ಪುಸ್ತಕ ವಿಮರ್ಶೆ
ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
May 9, 2008 - 7:57pm — narendraಎಸ್ ಸುರೇಂದ್ರನಾಥರ ಕಾದಂಬರಿ ಎನ್ನ ಭವದ ಕೇಡು ಇಷ್ಟವಾಗುವುದು ಅದು ಒಂದು ಇಡೀ ಆಕೃತಿಯಾಗಿ ನಮ್ಮ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳಿಗಾಗಿ ಮತ್ತು ಇಡೀ ಕಾದಂಬರಿಯ ಉದ್ದಕ್ಕೂ ಕಥಾನಕ ಸಾಗುವ ಒಂದು ಅನೂಹ್ಯ ವಿಧಾನಕ್ಕಾಗಿ. ಕಾದಂಬರಿ ಪ್ರಕಾರದ ಬರವಣಿಗೆ ಸಾಧಾರಣವಾಗಿ ಒಂದು ಬದುಕಿನ, ಇಡೀ ಜೀವನದ ಹೋರಾಟದ ಪರಿಪೂರ್ಣ ಅನುಭವವನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಒಂದು ವಾತಾವರಣವನ್ನು, ಜೀವಂತವೆನಿಸುವ ಪಾತ್ರಗಳನ್ನು ಅಚ್ಚಳಿಯದಂತೆ ಮನಸ್ಸಿನಲ್ಲಿ ಕಡೆದು ನಿಲ್ಲಿಸುತ್ತದೆ. ಅದೊಂದು ಬೇರೆಯೇ ಆದ ಲೋಕ, ಬರಹಗಾರನಿಗೂ ಓದುಗನಿಗೂ. ಅಲ್ಲಿ ಆ ಲೋಕದಲ್ಲಿ ಇರುವವರೆಗೆ ಮಾತ್ರ ನಿಜವಾದ ಅನೇಕ ಘಟನೆಗಳನ್ನು, ತಿರುವುಗಳನ್ನು, ಏಳು ಬೀಳುಗಳನ್ನು ಎಷ್ಟರಮಟ್ಟಿಗೆ ಓದುಗ ಒಪ್ಪಿಕೊಳ್ಳುತ್ತಾನೆ ಎನ್ನುವುದರ ಮೇಲೆ ಆತ ಆ ಲೋಕದಿಂದ ಹೊರಬಂದ ಮೇಲೆ ಆ ಓದು ತನಗೆ ಏನನ್ನುಂಟು ಮಾಡಿತು ಎನ್ನುವುದನ್ನು ಕಾಣಬಲ್ಲ. ಅಷ್ಟರ ಮಟ್ಟಿಗೆ ಓದಿನ ಸಂದರ್ಭದಲ್ಲೇ ಅವನಿಗೆ ಕಾದಂಬರಿಕಾರ ಕಟ್ಟಿಕೊಡುವ ಜಗತ್ತಿನಲ್ಲಿ ಇದು ಸಾಧ್ಯ, ಇದು ಹೌದು ಅನಿಸದೇ ಹೋದರೆ ಅಂಥ ಬರಹ ಅದರ ಕಾಣ್ಕೆಯ ದೃಷ್ಟಿಯಿಂದ ವ್ಯರ್ಥ. ಹಾಗೆಂದ ಮಾತ್ರಕ್ಕೆ ಕೇವಲ ವಾಸ್ತವವಾದಿ ಅಥವಾ ಸತ್ಯಾನುಸತ್ಯದ ಬರಹಕ್ಕೆ ಮಾತ್ರ ಇಂಥದ್ದು ಸಾಧ್ಯ ಎನ್ನುವುದು ತಪ್ಪು. ತಾನು ಕಂಡಿದ್ದು, ಕೇಳಿದ್ದು, ಅನುಭವಿಸಿದ್ದನ್ನು ಬಿಟ್ಟು ಹೊಸತನ್ನು ಪ್ರಯತ್ನಿಸುವ ಲೇಖಕ ಇಂಥ ಸಾಧ್ಯತೆಯಿಂದ ದೂರವುಳಿಯುತ್ತಾನೆ, ಅಂಥ ಬರಹದಲ್ಲಿ ಪ್ರಾಮಾಣಿಕತೆ ಇರುವುದಿಲ್ಲ, ಹಾಗಾಗಿ ಬರಹಗಾರ ತನ್ನ "comfort zone" ನ್ನು ಮೀರಿ ಬರೆಯಬೇಕು ಎನ್ನುವ ವಿಮರ್ಶಕರ ನಿರೀಕ್ಷೆಯನ್ನು ತಲುಪುವುದು ಇಂದಿನ ಸೀಮೀತ ಜೀವನಾನುಭವದ, ಸೀಮಿತ ಸಾಧ್ಯತೆಗಳ ಯಾಂತ್ರಿಕ ಬದುಕನ್ನು ಬದುಕುತ್ತಿರುವ ಹೊಸ ತಲೆಮಾರಿನ ಬರಹಗಾರನಿಗೆ ಕಷ್ಟ ಎನ್ನುವ ವಾದವೂ ಇದೆ. ಈ ಹಿನ್ನೆಲೆಯಲ್ಲಿ ಎಸ್ ಸುರೇಂದ್ರನಾಥರ ಎನ್ನ ಭವದ ಕೇಡು ಬಹಳ ಮುಖ್ಯವಾಗುತ್ತದೆ. ಇವರು ತೆಗೆದುಕೊಂಡ ರಿಸ್ಕ್ ಬಗ್ಗೆ ಡಾ.ಯು.ಆರ್.ಅನಂತಮೂರ್ತಿಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. "ನಮಗೆ ಗೊತ್ತಿರುವ ಲೋಕದಲ್ಲೇ ಗೊತ್ತಿಲ್ಲದ್ದು ನಡೆಯುವ ಸೋಜಿಗ ಈ ಕಾದಂಬರಿ ಶೈಲಿಯ ಮುಖ್ಯ ಲಕ್ಷಣ." ಮುಂದೆ ಓದಿ »

- Login or register to post comments
- 211 hits
- Email this page



ಜುಂಪಾ ಲಾಹಿರಿಯವರ ಹೊಸ ಪುಸ್ತಕ
May 1, 2008 - 11:34am — narendraಹುಟ್ಟುವಾಗಲೇ ಮಗು ತೀರಿಕೊಂಡಿತ್ತು ಎನ್ನುವ ಆಘಾತದ ಬಳಿಕ ಅವರ ನಡುವೆ ಬರೀ ಮೌನ ಮಂಜುಗಡ್ಡೆಯಂತೆ ಬೆಳೆದು ನಿಂತಿದೆ. ಯಾವುದೂ ಈಗ ಈ ಸಂಬಂಧವನ್ನು ಮತ್ತೊಮ್ಮೆ ಅರ್ಥಪೂರ್ಣಗೊಳಿಸಲಾರದು ಅಂತ ಇಬ್ಬರಿಗೂ ತೀವೃವಾಗಿಯೇ ಅನಿಸತೊಡಗಿದೆ. ಬೇರ್ಪಡುವ ತಯಾರಿಯಲ್ಲಿದ್ದಾರೆ. ಆಗ ಇದ್ದಕ್ಕಿದ್ದ ಹಾಗೆ ಪ್ರತಿ ರಾತ್ರಿ ಒಂದು ಗಂಟೆ ಕಾಲ ವಿದ್ಯುತ್ ಇರುವುದಿಲ್ಲ ಎನ್ನುವ ಪ್ರಕಟನೆ ಹೊರಬೀಳುತ್ತದೆ. ಆಗ, ಸಮಯ ಕಳೆಯುವುದಕ್ಕಾಗಿ, ಗಂಡ ಹೆಂಡತಿ ಎನ್ನುವ ಸಂಬಂಧದ ಹೊರೆಯಿಲ್ಲದೆ, ಪ್ರೀತಿಯನ್ನು - ಸಂಬಂಧವನ್ನು ಕಾಪಿಟ್ಟುಕೊಳ್ಳುವ ಆತಂಕಗಳಿಲ್ಲದೆ, ಕೇವಲ ಸ್ನೇಹಿತರಂತೆ ತಾವು ಇದುವರೆಗೂ ಪರಸ್ಪರರಿಂದ ಮುಚ್ಚಿಟ್ಟ ಸಂಗತಿಗಳನ್ನು ಯಾವ ಭಿಡೆಯಿಲ್ಲದೆ ಹೇಳಬಹುದಾದ ಒಂದು ಸಂದರ್ಭವನ್ನು ಇವರು ಸೃಷ್ಟಿಸಿಕೊಳ್ಳುತ್ತಾರೆ. ಅದು ಅವರಿಗೇ ಗೊತ್ತಾಗದ ಹಾಗೆ ತಮ್ಮ ನಡುವೆ ಅದುವರೆಗೆ ಅಗೋಚರವಾಗಿದ್ದ ಸಂಬಂಧದ ತಂತುವೊಂದರ ಅಸ್ಪಷ್ಟ ಅರಿವು ಮೂಡಿಸುತ್ತ ಹೋಗುತ್ತದೆ. ಆ ಕರೆಂಟಿಲ್ಲದ ಒಂದು ಗಂಟೆಗಾಗಿ ಇಬ್ಬರೂ ಗುಪ್ತವಾಗಿ ಕಾತರಿಸತೊಡಗುತ್ತಾರೆ!
ಹೌದು, ಇದು ಜುಂಪಾಲಾಹಿರಿಯ Interpreter of Maladies ಸಂಕಲನದ ಒಂದು ಕಥೆ. ಈಗಷ್ಟೇ ಇವರ Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.
ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 295 hits
- Email this page



ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರು ಯಾರು?
April 27, 2008 - 8:16pm — narendraಆನುದೇವಾ ಎಂದಾಕ್ಷಣ ಈಗ ನೆನಪಾಗುವುದು ಬಂಜಗೆರೆ ಜಯಪ್ರಕಾಶ್, ಬಸವಣ್ಣ ಅಲ್ಲ! ಈಚಿನ ದಿನಗಳಲ್ಲಿ ಇಂಥ ಇನ್ನಷ್ಟು ವಿಪರ್ಯಾಸಗಳನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ; ವಿವಾದಗಳು ಇದರಾಚೆ ಏನನ್ನೂ ಸಾಧಿಸಿದ ದಾಖಲೆಗಳಿಲ್ಲ ಎಂದೂ ಅನಿಸುತ್ತದೆ. ಅದೇನೇ ಇರಲಿ, ಈಗ ಹೇಳಹೊರಟಿದ್ದು ಆನುದೇವಾ ಕುರಿತಲ್ಲ. ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್ ಬಗ್ಗೆ. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕಟವಾದದ್ದು. ಇದು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿದೆಯಂತೆ. ಇದಕ್ಕೆ ಮಿಲಿಯಗಟ್ಟಲೆ ಪ್ರತಿಗಳ ಮಾರಾಟದ ದಾಖಲೆಯಿದೆ. ಕಿರು ಧಾರಾವಾಹಿಯಾಗಿ ಟಿವಿಯಲ್ಲಿ ಪ್ರಸಾರವಾದಾಗ ಸುಮಾರು ನೂರ ಮೂವತ್ತು ಮಿಲಿಯನ್ ಜನ ವೀಕ್ಷಿಸಿದರೆಂದು ಅಂದಾಜು.
ತನ್ನ ಅಜ್ಜಿ ಕಿನ್-ಟೆ ಎಂಬ ಪೂರ್ವಿಕನ ಬಗ್ಗೆ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದ ಹೇಲಿ ಆಫ್ರಿಕಾದ ಮೌಕಿಕ ಇತಿಹಾಸಕಾರನೊಬ್ಬನ ನೆರವಿನಿಂದ, ಹನ್ನೆರಡು ವರ್ಷಗಳ ಸಂಶೋಧನೆ, ಸೃಜನಶೀಲ ಪರಿಶ್ರಮಗಳಿಂದ ಸಿದ್ಧಪಡಿಸಿದ ಕೃತಿ ರೂಟ್ಸ್. ಆಫ್ರಿಕಾದಿಂದ ಸೆರೆ ಹಿಡಿಯಲ್ಪಟ್ಟು ಒಬ್ಬ ಗುಲಾಮನಾಗಿ1767ರಲ್ಲಿ ಈ ಕುಂಟಾ ಕಿನ್-ಟೆಯನ್ನು ಗುಲಾಮರನ್ನು ಸಾಗಿಸುವ ಹಡಗಿನಲ್ಲಿ ಅಮೆರಿಕಾಕ್ಕೆ ತರಲಾಗಿತ್ತು. ಅಮೆರಿಕಾ ನಡೆಸಿದ ಕರಿಯರ ಅಮಾನವೀಯ ಶೋಷಣೆ, ಕ್ರೌರ್ಯ, ದೌರ್ಜನ್ಯಗಳ ಕತೆಯನ್ನು ಹೇಳುತ್ತಲೇ ಮಾನವೀಯ ಮಿಡಿತಗಳನ್ನು ನಮ್ಮಲ್ಲಿ ಹುಟ್ಟಿಸುವ ಈ ಕೃತಿಯನ್ನು ನವಿರಾಗಿ ಕನ್ನಡಕ್ಕೆ ತಂದಿದ್ದಾರೆ ಬಂಜಗೆರೆ. ಮುಂದೆ ಓದಿ »

- ೧ ಪ್ರತಿಕ್ರಿಯೆ
- 269 hits
- Email this page



ಚೀನಾದ ಜನಸಾಮಾನ್ಯರು
April 13, 2008 - 8:46am — narendraಈಗ ಚೀನಾ ಸುದ್ದಿಯಲ್ಲಿದೆ. ಟಿಬೆಟ್ನ ಯುವಕರು ಸುರುಹಚ್ಚಿಕೊಂಡ ಪ್ರತಿಭಟನೆ ಬೇರೆ ಬೇರೆ ಕಡೆಗಳಲ್ಲಿ ಈ ಒಲಿಂಪಿಕ್ ಜ್ಯೋತಿಗೆ ಸಿಕ್ಕ ಸ್ವಾಗತದಲ್ಲೂ ತನ್ನ ಇರವು ತೋರಿಸಿದೆ. ಬೌದ್ಧರ ಗುರು ದಲಾಯಿಲಾಮಾ ತಮ್ಮ ನಂತರದ ತಲೆಮಾರು ಬಹಳಷ್ಟು ಬದಲಾಗಿರುವ ಮೌಲ್ಯಗಳನ್ನು ಹೊಂದಿರುತ್ತದೆ ಎನ್ನುವ ಅರ್ಧ ಭವಿಷ್ಯ ಮತ್ತು ಅರ್ಧ ವರ್ತಮಾನವನ್ನು ಕುರಿತು ಆಡಿದಂಥ ಮಾತುಗಳು ಅವರ ಆತಂಕವೋ ಆಶಯವೋ ತಿಳಿಯದೆ ಜನ ಗೊಂದಲಗೊಂಡಂತಿದ್ದಾರೆ. ಹಾಗೆಯೇ ಚೀನಾ ಕಳೆದ ಒಂದೆರಡು ದಶಕಗಳಲ್ಲಿ ಎದುರುಗೊಂಡ ತಲ್ಲಣಗಳು, ಅದರ ಆರ್ಥಿಕ ಸಾಮಾಜಿಕ ಬದುಕು ಅಲ್ಲಾಡಿ ಮತ್ತೆ ಸ್ಥಿರಗೊಂಡ ಬಗೆ ಎಲ್ಲವನ್ನೂ ಜಗತ್ತು ಗಮನಿಸಿದೆ. ಚೀನಾದ ಮಹಾಗೋಡೆ ಮನಸ್ಸಲ್ಲಿ ಮೂಡಿಸುವ ಅದರ ಮುಚ್ಚಿದ ಬಾಗಿಲುಗಳ ನಿಗೂಢ ಲೋಕ ಕ್ರಮೇಣ ಜಾಗತೀಕರಣದ ಅವಕಾಶಗಳಿಗೆ ಬಾಗಿಲು ತೆರೆದಿದ್ದು ಮತ್ತು ಜಾಗತೀಕರಣದ ಒಳಿತುಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಒಂದು ದೇಶ ಚೀನಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಎಲ್ಲ ಈಗ ಇತಿಹಾಸ. ನಾವೆಲ್ಲ ಮಾಧ್ಯಮಿಕ ತರಗತಿಗಳಲ್ಲಿ ಕಲಿಯುತ್ತಿದ್ದಾಗ ಈ ಚೀನಾ ಎಂದರೆ ದ್ರೋಹದ ಸಂಕೇತದಂತೆ ಕಂಡಿತ್ತು. ಹಿಂದೀ ಚೀನೀ ಭಾಯಿ ಭಾಯಿ ಎನ್ನುತ್ತಲೇ ಈ ದೇಶ ಸಿಯಾಚಿನನ್ನು ಆಕ್ರಮಿಸಿದ್ದು ಆ ಎಳೆಯ ಮನಸ್ಸಿನಲ್ಲಿ ನಿಂತಿತ್ತು. ಆದರೆ ತುಂಡು ತುಂಡಾದ ಈ ಎಲ್ಲವೂ ತಪ್ಪುತಪ್ಪಾದ ಚಿತ್ರಗಳೇ. ಒಂದು ದೇಶವನ್ನು ಅಲ್ಲಿಯ ಜನರನ್ನು ಹೀಗೆಲ್ಲ ಸಾರಾಸಗಟಾಗಿ ಗ್ರಹಿಸುವುದು ತಪ್ಪು. ಮನುಷ್ಯ, ಅವನ ಆಶೆ, ದುಗುಡ, ಅಗತ್ಯ, ಮುಗ್ಧತೆ, ಆದರ್ಶ, ನೀಚತನ ಇವಕ್ಕೆಲ್ಲ ಗಡಿಗಳಿಲ್ಲ. ಇದೆಲ್ಲ ಚೆನ್ನಾಗಿ ಅರ್ಥವಾಗುವುದು ಸಾಹಿತ್ಯದ ಮೂಲಕ ಎಂದೇ ಅನಿಸುತ್ತದೆ.
ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ. ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 345 hits
- Email this page



ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!
March 30, 2008 - 4:06pm — narendraಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.
ಈ ಸಂಕಲನದ ಮೊದಲ ಕತೆ ಮಸೀದಿಯ ಅಂಗಳ ಬಹುಷಃ ಕತೆಯಾಗುವ ಅಥವಾ ಕಾದಂಬರಿಯಾಗುವ ಒಂದು ಸುಪ್ತ ಉದ್ದೇಶ ಇಟ್ಟುಕೊಂಡೇ ಹೊರಟ ಕಥಾನಕದಂತಿಲ್ಲ. ಬಾಲ್ಯದ ನೆನಪುಗಳ, ಸ್ಮೃತಿಗಳ ಮೆಲುಕಾಟದಂತೆ ತೊಡಗುವ ಈ ಎಲ್ಲ ವಿವರಗಳು ಕ್ರಮೇಣ ಹಲವು ಕತೆಗಳ ಒಡಲಾಗುತ್ತ, ಬೆಳೆಯುತ್ತ ಹೋಗುತ್ತದೆ. ಮಗುವಿನ ಕಣ್ಣುಗಳಿಂದ ಹಿರಿಯರ ಬದುಕಿನ ದುರಂತಗಳನ್ನು ಮುಗ್ಧವಾಗಿ ಕಟ್ಟಿಕೊಡುವ ಕತೆಗಳು ಕನ್ನಡಕ್ಕೆ ಹೊಸತೇನಲ್ಲ. ಆದರೆ ಇಲ್ಲಿ ಅಂಥ ಯೋಜಿತ ಉದ್ದೇಶ, ಕ್ರಿಯೆ ಎರಡೂ ಇಲ್ಲ. ಕತೆಯ ಕೊನೆಗೆ (ಕೊನೆಯೆಂಬುದು ಇದೆಯೆ, ಇಂಥ ಕತೆಗಳಿಗೆ?) ಈ ವಿವರಗಳಿಗೆಲ್ಲ ಒಂದು ಆಕಾರ ನೀಡಲು ಬಶೀರ್ ಪ್ರಯತ್ನಿಸಿದಂತಿದೆ. ಈ ಪ್ರಯತ್ನ ಕೂಡ ಅತ್ಯಂತ ಸಹಜವಾಗಿ, ಅಪ್ರಯತ್ನ ಎಂಬಂತಿರುವುದು ವಿಶೇಷ. ತಮ್ಮ ಪ್ರೀತಿಯ ಆಟದ ಅಂಗಳವಾಗಿದ್ದ, ಮದರಸಾದ ಕಠಿಣ ಕಲಿಕೆಯ ಶಿಸ್ತಿನಿಂದ ಆಚೆ ಒಂದಿಷ್ಟು ಸ್ವಾತಂತ್ರ್ಯದ ಆಕಾಶವನ್ನು ಒದಗಿಸುತ್ತಿದ್ದ ಮೈದಾನವಾಗಿದ್ದ, ಪ್ರೀತಿಯ ನೇರಳೆ ಮರದ ನೆರಳ ತಾವಾಗಿದ್ದ ಜಾಗ ಕ್ರಮೇಣ ಕಬರಸ್ಥಾನವಾಗುವುದನ್ನು, ಅದಕ್ಕಾಗಿ ಸವಿ-ಒಗರು ನೆನಹುಗಳ ಹಲವಾರು ಕಲರವಗಳನ್ನು ಹೊತ್ತ ನೇರಳೆ ಮರವನ್ನೂ ಕಡಿಯಬೇಕಾಗಿ ಬರುವುದನ್ನು, ಒಂದಲ್ಲಾ ಒಂದು ಕಾಲಕ್ಕೆ ಚಟುವಟಿಕೆಯ ಬುಗ್ಗೆಗಳಂತೆ ಅಲ್ಲೇ ಓಡಾಡಿಕೊಂಡಿದ್ದ ಪುಟ್ಟ ಮಕ್ಕಳೇ ಅಲ್ಲಿ ಹೆಣವಾಗಿ ಮಲಗುವುದನ್ನು, ಅದನ್ನು ಉಳಿದವರು ಕಾಣಬೇಕಾಗುವುದನ್ನು ಹಂತ ಹಂತವಾಗಿ ಚಿತ್ರಿಸುತ್ತ ಮಸೀದಿಯ ಅಂಗಳ ಸವಿನೆನಪುಗಳ ಪೊರೆ ಕಳಚಿಕೊಂಡು ವಿಷಾದದ ಕಹಿ ನೆನಪುಗಳ ಮೈತೋರುತ್ತದೆ. ಮುಂದೆ ಓದಿ »

- Login or register to post comments
- 189 hits
- Email this page




RSS: