ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ ಮತ್ತು ಒತ್ತರಿಸಿ ಬರುವ ಬೇಸರ ಮತ್ತು ಕೋಪಗಳು
ಸತ್ಯವಾಗಿಯೂ, ಈ ಲೇಖನವನ್ನು ಹೇಗೆ ಆರಂಭಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಕೆಲವೊಮ್ಮೆ ಅಷ್ಟು ಬೇಸರ, ಕೋಪ, ತಿರಸ್ಕಾರದ ನಗು ಎಲ್ಲವೂ ಮೂಡುತ್ತದೆ. ದಯವಿಟ್ಟು ಯಾರು ಬೇಸರ ಪಟ್ಟುಕೊಳ್ಳಬೇಡಿ ಈ ಲೇಖನವನ್ನೋದಿ. ![]()
ಈ ವಾರ ಹರಿ ಮತ್ತು ವೆಂಕಟೇಶ್ ಕಿಟ್ಟೆಲ್ ಬಗ್ಗೆ ಒಳ್ಳೆಯ ಚರ್ಚೆ ಆರಂಭಿಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಸ್ವಾಗತಾರ್ಹವೇ. ಅದರಲ್ಲೂ ವೆಂಕಟೇಶರಂತೂ ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು ಎಂದು ಕಿಟ್ಟೆಲ್ ಬಗ್ಗೆ ಒಳ್ಳೆಯ ಮಾಹಿತಿಯನ್ನು ನಮಗೆಲ್ಲರಿಗೂ ತಿಳಿಯುವಂತೆ ಮಾಡಿದರು. ಇರಲಿ ಬಹಳ ಒಳ್ಳೆಯ ಕೆಲಸ.
ಆದರೆ ಈ ಸಂಪತ್ತನ್ನು ಎಷ್ಟರ ಮಟ್ಟಿಗೆ ಬಳಸುತ್ತಿದ್ದೇವೆ
. ಅಥವಾ, ಅದನ್ನು ನಾವುಗಳು ಅದನ್ನು ಸಂಪತ್ತು ಎಂದು ತಿಳಿದುಕೊಂಡಿದ್ದೇವೆಯೇ ![]()
ಬೇಕಿದ್ದರೆ, ಕಿಟ್ಟೆಲ್ ಬಗ್ಗೆ ಮಾತನಾಡಿ ಅಂದರೆ ಗಮನವಿಟ್ಟು ನೋಡಿ , ಭಾಷಣಕಾರರು ಘಂಟೆಗಟ್ಟಲೆ ಮಾತನಾಡುತ್ತಾರೆ, ಬರಹಗಾರರು ಪುಟಗಟ್ಟಲೇ ಸಂಪಾದಕೀಯ ಬರೆಯುತ್ತಾರೆ, ಸರಕಾರದವರು ಬೇಡದಿದ್ದರೂ ಲಕ್ಷಗಟ್ಟಲೆ ಸುರಿಯುತ್ತಾರೆ. ಆದರೆ ಕಿಟ್ಟೆಲ್ ಬಿಟ್ಟುಹೋಗಿರುವ ಸಂಪತ್ತಿನ ಬಗ್ಗೆ ಮಾತನಾಡಿ ಅಂದರೆ ಅವರಿಂದ ಸಿಗುವ ಉತ್ತರ ಏನು ಗೊತ್ತೇ, "ಅವ್ರಾ. ಒಂದು ದೊಡ್ಡ ನಿಘಂಟನ್ನು ಬಿಟ್ಟು ಹೋಗಿದ್ದಾರೆ, ನಿಘಂಟನ್ನು ಮಾಡಿದ್ದು ಅವರೇ ಮೊದಲು..."ಇಷ್ಟೆ. ಸರಿ. ಅದಕ್ಕೇನೀಗ.... ![]()
ಹೌದು ಕಣ್ರೀ, ಅದಕ್ಕೇನೀಗ, ಅದಕ್ಕೇನೀಗ ಅಂತೀನಿ.
ಆ ನಿಘಂಟನ್ನ ಬಳಸುತ್ತಾ ಇದ್ದೀವಾ ನಾವುಗಳು
ಅಥವಾ ಆ ನಿಘಂಟನ್ನ ಬಳಸುವವರನ್ನು ಗೌರವದಿಂದ ಕಾಣುತ್ತೀವಾ ನಾವುಗಳು
ಅಥವಾ ಆ ನಿಘಂಟನ್ನು ಬಳಸುವವರನ್ನು ಬದುಕುವುದಕ್ಕೆ ಬಿಟ್ಟಿದ್ದೀವೆಯೇ ನಾವುಗಳು 
ನಿಘಂಟುಗಳು ಇರುವುದು ಯಾಕೆ ಎಂಬುದೇ ತಿಳಿದಿರುವುದಿಲ್ಲ ನಮಗೆ. ಏಕೆಂದರೆ ನಮ್ಮ ನಮ್ಮ ಮೇಷ್ಟ್ರುಗಳು ನಮಗೆ ತಿಳಿಸುವುದೇನೆಂದರೆ, ನಿಘಂಟುಗಳಿರುವುದು ಯಾವುದೋ ಕಾಲದ ಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ. ಹೀಗೆ..... ಆದರೆ ಸ್ನೇಹಿತರೆ, ನೋಡಿ ನಿಘಂಟುಗಳಿರುವುದು, ಯಾವುದೋ ಕಾಲದ ಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕಲ್ಲ. ಬದಲಾಗಿ ಹಳೆಯ ಕಾವ್ಯಗಳನ್ನು ಆಧಾರವಾಗಿಟ್ಟುಕೊಂಡು ಹೊಸ ವ್ಯಾಖ್ಯಾನವನ್ನು ಪ್ರಚುರಪಡಿಸುವುದಕ್ಕಾಗಿ ಬಳಸುವಂಥದ್ದು
.
ಅಲ್ಲ ರೀ, ಕಿಟ್ಟೆಲ್ರವರ ಇನ್ನಷ್ಟು ಪ್ರತಿಮೆಗಳನ್ನು ಬೇಕಿದ್ದರೆ ಸ್ಥಾಪಿಸುತ್ತಾರೆ ನಮ್ಮ ಸರ್ಕಾರದವರು, ಅದಕ್ಕೆ ಬೆಂಬಲವನ್ನೂ ನೀಡುತ್ತಾರೆ ನಮ್ಮ ವಿದ್ವಾಂಸರುಗಳು, ಆದರೆ ನಾವುಗಳು ಅವರು ಸಂಪಾದಿಸಿದ ನಿಘಂಟನ್ನು ತಿರುವಿಹಾಕುತ್ತಾವೇಯೇ
ತಿರುವಿ ಹಾಕುವವರನ್ನು ಗೌರವದಿಂದ ಕಾಣುತ್ತಾರೆಯೇ
ನಾವು ಕನ್ನಡಿಗರು ಈ ನಿಘಂಟನ್ನು ಎಂದೋ ಬೆಂಕಿಗೆ ಹಾಕಾಗಿದೆ.
ಇದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಯಾವುದಾದರು ಒಂದು ಹೊಸ ಕನ್ನಡ ಪದವನ್ನು ಹುಟ್ಟುಹಾಕಬೇಕೆಂದಿಟ್ಟುಕೊಳ್ಳಿ, ನಮ್ಮ ಈಗಿನ ಕನ್ನಡಿಗರಿಗೆ, ಈಗಿನ ವಿದ್ವಾಂಸರಿಗೆ, ಸರ್ಕಾರದವರಿಗೆ ಸಂಸ್ಕೃತವೇ ಬೇಕು. ಎಲ್ಲರಿಗೂ ಕಿಟ್ಟೆಲ್ ಹೆಸರು ಬೇಕು. ಆದರೆ ಅವರು ಉಳಿಸಿ ಹೋದ ಕನ್ನಡ ಬೇಕಿಲ್ಲ. ಯಾವುದಾದರು ಹೊಸ ಪದವನ್ನು ಹುಟ್ಟುಹಾಕಿದೆರೆಂದಿಟ್ಟುಕೊಳ್ಳಿ, ಅದರ ಬಗ್ಗೆ ಚರ್ಚೆಯನ್ನೇ ಮಾಡುವುದಿಲ್ಲ. ಬದಲಾಗಿ ಗೇಲಿ ಮಾಡುತ್ತಾರೆ.
ಕೆಲವು ಉದಾಹರಣೆಗಳು
೧. ಈಗ ನೋಡಿ, Classical Language'u, Classical Language'u ಅಂತ ಬಡ್ಕೋತಾರಲ್ಲ, Classical Language ಎನ್ನುವುದಕ್ಕೆ ಕನ್ನಡದಲ್ಲಿ ಏನಂತ ಕರೆಯುತ್ತಾರೆ ಎಂದು ಕೇಳಿ ನೋಡಿ. ಎಲ್ಲ ಜನರೂ, ಎಲ್ಲ ರಾಜಕಾರಣಿಗಳೂ, ಎಲ್ಲ ಪತ್ರಿಕೆಯವರೂ, ಅಷ್ಟೇ ಏಕೆ ಎಲ್ಲ ಕನ್ನಡ ವಿದ್ವಾಂಸರೂ ಮುಂದಾಲೋಚನೆ ಇಲ್ಲದೆ ಬಳಸುವ ಪದ ಶಾಸ್ತ್ರೀಯ ಭಾಷೆ. ಬೇಕಿದ್ದರೆ, ಯಾವ ವಿದ್ವಾಂಸರೇ ಆಗಲಿ, ನಿರೂಪಿಸಿ ಬಿಡಲಿ ಕನ್ನಡವು ವ್ಯಾಕರಣ ಶಾಸ್ತ್ರಗಳ ಅಡಿಯಲ್ಲಿಯೇ ಮುಂದುವರಿದಿದೆ ಎಂಬುದಾಗಿ. ಸಾಧ್ಯವೇ ಇಲ್ಲ. ಕನ್ನಡವು ವ್ಯಾಕರಣದ ಎಷ್ಟೋ ಕಟ್ಟಳೆಯನ್ನು ಯಾವತ್ತೋ ಮುರಿದು ಮುನ್ನಡೆದಿದೆ. ಆದರೆ ಸಂಸ್ಕೃತ ಹಾಗಲ್ಲ, ಸಂಪೂರ್ಣವಾಗಿ ವ್ಯಾಕರಣ ಶಾಸ್ತ್ರಗಳ ಚೌಕಟ್ಟಿನಲ್ಲೇ ಇದೆ. ಸಂಸ್ಕೃತದ ಮಟ್ಟಿಗೆ Classical ಎಂದರೆ ಶಾಸ್ತ್ರೀಯವಿರಬಹುದು, ಆದರೆ ಕನ್ನಡ ಮಟ್ಟಿಗೆ Classical ಎಂದೂ ಶಾಸ್ತ್ರೀಯ ಆಗುವುದಿಲ್ಲ, ಎಂಥ ವಿಪರ್ಯಾಸ. Classical ಎನ್ನುವುದಕ್ಕೆ ಕನ್ನಡದಲ್ಲಿ ಏನಂತ ಕರೆಯಬೇಕು ಎಂಬ ಪ್ರಯತ್ನವನ್ನೂ ಮಾಡುವುದಿಲ್ಲ ನಾವುಗಳು, so called ಕನ್ನಡಿಗರು. ಈ ವಿಷಯವಾಗಿ, ನಾನು ಕಿಟ್ಟೆಲ್ ನಿಘಂಟನ್ನು(Dravidian Etymology ಕಿಟ್ಟೆಲ್ ನಿಘಂಟನ್ನು ಆಧಾರವಾಗಿಟ್ಟುಕೊಂಡಿದೆ) ನೋಡಿದೆ. ಎಷ್ಟೋ ಪುಟಗಳನ್ನು ತಿರುವಿದ ನಂತರ ಕಡೆಗೆ ಸಿಕ್ಕಿತು ನೋಡಿ. ಎಂಥಹ ಸೊಗಸಾದ ವಿವರಣೆ ನೀಡುತ್ತದೆ ಗೊತ್ತೇ ಅದು.
ಕನ್ನಡದಲ್ಲಿ ಕರ್(ಕರು) ಎಂದರೆ embossed ಎಂದರ್ಥ. embossed ಎಂದರೇನು ಎಂಬುದಾಗಿ ತಿಳಿಯಲು http://www.thefreedictionary.com/embossed ಗೆ ಎಡತಾಗಿ.
1. To mold or carve in relief: emboss a design on a coin.
2. To decorate with or as if with a raised design: emboss leather.
3. To adorn; decorate.
mold(ಸ್ವರೂಪ ಪಡೆದಿರುವ, ಪಕ್ವವಾದ), decorate(ಸುಂದರವಾದ), adorn(To enhance or decorate with or as if with ornaments - ಸಾಲಂಕೃತ),
ಹಾಗಾಗಿ ಕರ್ + ನುಡಿ -> ಕರ್ನುಡಿ -> ಕನ್ನುಡಿ.
ಕನ್ನುಡಿಯೆಂದರೆ ಪಕ್ವವಾದ, ಸುಂದರವಾದ ಸ್ವರೂಪ ಪಡೆದಿರುವ, ಆಭರಣಗಳಿಂದ(ಕವಿವಾಣಿಯಲ್ಲಿ ಆಭರಣಗಳಿಗೆ ವಿಶೇಷ ವಿವರಣೆ ಸಿಗಬಹುದು) ಕಂಗೊಳಿಸುತ್ತಿರುವ ನುಡಿ
.
ಚೆನ್ನಾಗಿಲ್ಲವೇ ಇದು, ಆದರೆ ನಾನು ಇದನ್ನು ನನ್ನ ಗೆಳೆಯರಿಗೆ ಹೇಳಿದಾಗ, ನಗೆಪಾಟಲಿಗೀಡಾದೆ.
ನಮಗೆ ಕನ್ನುಡಿಗಿಂತ ಸಂಸ್ಕೃತದ ಶಾಸ್ತ್ರೀಯ ಭಾಷೆ ಎಂಬ ಬಳಕೆಯೇ ಬೇಕು. ಅದು ತಪ್ಪು ಎಂದು ತಿಳಿದಿದ್ದರೂ.
ಬೇಂದ್ರೆಯವರ ಕನ್ನಡವೇ ಕಣ್ಣಾಗಿ, ಕಣ್ಣೇ ಕನ್ನಡಿಯಾಗಿ ಎಂಬ ಕವನ ಸಾಲು ನೆನಪಿಗೆ ಬಂದು, ಅಳು ಬರುವಂತಾಗುತ್ತದೆ.
೨. ಈಗ್ಗೆ ಕೆಲವು ವಾರಗಳ ಹಿಂದೆ ನಿಘಂಟನ್ನು ತಿರುವೀSSS ತಿರುವೀSSS electricity ಎನ್ನುವುದಕ್ಕೆ ಕನ್ನಡದಲ್ಲಿ ಮಿಂಚಾರ್ಪು ಅಥವಾ ಮಿಂಚುಳ್ಳ(ಮಿಂಚುಳ್ಳಿ) ಎಂದು ಕರೆಯಬಹುದು ಎಂದು ನನ್ನ ನಲ್ಮೆಯ ಗೆಳೆಯರಿಗೆ ಹೇಳಿದರೆ. ವಿವರಗಳನ್ನು ಕೇಳುವುದಿರಲಿ ನಾನೊಬ್ಬ fanatist ಎಂದು ಕರೆಸಿಕೊಳ್ಳುವ ಹಂತ ತಲುಪಿತು. Electricity ಎನ್ನುವುದಕ್ಕೆ ಕನ್ನಡದಲ್ಲಿ ಮಿಂಚಾರ್ಪು ಎಂದು ಏಕೆ ಹೇಳಬಹುದು ಎಂಬುದರ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
ಎರಡು ಮೋಡಗಳು ಡಿಕ್ಕಿ ಹೊಡೆದಾಗ, ಮಿಂಚುಂಟಾಗಿ, ಅಗಾಧ ಪ್ರಮಾಣದ electricity ಉತ್ಪತ್ತಿಯಾಗುತ್ತದೆ, ಆ ಮಿಂಚಿನಿಂದ ಉಂಟಾದ ಶಕ್ತಿಯೇ (ಆರ್ಪು) electricity.
ಅಂದರೆ ಮಿಂಚು + ಆರ್ಪ -> ಮಿಂಚಾರ್ಪು (ಕನ್ನಡದ ಸಂಧಿ..ಅಲ್ಲದೆ ಕನ್ನಡದ ಸೊಗಡಿದೆ)
ಆದರೆ ಕನ್ನಡಿಗರಿಗೆ, electricity ಎನ್ನುವುದಕ್ಕೆ ಸಂಸ್ಕೃತದ ವಿದ್ಯುಚ್ಛಕ್ತಿಯೇ ಬೇಕು.
ಸರಿ ವಿದ್ಯುಚ್ಛಕ್ತಿ ಹೇಗೆ ಬಂತು, ವಿದ್ಯುತ್ + ಶಕ್ತಿ -> (ತ್ + ಶ -> ಚ್ಛ) -> ವಿದ್ಯುಚ್ಛಕ್ತಿ (ಶ್ಟುತ್ವಾ ಸಂಧಿ. ಸಾಯಕ್ಕೆ
ಮಾ||ಹಿರಣ್ಣಯ್ಯ ಶೈಲಿಯಲ್ಲಿ).
ನಮ್ಮ ಕನ್ನಡ ಭಾಷೆಯ ವಿಕಾಸಕ್ಕೆ ತಡೆಯೊಡ್ಡಿ, ಅದನ್ನು ಮಡಿ ಭಾಷೆಯಾಗಿಸಿ, ಅದನ್ನು ಮೃತ್ಯುಕೂಪಕ್ಕೆ ಕಳುಹಿಸುತ್ತಿರುವುದೇ ಇಂಥ ಕೆಟ್ಟ, ಕುಲಗೆಟ್ಟ ಮುಂದಾಲೋಚನೆ ಇಲ್ಲದ ಪದಸೃಷ್ಟಿಗಳು
. ವ್ಯಾಕರಣವನ್ನು ಲೆಕ್ಕಿಸುತ್ತಾ ಹೋದರೆ ಭಾಷೆ ಮಡಿಯಾಗುತ್ತದೆ ಎನ್ನುತ್ತಾರೆ. ಸರಿ, ಕನ್ನಡ ಸೊಗಡಿರುವ ಪದ ಬಳಸಿ ಎಂದರೆ ಬಳಸುವುದಿಲ್ಲ. ಹೋಗಲಿ, ಬಳಸುವವರನ್ನು ಗೌರವಿಸಿ ಎಂದರೆ ಅದನ್ನೂ ಮಾಡುವುದಿಲ್ಲ. ಕನ್ನಡ ಮಾತನಾಡುವವರು ಶುದ್ಧ ಓದು ಬರಹ ತಿಳಿಯದ, ಹಳ್ಳಿಯ ಅಸಂಸ್ಕೃತ ಗ್ರಾಮ್ಯ ಜನರು. ಎಂಥ ವ್ಯಂಗ್ಯ.
೩. ಕೋಳಿ ಸಾಕಿ, ಅದನ್ನು ಮಾರಿ ಬದುಕುವ ಕೆಲಸಕ್ಕೆ ಸರಕಾರ ಇಟ್ಟಿರುವ ಹೆಸರು ಕುಕ್ಕುಟ ಉದ್ಯಮ. ಒಂದು ವಿಷಯ ಹೇಳಿ ಯಾವ ರೈತನಾಗಲೀ, ಕೋಳಿಯನ್ನು ಮಾರುವವನಾಗಲೀ, ಕೋಳಿಯನ್ನು ತಿನ್ನುವವನಾಗಲೀ, ಕೋಳಿಯನ್ನು ಕುಕ್ಕುಟ ಎಂದು ಕರೆಯುತ್ತಾನೆ(ಳೆ).
ನಾವು ಕಿಟ್ಟೆಲ್ಲಿಗೆ ಯಾವ ಸ್ಥಾನ ನೀಡಿದ್ದೇವೆ ಎಂಬುದು ಈಗಾಗಲೇ ಸ್ಪಷ್ಟವಾಗಿರಬೇಕಲ್ಲ.
ನಿಜಕ್ಕೂ ತುಂಬಾ ನೋವಾಗುತ್ತದೆ ಕಣ್ರೀ.
ಸುಮ್ಮನೆ ಅಭಿಮಾನ, ಪ್ರೀತಿ ಇದ್ದರೆ ಸಾಲದು ಕಣ್ರೀ, ಯಾವ ಕಾರಣಕ್ಕೆ ನಮ್ಮ ನುಡಿಯ ಬಗ್ಗೆ ಹೆಮ್ಮೆ ಪಡಬೇಕು ಎಂಬುದನ್ನು ನಾವುಗಳು ಸ್ಪಷ್ಟವಾಗಿ ಅರಿತಿರಬೇಕು.
ಈಕಡೆ ಕಿಟ್ಟೆಲ್ ಪ್ರತಿಮೆ ಸ್ಥಾಪಿಸುತ್ತಾರೆ, ಆಕಡೆ ಕೋಳಿ ಸಾಕಾಣಿಕೆಗೆ ಎನ್ನುವುದಕ್ಕೆ ಕುಕ್ಕುಟ ಉದ್ಯಮ ಎಂದು ಹೆಸರಿಡುತ್ತಾರೆ. ಕೋಪ ಬರುವುದಿಲ್ಲವೇ? ಯಾವನಿಗ್ರೀ ಅರ್ಥವಾಗುತ್ತದೆ ಕುಕ್ಕುಟ ಉದ್ಯಮ ಎಂದರೆ. ಸರಕಾರ, ವಿಶ್ವವಿದ್ಯಾಲಯ, ವಿದ್ವಾಂಸರುಗಳೆಲ್ಲರೂ ಸೇರಿ, ಕಿಟ್ಟೆಲರು ಅಣಿಗೊಳಿಸಿದ ನಿಘಂಟಿನ ಪ್ರತಿಮೆಯನ್ನೂ ಕಡೆದು(ತಯಾರಿಸಿ), ಕಿಟ್ಟೆಲ್ ಪ್ರತಿಮೆಯ ಬಳಿಯೇ ಪ್ರತಿಷ್ಠಾಪಿಸಿಬಿಡಲಿ. ಅದಕ್ಕೂ ಸ್ವಲ್ಪ ಹೂ, ಹಣ್ಣು, ಊದುಕಡ್ಡ, ಕರ್ಪೂರದಾರತಿ ದೊರಕಲಿ.
ಭಾಷೆಯ ವಿಕಾಸದ ಬಗ್ಗೆ ಎಷ್ಟೋ ಜನ ಬರೆಯುತ್ತಾರೆ, ಆದರೆ ಇರುವ ಪದಗಳಿಗೆ ಹೊಸ ವ್ಯಾಖ್ಯಾನಗಳನ್ನು ನೀಡಿದ್ದಾರೆಯೇ. ಭಾಷೆಯ ವಿಕಾಸಕ್ಕೆ ತಡೆಯೊಡ್ಡುತ್ತಿದ್ದಾರೆ ಮಡಿವಂತರು ಅಂತೆಲ್ಲ ಹೇಳುವರು. ಆದರೆ ನಿಜವಾಗಿ ನೋಡಿದರೆ, ಮಡಿ ಮಡಿಯಾಗಿರುವುದು ಸಂಸ್ಕೃತ, ಕನ್ನಡವಲ್ಲ. Computer CD ಎನ್ನುವುದನ್ನು ಕನ್ನಡದವರು ಯಾವುದೇ ಅಂಜಿಕೆಯಿಲ್ಲದೆ ಸಿ.ಡಿ ಅಂತಲೇ ಬರಮಾಡಿಕೊಳ್ಳುತ್ತಾರೆ, ಆದರೆ ಸಂಸ್ಕೃತದವರು ಇದಕ್ಕೆ ಬಂಧ ಮುದ್ರಿಕೆ ಎಂದು ಹೆಸರಿಟ್ಟು ಅದನ್ನು ಕನ್ನಡದ ಹೆಸರಿನಲ್ಲಿ, ಬಲವಂತವಾಗಿ ತುರುಕುತ್ತಾರೆ. ಅಲ್ಲ ಬಂಧ ಮುದ್ರಿಕೆ ಕನ್ನಡವೇ. Utter Non Sense. ಕನ್ನಡವು ಮಡಿವಂತ ಭಾಷೆಯಾಗುವುದಾದರೆ, ಅದು ಸಂಸ್ಕೃತದ ಬಲಾತ್ಕಾರದಿಂದ (ಅತಿ ವ್ಯಾಮೋಹ ಅಥವಾ ಅತಿ+ಆಚಾರ - ಕೂಡಿಸಿ ಓದಿ. ಯಣ್ ಸಂಧಿ)ದಿಂದ ಆಗಬೇಕಷ್ಟೇ. ಅಥವಾ ಪಾಪ identity ಎನ್ನುವುದಕ್ಕೆ ಗುರುತು ಎನ್ನುವ ಪದ ಇದೆ ಎಂಬುದೇ ತಿಳಿದಿಲ್ಲದ, ಸಂಸ್ಕೃತದ ಅಸ್ಮಿತೆಯೇ ಬೇಕೆನ್ನುವ, ತಾಳಿಕೆ ಬಾಳಿಕೆಗೆ ಸಂಸ್ಕೃತದ ಸುಸ್ಥಿರವೇ ಬೇಕೆನ್ನುವ ಪತ್ರಿಕೆಗಳಿಂದ ಆಗಬೇಕಷ್ಟೇ. ![]()
ಇಲ್ಲಿ, ಶತಾವಧಾನಿ ಡಾ.ಆರ್. ಗಣೇಶ್ ಹೇಳಿದ ಮಾತು ನೆನಪಿಗೆ ಬರುತ್ತದೆ. ಸಂಸ್ಕೃತದ ಒಂದು ಚೂರು ವ್ಯಾಕರಣ ಗೊತ್ತಿದ್ದರೆ, ಕಾಳಿನ ಬೋಳಿ ಮಾಡಬಹುದು ಬೋಳಿನ ಕಾಳಿ ಮಾಡಬುಹುದು. ಆದರೆ ಸಂಸ್ಕೃತವನ್ನ ತಿಳಿಯದವರ ಪಾಲಿಗೆ ಅದು, ದೇವ ವಾಕ್ಕು.
ಚಿಕ್ಕ-ಚೊಕ್ಕವಾಗಿ ಹೇಳಬೇಕೆಂದರೆ(To put it in nut-shell)
೧. ಕಿಟ್ಟೆಲ್ ನಿಘಂಟು ಈಗಿನ ಕನ್ನಡದ ವಿದ್ವತ್ ಪ್ರಪಂಚದಲ್ಲಿ ಪ್ರಸ್ತುತವಾಗಿದೆಯೇ ? ವಿದ್ವತ್ ಪ್ರಪಂಚ ಎಂದರೆ ಬರೀ ಕಾವ್ಯಾಭ್ಯಾಸ ಅಲ್ಲ ಎಂಬುದು ನಿಮ್ಮ ಮನದಲ್ಲಿರಲಿ.
೨. ಕನ್ನಡವು ಈಗಾಗಲೇ ಸಂಸ್ಕೃತದ ಸಕ್ಕರೆಯನ್ನು ಎಷ್ಟು ಹೀರಬೇಕೋ ಅಷ್ಟನ್ನು ಹೀರಿಕೊಂಡಿದೆ. ಕನ್ನಡದಿಂದ ತಿರಸ್ಕೃತವಾಗಿರುವ ಕಹಿಯಾದ ಸಂಸ್ಕೃತದ ಪದಗಳನ್ನು ಬಲವಂತವಾಗಿ ತುರುಕುವುದು ಬೇಡ. ವಾಕರಿಕೆ ಬರುತ್ತದೆ,
. ಉದಾ - ಅಸ್ಮಿತೆ, ಸುಸ್ಥಿರ, (Non-Sense), ಸಿದ್ಧಸ್ಮೃತ ಕೋಶ, ಬಂಧ ಮುದ್ರಿಕೆ. ![]()
೩. ಈಗ ಕನ್ನಡಕ್ಕೆ ಬೇಕಿರುವುದು ಇಂಗ್ಲೀಷಿನ ಜೇನಹನಿಗಳು. ನೆನಪಿರಲಿ ಜೇನಹನಿಗಳಷ್ಟೇ. ಇಡೀ ಜೇನುಗೂಡಲ್ಲ.
೪. ಕನ್ನಡವು ಎಂದೂ ಕೂಡ ಮಡಿಯಾದ ಭಾಷೆಯಾಗಿಲ್ಲ. ಕನ್ನಡಿಗರು ಮಡಿವಂತರಲ್ಲ. ಪಾರಿಭಾಷಿಕ ಪದಗಳನ್ನು ಕನ್ನಡವು ಯಾವ ಭಾಷೆಯಿಂದ ಬೇಕಿದ್ದರೂ ಸ್ವೀಕರಿಸುತ್ತದೆ. ಆದರೆ ಕನ್ನಡ ಪದದ ಹುಡುಕಾಟವನ್ನೇ ಮಾಡದೆ ಸುಮ್ಮನೆ ಸಂಸ್ಕೃತಕ್ಕೆ ಶರಣಾದರೆ ಅದಕ್ಕಿಂತ ದಡ್ಡತನ ಇನ್ನೊಂದಿಲ್ಲ. ![]()
೫. ಕನ್ನಡವು ನಿಂತ ನೀರಾಗದೆ ಚಲನಶೀಲವಾಗಬೇಕೆಂದರೆ, ಅದು ಕಿಟ್ಟೆಲ್ ನಿಘಂಟಿನ ಕನ್ನಡ ಮತ್ತು Technical ಇಂಗ್ಲೀಷಿನಿಂದ ಮಾತ್ರ ಸಾಧ್ಯ. ನೆನಪಿರಲಿ ಕಿಟ್ಟೆಲ್ ನಿಘಂಟಿನ ಕನ್ನಡ.
ಈ ಲೇಖವನ್ನು ಬರೆದ ಮತ್ತೆ ವೆಂಕಟೇಶರ ಲೇಖನ ಓದುತ್ತಿದ್ದೇನೆ. ಇದು ಕಾಕತಾಳೀವಯೋ ಏನೋ ಗೊತ್ತಿಲ್ಲ. ವೆಂಕಟೇಶರು ಬರೆದದ್ದು ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು. ಹೌದು ನಿಜ, ಕನ್ನಡಕ್ಕೆ ಕಿಟ್ಟೆಲ್ ಸಂಪತ್ತು ಬಂತು. ಆದರೇನು ಮಾಡುವುದು ಕನ್ನಡಿಗರಿಗೆ ಬರಲಿಲ್ಲವಲ್ಲ. ಕಿಟ್ಟೆಲ್ ನಿಘಂಟು ಕನ್ನಡದ ಸಂಪತ್ತಾಗಿ ಉಳಿಯುತ್ತದೆಯೇ ಹೊರತು ಕನ್ನಡಿಗರ ಸಂಪತ್ತಾಗಿ
....
ಒಂದು ರೀತಿ ಇದು "ಎ" ಚಿತ್ರದಲ್ಲಿ, ಉಪೇಂದ್ರ "ಇಂಡಿಯಾ ಈಸ್ ಗ್ರೇಟ್, ಇಂಡಿಯನ್ ಕಲ್ಚರ್ ಈಸ್ ಗ್ರೇಟ್, ಇಂಡಿಯನ್ ಹೆರಿಟೇಜ್ ಈಸ್ ಗ್ರೇಟ್, ಇಂಡಿಯನ್ ಸಾಯಿಲ್ ಈಸ್ ಗ್ರೇಟ್.........ಬಟ್ ಇಂಡಿಯನ್ಸ್ ಆರ್ ನಾಟ್ ಗ್ರೇಟ್"
ಅಂತಾ ಬಡಬಡಾಯಿಸುತ್ತಾನಲ್ಲ ಹಾಗೆ.

- Login or register to post comments
- 758 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
Re: ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ ಮತ್ತು ಒತ್ತರಿಸಿ ಬರುವ ಬೇಸರ ಮತ್ತು ಕೋಪಗಳು
ಭಲೆ, ವಾಹ್, ಸುನಿಲ್ ರವರೆ,
ನಿಮ್ಮ ಮನದ ದುಗುಡ ದುಮ್ಮಾನಗಳ ಒಂದು ಮಹಾಪೂರವೇ, ದಡಕ್ಕೆ ಹೊಡೆದಂತಾಯಿತು. ಮೇಲೆ ನೀವು ಹೇಳಿದ ಮತುಗಳನ್ನು ಓದಿದಾಗ ಒಮ್ಮೆಲೆ, ಮದ್ದು ಸಿಡಿದು, ಸ್ಪೋಟಿಸಿದಂತೆ ಆಯಿತು. ಏನು,'ಜೋಗದ ಜಲಪಾತವಾಗುತ್ತಿದೆಯೋ' ಎಂದು ಯಾರಿಗಾದರು ಅನ್ನಿಸಿದರೆ ಉತ್ಪ್ರೇಕ್ಷೆಯಲ್ಲ !
ನಿಮ್ಮ ಎಲ್ಲ ಅನಿಸಿಕೆಗೂ ಆಧಾರವಿದೆ. ಅದನ್ನು ನಾನು ಬಿಚ್ಚು ಮನಸ್ಸಿನಿಂದ ಸ್ವೀಕರಿಸುತ್ತೇನೆ. ನನ್ನಕೆಲಸ ಏನೆಂದರೆ "ಎಲೆ ತೆಗ್ಯೊ ತಿಪ್ಪ ಅಂದ್ರೆ ಉಂಡೋರ್ ಎಷ್ಟು ಜನ ಅಂದಂಗಾಯ್ತು "! ಯಾರಾದರೂ ರೆ. ಕಿಟ್ಟೆಲ್ ಬಗ್ಗೆ ಕೆಲವು ಮಾಹಿತಿ ಒದಗಿಸಬಲ್ಲಿರ ? ಎಂದು. ಹರಿಯವರು ಕೇಳಿದ್ರು, ನನಗೆ ಗೊತ್ತಿದ್ದ ವಿಶಯ ತಿಳಿಸ್ದೆ ಅಷ್ಟೆ. ಉಳಿದಿದ್ದಲ್ಲ ನಮ್ಮ ಓದುಗರಿಗೆ ಬಿಟ್ಟದ್ದು.
ಇಲ್ಲಿ ನಾನು ಕಿಟ್ಟೆಲ್, ಕನ್ನಡಕ್ಕೆ ಸಂಪತ್ತು ತಂದು ಕೊಟ್ಟರು, ಅಂದಿದ್ದು ಅವರ ಕಷ್ಟಪಟ್ಟು ದುಡಿಯುವ ಮನೋಭಾವ, ತೆಗೆದುಕೊಂಡ ಕೆಲಸವನ್ನು ಚೊಕ್ಕಟವಾಗಿ ಮಾಡುವ ಕಾರ್ಯತತ್ಪರೆತೆ ಯನ್ನು ನಾವು ಗುರಿತಿಸೋಣ, ಅನ್ನುವ ಮಾತನ್ನ ತೆಗೆದುಕೊಂಡು !
ನೋಡಿ ಕನ್ನಡದ ಆಡುಭಾಷೆಯ ಸೊಗಡನ್ನು ಅರಿಯಲು ಅವರು ಪ್ರತಿ ಹಳ್ಳಿಗಳಿಗೂ ಹೋದರು. ಸಂಸ್ಕೃತ ಕಲಿತರು. ಬೇರೆ ಭಾಷೆಗಳನ್ನು ಮೈಗೂಡಿಸಿಕೊಂಡರು. ಆ ಶ್ರದ್ಧೆ ಇಂದಿಗೂ ಎಷ್ಟು ಜನಕ್ಕಿದೆ ? ಅವರ ಸರಿಸಮವಾದ ಕೆಲಸ ಮಾಡಲು ನಮ್ಮ ವಿಶ್ವವಿದ್ಯಾಲಯಕ್ಕೆ ಬಹುಶಃ ಒಂದು ಶತಮಾನ, ಮತ್ತೆ ಹಣದ ರಾಶಿ ಬೇಕೇನೋ ! ಒಳ್ಳೆಯದನ್ನು ಎಲ್ಲೆಡೆಗಳಿಂದ ಸ್ವೀಕರಿಸೋಣ ! ಸರಿ. ಸಾಕು.
ನೀವು ನಿಮ್ಮ ಕನ್ನಡ ಪ್ರೀತಿಯನ್ನು ಅದ್ಭುತವಾಗಿ ವ್ಯಕ್ತ ಪಡಿಸಿದ್ದೀರಿ. ಎಷ್ಟು ಜನಕ್ಕೆ ನೀವು ಹೇಳಿದ ಕನ್ನಡದ ಬಗ್ಗೆ ಕಳಕಳಿ, ಕನ್ನಡವನ್ನು ವಿಸ್ತರಿಸಿ ಅದರಲ್ಲಿ ಇರುವ ಹೇರಳವಾದ ಸಂಪತ್ತನ್ನು ಹೆಕ್ಕಿ, ಹೆಕ್ಕಿ ನಮ್ಮ ಮಕ್ಕಳಿಗೆ ತೋರಿಸಿ ಅದನ್ನು ಬೆಳೆಸಲು ಉಳಿಸಲು ಕೆಲಸ ಮಾಡಬಹುದು ? ಎನ್ನುವ ಆಸೆ ಇದೆ ?ಪರಿಜ್ಞಾನವೂ ಇಲ್ಲ. ಭಾಷಣ ಮುಗೀತು, ಸಾಕು, ಮುಂದಿನ ವರ್ಷ ನೋಡಿಕೊಳ್ಳೋಣ, ಅನ್ನುವವರೇ ಹೆಚ್ಚು ! ನಮ್ಮನ್ನು 'ಸಿನಿಕರೆಂದು ' ತಮಾಷೆಮಡುವವರಿಗೇನು ಕಡಿಮೆಯಿಲ್ಲ !( ಇದನ್ನು ನಿಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದೀರಿ )
'ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ, ಈ ಜಗದ....ಕಂಡು' ಕಾಳಿಂಗರಾಯರ ಧ್ವನಿ ಸುರುಳಿ ನಿನ್ನೆ (ಹಿಂದೆ)ಕೇಳಿದೆ. ಇಂದಿಗೂ ಅದೇ ಪರಿಸ್ಥಿತಿ ! (ಈಗ, ಮುಂದೆ)
ತಪ್ಪಿದ್ದರೆ ಕ್ಷಮೆಯಿರಲಿ.
ನಿಮ್ಮ
ವೆಂ.
ಟಿ: ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ .... ಜಿ.ಪಿ.ರಾತ್ನರತ್ನಂ ನೆನಪು
ನಲ್ಮೆಯ ವೆಂಕಟೇಶರೇ,
ನೀವು ನಿಜಕ್ಕೂ ಯಾವುದೇ ತಪ್ಪನ್ನು ಮಾಡಿಲ್ಲ
. ಕ್ಷಮೆಯನ್ನು ಕೇಳುವ ಪ್ರಮೇಯವೇ ಇಲ್ಲ. ನಿಮಗೆ ತಿಳಿದಿರುವ ಜ್ಞಾನವನ್ನು ನಮ್ಮೊಡನೆ ಹಂಚಿಕೊಂಡಿರಿ. ಇದರ ತನಿಯರಿವು (ತನಿ=ಪೂರ್ಣ) ನನ್ನಲ್ಲಿತ್ತು. ನಾನು ಈ ಲೇಖನವನ್ನು ಬರೆದದ್ದು ಕನ್ನಡದ ಪದಗಳ ವಿಷಯ ಬಂದಾಗ, ನಿರಭಿಮಾನಿಗಳಾಗುವ ನಮ್ಮ ಬಗ್ಗೆಯೇ ಹೊರತು ಲೇಖನವನ್ನು ನಿಮ್ಮನ್ನು(ಅಥವಾ ಯಾರನ್ನೇ ಆಗಲೀ) ಉದ್ಧರಿಸಿ ಖಂಡಿತವಾಗಿಯೂ ಬರೆದದ್ದಲ್ಲ.
ಮತ್ತೊಮ್ಮೆ ನೀವು ಕಿಟ್ಟೆಲ್ ಕುರಿತು ಮಾಹಿತಿಗೆ ಸವಿಯ ಮೇಲೆ ಸವಿಯೊದಗು. ಅವರಲ್ಲಿದ್ದ ಶ್ರದ್ಧೆಯನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಕನ್ನಡಕ್ಕಾಗಿ ಒಟ್ಟಾಗಿ ದುಡಿಯೋಣ.
ಅಂದ ಹಾಗೆ, ನಿಮ್ಮ ಕಡೆಯವರೊಬ್ಬರು ತಾಳೆಗರಿಗಳನ್ನು ಕುರಿತು ಅಧ್ಯಯನ ಮಾಡುತ್ತಿರುವರು ಎಂಬುದಾಗಿ ತಿಳಿಸಿರುವಿರಿ. ಅದರ ಕೆಲಸವು ಪೂರ್ಣವಾದ ನಂತರ ಎಲ್ಲರೊಡನೆ ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ದಯವಿಟ್ಟು ಹಂಚಿಕೊಳ್ಳಿರೆಂದು ಕೇಳಿಕೊಳ್ಳುವೆ.
ತನಿ(ಕ) = ಪೂರ್ಣವಾದ(ಸಂ), ಪ್ರಬುದ್ಧ(ಸಂ), ಸಂಪದ್ಭರಿತ(ಸಂ), ಪೂರ್ಣಾಕಾರ(ಸಂ).
Ka. tani to thrive, develop, become full-grown; n. state of having thriven, full, strong, fully developed, complete, matured, abounding in agreeable qualities, rich, etc.
ಕಡೆಯಲ್ಲಿ ಜಿ.ಪಿ.ರಾಜರತ್ನಂರವರ ಈ ಮಾತನ್ನು ಮತ್ತೊಮ್ಮೆ ಎಲ್ಲರಿಗೂ ನೆನಪಿಸಿಕೊಡುವೆ.
ಆಜ್ಞೆ ಮಾಡೋ ಅಯ್ಗೋಳೆಲ್ಲಾ, ದೇವ್ರೆ ಆಗ್ಲಿ ಎಲ್ಲಾ,
ಕನ್ನಡ್ ಸುದ್ಧಿಗೇನ್ರಾ ಬಂದ್ರೆ ಮಾನ ಉಳ್ಸಾಕಿಲ್ಲ.
ಕನ್ನಡ್ ಸುದ್ಧಿಗೇನ್ರಾ ಬಂದ್ರೆ ಮಾನ ಉಳ್ಸಾಕಿಲ್ಲ.
ಎಂಡ ಓಗ್ಲಿ(ಹೆಂಡ ಹೋಗ್ಲಿ), ಎಡ್ತಿ ಓಗ್ಲಿ(ಹೆಂಡ್ತಿ ಹೋಗ್ಲಿ), ಎಲ್ಲಾ ಕೊಚ್ಕೊಂಡ್ ಓಗ್ಲಿ,
ಪರ್ಪಂಚ್ ಇರೋ ತನ್ಕ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಪರ್ಪಂಚ್ ಇರೋ ತನ್ಕ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
Re: ಟಿ: ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ .... ಜಿ.ಪಿ.ರಾತ್ನರತ್ನಂ ನೆನಪು
ಪ್ರೀತಿಯ ಸುನಿಲ್ ರೆ,
ನಿಮ್ಮ 'ಸಹೃದ'ಯ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಹೀಗೆ ಪ್ರತಿಕ್ರಿಯೆಗಳೇ ನಮ್ಮನ್ನು ತಿದ್ದಿ ಸಾಣೆಹಿಡಿದು, ಒಳ್ಳೆಯ ಪ್ರಯತ್ನಕ್ಕೆ ನಾಂದಿಯಾಗುವಂತೆ ಪ್ರೇರಣೆ ನೀಡುವುದು ! ನೀವು ಹೇಳಿದಂತೆ, ತಾಳೆ ಗರಿಯ ಸುಮಾರು ೮೦೦ ಕ್ಕೂ ಹೆಚ್ಚು ಕನ್ನಡ ಪದ್ಯಗಳನ್ನು ಈಗಾಗಲೆ ಪುಸ್ತಕ ರೂಪದಲ್ಲಿ ತಂದಿದ್ದಾಗಿದೆ. ಅದರ ಎರಡನೆಯ ಭಾಗವೂ ತಯಾರಿಯಲ್ಲಿದೆ ಎಂದು ತಿಳಿಸಿದ್ದಾನೆ. ಅದು ಭಾಗವತ. ನಮ್ಮ ಮುತ್ತಾತಂದಿರು,(ನಿಜವಾಗಿಯೂ ಓಬಿರಾಯನ ಕಾಲವೇ !) ಆ ಕಾಲದಲ್ಲಿ ತಾಳೆ ಗರಿಯಮೇಲೆ ಬರೆದ ಹಾಳೆಗಳು ಅವು. ಕೇಳ್ತೀನಿ. ನೋಡೋಣ.
ಇನ್ನು ಜಿ.ಪಿ.ರಾಜರತ್ನಂ ಮಾತು; ಅವರ ಕೃತಿಗಳು 'ವಿಶಿಷ್ಟವಾದ ಪಂಗಡ'ಕ್ಕೆ ಸೇರಿ ಕನ್ನಡಿಗರಿಗೆ 'ರಸಸ್ವಾದದ ಕವಳ' ಉಣಿಸಿದಷ್ಟು ಖುಷಿಕೊಟ್ಟಿದೆ.ಇಂದಿಗೂ ಕೊಡುತ್ತಿದೆ. ನಿಮ್ಮ ಉದಾಹರಣೆಯೇ ಇದೆಯಲ್ಲ! ಚೆನ್ನಾಗಿದೆ.
ನಾನು ಒಂದು ಸಾಲು ಕೊಡಲೇ ಅನ್ನಿಸ್ತಿದೆ.
"ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂವೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ; ನನ್ಮಸ್ನೀನ್ ಕಾಣೆ" ಇದು ಇಲ್ಲಿ ಪ್ರಸ್ತುತವೇ ಗೊತ್ತಿಲ್ಲ. ಬರೀಬೇಕನ್ನಸ್ತು. ಬರ್ದೆ ಅಷ್ಟೇಯ !
ನಿಮ್ಮ,
ವೆಂ.
ಮಾರುಲಿ: ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ ಮತ್ತು ಒತ್ತರಿಸಿ ಬರುವ ಬೇಸರ
ಸುನಿಲರೇ, ಈಗಿನಂತೆ ಆಗ ದುಡ್ಡೇ ದೊಡ್ಡಪ್ಪ ಆಗಿರಲಿಲ್ಲ. ಇಂದಿನ ಜಗದಲ್ಲಿ ಎಲ್ಲವನ್ನೂ ಹಣದಿಂದ ಅಳೆಯಲಾಗುತ್ತಿದೆ. ಯಾವ ನಾಡಿನಲ್ಲಿ ಹಣವಿದೆಯೋ, ಅಲ್ಲಿ
ಬೇರೇನೂ ಇರಲಿ ಇಲ್ಲದಿರಲಿ, ಅದು ಸುಭಿಕ್ಷ ನಾಡು ಎಂದು ಎಲ್ಲೆಡೆ ಮಾತಾಡುತ್ತಾರೆ. ಆದರೆ ಒಂದೊಮ್ಮೆ ಹಾಗಿರಲಿಲ್ಲ, ಈಗ ultimate knowledge
ಅಂದರೆ scientific knowledge ಆದರೆ ಒಂದೊಮ್ಮೆ 'ಉತ್ಕೃಷ್ಟ ಜ್ಞಾನ' ಅಂದರೆ 'ಆಧ್ಯಾತ್ಮಿಕ ಜ್ಞಾನ' ಆಗಿತ್ತು. ಹಾಗಾಗಿ ಅದನ್ನು ಹೊಂದಿದ್ದ ಸಕ್ಕದದ ನೆರಳು
ಹಲಾವಾರು ನುಡಿಗಳ ಮೇಲೆ ಆಯಿತು. ಈಗ ಇಂಗಲೀಸು ಬೇಕೇ ಬೇಕೆಂದು ಎಲ್ಲರೂ ಒಕ್ಕೊರಲಿನಿಂದ ಹೇಗೆ ಹೇಳುತ್ತೇವೆಯೋ, ಹಾಗೆಯೇ ಒಂದೊಮ್ಮೆ ಸಕ್ಕದ ನಮಗೆ
ಬೇಕೇ ಬೇಕಾಗಿತ್ತು. ಸಕ್ಕದವನ್ನು ಒಪ್ಪಿಕೊಂಡು ನಾವು ಹಿಂದೊಮ್ಮೆ ಮಾಡಿದ ತಪ್ಪನ್ನೇ ಇಂಗಲೀಸನ್ನೊಪ್ಪಿಕೊಂಡು ಮಾಡುತ್ತಿದ್ದೇವೆಂದು ನನಗೆ ತೋರುತ್ತಿದೆ.
ಪ್ರತಿಕ್ರಿಯೆ : ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ ಮತ್ತು ಒತ್ತರಿಸಿ....
ಸುನಿಲ್ರವರೇ,
ನಿಮ್ಮ ಲೇಖನಕ್ಕೆ ನಾನು ನನ್ನ ಅನಿಸಿಕೆಗಳನ್ನು ಪ್ರತ್ಯೇಕ ಲೇಖನದ ರೂಪದಲ್ಲಿ ಹಾಕಿದ್ದೇನೆ (ಬಹಳ ಉದ್ದವಾಯಿತು ಅಂತನ್ನಿಸಿತು). http://www.sampada.net/forum/2822
- ಶ್ಯಾಮ್ ಕಿಶೋರ್
ಅರೆ, ಇದು ಹೇಗೆ ಸಾಧ್ಯ
ಈ ಲೇಖನದಲ್ಲಿದ್ದ Formatting Optionsಗಳೇಕೋ ಕಾಣೆಯಾಗಿವೆಯಲ್ಲಾ. ಏನಾಯಿತು ? ಮುಂಚೆ ಈ ಲೇಖನದಲ್ಲಿ ಅಕ್ಷರಗಳು ಬಣ್ಣಬಣ್ಣವಾಗಿತ್ತಲ್ಲ.
ಅಯ್ಯೋ ಕನ್ನಡವೇ, ನಿನಗೆ ಇಲ್ಲೂ ಜಾಗ ಸಿಗಲಿಲ್ಲವೇ ?
Re: ಅರೆ, ಇದು ಹೇಗೆ ಸಾಧ್ಯ
ಬಣ್ಣ ತೆಗೆದುಹಾಕಿದ್ದು ನಾನೇ, ಸುನೀಲ.
ಕನ್ನಡಕ್ಕೂ ಇದಕ್ಕೂ ಸಂಬಂದ ಕಲ್ಪಿಸಬೇಡ
ತೆಗೆದ ಕಾರಣ ಹೀಗಿದೆ: ಓದುಗರಿಗೆ ಎದ್ದು ಹೊಡೆಯುವ ಬಣ್ಣಗಳನ್ನು ವೆಬ್ ಪುಟಗಳಲ್ಲಿ ಬಳಸುವುದು ಒಳ್ಳೆಯ ಅಭ್ಯಾಸವಲ್ಲ. ಮೂಲ ಟೆಂಪ್ಲೇಟಿನಲ್ಲಿ ಉಪಯೋಗಿಸದಿದ್ದರೂ ಮುಕ್ತ ಸಮುದಾಯ ತಾಣಗಳಾದ ಸಂಪದದಂತಹ ತಾಣಗಳಲ್ಲಿ ಇರುವ ಸ್ವಾತಂತ್ರ್ಯದಿಂದ ನಿಮಗೆ HTML ಮೂಲಕ ಫಾಂಟಿಗೆ ಬಣ್ಣ ಸೇರಿಸುವ ಸೌಲಭ್ಯ ಇರುತ್ತದೆ.
ಈ ಸೌಲಭ್ಯ ಸಮುದಾಯಗಳಲ್ಲಿ ದುರುಪಯೋಗವಾಗುವುದು ಸಹಜವೇ. ಆದರೆ ತಿದ್ದುವುದು ನಮ್ಮ ಕರ್ತವ್ಯ
ಮತ್ತೊಂದು ವಿಷಯ: ಬರೆಯುವಾಗ ಕೂಡ ಹೆಚ್ಚು ಜನ (ಪೋಸ್ಟರುಗಳನ್ನು ಬಿಟ್ಟರೆ) ಬಣ್ಣ ಬಣ್ಣದ ಹೈಲೈಟಿಂಗ್ ಮಾಡುವುದಿಲ್ಲ. ಹೈಲೈಟ್ ಮಾಡದೆಯೇ ನಿಮ್ಮ ಮಾತುಗಳನ್ನು ಉಳಿದವರಿಗೆ ಮನದಟ್ಟಾಗುವಂತೆ ಮಾಡುವ ಶೈಲಿ ಬಹು ಒಳ್ಳೆಯ ಶೈಲಿ - ಬರೆಯುವ ಜಾಣ್ಮೆ ಇರುವುದು ಅಲ್ಲೆ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"