ಮನೆ ಮದ್ದು (೩) - ಪುನರ್ಪುಳಿ

ಮನೆ ಮದ್ದು (೩) - ಪುನರ್ಪುಳಿ

     ಕರ್ನಾಟಕದ ಕರಾವಳಿಯಲ್ಲಿ ಬೇಸಗೆಯಲ್ಲಿ ಉರಿಬಿಸಿಲು. ಆಗ ದಾಹ ತಣಿಸಲು ಪುನರ್ಪುಳಿ ಶರಬತ್ತು ಬೇಕೇ ಬೇಕು. ಈ ತಂಪಾದ ಪಾನೀಯದ ಸೇವನೆಯಿಂದ ಬಾಯಾರಿಕೆ ಮತ್ತು ದಣಿವು ಶಮನ.

     ಇದರ ಸಸ್ಯ ಶಾಸ್ತ್ರೀಯ ಹೆಸರು Garcinia Indica.ಇದು Clusiaceae ಕುಟುಂಬಕ್ಕೆ ಸೇರಿದೆ. ಪುನರ್ಪುಳಿಗೆ ಮುರುಗನ ಹುಳಿ ಎಂಬ ಹೆಸರೂ ಇದೆ.ಇದಕ್ಕೆ ಸಂಸ್ಕೃತದಲ್ಲಿ ವೃಕ್ಷಾಮ್ಲ, ಇಂಗ್ಲಿಷ್ ನಲ್ಲಿ ಕೋಕಂ ಮತ್ತು ಬಿರಿಂಡಾ ಎಂಬ ಹೆಸರು.

     ಮಹಾರಾಷ್ತ್ರದ ರತ್ನಗಿರಿಯಿಂದ ಗೋವಾ, ಉತ್ತರ ಕನ್ನಡ,ದಕ್ಷಿಣ ಕನ್ನಡ, ಕೇರಳದ ಕಾಸರಗೋಡು ತನಕ ಪಶ್ಚಿಮ ಘಟ್ಟದ ತಳಭಾಗದಲ್ಲಿ ಒಳ್ಳೆಯ ಬಿಸಿಲು ಇರುವ ಜಾಗ ಪುನರ್ಪುಳಿ ಮರಕ್ಕೆ ಸೂಕ್ತ. ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಬೆಳೆಯುವ ಮರ ಎಪ್ರಿಲ್-ಮೇ ಯಲ್ಲಿ ಹಣ್ಣು ಬಿಡುತ್ತದೆ.


     ಈ ಹಣ್ಣಿನ ಉಪಯೋಗ ಹಲವು.ಹಾಗಾಗಿ ಇದನ್ನೂ ಕಲ್ಪವೃಕ್ಷ ಎನ್ನುತ್ತಾರೆ. ಇದರ ಎಲೆ,ಹಣ್ಣು,ಬೀಜ ಎಲ್ಲವೂ ಬಳಕೆ ಯೋಗ್ಯ.

     ಹಣ್ಣನ್ನು ನಾನಾ ರೀತಿಯಲ್ಲಿ ಉಪಯೋಗಿಸಬಹುದು.

     ಹಣ್ಣಿನ ಬೀಜ ತೆಗೆದು ಹೊರಗಿನ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರುಷವಿಡೀ ಸಾರು ಮತ್ತು ಶರಬತ್ತು ಮಾಡಲು ಉಪಯುಕ್ತ. ಬೀಜವನ್ನು ಆವರಿಸಿದ ತಿರುಳನ್ನು ಹಿಂಡಿ ಅದರ ರಸದಿಂದಲೂ ಶರಬತ್ತು ಮಾಡಬಹುದು.ಇದರ ಬೀಜ ಒಣಗಿಸಿ ಬಿಸಿಮಾಡಿ ಎಣ್ಣೆಯನ್ನು ತಯಾರಿಸುತ್ತಾರೆ.ಈ ಎಣ್ಣೆ ಮುಖಕ್ಕೆ ಹಚ್ಚಬಹುದಾದ ಸೌಂದರ್ಯವರ್ಧಕ ಮತ್ತು ಬೆಂಕಿ ತಾಗಿದಲ್ಲಿಗೆ ಅಥವಾ ಕಾಲು ಒಡೆದಲ್ಲಿಗೆ ಹಚ್ಚಿಕೊಳ್ಳಬಹುದಾದ ಔಷಧಿ.


     ತಾಜಾ ಹಣ್ಣು ಸಿಕ್ಕಿದಾಗ ಅದರ ದಂಟು ಕಿತ್ತು ತೆಗೆದು ಅದರೊಳಗೆ ಸ್ವಲ್ಪ ಉಪ್ಪು ಹಾಕಿ ಸವಿಯಬಹುದು.

     ಬೇಸಗೆಯಲ್ಲಿ ಪುನರ್ಪುಳಿಯ ಶರಬತ್ತು ಹಿತಕರವಾದರೆ ಮಳೆಗಾಲದಲ್ಲಿ ಅದರ ಸಿಪ್ಪೆಯ ಸಾರು ರುಚಿಕರ.

ಸ್ವಲ್ಪ ಕಾಳುಮೆಣಸು,ಬೆಲ್ಲ,ಉಪ್ಪು ಹಾಕಿ ಕುದಿಸಿ ಕರಿಬೇವು, ಜೀರಿಗೆ ಮತ್ತು ಸಾಸಿವೆಯನ್ನು ತುಪ್ಪದಲ್ಲಿ ಒಗ್ಗರಣೆ ಹಾಕಿ ತಯಾರಿಸಿದ ಸಾರು ಪಿತ್ತ ಹರ. ಹುಣಿಸೆಹಣ್ಣಿನ ಬದಲು ದಿನನಿತ್ಯ ಪುನರ್ಪುಳಿ ಸಿಪ್ಪೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿನ ಕೊಲೆಸ್ಟೊರಾಲ್ ಪ್ರಮಾಣ ಕಡಿಮೆಯಾಗುತ್ತದೆ.ಇದು ಹೃದಯದ ಸಮಸ್ಯೆಗೂ ಶಮನಕಾರಿ. ಶೀತ,ಕೆಮ್ಮು ಗುಣಪಡಿಸಲು, ಹಸಿವು ಹೆಚ್ಚಿಸಲು, ಬೊಜ್ಜು ಕರಗಿಸಲು ಈ ಹಣ್ಣಿನ ಸೇವನೆ ಸಹಕಾರಿ. ಇದರ ಸಿಪ್ಪೆ ಒಣಗಿಸಿಟ್ಟರೆ ಅದರಿಂದ ಶರಬತ್ತನ್ನು ಬೇಕೆಂದಾಗ ತಯಾರಿಸಬಹುದು. ಒಣಗಿಸಿದ ಸಿಪ್ಪೆ ಮಾರುಕಟ್ಟೆಯಲ್ಲಿ ಲಭ್ಯ.

     ಪುನರ್ಪುಳಿಯ ಎಲೆಗಳಿಂದ ರುಚಿಯಾದ ತಂಬುಳಿ ಮಾಡಬಹುದು.ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ,ತಾಮ್ರ,ಚಿನ್ನ,ಬೆಳ್ಳಿಯ ಪಾತ್ರೆಗಳನ್ನು ತೊಳೆದು ಮೆರುಗು ಬರುವಂತೆ ಮಾಡುತ್ತಾರೆ.

     ಸಸ್ಯ ಪ್ರಸಾರಕ್ಕಾಗಿ ಇದರ ಬೀಜಗಳಿಂದ ಹುಟ್ಟಿದ ಸಸಿಗಳು ಸೂಕ್ತ. ಕಡುಗೆಂಪಿನ ಪುನರ್ಪುಳಿ ಎಲ್ಲರ ಮನೆಗಳಲ್ಲಿ ಇರಬೇಕಾದ ನಮ್ಮ ನೆಲದ ಸಸ್ಯ.
 

ಚಿತ್ರಃ ರಾಜಲಕ್ಷ್ಮಿ

Comments