ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಗೆಳೆಯರೆ,
ಇದೊಂದು ಹೊಸಪ್ರಯೋಗ ಸಂಪದದಲ್ಲಿ.
"ದಿನಕ್ಕೊಂದು ಹಾಡು"ಯೆಂದು ಇದಕ್ಕೆ ಹೆಸರಿಟ್ಟಿದ್ದೇನೆ. ಏನಪ್ಪ ಮಾಡುವುದು, ಎಂದರೆ,
ಪ್ರತಿದಿನವೂ ಒಂದೊಂದು ನಮಗಿಷ್ಟವಾದ ಪದ್ಯವನ್ನು ಆರಿಸಿಕೊಂಡು, ಅದರ ಬಗ್ಗೆ ನಮ್ಮ ಅನಿಸಿಕೆಗಳನ್ನು, ಟಿಪ್ಪಣಿಗಳನ್ನು, ಹೊಗಳಿಕೆಗಳನ್ನು ಬರೆಯೋಣ.
ಇಲ್ಲಿ, ಅದರಲ್ಲಿ ಬರುವ ವ್ಯಾಕರಣ(ಅಲಂಕಾರ, ಸಂಧಿ ಸಮಾಸ), ಹಿನ್ನಲೆ, ಹೊಂದುವ ಕತೆ, ಸನ್ನಿವೇಶ ಮುಂತಾದ ಅಂಶಗಳನ್ನು ಬರೆಯೋಣ.
ಇದರಿಂದ ನಾವೋದಿದ ಕವನವನ್ನು ಇನ್ನೊಬ್ಬರಿಗೆ ಹೇಳಿದಂತಾಗುವದಲ್ಲದೆ, ಅದರ ಬಗ್ಗಿನ ನಮ್ಮ ದೃಷ್ಟಿಕೋನವನ್ನು ಬೇರೆಯವರ ದೃಷ್ಟಿಕೋನಕ್ಕು ತಾಳೆಹಾಕಿ ನೋಡಬಹುದು.
ಎಲ್ಲರು ಹುಮ್ಮಸ್ಸಿನಿಂದ, ಹುರುಪಿನಿಂದ, ಪಾಲುಗೊಳ್ಳಿ.
ಸಿಹಿಯೋದು,
ಮಹೇಶ.

- Login or register to post comments
- 1416 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ದಿನಕ್ಕೊಂದು ಹಾಡು - "ಅಕ್ಕಿ ಆರಿಸುವಾಗ"
ನನಗೆ ಬಹಳಚ್ಚುಮೆಚ್ಚಾದ ಮೈಸೂರು ಮಲ್ಲಿಗೆಯ "ಅಕ್ಕಿ ಆರಿಸುವಾಗ" ಹಾಡಿನಿಂದ ದಿನಕ್ಕೊಂದು ಹಾಡಿನ ಮೊದಲ ಕಂತು ಶುರು ಮಾಡಿದ್ದೇನೆ.
"ಅಕ್ಕಿ ಆರಿಸುವಾಗ ", ಇದರ ಸಾಹಿತ್ಯವನ್ನು ನಾನು ಉದ್ಭವ.ಸಂ ನಿಂದ ಪಡೆದೆನು.
ಸಾಹಿತ್ಯ.
ಮೈಸೂರು ಮಲ್ಲಿಗೆ - ಅಕ್ಕಿ ಆರಿಸುವಾಗ
ಅಕ್ಕಿ ಆರಿಸುವಾಗ
ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ
ಸುತ್ತ ಕರಿಮಣಿಯೊಂದೆ
ಶೃಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳು
ಹೆರಳಿನ ಭಾರಕ್ಕೆ
ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು
ಕಲ್ಲ ಹರಳನು ಹುಡುಕಿ
ಎಲ್ಲಿಗೋ ಎಸೆವಾಗ
ಝ್ಹಲ್ಲೆನುವ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣುಬಿದ್ದು
ಬಂಗಾರವಿಲ್ಲದ ಬೆರಳು
ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಬೇಸರಿಯ ಕಿರಿಮುತ್ತು
ನುಚ್ಚಿನಲಿ ನುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳು
ವಿವರ - "ಅಕ್ಕಿ ಆರಿಸುವಾಗ"
ಕವಿ : ಕೆ.ಎಸ್.ನರಸಿಂಹ ಸ್ವಾಮಿ
ಕವನ ಸಂಕಲನ : ಮೈಸೂರು ಮಲ್ಲಿಗೆ
ಈ ಕವಿತೆಯಲ್ಲಿ ಹೆಂಗಸೊಬ್ಬಳ ಬಡತನವನ್ನು, ಬಡತನದಿಂದ ಅವಳ ಮನಃಸ್ಥಿತಿಯನ್ನು, ಅವಳ ಚೆಲುವನ್ನು ಬಣ್ಣಿಸಲಾಗಿದೆ.
ವಿಶೇಷ ಪದಗಳು:
ನುಚ್ಚು = ಒಡೆದು ಹೋದ ಅಕ್ಕಿಚೂರು(ಕನ್ನಡಕಸ್ತೂರಿಯಲ್ಲಿ ಅರ್ಥವು ದೊರಕಲಿಲ್ಲ)
ತಗ್ಗಿರುವ = ಬಗ್ಗಿರುವ
ಕರಿಮಣಿ = ತಾಳಿಯನ್ನು ಪೋಣಿಸಿಕೊಂಡಿರುವ ಕಪ್ಪಾದ ಮಣಿಗಳ ಸರ.(ಮದುವೆಯಾದ ಹೆಣ್ಣೆಂದು ತೋರಿಸುವುದು)
ಹೆರಳು = ಜಡೆ, ಜುಟ್ಟು, ವೇಣಿ
ಬಂಗಾರವಿಲ್ಲದ ಬೆರಳು = ಬೆರಳುಂಗುರವೊಂದೂ ಇಲ್ಲವೆಂಬ ಭಾವ(ಬಡತನದ ಗುರುತು)
ಮುಂಗಾರು = ವರುಷದಲ್ಲಿ ಮೊದಲ ಮಳೆ. ಮುಂ + ಕಾರು(ಸುರಿ)?,
ಉರುಳು = ನೇಣು, ಸುತ್ತು, ಸುರುಳಿ
ಇಲ್ಲಿ ಸುತ್ತೆಂದು ತೆಗೆದುಕೊಳ್ಳಬೇಕೆ?
ಹರಳು = crystal ನಂತ ವಸ್ತು.
"ಕಡೆಗೆಲ್ಲ ಕಣ್ಣುಬಿದ್ದ" ಇದು ಅರ್ಥವಾಗಲಿಲ್ಲ.
ಚಿತ್ರದಲಿ ತಂದಂತೆ ಇಹಳು = ಗೊಂಬೆಯಂತೆ ಅಲುಗಾಡದೆ ಇರುವಳು(ಸ್ಧಬ್ದತೆ)
"ಬೇಸರಿಯ ಕಿರಿಮುತ್ತು
ನುಚ್ಚಿನಲಿ ನುಚ್ಚಿರಲು" ಅರ್ಥವಾಗಲಿಲ್ಲ.
ಸವಿಯೊದಗು
-ಮಹೇಶ
ಕವನದ ವಿವರಣೆ
ಕವನಾಸಕ್ತರಿಗೆಲ್ಲ ನಮಸ್ಕಾರ!
'ಮುಂಗಾರಿನುರುಳು'-ಕಣ್ಣಲ್ಲಿ ನೀರುತುಂಬಿ ಬಂದಿರಬಹುದೇ? (ದೀಪದಂತೆ ಅರಳಿದ ಕಣ್ಣು-ತುಂಬಿ ಬಂದ ಕಣ್ಣು)
(ಮದುವೆಯಾದ ಹೊಸದರಲ್ಲಿ ಒಬ್ಬಳೇ ಇರುವಂಥ ಪ್ರಸಂಗದಿಂದ ಬೇಸರಗೊಂಡಿರಬಹುದು?)
ಅತ್ತ ಯಾರೋ ಹೋದ ಇತ್ತ ಯಾರೋ ಬಂದ ಕಡೆಗೆಲ್ಲ ಕಣ್ಣುಬಿದ್ದು-
ಇಲ್ಲಿ ಪೂರ್ತಿ ವಾಕ್ಯವನ್ನು ಪರಿಗಣಿಸಿದರೆ- ಈ ಹುಡುಗಿ ಯಾರದೋ ನಿರೀಕ್ಷೆಯಲ್ಲಿ ಇರುವಳೆಂಬಂತೆ ತೋರುತ್ತದೆ.
ಮತ್ತೆ ಹರಳು ಪದವನ್ನು ಬೇರೆಯಾಗಿ ಅರ್ಥೈಸುವ ಬದಲು ಅಕ್ಕಿಯೊಡನೆ ಸಾಮಾನ್ಯವಾಗಿ
ಸೇರಿರುರವ ಕಲ್ಲಿನ ಹರಳೆಂದು ಗಣಿಸಿದರೆ ಹೆಚ್ಚು ಸೂಕ್ತವಲ್ಲವೇ?
ಹೊಸದಾಗಿ ಮದುವೆಯಾಗಿರಬಹುದಾದ ಹುದುಗಿ (ಹದಿನಾರು ವರುಷದ ನೆರಳು) -ಇನಿಯನ ನಿರೀಕ್ಷೆಯಲ್ಲಿ
ಮನವಿಟ್ಟು ಮನೆಕೆಲಸ ಕೆಡುತ್ತಿದ್ದರೂ ಗಮನಸಿದೇ ಇರುವಳು.
ಬೇಸರಿಯ ಕಿರಿಮುತ್ತು ನುಚ್ಚಿನಲಿ ನುಚ್ಚಿರಲು- ಬೇಸರಿ-ಮೂಗುತಿ-
ಈ ಹುಡುಗಿ (ಇನಿಯನ) ಪರಧ್ಯಾನದಲಿದ್ದರೂ ನೆಪಮಾತ್ರಕ್ಕೆ ಅವಳ ಕೈ ಬೆರಳುಗಳು ಮೂಗುತಿಯಿಂದ
ಕಳಚಿ ಬಿದ್ದು ಅಕ್ಕಿ ನುಚ್ಚಿನಲ್ಲಿ ಸೇರಿಹೋಗಿರುವ ಮುತ್ತನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿವೆ.
ಇವು ನನ್ನ ಅನಿಸಿಕೆಗಳು.
ಈ ಚರ್ಚಾವೇದಿಕೆಯನ್ನು ಸೃಜಿಸಿರುವ ಮಹೇಶರವರಿಗೆ ಧನ್ಯವಾದಗಳು.
ಶಾಮಲ
ಚೆಲುವಾದ ವಿವರ
ಶಾಮಲರೆ,
ಸವಿಯೊದಗು.
ಆ ಹೆಣ್ಣು "ಮೂಗುತಿಯಿಂದ ಬಿದ್ದ ಮುತ್ತನ್ನು ಹುಡುಕುವಂತೆ ಅಕ್ಕಿಯಲ್ಲಿ ಕೈಯಾಡಿಸುತ್ತಿರುವಳು", ಇದು ಎಷ್ಟು ಸೊಗಸಾದ ಹೋಲಿಕೆ.
ಆಕೆ ಯಾಕೆ ಯಾರು ಯಾರೋ, ಎತ್ತೆತ್ತಲೋ ಹೋದರೇಕೆ ನೋಡುವಳೆಂದು ನನಗನ್ನಿಸಿತ್ತು. ಅದಕ್ಕೆ ನೀವು ಒಪ್ಪಬಹುದಾದ ವಿವರ ನೀಡಿದ್ದೀರಿ. ಯಾಕೆಂದರೆ "ಅವಳು ಯಾರನ್ನೋ ಕಾಯುತ್ತಿದ್ದಾಳೆ",ಇದು ಸರಿ.
"ನುಚ್ಚಿನಲಿ ನುಚ್ಚಿರಲು" ಇದನ್ನು ತುಸು ಯಾರಾದರು ವಿವರಿಸಿ.
ನಲ್ಮೆ,
ಮಹೇಶ
ನುಣುಚಿರಲು
ನುಚ್ಚಿನಲಿ ನುಣುಚಿರಲು ಅಂದರೆ ನುಚ್ಚಿನಲಿ ಸೇರಿರಲು ಎಂದು.
ಅಹೋರಾತ್ರ
ನುಣುಚು = ಜಾರು, ತಪ್ಪಿಸಿಕೊ
ಕನ್ನಡಕಸ್ತೂರಿ.ಸಂ ನಿಂದ
ಅದ್ಭುತ ಕವನವಿದು!
ಅದ್ಭುತ ಕವನವಿದು!
ನೇರ ವಿಷಯಕ್ಕೆ ಬರೋಣ. ಮೊದಲ ಬಾರಿ ಓದಿದಾಗ ಯಾರಿಗೇ ಆಗಲಿ ಹೊಳೆಯುವುದು ಹೀಗೆ:
ಪದ್ಯ೧ : ಈಕೆ ಬಡವಿ
ಪದ್ಯ೨ : ನವಯುವತಿ
ಪದ್ಯ೩ : ಮನೆಯ ಹೊರಗೆ ಕುಳಿತಿದ್ದಾಳೆ
ಪದ್ಯ ೪: ಬೇಸರದಿಂದ ಕುಳಿತಿದ್ದಾಳೆ
ಪ್ರಶ್ನೆ ಇಷ್ಟೇ: ಇವಳಿಗೆ ಏಕೆ ಬೇಸರ? ಇನ್ನೊಮ್ಮೆ ಓದೋಣ; ಈಗ ನೋಡಿ:
ಪದ್ಯ೧: ಮದುವೆಯಾದವಳು - ತವರು ಮನೆಯ ನೆನಪೇ? ಗಂಡನ ನೆನಪೇ? ಇರಬಹುದು.
ಪದ್ಯ೨: ಹದಿನಾರರ ಜವ್ವನೆ - ಖಂಡಿತವಾಗಿ ನಾವೆಂದುಕೊಂಡದ್ದೇ ಎನಿಸುತ್ತಿದೆ. ಆದರೆ,
ಪದ್ಯ೨: ಅಳುವಂತಾಗಿದ್ದಾಳೆ - ಖಂಡಿತ ಇದು ನಾವೆಂದುಕೊಂಡದ್ದೇ...ತವರಿನ ಅಗಲಿಕೆ, ಗಂಡನೂ ಬಾರದ ಬೇಸರ!
ಪದ್ಯ೩ : ಹಾದುಹೋಗುವವರನ್ನು ನೋಡುತ್ತಿದ್ದಾಳೆ - ಕಾತರ?ಇರಬಹುದು...ಬೇಸರದಿಂದ ಎದುರುನೋಡುತ್ತಿರಬಹುದು. ಯಾರನ್ನು?
ಪದ್ಯ ೪: ಮನೆಗೆಲಸ ಇದ್ದರೂ ಮಾಡಲಾರಳು - ಓಹೋ, ನಾವೆಂದುಕೊಂಡದ್ದೇ ಸರಿ, ಗಂಡನಿಗೇ ಕಾಯುತ್ತಾ ಬೇಸರದಿಂದ ಕುಳಿತಿದ್ದಾಳೆ.
ಅರ್ಥವಾಯಿತು; ಸರಿ..... ಆದರೆ ಇದು ಬಡಹೆಂಗಸಿಗೆ ಮಾತ್ರ ಅಲ್ಲವಲ್ಲ....ಎಲ್ಲ ನವವಧುವಿನ ಬೇಸರವೂ ಇದೇ. ತವರಿನ ನೆನಪು; ಗಂಡನೊಡನಿರಲು ಕಾತರ....ಎಲ್ಲ ಎಲ್ಲರಿಗೂ ಇದ್ದದ್ದೇ. ಕವಿಯ ಉದ್ದೇಶ ಏನಿರಬಹುದು? 'ಬಡತನ'ದ ಹಿನ್ನೆಲೆಯಲ್ಲಿ ಇನ್ನೊಮ್ಮೆ ಓದೋಣ; ಈಗ ನೋಡಿ:
ಮನೆಗೆಲಸ ಬೆಟ್ಟದಷ್ಟಿದೆ; ಆದರೂ ಅದನ್ನು ಬಿಟ್ಟು ಅಕ್ಕಿ ಆರಿಸುತ್ತಾಳೆ; ಹಾಗಾದರೆ, ಬರಿಯ ಕಾತರವಲ್ಲ; ಬೇಸರವಲ್ಲ. ಇನ್ನೇನೋ ಇದೆ!
ಅಕ್ಕಿ ಆರಿಸುತ್ತಾ ಯಾವುದೋ ಯೋಚನೆಯಲ್ಲಿ ತಲ್ಲೀನಳಾಗುತ್ತಾಳೆ - ಸಹಜ, ಇರಲಿ ಆದರೆ ಅಳು? ಏನಾದರೂ ನಡೆದಿರಬೇಕು. ಆಹಾ! ನುಚ್ಚಿನೊಳಗೆ
ಮೂಗುತಿಯ ಸಣ್ಣ ಮುತ್ತು ಉದುರಿಹೋಗಿದೆ! ಅವಳ ಬೇಸರ ದುಃಖವಾಗಿ ಬದಲಾಗಿದೆ! ಮೊದಲೇ ಬಡಜೀವ, ನತ್ತಿನ ಮುತ್ತು ಕಳೆದರೆ ಚಿಂತೆಯಾಗದೇ? ಯಾರೆಲ್ಲಿ ಬಂದು ಏನೆನ್ನುವರೋ ಎಂದು ಅತ್ತಿತ್ತ ನೋಡುತ್ತಾ, ಹುಡುಕುತ್ತಾ ಅಳುತ್ತಿದ್ದಾಳೆಯೇ? ಹತ್ತೂ ಬೆರಳು ಬಳಸಿ ಹುಡುಕಿದರೂ ಸಿಗಲೊಲ್ಲದು! ಆದ್ದರಿಂದಲೇ ಮುಂಗಾರಿನ ಉರುಳು ಹುಚ್ಚು ಹೊಳೆ(ಧಾರಾಕಾರ ಕಣ್ಣೀರು)!
ಆಹಾ! ಅದ್ಭುತ ಕವನ! ನವವಿವಾಹಿತ ಬಡ ಯುವತಿ ಮೊದಲೇ ಬೇಸರಿಸಿಕೊಂಡಿದ್ದರೆ, ಮೂಗುತಿಯ ಮುತ್ತು ನುಚ್ಚಿನಲ್ಲಿ ಸೇರಬೇಕೆ? ಇದಕ್ಕಿಂತ ಬೇಕೆ ಕವಿಸಮಯ! ನಾನು ಏಕಲವ್ಯನಲ್ಲದಿರಬಹುದು; ಆದರೆ ಕೆ.ಎಸ್.ನ ನನ್ನ ಪಾಲಿಗೆ ದ್ರೋಣ; ಇದೋ ಆ ಗುರುವಿಗೆ ನಮನ!
ನಿಮ್ಮವ
ಬೆನಕ
ದಿನಕ್ಕೊಂದು ಹಾಡು - ಬಳೆಗಾರ ಚೆನ್ನಯ್ಯ
ಕವಿ : ಕೆ.ಎಸ್.ನರಸಿಂಹ ಸ್ವಾಮಿ
ಕವನ ಸಂಕಲನ : ಮೈಸೂರು ಮಲ್ಲಿಗೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೇ ತೌರಿನಲಿ ತಾಯಿ ನಗುತಿಹರು
ಕುದಿದ ನೀರಲುಗಿಲ್ಲ ಕೊರಗಿದಿರಿ ರಾಯರೇ ಅಮ್ಮನಿಗೆ ಬಳೆಯ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ ಅಂಗಳದ ತುಂಬಾ ಜನವಿತ್ತು
ಸಿರಿಗೌರಿಯಂತೆ ಬಂದರು ತಾಯಿ ಸೆರಗಿನಲಿ ಕಣ್ಣೀರನೊರೆಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ ದೀಪದಲಿ ಬಿಡುಗಣ್ಣ ನಿಲಿಸಿ
ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ ಹೊಸಸೀರೆ ರತ್ನದಾಭರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ ನಿಮಗಿಲ್ಲ ಒಂದು ಹನಿ ಕರುಣಾ
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು ಕುದಿಯಬಾರದು ನನ್ನ ದೊರೆಯೇ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು ಒಣಗಬಾರದು ಒಡಲ ಚಿಲುಮೆ
ಮುಳಿಸು ಮಾವನ ಮೇಲೆ ಮಗಳೇನ ಮಾಡಿದಳು ನಿಮಗೇತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು
ವಿವರ - ಬಳೆಗಾರ ಚೆನ್ನಯ್ಯ
ವಿಶೇಷ ಪದಗಳು.
ಮಲ್ಲಿಗೆ ಅರಳು = ಅರಳಿದ ಮಲ್ಲಿಗೆ ಹೂ
ಬಾಡು = ಒಣಗು
ಕುದಿದ ನೀರಲುಗಿಲ್ಲ ?
ಓಲಗ ಸದ್ದು = ಮಂಗಳ ದನಿ, ಮನೆಯಲ್ಲಿ ಯಾವುದೊ ಮಂಗಳ ಕಾರ್ಯ ನಡೆಯುತ್ತಿರುವ ಸೂಚನೆ.
ಕೇರಿ = ಬಡಾವಣೆ
ಬಿಡುಗಣ್ಣು ನಿಲಿಸಿ?
ಕರುಣಾ = ಕರುಣೆ
ಕುದಿಯಬಾರದು ?
ದುಂಡು ಮಲ್ಲಿಗೆಯ ದಂಡೆ = ಹೆಂಗಸರು ಮುಡಿಯಲೆಂದೆ ಒತ್ತೊತ್ತಾಗಿ ಕಟ್ಟಿದ ಮಲ್ಲಿಗೆಯ ಕಟ್ಟು.
ಒಡಲು = ಹೊಟ್ಟೆ
ಚಿಲುಮೆ = ಕಾರಂಜಿ, ಬುಗ್ಗೆ
ಮುಳಿಸು = ಮುನಿಸು, ಸಿಟ್ಟು
-ಮಹೇಶ
ಉ:ಬಳೆಗಾರ ಚೆನ್ನಯ್ಯ- ಕುದಿದ ನೀರಲುಗಿಲ್ಲ ಅಲ್ಲ ಕುಡಿದ ನೀರಲುಗಿಲ್ಲ
ಕುದಿದ ನೀರಲುಗಿಲ್ಲ, ಅಲ್ಲ , ಅದು 'ಕುಡಿದ ನೀರಲುಗಿಲ್ಲ '
ಅಂದರೆ ಅಷ್ಟು ಸುಖವಾಗಿ ಎಂದರ್ಥ ; ಕುಡಿದ ನೀರಲುಗದ ಹಾಗೆ ಸುಖಕರವಾಗಿ ನಡೆಯುವದು , ಪಯಣಿಸುವದು . ಕಷ್ಟಪಡದಿರುವದು.
ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಅಲುಗು = ಅಲ್ಲಾಡು.
ಸವಿಯೊದಗು.
ಅದು ಉದ್ಭವದಿಂದ ಅಂಟಿಸಿದ್ದು.
ಕುಡಿದ ನೀರು ಅಲ್ಲಾಡದಷ್ಟು ಸುಖ
-ಮಹೇಶ
ಬಳೆಗಾರ ಚೆನ್ನಯ್ಯ:ಕುದಿಯಬಾರದು
ಕುದಿಯಬಾರದು : ಕೋಪಿಸಿಕೊಳ್ಳಬಾರದು, ದುಗುಡಕ್ಕೊಳಗಾಗಬಾರದು
ಬಳೆಗಾರ ಚೆನ್ನಯ್ಯ: ಒ೦ದು ಅನಿಸಿಕೆ
ಗತಕಾಲದ ಕ೦ಪನ್ನು ಸೂಸುವ ಸು೦ದರ ಕವನ ಬಳೆಗಾರ ಚೆನ್ನಯ್ಯ
ಆ ಕಾಲದಲ್ಲಿ ಬಳೆಗಾರರು ಸುತ್ತಮುತ್ತಲಿನ ಹಳ್ಳಿಗಳ ಸುದ್ದಿ ಸ೦ವಾಹಕರಾಗಿ, ಮನೆ ಮನಗಳ ಬೆಸುಗೆಯ ಕೊ೦ಡಿಯಾಗಿ ಸೇವೆಸಲ್ಲಿಸುತ್ತಿದ್ದಾಗಿನ ಕವನವಿದು. ಮುದ್ದಿನ ಗರ್ಭಿಣಿ ಮಡದಿಯನ್ನು ತವರಿಗೆ ಕಳುಹಿಸಿರುವ ರಾಯರು ಮಾವನ ಮೇಲಿನ ಮುನಿಸಿನಿ೦ದ ಆಕೆಗೆ ಬಳೆ ತೊಡಿಸುವ ಶಾಸ್ತ್ರದ ಕಾರ್ಯಕ್ರಮಕ್ಕೆ ಹೋಗದಿದ್ದಾಗ ಬಳೆಗಾರ ಚೆನ್ನಯ್ಯ ರಾಯರಲ್ಲಿಗೆ ಬ೦ದು ನವಿಲೂರಿನ ಸು೦ದರ ಚಿತ್ರಣವನ್ನು ನೀಡುತ್ತಾನೆ. ಮಡದಿ ಸೌಖ್ಯವಾಗಿರುವ ಬಗ್ಗೆ ಮತ್ತು ಅಲ್ಲಿಯ ಸ೦ಭ್ರಮವನ್ನು ವರ್ಣಿಸುತ್ತಾನೆ. ಹಾಗೆಯೇ ರಾಯರ ಅನುಪಸ್ಥಿತಿಯಿ೦ದ ಅವರ ಮಡದಿಗಾದ ನೋವನ್ನೂ ತಿಳಿಸಿ ಅವರನ್ನು ತಮ್ಮ ಮಡದಿಯನ್ನು ನೋಡಿಕೊ೦ಡು ಬರುವ೦ತೆ ಅನುನಯದಿ೦ದ ಕೇಳಿಕೊಳ್ಳುವ ಅವನ ಪರಿ ಆಧುನಿಕ ಕಾಲದ ಯಾವ ದೇಶದ ರಾಯಭಾರಿಗೂ ಕಡಿಮೆಯಿಲ್ಲವೆನಿಸುತ್ತದೆ.
ತಿರುಮಂತ್ರ- ಜಿ.ಪಿ.ರಾಜರತ್ನಂ !
ತಿರುಮಂತ್ರ- ಜಿ.ಪಿ.ರಾಜರತ್ನಂ !
ರಾಜರತ್ನಂ ಬರೆದ 'ಬಣ್ಣದ ತಗಡಿನ ತುತ್ತೂರಿ'...... .. ಎಂಡಕುಡಕ್ ರತ್ನ....ಇತ್ಯಾದಿಗಳು ಎಲ್ಲರಿಗೂ ಚಿರಪರಿಚಯ. ಅವರು ಜೈನ ಸಾಹಿತ್ಯದ ಬಗ್ಯೆಯೂ ವಿಪುಲವಾಗಿ ಬರೆದಿದ್ದಾರೆ. ಅವರ ಕವನ ಸಂಗ್ರಹ ದಿಂದ ಕೇವಲ ಕೆಲವು ಕವನಗಳೇ ಪುನರಾರ್ವರ್ತನೆ ಯಾಗುತ್ತಿವೆ. ಇನ್ನು ಹಲವು ವಿಶೇಷ ಕವನಗಳು ಮನರಂಜನೆಗೆ ವ್ಯಂಜನಗಳಾಗಿವೆ. ನನಗೆ ಹಿಡಿಸಿದ ಒಂದು ಕವನದ ಗೊಂಚಲನ್ನು ಕೆಳಗೆ ಕೊಟ್ಟಿದ್ದೇನೆ. ಅದು 'ತಿರುಮಂತ್ರ' ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಓದಿ ಆನಂದಿಸಿ. ಇನ್ನೂ ಕೆಲವು ಕವನಗಳು ಸೊಗಸಾಗಿವೆ. ಓದಲು ಇಚ್ಛಿಸಿದರೆ, ಜಿ.ಪಿ.ರಾಜರತ್ನಂ, ಪ್ರಕಟಿಸಿದ ಪುಸ್ತಕ 'ನಾಗನಪದಗಳು', ವಿದೇಹ', ೭೭೧, ೧೭ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿಗೆ ಬರೆದು ಪಡೆಯಿರಿ.
ತಿರುಮಂತ್ರ !
ಯಾಂಡಲ್ ಯಿಂಗ್ ಯಿಡೀಕ್ಕ !
ಶೀಟ್ ಮ್ಯಾಗ್ ಮಡೀಕ್ಕ !
ಐ...ನಾಚ್ ಕ್ಯಾಕೆ ಮಲ್ಲಿ ?
ಯಾರೆ ಔರ್ ಇಲ್ಲಿ ?
ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು.
ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು
ಪತ್ತೇನ್ ಆಗೊಲ್ಲ !
ನೋಡೋರ್ ಯಾರಿಲ್ಲ !
ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ?
ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ?
ನಂಬು ನಿನ ಪಕದಾಗ ನಾನ್ ಇರೋಗಂಟ-
ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ !
ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ !
ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ !
ಆ ! ಅಂಗೆ ! ಕುದುರೆ ಮ್ಯಾಗ್ ಶಿಪ್ಪಾಯ್ ಕುಂತಂಗೆ !
ನಡದಿಂದ ಮ್ಯಾಗೆ ಮೈ ಇರಬೇಕ್ ನಿಂತಂಗೆ
ಇಲ್ಲಿ - ಈ ಕಾಲ್ ಇತ್ತ - ಇ ಪ್ಯಡಲ ಮ್ಯಾಗ್ ಆಕು ;
ಅಲ್ಲಿ - ಆ ಕಾಲ್ ತತ್ತ - ಆ ಪ್ಯಡಲ ತುಳಿ, ನೂಕು ;
ಇದು ಬಿರೇಕ್ - ಮುಟ್ಟ ಬ್ಯಾಡ್ ಇದನ್ !
ಮುಟ್ಟಿದರೆ ಯಿಕ್ ತೈತೆ ಮೊಕ್ಕೆ ಮೂರ್ ಒದೇನ !
ವಾಲ್ ಬ್ಯಾಡ ಅಂಗೆ ನನ ಮ್ಯಾಗೆ !
ಅದಕೆಲ್ಲ ವೊತ್ತು - ಇಳಿದ ಆ ಮ್ಯಾಗೆ !
ಕುಂತೀಯ ಬದ್ರ ?
ಕೈಯ ಬಿಡಲೀಯ ?
ಬೀಳೊ ವಂಗಾದ್ರೆ-
ಇಲ್ಲೀವ್ನಿ ಸಾಯ !
ಬಿಡಲಿಯಾ ? ಬಿಡತೀನಿ !
ಆ ! ಇದೋ ! ಬಿಟ್ಟೆ ! ಬಿಟ್ಟೆ !
ಎಲ ಮಲ್ಲಿ ! ಎನೆ ನೀನ್ ಇಂಗ್ ಓಗ್ತಿ-
-ವೋಗು ವಂಗ್ ಚಿಟ್ಟೆ !
ದುಂಬಿ ವೊದಂಗ್ ಓಗ್ತಿ, ಕಂಬ ಸುತ್ ದಂಗ್ ಸುತ್ತ್ ತಿ,
ಪ್ಯಡಲ ತುಳಿತುಳಿತಿ, ಸರ್ಕಸೇ ಮಾಡ್ ತಿ ;
ಯಾಂಡಲೇ ಕೈಬಿಡತಿ, ಆಚೀಚಿಗ್ ಇಂಗ್ ಆಡ್ ತಿ ;
ಕೈಯ ಕೊಟ್ಳಲ್ಲಪ್ಪೋ ನಂಗೆ ನನ್ ಯೆಡ್ ತಿ !
"ಸೈಕಲ್ಲ, ಮಾರಾಯ್ತಿ, ಕಲಿಸಿದೋರ್ ಯಾರೇ
ನಿಂಗೆ, ನನ ಗರತಿ ?"
"ಪ್ಯಾಟೆ ಅಣದೀರೆಲ್ಲ ಪಾಟಿ ಯೇಳೌರೆ
ನಂಗಿಲ್ಲಿ ನೂರಾರು ಸರತಿ "
ಮತ್ತೇನೆ ಮಡಗೀದಿ - ಭರತನಾಟ್ಯ ?
ಚಿಂತಿಲ್ಲ - ಯೇಳು ರಾಸ್ಯ "
ಯೇಳೋವ ಕೇಳೋವ -ಸಮಯ ಬತ್ತೈತೆ-
ಈಗ ಸಾಕೇಳಿ ಅಸ್ಯ."
'ಬತ್ತೀರ ಒಂದು ಕೈ ? ಡಬ್ಬಲ್ ಸವಾರೀ !"
ಬಾರ್ ಮ್ಯಾಗೆ ? ಊಂರೀ ನಿಜಾ ರೀ !"
" ಸದ್ಯ ಕತ್ಲಾಗ್ ಕಳದೆ ನನ್ನ ಮರುವಾದಿ !
ಬರದಿದ್ರೆ ಬಿಟ್ಟೀಯಾ ಬಜಾರಿ !"
ನಾವೆಲ್ಲಾ ಮೇಲೆ ತಿಳಿಸಿದ ತುಂಬಾ ಅಪರೂಪದ ಕವನದ ಬಗ್ಯೆ ಚರ್ಚಿಸಬಹುದಲ್ಲವೆ ?
ನಾನೇ ಈ ಕವನವನ್ನು ಇತ್ತೀಚೆಗೆ ಒದಿದೆ !
ವೆಂ.
ರಾಜರತ್ನಂ ಪದ್ಯ.............
ಯಾಕೊ, ಮಹೇಶ್ ರವರಿಗೆ ಈ ಕವನ ರುಚಿಸಿದಂತೆ ಕಂಡು ಬರುತ್ತಿಲ್ಲ. ಒಬ್ಬ ಹಳ್ಳಿ ರಸಿಕ, ತನ್ನ ಹೆಂಡತಿಗೆ ಸೈಕಲ್ ಸವಾರಿ ಹೇಳಿಕೊಟ್ಟಾಗ ಸಹಜವಾಗಿ ಅವರಿಬ್ಬರ ನಡುವೆ ಸರಸ ಸಲ್ಲಾಪ ಹುಟ್ಟಿಕೊಳ್ಳುತ್ತದೆ. ಅದನ್ನು ಆವರು ಅಭಿವ್ಯಕ್ತ ಗೊಳಿಸುವ ಬಗೆ ಅನನ್ಯ ! ಹಾಗೆಯೆ ('ಮಲ್ಲಿ' ಯ ಬಗ್ಗೆ ಬರೆದ ಕವನದಲ್ಲಿ )ಅವಳು ನಲ್ಲಿ ನೀರು ಹಿಡಿದು, ಬಿಂದಿಗೆಯನ್ನು ಕಂಕುಳಲ್ಲಿ ಎತ್ತಿ ಇಟ್ಟುಕೊಂಡು ಬರುವ ಭಂಗಿಯನ್ನು ಓದಿ, ಮೆಚ್ಚದವರಾರು ? ಶೈಲಜಾ ಸಂತೋಷ್ ರವರು, ತಮ್ಮ "ಪರಿಚಯ" ಟೀವಿ ಕಾರ್ಯಕ್ರಮದಲ್ಲಿ ಒಬ್ಬ ಕವಿಯನ್ನು ಸಂದರ್ಶಿಸಿದ್ದರು.ಅವರು ಕೆಲವು ಅಪರೂಪದ ಕವಿತೆಗಳಬಗ್ಗೆ ಮಾತಾಡುತ್ತಾ ,ಇದನ್ನು ಕಾರ್ಯಕ್ರಮದಲ್ಲಿ ಉದ್ಧರಿಸಿದ್ದರು. ಅವರ ಹೆಸರು ನೆನಪಿಲ್ಲ. ಅದರಿಂದ ನಾನು ಅನೇಕ ಪುಸ್ತಕಭಂಡಾರಗಳಲ್ಲಿ ಈ ಕವಿತೆಯನ್ನು ಹುಡುಕಿದೆ.ಗೆಳೆಯರೊಬ್ಬರು ಇದನ್ನು ನನಗೆ ತೆಗೆದು ಕೊಟ್ಟರು.ಇದು ಹಿನ್ನೆಲೆ.
ರಾಜರತ್ನಂ, ತಮ್ಮ ವೈಯಕ್ತಿಕ ಜೀವನದಲ್ಲಿ, ಹೆಂಡತಿಯಯ ಮರಣದನಂತರ ೨ ನೆ ಮದುವೆ ಮಾಡಿಕೊಂಡರು.ಅವರ ರಸಿಕತೆಯನ್ನು ಗ್ರಾಮ್ಯ ಶೈಲಿಯಲ್ಲಿ ಬರೆದ ಎಲ್ಲಾ ಕವಿತೆಗಳಲ್ಲಿಯೂ ನಾವು ಕಾಣುತ್ತೇವೆ. ಅಲ್ಲಿರುವುದು ನಿಜವಾದ ಪ್ರಿತಿ ಮಾತ್ರ !
ಉ: ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಅಂದಹಾಗೆ, ಮಹೇಶ್ ಭೋಗಾದಿಯವರು, ನಾಪತ್ತೆ ಯಾಗಿದ್ದಾರೆ. ಎಲ್ಲಿದಾರೆ ಅವ್ರು ?
ಉ: ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಆ ಮಹೇಶ ಭೋಗಾದಿಯೇ ಈಗ mahesha ಆಗಿದ್ದಾರೆ
ಉ: ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಅಂತ ಯಾರು ಹೇಳಿದ್ದು?
ಮಹೇಶ ಭೋಗಾದಿಯವರು ತೀರಿಕೊಂಡು ಎರಡು ಸಂವತ್ಸರಗಳಾಯ್ತು..!!
ಉ: ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಓಹ್, ಸರಿ. ಈಗಿನ maheshaರ ಪೂರ್ವಾಶ್ರಮ ಮಹೇಶ ಭೋಗಾದಿಯಾಗಿತ್ತೇ ?
ಉ: ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ.
ಪೂರ್ವ ಅಪರ ಕರ್ಮ ಕರ್ಮ..
ಸಾಕು ಮಾಡು ನಿನ್ನೀ ತರಲೆ ವಾಕ್ಯಗಳನ್ನು