ಕನ್ನಡ ಸಿನಿಮಾ ನೋಡಬೇಕೆ?
ಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ?
ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ ಆರಂಭಿಸುತ್ತಾರೆ. ಕೊನೆಗೊಮ್ಮೆ ಅವೆಲ್ಲಾ ಸೋಲುತ್ತವೆ. ಆಗ ಜ್ಞಾನೋದಯವಾದಂತೆ ವರ್ತಿಸುವ ಈ ನಿರ್ಮಾಪಕರು ಕನ್ನಡದಲ್ಲಿ ಕತೆಗಳನ್ನು ಹುಡುಕುವುದಿಲ್ಲ ಬದಲಿಗೆ ಸೀದಾ ತಮಿಳು ಸಿನಿಮಾಗಳನ್ನು ನೋಡತೊಡಗುತ್ತಾರೆ. ಹೀಗೆ ಮಲೆಯಾಳಂ, ಹಿಂದಿ ಎಲ್ಲಾ ಮುಗಿಯುವ ವೇಳೆಗೆ ಕೆಲವು ನಿರ್ಮಾಪಕರು ಚಿತ್ರ ನಿರ್ಮಿಸಲಾರದ ಮಟ್ಟಕ್ಕೆ ತಲುಪಿರುತ್ತಾರೆ. ಈ ಹಂತದಲ್ಲಿ ಕೆಲವರು 'ಸ್ಟ್ರೇಟ್ ಸಬ್ಜೆಕ್ಟ್' ಮಹಾನುಭಾವರು ಪ್ರವೇಶಿಸುತ್ತಾರೆ. ಇವರು ತಮಿಳು, ಮಲೇಯಾಳಂ ಇಲ್ಲವೇ ತೆಲುಗು ಸಿನಿಮಾಗಳ ಸಿ.ಡಿ. ನೋಡಿ ಒಂದು ಚಿತ್ರಕತೆ ರಚಿಸುತ್ತಾರೆ. ಇದಕ್ಕೆ ಪ್ರಶಸ್ತಿ ಬರಬೇಕೆಂದು ಆಶಿಸುತ್ತಾರೆ.
ಇಷ್ಟೆಲ್ಲಾ ಆದ ಮೇಲೇ ಕನ್ನಡದ ಪ್ರೇಕ್ಷಕನನ್ನು ಬಯ್ಯುವ ಕಾರ್ಯಕ್ರಮ ಇರುತ್ತದೆ. ಕನ್ನಡಿಗರು ಸದಭಿರುಚಿಯ ಸಿನಿಮಾ ನೋಡುವುದಿಲ್ಲ ಎಂಬ ಪಲ್ಲವಿಯನ್ನು ಆಲಾಪಿಸಲಾಗುತ್ತದೆ.
ಕನ್ನಡದಲ್ಲಿ ಸೋತ ಸದಭಿರುಚಿಯ ಚಿತ್ರಗಳನ್ನು ನೋಡಿದರೆ ಅವೇಕೆ ಸೋತಿವೆ ಎಂಬುದು ಅರ್ಥವಾಗುತ್ತದೆ. ಕೂದುವಳ್ಳಿ ಚಂದ್ರಶೇಖರ್ ಅವರು ಎಂ.ಕೆ. ಇಂದಿರಾ ಅವರ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಪೂರ್ವಾಪರ ಎಂಬ ಚಿತ್ರ ನಿರ್ಮಿಸಿದ್ದರು. ಇದು ಯು. ಎಸ್ ಗೆ ಹೊಸತಾಗಿ ಹೋಗುವವರಿಗೆ ತೋರಿಸಲು ನಿರ್ಮಿಸಿದ ಡಾಕ್ಯುಮೆಂಟರಿಯಂತೆ ಇತ್ತು.
ಕನ್ನಡ ಸಿಂಹವೊಂದು ನಟಿಸುವ ಚಿತ್ರಗಳಂತೂ ಸದಭಿರುಚಿಯ ಮೌಲ್ಯಗಳನ್ನಷ್ಟೇ ಇಟ್ಟು ಕೊಂಡಿರುತ್ತದೆ. ಇದರಲ್ಲಿ ಸಿನಿಮಾವೇ ಇರುವುದಿಲ್ಲ. ಇಂಥ ಚಿತ್ರಗಳನ್ನು ಕನ್ನಡಿಗರೇಕೆ ಪ್ರೋತ್ಸಾಹಿಸಬೇಕು?

- Login or register to post comments
- 1554 hits
- Email this forum




RSS:
ಅರ್ಥವಾಗಿಲ್ಲ
ಕನ್ನಡ ಸಿಂಹವೊಂದು ನಟಿಸುವ ಚಿತ್ರಗಳಂತೂ ಸದಭಿರುಚಿಯ ಮೌಲ್ಯಗಳನ್ನಷ್ಟೇ ಇಟ್ಟು ಕೊಂಡಿರುತ್ತದೆ. ಇದರಲ್ಲಿ ಸಿನಿಮಾವೇ ಇರುವುದಿಲ್ಲ.
ಇದು ಅರ್ಥವಾಗ್ಲಿಲ್ಲ....
ಸದಭಿರುಚಿಯ' ಚಿತ್ರ
"ಕನ್ನಡ ಸಿಂಹ"ವೊಂದು ನಟಿಸಿದ್ದರೂ ಕೂಡ ಸಿನಿಮಾ ನಿರ್ದೇಶಕರ ಚಾಕಚಕ್ಯತೆಯಿಂದ 'ಒಳ್ಳೆಯ ಸಿನಿಮಾ' ಆಗುವಂತದ್ದು. ನಿರ್ಮಾಪಕರು, ನಿರ್ದೇಶಕರು 'ಸದಭಿರುಚಿಯ' ಚಿತ್ರವೆಂದು ಹೇಳಿಕೊಂಡ ಮಾತ್ರಕ್ಕದು ಸದಭಿರುಚಿಯ ಚಿತ್ರವಾಗುವುದಿಲ್ಲ (ಪ್ರತಿಯೊಬ್ಬ ನಿರ್ದೇಶಕರೂ ತಮ್ಮದು 'ಸದಭಿರುಚಿಯ ಚಿತ್ರ' ವೆಂದು ಬೋಸ್ಟ್ ಮಾಡಿಕೊಳ್ಳುತ್ತಾರೆ. ಆದರದು ನಿಜವಾಗಿರಬೇಕೆಂದೇನಿಲ್ಲ)
ಇಲ್ಲಿ ಸದಭಿರುಚಿಯ ಮೌಲ್ಯ ಎಂದರೆ ಬಹುಶಃ "ನಮ್ಮ ಚಿತ್ರ ಸದಭಿರುಚಿಯುಳ್ಳದ್ದು" ಎಂದು ಕೊಚ್ಚಿಕೊಳ್ಳುವ, ವಾದಿಸುವ ವ್ಯಕ್ತಿತ್ವ. ಹಲವು ಬಾರಿ ಇದು ಹೇಳಿಕೆಗೆ ವಿಪರೀತವಾಗಿರುವುದು ನಿಜವಷ್ಟೆ. ಕನ್ನಡ ಸಿಂಹವನ್ನು ಹಾಕಿಕೊಂಡ ಮಾತ್ರಕ್ಕೆ ಸಿನಿಮಾ ಸದಭಿರುಚಿಯದ್ದಾಗಿರಬೇಕೆಂದೇನೂ ಇಲ್ಲ... ಕನ್ನಡ ಸಿಂಹದ ನಟನೆ ನೋಡಲು ಮಾತ್ರ ಹೋಗಬೇಕಾಗಿ ಬರಬಹುದು ಎಂಬ ಮಾತು ಇಸ್ಮಾಯಿಲ್ ರವರದು, ಬಹುಶಃ. ಕನ್ನಡ ಸಿಂಹವನ್ನು ಹಾಕಿಕೊಂಡು ಕಳಪೆ ಚಿತ್ರ ಮಾಡಿ 'ನಮ್ಮದು ಸದಭಿರುಚಿಯ ಚಿತ್ರ' ಎಂದ ಮಾತ್ರಕ್ಕೆ ನಾವು ಪ್ರೋತ್ಸಾಹ ನೀಡಬೇಕೆ ಎಂಬುದು ಬಹುಶಃ ಇಸ್ಮಾಯಿಲ್ ರವರ ತರ್ಕ.
--
"ಹೊಸ ಚಿಗುರು, ಹಳೆ ಬೇರು"
ಕನ್ನಡದ
ಕನ್ನಡದ ಸಿಂಹ ಯಾವುದು ಎಂಬುದು ಅರ್ಥವಾಗಬೇಕಾದರೆ ಕಮರ್ಷಿಯಲ್ ಸಿನಿಮಾ ಜಾಹೀರಾತು ನೋಡಬೇಕು. ಕನ್ನಡ ಚಿತ್ರರಂಗದ ಏಕೈಕ ಸಿಂಹ ಸಾಹಸಸಿಂಹ. ತಮಿಳು, ತೆಲುಗುಗಳ ಮೀಸೆಯನ್ನು ಅಂಟಿಸಿಕೊಂಡು ಹಿಟ್ ಚಿತ್ರಗಳ ಯಜಮಾನನಾಗಿದ್ದ ಈ ಸಿಂಹ ಕಳೆದ ವರ್ಷ ಸೋತು ಸುಣ್ಣವಾಗಿತ್ತು. ಆ ಹೊತ್ತಿಗೆ ಮಲಯಾಳಂನ ಕಲಾತ್ಮಕ ಬೀಗ ಆಪ್ತಮಿತ್ರನಾಗಿ ಬಂದು ಕಾಪಾಡಿತು.
ಒಪ್ಪುತ್ತೇನೆ
ಇಸ್ಮಾಯಿಲ್ ಅವರ ಅಭಿಪ್ರಾಯಗಳನ್ನು ನಾನೂ ಒಪ್ಪುತ್ತೇನೆ. ಪೂರ್ವಾಪರ ನಾನೂ ನೋಡಿದ್ದೇನೆ.
ಕನ್ನಡದಲ್ಲಿ ಎರಡು ನಮೂನೆಯ ಚಿತ್ರಗಳಿವೆ. ಒಂದು ಸಂಪೂರ್ಣ ಮಸಾಲೆ ಚಿತ್ರಗಳು. ನನಗಂತೂ ಇಂತಹ ಚಿತ್ರಗಳನ್ನು ನೋಡಲು ಅಸಹ್ಯ ಎನ್ನಿಸುತ್ತದೆ. ಇನ್ನೊಂದು ಕಲಾತ್ಮಕ ಚಿತ್ರಗಳು ಎಂದು ಹೆಸರಿಸಿರಿಟ್ಟುಕೊಂಡು ಬೋರ್ ಹೊಡೆಸುವ ಚಿತ್ರಗಳು. ಕಲಾತ್ಮಕವಾಗಿದ್ದೂ ಕಮರ್ಶಿಯಲ್ ಎಂದು ಕೆರಸಿಕೊಳ್ಳುವ ಉತ್ತಮ ಚಿತ್ರಗಳು ಕೆಲವೇ ಕೆಲವು. ಉದಾ -ಕಾಕನ ಕೋಟೆ, ನಾಗಮಂಡಲ, ಅಪರಿಚಿತ, ... ಇನ್ನೂ ಕೆಲವಿವೆ. ಇತ್ತೀಚೆಗೆ ಅಂತಹ ಚಿತ್ರಗಳು ಬರುತ್ತಲೇ ಇಲ್ಲ.
ಇತ್ತೇಚೆಗೆ ಬರಗೂರರ "ಗಿನ್ನೆಸ್ ದಾಖಲೆ"ಯ ಚಿತ್ರ "ಶಾಂತಿ" ನೋಡಿದೆ. ತುಂಬ ಅಮೆಚ್ಯೂರಿಶ್ ಎನ್ನಿಸಿತು. ನಾವು ಚಿಕ್ಕ ಮಕ್ಕಳಾಗಿದ್ದಾಗ, ಆನೆಯ ಚಿತ್ರ ಎಂದುಕೊಂಡು ಚಿತ್ರ ಬರೆದು ಅದರ ಕೆಳಗೆ ಆನೆಯ ಚಿತ್ರ ಎಂದು ಬರೆಯುತ್ತಿದ್ದವು. ಇವರ ಸಿನೇಮಾದಲ್ಲೂ ಅದೇ ರೀತಿ ಹಲವು ಉದಾಹರಣೆಗಳು ಬರುತ್ತವೆ. ಉದಾಹರಣೆಗ ಬುದ್ಧ, ಪಾರಿವಾಳ, ಗಾಂಧಿ, ಬಿಳಿ ಬಣ್ಣ, ಇತ್ಯಾದಿ. ಇವೆಲ್ಲ ಶಾಂತಿಯ ಸಂಕೇತಗಳು ಎಂದು ಎಲ್ಲರಿಗೂ ಗೊತ್ತು. ಅದನ್ನು ಮತ್ತೆ ಪ್ರತ್ಯೇಕವಾಗಿ ನಾಯಕಿಯ ಬಾಯಿಂದ ಹೇಳಿಸುವ ಅಗತ್ಯವಿಲ್ಲ.
ಸಿಗೋಣ,
ಪವನಜ
-----------
Think globally, Act locally
ಅಗತ್ಯವಿಲ್ಲ
ಇಂತಹ ಸಿನಿಮಾಗಳನ್ನು ಖಂಡಿತ ನೋಡುವ ಅಗತ್ಯವಿಲ್ಲ (ಇನ್ನು ಪ್ರೋತ್ಸಾಹಿಸುವ ಮಾತೆಲ್ಲಿ?) ಮಣ್ಣಿನ ಸಂಪರ್ಕವೇ ಇಲ್ಲದ, ಕೇವಲ ಹಣಮಾಡುವುದೇ ಉದ್ದೇಶವಾಗಿರುವ ಇಂತಹ so called 'ಕಲಾವಿದ'ರನ್ನು ದೂರವಿಡುವುದೇ ಲೇಸು.
ಇತ್ತೀಚೆಗೆ ನಮ್ಮ ನಡುವಿನ ಸೃಜನಶೀಲ ನಿರ್ದೇಶಕರಾದ ಗಿರೀಶ ಕಾಸರವಳ್ಳಿಯವರೊಂದಿಗೆ ಚರ್ಚೆ ನಡೆಸಿದ್ದೆವು. ಆಸಕ್ತರು www.lacefilms.org/kasaravalli.asp ಯಲ್ಲಿ ಓದಬಹುದು. ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
-ಪ್ರಶಾಂತ