿಡಿಸಿತು. ಶಾಟ್ ಟೇಕಿಂಗ್ ಕೆಲವೆಡೆ ವೀಕ್ ಅನ್ನಿಸಿದರೂ ಹೆಚ್ಚಿನ ಕಡೆ ಚೆನ್ನಾಗಿಯೇ ಇದೆ. ಚಿತ್ರದ ಸಂಕಲನ ಅನೇಕ ಕಡೆ ದೃಶ್ಯದ ಭಾವದ ಮೇರೆ ಮೀರಿ ಹೋಗುತ್ತಿದ್ದು ಕಿರಿ-ಕಿರಿ ಅನ್ನಿಸುತ್ತಿತ್ತು. ನೃತ್ಯ ಸಂಯೋಜನೆಯಲ್ಲಿ ಮತ್ತೆ ಹಿಂದೀ ಸಿನೆಮಾಗಳ ಅನೇಕ ಛಾಯೆ ಕಂಡುಬರುತ್ತಿತ್ತು (ನಕಲು ಅಲ್ಲ) ಎರಡು ಫೈಟ್ ಇದ್ದು ಭಿನ್ನವಾಗಿ ಕಂಡಿತು.

ಈ ಬರಹ ಮುಗಿಸುವ ಮುನ್ನ ನನ್ನದೊಂದು ಸಣ್ಣ ಅನುಭವ. ಹಲವು ವರ್ಷಗಳ ಹಿಂದೆ ನಾನು ಡಿಗ್ರಿ ಓದುತ್ತಿರುವಾಗ ನಾಗತಿಹಳ್ಳಿಯವರ ವಠಾರ ದಾರವಾಹಿ ತಂಡ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದಿತ್ತು. ಇಲ್ಲಿಂದ ಅವರಿಗೆ ಜೂನಿಯರ್ ಕಲಾವಿದರ ಅಗತ್ಯ ಇತ್ತು. ಹೇಗಾದರೂ ಚಿತ್ರರಂಗಕ್ಕೆ ಬರಬೇಕೆಂದಿದ್ದ ನಾನು ಹಾಗೆ ಆ ತಂಡ ಸೇರಿದೆ. ಮಂಗಳೂರಿನ ಪುಡಿ ರೌಡಿಗಳಲ್ಲಿ ನಾನು ಒಬ್ಬ. ನಾಯಕ ನಟ ಗಣೇಶ್ ಹಾಗೂ ನಾಯಕಿಗೆ ತೊಂದರೆ ಕೊಡಲು ಪ್ರಯತ್ನಿಸಿ ಗಣೇಶ್ ಕೈಯಲ್ಲಿ ಹಿಗ್ಗಾ ಮುಗ್ಗಾ ಒದೆಸಿಕೊಳ್ಳುವುದು ನಮ್ಮ ಸೀನು! ಶೂಟಿಂಗ್ ನನಗಿನ್ನೂ ಹೊಸತು. ಶೂಟಿಂಗ್ ನಂತರದ ಸಮಯದಲ್ಲಿ ಗಣೇಶ್‍ರೊಂದಿಗೆ ಮಾತುಕತೆ ನಡೆಯುತ್ತಿತ್ತು. ಮನುಷ್ಯ ಸೀದಾ, ಸರಳ-ಸಜ್ಜನ, ಒಳ್ಳೆಯವ ಎಂದನ್ನಿಸಿತು. ನಂತರ ಕಾಲ ಸರಿಯಿತು, ನಾನು ಇಂದು ಚಿತ್ರರಂಗಕ್ಕೇ ಮತ್ತೆ ಬಂದಿಳಿದ ಸಮಯದಲ್ಲಿ ಕನ್ನಡ ಚಿತ್ರರಂಗದ ಮೊದಲ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ಮುಂಗಾರು ಮಳೆಯ ಆಡಿಯೋ ಬಿಡುಗಡೆ. ಅಲ್ಲಿ ಮತ್ತೆ ಗಣೇಶ್ ಸಿಕ್ಕಿದರು. ಅವರಿಗೆ ನಾನು ಖಂಡಿತಾ ನೆನಪಿರಲಿಲ್ಲ. ನೆನಪಿರುವುದು ಸಾಧ್ಯವೂ ಇಲ್ಲ. ಆದರೆ ಗಣೇಶ್ ಇನ್ನೂ ಹಾಗೇ ಇದ್ದರು, ಸರಳ, ಸಜ್ಜನ. ಮುಂಗಾರು ಮಳೆ ದೊಡ್ಡ ಹಿಟ್ ಆದ ಮೇಲೂ ಆತ ಹಾಗೇ ಇದ್ದಾರೆಂದು ಕೇಳಿದೆ. ಸಂತೋಷವಾಯಿತು. ಮುಟ್ಟಿದ್ದಕ್ಕೆ ಬಿಟ್ಟದ್ದಕ್ಕೆ ಕೋಲ ಕುಣಿಸುವ ನಾಯಕ ನಟರುಗಳಿರುವ ಈ ಸಮಯದಲ್ಲಿ ಗಣೇಶ್ ನಿಜಕ್ಕೂ ಆದರ್ಶಪ್ರಾಯ.

ಒಟ್ಟಿನಲ್ಲಿ ಮುಂಗಾರು ಮಳೆ ಇನ್ನೂ ಜೋರಾಗಿ ಸುರಿದು ಕನ್ನಡ ಚಿತ್ರರಂಗಕ್ಕೆ ತಂಪುನೀಡಲಿ ಎಂದು ಹಾರೈಸುತ್ತೇನೆ.