ಚಿತ್ರಸಾಹಿತ್ಯದ ಅಧಃಪತನ
- ಉ: ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ By: tarlesubba (Oct 1 2007 - 8:08am)
- ನಮಗೆ ಡಬ್ಬಿಂಗ್ ಅಗತ್ಯವೆ? By: raghavendra.s (Jul 20 2006 - 1:25pm)
- ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು By: adarsh (Aug 21 2006 - 3:05pm)
- ಕನ್ನಡ ಸಿನಿಮಾ By: ಸಂಗನಗೌಡ (Aug 27 2006 - 7:58pm)
- ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು By: adarsh (Aug 21 2006 - 3:05pm)
- ಚಿತ್ರಸಾಹಿತ್ಯದ ಅಧಃಪತನ By: benaka (Jul 18 2006 - 10:43am)
- ಅಹಾ By: anjali (Jul 2 2006 - 10:45pm)

RSS:
ಚಿತ್ರಸಾಹಿತ್ಯದ ಅಧಃಪತನ
ಗೆಳೆಯರೇ,
ಮೊನ್ನೆ ಹೀಗೆಯೇ ಕನ್ನಡ ಹಾಡು ಕೇಳುತ್ತಿದ್ದಾಗ, ಇತ್ತೀಚೆಗಿನ ಚಿತ್ರಗೀತೆಗಳು ಹೇಗಿವೆಯೆಂದು ಕೇಳೋಣವೆಂದು ಹೊಸ ಚಿತ್ರಗೀತೆಗಳನ್ನು ಅಂತರ್ಜಾಲದಲ್ಲಿ ಕೇಳಲಾರಂಭಿಸಿದೆ. ಅಲ್ಲೊಂದಿಲ್ಲೊಂದು ಒಳ್ಳೆಯ ಸಂಗೀತ - ಸಾಹಿತ್ಯ ಬಿಟ್ಟರೆ, ನೀರಸವಾಗಿದೆ ಎನಿಸಿತು. ನದಿಮೂಲ, ಋಷಿಮೂಲ ಕೇಳಬಾರದು, ಕೆದಕಬಾರದು ಎಂದೇನೋ ಗೊತ್ತಿತ್ತು; ಅಂತೆಯೇ ಕನ್ನಡ ಸಿನಿಮಾ ಕಥೆಯ ಮೂಲವನ್ನೂ ಕೆದಕಬಾರದು ನಿಜ. ಆದರೆ ಚಿತ್ರ ಸಾಹಿತ್ಯದಲ್ಲಿ 'ಕವಿತ್ವ'ವನ್ನು ಹುಡುಕಲೇ ಬಾರದೆಂದು ಮನದಟ್ಟಾಯಿತು. ಅದೇನು 'ಕನ್ನಡತನ'! ಅದೇನು ಭಾಷಾ ಪ್ರಯೋಗ! ಇದು ಒಬ್ಬಿಬ್ಬರ ಮಾತಲ್ಲ; ಇತ್ತೀಚೆಗೆ ಹರಡಿರುವ ಅಂಟುಜಾಡ್ಯ! ಕೆಲವೊಮ್ಮೆ ಕನ್ನಡೇತರ ಪದಗಳ ಪ್ರಯೋಗಗಳೆಂಬ ಕಲ್ಲುಗಳು ಮಡಿಕೆಯನ್ನು ತುಂಬಿ ಕನ್ನಡದ ನೀರು ತಳ ಕಾಣದಂತೆ 'ಕನ್ನಡತನ' ತುಂಬಿದಂತೆ ತೋರುತ್ತವೆ! ಬುದ್ಧಿವಂತ ಕಾಗೆಗಳಿವು! ಅದೇನು ಕವಿತ್ವ! ಎಂತಹ ಉಪಮೆಗಳು! ಎಂತಹ ರೂಪಕ ಅಲಂಕಾರ! ಏನು ಛಂದಸ್ಸು! ಇಲ್ಲ ಸ್ವಾಮೀ, ನೀವೆಂದುಕೊಳ್ಳುತ್ತಿರುವಂತೆ ನಾನು ಸಿನಿಮಾದಲ್ಲಿ ಸಾಹಿತ್ಯವನ್ನು ಅತಿಯಾಗಿ ಹುಡುಕುತ್ತಿಲ್ಲ; ಬದಲಿಗೆ, ಲಕ್ಷಗಳಲ್ಲಿ ಸಂಪಾದಿಸುತ್ತಿರುವ ಈ 'ಕವಿಗಳ' ಭರಾಟೆ, ನಿಜವಾಗಿ ಒಳ್ಳೆಯ ಚಿತ್ರ ಸಾಹಿತಿಗಳನ್ನು ಬಡವಾಗಿಸಿ ಮೂಲೆಗುಂಪುಮಾಡಿದೆಯಲ್ಲಾ ಎಂದು ಸಂಕಟಪಡುತ್ತಿದ್ದೇನೆ.
ಇದೇ ವಿಷಯವನ್ನು ಚರ್ಚಿಸುತ್ತಾ, ಕನ್ನಡಿಗರು.ಕಾಂನಲ್ಲಿ 'ಸ್ಕೂಲ್ಮಾಸ್ಟರ್' ಚಿತ್ರದ ನೇರಪ್ರಸಾರ ನೋಡುತ್ತಿದ್ದಾಗ, ಮಧುರವಾದ ಹಳೆಯ ಗೀತೆಗಳನ್ನು ಕೇಳುವ ಸೌಭಾಗ್ಯ ನಮ್ಮದಾಯಿತು. ಪ್ರಾರ್ಥನೆಯ 'ತಾಯೆ ಶಾರದೆ ಲೋಕಪೂಜಿತೆ...' , ಪ್ರೇಮಗೀತೆಯ 'ಅತಿ ಮಧುರ ಅನುರಾಗ...' ಇತ್ಯಾದಿ ಗೀತೆಗಳು ನಿಜವಾಗಿ ಮನಸ್ಸಿಗೆ ನೆಮ್ಮದಿ ತಂದುಕೊಟ್ಟವು. ಈಗಿನ ಹಾಡುಗಳೋ, ಕಿತ್ತುಹೋದ ಕಡೂರು ರಸ್ತೆಯಲ್ಲಿ ಕರಾರಸಾಸಂ ಯ ಎಕ್ಕಎದ್ದುಹೋದ ಹಳೆಯ ಬಸ್ಸಿನ ಕೊನೆಯ ಆಸನದ ನಡುಕದಂತಿರುವ ಬಡಿತದ ನಡುವೆ ಕೇಳಲೋ ಬೇಡವೋ ಎಂಬ ಕನ್ನಡ ಪದಗಳ ಗುಂಪು ಆಷ್ಟೇ! ಈ 'ಸಾಯಿತಿ'ಗಳಿಗೆ ಯಾವ ತಾಯತಿ ಕಟ್ಟೋಣ ಹೇಳಿ! ಹೀಗೆಯೇ ನಮ್ಮ ಚರ್ಚೆ ಮುಂದುವರೆದಿದ್ದಾಗ ಚಿತ್ರದಲ್ಲಿ ಕಂಡವರು ಕನ್ನಡದ ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್. ಅರೇ! ಎಂದು ನೋಡಿದೆ - ಅದರಲ್ಲಿ ಅವರದು ಅಡುಗೆ ಆಚಾರಿಯ ಪಾತ್ರ. ನಾನು ಶಿವಶಂಕರರನ್ನು ಬಹಳ ಹತ್ತಿರದಿಂದ ಬಲ್ಲೆ. ಬಿ.ಆರ್.ಪಂತುಲು ರವರ ಆ ಹೆಮ್ಮೆಯ ಚಿತ್ರದಲ್ಲಿ ಅಭಿನಯಿಸಲೇಬೇಕೆಂದು ಹಠಹಿಡಿದು ಮದರಾಸಿಗೆ ಹೋಗಿ ಏನೆಲ್ಲ ಪಾಡುಪಟ್ಟಿದ್ದರಂತೆ! ರಂಗಭೂಮಿಯ ಹಿನ್ನೆಲೆಯಿಂದ ಬಂದ ನಟರಾಗಿ ಡಾ.ರಾಜ್ ರೊಂದಿಗೆ ಅವರು ಅನೇಕ ಬಾರಿ ಅಭಿನಯಿಸಿದ್ದಾರೆ. ಅವರ ಕನ್ನಡಾಭಿಮಾನದ ಚಿತ್ರ ಸಾಹಿತ್ಯದ ನೆನಪಾಯಿತು:
'ನಾಡ ಚರಿತೆ ನೆನಪಿಸುವ ವೀರಗೀತೆಯಾ...'
'ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ...'
'ಬೆಳೆದಿದೆ ನೋಡಾ ಬೆಂಗಳೂರು ನಗರ...' ಅಷ್ಟೇ ಏಕೆ,
'ರಂಭೆಯೆನ್ನುವಳು ದೇವಲೋಕದಾ ಡ್ಯಾನ್ಸರ್..'
'ಹೋಗದಿರಿ ಸೋದರರೇ...' ಮುಂತಾದ ಉತ್ತಮ ಗೀತೆಗಳ ಕರ್ತೃ.
ಏಕೆ ಸಂಪದದಲ್ಲಿ ಈ ಕನ್ನಡಿಗನ ಸಂದರ್ಶನ ಪ್ರಕಟವಾಗಬಾರದು? ಎಂಬ ಯೋಚನೆ ಸುಳಿಯಿತು. ನಾಡಿಗರು, ಇಸ್ಮಾಯಿಲರು ಪರಿಶೀಲಿಸಬೇಕು.
ಅಧಃಪತನಕ್ಕಿಳಿಯುತ್ತಿರುವ ಚಿತ್ರಸಾಹಿತ್ಯದ ಜೀರ್ಣೋದ್ಧಾರ ಸಾಧ್ಯವೇ ಎಂಬುದರ ಬಗ್ಗೆ ಅವರ ಅಭಿಪ್ರಾಯವನ್ನು ತಿಳಿಯಲು ಉತ್ಸುಕನಾಗಿದ್ದೇನೆ.
ನಿಮ್ಮವ
ಬೆನಕ