ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಮಕರ ಸಂಕ್ರಾಂತಿಯನ್ನು ಅನಾದಿ ಕಾಲದಿಂದ ಜನವರಿ ೧೪ ರಂದು ಆಚರಿಸುತ್ತೇವೆ. ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಜೊತೆಗೆ ಸೂರ್ಯನು ತನ್ನ ಉತ್ತರ ದಿಕ್ಕಿನ ಪ್ರಯಾಣವನ್ನು ಆರಂಬಿಸುತ್ತಾನೆ. ಪ್ರಕೃತಿಯಲ್ಲಿ ಇರುಳಿನ ಅವಧಿ ಕಡಿಮೆಯಾಗುತ್ತದೆ. ಚಳಿಯತೀವ್ರತೆ ಕುಗ್ಗುತ್ತಾ ನಡೆಯುತ್ತದೆ. ಬೆಳಕು ಹೆಚ್ಚಾಗಿ, ಸೂರ್ಯನ ಶಾಖ ಹೆಚ್ಚಾಗಿ ಪಕೃತಿಯಲ್ಲಿ ನವಚೈತನ್ಯ ಮೂಡುತ್ತದೆ. ಹಾಗಾಗಿ ಮಕರ ಸಂಕ್ರಾಂತಿಯು ಪುಣ್ಯ ಕಾಲವೂ ಹೌದು! (ಇದು ದೇವತೆಗಳ ಹಗಲಿನ ಆರಂಭ! ಸ್ವರ್ಗದ ಬಾಗಿಲು ತೆರೆಯುವ ದಿನ. ಭೀಷ್ಮ ಈ ದಿನಕ್ಕಾಗಿಯೇ ಕಾದಿದ್ದ) ಹಾಗಾಗಿ ಇದು ಉತ್ತರಾಯಣದ ಪುಣ್ಯಕಾಲ!
ನಾವು ಒಂದು ಸಲ ಬಾನನ್ನು ನೋಡಿದರೆ, ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಡಿಸೆಂಬರ್ ೨೧ ರಂದು ಪ್ರವೇಶಿಸುವುದು ಕಾಣುತ್ತದೆ. ಜನವರಿ ೧೪ ರಂದು ಅಲ್ಲ! ಆದರೆ ನಾವು ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುತ್ತಿದ್ದೇವೆ.
ಸಾವಿರಾರು ವರ್ಷಗಳ ಹಿಂದೆ ಸೂರ್ಯನು ಜನವರಿ ೧೪ ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದನು. ಈಗ ಕಾಲ ಬದಲಾಗಿದೆ. ಕೇವಲ ಮಕರ ಸಂಕ್ರಾಂತಿ ಮಾತ್ರವಲ್ಲ ಎಲ್ಲ ಸಂಕ್ರಾಂತಿಗಳ ಘಟನಾ ಕಾಲವೂ ವ್ಯತ್ಯಾಸವಾಗಿದೆ.
೧. ಮಕರ ಸಂಕ್ರಮಣವು ಜನವರಿ ೧೪ ರ ಬದಲು ಡಿಸೆಂಬರ್ ೨೧ ರಂದು ನಡೆಯುತ್ತದೆ.
೨. ಮೇಷ ಸಂಕ್ರಾಂತಿಯು ಏಪ್ರಿಲ್ ೧೪ ರ ಬದಲು ಮಾರ್ಚ್ ೨೧ ರಂದು ನದೆಯುತ್ತದೆ.
೩. ಕರ್ಕಾಟಕ ಸಂಕ್ರಾಂತಿಯು ಜುಲೈ ೧೫ ರ ಬದಲು ಜೂನ್ ೨೨ ರಂದು ನಡೆಯುತ್ತದೆ.
೪. ತುಲಾ ಸಂಕ್ರಮಣವು ಅಕ್ಟೋಬರ್ ೧೬ ರ ಬದಲು ಸೆಪ್ಟೆಂಬರ್ ೨೩ ರಂದು ನಡೆಯುತ್ತಿದೆ.
ಬಾನಿನಲ್ಲಿ ಸೂರ್ಯ ಬದಲಾದರೂ ಭೂಮಿಯಲ್ಲಿ ನಾವು ಬದಲಾಗಿಲ್ಲ!
ಮಕರ ಸಂಕ್ರಾಂತಿಯನ್ನು ಜನವರಿ ೧೪ ಬದಲು, ದಿಸೆಂಬರ್ ೨೧ ರಂದು ಆಚರಿಸಿ ಹೊಸ sumಕ್ರಾಂತಿಯನ್ನು ಮಾಡಲು ನಮ್ಮಲ್ಲಿ ಎಷ್ಟು ಜನರು ಸಿದ್ದವಿದ್ದಾರೆ?
- Login or register to post comments
- 1253 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಸೋಮೇಶ್ವರರೆ,
ನೀವು ಹೇಳುವುದು ಸರಿಯೇ ಆದರೂ, ಅದರಲ್ಲಿ ಒಂದು ಹೆಚ್ಚಿನ ಮಾಹಿತಿ ಸೇರಿಸಬಯಸುವೆ.
ನೀವು ಹೇಳಿದಿರಿ:
" ನಾವು ಒಂದು ಸಲ ಬಾನನ್ನು ನೋಡಿದರೆ, ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು
ಡಿಸೆಂಬರ್ ೨೧ ರಂದು ಪ್ರವೇಶಿಸುವುದು ಕಾಣುತ್ತದೆ. ಜನವರಿ ೧೪ ರಂದು ಅಲ್ಲ! ಆದರೆ ನಾವು ಮಕರ
ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುತ್ತಿದ್ದೇವೆ "
ಉತ್ತರಾಯಣ ಡಿಸೆಂಬರ್ ೨೧/೨೨ರಂದು ಬರುತ್ತದೆ ಎನ್ನುವುದು ಸರಿಯಾದ ವಿಚಾರವೇ. ಎಂದರೆ, ಈ ದಿನ ಸೂರ್ಯ ಬಾನಿನಲ್ಲಿ ಅತೀ ದಕ್ಷಿಣ (ಪೂರ್ವ) ದಲ್ಲಿ ಕಾಣುತ್ತಾನೆ. ಈ ದಿನದ ನಂತರ ಉತ್ತರ ಕ್ಕೆ ಚಲಿಸತೊಡಗುತ್ತಾನೆ.
ಆದರೆ, ಡಿಸೆಂಬರ್ ೨೧ರಂದು ನೀವು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವುದನ್ನು ಕಾಣಲಾರಿರಿ.
ಪ್ರಿಸಿಶನ್ ಪ್ರಭಾವದಿಂದ ಮೇಷದ ಮೊದಲ ಬಿಂದು (First point of Aries) ಎಂದು ಏನನ್ನು ಕರೆಯುತ್ತೇವೋ ಅದು ಹಿಂದೆ ಹೋಗಿದೆಯೇ ಹೊರತು, ಮೇಷ ರಾಶಿ (ಕಣ್ಣಿಗೆ ಕಾಣುವಂತೆ) ಹಿಂದೆ ಹೋಗಿಲ್ಲ. ಅದು ಇದ್ದಲ್ಲೇ ಇದೆ. ಈಗ ಆ ಬಿಂದು ಮೀನ ರಾಶಿಯಲ್ಲಿದೆ. ಇನ್ನೂ ಕೆಲವು ನೂರು ವರ್ಷಕ್ಕೆ ಕುಂಭ ರಾಶಿಗೆ ಹೋಗಿರುತ್ತೆ. ಅಲ್ಲವೆ?
ಇದಕ್ಕೆ ಕಾರಣ ಭಾರತೀಯ ಪಂಚಾಂಗ ನಿರಯನ ಆಗಿದ್ದು ಅಯನಾಂಶ (ಪ್ರಿಸಿಶನ್ ) ವನ್ನು, ಈ ಲೆಕ್ಕಾಚಾರದಲ್ಲಿ ಗಣಿಸದೇ ಇರುವುದೇ ಆಗಿದೆ. ಈ ಕಾರಣದಿಂದಲೇ, ಕಾಲಗಳು ( ಋತುಗಳು) ಅವು ಹೇಳುವ ಕಾಲಕ್ಕಿಂತ ಮೊದಲೇ ( ಈಗ ಸುಮಾರು ಮೂರುವಾರ ಮೊದ್ಲಲೇ) ಆರಂಭವಾಗಿಬಿಡುತ್ತವೆ!
-ಹಂಸಾನಂದಿ
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಹಂಸಾನಂದಿಯವರು ಈ ಬಗ್ಗೆ ಮೂಲಭೂತ ಮಾಹಿತಿಯನ್ನೊಳಗೊಂಡ ಒಂದು ಲೇಖನವನ್ನು ಬರೆಯಬಹುದೆ?
- ನಾಸೋ
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಸೋಮೇಶ್ವರರೇ,
ನಿಮ್ಮ ಲೇಖನದ ಶೀರ್ಷಿಕೆಗೆ ಉತ್ತರ : ಖಂಡಿತವಾಗಿಯೂ ತಪ್ಪಲ್ಲ! ಏಕೆಂದರೆ ಅದೇ ಸರಿ ಹಾಗೂ ಅದೊಂದೇ ಸರಿ!
ಏಕೆಂದರೆ ಡಿ.೨೧ ರಂದು ನಡೆಯುವುದು ಸಂಕ್ರಾಂತಿಯಲ್ಲ; ಉತ್ತರಾಯಣ ಮಾತ್ರ! ನಿಮ್ಮ ಪ್ರಶ್ನೆ "ಜ ೧೪ ರಂದು ಉತ್ತರಾಯಣದ ಆಚರಣೆ ಸರಿಯೇ?" ಎಂದಿದ್ದರೆ, ನನ್ನ ಉತ್ತರ "ಖಂಡಿತ ತಪ್ಪು " ಎಂದಿರುತ್ತಿತ್ತು! ವಿವರ ಇಲ್ಲಿದೆ:
ಬಹುಶಃ ನಿಮ್ಮ ಈ ಅಭಿಪ್ರಾಯದ ಹಿಂದೆ ಪೂರ್ವಾಗ್ರಹವಲ್ಲದಿದ್ದರೂ, ಹಲವು ಪಾಶ್ಚಿಮಾತ್ಯ ದೃಷ್ಟಿಕೋನದ ಅದ್ಯಯನವಿದೆ ಎಂಬುದು ವ್ಯಕ್ತವಾಗುತ್ತದೆ. ಏಕೆಂದರೆ ನಿಮ್ಮ ಲೇಖನದಲ್ಲಿ ಕೆಲವು ಮುಖ್ಯ ತಪ್ಪುಗಳು ನುಸುಳಿಬಿಟ್ಟಿವೆ! ಉದಾ:
೧.ಮಕರ ಸಂಕ್ರಾಂತಿಯನ್ನು ಅನಾದಿ ಕಾಲದಿಂದ ಜನವರಿ ೧೪ ರಂದು ಆಚರಿಸುತ್ತೇವೆ.
-> ಖಂಡಿತವಾಗಿ ತಪ್ಪು ಕಲ್ಪನೆ! ಮಕರ ಸಂಕ್ರಾಂತಿಯನ್ನು ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ದಿನದಂದು ಆಚರಿಸುತ್ತೇವೆ. ಜನವರಿಯಿಂದ ಆರಂಭವಾಗುವ ಗ್ರೆಗೋರಿಯನ್ ಕ್ಯಾಲೆಂಡರ್ ಶುರುವಾದದ್ದು ೧೫೮೨ ಫೆಬ್ರವರಿ ೨೪ ರಿಂದ(ಅನಾದಿಯಲ್ಲ)!
೨. ನಾವು ಒಂದು ಸಲ ಬಾನನ್ನು ನೋಡಿದರೆ, ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಡಿಸೆಂಬರ್ ೨೧ ರಂದು ಪ್ರವೇಶಿಸುವುದು ಕಾಣುತ್ತದೆ. ಜನವರಿ ೧೪ ರಂದು ಅಲ್ಲ!
-> ಒಳ್ಳೆ ತಮಾಷೆ! ಕೇವಲ ಒಂದೇ ಸಾರಿ ಏಕೆ? ನೂರುಬಾರಿ ಹೇಗೇ ನಿಂತು ನೋಡಿದರೂ, ಡಿಸೆಂಬರ್ ೨೧ ರಂದು ಸೂರ್ಯ ನಿಮಗೆ ಮಕರದಲ್ಲಿ ಕಾಣುವುದಿಲ್ಲ! ಏಕೆಂದರೆ ಅಂದು ರವಿ ಸಾಮಾನ್ಯವಾಗಿ ಮೂಲಾ ನಕ್ಷತ್ರದ ಹಿನ್ನೆಲೆಯಲ್ಲಿ ಉದಯಿಸುತ್ತಾನೆ! ಅಂದರೆ ನೂರಕ್ಕೆ ನೂರು ಧನುರ್ ರಾಶಿ. ಅಸ್ತಮಯದಲ್ಲೇ ಆಗಲಿ, ಅಕ್ಕಪಕ್ಕದ ಚುಕ್ಕಿಗಳನ್ನೆಲ್ಲಾ ಸೇರಿಸಿ ನೋಡಿದರೆ ನಿಮಗೆ ಕಾಣುವುದು ಧನುರ್ ರಾಶಿಯ ಸ್ವರೂಪವಾದ ಬಿಲ್ಲುಹಿಡಿದ ಅಶ್ವಮಾನವನೇ ಹೊರತು ಮೊಸಳೆಮೈಯಿನ ಆಡಲ್ಲ(ಮಕರ)! ತಿಪ್ಪರಲಾಗ ಹಾಕಿದರೂ ನಾವು ನೀವು ನೋಡಬಯಸುವ ಮಕರರಾಶಿಯ ಹಿನ್ನೆಲೆಯಲ್ಲಿ ರವಿ ಕಾಣುವುದೇ ಗ್ರೆಗೋರಿಯನ್ ಕ್ಯಾಲೆಂಡರಿನ ಜನವರಿ ೧೪/೧೫ ರಂದು!!
೩. ಸಾವಿರಾರು ವರ್ಷಗಳ ಹಿಂದೆ ಸೂರ್ಯನು ಜನವರಿ ೧೪ ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದನು. ಈಗ ಕಾಲ ಬದಲಾಗಿದೆ. ಕೇವಲ ಮಕರ ಸಂಕ್ರಾಂತಿ ಮಾತ್ರವಲ್ಲ ಎಲ್ಲ ಸಂಕ್ರಾಂತಿಗಳ ಘಟನಾ ಕಾಲವೂ ವ್ಯತ್ಯಾಸವಾಗಿದೆ.
--> ಮತ್ತೂ ತಮಾಷೆಯಾಗಿದೆ! ಸ್ವಾಮೀ ಎಲ್ಲ ಸಂಕ್ರಾಂತಿಗಳೂ ಅಂದಂದೇ ನಡೆಯುತ್ತಿವೆ; ಬದಲಾಗುತ್ತಿರುವುದು ನಕ್ಷತ್ರಗಳಲ್ಲ(ನ ಕ್ಷತ್ರಂ -> ಮಿಸುಕಾಡದ). ಬದಲಾಗುತ್ತಿರುವುದು ಪಾಶ್ಚಾತ್ಯ ರಾಶಿಗಣನೆಯ ಆರಂಭದ ಬಿಂದು (ವೆರ್ನಲ್ ಈಕ್ವಿನಾಕ್ಸ್). ಆ ಪದ್ಧತಿಯಲ್ಲಿ ಮೊದಲಿಗೆ ರಾಶಿ ಚಕ್ರವೇನೋ ಅಶ್ವಿನೀ ತಾರೆಯ ಮೇಷದಿಂದಲೇ ಆರಂಭವಾಗುತ್ತಿತ್ತು. ಈಗ ಅವರ ಆರಂಭದ ಬಿಂದು ಕುಂಭದಲ್ಲಿದೆ; ಅವರು ಅದನ್ನೇ ಮೇಷವೆನ್ನುತ್ತಾರೆ - ಅವರಪ್ಪನಾಣೆ ಆ ರಾಶಿ ಮೇಷದಂತೆ ಕಾಣದಿದ್ದರೂ!!!!!
ಪಾಶ್ಚಾತ್ಯರ ರಾಶಿಚಕ್ರ ಜಂಗಮ(ಟ್ರಾಪಿಕಲ್)! ವೇದಾಂಗ ಜ್ಯೋತಿಷದ ರಾಶಿಚಕ್ರ ಸ್ಥಾವರ(ಸೈಡೀರಿಯಲ್) - ಅಂದಿಗೂ ಇಂದಿಗೂ ನಕ್ಷತ್ರಗಳು ಅಲುಗುವವರೆಗೂ! ಇದೇ ಈ ವ್ಯತ್ಯಾಸಕ್ಕೆ ಕಾರಣ. ತುಂಬಾ ಸರಳವಾಗಿ ಹೇಳಿದರೆ:
ಹಿಂದೂ ಗಣನೆ - ಗಡಿಯಾರದ ಮುಳ್ಳುಗಳಂತೆ, ಅದೇ ವೇಳೆಗೆ ಅದೇ ಜಾಗೆಯಲ್ಲಿರುತ್ತದೆ! ನಮಗೆ ಮೇಷವೆಂದರೆ ೧ ಗಂಟೆ, ಮಕರ ಸಂಕ್ರಾಂತಿ ಎಂದರೆ ೧೦ ಗಂಟೆ ತೋರಿಸಿದಂತೆ. ಆದರೆ ಪಾಶ್ಚಾತ್ಯರ ಗಡಿಯಾರ ಪ್ರತಿದಿನಕ್ಕೊಮ್ಮೆ ತನ್ನ 'ಸಂಖ್ಯೆಗಳನ್ನು'(ಮುಳ್ಳನ್ನಲ್ಲ) ಸ್ವಲ್ಪಸ್ವಲ್ಪವೇ ಹಿಂದುಹಿಂದಕ್ಕೆ ದೂಡುತ್ತದೆ! ಕೆಲದಿನಗಳ ನಂತರ ನಮಗೆ ೯ಗಂಟೆಯಾದರೆ, ಅವರಿಗೆ ೧೦ ಗಂಟೆಯಾಗಿರುತ್ತದೆ! ಇದನ್ನು ನೋಡಿ ಅವರು ನಮ್ಮ ಗಣನೆ ತಪ್ಪೆಂದರೆ!? ನಗು ಬುಗ್ಗೆಯಾಗಿ ಉಕ್ಕಿಬರುತ್ತದೆ!
ಇನ್ನೂ ವಿವರಗಳಿಗೆ ಇಲ್ಲಿ ನೋಡಿ: http://en.wikipedia....
ಬಹುಶಃ ಹಂಸಾನಂದಿಯವರು ಈ ಬಗ್ಗೆ ಇನ್ನೊಂದು ಲೇಖನಕ್ಕೆ ಸಿದ್ಧವಾಗಬಹುದು!!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
ಈ ವಿಚಾರವಾಗಿ, ಜಿ.ಟಿ.ನಾರಾಯಣರಾವ್ ಅವರ ಒಂದು ಬರಹ ಪ್ರಜಾವಾಣಿಯಲ್ಲಿ ನೆನ್ನೆ ಪ್ರಕಟವಾಗಿದೆ.
ಎನ್ಕೋಡೆಡ್ ಪೇಜ್
ಇ-ಪೇಪರ್ ಕೊಂಡಿ