~
Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ
- Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ By: H.S.R.Raghavendra Rao (Mar 7 2007 - 9:54am)
- Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ By: Yamini (Mar 6 2007 - 7:48pm)
- 'ಸಮಾನತೆ'- ಒಂದು ಸ್ಪಷ್ಟೀಕರಣ By: Yamini (Mar 7 2007 - 8:02pm)
- Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ By: anivaasi (Mar 7 2007 - 8:15am)

RSS:
Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ
ಜಾತೀಯತೆಯನ್ನು ಗ್ರಹಿಸುವುದರಲ್ಲಿಯೇ ಏನೋ ತಪ್ಪಿದೆ ಅನಿಸುತ್ತದೆ. ನೀವೇ ಹೇಳಿದಂತೆ ಇದು ಕೇವಲ ಒಂದು 'ಸಾಮಾಜಿಕ ಸಮಸ್ಯೆ' ಅಲ್ಲ ಮತ್ತು ಹೌದು. ಈ ಸಂಕೀರ್ಣತೆಯೇ ಜಾತೀಯತೆಯ ನಿವಾರಣೆಗೆ ಇರುವ ಅತಿ ದೊಡ್ಡ ತೊಡಕು. ಬಹುಶಃ ಗಾಂಧೀಜಿ ಮತ್ತು ಕೇರಳದ ಸಮಾಜ ಸುಧಾರಕ ನಾರಾಯಣ ಗುರು ಇದನ್ನು ಸರಿಯಾಗಿ ಗ್ರಹಿಸಿದ್ದರು ಎನಿಸುತ್ತದೆ. ನಾರಾಯಣ ಗುರುಗಳು 'ಜಾತಿ ಹೇಳು ಮತ್ತು ಜಾತಿ ಕೇಳು' ಎಂದು ಒಂದು ಸಂದರ್ಭದಲ್ಲಿ ಹೇಳಿದ್ದರು ಎಂದು ಎಲ್ಲೋ ಓದಿದ್ದು ನೆನಪಾಗುತ್ತದೆ. ಗಾಂಧೀಜಿ ಚಾತುರ್ವರ್ಣ ಪದ್ಧತಿಯಲ್ಲಿ ನಂಬಿಕೆ ಇದೆ ಎಂದು ಹೇಳಿಯೇ ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ್ದರು.
ಇಬ್ಬರೂ ಜಾತಿಗಳನ್ನು ನಿರಾಕರಿಸಲಿಲ್ಲ. ಬದಲಿಗೆ ಅವುಗಳನ್ನು ಧನಾತ್ಮಕವಾಗಿ ಆಧುನೀಕರಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮ ಶಿಕ್ಷಿತ, ನಗರೀಕೃತ ಮಧ್ಯಮ ವರ್ಗ ಜಾತಿಯನ್ನು ಋಣಾತ್ಮಕವಾಗಿ ಗ್ರಹಿಸಿ ಅದನ್ನು 'ನಿವಾರಿಸಲು' ಪ್ರಯತ್ನಿಸುತ್ತದೆ. ಇದು ಕೊನೆಯಲ್ಲಿ ಕ್ರಿಶ್ಚಿಯಾನಿಟಿ, ಇಸ್ಲಾಂಗಳಂಥ ಧರ್ಮಗಳಲ್ಲಿರುವ ಸಮಾನತೆಯನ್ನು ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ಅನ್ವಯಿಸಲು ಪ್ರಯತ್ನಿಸುತ್ತದೆ. ಸಂಘ ಪರಿವಾರದ ಸಂಘಟನೆಗಳು ಹೇಳುವ 'ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು' ಎಂಬ ಘೋಷಣೆಯೂ ಈ ಬಗೆಯ ಗ್ರಹಿಕೆಯಿಂದಲೇ ಹೊರಟದ್ದು. ಈ ಘೋಷಣೆ ಘೋಷಣೆಯಾಗಿಯೇ ಉಳಿದು ಸಂಘಪರಿವಾರದ ನಾಯಕತ್ವ ವಹಿಸುವವರೆಲ್ಲಾ 'ಹಿಂದೂ'ಗಳಲ್ಲಿ ಇರುವ ಮೇಲ್ಜಾತಿಯವರೇ ಆಗಿರಬೇಕೆಂಬ ಅಘೋಷಿತ ನಿಯಮವಾಗಿಬಿಡುತ್ತದೆ.
ಜಾತಿ ಎಂಬ ಸಂಸ್ಥೆ ಪೂರೈಸುತ್ತಿರುವ ಸಾಮಾಜಿಕ ಅಗತ್ಯಗಳ ಜತೆಗೆ ಯೋಚಿಸಿದರೆ ಜಾತೀ ವ್ಯವಸ್ಥೆಯ ಶೋಷಣೆಯನ್ನು ತಡೆಯಲು ಸಾಧ್ಯವೇನೋ. ಇದು ಬಹಳ ಸಂಕೀರ್ಣ ವಿಷಯವಾಗಿರುವುದರಿಂದ ಈ ಕುರಿತು ಮತ್ತೊಂದು ಲೇಖನವನ್ನೇ ಬರೆಯುತ್ತಿದ್ದೇನೆ.
-ಯಾಮಿ