ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
"ಭರತೇಶ ವೈಭವ" ಕಲ್ಪಿನ ಈ ನಾಲ್ಕನೇ ಭಾಗವನ್ನು ಮುಂಚಿನಂತಲ್ಲದೆ (ಅಂದರೆ ಲೇಖನದಡಿ ಹಾಕದೆ), ಒಂದು ಚರ್ಚೆಯ ವಿಷಯವಾಗಿ ಹಾಕುತ್ತಿದ್ದೇನೆ. ಕಾರಣ, ಇದರಲ್ಲಿ ನಿಮ್ಮೆಲ್ಲರ ನೆರವು, ಭಾಗವಹಿಸುವಿಕೆ ಬೇಕು. ನಾನು ಗಮನಿಸಿದ ಒಂದು ಕುತೂಹಲಕಾರಿಯಾದ ಮತ್ತು ಅಷ್ಟೇ ಸ್ವಾರಸ್ಯವೆನಿಸಬಹುದಾದಂತಹ ಒಂದು ವಿಷಯವನ್ನು ನಿಮಗೆಲ್ಲರಿಗೂ ತಿಳಿಸುತ್ತೇನೆ.
ಭರತೇಶ ವೈಭವದ "ಉತ್ತರನಾಟಕ ಸಂಧಿ" ಎಂಬಲ್ಲಿ ಈ ರೀತಿಯ ಒಂದು ಪದ್ಯ ಬರುತ್ತದೆ.
ಗದ್ದುಗೆಯೊಳಗೊಂದು ಹೊನ್ನಪುತ್ತಳಿಯನು
ತಿದ್ದಿ ಸಿಂಗರಿಸಲಂತದಕೆ
ಇದ್ದಂತೆ ಪ್ರಾಣ ಬಂದೀಕ್ಷಿಸುವುದೊಯೆನ
ಲಿದ್ದನಾ ಚೆಲುವರ ದೇವ || 3 ||
ಗದ್ದುಗೆಯೊಳಗೆ ಒಂದು ಹೊನ್ನಪುತ್ತಳಿಯನು ತಿದ್ದಿ ಸಿಂಗರಿಸಲಂತೂ, ಅದಕೆ ಇದ್ದಂತೆ ಪ್ರಾಣ ಬಂದು ಈಕ್ಷಿಸುವುದೋ ಎನಲು ಇದ್ದನಾ ಚೆಲುವರ ದೇವ. (ಭರತೇಶನನ್ನು ಹೊಗಳುವ ಪರಿ ಇದು)
ತೋರುವ ಚಂದ್ರಬಿಂಬದೊಳಡಗಿದ ಹದಿ
ನಾರು ಕಲೆಗಳೊಯೆಂಬಂತೆ
ಮಾರೊಡ್ಡಿ ಮುತ್ತಿನ ಜವನಿಕೆಯೊಳು ಹದಿ
ನಾರು ಪಾತ್ರಗಳಿದ್ದುವಾಗ || 4 ||
"ತೋರುವ ಚಂದ್ರಬಿಂಬದೊಳು ಅಡಗಿದ ಹದಿನಾರು ಕಲೆಗಳೊ", ಎಂಬಂತೆ, ಮಾರ ಒಡ್ಡಿ ಮುತ್ತಿನ ಜವನಿಕೆಯೊಳು ಹದಿನಾರು ಪಾತ್ರಗಳು ಇದ್ದುವಾಗ.
ಇಲ್ಲಿ ಹದಿನಾರು ಕಲೆ ಎಂದರೆ ಆವುವು ? ಕುತೂಹಲಕಾರಿ ಅಂಶವೆಂದರೆ, ಒಮ್ಮೆ ನಾನು "ಛಾಂದೋಗ್ಯೋಪನಿಷತ್ತನ್ನು" ಓದುವಾಗಲೂ ಇದೇ ಪ್ರಶ್ನೆ ಕಾಡಿತ್ತು. ನೋಡಿ ಛಾಂದೋಗ್ಯೋಪನಿಷತ್ತಿನಲ್ಲಿ ಹೀಗೊಂದು ಶ್ಲೋಕ ಬರುತ್ತದೆ.
ಷೋಡಶಕಲಃ ಸೋಮ್ಯ ಪುರುಷಃ ಪಂಚದಶಾಹಾನಿ ಮಾಶೀ ಕಾಮಮಾಪಃ
ಪಿಬಾಪೋಮಯಃ ಪ್ರಾಣೋ ನ ಪಿಬತೋ ವಿಚ್ಛೇತ್ಸ್ಯತ ಇತಿ ||
ಸೋಮ್ಯನೇ, ಮನುಷ್ಯನು ಹದಿನಾರು ಕಲೆಗಳಿಂದ ಕೂಡಿದವನು. ಒಂದು ಕೆಲಸ ಮಾಡು, ಹದಿನೈದು ದಿನ ನೀನು ಊಟಮಾಡಬೇಡ, ಆದರೆ ಬೇಕಿದ್ದರೆ ತೃಪ್ತಿಯಾಗುವಷ್ಟು ನೀರು ಕುಡಿ. ಪ್ರಾಣವು ನೀರುಮಯವಾಗಿದೆ, (ನೀರನ್ನು) ಕುಡಿಯುವವನನ್ನು ಪ್ರಾಣವು ಬಿಟ್ಟುಹೋಗುವುದಿಲ್ಲ...ಹೀಗೆ.
ಇಲ್ಲಿಯೂ ಅದೇ ಪ್ರಶ್ನೆ ಕಾಡುತ್ತದೆ, "ಆ ಹದಿನಾರು ಕಲೆಗಳು ಆವುವು ?"

- Login or register to post comments
- 427 hits
- Email this forum





RSS:
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಒಂದು ಸುಳುಹು - ಇದಕ್ಕೆ ಉತ್ತರ ಛಾಂದೋಗ್ಯೋಪನಿಷತ್ತಿನಲ್ಲಿಯೇ ಇದೆ
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಸುನಿಲರೆ,
ಹದಿನಾರು ಕಲೆಗಳು ವಿವಿಧ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ತೋರುತ್ತವೆ. ಉದಾ:ಚಂದ್ರನ ಹದಿನಾರು ಕಲೆಗಳು, ನಿತ್ಯಾದೇವಿಯರ ರೂಪದ ದೇವಿಯ ಕಲೆಗಳು, ತಂತ್ರದಲ್ಲಿನ ತಿಥಿದಿನದ ಕಳೆಗಳು ಇತ್ಯಾದಿ. ಆದರೆ ನೀವಿಲ್ಲಿ ಉಪನಿಷತ್ತಿಗೆ ಸಂಬಂಧ ಬೆಸೆದಿರುವುದರಿಂದ ಆ ಹದಿನಾರು ಕಲೆಗಳು ಹೀಗಾಗುತ್ತವೆ:
ವ್ಯಾಹೃತಿಗಳು ಏಳು : ಭೂಃ , ಭುವಃ , ಸುವಃ, ಮಹಃ, ಜನಃ, ತಪಃ, ಸತ್ಯಂ.
ಈ ಏಳು ವ್ಯಾಹೃತಿಗಳು ಮರ್ತ್ಯಲೋಕಕ್ಕಿಂತ ಮಿಗಿಲಾದ ಗುಣಗಳು/ ಏಳು ಲೋಕಗಳನ್ನು ತೋರುತ್ತವೆ. ಇವುಗಳಲ್ಲಿ ಮೊದಲ ನಾಲ್ಕಕ್ಕೆ ನಾಲ್ಕು ರೂಪಗಳಿವೆ. ಅಂದರೆ ೪ ರ ನಾಲ್ಕು = ೧೬ ರೂಪಗಳು; ಇವೇ ಷೋಡಶಕಲೆಗಳು ಹಾಗೂ ಇವುಗಳನ್ನು ಉಳ್ಳವನೇ ಷೋಡಶಕಲಾಪುರುಷ - ಸಾಕ್ಷಾತ್ ಪರಬ್ರಹ್ಮ. ಆ ರೂಪಗಳೆಂದರೆ:
ಭೂ: -> ಭೂಮಿ, ಅಗ್ನಿ, ಋತ, ಪ್ರಾಣ
ಭುವಃ -> ಆಕಾಶ, ಗಾಳಿ, ಸಾಮ, ಅಪಾನ
ಸುವಃ -> ಸ್ವರ್ಗ, ಸೂರ್ಯ, ಯಜುಸ್, ವ್ಯಾನ
ಮಹಃ -> ರವಿ, ಚಂದ್ರ, ಓಂಕಾರ, ಆಹಾರ
ಇವುಗಳನ್ನರಿತು ಧ್ಯಾನಮಾಡಬೇಕೆಂದು ತೈತ್ತಿರೀಯ ಉಪನಿಷತ್ ಹೇಳುತ್ತದೆ.(ಛಾಂದೋಗ್ಯದಲ್ಲಿನ ವಿವರದ ಬಗ್ಗೆ ತಿಳಿಯದು)
ಮರೆತಿದ್ದೆ: ಸರಪಳಿ ಪ್ರಸಂಗದ ಪದ್ಯಕ್ಕಾಗಿ ಧನ್ಯವಾದಗಳು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಹೌದು, ಬೆನಕರೇ ನನಗೂ ಹಾಗೆಯೇ ತೋರುತ್ತಿದೆ. ನೋಡಿ, ೧೬ ಅಂಕಿಗೆ ಅದೇನೋ ತುಂಬಾ ಮಹತ್ವವಿದೆ ಅಂತ ಕಾಣತ್ತೆ. ಹಾಡೇ ಇದೆಯಲ್ಲವೇ. "ಹುಚ್ಚುಕೋಡಿ ಮನಸು ಅದು ೧೬ರ ವಯಸು" ಎನ್ನುವ ಹಾಗೆ
ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಡೆ, "ಸತ್ಯಕಾಮ-ಜಾಬಾಲನ" ಕತೆ ಆದಮೇಲೆ ನಾಲ್ಕು ಬ್ರಹ್ಮಗಳ ಬಗ್ಗೆ ಬರತ್ತೆ. ಒಂದೊಂದು ಬ್ರಹ್ಮರೂಪವೂ ಚತುಷ್ಕಲಪಾದಬ್ರಹ್ಮ ಎಂಬುದಾಗಿ ಹೇಳತ್ತೆ.
ಪ್ರಕಾಶವಾನ್ ಬ್ರಹ್ಮ - ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ
ಅನಂತವಾನ್ ಬ್ರಹ್ಮ - ಪೃಥ್ವಿ, ಅಂತರಿಕ್ಷ, ದ್ಯುಲೋಕ, ಸಮುದ್ರ
ಜ್ಯೋತಿಷ್ಮಾನ್ ಬ್ರಹ್ಮ - ಅಗ್ನಿ, ಸೂರ್ಯ, ಚಂದ್ರ, ವಿದ್ಯುತ್
ಆಯತನವಾನ್ ಬ್ರಹ್ಮ - ಪ್ರಾಣ, ಚಕ್ಷುಸ್, ಶ್ರೋತ್ರಂ, ಮನಃ
ಅದರ ಶ್ಲೋಕಗಳು ಇಲ್ಲಿವೆ. ಇವನ್ನು ತಿಳಿದುಕೊಂಡವನು ಷೋಡಶಕಲಾಪುರುಷನಾಗಬಲ್ಲನು.
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ನಾನು ಒಮ್ಮೆ ಬೆಂಗಳೂರಿನಲ್ಲಿ ನೆಲಸಿರುವ ಉತ್ತರಭಾರತದ ಒಬ್ಬ ಮಾರವಾಡಿ ( ಜೈನ) ವ್ಯಕ್ತಿಯೊಬ್ಬರನ್ನು ಆಗಾಗ್ಗೆ ಭೇಟಿಯಾಗಿತ್ತಿದ್ದೆ.
ಅವರ ಪ್ರಕಾರ
ಕೇವಲ ಕೃಷ್ಣ ನೊಬ್ಬನೇ ಎಲ್ಲಾ ಹದಿನಾರು ಕಲೆಗಳಣ್ಣು ಉಳ್ಳವನು. ರಾಮ 12 ಕಲೆಗಳನ್ನು ಉಳ್ಳವನು. ಅವರು ಇನ್ನೂ ಯಾವ ಯಾವ ದೇವರಿಗೋ ಎಸ್ಟು ಎಶ್ಟು ಅನ್ಕಗಳನ್ನೋ ಕೊಡುತ್ತಾ ಹೋದರು. ಈಗ ಮರೆತು ಹೋಗಿದೆ.
ನಮ್ಮಂತಾ ಮನುಷ್ಯರಿಗೆ ಎಲ್ಲ ಹದಿನಾರು ಗುಣಗಳು ಇರುವುದಿಲ್ಲ. ನಮ್ಮಲ್ಲಿರುವ ಕಲೆಗಳು "ಜಾಸ್ತಿ ಎಂದರೆ 5 ರಿಂದ 6 ಅಂತೆ"!!
ಈ ಕಲೆಗಳ ಲಿಸ್ಟ್ ಮುಂದೆ ಯಾರಾದ್ರೂ ಬರೆಯಬಹುದು ಎಂದು ಕಾದಿದ್ದೇನೆ. ನನಗೆ ಕೆಲವೇ ಕೆಲವು ನೆನಪಿವೆ.
ಸವಿತೃ
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಜವನಿಕ ಅಂದರೆ ಯೌವನ ಅಂತ ಅರ್ಥಾನಾ?
ಭರತೇಶ ವೈಭವ ತುಂಬ ಕುತುಹಲಕಾರಿಯಾಗಿದೆ.
ನಿಮ್ಮವ,
ಗಿರೀಶ ರಾಜನಾಳ
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಜವನಿಕೆ ಎಂದರೆ ತೆರೆ (ರಂಗದ ಮುಂದೆ ಸರಿಸುವಂತಹ) , ಅಥವಾ ಈ ಸಂದರ್ಭದಲ್ಲಿ, ಮುಖವನ್ನು ಮುಚ್ಚುವಂತಹ ತೆರೆ ಎಂದರ್ಥ.
ತಲೆಯಮೇಲೆ ಹಾಕಿದ ಕಿರೀಟದಿಂದ ತೂಗುತ್ತಿರುವ ಮುತ್ತುಗಳೇ ಮುಖ ಮುಚ್ಚುವ ತೆರೆಯಾಗೊದ್ದಿರಬೇಕು.
ಯವನಿಕಾ (ಸಂಸ್ಕೃತ) -> ಜವನಿಕೆ
ಸಂಸ್ಜೃತ ನಾಟಕಕ್ಕೆ ತೆರೆಯ ಸೇರ್ಪಡೆ ಯವನರ (ಗ್ರೀಕರ) ಸಂಪರ್ಕ ಬಂದ ಮೇಲೆ ಆಗಿದ್ದೆಂಬ ಮಾತಿದೆ. ಅದಕ್ಕೇ ತೆರೆಗೆ ಯವನಿಕಾ ಎಂಬ ಹೆಸರು.
-ಹಂಸಾನಂದಿ