ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವಣಾ ಸಂಪ್ರದಾಯವೇ ಆಗಿದೆ. ವಿಶಿಷ್ಟ ಸಚಿವ, ಶಾಸಕ, ಸಂಸದ ಮಹೋದಯರು ಕೆಲವರು ಇದರಿಂದಾಗಿಯೇ ಹೆಸರುವಾಸಿಯಾಗುವುದೂ ಇಲ್ಲದಿಲ್ಲ.
ಮತದಾರರಿಗೆ ಆಮಿಷ ಒಡ್ಡುವಂತಹ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಕಟಿಸಬಾರದು; ವಿಶೇಷ ಸೌಲತ್ತುಗಳನ್ನು ಘೋಷಿಸ ಕೂಡದು ಇತ್ಯಾದಿ ದಾಸ್ತಾವೇಜುಗಳು.' ಎತ್ತು ಯೀದರೆ ಕೊಟ್ಟಿಗೆಯಲ್ಲಿ ಕಟ್ಟುವ' ಈ ಮಾದರಿಗಳು ಚುನಾವಣಾ ಅಯೋಗದ ಹದ್ದಿಕಣ್ಣೂ, ಕಾಕದೃಷ್ಟಿಯೂ ಅಗುತ್ತದೆ. ಆದರೆ ನಿಜವಾಗಿ ಸರಕಾರದ ಯಾವುದೇ ಅಭಿವೃದ್ದಿ ಯೋಜನೆಯೂ ಜಾರಿಯಾಗುವುದೂ, ನಿರ್ದಿಷ್ಟ ಗುರಿ ಮುಟ್ಟುವುದೂ ಎಲ್ಲಾದರು ಇದೆಯೇ? ಸಚಿವಶ್ರೇಷ್ಠರ ಇಂಥಾ ಯಾರಾದರೂ ಗಂಭೀರವಾಗಿ ಸ್ವೀಕರಿಸುತ್ತಾರೆಯೇ? ಇಂಥದು ಜನರಿಗೆ ಆಮಿಷ ಒಡ್ಡುತ್ತವೆ; ವಿರೋಧಿಗಳನ್ನು ನಿರುತ್ತೇಜನಗೊಳಿಸುತ್ತವೆ ಎನ್ನುವುದು ಕೇವಲ ಭ್ರಾಮಕ ಮತ್ತು ಚುನಾವಣಾ ಆಯೋಗ ಅದನ್ನು ಕಂದಾಚಾರ ಮಾಡಿಕೊಂಡಿದೆ.
ಜನ ಶರಣಾಗುವುದು ಹಣ-ಹೆಂಡ-ತೋಳ್ಬಲದ ಜೀವಭಯಕ್ಕೆ. ದಾಖಲೆ ಪ್ರತಿಶತ ಮತದಾನಕ್ಕೂ ಇದು ಕಾರಣವಿರಬಹುದು! ಅಷ್ಟರ ಮಟ್ಟಿಗಿದು ಚುನಾವಣಾ ಆಯೋಗದ ವೈಫಲ್ಯ. ಇಷ್ಟೆಲ್ಲಾ ಕಟ್ಟುನಿಟ್ಟಿನ ನಂತರ ಮೈದಳೆಯುವುದಾದರು ಏನು? ನಿರ್ಲಜ್ಜ ನಿರಾಧಾರ ಶಾಸಕಾಂಗಗಳು! ಈ ಜವಾದ್ದಾರಿ ಯಾರ ಕೊರಳಿಗೆ?
ಆಯೋಗದ ಅತೀ-ಅತಿ
February 23, 2012 - 11:36am
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಆಯೋಗದ ಅತೀ-ಅತಿ
ತೋಳ್ಬಲದ ಬೆದರಿಕೆಗೆ ಇಂದು ಮತದಾರ ಮಣಿಯಬೇಕಾದ ಪರಿಸ್ಥಿತಿ ಇದೆ ಎಂದು ನನಗನಿಸುವುದಿಲ್ಲ. ನಮ್ಮದು ಗುಪ್ತ ಮತದಾನ ವ್ಯವಸ್ಥೆ ಆಗಿರುವುದರಿಂದ ಮತದಾರ ಯಾರಿಗೆ ಮತ ಹಾಕಿದ್ದಾನೆ ಎಂದು ಸ್ಪಷ್ಟವಾಗಿ ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ತೋಳ್ಬಲ ಬಳಸಿ ಮತದಾರರನ್ನು ಬೆದರಿಸದಂತೆ ಇಂದು ಚುನಾವಣ ಆಯೋಗ ಹಂತ ಹಂತಗಳಲ್ಲಿ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಇದರಿಂದಾಗಿ ತೋಳ್ಬಲದ ಮೂಲಕ ಮತದಾರರನ್ನು ಬೆದರಿಸುವ ಪರಿಸ್ಥಿತಿ ಹೋಗಿದೆ ಎಂದು ನನ್ನ ಭಾವನೆ. ಈಗ ಇರುವ ಸಮಸ್ಯೆ ಎಂದರೆ ಮತದರರೆ ಭ್ರಷ್ಟರಾಗಿರುವುದು. ಹಣ, ಹೆಂಡ ತೆಗೆದುಕೊಂಡು ವೋಟು ಹಾಕುವವರು ಇರುವವರೆಗೆ ಹಣ, ಹೆಂಡ ಕೊಟ್ಟು ಓಟು ಹಾಕಿಸಿಕೊಳ್ಳುವವರೂ ಇರುತ್ತಾರೆ. ಹೀಗಾಗಿ ನಿರ್ಲಜ್ಜ, ನಿಷ್ಕ್ರಿಯ ಶಾಸಕಾಂಗ ರೂಪುಗೊಳ್ಳಲು ಮತದಾರರೇ ಕಾರಣ. ಇದನ್ನು ತಡೆಯಲು ಚುನಾವಣ ಆಯೋಗ ಎಷ್ಟೇ ಬಿಗಿ ಕ್ರಮ ತೆಗೆದುಕೊಂಡರೂ ಸಾಧ್ಯವಿಲ್ಲ. ಹಣ, ಹೆಂಡ ಇತ್ಯಾದಿ ಆಮಿಷಗಳಿಗೆ ಬಗ್ಗದೆ ಮತದಾರರು ಮತದಾನ ಮಾಡುವ ಜಾಗೃತಿ ನಮ್ಮ ಜನರಲ್ಲಿ ಬರದೆ ಹೋದರೆ ಇದನ್ನು ಕಾನೂನುಗಳಿಂದ ತಡೆಯಲು ಬ್ರಹ್ಮನೇ ಬಂದರೂ ಸಾಧ್ಯವಿಲ್ಲ ಎನಿಸುತ್ತದೆ. ಯೋಗ್ಯ ವ್ಯಕ್ತಿ ಕಣದಲ್ಲಿ ಇಲ್ಲ, ಹಾಗಾಗಿ ಯಾರೋ ಒಬ್ಬ ಅಯೋಗ್ಯ ವ್ಯಕ್ತಿಗೆ ನಾವು ಮತ ಹಾಕುತ್ತೇವೆ ಎಂಬುದೂ ಅಷ್ಟು ಸಮಂಜಸವಲ್ಲ. ಕೆಲವೊಮ್ಮೆ ಅತ್ಯಂತ ಯೋಗ್ಯ ವ್ಯಕ್ತಿ ಕಣದಲ್ಲಿ ಇದ್ದರೂ ಮತದಾರರು ಅವರನ್ನು ಠೇವಣಿ ಕಳೆದುಕೊಳ್ಳುವಂತೆ ಮಾಡಿರುವ ಉದಾಹರಣೆಗಳೂ ಸಾಕಷ್ಟಿವೆ. ನಮ್ಮ ಜನರಲ್ಲಿ ಸಾಮೂಹಿಕ ರಾಜಕೀಯ ಜಾಗೃತಿ ರೂಪುಗೊಂಡಿಲ್ಲ. ಜಾತಿ ಆಧಾರದಲ್ಲಿ ಮತ ಹಾಕುವುದೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೆಡಲು ಕಾರಣ. ಜಾತಿಯ ಆಧಾರದಲ್ಲಿ ಮತ ಹಾಕುವುದೂ ಒಂದು ರೀತಿಯಲ್ಲಿ ಭ್ರಷ್ಟಾಚಾರವೇ. ಇದರಿಂದಾಗಿಯೇ ಜಾತಿ ರಾಜಕೀಯದ ಪಾಳೆಗಾರಿಕೆ ರೂಪುಗೊಳ್ಳಲು ಕಾರಣವಾಗಿದೆ.
ಉ: ಆಯೋಗದ ಅತೀ-ಅತಿ
ಕಾನೂನುಗಳಿಂದ ಏನನ್ನೇ ಆದರೂ ತಡೆಯುವುದು "ಆ ಬ್ರಹ್ಮನೇ ಬಂದರೂ ಸಾಧ್ಯವಿಲ್ಲ" ಎನ್ನುವುದು ಅತ್ಯಂತ ಸತ್ಯವಾದ ಮಾತು. ಇಷ್ಟಕ್ಕೂ ನಮ್ಮದನ್ನು ’ಪ್ರಜಾಪ್ರಭುತ್ವ ವ್ಯವಸ್ಥೆ’ ಎನ್ನುತ್ತಾರಲ್ಲವೇ? ಅದನ್ನು ತಿದ್ದುವ ಉಸಾಬರಿಯನ್ನು ’ಬ್ರಹ್ಮ’ ತೆಗೆದುಕೊಳ್ಳುವುದುಂಟೇ?.ಓಟನ್ನು ಒಡೆಯಲು ’ಜಾತಿ’ ಒಂದು Abstract ಮಾತ್ರಾ. ಇಂಥಾ ಇನ್ನೂ ಅನೇಕಾನೇಕ ಮುಳ್ಳುಬೇಲಿಗಳು ’ರಾಜಕೀಯದ ಪ್ರಾಣಿ’ಗಳ ಬಳಿ ಬೆಕಾದಷ್ಟಿದೆ. ಮಾತೆದ್ದಿದರೆ ’ಜಾತಿ’, ’ಜಾತಿ’ ಎಂದು ಹೀಯಾಳಿಸುತ್ತಾರಲ್ಲಾ, ಏನೀ ಜಾತಿ? ಜಾತಿಯ ನೇಮ, ಕಟ್ಟು-ಪಾಡುಗಳನ್ನು ನೀಯತ್ತಾಗಿ ಪರಿಪಾಲಿಸುವ ಯಾವನಾದರೂ ವ್ಯಕ್ತಿ ನಮ್ಮ ಸಮಾಜದಲ್ಲಿ ಕಾಣಸಿಗುತ್ತಾನೆಯೇ? ’ಅಲ್ಪಸಂಖ್ಯಾತರು ಓದಿ, ಬರೆದು, ದೊಡ್ಡ ದೊಡ್ಡ ಹುದ್ದೆ ಹಿಡಿಯಲು ನಮ್ಮ ರಕ್ತವನ್ನೇ ಬಸೆದಿದ್ದೇವೆ’ ಎಂದು ಒಂದು ಪಾರ್ಟಿ ಕೊಚ್ಚಿಕೊಂಡು ನಾಟ್ಯವಾಡುತ್ತದಲ್ಲಾ ಆ ಅಲ್ಪಸಂಖ್ಯಾತರು "ಭಾರತೀಯ"ರಾಗದೇ ಜನ್ಮ ಜನ್ಮಾಂತರಗಳವರೆಗೆ ’ಅಲ್ಪ ಸಂಖ್ಯಾತ’ರಾಗೇ ಉಳಿದುಕೊಳ್ಳುವುದರ ಒಳಗುಟ್ಟೇನು? ಮನುಷ್ಯ ಸಮಾಜದಲ್ಲಿ ಬದುಕುವುದು ಹೇಗೆಂಬ ಮೂಲಭೂತ ಸಂಸ್ಕಾರವೂ ಇರಲಾರದವನೊಬ್ಬ, ಮಠ-ಮಾನ್ಯಗಳಿಗೆ, ಸರಕಾರದ ಸಂಪನ್ಮೂಲವನ್ನು ತನ್ನ ಸ್ವಂತ ಪಿತ್ರಾರ್ಜಿತ ಆಸ್ತಿಯೊ ಎಂಬಮತೆ ಎತ್ತಿ ನೀಡುವುದು, ’ಸ್ವಾಮಿ’ ಎಂಬ ವೇಷದ ಇನ್ನೂ ಇನ್ನೂ ನಿರ್ಲಜ್ಜ ಪ್ರಾಣಿ ಅದನ್ನು ಗೋರಿ-ಗೋರಿ ತುಂಬಿಕೊಳ್ಳುವುದು ಸಂಪನ್ನ ಸಮಾಜವೆನ್ನುವುದರ ಲಕ್ಷಣವೇ? ಇವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಹಿಡಿ-ಹಿಡಿದು ಒದ್ದು ಬುದ್ಧಿ ಕಲಿಸುವ ಅಗತ್ಯವಿಲ್ಲ. ಪ್ರಜಾ ಪ್ರತಿನಿಧಿ ಕಾಯ್ದೆಗೆ ಒಂದು ಸಣ್ಣ ತಿದ್ದುಪಡಿ ತಂದು ಇದನ್ನು ಸಾಧಿಸಬಹುದು. ಅದಕ್ಕೆ ತಕ್ಕ ಸರಾಸರಿ ಬೌದ್ಧಿಕ ಪ್ರಭುದ್ದತೆ ನಮ್ಮ ಸಮಾಜದಲ್ಲಿಲ್ಲ!
ಉ: ಆಯೋಗದ ಅತೀ-ಅತಿ
+1
ಇಂಥ ಸಂದರ್ಭಗಳಲ್ಲಿ ಪ್ರಾಮಾಣಿಕ, ಪ್ರಜ್ಞಾವಂತ ಮತದಾರ ಕೂಡ, ಒಬ್ಬ ವರ್ಚಸ್ವೀ ರಾಷ್ಟ್ರನಾಯಕನನ್ನು ಗಮನದಲ್ಲಿಟ್ಟುಕೊಂಡು ಆತನ ಪಕ್ಷಕ್ಕೇ ಮತ ಹಾಕಿರುವ ಸಂಭವವಿದೆ ಅಲ್ಲವೆ? ಹೀಗೆ, ಒಳ್ಳೆಯ ಪಕ್ಷ (ನಾಯಕತ್ವ) ವರ್ಸಸ್ ಒಳ್ಳೆಯ ಅಭ್ಯರ್ಥಿ ಎಂಬ ಗೊಂದಲದ ಮೂಲ ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿಯೇ ಇದೆ ಎನಿಸುತ್ತದೆ. ಇಂದಿನ ರಾಜಕೀಯದಲ್ಲಿ 'ಒಳ್ಳೆಯ ಪಕ್ಷ' ಅಂತ ಯಾವುದಾದರೂ ಇದೆಯಾ ಅನ್ನೋದು ಬೇರೆ ವಿಚಾರ!
ಉ: ಆಯೋಗದ ಅತೀ-ಅತಿ
ಗೊಂದಲ ಚುನಾವಣಾ ವ್ಯವಸ್ಥೆಯಲ್ಲಿ ಅಲ್ಲ, ಪ್ರಜಾಪ್ರತಿನಿಧಿ ಕಾಯ್ದೆಯಲ್ಲೇ ಇದೆ. ಕೆಟ್ಟವರ ಪೈಕಿ ಉತ್ತಮರು ಆರಿಸಿಬರುವ ವ್ಯವಸ್ಥೆಯಿದು. ಅಂದರೆ ನೀಚರು ನೀಚರ ವಿರುದ್ಧ ನಡೆಸುವ ದುರ್ಬುದ್ಧಿವಂತಿಕೆಯೇ ಚುನಾವಣೆ! ಇಲ್ಲಿ ಸಭ್ಯತೆ ನಡೆಯುವುದಿಲ್ಲ. ನಮ್ಮ ಸಮಾಜದಲ್ಲಿ ಸಭ್ಯರು ಬಹುಸಂಖ್ಯೆಯಲ್ಲಿಲ್ಲವೆಂದಲ್ಲ. ಆದರೆ ನಮ್ಮ ಚುನಾವಣೆ ನೈಜ ಅರ್ಥದಲ್ಲಿನ ’ಬಹುಜನ ಬೆಂಬಲಿತ’ರಿಗೆ ಬೆಲೆ ಕೊಡುವುದಿಲ್ಲ.ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಎಂಬ ;ಅಧೀಕೃತ’ ಭೇದದ ಜತೆ-ಜತೆಗೇ ಇನ್ನೂ ಛಿದ್ರ-ಒಳಛಿದ್ರಗಳು ಕುಟುಂಬ-ಕುಟುಂಬ ಮಟ್ಟದವರೆಗೆ ತಾನೇ ಒಂದು ಪಕ್ಷ, ತನಗೇ ಒಂದು ಪ್ರಣಾಳಿಕೆ ಎನ್ನುವ ವರೆಗೆ ಇದು ಸಕ್ರಿಯವಾಗಿರುತ್ತದೆ.ಸಿಕ್ಕಿದ ತಕ್ಷಣ ಬಾಚಿ-ದೋಚಿಕೊಂಡು ಜಾಗ ಖಾಲಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಗುಟರು-ಗುಡುಗುಗಳು Much ado about nothing ಎನಿಸಿದರೆ ತಪ್ಪೇ?