ಕನ್ನಡದ ಚರ್ಚೆ
ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್ ನಾ ಸ್ವಾಮಿ ಹಾಗೂ ಅನಂತಮೂರ್ತಿಯವರ ಪುಟಗಳು. ಪರಾಗ ಎಂಬ ಬೇಂದ್ರೆ ಕವನದ ವಿಶ್ಲೇಷಣೆ (ಸ್ವಾಮಿ) ತುಂಬ ಚೆನ್ನಾಗಿದೆ.
ಪುಟಗಳನ್ನು ಓದುತ್ತ ನನಗೆ ಯಾಕೆ ಇಷ್ಟೆಲ್ಲ ಜನ ಕನ್ನಡ ಭಾಷೆಯ ಕುರಿತು ಆತಂಕಿತರಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಭಾಷೆ ಬಡವಾಗುತ್ತಿದೆ, ಇನ್ನೇನು ಕಾಣೆಯಾಗುತ್ತಿದೆ ಎಂಬರ್ಥದ ಹಲವು ಅಭಿಪ್ರಾಯಗಳನ್ನು ಕಂಡಿದ್ದೇನೆ. ಇದೊಂದು ಅತಿಭೀತಿ ಎಂದು ನನ್ನ ಅನಿಸಿಕೆ. ಯಾಕೆಂದರೆ, ಹಲವು ಕೋಟಿ ಜನ ದಿನೇ ದಿನೇ ಬಳಸುವ ಭಾಷೆ ಅಷ್ಟು ಸುಲಭವಾಗಿ ನಾಶವಾಗದು. ಬೆಂಗಳೂರು, ಮೈಸೂರುಗಳಂತ ಶಹರಗಳಲ್ಲಿ ಅನ್ಯ ಹಾಗೂ ಆಂಗ್ಲ ಭಾಷೆಯ ಪ್ರಯೋಗ ಹೆಚ್ಚುತ್ತಿರಬಹುದು. ಆದರೆ, ಅದಷ್ಟೇ ಕನ್ನಡ ಭಾಷಾ ಕ್ಷೇತ್ರವಲ್ಲ. ಇಡೀ ಕರ್ನಾಟಕದಲ್ಲಿ ಎಷ್ಟು ಮಂದಿ ಮನೆಮಾತಾಗಿ ಇಂಗ್ಲೀಷ ಬಳಸುತ್ತಾರೆ? ಏನೋ ಕೆಲ ಸಾವಿರ ಅಥವಾ ಲಕ್ಷ ಇರಬಹುದು. ಹಾಗಂತ, ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ.
ಾಷೆ ಆಡುವ ಜನರಿಗೆ ಆ ಭಾಷೆ ಯಾವರೆಗೆ ಬೇಕೋ ಆವರೆಗೆ ಏನೂ ಭಯ ಬೇಡ. ಕೆಲವು ಶಹರಗಳ ಸ್ಥಿತಿಯನ್ನೇ ಇಡೀ ನಾಡಿನ ಕತೆ ಎಂಬಂತೇ ಭಾವಿಸುವುದು, ನಾವು ನಮ್ಮ ಭಾಷಾಸಮಾಜಕ್ಕೆ ಮಾಡುವ ಅಪಮಾನ. ಈಗಾಗಲೇ ಭಾಷಾಭಿಮಾನದ ಹೆಸರಲ್ಲಿ ಹಿಂಸಾತ್ಮಕ ಪ್ರವೃತ್ತಿ ಬೆಳೆಯುತ್ತಿದೆ, ಇಂಥಹ ಅತಿಭೀತಿಗಳನ್ನು ಅನುಸರಿಸಿ. ದೊಡ್ಡಶಹರಗಳ ಸಮಸ್ಯೆಯನ್ನೇ ರಾಜ್ಯದ ಸಮಸ್ಯೆಯನ್ನಾಗಿ ನೋಡುವ ರಾಜಕಾರಣಿಗಳ ಪ್ರವ್ರತ್ತಿಯಂತಾಗಿ ಬಿಡಬಾರದು.

- Login or register to post comments
- 943 hits
- Email this forum




RSS:
ಬೆಂಕಿಯಿರದೇ ಹೊಗೆಯಾಡದು
ನನಗನಿಸುವಂತೆ ಕನ್ನಡಿಗರ ಅಜ್ಙಾನದಿಂದ ಕನ್ನಡ ಬಡವಾಗಿದೆ, ತನ್ನ ಮೊದಲಿನ ಶ್ರೀಮಂತಿಕೆಯನ್ನು ಕಳೆದುಕೊಂಡಿದೆ ಅಂತಲೇ ಹೇಳಬಹುದು. ಹಣ ಗಳಿಕೆಯ ವಿಚಾರಗಳೆ ಎಲ್ಲೆಲ್ಲೂ ತುಂಬಿ ತುಳುಕಾಡುತ್ತಿವೆ, ಪರಭಾಷೆಯವರು ಕನ್ನಡದ ಬಗ್ಗೆ ತಾತ್ಸಾರ ಮತ್ತು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ.ಲೋಕಸಭೆಯಲ್ಲಿ ಬಳಸಬಹುದಾದ ಭಾಷೆಗಳ ಪಟ್ಟಿಯಿಂದ ಕನ್ನಡವನ್ನು ತೆಗೆದು ಹಾಕಲಾಗಿದೆ, ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಇರಬೇಕಾಗಿದ್ದ ಈ ಸುದ್ದಿ ಯಾವುದೋ ಮೂಲೆಯ ಸಣ್ಣ ಜಾಗದಲ್ಲಿ ಕಾಣಿಸಿದೆ.(ವಿಜಯ ಕರ್ನಾಟಕ) ಚಾಲುಕ್ಯರಿಂದ ಹಿಡಿದು, ವಚನಕಾರರ ಕಾಲದಲ್ಲಿಯೇ ಅಲ್ಲದೇ, ವಿಜಯನಗರ ಕಾಲದಲ್ಲಿಯೋ, ಇಂದಿನ ವರೆಗೂ ದ್ರಾವಿಡ ಭಾಷೆಗಳಲ್ಲಿ ಶ್ರೇಷ್ಠ ಭಾಷೆಯಾಗಿ ಮೆರೆದ ನಮ್ಮ ನುಡಿ ಇಂದು ನಮ್ಮವರ ತಾತ್ಸಾರದಿಂದಾಗಿ ಕಂಗಾಲಾಗಿರುವುದು ನಿಜ, ಎಲ್ಲರ ಕಳಕಳಿ ಜನತೆಯಲ್ಲಿ ಎಚ್ಚರಿಕೆ ಮೂಡಿಸುವುದೇ ಆಗಿದೆ. ಗೂಗಲ್ ಟ್ರೆಂಡ್ಸ್(http://trends.google.com ) ನಲ್ಲಿ ಬೇರೇ ಭಾಷೆಗಳೊಂದಿಗೆ ಹೋಲಿಸಿ ನೋಡಿ.
ಬನ್ನಿ ಹೊಸ ನಾಡು ಕಟ್ಟೋಣ
ಉ:ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ.
ಬೆಂಗಳೂರು , ಮೈಸೂರು ರಾಜ್ಯದ ಕೇಂದ್ರಗಳಾಗಿರುವದರಿಂದ , ಟೀವಿ ಗಳೆಲ್ಲವೂ ಬೆಂಗಳೂರು ಕೇಂದ್ರಿತವಾಗಿರುವದರಿಂದ ಇಡೀ ನಾಡಿನ ಜನತೆ ಬೆಂಗಳೂರನ್ನು ನಿಧಾನವಾಗಿಯಾದರೂ ಅನುಸರಿಸುತ್ತದೆ . ಇಂದಿನ "ಕೆಲ ಸಾವಿರ ಅಥವಾ ಲಕ್ಷ " ನಾಳೆ ಕೋಟಿಯಾಗುವದು. ಹೀಗಾಗಿ ಪರಿಸ್ಥಿತಿ ಅತಂಕಕಾರಿಯಾಗಿದೆ. ಈಗ ನಗರದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಕೇಳಿನೋಡಿ - ಎಷ್ಟು ಮಕ್ಕಳಿಗೆ ಪುಣ್ಯಕೋಟಿಯ ಕಥೆ ಗೊತ್ತಿದೆ? - ಸಣ್ಣ ಸರ್ವೆ ಮಾಡಿ ನೋಡಿ. ನಿಮಗೇ ಗೊತ್ತಾಗುತ್ತದೆ
ಒಂದು ಭಾಷೆಯೊಂದಿಗೆ ಸಂಸ್ಕೃತಿ ಕೂಡ ನಶಿಸುತ್ತದೆ . ಅಲ್ಲವೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಗಾಬರಿ OR ಗಾಭರಿ?
ಗಾಬರಿ OR ಗಾಭರಿ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕಮಲಾಕರ್,
ಕಮಲಾಕರ್,
ನಿಮ್ಮ ಬರಹಗಳನ್ನು ಯೂನಿಕೋಡ್ ನಲ್ಲಿ ಟೈಪ್ ಮಾಡಿ (Baraha IME ಬಳಸಿ).
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಆತಂಕ ಸಕಾರಣವಾಗಿದೆ
ಇಂತಹ ಒಂದು ಚರ್ಚೆ ಕನ್ನಡದ ಸಂದರ್ಭದಲ್ಲಿ ಈಹೊತ್ತು ಬಲು ಅಗತ್ಯವಾಗಿದೆ. ಇದಕ್ಕೆ ನಾಂದಿ ಹಾಡಿರುವ ಗೆಳೆಯ ಕಮಲಾಕರರಿಗೆ ಧನ್ಯವಾದಗಳು. ಈ ವಿಚಾರದ ಕುರಿತಾದ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಒಂದು ಭಾಷಿಕ ಜನಸಮುದಾಯವಾಗಿ ಕನ್ನಡ ಇಂದು ಆತ್ಮವಿಶ್ವಾಸದ ಕೊರತೆ ಹಾಗೂ ಕೀಳರಿಮೆಯಿಂದ ಸೊರಗಿದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಕನ್ನಡ, ಕನ್ನಡಿಗರನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಇದುವೇ ಮೂಲಭೂತ ಕಾರಣ. ಬಹುಭಾಷಾ ದೇಶವಾದ ಭಾರತದಲ್ಲಿ ಪ್ರತಿಯೊಂದು ಭಾಷಾಸಮುದಾಯದವರೂ ತಮ್ಮನ್ನು ತಾವು Assert ಮಾಡಿಕೊಂಡು, ತಮಗೆ ನ್ಯಾಯವಾಗಿ ದಕ್ಕಬೇಕಾದ ಸೌಲಭ್ಯಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ, ಕನ್ನಡಿಗರು ಈಗಲೂ ತಮ್ಮ ಅಗತ್ಯಗಳನ್ನು ತಮ್ಮ ಭಾಷಾ identityಗೆ ಬೆಸೆಯಲು ತಿಣುಕಾಡುತ್ತಿದ್ದಾರೆ.
ಅದು ಕೃಷ್ಣೆಯ ಬಗೆಗಿನ ಹೋರಾಟವಾಗಿರಬಹುದು. ಗದಗ-ಬಿಜಾಪುರ ಬ್ರಾಡ್ ಗೇಜ್ ರೈಲುಮಾರ್ಗದ ಸಮಸ್ಯೆಯಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಾಗಿರಬಹುದು, ಬೆಳಗಾವಿಯ ಗಡಿ ಸಮಸ್ಯೆಯಾಗಿರಬಹುದು, ಇವುಗಳ್ಯಾವುವು ನಮಗೆ ಒಟ್ಟೂ ಕನ್ನಡಿಗರ ಬದುಕಿನ ಹೋರಾಟ ಎಂದೆನಿಸಿಯೇ ಇಲ್ಲ. ಕೃಷ್ಣಾ ನದಿ ನೀರಿನ ಸಮಸ್ಯೆ ಅದು ಕೇವಲ ಉತ್ತರ ಕರ್ನಾಟಕದ ಸಮಸ್ಯೆ. ಕನ್ನಡದ ಸಮಸ್ಯೆಯಲ್ಲ.... ನಾವು ಕನ್ನಡಿಗರು ಬಹಳ rational ಆಗಿ ಯೋಚನೆ ಮಾಡುವವರು. ನಾವ್ಯಾವಾಗಲೂ level headed. We dont mix emotions. ಕೊನೆಗೆ ಹೊಡೆತ ತಿನ್ನುತ್ತಿರುವವರೂ ನಾವುಗಳೇ.
Aggressiveness ಹಾಗೂ Assertion ಮಧ್ಯೆ ಬಹಳ ತೆಳು ಪದರವಿದೆಯೆಂಬುದೇನೋ ನಿಜ. Morally/Statutorily Unabiding ಆಗಿ ಗುರುತಿಸಿಕೊಳ್ಳಲು ಬಹುಶಃ ನಾವು ಕನ್ನಡಿಗರು ಹೆದರುತ್ತೇವೆ ಎಂಬುದು ನನ್ನ ಗುಮಾನಿ. ಇದನ್ನೇ ನಮ್ಮ ದೌರ್ಬಲ್ಯವೆಂದು ತೆಗೆದುಕೊಂಡು ನಮ್ಮ ನೆರೆ ರಾಜ್ಯಗಳು ಸೌಹಾರ್ದತೆಯನ್ನು ಕದಡುತ್ತಿವೆ.
ಇನ್ನು ಕನ್ನಡಿಗರಲ್ಲೇ ಮನೆಮಾಡಿರುವ ಈ ಆತ್ಮವಿಶ್ವಾಸದ ಕೊರತೆಯು ಅನ್ಯಭಾಷಾ ಪ್ರೀತಿಯಾಗಿ ಕಂಡುಬರುತ್ತದೆ. ದಕ್ಷಿಣದಲ್ಲಿ ತಮಿಳು, ತೆಲುಗು, ಇಂಗ್ಲೀಷು, ಉತ್ತರದಲ್ಲಿ, ಮರಾಠಿ, ಉರ್ದುಗಳ ಬಗೆಗೆ ಕನ್ನಡಿರರಿಗೆ ಇರುವ affinityಯನ್ನು ಮತ್ತೇನೆನ್ನಬೇಕು.
ನಗರ ಕೇಂದ್ರಿತ ಸಮಾಜವ್ಯವಸ್ಥೆಯತ್ತ ದಾಪುಗಾಲು ಹಾಕುತ್ತಿರುವ ಈ ನಮ್ಮ ರಾಜ್ಯದಲ್ಲಿ ಕನ್ನಡವು ಹಳ್ಳಿಗಳಲ್ಲಿ ಬೆಚ್ಚಗಿದೆ ಎಂದು ತಿಳಿಯುವುದೂ ಅಪಾಯದ ಸಂಕೇತವಲ್ಲವೇ. ಹೊಸ ತಂತ್ರಜ್ಞಾನ/ಅಭಿವೃದ್ಧಿ ಮೊದಲು ಕಾಲಿಡುವುದು ನಗರಕ್ಕೇನೇ. ಅಲ್ಲಿಯೇ ಕನ್ನಡಕ್ಕೆ ಪೂರಕ ಪರಿಸ್ಥಿತಿಯಿಲ್ಲದಿದ್ದರೆ ಕನ್ನಡದ ಅಭಿವೃದ್ಧಿ ಪೋಷಣೆ ಹೇಗಾದೀತು. ಇದಕ್ಕೆ ಒಂದು ಜ್ವಲಂತ ಉದಾಹರಣೆ ಎಫ್. ಎಂ. ರೇಡಿಯೋ ವಾಹಿನಿಗಳು. ನಗರ ಕೇಂದ್ರಿತವಾದ ಈ ವಾಹಿನಿಗಳಿಗೆ, ಗ್ರಾಮಾಂತರ ಪ್ರದೇಶದಲ್ಲಿ ಬಳಕೆಯಾಗುವ ಕನ್ನಡ ಭಾಷೆ ತುಚ್ಛವಾಗಿ ಕಾಣಿಸುತ್ತದೆ. ಹಾಗಾಗಿ ತಮ್ಮ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಉಪೇಕ್ಷಿಸುತ್ತಾರೆ. ಇದರಿಂದಾಗಿ ಕನ್ನಡಕ್ಕೆ ಅಭಿವ್ಯಕ್ತಿಯ ಒಂದು ಮಾಧ್ಯಮದ ಬಾಗಿಲು ಮುಚ್ಚಿದಂತಲ್ಲವೇ....
ಕಡೆ ಪಕ್ಷ ಈ ಆತಂಕವಾದರೂ ನಮ್ಮನ್ನು ಯೋಚನೆಗೆ ಹಚ್ಚೀತು. ಚರ್ಚೆಗಳೂ, ಆರೋಗ್ಯಕರ ಸಮುದಾಯ ಚಿಂತನೆಯ ಕುರುಹುಗಳು. ನಮ್ಮನ್ನು ಇನ್ನಷ್ಟು Creative ಆಗಿ ಕೆಲಸಮಾಡಲು ಹಚ್ಚಬಲ್ಲದ್ದೂ ಅದೇ....