ಕರ್ನಾಟಕದ ನೆಲ-ಜಲ (೨)

ಕರ್ನಾಟಕದ ನೆಲ-ಜಲ (೨)

ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ ಚಿರಪರಿಚಿತ. ೧೭, ನವೆಂಬರ್, ೨೦೧೨ರ ಶನಿವಾರ ಇವರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸ "ಕರ್ನಾಟಕದ ನೆಲ-ಜಲ" ಕುರಿತಾಗಿತ್ತು. ಇದರ ಬರಹ ರೂಪದ ಎರಡನೆಯ ಕಂತು ಈ ಲೇಖನ.   - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ.

ಕನ್ನಡನಾಡಿನ ಏಕೀಕರಣ ಹೋರಾಟ
 
ನಮ್ಮ ಕನ್ನಡನಾಡು ಉದಯವಾದದ್ದು ನವಂಬರ್ ೧, ೧೯೫೬ರಂದು. ಅ ದಿನವನ್ನು ರಾಜ್ಯೋತ್ಸವ ದಿನವೆಂದು ಕನ್ನಡಿಗರಲ್ಲ ಉತ್ಸಾಹದಿಂದ ಆಚರಿಸುತ್ತಿದ್ದೇವೆ.
 
ಕನ್ನಡನಾಡು ಉದಯವಾಗಲು ಕಾರಣವಾದ ಘಟನೆಗಳೇನು? ಜನಪರ ಹೋರಾಟಗಳೇನು? ಎಂಬುದನ್ನೆಲ್ಲ ಡಾ. ಎಚ್. ಎಸ್. ಗೋಪಾಲ ರಾವ್ "ಕರ್ನಾಟಕ ಏಕೀಕರಣ ಇತಿಹಾಸ" ಎಂಬ ೧೯೯೮ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ.
 
ಕನ್ನಡನಾಡಿನ ಕನಸು ಕಂಡವರು ಹಲವರು. ಇದಕ್ಕಾಗಿ ಶ್ರಮಿಸಿದವರು ದೂರದರ್ಶಿ ಚಿಂತನೆಗಳಿದ್ದ ನೂರಾರು ಚಿಂತಕರು, ಸಾಹಿತಿಗಳು, ಕಲಾವಿದರು. ಹುಯಿಲಗೋಳ ನಾರಾಯಣರಾಯರು "ಉದಯವಾಗಲಿ ಚೆಲುವ ಕನ್ನಡನಾಡು" ಹಾಡಿನ ಮೂಲಕ ಜನಮಾನಸದಲ್ಲಿ ಕನ್ನಡನಾಡಿನ ಕನಸಿನ ಕಿಚ್ಚು ಹಚ್ಚಿದರು. ಹಲವು ಸಂಘಸಂಸ್ಥೆಗಳು ಕನ್ನಡಿಗರಿಗೆ ಪ್ರತ್ಯೇಕ ಕನ್ನಡನಾಡು ಬೇಕೆಂಬ ಚಳವಳವನ್ನು ಮುನ್ನಡೆಸಿದವು.


ಒಂದಾನೊಂದು ಕಾಲದಲ್ಲಿ ಅಂದರೆ ಕ್ರಿ.ಶ. ೯ನೇ ಶತಮಾನದಲ್ಲಿ ಕನ್ನಡನಾಡಿನ ಗಡಿ ಯಾವುದಾಗಿತ್ತು? ಈ ವಿಷಯ ನಮಗೆ "ಕವಿರಾಜಮಾರ್ಗ" ಕೃತಿಯ ಮೂಲಕ ತಿಳಿದು ಬರುತ್ತದೆ. ಅದರ ಪ್ರಕಾರ "ಕಾವೇರಿಯಿಂದಮಾ ಗೋದಾವರಿಮಿರ್ದ ನಾಡು" ಕನ್ನಡನಾಡು. ಅಂದರೆ ಕರ್ನಾಟಕದ ದಕ್ಷಿಣದ ಗಡಿ ಕಾವೇರಿ ನದಿ ಹಾಗೂ ಉತ್ತರದ ಗಡಿ ಗೋದಾವರಿ ನದಿ.
 
ಇಂತಹ ವಿಶಾಲ ಪ್ರದೇಶದಲ್ಲಿ ನೆಲೆಸಿದ್ದರು ಕನ್ನಡ ಮಾತನಾಡುವ ಜನ. ಈ ಪ್ರದೇಶವು ಹಲವಾರು ಕಾರಣಗಳಿಂದಾಗಿ ಸಣ್ಣಸಣ್ಣ ಭೌಗೋಳಿಕ ಭಾಗಗಳಾಗಿ ಒಡೆಯುತ್ತಾ, ವಿವಿಧ ಆಡಳಿತಗಾರರ ವಶವಾಯಿತು. ೧೯ನೇ ಶತಮಾನದ ಅಂತ್ಯದಲ್ಲಿ ಈ ಕನ್ನಡನಾಡು ವಿವಿಧ ಆಡಳಿತಕ್ಕೊಳಪಟ್ಟ  ೨೦ ಭೂಘಟಕಗಳಾಗಿ ಹಂಚಿಹೋಗಿತ್ತು.
 
ಇವನ್ನೆಲ್ಲ ಒಂದುಗೂಡಿಸುವ ಕೆಲಸವೇ ಕರ್ನಾಟಕ ಏಕೀಕರಣ. ಈ ಒಂದುಗೂಡಿಸುವ ಕಾಯಕಕ್ಕಾಗಿ ನಡೆದ ಒತ್ತಾಯ, ಪ್ರತಿಭಟನೆ, ಸತ್ಯಾಗ್ರಹ, ಆಂದೋಲನಗಳನ್ನು ಕನ್ನಡ ನೆಲದ ಏಕೀಕರಣ ಹೋರಾಟ ಎನ್ನಬಹುದು.
 
ಕನ್ನಡನಾಡಿನ ಏಕೀಕರಣದ ಬಗ್ಗೆ ಮೊದಲಾಗಿ ಯೋಚನೆ ಮಾಡಿದ್ದು, ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ. ದಕ್ಷ ಆಡಳಿತಗಾರನೆಂದು ಹೆಸರಾಗಿದ್ದ ಆತ, ಕನ್ನಡ ಮಾತನಾಡುವ ಜನರಿದ್ದ ಪ್ರದೇಶವನ್ನೆಲ್ಲ ಒಂದುಗೂಡಿಸಬೇಕೆಂದು ೧೮೨೬ರಲ್ಲೇ ಪ್ರಸ್ತಾಪಿಸಿದ್ದ. ಆದರೆ ಬ್ರಿಟಿಷ್ ಕಂಪೆನಿ ಸರಕಾರವು ಆತನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿತು.
 
ಅನಂತರ ಕರ್ನಾಟಕದ ಏಕೀಕರಣಕ್ಕೆ ಪ್ರೇರಣೆ ದೊರೆತದ್ದು ಬಂಗಾಳ ವಿಭಜನೆ ಹಾಗೂ ಒಂದಾಗುವಿಕೆಯಿಂದ. ಬ್ರಿಟಿಷ್ ಕಂಪೆನಿ ಸರಕಾರವು ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಸಂಸ್ಥಾನಗಳನ್ನು ವಿಭಜನೆ ಮಾಡುತ್ತಲೇ ಇತ್ತು. ಇದರಿಂದಾಗಿ ಒಂದೇ ಭಾಷೆಯನ್ನಾಡುತ್ತಾ, ಒಂದೇ ಸಂಸ್ಕೃತಿ ಅನುಸರಿಸುತ್ತಿದ್ದ ಜನರು ವಿವಿಧ ಭೌಗೋಳಿಕ ಘಟಕಗಳಲ್ಲಿ ಹಂಚಿ ಹೋಗುತ್ತಿದ್ದರು. ಆಗಸ್ಟ್ ೧೬, ೧೯೦೫ರಂದು ಬ್ರಿಟಿಷ್ ಸರಕಾರ ಬಂಗಾಳವನ್ನು ಪೂರ್ವ - ಪಶ್ಚಿಮವೆಂದು ಹೋಳು ಮಾಡಿತು. ಅಲ್ಲಿನ ಜನ ಇದರ ವಿರುದ್ಧ ಸಿಡಿದೆದ್ದರು. ಜಿದ್ದಿಗೆ ಬಿದ್ದು ಚಳವಳಿ ನಡೆಸಿದರು. ಇದರ ಪರಿಣಾಮವಾಗಿ, ೧೯೧೨ರಲ್ಲಿ ಬ್ರಿಟಿಷ್ ಸರಕಾರ ಬಂಗಾಳ ವಿಭಜನೆಯನ್ನು ರದ್ದು ಮಾಡಿತು.
 
ಆಗ, ಕನ್ನಡ ಮಾತನಾಡುವ ಜನರಿಗೆ ತಾವು ಒಂದಾಗಲು ಸಾಧ್ಯ ಎಂದು ಮನದಟ್ಟಾಯಿತು. ಈ ಯೋಚನೆಗೆ ಚಾಲನೆ ನೀಡಲಿಕ್ಕಾಗಿ ಸ್ಥಾಪನೆಯಾಯಿತು - ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ.
 
ಕನ್ನಡ ಪುಸ್ತಕಗಳ ಭಾಷೆ ಏಕರೂಪವಾಗಿರಬೇಕು ಎಂಬ ಉದ್ದೇಶ ಸಾಧನೆಗಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘವು ಮೊದಲ ಬಾರಿ ೧೯೦೭ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಧಾರವಾಡದಲ್ಲಿ ಸಂಘಟಿಸಿತು. ಎರಡನೇ ಸಮ್ಮೇಳನವೂ ಅಲ್ಲೇ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಸಲಿಕ್ಕಾಗಿ ಸ್ಥಾಪನೆಯಾದದ್ದೇ ಕನ್ನಡ ಸಾಹಿತ್ಯ ಪರಿಷತ್ತು.
 
ಈ ಎರಡು ಸಂಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾ ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಒಂದುಗೂಡಿಸುವ ಬೃಹತ್ ಕಾರ್ಯಕ್ಕೆ ಚಾಲನೆ ನೀಡಿದವು. ಇವು ಸಾಹಿತ್ಯ ಸಮ್ಮೇಳನಗಳಲ್ಲಿಯೂ ಕರ್ನಾಟಕ ಏಕೀಕರಣದ ಬಗ್ಗೆ ಆಗ್ರಹಪೂರ್ವಕವಾಗಿ ಚರ್ಚೆ ನಡೆಸಿದವು.
 
ಕರ್ನಾಟಕ ಏಕೀಕರಣದಲ್ಲಿ ಆಲೂರು ವೆಂಕಟರಾಯರ ಪಾತ್ರವನ್ನು ಮರೆಯುವಂತಿಲ್ಲ. ಏಕೀಕರಣದ ಕನಸನ್ನು ನನಸುಗೊಳಿಸಲು ಅಲೂರರು ದೀಕ್ಷೆ ತೊಟ್ಟಿದ್ದರು. ಕರ್ನಾಟಕದ ಇತಿಹಾಸವನ್ನು ಅಧ್ಯಯನ ಮಾಡಿ ಅವರು ಬರೆದ "ಕರ್ನಾಟಕ ಗತವೈಭವ" ಎಂಬ ಪುಸ್ತಕ ಆ ಕಾಲಘಟ್ಟದಲ್ಲಿ ಕನ್ನಡಿಗರನ್ನು ಬಡಿದೆಬ್ಬಿಸಿತು. ಆಲೂರರಿಗೆ ಬಾಲಗಂಗಾಧರ ತಿಲಕರ ಸಂಪರ್ಕವಿತ್ತು. "ಮರಾಠಿ, ತೆಲುಗು ಮತ್ತು ಕನ್ನಡಗಳಿಗೆ ಪ್ರತ್ಯೇಕ ಪ್ರಾಂತ್ಯಗಳನ್ನು ರಚಿಸಿ" ಎಂದು ತಿಲಕರು ಬ್ರಿಟಿಷರನ್ನು ಒತ್ತಾಯಿಸುತ್ತಿದ್ದರು. "ಈ ಇಂಗ್ಲಿಷರು ತಮ್ಮ ಜನರಿಗೆ ಫ್ರೆಂಚ್ ಭಾಷೆಯಲ್ಲಿ ಶಿಕ್ಷಣ ನೀಡುತ್ತಾರೆಯೇ?" ಎಂಬ ತಿಲಕರ ಪ್ರಶ್ನೆ ಕನ್ನಡದ ಬಗ್ಗೆ ಆಲೂರರ ಅಭಿಪ್ರಾಯ ರೂಪಿಸಿತ್ತು.
 
ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಆಪ್ತರೊಂದಿಗೆ ಆಲೂರರು ೧೯೧೬ರಲ್ಲಿ ಸ್ಥಾಪಿಸಿದ ಸಂಸ್ಥೆಯೇ "ಕರ್ನಾಟಕ ಸಭಾ". ತಿಲಕರು ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವ ಮತ್ತು ಶಿವಾಜಿ ಮಹೋತ್ಸವ ಜರಗಿಸಿ ಜನಜಾಗೃತಿ ಮೂಡಿಸುತ್ತಿದ್ದರು. ಅದೇ ರೀತಿಯಲ್ಲಿ ಆಲೂರರು ಕರ್ನಾಟಕದಲ್ಲಿ ಉತ್ಸವಗಳನ್ನು ನಡೆಸ ತೊಡಗಿದರು - ವಿದ್ಯಾರಣ್ಯ ಉತ್ಸವ, ವಿಜಯನಗರ ಉತ್ಸವ, ನಾಡಹಬ್ಬ ಇತ್ಯಾದಿ.
 
೧೯೧೮ರಲ್ಲಿ ಪ್ರಕಟವಾದ ಮಾಂಟ್ - ಫೋರ್ಡ್ ವರದಿಯು ಕರ್ನಾಟಕ ಏಕೀಕರಣಕ್ಕೆ ಹೊಸ ಚಾಲನೆ ನೀಡಿತು. ಯಾಕೆಂದರೆ, ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಸೂಕ್ತವೆಂದು ಅದು ಪ್ರತಿಪಾದಿಸಿತ್ತು. ಅನಂತರ ೧೯೨೪ರಲ್ಲಿ ಜರಗಿದ ಬೆಳಗಾವಿ ಕಾಂಗ್ರೆಸ್ ಮಾಹಾಧಿವೇಶನವು ಕರ್ನಾಟಕ ಏಕೀಕರಣದ ಆಂದೋಲನಕ್ಕೆ ಬಲ ನೀಡಿತು. ಮಹಾತ್ಮಾ ಗಾಂಧಿ ಅಧ್ಯಕ್ಷರಾಗಿದ್ದ ಆ ಮಹಾಧಿವೇಶನದಲ್ಲಿ ಎಲ್ಲ ಕನ್ನಡ ಭಾಷಿಕ ಪ್ರದೇಶಗಳ ಪ್ರಾತಿನಿಧ್ಯವಿತ್ತು. ಆಗಲೇ, ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯೂ ನಡೆಯಿತು. ಇದು, "ಕರ್ನಾಟಕ ಸಭಾ" ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜೊತೆ ಸೇರಿ ಸ್ಥಾಪಿಸಿದ ಸಂಸ್ಥೆ.
 
ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಪರಿಷತ್ತಿನಂತಹ ಸಂಸ್ಥೆಗಳ ಸತತ ಪ್ರಯತ್ನಗಳಿಂದಾಗಿ ಏಕೀಕರಣದ ಬೇಡಿಕೆಯು ಚಳವಳದ ಸ್ವರೂಪ ಪಡೆಯಿತು.
 
ಆದರೆ ಶಾಸನಸಭೆಗಳಲ್ಲಿ ಕನ್ನಡನಾಡಿನ ಏಕೀಕರಣದ ಬೇಡಿಕೆ ಕೇಳಿ ಬರುತ್ತಿದ್ದುದ್ದು ಅಪರೂಪ. ಯಾಕೆಂದರೆ, ಮುಂಬಯಿ ವಿಧಾನಸಭೆಯ ೧೧೧ ಸದಸ್ಯರಲ್ಲಿ ಕನ್ನಡದ ಸದಸ್ಯರು ಕೇವಲ ಇಬ್ಬರು. ಹಾಗೆಯೇ ಮದ್ರಾಸಿನ ವಿಧಾನಸಭೆಯ ೧೨೩ ಸದಸ್ಯರಲ್ಲಿ ಕನ್ನಡದ ಸದಸ್ಯರು ಕೇವಲ ಐವರು. ಇದರಿಂದ ಆಗ ಕನ್ನಡಿಗರ ಪರಿಸ್ಥಿತಿ ಎಷ್ಟು ಅಸಹಾಯಕವಾಗಿತ್ತೆಂದು ತಿಳಿಯಬಹುದು.
 
ಆಗಸ್ಟ್ ೧೫, ೧೯೪೭ರಂದು ಭಾರತವು ಸ್ವತಂತ್ರ ದೇಶವಾಯಿತು. ಆಗ, ಕರ್ನಾಟಕ ಏಕೀಕರಣದ ದಿನಗಳು ಹತ್ತಿರ ಬಂದವೆಂಬ ಭಾವನೆ ಕನ್ನಡಿಗರಲ್ಲಿ ಬೆಳೆಯಿತು. ಆದರೆ ಕೇಂದ್ರ ಸರಕಾರವು ಭಾಷಾವಾರು ಪ್ರಾಂತ್ಯ ವಿಭಜನೆಯನ್ನು ವಿಳಂಬ ಮಾಡಿತು.
 
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಜನತೆ ನಿಜಾಮನ ವಿರುದ್ಧ ಉಗ್ರವಾಗಿ ಹೋರಾಡಿದ್ದನ್ನು ಸ್ಮರಿಸಲೇ ಬೇಕು. ನಿಜಾಮನ ಆಳ್ವಿಕೆಯಿಂದ ಬಿಡುಗಡೆ ಹೊಂದಿ, ರಜಾಕಾರರ ಹಾವಳಿಯಿಂದ ಪಾರಾಗಿ, ಸ್ವತಂತ್ರ ಭಾರತದಲ್ಲಿ ಸೇರಿಕೊಂಡು , ಕರ್ನಾಟಕದಲ್ಲಿ ತಮ್ಮ ನೆಲೆ ಕಾಣಬೇಕೆಂಬುದು ಅವರ ಕನಸಾಗಿತ್ತು.
 
ಅನಂತರ, ಮುಂಬಯಿ ಹಾಗೂ ಮದ್ರಾಸ್ ಶಾಸನಸಭೆಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆಗ್ರಹಿಸುವ ಗೊತ್ತುವಳಿಗಳನ್ನು ಮಂಡಿಸಲಾಯಿತು. ಕರ್ನಾಟಕ ಏಕೀಕರಣದ ಪರವಾಗಿ, ಮೈಸೂರು, ಮುಂಬಯಿ ಮತ್ತು ಮದ್ರಾಸ್ ಆಡಳಿತಕ್ಕೊಳಪಟ್ಟ ಕನ್ನಡ ಪ್ರದೇಶಗಳಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕ ಏಕೀಕರಣದ ಬೇಡಿಕೆ ತೀವ್ರ ಸ್ವರೂಪ ಪಡೆಯಿತು.
 
ಆಗ, ೧೯೫೧ರಲ್ಲಿ, ಭಾಷಾವಾರು ಪ್ರಾಂತ್ಯ ರಚನೆಗೆ ಹೊಸ ತಿರುವು ನೀಡುವ ಘಟನೆಯೊಂದು ನಡೆಯಿತು. ಆಗಸ್ಟ್ ೧೫, ೧೯೫೧ರಂದು ಆಂಧ್ರ ಪ್ರಾಂತ್ಯ ರಚನೆಗೆ ಆಗ್ರಹಿಸಿ ಸ್ವಾಮಿ ಸೀತಾರಾಮ ತಿರುಪತಿಯಲ್ಲಿ ಆಮರಣಾಂತ ಉಪವಾಸ ಆರಂಭಿಸಿದರು. ಒಂದು ತಿಂಗಳು ದಾಟಿದರೂ ಅವರು ಉಪವಾಸ ನಿಲ್ಲಿಸಲಿಲ್ಲ. ಕೊನೆಗೆ, ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಆಶ್ವಾಸನೆ ನೀಡಿದ್ದರಿಂದಾಗಿ ಅವರು ೩೭ ದಿನಗಳ ಉಪನ್ಯಾಸ ನಿಲ್ಲಿಸಿದರು.
 
ಇಷ್ಟಾದರೂ ಆಂಧ್ರ ಪ್ರಾಂತ್ಯ ರಚನೆಯಲ್ಲಿ ವಿಳಂಬವಾಯಿತು. ತೆಲುಗು ಮಾತನಾಡುವ ಜನರ ಸಿಟ್ಟು ಸ್ಫೋಟವಾಗ ತೊಡಗಿತು. ಪೊಟ್ಟಿ ಶ್ರೀರಾಮುಲು ಆಂಧ್ರ ರಾಜ್ಯ ಬೇಕೇಬೇಕೆಂದು ಆಮರಣಾಂತ ಉಪವಾಸ ತೊಡಗಿದರು. ೫೮ ದಿನ ಉಪವಾಸ ಮಾಡಿದ ಅವರು ಡಿಸೆಂಬರ್ ೧೫, ೧೯೫೨ರಂದು ನಿಧನರಾದಾಗ ಆಂಧ್ರದಲ್ಲಿ ಅಲ್ಲೋಲಕಲ್ಲೋಲ. ಅದಾಗಿ ನಾಲ್ಕು ದಿನಗಳಲ್ಲಿ, ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ, ಆಂಧ್ರದ ಗಡಿ ಬಗ್ಗೆ ವರದಿ ನೀಡಲು ವಾಂಚೂ ಸಮಿತಿ ನೇಮಿಸುವ ನಿರ್ಣಯ ಅಂಗೀಕಾರ. ಆ ಸಮಿತಿ ಬಳ್ಳಾರಿ ಜಿಲ್ಲೆ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಲಿಲ್ಲ. ಆದ್ದರಿಂದ, ಮಿಶ್ರಾ ಸಮಿತಿಯ ನೇಮಕ.
 
ಅಷ್ಟರಲ್ಲಿ, ಕರ್ನಾಟಕ ಏಕೀಕರಣ ಆಗಲೇ ಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ನ ಕಾರ್ಯಕರ್ತ ಶಂಕರಗೌಡ ಪಾಟೀಲರು ಹುಬ್ಬಳ್ಳಿ ಹತ್ತಿರದ ಸ್ವಗ್ರಾಮ ಅದರಗುಂಚಿಯಲ್ಲಿ ಅಮರಣಾಂತ ಉಪವಾಸ ಆರಂಭಿಸಿದರು - ಫೆಬ್ರವರಿ ೧೯೫೩ರ ಕೊನೆಯಲ್ಲಿ. ಆ ಮುನ್ನ ಇದೇ ರೀತಿ ಇಬ್ಬರು ಕಾರ್ಯಕರ್ತರು ಮಾಡಿದ್ದ ಉಪವಾಸ ಸುದ್ದಿ ಆಗಿರಲಿಲ್ಲ. ಆದರೆ ಅದರಗುಂಚಿ ಪಾಟೀಲರ ಉಪವಾಸ ದೊಡ್ಡ ಸುದ್ದಿಯಾಯಿತು. ಉಪವಾಸದ ೨೩ನೇ ದಿನ, ಹುಬ್ಬಳ್ಳಿಯ ಪುರಸಭೆಗೆ ಜನರ ಮುತ್ತಿಗೆ. ಅಲ್ಲಿ ೨೫,೦೦೦ ಜನ ಜಮಾಯಿಸಿದ್ದರು - ಕಾಂಗ್ರೆಸ್ ನಾಯಕರ ರಾಜೀನಾಮೆ ಕೇಳಲಿಕ್ಕಾಗಿ. ಜನರ ಆಕ್ರೋಶ ಎಲ್ಲೆ ಮೀರಿತ್ತು. ರೊಚ್ಚಿಗೆದ್ದ ಜನ ದೊಂಬಿಯೆದ್ದಾಗ ಅಲ್ಲಿ ಪೊಲೀಸರಿಂದ ಗೋಲೀಬಾರ್.
 
ಆ ದಿನ ಅದರಗುಂಚಿ ಶಂಕರಗೌಡ ಪಾಟೀಲರು ೨೩ ದಿನಗಳ ಉಪವಾಸ ನಿಲ್ಲಿಸಿದರು. ಆ ಸನ್ನಿವೇಶದಲ್ಲಿ, ಕಮ್ಯುನಿಸ್ಟ್ ಮತ್ತು ಸೋಷಿಯಲಿಸ್ಟ್ ಪಕ್ಷಗಳ ಮುಂದಾಳುತನದಲ್ಲಿ "ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು" ರಚನೆಯಾಯಿತು. ಕರ್ನಾಟಕ ಪ್ರಾಂತ್ಯ ನಿರ್ಮಾಣವೇ ಅದರ ಪ್ರಧಾನ ಗುರಿಯಾಗಿತ್ತು.
 
ಅದಾದ ನಂತರ, ಅಕ್ಟೋಬರ್ ೧, ೧೯೫೩ರಂದು ಆಂಧ್ರಪ್ರದೇಶ ರಾಜ್ಯ ರಚನೆ ಆಯಿತು. ಅದೇ ದಿನ ಮೈಸೂರು ಸಂಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಸೇರ್ಪಡೆ. ಆ ದಿನ ಒಂದು ದುರ್ಘಟನೆ ನಡೆಯಿತು: ಕರ್ನಾಟಕ ಕ್ರಿಯಾ ಸಮಿತಿಯ ಸದಸ್ಯರಾಗಿದ್ದ ರಂಜಾನ ಸಾಹೇಬರ ಕೊಲೆ. ಆ ಕನ್ನಡಪ್ರೇಮಿ, ಬಳ್ಳಾರಿ - ಮೈಸೂರು ವಿಲಯನ ಸಮಾರಂಭದ ಸಭಾಮಂಟಪದ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು. ಸಮಾಜಘಾತಕ ವ್ಯಕ್ತಿಗಳು ಸಭಾಮಂಟಪ ಸುಡಲು ಸಂಚು ನಡೆಸಿದ ಸುದ್ದಿ ಬಂದದ್ದರಿಂದ, ಅದರ ಕಾವಲಿಗಾಗಿ ಅಲ್ಲೇ ಮಲಗಿದ್ದರು. ಅವರ ಮುಖಕ್ಕೆ ಆಸಿಡ್ ಬಲ್ಬ್ ಎಸೆಯಲಾಯಿತು. ಮರುದಿನ, ರಂಜಾನ್ ಸಾಹೇಬ್ ತೀರಿಕೊಂಡರು.
 
ಹೀಗೆ ಕರ್ನಾಟಕ ಏಕೀಕರಣಕ್ಕೆ ಹಂಬಲಿಸಿದ ಕಾರ್ಯಕರ್ತನ ಬಲಿಯಾದ ಬಳಿಕ ಕನ್ನಡಿಗರ ಸಹನೆಯ ಕಟ್ಟೆಯೊಡೆಯಿತು. ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸುವ ಕಾರ್ಯಕ್ರಮಗಳು ಬಿರುಸಿನಿಂದ ನಡೆಯತೊಡಗಿದವು.
 
ಅಂತೂ, ಭಾರತದ ರಾಜ್ಯಗಳ ಪುನರ್ ವಿಂಗಡಣೆ ಬಗ್ಗೆ ವರದಿ ನೀಡಲು ಕೇಂದ್ರ ಸರಕಾರವು ಡಿಸೆಂಬರ್ ೨೯, ೧೯೫೩ರಂದು ಫಜಲ್ ಅಲಿ ಆಯೋಗ ನೇಮಿಸಿತು. ಅದು ಸಾರ್ವಜನಿಕರಿಂದ ಹಾಗು ಸಂಸ್ಥೆಗಳಿಂದ ಹೇಳಿಕೆ, ಲೇಖನ, ಟಿಪ್ಪಣೆ, ನಕ್ಷೆ ಸಂಗ್ರಹಿಸಿತು. ಅದು ಸ್ವೀಕರಿಸಿದ ಲೇಖನಗಳು ೧,೫೨,೨೫೦ ಮತ್ತು ಪ್ರಬಂಧಗಳು ೨,೦೦೦. ಸುಮಾರು ೩೮,೦೦೦ ಮೈಲು ಪ್ರಯಾಣಿಸಿ, ೯,೦೦೦ ಜನರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ, ೨೧ ತಿಂಗಳ ನಂತರ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತು. ಭಾರತವನ್ನು ೧೯ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ ವಿಂಗಡಿಸಬೇಕೆಂಬುದು ಆಯೋಗದ ಶಿಫಾರಸ್. ಕರ್ನಾಟಕ ರಾಜ್ಯದ ಭೂಪ್ರದೇಶವನ್ನೂ ಆಯೋಗ ಸೂಚಿಸಿತು. ನೂತನ ರಾಜ್ಯಗಳ ರಚನೆಯ ಮಸೂದೆ ಲೋಕಸಭೆಯಲ್ಲಿ ಮಂಡಿಸಲ್ಪಟ್ಟಿತು.
 
ಅನಂತರ, ಆಯೋಗದ ಶಿಫಾರಸುಗಳಲ್ಲಿ ಕೆಲವು ಬದಲಾವಣೆಗಳನ್ನು ಅಂಗೀಕರಿಸಲಾಯಿತು. ಆಂಧ್ರಕ್ಕೆ ನೀಡಿದ್ದ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನಕ್ಕೆ ಸೇರಿತು. ರಾಯಚೂರು ಜಿಲ್ಲೆಯ ಗದ್ವಾಲ್ ಮತ್ತು ಆಲಂಪುರ ಆಂಧ್ರಕ್ಕೆ ಹೋಯಿತು. ಆದರೆ, ಕಾಸರಗೋಡು ಕೇರಳದ ಪಾಲಾಯಿತು. ಮೈಸೂರು ಸಂಸ್ಥಾನಕ್ಕೆ ಆಗ ಸೇರಿಸಲಾದ ಬೆಳಗಾವಿ ತನಗೆ ಸೇರಬೇಕೆಂದು ಮಹಾರಾಷ್ಟ್ರ ಈಗಲೂ ಗದ್ದಲ ಮಾಡುತ್ತಿದೆ.
 
 ಅಂತಿಮವಾಗಿ, ನವಂಬರ್ ೧೧, ೧೯೫೬ರಂದು ಕನ್ನಡನಾಡು ಅಸ್ತಿತ್ವಕ್ಕೆ ಬಂತು. ಆದರೆ, ಮೈಸೂರಿನ ಪ್ರಭುತ್ವದ ಒತ್ತಾಯದಿಂದಾಗಿ ರಾಜ್ಯದ ಹೆಸರು ಮೈಸೂರು ಎಂದಾಯಿತು. ಅನಂತರ, ರಾಜ್ಯದ ಹೆಸರನ್ನು ಬದಲಾಯಿಸಲಿಕ್ಕಾಗಿ ಆಂದೋಲನ ಶುರುವಾಯಿತು. ಕೊನೆಗೆ, ಜನವರಿ ೧, ೧೯೭೩ರಂದು ನಮ್ಮ ರಾಜ್ಯದ ಹೆಸರು "ಕರ್ನಾಟಕ" ಎಂದು ಬದಲಾಯಿತು.
 
ಮುಂದೇನು?
ಕರ್ನಾಟಕ ರಾಜ್ಯದ ಭೂಪ್ರದೇಶ ವಿಸ್ತಾರವಾಗಿದೆ. ಜನಸಂಖ್ಯೆ, ಅದರ ಜೊತೆಗೆ ಆಡಳಿತಾತ್ಮಕ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಜನರ ಏರುತ್ತಿರುವ ಆಶೋತ್ತರಗಳಿಗೆ ಸ್ಪಂದಿಸುವುದು ಮತ್ತು ದಕ್ಷ ಆಡಳಿತ ಒದಗಿಸುವುದು ಯಾವುದೇ ಸರಕಾರಕ್ಕೂ ದೊಡ್ಡ ಸವಾಲು.
 
ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾದರೆ, ನಿಸ್ವಾರ್ಥ ಹಾಗೂ ಪ್ರಬುದ್ಧ ಜನನಾಯಕರ ದೊಡ್ಡ ಸಮೂಹವೇ ಬೇಕಾಗುತ್ತದೆ. ಅದಲ್ಲದೆ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ದೊಡ್ಡ ತಂಡವೂ ಅಗತ್ಯ. ಅಂಥವರು ಈಗೆಲ್ಲಿದ್ದಾರೆ? ಸಿದ್ಧವನಹಳ್ಳಿ ನಿಜಲಿಂಗಪ್ಪ ಅವರಂತಹ ನಾಯಕರು ಹುಡುಕಿದರೂ ಸಿಗಲೊಲ್ಲರು. ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಂತಹ ಆಡಳಿತಗಾರರು ತೀರಾ ವಿರಳ.
 
ಹಾಗಿರುವಾಗ, ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಹಾಗೂ ದಕ್ಷ ಆಡಳಿತ ಒದಗಿಸುವುದು ಕಷ್ಟಸಾಧ್ಯವಾಗುತ್ತದೆ. ಈಗ ನಾವು ಕರ್ನಾಟಕದಲ್ಲಿ ಅದನ್ನೇ ಕಾಣುತ್ತಿದ್ದೇವೆ. ಇದರಿಂದಾಗಿ, ಜನರ ಅಸಮಾಧಾನ ಭುಗಿಲೇಳುತ್ತದೆ; ಆಕ್ರೋಶ ಮುಗಿಲು ಮುಟ್ಟುತ್ತದೆ. ಇದನ್ನು ಬಲಪ್ರಯೋಗದಿಂದ ತುಳಿದು ಹಾಕಲು ಯಾವ ಸರಕಾರಕ್ಕೂ ಸಾಧ್ಯವಿಲ್ಲ. ಇಂದಿನ ತಂತ್ರಜ್ನಾನ ಆಧಾರಿತ ಮಿಂಚಿನ ವೇಗದ ಸಂವಹನದ ಕಾಲದಲ್ಲಿ, ಕ್ಷಣಕ್ಷಣದ ಸುದ್ದಿ ತಕ್ಷಣವೇ ಲೋಕಪ್ರಸಾರವಾಗುವ ಬಹುಮಾಧ್ಯಮದ ಸನ್ನಿವೇಶದಲ್ಲಿ ಜನಪರ ಚಳವಳಿಗಳು ಬಲಗೊಳ್ಳುತ್ತಾ ಸಾಗುತ್ತವೆ.
 
ಅಂತಿಮವಾಗಿ, ಕರ್ನಾಟಕವನ್ನು ಈಗಿರುವಂತೆಯೇ ಉಳಿಸಿಕೊಳ್ಳಲು ಕಷ್ಟವಾದೀತು. ಗಮನಿಸಿ, ಹಿಂದಿ ಮಾತಾಡುವ ಜನಪ್ರದೇಶವನ್ನು ಎಷ್ಟೆಲ್ಲ ರಾಜ್ಯಗಳಾಗಿ ವಿಂಗಡಿಸಬೇಕಾಯಿತು.ಇತ್ತೀಚೆಗಿನ ಸೇರ್ಪಡೆ, ಸಣ್ಣ ರಾಜ್ಯಗಳಾದ ಜಾರ್ಖಂಡ, ಉತ್ತರಾಂಚಲ ಹಾಗೂ ಚತ್ತಿಸ್ಘರ್. ಹಿಂದಿ ಭಾಷಿಕರಿಗಾಗಿ ಅಷ್ಟೆಲ್ಲ ರಾಜ್ಯಗಳಿರುವಾಗ ತೆಲುಗು ಭಾಷಿಕರಿಗಾಗಿ ಆಂಧ್ರ ಮತ್ತು ತೆಲಂಗಾಣ ಎಂಬ ಎರಡು ರಾಜ್ಯಗಳಾದರೂ ಬೇಕೆಂದು ತೆಲಂಗಾಣದವರು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಇದ್ದಾರೆ. ಹಾಗೆಯೇ, ಕರ್ನಾಟಕವೂ ಉತ್ತರ - ದಕ್ಷಿಣವಾಗಿ ವಿಭಜನೆಯಾಗಲಿ ಎಂಬ ಬೇಡಿಕೆ ಬಲವಾಗುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ತಿಂಗಳ ಮುಂಚೆ ಈ ಕೂಗು ಪುನಃ ಎದ್ದಿದೆ. ಕೊಡಗಿನಲ್ಲಿ ಮತ್ತು ತುಳುನಾಡಿನಲ್ಲಿಯೂ ಪ್ರತ್ಯೇಕತೆಯ ಕೂಗು ಆಗಾಗ ಕೇಳಿ ಬರುತ್ತಿದೆ. ಇವೆಲ್ಲದರ ಸದ್ದಡಗಿಸುವುದು ಸುಲಭವಲ್ಲ.
 
ಇಂತಹ ಸನ್ನಿವೇಶದಲ್ಲಿ, ರಾಜ್ಯಗಳ ಗಡಿ ಸಮಸ್ಯೆಗೆ ಪರಿಹಾರ ನ್ಯಾಯಾಲಯದಿಂದ ಸಿಗುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ, ಇದು ಸುಪ್ರೀಂ ಕೋರ್ಟಿನ ವ್ಯಾಪ್ತಿ ಮೀರಿದ ವಿಷಯ. ಗಡಿ ಸಮಸ್ಯೆಯ ವಿಷಯದಲ್ಲಿ ಪರಮಾಧಿಕಾರ ಇರುವುದು ಸಂಸತ್ತಿಗೆ ಮಾತ್ರ. ರಾಜ್ಯಗಳ ಗಡಿರೇಖೆ ಬದಲಾವಣೆ, ಪ್ರದೇಶಗಳ ಪುನರ್ ವಿಂಗಡಣೆ ಇವೆಲ್ಲ ಅಧಿಕಾರಗಳು ಸಂಸತ್ತಿಗೆ ಸೇರಿದ್ದು ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
 
ಅದೇನಿದ್ದರೂ, ಪ್ರತ್ಯೇಕತೆಯ ಬೇಡಿಕೆ ಇರುವಲ್ಲಿಯೂ ಅಲ್ಲಿನ ಜನಸಾಮಾನ್ಯರು ಮೆಚ್ಚುವಂತೆ ಆಡಳಿತ ನಡೆಸಿದರೆ, ಕ್ರಮೇಣ ಪ್ರತ್ಯೇಕತೆಯ ಭಾವನೆ ಅವರಲ್ಲಿ ಕಡಿಮೆಯಾದೀತು. ಅದರಿಂದಾಗಿ ಆ ಭೂಪ್ರದೇಶಗಳು ಕರ್ನಾಟಕದಲ್ಲಿಯೇ ಉಳಿಯಲು ಸಹಾಯವಾದೀತು.
 
 
ಅಡ್ಡೂರು ಕೃಷ್ಣ ರಾವ್

Comments

Submitted by partha1059 Tue, 11/27/2012 - 20:01

ಕರ್ನಾಟಕದ‌ ಏಕಿಕರಣಕ್ಕಾಗಿ ಹೋರಾಡಿ ಮೈಸೂರು‍ ರಾಜ್ಯ ರಚನೆಯಾಗಿ ಕರ್ನಾಟಕವಾಗಿ ಇನ್ನು ಅರ್ದ‌ ಶತಮಾನ‌ ಕಳೆಯುವ‌ ಮು0ಚೆಯೆ ಪುನಹ ಅಖ0ಡ‌ ಕರ್ನಾಟಕದ‌ ವಿ0ಗಡನೆಯ‌ ಮಾತುಗಳಾಗುತ್ತಿರುವುದು ಕಾಲದ‌ ವಿಪರ್ಯಾಸ‌. ರಾಜ್ಯ ಎಷ್ಟು ದೊಡ್ಡದಾದರು ಚಿ0ತೆಯಿಲ್ಲ ಒ0ದಾಗಿ ಇರಲು ಅಡ್ಡಿಯೇನಿಲ್ಲ . ಯಾವ‌ ಸೌಕರ್ಯವು ಇಲ್ಲದ‌ ಕಾಲಕ್ಕೆ ಏಕವಾಗಿ ಅಖ0ಡವಾಗಿ ಉಳಿದ‌ ಕರ್ನಾಟಕ‌ ಇಷ್ಟು ತಾ0ತ್ರಿಕ‌ ಸೌಲಬ್ಯಗಳ‌ ಲಭ್ಯತೆಯಲ್ಲು ಸಹ‌ ಬಾಗವಾಗಬೇಕೆ0ಬ‌ ಕೂಗಿದೆ ಎ0ದರೆ ಅದು ಬರಿ ರಾಜಕಾರಣಿಗಳ‌ ಅಧಿಕಾರದ‌ ದಾಹದ‌ ಕೂಗು ಅಷ್ಟೆ. ಮತ್ತೊ0ದು ರಾಜ್ಯವಾದರೆ ಅಲ್ಲಿ ಮತ್ತೆ ನಾವು ಮುಖಮ0ತ್ರಿಯಾಗಬಹುದು ಮ0ತ್ರಿಯಾಗಬಹುದು ಎನ್ನುವ‌ ದುರಾಸೆ
Submitted by jayu_pu Tue, 11/27/2012 - 20:40

In reply to by partha1059

ತಮ್ಮ ಲೇಖನ‌ ಅದ್ಭುತವಾಗಿ ಬ0ದಿದೆ. ಹಲವಾರು ಜನರ‌ ಪ್ರಯತ್ನದ‌ ಫಲವಾಗಿ ಒ0ದಾದ‌, ಕರ್ನಾಟಕವನ್ನು ವಿಭಜಿಸುವ ಮಾತನ್ನು ಕಲ್ಪಿಸಿಕೊಳ್ಳುವುದು ಅಪರಾಧ‌.
Submitted by Shreekar Wed, 11/28/2012 - 12:27

In reply to by partha1059

@ ಪಾರ್ಥ ‍‍‍‍ -- ಅಖಂಡ "ಕರ್ ನಾಟಕ" ಅಖಂಡ "ಕರ್ ನಾಟಕ" ಎಂಬುವುದು ಹೇಳುವುದಕ್ಕೆ, ಕೇಳುವುದಕ್ಕೆ ಚಂದವೇ ಹೊರತು, ವಿವಿಧ ಜಿಲ್ಲೆಗಳ, ಪ್ರದೇಶಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದರಲ್ಲಾಗಲಿ, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದರಲ್ಲಾಗಲಿ ಈ ಅಖಂಡತೆ ಕೆಲಸಕ್ಕೆ ಬಾರದು. ಕೆಲ ಉದಾಹರಣೆಗಳು:- 1. ಉತ್ತರ ಕರ್ನಾಟಕದ ಸಮಗ್ರ ಬೆಳವಣಿಗೆಗೆ ಸಾಕಷ್ಟು ಪ್ರಾಮುಖ್ಯ ಕೊಡದಿರುವುದು. 2. "ಮೈ ಸೂರು" ಸೀಮೆಯ ಒಕ್ಕಲಿಗರ ಪ್ರಾಬಲ್ಯ, ಪ್ರಭಾವಗಳಿಂದ ಉತ್ತರದವರಿಗೆ ಅನ್ಯಾಯವಾಗಿರುವುದು - ಧಾರವಾಡದ ದ.ರಾ. ಬೇಂದ್ರೆ, ಮೈಸೂರು ಒಕ್ಕಲಿಗರಾದ ಕುವೆಂಪು ಅವರಿಗಿಂತ ಮೊದಲೇ ರಾಷ್ಟ್ರಕವಿಯಾಗಬೇಕಿದ್ದುದು ತಪ್ಪಿಹೋಗಿದ್ದು. 3. ದೂರದ ಕೋಲಾರಕ್ಕೆ ನೀರು ಒದಗಿಸಲು ದಕ್ಷಿಣ ಕನ್ನಡದ ಜನರ ಹೊಟ್ಟೆಯ ಮೇಲೆ ಹೊಡೆಯುವಂತೆ, ಜೀವನದಿ ನೇತ್ರಾವತಿಯ ದಿಕ್ಕನ್ನೇ ತಿರುಚುವುದು. ಶ್ಯುಮಾಕರ್ ಬರೆದ ಸ್ಮಾಲ್ ಇಸ್ ಬ್ಯೂಟಿಫುಲ್ ಓದಿ. http://en.wikipedia…
Submitted by partha1059 Wed, 11/28/2012 - 13:19

In reply to by Shreekar

ನಿಮ್ಮ ಮಾತು ಒಪ್ಪುವೆ ಶ್ರೀಕರ್ ಆದರೆ ಕರ್ನಾಟಕ‌ ನಾಲಕ್ಕು ಅಥವ‌ ಐದು ಬಾಗವಾದ‌ ನ0ತರ‌ ನೀವು ಹೇಳುತ್ತಿರುವ‌ ಎಲ್ಲ ಸಮಸ್ಯೆಗಳು ಪರಿಹಾರವಾಗಿ, ನ್ಯಾಯಯುತವಾದ‌ ಆಡಳಿತ‌ ನಡೆಯುತ್ತದೆ ಎ0ದು ನಿರೀಕ್ಷಿಸುತ್ತೀರ‌. ಹಾಗೆ ನೋಡಿದರೆ ತಮಿಳುನಾಡಿನಲ್ಲಿ ನೋಡಿ ಅವರು ತಮಗೆ ಬೇಕಾದ‌ ಎಲ್ಲವನ್ನು ಹೋರಾಡಿ ಪಡೆಯುತ್ತಾರೆ, ಮೊದಲು ಬೇಕಾಗಿರುವುದು 'determination' , ಹೊರಾಡುವ‌ ಛಲ‌, ನನ್ನದು ಅನ್ನುವ‌ ಅಭಿಮಾನ‌ , ಎಲ್ಲಕ್ಕಿ0ತ‌ ಮಿಗಿಲಾದ‌ ಭ್ರಷ್ಟಾಚಾರ‌ ರಹಿತ‌ ನಿರ್ಮಲ ಆಡಳಿತ‌ ಅದಿಲ್ಲದೆ ಉಳಿದಿದ್ದೆಲ್ಲ ವಾದವಷ್ಟೆ. ಕರ್ನಾಟಕ‌ ಎರಡಲ್ಲ ಹತ್ತು ಬಾಗವಾದರು , ಜನಸಾಮಾನ್ಯರಿಗೆ ಅದರಿ0ದ‌ ಏನಾದರು ಅನುಕೂಲವಾಗುತ್ತೆ ಎ0ದು ನನಗೆ ಅನ್ನಿಸಲ್ಲ. ದೇಶಕ್ಕೆ ಮತ್ತಷ್ಟು ಮುಖ ಮ0ತ್ರಿಗಳು , ಮತ್ತಷ್ಟು ಮ0ತ್ರಿಗಳು , ಅದಿಕಾರ‌ ಷಾಹಿಗಳು ದೊರೆಯಬಹುದು ಅಷ್ಟೆ. ಇಷ್ತೊ0ದು ತ0ತ್ರಜ್ನಾನದ‌ ಅನುಕೂಲವಿರಲು, ಅಧುನಿಕ‌ ಸೌಲಬ್ಯಗಲಿರಲು, ಭೂಮಿಯೆ ಚಿಕ್ಕಗೋಲ‌ ಎ0ದು ಎಲ್ಲರು ಹೇಳುತ್ತಿರಲು, ಆಡಳಿತ‌ ನಡೆಸುವದೋದು ಕಷ್ಟವೇನಲ್ಲ. ಇನ್ನು ಈ ಜಾತಿಯ‌ ಪ್ರಾ0ತೀಯ‌ ವಾದಗಳೆಲ್ಲ ಯಾವಾಗಲು ಇರುವ0ತದ್ದೆ, ನೀವು ರಾಜ್ಯದ‌ ವಿಷ್ಯಕ್ಕ ಎಕೆ ಹೋಗಿವಿರು, ಬೆ0ಗಳೂರಿನ‌ ಜಯನಗರ‌ ಜೇಪಿನಗರವನ್ನು ಪ್ರಥಮ‌ ದರ್ಜೆಯಲ್ಲಿ ನೋಡುವ‌ ಸರ್ಕಾರ‌ ಅದೇ ಬೆ0ಗಳೂರಿನ‌ ಹೊಸಕೆರೆಹಳ್ಳಿಯನ್ನೊ , ಅಥವ‌ ಪುಟ್ಟೇನ‌ ಹಳ್ಳಿಯನ್ನು ಎರಡನೆ ಮೂರನೆ ದರ್ಜೆಯನ್ನಾಗಿ ನೋಡುವದಿಲ್ಲವೆ ?? ಎಲ್ಲರು ಒ0ದೆ ರೀತಿಯ‌ ಟ್ಯಾಕ್ಸ್ ಕಟ್ಟುವಾಗ‌ , ಒ0ದೆ ರೀತಿ ನಾಗರೀಕ‌ ಸೌಲಭ್ಯ ಒದಗಿಸಬೇಕಲ್ಲವೆ. ಇದೆಲ್ಲ ಇರುವ0ತದ್ದೆ . ನನ್ನ ಅಭಿಪ್ರಾಯ ಬರೆದಾಯಿತು , ನಿಮ್ಮ ಕೊ0ಡಿಯನ್ನು ಈಗ‌ ನೋಡುವೆ :)) ‍ # ‍ ಪಾರ್ಥಸಾರಥಿ
Submitted by partha1059 Wed, 11/28/2012 - 13:29

In reply to by partha1059

ಶ್ರೀಕರ್ ನನ್ನದು ನಿರಾಶವಾದ‌ ಅ0ದುಕೊಳ್ಳಬೇಡಿ , ವಾಸ್ತವ‌ ವಾದ‌ , ನಾವು ನಿ0ತಿರುವ‌ ನೆಲದ‌ ಮಣ್ಣಿನ‌ ಗುಣದ‌ ವಾದ‌ ಅಷ್ಟೆ. ಇಲ್ಲಿ ಏನಾದರು ಇನ್ನು ಸಾದ್ಯವಾಗಬೇಕು ಅ0ತ‌ ನಿರೀಕ್ಷಿಸಿದರೆ , ದೊಡ್ಡದೊ0ದು ಬದಲಾವಣೆಯ‌ ಅವಶ್ಯಕತೆ ಇದೆ. ಆದರೆ ಅದಕ್ಕೆ ಸಮಯವಿನ್ನು ಪಕ್ವವಾಗಿಲ್ಲವೇನೊ ಅನ್ನಿಸುತ್ತಿದೆ.
Submitted by ಗಣೇಶ Tue, 11/27/2012 - 23:20

>>>ಇದು ಸುಪ್ರೀಂ ಕೋರ್ಟಿನ ವ್ಯಾಪ್ತಿ ಮೀರಿದ ವಿಷಯ. ಗಡಿ ಸಮಸ್ಯೆಯ ವಿಷಯದಲ್ಲಿ ಪರಮಾಧಿಕಾರ ಇರುವುದು ಸಂಸತ್ತಿಗೆ ಮಾತ್ರ. ರಾಜ್ಯಗಳ ಗಡಿರೇಖೆ ಬದಲಾವಣೆ, ಪ್ರದೇಶಗಳ ಪುನರ್ ವಿಂಗಡಣೆ ಇವೆಲ್ಲ ಅಧಿಕಾರಗಳು ಸಂಸತ್ತಿಗೆ ಸೇರಿದ್ದು ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. --------ಇದೇ ನಮಗೆ ದೊಡ್ಡ ಸಮಸ್ಯೆಯಾಗಿರುವುದು. ಸಂಸತ್ತಿನಲ್ಲಿ ನಮ್ಮ ರಾಜಕಾರಣಿಗಳ ಮಾತು ನಡೆಯುವುದಿಲ್ಲ. ಸಂಸತ್ತು ನಮ್ಮ ವಿರುದ್ಧ ತೀರ್ಪು ನೀಡುತ್ತದೆ. ಕರ್ನಾಟಕ ಸರ್ಕಾರ ಅದನ್ನು ಉಲ್ಲಂಘಿಸುತ್ತದೆ- ಸುಪ್ರೀಂಕೋರ್ಟಿನಿಂದ (ಕಾನೂನಿನ ಪ್ರಕಾರ ಸಂಸತ್ತು ತೀರ್ಮಾನ ಒಪ್ಪದಿದ್ದದ್ದಕ್ಕೆ) ಛೀಮಾರಿ ಹಾಕಿಸಿಕೊಳ್ಳುತ್ತದೆ. :( >>>>ಕನ್ನಡನಾಡಿನ ಏಕೀಕರಣದ ಬಗ್ಗೆ ಮೊದಲಾಗಿ ಯೋಚನೆ ಮಾಡಿದ್ದು, ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ. ದಕ್ಷ ಆಡಳಿತಗಾರನೆಂದು ಹೆಸರಾಗಿದ್ದ ಆತ, ಕನ್ನಡ ಮಾತನಾಡುವ ಜನರಿದ್ದ ಪ್ರದೇಶವನ್ನೆಲ್ಲ ಒಂದುಗೂಡಿಸಬೇಕೆಂದು ೧೮೨೬ರಲ್ಲೇ ಪ್ರಸ್ತಾಪಿಸಿದ್ದ. ------- ಸರ್ ಥಾಮಸ್ ಮನ್ರೋನ ಕನ್ನಡ ಏಕೀಕರಣ ಯೋಚನೆಗೂ -http://srscharithra… -ಇದಕ್ಕೂ ಏನಾದರೂ ಸಂಬಂಧವಿರಬಹುದೇ!? >>>>ಪ್ರತ್ಯೇಕತೆಯ ಬೇಡಿಕೆ ಇರುವಲ್ಲಿಯೂ ಅಲ್ಲಿನ ಜನಸಾಮಾನ್ಯರು ಮೆಚ್ಚುವಂತೆ ಆಡಳಿತ ನಡೆಸಿದರೆ, ಕ್ರಮೇಣ ಪ್ರತ್ಯೇಕತೆಯ ಭಾವನೆ ಅವರಲ್ಲಿ ಕಡಿಮೆಯಾದೀತು. ಅದರಿಂದಾಗಿ ಆ ಭೂಪ್ರದೇಶಗಳು ಕರ್ನಾಟಕದಲ್ಲಿಯೇ ಉಳಿಯಲು ಸಹಾಯವಾದೀತು. ---------+೧
Submitted by shreekant.mishrikoti Wed, 11/28/2012 - 06:55

In reply to by ಗಣೇಶ

" ಸರ್ ಥಾಮಸ್ ಮನ್ರೋನ ಕನ್ನಡ ಏಕೀಕರಣ ಯೋಚನೆಗೂ ........." " -http://srscharithra… -ಇದಕ್ಕೂ ಏನಾದರೂ ಸಂಬಂಧವಿರಬಹುದೇ!? " ನಿಮ್ಮ ಪ್ರಶ್ನೆ ಆ ಥಾಮಸ್ ಮನ್ರೋ ಮತ್ತು ಈ ಥಾಮಸ್ ಮನ್ರೋ ಇಬ್ಬರೂ ಒಬ್ಬನೇ ವ್ಯಕ್ತಿಯೇ? ಎಂದಾಗಿದ್ದರೆ ಉತ್ತರ "ಹೌದು" ಥಾಮಸ್ ಮನ್ರೋನ ಕನ್ನಡಪರ , ಜನಪರ ಚಿಂತನೆಯನ್ನೂ ಮತ್ತು ಯೀ ಬ್ಲಾಗ್ ನಲ್ಲಿ ಹೇಳಿದ ಪವಾಡಸದ್ರುಶ ಗಟನೆಯ ಯಿಯರಣೆಯನ್ನೂ ಕುಂ,ಯೀರಬದ್ರಪ್ಪನವರ ಅರಮನೆಯೆಂಬೋ ಮಹಾಗ್ರುಂಥದಲ್ಲಿ ಓದಿರಿ!!!!!!!!