ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಶ್ರೀವತ್ಸ ಜೋಶಿ ಅಂಕಣ ವಿಚಿತ್ರಾನ್ನ
ಕೂಟಿನ ಬಗ್ಗೆ ಅವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಕಥೆ ನನಗಿನ್ನೂ ಚೆನ್ನಾಗಿ ನೆನಪಿದೆ. ಭಲೇ ರುಚಿಕರವಾಗಿರುವ ಅದನ್ನಿಲ್ಲಿ ನಿಮಗೂ ತಿಳಿಸುತ್ತೇನೆ. ಮುಂದೆಂದಾದರೂ ಕೂಟು ತಿನ್ನುವ ಸಂದರ್ಭ ಬಂದರೆ, ಬಡಿಸಿದ್ದು ಸಾಂಬಾರೂ ಅಲ್ಲ ಪಲ್ಯವೂ ಅಲ್ಲ ಇದ್ಯಾವ ಪದಾರ್ಥದಪ್ಪಾ ಎಂಬ ಸನ್ನಿವೇಶ ಎದುರಾದರೆ ಈ ಕಥೆಯನ್ನು ನೆನಪಿಸಿಕೊಳ್ಳಿ. .....ಓದಿ

- Login or register to post comments
- 711 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಗೆಳೆಯರೆ, ಯಾರಾದರೂ ಕೂಟಿನ ಸುತ್ತ ಇರುವ, ಶ್ರೀವತ್ಸ ಜೋಶಿಯವರ ಬರಹವನ್ನು ಇನ್ನೂ ಓದಿಲ್ಲವಾದರೆ, ದಟ್ಸ್-ಕನ್ನಡದಿಂದ ನೇರವಾಗಿ ಓದಿಕೊಳ್ಳಿ. ಆಗ ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು ಎಳೆಯಲ್ಲಿ ಕೂಟಿನ ಸುತ್ತ ಚರ್ಚೆ ಏಕೆ ನಡೆಯುತ್ತಿದೆ ಎಂಬುದು ಎಲ್ಲರ ಅರಿವಿಗೆ ಬರುತ್ತೆ.
ಶ್ರೀವತ್ಸ ಜೋಶಿ(ಹಾಗು ಎಲ್ಲರೂ), ನನ್ನ ಈ ಕಾಮೆಂಟನ್ನು ನೀವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು ಅಂತ ವಿನಂತಿಸುತ್ತೇನೆ. ಏಕೆಂದರೆ, ನೀವು ಬರೆದ ಎಷ್ಟೋ ಲೇಖನಗಳನ್ನು ನಾನು ಓದಿ, ಮೆಚ್ಚಿಕೊಂಡಿರುವೆ. ನಿಮ್ಮೊಂದಿಗಿರುವ ಆ ಆತ್ಮೀಯತೆಯ ಭಾವದಿಂದಲೇ ನಾನು ಇದನ್ನು ಬರೆಯುತ್ತಿರುವುದು. ಹಾಗೆಯೇ, ನಿಮ್ಮ ಬರಹವನ್ನು ಓದಿಕೊಳ್ಳುವಲ್ಲಿ ನಾನು ತಪ್ಪು ಮಾಡಿದ್ದರೆ ನನ್ನನ್ನು ಯಾವುದೇ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳಿ.
ಶ್ರೀವತ್ಸ ಜೋಶಿ, ಇಲ್ಲಿ ನೀವು ಒಬ್ಬ ಜವಾಬ್ದಾರಿಯುತ ಬರಹಗಾರರಾಗಿ ಪ್ರಶ್ನೆ ಕೇಳಿದ್ದರಿಂದ ಅದಕ್ಕೆ ಉತ್ತರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇಲ್ಲಿ ತಮಿಳು-ಕನ್ನಡ ಭಾಷೆಯ ಶ್ರೇಷ್ಠತೆಯ ತುಲನೆ ಆಗಲಿಲ್ಲ, ನಿಜ ಮಾರಾಯ್ರೆ. ಆದರೆ ಇದು ಈ ನಾಡಿನ ಜನರ ಆಹಾರ ಪದ್ಧತಿಯ ಸಂಸ್ಕೃತಿಯ ಪ್ರಶ್ನೆಯಾಗಿದೆ. ಹೇಗೆ ಎಂದು ತೋರಿಸುತ್ತೇನೆ ಓದಿ. ನಿಮ್ಮ ಲೇಖನದಲ್ಲಿ ಬಂದಿರುವ ಕೆಲವು ಮಾತುಗಳನ್ನು ಗಮನಿಸಿ.
೧. ``ಕೂಟು ಅಥವಾ ಕೂಟ್ಟು ಒಂದು ಟಿಪಿಕಲ್ ತಮಿಳಿಯನ್ ಡಿಶ್, ನಿಮಗೆ ಗೊತ್ತಿರಲಿಕ್ಕಿಲ್ಲ... ಹೇಗಿದೆ ರುಚಿ ನೋಡಿ" ಎಂದು ಅಭಿಮಾನದಿಂದ ಬಡಿಸಿದ್ದರು.
೨. ಕರಾವಳಿ ಕರ್ನಾಟಕದವನಾದ ನನಗೆ `ಕೂಟು' ಅಂತೊಂದು ಸ್ವಾದಿಷ್ಟ ವ್ಯಂಜನದ ಹೆಸರು ಗೊತ್ತಿರದಿದ್ದರೂ ತಮಿಳಿನಲ್ಲಿ ಅದರ ವ್ಯುತ್ಪತ್ತಿ ಹೇಗೆ ಆಗಿರಬಹುದೆಂಬ ಲಾಜಿಕ್ ಫಕ್ಕನೆ ಹೊಳೆಯಿತು.
೩. ತಮಿಳು ಉದ್ಘೋಷಕ ಹೇಳುತ್ತಿದ್ದ ``ಇಲಂಗೈ ಒಲಿವರಪ್ಪು ಕೂಟ್ಟುತ್ತಾಪನಂ ಆಸಿಯ ಸೇವೈ... " ಎಂಬ ಉಲಿ ಥಟ್ಟನೆ ನೆನಪಾಯಿತು. ಕಾರ್ಪೊರೇಶನ್ ಎಂಬ ಪದದ ತದ್ಭವರೂಪದ ತಮಿಳು ಪದ ಕೂಟ್ಟುತ್ತಾಪನಂ.
೪. ಹಾಗಿದ್ದರೆ ಸಾಂಬಾರ್ನಲ್ಲಿ, ಪಲ್ಯದಲ್ಲಿ, ಅಷ್ಟೇಕೆ ನಮ್ಮನಾಡಿನ ಬಿಸಿಬೇಳೆಭಾತಿನಲ್ಲಿ ವಿವಿಧ ತರಕಾರಿ ಮತ್ತು ಬೇಳೆಗಳು incorporate ಆಗಿಲ್ಲವೇ, ಒಂದುಗೂಡಿಲ್ಲವೇ - ಎಂಬ ಪ್ರಶ್ನೆ ಬರಬಹುದು.
೫. ಅಂದಹಾಗೆ ತಮಿಳರಿಗೆಲ್ಲ (ನನ್ನ ಹೈದರಾಬಾದ್ ದೋಸ್ತ್ ಗುರುಮೂರ್ತಿಯೂ ಸೇರಿದಂತೆ) ಕೂಟು ಬಗ್ಗೆ ಅಪಾರ ಹೆಮ್ಮೆ ಎಂದೆನಷ್ಟೆ.
........
೪ನೇ ಪಾಯಿಂಟಿನಲ್ಲಿರುವ "ನಮ್ಮ ನಾಡು" ಎಂದರೆ ಯಾವುದು ? ಶ್ರೀವತ್ಸ ಜೋಶಿ, ನೀವು ನಿಮ್ಮ ಅಂಕಣದಿಂದ ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದೀರಿ. ನೀವು ಕೇವಲ ಕರಾವಳಿಯರಲ್ಲ, ನಿಮ್ಮನ್ನು ನಾವು ಓದುಗರು, ಕರ್ನಾಟಕದವರು ಅಂತಲೇ ಗುರುತಿಸುವುದು. ನೀವು ಏನನ್ನಾದರೂ ಹೇಳಿದರೆ, ಅದು ಕರಾವಳಿಯವರು ಯಾರೋ ಹೇಳುತ್ತಿದ್ದಾರೆ ಅಂದುಕೊಳ್ಳುವುದಿಲ್ಲ, ಬದಲಾಗಿ ಕರ್ನಾಟಕದವರು ಏನೋ ಹೇಳುತ್ತಿದ್ದಾರೆ ಎಂದುಕೊಳ್ಳುತ್ತೇವೆ. ಈಗ ಬೇಕಿದ್ದರೆ "ನಾಲ್ಕನೇ ಪಾಯಿಂಟ್" ಅನ್ನು ಮತ್ತೊಮ್ಮೆ ಮಗದೊಮ್ಮೆ ಓದಿ, ಜೋಶಿ. ಅಲ್ಲ "ಕೂಟು" ಅಂದರೇನು ಅಂತ ತಿಳಿಯದ ಕನ್ನಡ ಸೀಮೆಯವರು ಅದನ್ನು ಓದಿದರೆ, "ಓಹೋ, ಬಿಸಿಬೇಳೆಭಾತ್ ಕನ್ನಡಿಗರದ್ದು, ಕೂಟು ತಮಿಳರದ್ದಿರಬೇಕು" ಅಂತ ತಿಳಿದುಕೊಳ್ಳುದಿಲ್ಲವೇ. ಆ ಬರಹದುದ್ದಕ್ಕೂ ನೀವು, ನಿಮಗೆ ತಮಿಳು ಗೆಳೆಯರೊಡನೆ ಇದ್ದ ಒಡನಾಟ, ಸ್ನೇಹ, ಅಕ್ಕರೆ ಇವುಗಳನ್ನು ಒಟ್ಟಾಗಿಸುತ್ತಾ, "ಕೂಟು" ಎಂಬ ಪದಾರ್ಥ ತಮಿಳಿನಲ್ಲಿ ಹೇಗೆ ಕಾನ್ಸೆಪ್ಚುಯಲೈಸ್ ಆಗಿದೆ ಎಂಬುದನ್ನು ಚೆನ್ನಾಗಿ ತಿಳಿಸಿದಿರಿ. ಆದರೆ ಇದನ್ನು ಒಂದು "ಪದಾರ್ಥ ಚಿಂತಾಮಣಿ" ಎಂಬ ಹೆಸರಿನಡಿ ನೀಡಿದ ಔಚಿತ್ಯವೇನು ? ನಾವು ನೀವು ಓದಿರುವಂತೆ, "ಪದಾರ್ಥ ಚಿಂತಾಮಣಿಯಲ್ಲಿ" ಪಾ.ವೆಂ.ಆಚಾರ್ಯ ಅವರು ಒಂದೊಂದು ಪದದ ಬಗ್ಗೆಯೂ ಆಳವಾಗಿ ಅಭ್ಯಾಸ ಮಾಡಿ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಆದರೆ ನೀವು ನಿಮ್ಮ ಲೇಖನವನ್ನು "ಪದಾರ್ಥ ಚಿಂತಾಮಣಿ" ಎಂಬ ಹೆಸರಿನಡಿ ನೀಡುವ ಮುಂಚೆ, ಕೂಟಿನ ಸುತ್ತಾ ಇರುವ ಅನೇಕ (ಕೇವಲ ತಮಿಳು ಸಂಸ್ಕೃತಿಯಷ್ಟೇ ಅಲ್ಲ, ಕನ್ನಡಿಗರ ಸಂಸ್ಕೃತಿಯನ್ನೂ) ವಿಚಾರಗಳನ್ನು ತಿಳಿದುಕೊಂಡು ಆನಂತರ ನಮಗೆ ನೀಡಬಹುದಿತ್ತು. ಆದರೆ ನಿಮ್ಮ ಸದ್ಯದ ಲೇಖನ ತೀರಾ ತೀರಾ ಒನ್-ಸೈಡೆಡ್ ಆಗಿದೆ.
ಇದು ನನ್ನದೊಬ್ಬನ ಬೇಸರವಷ್ಟೇ ಆಗಿದ್ದರೆ ನನ್ನಲ್ಲಿಯೇ ಏನೋ ತಪ್ಪಿರಬೇಕು ಎಂದೆಣಿಸಬಹುದಿತ್ತು. ಆದರೆ ನೋಡಿ, ದಟ್ಸ್-ಕನ್ನಡದಲ್ಲಿ ಪ್ರಕಟವಾದ ನಿಮ್ಮ ಲೇಖನದ ಅಡಿಯಲ್ಲಿಯೇ, ಉಮಾ ಎಂಬುವರು ಹೀಗೆ ಬರೆದಿದ್ದಾರೆ.
Joshi avare namme bengalooru kadenoo kootu madthare kanri. Tamilarige adara patent kodbededi
(Posted: Saturday 13th of October 2007 10:12:15 AM)
ಅಂದರೆ, ಬರಹದಲ್ಲಿ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ ? ಒಟ್ಟಿನಲ್ಲಿ "ನಮ್ಮದೇ" ಆದ ಕೆಲವು ವಿಚಾರಗಳನ್ನು ಹೆಮ್ಮೆಯಿಂದ, ಎದೆಯುಬ್ಬಿಸಿ "ನಮ್ಮದು" ಎಂದು ಹೇಳಿಕೊಳ್ಳುವಾಗಲೂ, "ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎನ್ನುವಂತಹ ಕುಹಕ ಕೇಳುವಂತಾದ ಪರಿಸ್ಥಿತಿ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ್ದು ವೈಯಕ್ತಿಕವಾಗಿ ನನಗೆ ತುಂಬಾ ಬೇಸರ ತಂದಿತು
ಯಾಕೋ ಈ ದಿನ ಎದೆಯುಬ್ಬಿಸಿ ಕವನ ಮನಸ್ಸಿಗೆ ತುಂಬಾ ಕಹಿಯೆನಿಸಿತು.
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಹೌದೌದು! ಮೊದಲು ಲೇಖನ ಓದಿದಾಗ ನಂಗ ಹಂಗ ಅನ್ಸಿತ್ತು. ಸಂಪದದ ಚರ್ಚೆ ನೋಡಿದಾಗ, ಏನಂತ ಗೊತ್ತಾಗಿದ್ದು.
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಕೂಟು ಕರ್ನಾಟಕ/ಕನ್ನಡ ಮೂಲದ್ದಾದರೆ ಬೆಂಗಳೂರು/ಮೈಸೂರು ಪ್ರಾಂತದ ಕೆಲವೇ ಕೆಲವರನ್ನು ಹೊರತುಪಡಿಸಿ ಮಿಕ್ಕವರಿಗೆ ಗೊತ್ತೇ ಇಲ್ಲದಿರುವುದು ನನಗೆ ನಿಜಕ್ಕೂ ಆಶ್ಚರ್ಯ ತರುತ್ತಿದೆ!
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಬಲ ಚನ್ನೀಲ.
ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡ(ಬರೀ ಕನ್ನಡದ್ದೇ) ನುಡಿಕೋಶದಲ್ಲಿ ಹೀಗಿದೆ
ಕೂಟು= ಎರಡು ಮೂರು ಬಗೆಯ ಪಲ್ಲೆಗಳನ್ನು ಬೆರಸಿ ಮಾಡಿದ ಅನ್ನ.
ಜೋಶಿಯವರು ಕೊಳಂಬೆಯವರ ನುಡಿಗಂಟು ನೋಡಿದ್ದರೆ ಅವರು ಹೀಗೆ ಬರೆಯುತ್ತಿರಲಿಲ್ಲವೆನೋ.
ಇರಲಿ ಬಿಡಿ
``ಕೂಟು ಅಥವಾ ಕೂಟ್ಟು ಒಂದು ಟಿಪಿಕಲ್ ತಮಿಳಿಯನ್ ಡಿಶ್, ನಿಮಗೆ ಗೊತ್ತಿರಲಿಕ್ಕಿಲ್ಲ... ಹೇಗಿದೆ ರುಚಿ ನೋಡಿ" ಎಂದು ಅಭಿಮಾನದಿಂದ ಬಡಿಸಿದ್ದರು....
ಅತವ ಅವರ ತಮಿಳು ಗೆಳೆಯರು ಹೀಗೆ ಮೇಲಿನಂತೆ ಹೇಳಿದಾಗ ಅದು ನಮ್ಮ ಕನ್ನಡದ್ದೇ ಅಂತ ದಬಾಯಿಸುತ್ತಿದ್ದರು.
ಎಲ್ಲವೂ ಕನ್ನಡದಿಂದ ಬಂದಿಲ್ಲ ಸರಿ. ಕನ್ನಡದಿಂದ ಬಂದಿರುವುದನ್ನಾದರೂ ಕನ್ನಡದ ಕಣ್ಣು/ಮನಸ್ಸಿನಿಂದ ನೋಡೋಣ.
ಕೂಟು ನಮ್ಮದೇ ಕೂಟು ನಮ್ಮದೇ
:)
ಕೊನೆ ಹನಿ:
ಹೆಮ್ಮೆ ಕನ್ನಡದ ಅರಸರ ಮನೆತನದ ಹೆಸರು ಕೂಡ ರಟ್ಟ'ಕೂಟ'
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಅಯ್ಯೊ ಬಿಟ್ಟು ಬಿಡರಿ...
ಏನೋ ಜೋಶಿಗಳು ಕೂಟಿನ ರುಚಿ ಸವಿದಿದ್ದು.. ಒಬ್ಬ ತಮಿಳು ಗೆಳೆಯನ ಮನೆಯಲ್ಲಿ, ತೆಂಕಣಗನ್ನಡದಲ್ಲಿ ಅದು ಇದೆ ಅಂತ ಅವರಿಗೆ ಗೊತ್ತಿಲ್ಲವಷ್ಟೆ.. ಅಲ್ಲಿ ಸವಿದಿದ್ದರಿಂದ ಅದಕ್ಕೆ ತಮಿಳಿನಿಂದ ಆ ಹೆಸರು ಹ್ಯಾಗೆ ಬಂದಿರಬಹುದು ಅಂತ ಅವರ ಮನಸ್ಸು ಹುಡುಕಾಡಿದೆ...
ತೆಂಕಣಗನ್ನಡದವರು ಕೂಟ ಮಾಡುತ್ತಾರೆ ನನಗೂ ಗೊತ್ತಿಲ್ಲ, ಬೆಂಗಳೂರಿಗೆ ಬಂದು ಎಂಟೇಡುಗಳಾದರೂ ನಾನೆಂದು ಸವಿದಿಲ್ಲ.. ಹಾಗೆನಾದರೂ ತಿಳಿಯದೆ ತಮಿಳಿರ ಮನೆಯಲ್ಲಿ ಕೂಟ ಉಂಡಿದ್ದರೆ.. ನಾನು ಅದು ತಮಿಳಿನದೆ ಅಂತಿದ್ದೆ.. ಅದಕ್ಕೆ ಜೋಶಿಯವರು ಹಾಗೆ ಹೇಳಿದ್ದಾರೆ... ಆದರೆ ಸೊಪ್ಪು ಸಾರು ಅಂತ ಒಂದಿದೆ ಅಲ್ಲ ಅದು ಕೂಡ ಗಟ್ಟಿಯಾಗೇ ಇರೋದು... ಅದರ ರುಚಿ ಕಂಡಿದ್ದೇನೆ... ಅದರದು ದೊಡ್ಡರುಚಿ..
ನಮ್ಮ ಕಡೆ (ಬಡಗನ್ನಡನೆಲದಲ್ಲಿ) ಬೇಳೆ ಕಟ್ಟಿನ ಸಾರು ಅಂತ ಮಾಡ್ತಾರೆ ಯಾರಾದರೂ ಸವಿದಿದ್ದೀರಾ... ?
ಅಲ್ಲದೆ ಹುರುಳಿಕಟ್ಟಿನ ಸಾರು (ಇದು ಬೇಳೆ ಕಟ್ಟಿನ ಸಾರಿಗಿಂತ ಬೇರೆದು), ಅಲಸಂದಿ ಸಾರು, ನುಗ್ಗೆಕಾಯಿ ಸಾರು, ಟೊಮೇಟೋ ಸಾರು, ಕಾರಬ್ಯಾಳಿ (ಇದು ರೊಟ್ಟಿ ಜೊತೆಗೆ ಜಡಿದರೆ ಭರ್ಜರಿಯಾಗಿರುತ್ತೆ) ಹೀಗೆನೇ ಸಿಕಾಪಟ್ಟೆ ಸಾರುಗಳು....
ಜೋಶಿಯವರೆ ಒಂದು ಸಾರಿ ನಮ್ಮ ಕಡೆಗೂ ಬರ್ರೆಲಾ... ಕಟ್ಟಿನ ಸಾರು ಸವಿರಿ (ಕೂಟದ ಸಾರಲ್ಲಾ ಮತ್ತೆ..)
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಕೂಟು = ೧) ಕಲಬೆರಕೆ, ಕಲಸುಮೇಲೋಗರ ೨) ಹಲವು ಪದಾರ್ಥಗಳನ್ನು ಸೇರಿಸಿ ಮಾಡಿದ ಕಿಚಡಿ
ಎಂಬ ಅರ್ಥವನ್ನು ಪ್ರೊ|ಜಿ.ವೆಂಕಟಸುಬ್ಬಯ್ಯನವರೂ ಕೊಟ್ಟಿದ್ದಾರೆ. ಅದನ್ನು ನಾನು ಲೇಖನ ಬರೆಯುವ ಮೊದಲೇ ನೋಡಿದ್ದೇನೆ. ಕನ್ನಡ ನಿಘಂಟಿನಲ್ಲಿ ಇದ್ದ ಮಾತ್ರಕ್ಕೆ ಆ ಪದ ಕನ್ನಡ ಮೂಲದ್ದೇ ಎಂದೇನಿಲ್ಲ. ಕುರ್ಚಿ ಎಂಬ ಪದ ಕನ್ನಡ ನಿಘಂಟಿನಲ್ಲಿದೆ. ಅದು ಕನ್ನಡ ಮೂಲದ್ದೇ?
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಜೋಶಿಯವರೆ,
ದಯವಿಟ್ಟು ನಾನು ಬರೆದಿರುವುದನ್ನು ಸರಿಯಾಗಿ ಓದಿ. ನಾನು ಹೇಳಿದ್ದು ಕೊಳಂಬೆಯವರದು "ಅಚ್ಚಗನ್ನಡ" ನುಡಿಗಂಟು, ಜಿ.ವಿಯವರದಲ್ಲ. ಕೊಳಂಬೆಯವರ ನುಡಿಗಂಟು ಒಂದು ಎಟಿಮಲಾಜಿಕಲ್ ನುಡಿಗಂಟು ಎನ್ನಬಹುದು. ಇಲ್ಲಿ ಕೊಟ್ಟಿರುವ ಎಲ್ಲ ಪದಗಳು ಕನ್ನಡದ್ದೆ(ಮತ್ತು ಕೆಲವು ಸಕ್ಕದದ ತದ್ಬವಗಳನ್ನು ಕೊಡಲಾಗಿದೆ.) ಅದಕ್ಕೆ ಅದನ್ನ 'ಅಚ್ಚಗನ್ನಡ ನುಡಿಕೋಶ' ಎಂದು ಹೆಸರಿಸಿರುವುದು. ಆದರೆ 'ಕೂಟು' ತದ್ಬವ ಅಂತ ಕೊಳಂಬೆಯವರು ಹೇಳಿಲ್ಲ. ಅದು ನಮ್ಮ ಅಚ್ಚಗನ್ನಡದ ಒರೆಯೇ/ಪದವೇ?
ಕೊಳಂಬೆಯವರ ನುಡಿಗಂಟಿನಲ್ಲಿ ಸಕ್ಕದ/ಪಾರ್ಸಿ/ಇಂಗಲೀಸ್ ಪದಗಳಿಗೆ (ತತ್ಸಮಗಳಿಗೆ) ಜಾಗವಿಲ್ಲ.
ನಿಮಗೆ ಇದರ ಪಿಡಿಎಪ್ ಬೇಕಿದ್ದರೆ ನನಗೆ ಮಿನ್ನೋಲೆ ಮಾಡಿ.
----
ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು - ದ.ರಾ.ಬೇಂದ್ರೆ
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
"ಅದು ನಮ್ಮ ಅಚ್ಚಗನ್ನಡದ ಒರೆಯೇ/ಪದವೇ?"
ಇದನ್ನು ಹೀಗೆ ಓದಿಕೊಳ್ಳಿ
ಅದು ನಮ್ಮ ಅಚ್ಚಗನ್ನಡದ ಒರೆಯೇ/ಪದವೇ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಸುನೀಲ್, ನಮಸ್ಕಾರ!
ಹಾಗೇನಿಲ್ಲ, ನನ್ನ ಬರಹವನ್ನು ಓದಿಕೊಳ್ಳುವುದರಲ್ಲಿ ತಪ್ಪೇನೂ ಮಾಡಿಲ್ಲ, ಹಾಗಾಗಿ ’ಮುಲಾಜಿಲ್ಲದೆ ತರಾಟೆ’ಯ ಪ್ರಶ್ನೆಯೇ ಇಲ್ಲ.
೧) ನನ್ನ ಬರಹದ ಶೀರ್ಷಿಕೆ "ಕೂಟು: ಒಂದು ’ಪದಾರ್ಥ’ ಚಿಂತಾಮಣಿ" ಎಂದಿತ್ತು. ಅದು ಯಾವುದೇ ಕಾರಣಕ್ಕೂ ಪಾ.ವೆಂ. ಆಚಾರ್ಯರು ಪ್ರಸ್ತುತಪಡಿಸುತ್ತಿದ್ದಂತೆ ಪ್ರಬುದ್ಧವಾದ ಪದಾರ್ಥ ಚಿಂತಾಮಣಿ ಅಲ್ಲ, ಪದಾರ್ಥ ಎಂಬ ಪದಕ್ಕೆ ಉದ್ಧರಣ ಚಿಹ್ನೆ ಉಪಯೋಗಿಸಿದ್ದು ಕರ್ನಾಟಕದ ಕೆಲ ಭಾಗಗಳಲ್ಲಿ ಹುಳಿ-ಪಲ್ಯ ಇತ್ಯಾದಿ ವ್ಯಂಜನಗಳಿಗೆ ಸಾಮಾನ್ಯವಾದ ಪದವಾಗಿ ’ಪದಾರ್ಥ’ ಎನ್ನುತ್ತಾರೆ. ಶೀರ್ಶಿಕೆಯಲ್ಲೂ ಆ ದೃಷ್ಟಿಯಿಂದಲೇ ಅದನ್ನು ಉಪಯೋಗಿಸಿದ್ದು.
೨) ಸದ್ರಿ ಲೇಖನವು ದಟ್ಸ್ಕನ್ನಡದಲ್ಲಿ ಮತ್ತು ವಿಜಯಕರ್ನಾಟಕದಲ್ಲಿ ತುಸು ಭಿನ್ನವಾಗಿ ಪ್ರಕಟಗೊಂಡಿದೆ. ದಟ್ಸ್ಕನ್ನಡದಲ್ಲಿ ಬಂದ ಲೇಖನವನ್ನು ಸ್ವಲ್ಪ ವಿಸ್ತರಿಸಿ ವಿ.ಕ ಆವೃತ್ತಿಯನ್ನು ನಾನು ತಯಾರಿಸಿದ್ದೆ (ಅದಕ್ಕೆ ಕಾರಣಗಳು ಅನೇಕವಿವೆ, ಇಲ್ಲಿ ಅಪ್ರಸ್ತುತ) ದಟ್ಸ್ಕನ್ನಡದ ಆವೃತ್ತಿ ಸ್ವಲ್ಪ ತಮಿಳು ಕಡೆಗೆ ವಾಲಿರುವಂತೆ ನಿಮಗೆ ಗೋಚರಿಸಿರಬಹುದು. ವಿ.ಕ ಆವೃತ್ತಿಯಲ್ಲಿ ಸ್ವಲ್ಪವಾದರೂ ಸಮತೋಲವಿದೆ ಎಂದು ನನ್ನ ಅನಿಸಿಕೆ.
೩) ನಮ್ಮದೇ ವಿಚಾರಗಳನ್ನು ನಮ್ಮವೇ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಲು ನಾನು ಹಿಂಜರಿಯುವುದಿಲ್ಲ. ಕೆಲ ತಿಂಗಳ ಹಿಂದೆ ಮಸಾಲೆದೋಸೆ ಉಡುಪಿಯಲ್ಲಿ ಹುಟ್ಟಿಕೊಂಡಿತು (ಲೇಖನ ಸಂದರ್ಭ: ಸ್ಪಾನಿಷ್ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ) ಎಂದು ಸಂತೋಷದಿಂದ ಬರೆದಿದ್ದೆ. ಕಳೆದ ವಾರವಷ್ಟೇ ವಿ.ಕ ಲೇಖನದಲ್ಲಿ (ಅದು ದಟ್ಸ್ಕನ್ನಡದಲ್ಲಿ ಪ್ರಕಟವಾಗಿಲ್ಲ) ಕನ್ನಡದ ಗತಪ್ರತ್ಯಾಗತಗಳನ್ನು ಹೆಮ್ಮೆಯಿಂದ ಪರಿಚಯಿಸಿದ್ದೆ. ಅಂದಮಾತ್ರಕ್ಕೆ ಕನ್ನಡದ್ದೆಂದು ನನ್ನ ಬಳಿ ಪುರಾವೆಯಿಲ್ಲದ್ದನ್ನು ಕನ್ನಡಮೂಲದ್ದೆಂದು ಹೇಗೆ ಬರೆಯಲಿ? ನೀವೇ ಹೇಳಿ. ಕೂಟು ತಮಿಳುಮೂಲದ್ದು ಎಂದು ನಾನು ಪ್ರತಿಪಾದಿಸಿದೆನೇ? ಇಲ್ಲ. ಆದರೆ ಕನ್ನಡಮೂಲದ್ದು ಎಂದು ಸಾಧಿಸಲು ನನ್ನ ಬಳಿ ಸರಕಿಲ್ಲ. ಕೂಟು ನನಗೆ ತಮಿಳುಸ್ನೇಹಿತರ ಮನೆಯಲ್ಲಿ ಪರಿಚಯವಾಯಿತು, ತಮಿಳು ಭಾಷೆಯಲ್ಲಿ ಕೂಟು ಪದದ ವ್ಯುತ್ಪತ್ತಿ ಹೇಗಾದದ್ದಿರಬಹುದು ಎಂಬಿತ್ಯಾದಿ ವಿಶ್ಲೇಶಿಸಿದೆ ಅಷ್ಟೇ. ನೀವು ಮತ್ತೆಮತ್ತೆ ಹೇಳುವ ೪ನೇ ಪಾಯಿಂಟನ್ನು ತೀರಾ ’ಗೆರೆಗಳ ನಡುವೆ ಓದಲಿಕ್ಕೆ ಹೋಗಿ’ ಎಡವಟ್ಟೆನಿಸಿಕೊಂಡಿರೇನೊ ಎಂದು ನನಗನ್ನಿಸುತ್ತಿದೆ.
೪) "ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎಂಬ ಪ್ರಶ್ನೆ ಕುಹಕದಿಂದ ಕೇಳಿದ್ದಲ್ಲ. ಅಥವಾ ಹಾಗೆ ಕೇಳಿದ ಮಾತ್ರಕ್ಕೆ "ಕನ್ನಡ ಯಾವುದಕ್ಕೂ ಮೂಲ ಅಲ್ಲವೇ ಅಲ್ಲ!" ಎಂಬ ತೀರ್ಮಾನ ನನ್ನಲ್ಲಿದೆ ಎಂತಲೂ ಅಲ್ಲ!
ಇರಲಿ, ಕೂಟು ಪುರಾಣದಿಂದ ಇಷ್ಟೊಂದು ವಿಷಯ ಚರ್ಚೆಯಾಯ್ತಲ್ಲ, ಅದೇ ಸಂತೋಷ.
ನಿಮಗೆ ಮತ್ತೊಮ್ಮೆ ಧನ್ಯವಾದಗಳು.