ರಾಜ್ಯೋತ್ಸವ ದಿನ ಬಿಡುಗಡೆ “ಸಾವಯವ ಸಂಪದ” ತಿಂಗಳ ಪತ್ರಿಕೆ

ರಾಜ್ಯೋತ್ಸವ ದಿನ ಬಿಡುಗಡೆ “ಸಾವಯವ ಸಂಪದ” ತಿಂಗಳ ಪತ್ರಿಕೆ

ಕನ್ನಡನಾಡು ಉದಯವಾಗಿ ೬೦ ವರುಷಗಳು ತುಂಬಿರುವ ಹೊತ್ತಿನಲ್ಲಿ, “ಸಂಪದ" ಬಳಗದಿಂದ ಕನ್ನಡಿಗರೆಲ್ಲರಿಗೆ ಹಾರ್ದಿಕ ಶುಭಾಶಯಗಳು.
ಈ ಸಂಭ್ರಮದ ಸಂದರ್ಭದಲ್ಲಿ, “ಸಂಪದ"ದಿಂದ ಕನ್ನಡಿಗರಿಗೆ ಹಾಗೂ ಲೋಕಕ್ಕೆ ಅರ್ಪಿಸುತ್ತಿದ್ದೇವೆ, ಸಾವಯವ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಮೀಸಲಾದ ಆನ್ ಲೈನ್ ಮಾಸಪತ್ರಿಕೆ: “ಸಾವಯವ ಸಂಪದ”. " ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ " 
ನಮ್ಮ ಊಟದ ಬಟ್ಟಲಿನಲ್ಲಿ ವಿಷ ತುಂಬಿಕೊಳ್ಳುತ್ತಿರುವ ಈಗಿನ ಸನ್ನಿವೇಶದಲ್ಲಿ “ವಿಷಮುಕ್ತ ಊಟದ ಬಟ್ಟಲು ಆಂದೋಲನ” ನಮ್ಮ ಕನ್ನಡನಾಡಿನಲ್ಲಿ ಅಲ್ಲಲ್ಲಿ ಬಲಗೊಳ್ಳುತ್ತಿದೆ. ಇದರ ಜೊತೆಯಲ್ಲೇ, ವಿಷಮುಕ್ತ ಆಹಾರ ಒದಗಿಸಬಲ್ಲ ಸಾವಯವ ಕೃಷಿ ಅಲ್ಲಲ್ಲಿ ಬೇರುಬಿಡುತ್ತಿದೆ.
ಇವೆಲ್ಲವನ್ನು ದಾಖಲಿಸಲಿಕ್ಕಾಗಿ ಮತ್ತು ಸಾವಯವ ಕೃಷಿ ಸಂಘಟನೆಗಳ ನಡುವೆ ಹಾಗೂ ಸಾವಯವ ಕೃಷಿಕರ ನಡುವೆ ವಿಚಾರ ಮತ್ತು ಅನುಭವ ವಿನಿಮಯಕ್ಕಾಗಿ “ಸಾವಯವ ಸಂಪದ” ವೇದಿಕೆಯಾಗಬೇಕು ಎಂಬುದು ನಮ್ಮ ಆಶಯ.
ಮೊದಲ ಸಂಚಿಕೆ “ಸಂಪದ”ದಲ್ಲಿ ನಿಮ್ಮ ಎದುರಿಗಿದೆ. ನಿಮ್ಮ ಸಲಹೆಸೂಚನೆಗಳಿಗಾಗಿ ಕಾದಿದ್ದೇವೆ.
 
  ಅಡ್ಡೂರು ಕೃಷ್ಣ ರಾವ್                                         
  ಸಂಪಾದಕ   

Comments

Submitted by CanTHeeRava Thu, 11/03/2016 - 15:41

ನಿಮ್ಮ ಪ್ರಯತ್ನ ಶ್ಲಾಘನೀಯ. ನಾನು ಕೃಷಿಕನಲ್ಲ. ಆದರೆ ಕೃಷಿಯ ಬಗ್ಗೆ ಕಾಳಜಿ ಮತ್ತು ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಸಾವಯವ ಕೃಷಿಯ ಮುಂದೆ ಹಲವಾರು ಸವಾಲುಗಳಿವೆ. ಅವೆಲ್ಲಕ್ಕೂ ಸ್ಥಳೀಯ ಪರಿಹಾರಗಳನ್ನು ಸೂಚಿಸಲು ನಿಮ್ಮ ಪತ್ರಿಕೆ ದಾರಿಯಾಗಲಿ.
೧. ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರದ ಕೊರತೆ ಎಲ್ಲೆಲ್ಲೂ ಇದೆ. ಮಲೆನಾಡಿನಲ್ಲೇ ಆ ಕೊರತೆ ಇದೆ. ರಸಗೊಬ್ಬರದ ಕೊರತೆಯಂತೂ ಇದ್ದೇ ಇದೆ (ಪ್ರತಿ ವರ್ಷವೂ ಅದೇ ಸುದ್ದಿ). ಇದಕ್ಕೆ ಪರಿಹಾರವೇನು?
೨. ಸಾವಯವ ಆಹಾರ ಪದಾರ್ಥಗಳ ಬೆಲೆ ಸಾಮಾನ್ಯ ಪದಾರ್ಥಗಳಿಗಿಂತ ಶೇ ೧೫ ರಿಂದ ೩೦ ಪಟ್ಟು ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಲ್ಲಿ ಪೂರೈಕೆ ಹೆಚ್ಚಿ, ಬೆಲೆ ತಾನಾಗೇ ಕಡಿಮೆ ಆಗ ಬಹುದು. ಆದರೆ, ಮೊದಲ ಮೆಟ್ಟಿಲು ತುಂಬಾ ಎತ್ತರದಲ್ಲಿದೆ. ಕಷ್ಟವಿದೆ. ಪರಿಹಾರ ಇದೆಯೇ?
೩. ಮನೆ ತಾರಸಿ ಮೇಲೆ ನಾಲ್ಕಾರು ತರಕಾರಿ ಗಿಡ ಹಾಕಿ (ಸಾವಯವ) ತಾವೂ ಕ್ರಾಂತಿ ಮಾಡುತ್ತಿದ್ದೇವೆ ಎಂಬ ಭ್ರಮೆ ನಗರವಾಸಿಗಳಿಗೆ ಇದೆ ಅನ್ನಿಸುವುದಿಲ್ಲವೇ?

ವಂದನೆಗಳು. ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಲೇ ಬೇಕಾಗಿದೆ. ರಾಸಾಯನಿಕ ಗೊಬ್ಬರಗಳ ಅತಿ ಬಳಕೆಯಿಂದ ಆಗುವ ಅನಾಹುತಗಳಿಗೆ ಪುರಾವೆಯಾಗಿದೆ ಪಂಜಾಬಿನ ಇಂದಿನ ಸ್ಥಿತಿ. ಬೇಸಾಯಗಾರರು ಜಾನುವಾರುಗಳನ್ನು ಸಾಕಿ, ಕೊಟ್ಟಿಗೆ ಗೊಬ್ಬರ ತಯಾರಿಸಿಕೊಳ್ಳುವುದು ಒಂದು ಪರಿಹಾರ. ನಗರಗಳ ಅಗಾಧ ಪ್ರಮಾಣದ ಘನತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಹಳ್ಳಿಗಳಿಗೆ ಒದಗಿಸುವುದು ಇನ್ನೊಂದು ಪರಿಹಾರ. ಉದಾಹರಣೆಗೆ, ಬೆಂಗಳೂರಿನ ಪ್ರತಿದಿನದ ಘನತ್ಯಾಜ್ಯದ ಪರಿಮಾಣ ಸುಮಾರು 5,000 ಟನ್ನುಗಳು.
ಸಾವಯವ ಆಹಾರವಸ್ತುಗಳ ಬೆಲೆ ಹೆಚ್ಚಾಗಲು ಮುಖ್ಯ ಕಾರಣ ಬೆಳೆಗಾರ ಮತ್ತು ಬಳಕೆದಾರನ ನಡುವೆ ಹಲವಾರು ಮಧ್ಯವರ್ತಿಗಳು ಇರುವುದು. ಬೆಳೆಗಾರರೇ ನೇರವಾಗಿ ಬಳಕೆದಾರರಿಗೆ ಮಾರಿದರೆ ಬೆಲೆ ಕಡಿಮೆಯಾಗುತ್ತದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ನಮ್ಮ ಬಳಗ ಇಂತಹ ವ್ಯವಸ್ಥೆ ಮಾಡಿದೆ.
ಮನೆ ತಾರಸಿಯಲ್ಲಿ ತರಕಾರಿ ಬೆಳೆದು ಒಂದು ಕುಟುಂಬಕ್ಕೆ ಬೇಕಾದ ತರಕಾರಿಯ ಸುಮಾರು ಶೇಕಡಾ 50 ಪಡೆಯಲು ಸಾಧ್ಯ. ಇದು ವಿಷಮುಕ್ತ ಎಂಬುದು ಮುಖ್ಯ‌.

ನಿಮ್ಮ ಮೂರೂ ಪರಿಹಾರಗಳು ಸಾಧ್ಯ ಎನಿಸಿದರೂ ಈವತ್ತಿನ ಪರಿಸ್ಥಿತಿ ನೋಡಿದರೆ ಆಶಾಭಾವ ಮೂಡುವುದಿಲ್ಲ.
೧. ಬೆಂಗಳೂರಿನ ಜನರಿಗೆ ತ್ಯಾಜ್ಯ ವಿಲೇವಾರಿ ಮಾಡುವ ಸರಿಯಾದ ವಿಧಾನ ತಿಳಿಸಿಕೊಡುವದು ಅಸಾಧ್ಯ. ಕಾರಣ, ಬೆಂಗಳೂರಿನಲ್ಲಿರುವ ಶೇ ೫೦ ರಷ್ಟು ಜನಕ್ಕೆ ಕರ್ನಾಟಕದೊಂದಿಗೆ ಯಾವ ಸಂಬಂಧವೂ ಇಲ್ಲ. ಮಣ್ಣಿನ ಸಂಬಂಧ ಇಲ್ಲದ ಜನರಿಗೆ ಮಣ್ಣಿನಲ್ಲಿ ವಿಷ ಇದ್ದರೆಷ್ಟು ಇರದಿದ್ದರೆಷ್ಟು?
೨. "ಬೇಸಾಯಗಾರರು ಜಾನುವಾರುಗಳನ್ನು ಸಾಕಿ, ಕೊಟ್ಟಿಗೆ ಗೊಬ್ಬರ ತಯಾರಿಸಿಕೊಳ್ಳುವುದು ಒಂದು ಪರಿಹಾರ" ಎಂದಿದ್ದೀರಿ. ಹಿಂದೆ ಹಸು-ಎಮ್ಮೆ ಸಾಕು ರೈತ ಇರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲ ರೈತರಿಗೂ ಜಾನುವಾರು ಸಾಕಣೆಗೆ ಬೇಕಾದ ಮನಸ್ಥಿತಿ. ಪರಿಸ್ಥಿತಿ ಮತ್ತು ಸ್ಥಿತಿವಂತಿಕೆ ಇರುತ್ತದೆಯೇ?
೩. ಮಧ್ಯವರ್ತಿಗಳ ತೊಂದರೆ ಇಲ್ಲದೆ ಇದ್ದಾಗ ಸಾವಯವ ಪದಾರ್ಥಗಳ ಬೆಲೆ ಎಷ್ಟಿರುತ್ತದೆ ಎಂದು ನೀವು ಅಂಕಿ ಸಂಖ್ಯೆ ಸಹಿತ ವಿವರಿಸುವುದಕ್ಕೆ ಸಾಧ್ಯವೇ?