ಬೆಳ್ದಿಂಗಳು ಮತ್ತು ಕರ್ದಿಂಗಳು
ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ?
ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ !
ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕರ್ದಿಂಗಳು ಪ್ರಯೋಗ ಇದೆಯಂತೆ!
ಬೆಳದಿಂಗಳು ಚಂದ್ರನ ಬೆಳಕಾಗಿ ಅರ್ಥಾಂತರ ಹೊಂದಿ ಕರ್ದಿಂಗಳು ಮಾಯವಾಗಿದೆಯಂತೆ!

- Login or register to post comments
- 1426 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
'ಕಾರ್ತಿಂಗಳ್'?
ಸತೀಶರೆ,
ಕರ್ದಿಂಗಳು - ನಾನೂ ಕೇಳಿರಲಿಲ್ಲ; ಆದರೆ ಏಕೋ ಈ ಪದದ ವ್ಯುತ್ಪತ್ತಿ ಸರಿಯಾಗಿದ್ದಂತೆ ಕಾಣೆ. ಕನ್ನಡ ವ್ಯಾಕರಣಕ್ಕನುಗುಣವಾಗಿ:
ಬೆಳ್ + ತಿಂಗಳ್ = ಬೆಳ್ + ದಿಂಗಳ್ (ಆದೇಶಸಂಧಿ) = ಬೆಳ್ದಿಂಗಳ್ -> ಬೆಳ್ದಿಂಗಳು -> ಬೆಳದಿಂಗಳು ಆಗಿರುವುದು ದಿಟ. ಆದರೆ,
ಕರ್ದಿಂಗಳು = ಕರ್ + ದಿಂಗಳು ಎನ್ನುವುದು ಹೇಗೇ ಆದರೂ ಆದೇಶಸಂಧಿಯಾಗಿರಲಿಕ್ಕಿಲ್ಲ! ರೇಫ(ರ್)ದ ಮುಂದಿನ 'ತ'ಕಾರಕ್ಕೆ ಆದೇಶ ಬರುವ ಪ್ರಯೋಗ ಅಷ್ಟಾಗಿ ಕಾಣಸಿಗದು.ದಯವಿಟ್ಟು ನಿಮ್ಮ ಈ ಪದದ ಮೂಲ ತಿಳಿಸಿದರೆ, ಕುತೂಹಲಿಗಳಿಗೆ ಉಪಯೋಗವಾದೀತು.ನನಗೆನಿಸುವಂತೆ ಈ ಪದ ಕಾರ್ತಿಂಗಳ್ ಅಥವಾ ಕರಿತಿಂಗಳ್ ಆಗಿರುವ ಸಾಧ್ಯತೆ ಹೆಚ್ಚು.
ಮತ್ತೊಂದು ವಿಷಯವೆಂದರೆ, 'ತಿಂಗಳ್' ಎಂಬ ಪದ ತಮಿಳು ಮೂಲದ್ದಾಗಿದ್ದು, ಕನ್ನಡದಲ್ಲೂ, ತಮಿಳಿನಲ್ಲೂ 'ಚಂದ್ರ' ಎಂದರ್ಥ. ಬೆಳ್ದಿಂಗಳ್ ಎಂದರೆ ಬಿಳಿಯಾದ ಚಂದ್ರ -'ಪೂರ್ಣಚಂದ್ರ' ಅಥವಾ ಪೂರ್ಣಿಮೆಯ ಚಂದ್ರ. ಮಾಸಕ್ಕೊಮ್ಮೆ ಬೆಳ್ದಿಂಗಳಾದ್ದರಿಂದ ಮಾಸವೇ 'ತಿಂಗಳ್' ಆಗಿ ಬದಲಾಯಿತು! ಹಳೆಗನ್ನಡದ ಕವಿಗಳೂ ಬೆಳ್ದಿಂಗಳನ್ನು 'ಹುಣ್ಣಿಮೆ' ಅಥವಾ 'ಹುಣ್ಣಿಮೆಯ ಬೆಳಕು' ಎಂಬರ್ಥದಲ್ಲಿ ಬಳಸಿರುವುದು ಕಾಣಬರುತ್ತದೆ. ಬಿ.ಎಂ.ಶ್ರೀ ಯವರ ಇಂಗ್ಲಿಷ್ ಕವಿತೆಗಳನ್ನೇ ನೋಡಿ - 'ವಸಂತ' ಪದ್ಯದಲ್ಲಿ '...ಬನದಲಿ ಬೆಳದಿಂಗಳೂಟ..' ಎಂಬ ಪ್ರಯೋಗವಿದೆ.
ಆದ್ದರಿಂದ, ಬೆಳ್ದಿಂಗಳು - ಶುಕ್ಲಪಕ್ಷವಲ್ಲ; ಅದರ ಕೊನೆಯದಿನವಾದ ಪೂರ್ಣಿಮೆ. ಹಾಗಾಗಿ 'ಕಾರ್ತಿಂಗಳ್' ಎಂಬ ಪದವಿದ್ದರೂ ಅದು ಅಮಾವಾಸ್ಯೆಯಲ್ಲವೇ?
ಇತರರೇನು ಹೇಳುವರೋ ನೋಡೋಣ.
ನಿಮ್ಮವ
ಬೆನಕ
ಬಿಳಿಪಕ್ಷ ಮತ್ತು ಕರಿಪಕ್ಷ.
ಬೆನಕರೆ,
JOSHSATISH ಹೇಳಿದ್ದು ಸರಿಯಾಗಿದೆ.
ನಮಗೆ ಸಂಸ್ಕೃತಪದಗಳು ಅಭ್ಯಾಸವಾಗಿ ಹೋಗಿರುವುದರಿಂದ ವಿಚಿತ್ರವೆನಿಸುವುದು.
ಬೆಳ + ತಿಂಗಳು = ಬೆಳದಿಂಗಳು
ಕರಿ + ತಿಂಗಳು = ಕರಿದಿಂಗಳು (ಇದು ಆದೇಶ ಸಂಧಿ)
ಉದಾ: ಹೊರ + ಕಡೆ = ಹೊರಗಡೆ!
ನೀವೆ ನೋಡಿ ಶುಕ್ಲಪಕ್ಷವೆಂದರೆ
ಶುಕ್ಲ = ಬಿಳಿ, ಪಕ್ಷ = ಭಾಗ, part
ಹಾಗೆ ಕೃಷ್ಣ = ಕಪ್ಪು, ಕರಿ.
ಬಿಳಿದಿಂಗಳು(ಬೆಳದಿಂಗಳು) = ತಿಂಗಳಿನ ಬಿಳಿಯ ಭಾಗ
ಕರಿದಿಂಗಳು = ತಿಂಗಳಿನ ಕರಿಯ ಭಾಗ
ತಿಂಗಳು = ಇದು ತಮಿಳು ಮೂಲದ್ದಲ್ಲ. ನೀವು ಹಾಗೆ ಹೇಳಬೇಡಿ. ಕನ್ನಡ ಮತ್ತು ತಮಿಳಿನ ಮಾತೃಭಾಷೆಯೊಂದಿದೆಯೆಂದು ಭಾಷಾತಜ್ಞರು ಹೇಳಿದ್ದಾರೆ. ಇದು ಆ ಆದಿದ್ರಾವಿಡಭಾಷೆಯಿಂದ ಬಂದದ್ದು ಎಂದು ಹೇಳಿ. ತಮಿಳುಭಾಷೆಗೆ(ಮರಾಠಿಗೆ ಕೂಡ) ಕನ್ನಡದ ಹಲವು ಪದಗಳು ಹೋಗಿವೆ.
ಉದಾ: ಚನ್ನಪಟ್ಟಣಂ = ಚನೈ, ಚೆನ್ನ ಪದ ಕೇವಲ ಕನ್ನಡದಲ್ಲಿ ಬಳಕೆಯಲ್ಲಿದೆ ತಮಿಳಿನಲ್ಲಿ "ನಲ್ಲ", ತೆಲುಗಿನಲ್ಲಿ "ಬಾಗ/ಮಂಚಿ".
ತಿಂಗಳು ಇದು ಅಚ್ಚಗನ್ನಡಪದ.
ಈ ರೀತಿಯೆ ನಾಲ್ಕು ದಿಕ್ಕುಗಳು ಮೂಡಣ, ಪಡುವಣ, ತೆಂಕಣ, ಬಡಕಣ
ಸೂರ್ಯ = ನೇಸರ,
ಅನ್ನ = ಒಗರು,
ತಕ್ಷಣ = ಒಡನೆ,
ಮುಂತಾದವು
ಕರ್ದಿಂಗಳು - ಅಮಾವಾಸ್ಯೆ
ಮಹೇಶರೆ,
'ತಿಂಗಳ್ ' ನೀವೆಂದಂತೆ ಆದಿದ್ರಾವಿಡಭಾಷೆಯ ಮೂಲದ್ದೇ ಇರಬಹುದು. ಕರಿ + ತಿಂಗಳು = ಕರಿದಿಂಗಳು(ಆದೇಶಸಂಧಿ) ಕೂಡ ಸರಿಯೇ; ಆದರೂ ಅದು ' ಕರ್ದಿಂಗಳು ' ಆದದ್ದು ಹೇಗೆಂಬುದೇ ನನ್ನ ಕುತೂಹಲ! ಅದೇನೇ ಇರಲಿ, ನನ್ನ ಪ್ರಿಯ ಮಿತ್ರರೊಬ್ಬರು ಮೊನ್ನೆ ' ಕರ್ದಿಂಗಳು' ಎಂಬ ಪ್ರಯೋಗ ಕುವೆಂಪುರವರ ರಕ್ತಾಕ್ಷಿ ನಾಟಕದಲ್ಲಿದೆ ಎಂದು ನೆನಪಿಸಿದರು. ಅಲ್ಲಿಗೆ ಪದವಿರುವುದು ಸ್ಪಷ್ಟವಾದರೂ, ವ್ಯುತ್ಪತ್ತಿ ಬಗೆಹರಿಯಲಿಲ್ಲ. ನೀವು ಕೊಟ್ಟ ಉದಾಹರಣೆಗಳು 'ರ ಕಾರ' ದ ಮುಂದಿನ ಪದಕ್ಕೆ ಆದೇಶ ಸೂಚಿಸಿವೆ; 'ರೇಫ'ದ ಮುಂದೆ ಅಲ್ಲ! ಒಂದುವೇಳೆ ರೇಫದ ಮುಂದಿನ ವರ್ಗೀಯ ವ್ಯಂಜನಕ್ಕೆ ಆದೇಶವಾಗುವ ಉದಾಹರಣೆ ತೆಗೆದುಕೊಂಡರೆ:
ಕಾರ್ + ಕತ್ತಲ್ = ಕಾರ್ಗತ್ತಲ್ (ಕಪ್ಪು ಕತ್ತಲೆ)
ಕಾರ್ + ಕಾಲ = ಕಾರ್ಗಾಲ (ಕರಿದಾದ ಕಾಲ) ಅಂತೆಯೇ,
ಕಾರ್ + ತಿಂಗಳ್ = ಕಾರ್ತಿಂಗಳ್, ಕಾರ್ದಿಂಗಳ್ ಆಗಿರುವ ಸಾಧ್ಯತೆಯಿದೆ. ಆದರೆ 'ಕರ್ದಿಂಗಳ್' ಆಗಿರಲಿಕ್ಕಿಲ್ಲವೆನಿಸುತ್ತದೆ.
ಆದ್ದರಿಂದ, ನೀವೆಂದಂತೆ ಕರಿ + ತಿಂಗಳು = ಕರಿದಿಂಗಳು ಆಗಿದ್ದು, ನಂತರ ಅದೇ ಆಡುಭಾಷೆಯ ರೂಪಾಂತರದಿಂದ ಕರ್ದಿಂಗಳು ಆಗಿರಬಹುದು.
ಆದರೆ, ಕರ್ದಿಂಗಳು ನೀವೆಂದಂತೆ 'ಕೃಷ್ಣ ಪಕ್ಷ'ವಾಗಲೀ, 'ತಿಂಗಳಿನ ಕರಿಯ ಭಾಗ' ವಾಗಲೀ ಅಲ್ಲ! ಏಕೆಂದರೆ :
ಪಕ್ಷ = ಹದಿನೈದು ತಿಥಿಗಳ ಗುಂಪು; ಭಾಗವಾಗಲೀ, ಆಂಗ್ಲದ 'ಪಾರ್ಟ್' ಆಗಲೀ ಅಲ್ಲ!
ಕರ್ದಿಂಗಳು = ಕರಿಯ ತಿಂಗಳು ; ಆದ್ದರಿಂದ ಅದು 'ಕರಿಯ ಪಕ್ಷ' ಹೇಗಾಗಲು ಸಾಧ್ಯ? ಅಲ್ಲವೇ?
ನಮಗೆ 'ತಿಂಗಳು' ಎಂಬ ಪದಕ್ಕೆ ಅರ್ಥ 'ಮಾಸ' ಎಂದು ಅಭ್ಯಾಸವಾಗಿ ಹೋಗಿರುವುದರಿಂದ ಈ ಗಲಿಬಿಲಿ. ತಿಂಗಳ್ ಎಂದರೆ ನಿಜವಾಗಿ 'ಚಂದ್ರ' ಎಂದರ್ಥ. ಆದ್ದರಿಂದ, ಕರ್ದಿಂಗಳು = ಕರಿಯ ಚಂದ್ರ = ಅಮಾವಾಸ್ಯೆ ಎಂದಾಗುತ್ತದೆಯಲ್ಲವೇ?
ಈಗ ರಕ್ತಾಕ್ಷಿಯ ಈ ಸಾಲನ್ನು ಓದಿದಾಗ ಏನೆನಿಸುತ್ತದೆಯೋ ನೋಡಿ:
"ಕರ್ದಿಂಗಳ ಕಗ್ಗತ್ತಲ ಕಾರ್ಗಾಲದ ರಾತ್ರಿ......."
ಇತರರೇನೆನ್ನುತ್ತಾರೋ ನೋಡೋಣ.
ನಿಮ್ಮವ
ಬೆನಕ
ತಿಂಗಳು
ನನ್ನ ಅನಿಸಿಕೆಯಲ್ಲಿ, ಚಂದ್ರನಿಗೂ, ಮಾಸಕ್ಕೂ, "ತಿಂಗಳು" ಎಂದು ಒಂದೇ ಪದಪ್ರಯೋಗವು ಕನ್ನಡದಲ್ಲಿರುಲು ಕಾರಣ, ಕನ್ನಡ(ಪ್ರದೇಶವಾಗಿ)ದಲ್ಲಿ ಚಾಂದ್ರಮಾನಪದ್ದತಿಯು ಮೊದಲಿನಿಂದಲು ಪಾಲನೆಯಲ್ಲಿರುವುದೇ ಎಂದು.
ಉ: ತಿಂಗಳು
ಹಾಗೇನೂ ಇಲ್ಲ. ಇಂಗ್ಲಿಷಿನ month, monday, ಚಂದ್ರನಿಂದಲೇ. month=ತಿಂಗಳು ಚಂದ್ರನಿಂದಲೇ. ಸಂಸ್ಕೃತದ ಮಾಸವಿನ್ನೇನು? ಅದು (ಚಂದ್ರ)ಮಾಸ್ನಿಂದಲೇ. ಅಲ್ಲ ಸ್ವಾಮಿ ಮಾಸದ/ತಿಂಗಳ/monthನ ಅಳತೆ ಸಿಗುವುದೇ ಚಂದ್ರನ ಚಲನೆಯಿಂದ. ಚಂದ್ರ ತಿಂಗಳಿಗೆ ಭೂಮಿಯ ಸುತ್ತ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಕನ್ನಡಿಗರಿಗೆ ತಿಂಗಳ್ = ಚಂದ್ರನೇ ತಿಂಗಳ ಸೂಚಕ. ಇದು ಎಲ್ಲರಿಗೂ ಕೂಡ. ಸೂರ್ಯನಿಗೆ (ಭೂಮಿಯಿಂದ ನೋಡಿದಂತೆ) ಒಂದು ಸುತ್ತು ಬರಲು ಒಂದು ವರ್ಷ ಬೇಕು. ಆದ್ದರಿಂದ ಚಂದ್ರನೇ ತಿಂಗಳ ಅಳತೆಗೆ ಆಧಾರ. ಹಾಂ! ಇನ್ನೊಂದು ಹೇಳಲು ಮಱೆತೆ. ತೆಲುಗಿನ ತಿಂಗಳು ಎಂದು ಹೇೞುವ ’ನೆಲ’ ಕೂಡ ಚಂದ್ರನೆಂದೆ. ಅವರು ಬೆಳ್ದಿಂಗಳಿಗೆ ವೆನ್ನೆಲ ಎನ್ನುವರು. ವೆಲುಗು=ಬಿಳಿ ನೆಲ=ಚಂದ್ರ. ತಮಿೞಿನ ನಿಲಾ ಎಂದರೂ ಚಂದ್ರನೇ.
ಉ: ತಿಂಗಳು
ಮುಂದುವರೆಸುತ್ತೇನೆ. ಸಂಸ್ಕೃತದ ಚಂದ್ರನಿಲ್ಲದ/ಚಂದ್ರ ಕಾಣದ ದಿನ ಅಮಾವಾಸ್ಯಾ ಮತ್ತಿನ್ನೇನು? ನ+ಮಾಃ+ವಾಸ್ಯಾ (ಚಂದ್ರನಿಲ್ಲದ ಸ್ಥಿತಿ) ಅದಕ್ಕೂ ಚಂದ್ರನಿರದುದೇ ಕಾರಣ.
ಉ: ಕರ್ದಿಂಗಳು - ಅಮಾವಾಸ್ಯೆ
ಈ ಕಾರ್ಗಾಲ, ಕಾರ್ಗತ್ತಲೆ, ಮುಂಗಾರು, ಹಿಂಗಾರು ಎಲ್ಲ ’ಕಾರ್=ಮೞೆಗೆ ಸಂಬಂಧಿಸಿದ್ದು. ಕಾರ್+ಕಾಲ=ಕಾರ್ಗಾಲ=ಮೞೆಗಾಲ.
ಕಾರ್+ಕತ್ತಲೆ= ದಟ್ಟವಾದ ಮೞೆಮೋಡದಿಂದಾದ ಕತ್ತಲೆ. ಮುನ್+ಕಾರ್= ಮೞೆಗಾಲಕ್ಕೆ ಮುನ್ನ ಹಿನ್+ಕಾರ್=ಮೞೆಗಾಲವನ್ನು ಹಿಂಬಾಲಿಸಿ
ಉ: ಕರ್ದಿಂಗಳು - ಅಮಾವಾಸ್ಯೆ
ನನಗೆ ನೆನಪಿರುವ ಹಾಗೆ ಈ ಪದ್ಯ(ನಮಗೆ ಪಠ್ಯದಲ್ಲಿತ್ತು, ೯/ ಪಿಯು ?)
"ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ..."
ನನ್ನ ಗುರುಗಳು ಕರಿದಾದ ತಿಂಗಳು= ಕದ್ದಿಂಗಳು ಎಂದು ಸಮಾಸ ಬಿಡಿಸಿದ್ದರು.
ಉ: ಕರ್ದಿಂಗಳು - ಅಮಾವಾಸ್ಯೆ
ನಿಮ್ಮ ಮಾಸ್ತರ ಕನ್ನಡ ಜ್ಞಾನ ಪರಿಮಿತವಾಗಿದ್ದು ಅವರು ತಿಂಗಳಿಗೆ ಚಂದ್ರ ಎಂಬ ಅರ್ಥ ಬರುತ್ತದೆಂದು ವಿಶ್ಲೇಷಿಸುವ ವ್ಯವಧಾನವೋ ಆಸಕ್ತಿಯೋ ಇರಲಿಲ್ಲವೆಂದು ಕಾಣುತ್ತದೆ. ಈ ತಿಂಗಳ ಬೆಳಕು. ಬೆಳ್ದಿಂಗಳು ಪದ ಬಿಡಿಸುವ ಗೋಜಿಗೆ ನಿಮ್ಮ ಮಾಸ್ತರಾಗಲೀ ನೀವಾಗಲಿ ಹೋಗಲಿಲ್ಲವೆಂದು ಕಾಣುತ್ತದೆ.
ಉ: ಕರ್ದಿಂಗಳು - ಅಮಾವಾಸ್ಯೆ
ನಿಮ್ಮ ಪ್ರತಿಕ್ರಿಯೆ ಸ್ವಲ್ಪ ಕಟುವಾಯಿತೆಂದು ನನ್ನ ಭಾವನೆ
ನನ್ನ ಮಾಸ್ತರರ ಕನ್ನಡ ಜ್ಞಾನ, ಆಸಕ್ತಿ, ವ್ಯವಧಾನಗಳ ಬಗ್ಗೆ ನನಗೆ ಹೆಮ್ಮೆಯಿದೆ. ನಾನೇನೋ ಪೆದ್ದಿಯೇ, ಆದರೂ ನೀವು ಊಹಿಸಿದ ಮಟ್ಟದಷ್ಟಲ್ಲ
ಉ: ಕರ್ದಿಂಗಳು - ಅಮಾವಾಸ್ಯೆ
ಕ್ಷಮಿಸಿ. ನನಗೆ ಎಲ್ಲಾ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಆಮೂಲಾಗ್ರ ತಿಳಿದುಕೊಂಡಿರಬೇಕೆಂಬ ಬಲವಾದ ಅಭಿಪ್ರಾಯ. ಅದನ್ನು ನಿಮ್ಮ ಮೇಲೆ ಹೇಱಲು ಪ್ರಯತ್ನಿಸಿದೆನೇನೋ? ಅದಕ್ಕಾಗಿ ಕ್ಷಮೆಯಿರಲಿ.
ಉ: ಕರ್ದಿಂಗಳು - ಅಮಾವಾಸ್ಯೆ
ಕ್ಷಮೆ ಕೇಳುವ ಅವಶ್ಯಕತೆ ಖಂಡಿತ ಇಲ್ಲ. ತಿಂಗಳು ಎಂದರೆ ಚಂದ್ರನೆಂಬ ಅರ್ಥವಿದೆ ನನಗೆ ತಿಳಿದಿತ್ತು.
ನಾನು ಆ ರೀತಿ ಉತ್ತರಿಸಲು ಕಾರಣ, ನೀವು ನಮ್ಮ ಗುರುಗಳ ಬಗ್ಗೆ ನುಡಿದ ಮಾತು. ಅವರು ಪಾಠ ಮಾಡುವಾಗ ಪ್ರತಿಯೊಂದು ಪದದ ಸಂಧಿ, ಸಮಾಸ, ತತ್ಸಮ-ತದ್ಭವ, ಪದದ ಹಿನ್ನೆಲೆ, ಉಪಯೋಗದ ರೀತಿ ಪ್ರತಿಯೊಂದನ್ನೂ ಎಲ್ಲಾ ವಿದ್ಯಾರ್ಥಿಗಳೂ ಅರಿಯುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದರು. ಹಾಗೇ ಕೆಲವು ಸಂದರ್ಭಗಳಲ್ಲಿ ಪದದ ಅರ್ಥ ವ್ಯಾಕರಣವನ್ನು ಮೀರಿ ಬೆಳೇಯುವ ಪರಿಯನ್ನು ಚೆನ್ನಾಗಿ ವಿವರಿಸುತ್ತಿದ್ದರು. ಅವರ ಮೇಲಿನ ಗೌರವ ಹಾಗೆ ನುಡಿಸಿತು.
ಹಾಗೇ ನಿಮ್ಮ ಜ್ಞ್ನಾನ , ಪಾಂಡಿತ್ಯದ ಬಗ್ಗೆಯೂ ನನಗೆ ಗೌರವವಿದೆ.
ಉ: ಕರ್ದಿಂಗಳು - ಅಮಾವಾಸ್ಯೆ
ನನಗೆ ನೆನಪಿರುವ ಹಾಗೆ ಈ ಪದ್ಯ(ನಮಗೆ ಪಠ್ಯದಲ್ಲಿತ್ತು, ೯/ ಪಿಯು ?)
"ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ..."
ನಾನು ಈ ಪದ್ಯವನ್ನು ಓದಿಲ್ಲ - ಆದರೆ ಒಂದು ಊಹೆ?
ಕದ್ದಿಂಗಳ ಕಗ್ಗತ್ತಲು ಅನ್ನುವುದನ್ನು ಎರಡು ರೀತಿಯಲ್ಲಿ ಅರ್ಥ ಮಾಡಬಹುದೇನೋ - ಕವಿಯ ಉದ್ದೇಶ ನನಗೆ ಗೊತ್ತಿಲ್ಲ
ಒಂದು ಇಲ್ಲಿಯವರೆಗೆ ಬಂದಿರುವ ಕಪ್ಪು ತಿಂಗಳು -> ಅಮಾವಾಸ್ಯೆಯ ಕತ್ತಲು
ಇನ್ನೊಂದು ಕರಿದು+ಇಂಗಳ -> Coal black (ಇಂಗಳ = ಇಂಗಾಲ = carbon, coal)
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಕರ್ದಿಂಗಳು - ಅಮಾವಾಸ್ಯೆ
ಕರ್ದಿಂಗಳ ಎಂದಿದ್ದರೆ ಹಾಗೆ ಬಿಡಿಸಲು ಬರುತ್ತಿತ್ತು. ಆದರೆ ಇಲ್ಲಿರುವುದು ಕರ್ದಿಂಗಳು.
ಉ: 'ಕಾರ್ತಿಂಗಳ್'?
ಕರ್ದಿಂಗಳ್ ಎಂದರೆ ಅಮಾವಾಸ್ಯೆ. ಕಾರ್ದಿಂಗಳ್ ಎಂದರೆ ಕಾರ್=ಮೞೆ+ತಿಂಗಳ್ ಅಂದರೆ ಮೞೆ ಬೀಳುತ್ತಿರುವ ತಿಂಗಳು. ಕೆಲವರು ಕಾರ್ಮೋಡ ಅಂದರೆ ಕಪ್ಪು ಮೋಡ ಎಂದು ತಿಳಿದಿದ್ದಾರೆ. ಆದರೆ ನಿಜವಾಗಿ ಕಾರ್=ಮೞೆ+ಮೋಡ. ಕಾರ್ಮೋಡ ಎಂದರೆ ಮೞೆ ಸುರಿಸುವ ಮೋಡ. ಅದು ಕಪ್ಪಾಗಿರುವುದು ನೀರಿನಿಂದ ತುಂಬಿದ್ದು ಹೆಚ್ಚು ಬೆಳಕನ್ನು ಪ್ರತಿಫಲಿಸದಿರುವುದಱಿಂದ. ಕಪ್ಪೆನ್ನುವುದು ಎರಡನೇ ಕಾರಣ. ಮೞೆಗೆ ಕಾರಣವಾದುದಱಿಂದ ಕಾರ್ಮೋಡ.
ಉ: 'ಕಾರ್ತಿಂಗಳ್'?
ಯಾರಂದರು ಸ್ವಾಮಿ ’ತಿಂಗಳ್’ ತಮಿೞ್ ಪದವೆಂದು. ಈ ನಾಲ್ಕೂ ಭಾಷೆಗಳಲ್ಲಿ ಒಂದು ಪದ ಸಿಕ್ಕರೆ ಅದೆಲ್ಲಾ ಜ್ಞಾತಿ ಶಬ್ದಗಳೇ. ಇಷ್ಟಕ್ಕೂ ತಮಿೞೇ ಎಲ್ಲಕ್ಕೂ ಮೂಲ ಅಂದವನ್ಯಾರೀ ನಿಮಗೆ? ಒಂದಾದರೂ ನಿದರ್ಶನ ತೋಱಿಸಿ ಕನ್ನಡ ತಮಿೞಷ್ಟು ಹೞೆಯದೆನ್ನಲು. ಕನ್ನಡ ತಮಿೞಿನಷ್ಟೆ ಹೞೆಯದು. ಇಂಥದ್ದೆಲ್ಲ ಬರೆಯುವ ಮುನ್ನ ಹುಷಾರ್!
ಉ: 'ಕಾರ್ತಿಂಗಳ್'?
ಕನ್ನಡ ತಮಿೞನಷ್ಟು ಹೞೆಯದಲ್ಲ ಎನ್ನಲು ಒಂದಾದರೂ ನಿದರ್ಶನ ತೋಱಿಸಿ ಎಂದು ಓದಿಕೊಳ್ಳಿ.