ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಈ ಹಾಡು 'ಮಲಯಮಾರುತ' ಸಿನಿಮಾದ್ದು.
ಬರೆದವರು : ಮುತ್ತುಸ್ವಾಮಿ ದೀಕ್ಶಿತರ್
ಇನಿ: ವಿಜಯಬಾಸ್ಕರ್
"ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತ
ಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲಾಸಿನಿ|
ಮಾತಂಗತನಯ ಮಧುಕರವೇಣಿ ಮಾಧವಾರಭಯ ವರಪ್ರದಾಯಿನಿ
ಭಕ್ತವಿಶ್ವಾಸಿನಿ ಸುವಾಸಿನಿ ಶ್ರೀಸ್ತವರಾಜನುದಿಪ್ರಾಸಿದಿನಿ"
ಇದು ಯಾರ ಬಗ್ಗೆ ಬರೆದಿರುವುದು? ಮತ್ತು ಯಾವ ರಾಗದಲ್ಲಿದೆ? ದಯವಿಟ್ಟು ತಿಳಿಸಿ.
[ಹಾಡಿನಲ್ಲಿ ತಪ್ಪಿದ್ದರೆ ಮನ್ನಿಸಿ ]

- Login or register to post comments
- 578 hits
- Email this forum





RSS:
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಈ ಹಾಡನ್ನು ಇಲ್ಲಿಂದ ಕೇಳಬಹುದು
http://www.musicindiaonline.com/p/x/Q4CjyS3NwS.As1NMvHdW/
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಪ್ರಿಯ ವೈಭವ,
ಮುತ್ತುಸ್ವಾಮಿ ದೀಕ್ಷಿತರ ಈ ಕೃತಿ "ಸ್ತವರಾಜ" ರಾಗದಲ್ಲಿದೆ. ದೀಕ್ಷಿತರ ಕಾಲದ ಅಸಂಪೂರ್ಣ ಮೇಳಪದ್ಧತಿಯಲ್ಲಿ ಈ ರಾಗಕ್ಕೆ ಸ್ತವರಾಜ ಎಂದೇ ಹೆಸರಿತ್ತಾದರೂ, ಸಂಪೂರ್ಣಮೇಳಪದ್ಧತಿಯಲ್ಲಿ ಇದಕ್ಕೆ "ಷಡ್ವಿಧಮಾರ್ಗಿಣಿ" ರಾಗವೆನ್ನುತ್ತಾರೆ. ೪೬ನೇ ಮೇಳಕರ್ತರಾಗವಾದ ಇದರ ಆರೋಹಣಾವರೋಹಣಗಳು ಹೀಗಿವೆ:
ಸ ರಿ೧ ಗ೨ ಮ೨ ಪ ಧ೨ ನಿ೨ ಸ'
ಸ' ನಿ೨ ಧ೨ ಪ ಮ೨ ಗ೨ ರಿ೧ ಸ
ಸ್ತವರಾಜದ ಆರೋಹಣಾವರೋಹಣಗಳು ಹೀಗಿವೆ:
ಸ ರಿ೧ ಮ೨ ಪ ಧ೨ ಸ'
ಸ' ನಿ೨ ಧ೨ ಮ೨ ಗ೨ ಸ
ದೀಕ್ಷಿತರ ಕೃತಿಗಳಲ್ಲಿ ಸಾಮಾನ್ಯವಾಗಿ ರಚನೆಯ ಆಯಾ ರಾಗದ ಹೆಸರೂ ಕಾಣಸಿಗುತ್ತವೆ. ಈ ಕೃತಿಯ ಕೊನೆಯಲ್ಲಿ "ಶ್ರೀಸ್ತವರಾಜನುತಿಪ್ರಸಾದಿನಿ..." ಎಂಬುದನ್ನು ಗಮನಿಸಿ. ಈ ಕೃತಿ ಲಲಿತಾತ್ರಿಪುರಸುಂದರೀ ಸ್ವರೂಪಳಾದ ಮಧುರೆಯ ಮೀನಾಕ್ಷಿಯನ್ನು ಕುರಿತಾಗಿ ರಚಿಸಲ್ಪಟ್ಟಿದೆ. ಸರಿಯಾದ ಪಾಠ ಹೀಗಿದೆ:
ಮಧುರಾಂಬಾಂ ಭಜರೇ ರೇ ಮಾನಸ|ಮದನಜನಕಾದಿಗುರುಗುಹಸೇವಿತ||ಪ||
ಮಧುರಾಪುರಿನಿವಾಸಿನೀಂ ಧನಿನೀಂ|ಮನುಕುಬೇರಾದಿಮಾನಸೋಲ್ಲಾಸಿನೀಂ||ಅ.ಪ||
ಮಾತಂಗತನಯಾಂ ಮಧುಕರವೇಣೀಂ ಮಾಧವಾದ್ಯಭಯವರಪ್ರದಾಯಿನೀಂ|
ಭಕ್ತವಿಶ್ವಾಸಿನೀಂ ಸುವಾಸಿನೀಂ, ಶ್ರೀಸ್ತವರಾಜನುತಿಪ್ರಸಾದಿನೀಂ||ಚ||
ಅರ್ಥ:
ಮಧುರೆಯ(ಲ್ಲಿಹ) ತಾಯಿಯನ್ನು ನೆನೆ ಎಲೆ ಮನವೇ|ನಾರಾಯಣನೇ ಮೊದಲಾಗಿ ಗುರು-ಗುಹರಿಂದ(ಅಥವಾ ಅಂಕಿತನಾಮ ಗುರುಗುಹ-ದೈವ/ಭಕ್ತನಿಂದ)ಸೇವಿಸಲ್ಪಡುವ(ವಳನ್ನು ನೆನೆ)||ಪ||
ಮಧುರಾನಗರದಲ್ಲಿ ನೆಲೆಸಿದ ಧನಿಕಳಾದ(ಅಥವಾ ಕುಬೇರನಿಗೆ ಸಂಬಂಧಿಕಳಾದ), ಮನು-ಕುಬೇರಾದಿಗಳ ಮನಸ್ಗಿಗೆ ಮುದನೀಡುವವಳನ್ನು(ನೆನೆ)||ಅ.ಪ||
ಮತಂಗಮುನಿಯ ಮಗಳಾದ, ದುಂಬಿಯ ಸಾಲೋ ಎಂಬಂಥ ಜಡೆಯವಳಾದ, ವಿಷ್ಣು ಇತ್ಯಾದಿಗಳಿಗೇ ಅಭಯ-ವರ ನೀಡುವವಳಾದ, ಭಕ್ತರ ವಿಶ್ವಾಸಕ್ಕೆ ಯೋಗ್ಯಳೂ, ಸುಮಂಗಲಿಯೂ ಆದ, ಶ್ರೀಸ್ತವರಾಜ(ಮಂತ್ರ)ರಾಗದ ಸ್ತೋತ್ರಕ್ಕೆ ಪ್ರಸಾದವನ್ನು ನೀಡುವವಳನ್ನು (ನೆನೆ ಮನವೇ)||ಚರಣ||
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಚನ್ನಾಗಿದೆ . ನನ್ನಿ
ದುಂಬಿಯ ಸಾಲನ್ನು ಜಡೆಗೆ ಹೋಲಿಸಿರುವುದು ಸಕ್ಕತ್.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಹೀಗೆ ಹಾಡಿನಲ್ಲಿ ರಾಗದ ಹೆಸರನ್ನು ಸೇರಿಸಿರುವುದು ನಿಬ್ಬರ/ವಿಶೇಶ ಅನ್ಸುತ್ತೆ. ಬೇರೆ ನೆಗೞು/ರಚನೆಗಳಲ್ಲಿ ಹೀಗೆ ಇದಿಯೇ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಹಾಡಿನಲ್ಲಿ ರಾಗದ ಹೆಸರು ಸೇರಿಸುವುದು ಅಂತಹ ಅಪರೂಪದ ಪದ್ಧತಿಯೇನಲ್ಲ. ಮುತ್ತುಸ್ವಾಮಿ ದೀಕ್ಷಿತರ ಅರ್ಧದಷ್ಟಾದರೂ ರಚನೆಗಳಲ್ಲಿ ರಾಗಮುದ್ರೆ ಇದೆ.
ಮತ್ತೆ ಈ ಕೃತಿ ಮದುರಾಂಬಾ ವಿಭಕ್ತಿ ಕೃತಿ ಸಮೂಹಕ್ಕೆ ಸೇರಿದೆ.
ದೀಕ್ಷಿತರು ಕಮಲಾಂಬಾ, ನೀಲೋತ್ಪಲಾಂಬಾ, ಅಭಯಾಂಬಾ, ಮದುರಾಂಬಾ, ರಾಮ ಮತ್ತು ಗುರುಗುಹ ಇವರಮೇಲೆ ಒಂದೊಂದು ವಿಭಕ್ತಿಯಲ್ಲಿ ಒಂದೊಂದು ರಚನೆಯನ್ನು ಮಾಡಿದ್ದಾರೆ. ಇವಕ್ಕೆ ಆಯಾ ಹೆಸರಿನ ವಿಭಕ್ತಿ ಕೃತಿಗಳೆಂದೇ ಕರೆಯುವ ರೂಢಿ.
ಉದಾ:
ಕಮಲಾಂಬೆಯು ನನ್ನನ್ನು ಕಾಪಾಡಲಿ - ಕಮಲಾಂಬಾ ಸಂರಕ್ಶತು ಮಾಂ - ಪ್ರಥಮಾ ವಿಭಕ್ತಿ
ಕಮಲಾಂಬಾಂ ಭಜರೇ ಮಾನಸ - ಓ ಮನಸ್ಸೇ, ಕಮಲಾಂಬೆಯನ್ನು ನೀ ನೆನೆ - ದ್ವಿತೀಯಾ ವಿಭಕ್ತಿ
ಕಮಲಾಂಬಿಕಯಾ ಕಟಾಕ್ಷಿತೋಹಂ - ಕಮಲಾಬಿಕೆಯಿಂದ ನಾನು ಅನುಗ್ರಹ ಪಡೆದೆನು - ತೃತೀಯಾ ವಿಭಕ್ತಿ
ಕಮಲಾಂಬಿಕಾಯೈ... ನಮಸ್ತೇ - ಕಮಲಾಂಬಿಕೆಗೆ ನಾನು ನಮಿಸುವೆನು - ಚತುರ್ಥೀ ವಿಭಕ್ತಿ
ಕಮಲಾಂಬಿಕಯಾ: ಪರಂ ನಹಿರೇ - ಕಮಲಾಂಬಿಕೆಗಿಂತ ಇತರರು ನನಗಿಲ್ಲ - ಪಂಚಮಿ ವಿಭಕ್ತಿ
ಇತ್ಯಾದಿ ಇತ್ಯಾದಿ.
ಇದೇ ರೀತಿ, ಮದುರಾಂಬಾಂ ಭಜರೇ ಎನ್ನುವ ಕೃತಿ ಮದುರಾಂಬೆ ( ಅದು ಮಧುರಾ ಅಲ್ಲ - ಏಕೆಂದರೆ, ಊರಿನ ಹೆಸರು ಮದುರೈ ಹೊರತು, ಮಧುರೈ ಅಲ್ಲ) ಯ ಮೇಲಿನ ಎರಡನೇ ವಿಭಕ್ತಿ ಕೃತಿ.
-ಹಂಸಾನಂದಿ
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಮೂಲತಃ ದೀಕ್ಷಿತರ ಈ ಕೃತಿ ಸ್ಠವರಜ ರಾಗದಲ್ಲಿದೆ. (ಸಂಗೀತಕಲಾನಿಧಿ ಟಿ ಕೆ ಗೋವಿಂದರಾವ್ ಅವರ ದೀಕ್ಷಿತರ ಕೃತಿಗಳ ಸಂಪೂರ್ಣ ಸ್ವರ-ಸಾಹಿತ್ಯ ಸಂಗ್ರಹ - Compositions of Muddusvami Dikshitar ಪುಸ್ತಕದಿಂದ)
ಸಂಪೂರ್ಣ ಮೇಳಪದ್ಧತಿಯಲ್ಲಿ ಇದಕ್ಕೆ ಸಮಾನ ರಾಗ ಷಡ್ವಿಧಮಾರ್ಗಿಣಿ. ನಾನು ಈ ಕೃತಿಯನ್ನ ಕೇಳಿಲ್ಲ, ಆದ್ದರಿಂದ ಚಿತ್ರದಲ್ಲೂ ಅದೇ ರಾಗದಲ್ಲಿದೆಯಾ/ಇಲ್ಲ್ವಾ ಗೊತ್ತಿಲ್ಲ! ಮಧುರಾಂಬಿಕೆಯನ್ನು ಭಜಿಸು ಮನವೇ ಅನ್ನೋದು ಮೊದಲ ಸಾಲಿನ ಅರ್ಥ. ದ್ವಿತೀಯಾ ವಿಭಕ್ತಿ ಉಪಯೋಗಿಸಿರೋದ್ರಿಂದ, ಮಧುರಾಂಬಾಂ, ನಿವಾಸಿನೀಂ - ಹೀಗೆ ಅನುಸ್ವಾರಾಂತ್ಯ ಪದಗಳು ಇವೆ. ಹಾಗೇ ’ಗುರುಕುಲ’ ಅಲ್ಲ, ’ಗುರುಗುಹ’ - ಇದು ದೀಕ್ಷಿತರ ಅಂಕಿತ. ಕೃತಿಯ ಕೊನೆಯ ಸಾಲಿನಲ್ಲಿ ’ಸ್ಥವರಾಜನುತಿ’ ಅನ್ನೋ ಕಡೆ, ರಾಗ ಮುದ್ರೆ ಇದೆ. ಇದು ಮಧುರಾಂಬಾ(ಮಥುರಾ ಅಲ್ಲ) ಅಂದರೆ ಮಧುರೆಯ ಮೀನಾಕ್ಷಿಯ ಬಗ್ಗೆ ರಚಿಸಿರುವ ಒಂದು ಕ್ಷೇತ್ರಕೃತಿ. ದೀಕ್ಷಿತರು ಹೀಗೇ ವಿವಿಧ ಪುಣ್ಯಕ್ಷೇತ್ರಗಳ ಪ್ರಧಾನ ದೇವದೇವತೆಗಳ ಮೇಲೆ ಅನೇಕ ಕ್ಷೇತ್ರ ಕೃತಿಗಳನ್ನ ರಚಿಸಿದ್ದಾರೆ.
ಸಾಹಿತ್ಯ:
ಪಲ್ಲವಿ: ಮಧುರಾಂಬಾಂ ಭಜರೇ ರೇ ಮಾನಸ ಮದನಜನಕಾದಿ ಗುರುಗುಹ ಸೇವಿತ
ಅನುಪಲ್ಲವಿ: ಮಧುರಾಪುರಿ ನಿವಾಸಿನೀಂ ಧನಿನೀಂ ಮನುಕುಬೇರಾದಿ ಮನೋಲ್ಲಾಸಿನೀಂ
ಚರಣ: ಮತಂಗತನಯಾಂ ಮಧುಕರವೇಣೀಂ ಮಾಧವಾದ್ಯಭಯವರಪ್ರದಾಯಿನೀಂ ಭಕ್ತವಿಶ್ವಾಸಿನೀಂ ಸುವಾಸಿನೀಂ ಶ್ರೀ ಸ್ಥವರಾಜನುತಿ ಪ್ರಸಾದಿನೀಂ
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಬೆನಕ ಅವರ ಪ್ರತಿಕ್ರಿಯೆ ನನಗೆ ಡಿಸ್ಪ್ಲೇ ಆಗಿರಲಿಲ್ಲ, ಅದಿಕ್ಕೇ ಕೂತು ಕುಟ್ಟಿಟ್ಟೆ, ಕ್ಷಮಿಸಿ!
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಒಂದು ವಿವರ ಇಲ್ಲಿ ಕೊಡಬೇಕಿತ್ತು.
ವೈಭವರು ಮಲಯಮಾರುತ ಚಿತ್ರದಲ್ಲಿ ಅಳವಡಿಸಿರುವ ಈ ಕೃತಿಯ ಬಗ್ಗೆ ಕೇಳಿದ್ದಾರೆ. ಈ ಕೃತಿಯ ಮೂಲ ರಾಗ ಬೆನಕ ಹಾಗೂ ಶ್ರೀಮಾತಾ ಅವರು ತಿಳಿಸಿದಂತೆ ಸ್ತವರಾಜ.
ದುರದೃಷ್ಟವಶಾತ್, ಈ ಚಿತ್ರದಲ್ಲಿ ಯೇಸುದಾಸ್ ಅವರು ಈ ಕೃತಿಯನ್ನು ಭವಪ್ರಿಯ ಎನ್ನುವ ಇನ್ನೊಂದು ಬೇರೆ ರಾಗದಲ್ಲಿ ಹಾಡಿದ್ದಾರೆ. ಯಾಕೆ? ನನಗೆ ಗೊತ್ತಿಲ್ಲ. ಇದು ಸರಿಯೇ? ಅಲ್ಲ ಎಂದು ಮಾತ್ರ ಹೇಳಬಲ್ಲೆ.
ಮೂಲ ಹಾಡಿನ ಮಟ್ಟು ತಿಳಿಯದಿದ್ದ ಪಕ್ಶದಲ್ಲಿ (ಉದಾಹರಣೆಗೆ ಪುರಂದರ, ಅನ್ನಮಯ್ಯರ ರಚನೆಗಳು) ಅವರ ರಚನೆಗಳನ್ನು ನಮ್ಮ ಮನಸ್ಸಿಗೆ ಸಂತೋಷವಾಗುವಂತೆ ಹೇಳಿಕೊಳ್ಳಬಹುದು. ಆದರೆ, ರಚನೆ ಮಾಡಿದವರ ಉದ್ದೇಶ ತಿಳಿದಿದ್ದಾಗ ಅದನ್ನು ಬೇರೆ ರಾಗಕ್ಕೆ ಅಳವಡಿಸುವುದು ತಪ್ಪು.
ಭವಪ್ರಿಯ ಎನ್ನುವುದೂ ಒಂದು ಮೇಳಕರ್ತ ರಾಗ. ೪೪ನೆಯದು.
-ಹಂಸಾನಂದಿ
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಇನ್ನೂ ಒಂದು ವಿಷಯವನ್ನು ಸೇರಿಸಿಬಿಡಬೇಕೆನಿಸಿತು.
ಕೆಲವು ರಾಗಗಳಲ್ಲಿ ಸಂಪೂರ್ಣಮೇಳ ಹಾಗೂ ಅಸಂಪೂರ್ಣ ಮೇಳ ರಾಗಗಳು ಹೆಸರಿನಲ್ಲಿ ಮಾತ್ರವೇ ಬೇರೆಯಾದರೂ, ಇನ್ನು ಕೆಲವು ಕಡೆ ಅವು ಪೂರ್ತಿ ಬೇರೆ ರಾಗಗಳೇ ಆಗುತ್ತವೆ. ಸ್ತವರಾಜ ಅಂತಹ ರಾಗಗಳಲ್ಲೊಂದು. ೪೬ನೇ ಷಡ್ವಿಧಮಾರ್ಗಿಣಿಗೂ, ೪೬ನೇ ಸ್ತವರಾಜಕ್ಕೂ ಹೋಲಿಕೆ ಕಡಿಮೆಯೇ. ರಾಗ ಭಾವವೂ, ಸಂಚಾರವೂ ಬೇರೆಯೇ. ಅದೇ (ಉದಾಹರಣೆಗೆ ಹೇಳುವುದಾದರೆ), ೫೬ನೇ (ಸಂಪೂರ್ಣ) ಮೇಳರಾಗ ಷಣ್ಮುಖಪ್ರಿಯವೂ, ೫೬ನೇ ಅಸಂಪೂರ್ಣಮೇಳ ರಾಗವಾದ ಚಾಮರವೂ ಹೆಸರಿನಲ್ಲಷ್ಟೆ ಬೇರೆ. ಆದರೆ, ಸ್ವರೂಪ ಒಂದೇ.
-ಹಂಸಾನಂದಿ
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಹೌದೇ? ಇದು ಭವಪ್ರಿಯದಲ್ಲಿದೆಯೇ? ಇನ್ನೊಮ್ಮೆ ಸರಿಯಾಗಿ ಕೇಳಿನೋಡಬೇಕು; ಒಮ್ಮೊಮ್ಮೆ ಯೇಸುದಾಸರು ಹಾಡುವ ಭರದಲ್ಲಿ ಸ್ವರಗಳನ್ನು ಎತ್ತೆತ್ತಲೋ ತಿರುಗಿಸಿರುವ ಉದಾಹರಣೆಗಳೂ ಉಂಟಾದ್ದರಿಂದ(ಇದೇ ಸಿನಿಮಾದ ಹಿಂದೋಳರಾಗದ "ನಟನವಿಶಾರದ...." ಕೇಳಿನೋಡಿ), ಇದು ಬೇಕೆಂದೇ ಮಾಡಿದ್ದೋ, ಅಥವಾ ಹಾಡಿನ ಭರವೋ ವಿಚಾರಿಸಬೇಕಾದ್ದೇ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.