ವ್ಯಾಕರಣ : ತದ್ಧಿತ
ಓದುಗರೇ,
ಶ್ಯಾಮಲ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸ ಹೊರಟಂತೆ ಸ್ವಲ್ಪ 'ತದ್ಧಿತ'ದ ಬಗ್ಗೆ ಬರೆಯೋಣವೆನಿಸಿತು; ಇಲ್ಲಿದೆ ಸಣ್ಣ ಪ್ರಯತ್ನ.
ಶ್ಯಾಮಲ ಅವರೇ,
ನೀವು ಕೇಳಿರುವ ಪದಗಳು ಸಂಸ್ಕೃತ ಮೂಲದವು; ಆದ್ದರಿಂದ ತದ್ಭವರೂಪಗಳನ್ನು ಬಳಸುವುದು ಮಾತ್ರ ವ್ಯಾಕರಣದ ದೃಷ್ಟಿಯಲ್ಲಿ ಸರಿಯಾದ ಪ್ರಯೋಗ. ರೂಢವಾಗಿಹೋಗಿರುವ ಕೆಲವು ತಪ್ಪು ಪ್ರಯೋಗಗಳನ್ನು ನಾವೇ ತಿದ್ದಿಕೊಳ್ಳುವುದು ಒಳಿತು. ಇರುವುದನ್ನೇ ಸರಿಯೆಂದು ಒಪ್ಪಿಕೊಳ್ಳುವುದು ಬೇರೆ ದಾರಿಯೇ ಇಲ್ಲದಾಗ ಮಾತ್ರ. ಸಮಸ್ಯೆ ನಮ್ಮನ್ನು ನಾವು ತಿದ್ದಿಕೊಳ್ಳುವುದು ಅಷ್ಟೇ. ಅದಿರಲಿ, ನೀವು ಕೇಳಿದ ಪದಗಳ ಪ್ರಯೋಗ ಸರಿಯೋ ಇಲ್ಲವೋ ಎಂದು ಕಂಡುಹಿಡಿಯಲು ಸಂಸ್ಕೃತದ ವ್ಯಾಕರಣ ತಿಳಿದಿರಬೇಕಾಗುತ್ತದೆ; ಅದನ್ನೇ ಇಲ್ಲಿ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ:
ಕೆಲವು ಗುಣವಾಚಕ ಪದಗಳನ್ನು ನಾಮಪದದ ಭಾವದಲ್ಲಿ ಬಳಸುವಾಗ ಕೆಲವು ಪ್ರತ್ಯಯಗಳು(suffix) ಸೇರುತ್ತವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಸೇರುವ ಪ್ರತ್ಯಯಗಳಿಗೆ 'ತತ್' ಪ್ರತ್ಯಯಗಳು ಎನ್ನುತ್ತಾರೆ. ಆದ್ದರಿಂದ ಈ ರೀತಿಯಲ್ಲಿ ಆಗುವ ಶಬ್ದೋತ್ಪತ್ತಿಗೆ 'ತತ್ + ಹಿತ (ತತ್ ಸೇರುವಿಕೆ)' = ತದ್ಧಿತ ಎನ್ನುತ್ತಾರೆ.
೧.
ತದ್ಧಿತಗಳಲ್ಲಿ ವಿವಿಧ ಬಗೆಗಳಿವೆ; ಅವುಗಳಲ್ಲಿ ನಮಗೆ ಈಗ ಇಲ್ಲಿ ಬೇಕಾಗಿರುವ 'ಭಾವಾರ್ಥಕ ತದ್ಧಿತ' ವನ್ನು ಮಾತ್ರ ಗಮನಿಸೋಣ. ಇಲ್ಲಿ ಗುಣವಾಚಕದ ಭಾವವನ್ನು ನಾಮಪದವನ್ನಾಗಿಸುವ ಕ್ರಿಯೆ ನಡೆಯುತ್ತದೆ. ಉದಾ:
'ಏಕಸ್ಯ ಭಾವಃ = ಏಕತಾ' ಅಂದರೆ 'ಏಕ'ದ ಭಾವ ಏಕತೆ. ಏಕ + ತಾ ಎಂಬಲ್ಲಿ ಸೇರುವ 'ತಾ', ಕನ್ನಡದಲ್ಲಿ 'ತೆ'ಯಾಗುತ್ತದೆ.
ಹಾಗೆಯೇ, ಜನಸ್ಯ ಭಾವಃ = ಜನತಾ. 'ಜನ'ದ ಭಾವವೇ 'ಜನತೆ'.
(ಇದನ್ನು ಕೆಲವರು ಸಮೂಹಾರ್ಥಕ ತದ್ಧಿತ ಎನ್ನುವುದೂ ಉಂಟು.)
ಆದ್ದರಿಂದ ನೀವು ಕೇಳಿದ ಗುಣವಾಚಕಗಳಿಗೆ:
ಕಾತರ (ಹೇಡಿತನ) -> ಕಾತರ + ತಾ = ಕಾತರತೆ. ಇದಕ್ಕೂ ಕನ್ನಡದ ಕಾತುರ/ಕಾತರ = ನಿರೀಕ್ಷೆ ಎಂಬುದಕ್ಕೂ ಸಂಬಂಧವಿಲ್ಲ.
ಮಲಿನ -> ಮಲಿನ + ತಾ = ಮಲಿನತೆ.
ಶ್ರೇಷ್ಠ -> ಶ್ರೇಷ್ಠ + ತಾ = ಶ್ರೇಷ್ಠತೆ.
ದರಿದ್ರ -> ದರಿದ್ರ + ತಾ = ದರಿದ್ರತೆ. (ದಾರಿದ್ರತೆ ತಪ್ಪು ಪದ.)
೨. ಸಂಬಂಧಾರ್ಥಕ ತದ್ಧಿತ
ಹೆಸರೇ ಹೇಳುವಂತೆ ಇದು ಒಂದು ಪದಾರ್ಥಕ್ಕೆ ಸಂಬಂಧಿಸಿದ ಮತ್ತೊಂದು ಪದಾರ್ಥವನ್ನು ತಿಳಿಸುವ ಪ್ರಯೋಗ. ಇಲ್ಲಿ 'ವೃದ್ಧಿಪದ' ಪ್ರಮುಖ ಕ್ರಿಯೆ. ಉದಾ:
'ಏಕಸ್ಯ ಇದಂ' = 'ಐಕ್ಯಂ' ; 'ಏಕ' ಎಂಬುದಕ್ಕೆ ಸಂಬಂಧಿಸಿದ್ದು = 'ಐಕ್ಯ'. ಇಲ್ಲಿ 'ಏಕ' ಎಂಬ ಪದದ ಮೊದಲಕ್ಷರಕ್ಕೆ ವೃದ್ಧಿಯಾದ 'ಐ' ಆದೇಶವಾಗಿದೆ. ಕೊನೆಯಕ್ಷರಕ್ಕೆ 'ಯ'ಕಾರದ ಆಗಮವಾಗಿದೆ. ಅಂದರೆ: ಏ+ ಕ್ + ಅ -> ಐ + ಕ್ + ಯ್ + ಅ ಹಾಗೆಯೇ,
ಮಲಿನ -> ಮಾ + ಲಿ + ನ್ + ಯ = ಮಾಲಿನ್ಯ
ದರಿದ್ರ -> ದಾ + ರಿ + ದ್ರ್ + ಯ = ದಾರಿದ್ರ್ಯ. ಇದೇ ಪದವೇ ಅಪಭ್ರಂಶವಾಗಿ 'ದಾರಿದ್ರ' ವಾಗಿ 'ದಾರಿದ್ರತೆ'ಯೂ ಆಗಿಬಿಟ್ಟಿದೆ! ಬಹಳ ತಪ್ಪು!
ನೀವು ಕೇಳಿರುವ ಕೊನೆಯೆರಡು ಪದಗಳು ವಿಶೇಷವಾದವು. ಇವುಗಳ ಮೂಲ ಗುಣವಾಚಕವಲ್ಲದೆ, ನಾಮಪದವೇ! ಇವುಗಳನ್ನು ಗುಣವಾಚಕವನ್ನಾಗಿಸಲು 'ಇಕ' ಪ್ರತ್ಯಯ ಬಳಸಲಾಗಿದೆ. ಇಲ್ಲಿಯೂ ವೃದ್ಧಿಯಾಗುತ್ತದೆ. ಉದಾ:
ನಗರ -> ನಾ + ಗರ್ + ಇಕ = ನಾಗರಿಕ
ವಿಚಾರ -> ವೈ + ಚಾರ್ + ಇಕ = ವೈಚಾರಿಕ
ಇವುಗಳನ್ನು ಮತ್ತೆ ನಾಮಪದದ ರೂಪಕ್ಕೆ ತಂದರೆ,
ನಗರ (ನಾಮಪದ) -> ನಾಗರಿಕ (ಗುಣವಾಚಕ) -> ನಾಗರಿಕ + ತಾ = ನಾಗರಿಕತೆ (ತದ್ಧಿತ)
ವಿಚಾರ (ನಾಮಪದ) -> ವೈಚಾರಿಕ(ಗುಣವಾಚಕ) -> ವೈಚಾರಿಕ + ತಾ = ವೈಚಾರಿಕತೆ (ತದ್ಧಿತ)
ಆದ್ದರಿಂದ, ಇವೇ ಸರಿಯಾದ ಪ್ರಯೋಗ; ಅನುಮಾನವೇ ಬೇಡ. ಆದರೆ ಸರಿಯಾಗಿ ತಿಳಿಯದೆ ಎರಡೆರಡು ತದ್ದಿತವನ್ನು ಪ್ರಯೋಗಿಸುವ ರೂಢಿ ಇತ್ತೀಚೆಗೆ ಹುಟ್ಟಿಕೊಂಡಿದೆ; ಅದೇ ಇಲ್ಲಿನ ಚರ್ಚೆಯ ವಸ್ತುವಾಗಿದ್ದು. ಉದಾ:
ಏಕ -> 'ಏಕತೆ' ಅಥವಾ 'ಐಕ್ಯ' ಎರಡೂ ಸರಿ; ಆದರೆ 'ಐಕ್ಯತೆ' ಸರಿಯಲ್ಲ.
'ಐಕ್ಯ'ವೇ ನಾಮಪದವಾದ ಮೇಲೆ ಅದಕ್ಕೆ 'ತೆ' ಮತ್ತೇಕೆ? 'ತಲೆಶಿರೋಭಾರ' ಅಷ್ಟೇ!
ನಿಮ್ಮವ
ಬೆನಕ

- Login or register to post comments
- 995 hits
- Email this forum





RSS:
ವ್ಯಾಕರಣ : ತದ್ಧಿತ
How do I make the font size bigger in the rich-text format? Can anyone please tell me?
ಬೆನಕರೆ ನಿಮಗೆ ವಂದನೆ.
ವ್ಯಾಕರಣ ಮಹಾಸಾಗರ, ಅದು ನದಿಯಲ್ಲ ಎಂದು ನಮಗೆ ಅರಿವಾಯಿತು.ಊಹಿಸಲಸಾದ್ಯವಾದ ಜ್ಞಾನಭಂಡಾರ ನಿಮ್ಮಲ್ಲಿದೆ. ಧನ್ಯವಾದ
ಅಹೋರಾತ್ರ
ತತ್ಸಮ
ಶಾಮಲ ಅವರೆ,
ತತ್ಸಮಗಳ ಬಳಕೆ ಖಂಡಿತವಾಗಿಯೂ ತಪ್ಪಲ್ಲ; ಅವು ನೇರವಾಗಿ ಸಂಸ್ಕೃತಪದಗಳು ಅಷ್ಟೇ.
ಉದಾ: ಶ್ಯಾಮಲಾ (ತ್ಸ) --> ಶ್ಯಾಮಲೆ, ಶ್ಯಾಮಳೆ (ದ್ಭ) ಆದಂತೆ,
'ದರಿದ್ರತಾ' (ತ್ಸ) --> 'ದರಿದ್ರತೆ' (ದ್ಭ). ನಾನು ಹೇಳಿದ್ದು ಇದನ್ನೇ ಹಿಗ್ಗಾ ಮುಗ್ಗಾ ಎಳೆದು - ದಾರಿದ್ರತೆ, ದಾರಿದ್ರ್ಯತೆ ಇತ್ಯಾದಿ ಮಾಡುವುದು ಬೇಡ ಎಂದಷ್ಟೆ.
ತತ್ಸಮ, ತದ್ಭವ ಎರಡರಲ್ಲೂ ವ್ಯಾಕರಣ ಭಾಗ ಮಾತ್ರ ವ್ಯತ್ಯಾಸ ಆಗದಿರಲೆಂದು ನನ್ನ ಆಶಯ.
ನನ್ನ ನಾಲ್ಕು ವಾಕ್ಯಗಳು ನಿಮಗೆ ವ್ಯಾಕರಣದಲ್ಲಿ ಆಸಕ್ತಿ ಮೂಡಿಸಿದರೆ, ಧನ್ಯನಾದೆ!
ನಿಮ್ಮವ
ಬೆನಕ
ವಚನೇ ಕಾ ದರಿದ್ರತಾ!
ಬೆನಕರೆ,
ಶರಣು!
ನೀವು ಬರೆದದ್ದನ್ನು ಸುನಿಲರು ನನಗೆ ತೋರಿಸಿದರು.
ನಿಮ್ಮ
"ದರಿದ್ರ -> ದಾ + ರಿ + ದ್ರ್ + ಯ = ದಾರಿದ್ರ್ಯ. ಇದೇ ಪದವೇ ಅಪಭ್ರಂಶವಾಗಿ 'ದಾರಿದ್ರ' ವಾಗಿ 'ದಾರಿದ್ರತೆ'ಯೂ ಆಗಿಬಿಟ್ಟಿದೆ! ಬಹಳ ತಪ್ಪು!" ಮಾತಿಗೆ ಸಂಬಂಧಿಸಿದಂತೊಂದು ಮನವಿ.
"ದಾರಿದ್ರತಾ" ಇದು ತಪ್ಪೆಂದೊಪ್ಪುತ್ತೇನೆ.
ನಾನೊಂದು ಸುಭಾಷಿತವನ್ನು ಕಲಿತಿಹೆನು, ಅದು
ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ|
ತಸ್ಮಾತ್-ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||
ಈ ಸುಭಾಷಿತದಲ್ಲಿ "ದರಿದ್ರತಾ" ಎನ್ನುವುದು ವ್ಯಾಕರಣದೋಷವೆ? ಇದೊಂದು ಬಹಳ ಪ್ರಸಿದ್ಧವಾದ ಸುಭಾಷಿತ?
ನನ್ನ ತಿಳಿವಿನಂತೆ
ದಾರಿದ್ರ್ಯಂ(ನಪುಂಸಕಲಿಂಗ) = ದರಿದ್ರತಾ (ಸ್ತ್ರೀಲಿಂಗ)
ಔದಾರ್ಯಂ(ನಪುಂಸಕಲಿಂಗ) = ಉದಾರತಾ(ಸ್ತ್ರೀಲಿಂಗ)
ಕಾರುಣ್ಯಂ (ನಪುಂಸಕಲಿಂಗ) = ಕರುಣಾ(ಸ್ತ್ರೀಲಿಂಗ)
ಕ್ರೌರ್ಯಂ (ನಪುಂಸಕಲಿಂಗ) = ಕ್ರೂರತಾ(ಸ್ತ್ರೀಲಿಂಗ)
ಕೊನೆಯ ಮಾತು, ಕನ್ನಡ ವ್ಯಾಕರಣವು, ಸಂಸ್ಕೃತ ವ್ಯಾಕರಣವನ್ನು ಇಷ್ಟೊಂದು ಅವಲಂಬಿಸಿದೆಯೆ?
ಇಂತಿ,
ಮಹೇಶ.
ಸರಿಯಾಗಿಯೇ ಇದೆ
ಮಹೇಶರೆ,
ಖಂಡಿತವಾಗಿಯೂ ಅದು ಚಿರಪರಿಚಿತ ಉತ್ತಮ ಸುಭಾಷಿತ; ಅದರಲ್ಲಿನ 'ದರಿದ್ರತಾ' ಎಂಬ ಪ್ರಯೋಗ ಸರಿಯಾಗಿಯೇ ಇದೆ. ಬಹುಶಃ ನೀವು ಸಂಬಂಧಾರ್ಥಕ ತದ್ಧಿತದ ೪ ನೇ ಉದಾಹರಣೆಯನ್ನು ಗಮನಿಸಿಲ್ಲವೆನಿಸುತ್ತದೆ. 'ದಾರಿದ್ರ್ಯಂ' ಹಾಗೂ 'ದರಿದ್ರತಾ' ಎರಡೂ ಸರಿಯೇ - ಕನ್ನಡದಲ್ಲಿ ಅವು - ದಾರಿದ್ರ್ಯ ಹಾಗೂ ದರಿದ್ರತೆ; ಎರಡೂ ಸರಿಯಾಗಿವೆ. ನಾನು ಹೇಳಿದ್ದು 'ದಾರಿದ್ರತಾ' ಎಂಬುದು ದೋಷ ಎಂದು. ಸಂಸ್ಕೃತಭಾಷೆ ಭಾರತದ ಭಾಷೆಗಳಲ್ಲಿ ಹಾಸು-ಹೊಕ್ಕಾಗಿದೆ; ಆದ್ದರಿಂದ ಸಂಸ್ಕೃತ ಪದಗಳನ್ನು ಬಳಸುವಾಗ ಆ ಭಾಷೆಯ ವ್ಯಾಕರಣವನ್ನು ಅನುಸರಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ. ತಿಳಿದೋ ತಿಳಿಯದೆಯೋ, ಈಗಾಗಲೇ ಅದು ಎಲ್ಲ ಭಾಷೆಗಳಲ್ಲೂ ಅನುಸರಿಸಲ್ಪಡುತ್ತಿದೆ.
ನಿಮ್ಮವ
ಬೆನಕ
ಧನ್ಯವಾದ
ನನಗುತ್ತರವು ದೊರಕಿತು.
ತೊಂದರೆಯಾಗಿದ್ದಲ್ಲಿ ಮನ್ನಿಸಿರಿ.
ಪಂಡಿತರ ತಪ್ಪುಗಳು!
ಈ ಚರ್ಚೆ ಸಾಮಾನ್ಯನಾದ ( ವೈಯಾಕರಣಿಯೂ ಅಲ್ಲದ , ಭಾಷಾಶಾಸ್ತ್ರಿಯೂ , ಸಮಾಜಶಾಸ್ತ್ರಿಯೂ , ಇತ್ಯಾದಿ ಇತ್ಯಾದಿ ಅಲ್ಲದ) ನಾನು ಬರೆದೊಂದು ಪದದಿಂದ ಆರಂಭವಾಯಿತು . ಈಗಾಗಲೇ ಸಾವಿರ ನೆಟ್ಟೊದೆತಗಳು ಇಲ್ಲಿ ಬಿದ್ದಿವೆ! .
ನಾನು ಬಹುತೇಕ ಈ ಚರ್ಚೆಯಿಂದ ದೂರವಿದ್ದೇನೆ . ಏಕೆಂದರೆ ನನಗೆ ಅಷ್ಟೆಲ್ಲ ತಿಳಿಯುವದಿಲ್ಲ.
ಆದರೆ
ನನ್ನದು ಒಂದು ಪ್ರಶ್ನೆ.
ಭಾಷಾ ಶುದ್ಧತೆಯ ಚರ್ಚೆಯಲ್ಲಿ ತೊಡಗಿರುವ ಪಂಡಿತರೇ ತಪ್ಪು ತಪ್ಪಾಗಿ ಬರೆಯುತ್ತಿದ್ದಾರಲ್ಲ ?!
ಉ: ಮನ್ನಸಿರಿ , ವೂಹಿಸಲಸಾದ್ಯವಾದ ಇತ್ಯಾದಿ
ಈ ಬಗ್ಗೆ ಪಂಡಿತರು ಏನು ಹೇಳುತ್ತಾರೆ ?
ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"