ಕೆ.ಎಸ್. ನಿಸಾರ್ ಅಹಮದ್ ಸಂದರ್ಶನ
-ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ ಹುಟ್ಟಿಸಿ ಆಮೇಲೆ ಹೀಗಾದರೆ ಎಲ್ಲೋ ಎಂಥಾ ಮನುಷ್ಯನಿಗಾದ್ರೂ, ಎಂಥಾ ಸ್ಥಿತಪ್ರಜ್ಞನಿಗಾದ್ರೂ ಸ್ವಲ್ಪ ಬೇಸರ ಆಗುತ್ತೆ. ಆದ್ರೂ ಸಾವರಿಸಿಕೊಂಡೆ. ಹಾಗೆ ನೋಡಿದ್ರೆ ಇಷ್ಟರವರೆಗೆ ನನಗೆ ಬಂದಿರುವಂಥ ಪ್ರಶಸ್ತಿಗಳೆಲ್ಲ ಆಯಾಚಿತವಾಗಿ ಬಂದಂಥವು. ಯಾರ ಕೈಕಾಲು ಹಿಡಿದು ಪಡೆದುಕೊಂಡದ್ದೇನಲ್ಲ. ಹಾಗಾಗಿ ಬರಬೇಕಾಗಿದ್ದು ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ದೈವ ಕೃಪೆಯಿಂದ ಎಂಥಾ ಹೊತ್ತಲ್ಲಿ ಬಂದಿದೆ ಅಂದರೆ, ಕರ್ನಾಟಕ ಸುವರ್ಣ ರಾಜ್ಯೋತ್ಸವದ ಹೊನ್ನಸಗೆ ಆಚರಿಸುತ್ತಿದೆ. ಶಿವಮೊಗ್ಗದಲ್ಲಿ- ನಾನು ಎಲ್ಲಿ ಅತ್ಯಂತ ಮಹತ್ವದ, ಪುಷ್ಕಳವಾದ, ಧಾರಾಳವಾದ ಕವಿತೆಗಳನ್ನು ಬರೆದನೋ ಅಲ್ಲಿ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗ ನನ್ನ ಎರಡನೇ ಸೃಜನಶೀಲತೆಯ ತವರು ಅಂತ ಹೇಳಿಕೊಂಡಿದ್ದೇನೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಊರು. ಏಕೆಂದರೆ ನನಗೆ ಅಲ್ಲಿ ಏಕಾಂತ ಸಿಕ್ತು. 1967ರ ಹೊತ್ತಲ್ಲಿ ಆಟೋಗಳು ಇರ್ಲಿಲ್ಲ, ಬರೀ ಜಟಕಾ ಗಾಡಿಗಳಿದ್ವು. ಶಿವಮೊಗ್ಗ ತನ್ನ ಹಳ್ಳಿ ಸೊಗಡಿನ ಮುಗ್ಧತೆ ಕಾಪಾಡಿಕೊಂಡು ಬಂದಿತ್ತು. ಇವತ್ತು ಹಿರಿಯಕ್ಕನ ಚಾಳಿ ಅಂತ ಬೆಂಗಳೂರಿನ ಚಾಳಿ ಬಡಿದಿದೆ ಅದಕ್ಕೆ. ಆ ಕಾಲದಲ್ಲಿ ತುಂಬಾ ನಿರಾಳವಾಗಿತ್ತು. ಕೈಚಾಚಿದಲ್ಲಿ ಗದ್ದೆ, ತೋಟ, ಹೊಳೆ, ಕಾಲುವೆ, ಪಕ್ಷಿಗಳು.... ಅತ್ಯಂತ ಆನಂದ ನೀಡುವ, ಪ್ರಶಾಂತ ವಾತಾವರಣ. ಹಾಗಾಗಿ ಶಿವಮೊಗ್ಗದಲ್ಲಿ ಈ ಸ್ಥಾನ ಸಿಕ್ಕಿದ್ದಂತೂ ನನಗೆ ಉಡುಗೊರೆ ಕೊಟ್ಟ ಹಾಗಿದೆ. ಇನ್ನೊಂದು ವಿಚಾರವೆಂದರೆ, ಶಿವಮೊಗ್ಗದಲ್ಲಿ ನಾನು ಯಾವ ಕೋಣೆಯಲ್ಲಿ ಕುಳಿತು ಸಾಮಾನ್ಯ ಶಿಷ್ಟ ಜನ, ವಿಮರ್ಶಕರು ಇವತ್ತಿಗೂ ಒಳ್ಳೆಯ ಪದ್ಯಗಳು ಅಂತ ಮೆಚ್ಚಿಕೊಂಡಿರುವ ಕವಿತೆಗಳನ್ನು ಬರೆದೆನೋ ಆ ಕೋಣೆಗೂ ಈಗ ಸಮ್ಮೇಳನ ನಡೆಯುತ್ತಿರುವ ವೇದಿಕೆಗೂ ಒಂದೇ ರಸ್ತೆ ಅಡ್ಡ. ಇದು ಕಾಕತಾಳೀಯವೋ, ಯೋಗಾಯೋಗವೋ ಗೊತ್ತಿಲ್ಲ. ಯಾವುದೋ ಅಲೌಕಿಕ ಶಕ್ತಿಯ ಕೃಪೆ ಇರುವುದಂತೂ ನಿಜ. ಆ ಶಕ್ತಿಗೆ ನನ್ನ ನಮಸ್ಕಾರ. Read more about ಕೆ.ಎಸ್. ನಿಸಾರ್ ಅಹಮದ್ ಸಂದರ್ಶನ





