ಕ್ರಿಕೆಟ್... ಕ್ರಿಕೆಟ್ಟು... ಕ್ರಿ......ಕೆಟ್ಟು!!!
ಕಾಡಿದ ಲೀ, ಕಾಪಾಡಿದ ಮಳೆ; ಮಾನ ಉಳಿಸಿದ ಮಳೆ; ಮಳೆಯಿಂದ ರದ್ದಾದ ಪಂದ್ಯದಲ್ಲಿ ಮಿಂಚಿದ ಲೀ; ವರವಾದ ವರುಣ; ಪಾಯಿಂಟ್ ಹಂಚಿಕೊಂಡ ಭಾರತ-ಆಸ್ಟ್ರೇಲಿಯಾ; ಮಳೆ ಬರದೇ ಹೋಗಿದ್ದರೆ...! ಹೀಗೆ ನಮ್ಮ ಭಾರತ ತಂಡದ ಬಗ್ಗೆ ದಿನಾಂಕ 04.02.2008 ರಂದು ಪತ್ರಿಕೆಗಳಲ್ಲಿ ಬಂದಿದೆ. 03.02.2008 ರ ಪಂದ್ಯವನ್ನು ನೋಡಿದವರಿಗೆಲ್ಲ ಬೇಸರವಾಗಿರುತ್ತದೆ. ಯಾಕೆಂದರೆ ಭಾರತ ತಂಡವು ವಿಶ್ವ ಚಾಂಪಿಯನ್ನರೊಂದಿಗೆ ಯುವ ಆಟಗಾರರಂತೆ (ಮಕ್ಕಳಂತೆ) ಆಟವಾಡಿದರು. ಒಂದು ವೇಳೆ ಮಳೆ ಬಾರದೇ ಹೋಗಿದ್ದರೆ......!
ಪತ್ರಿಕೆಗಳಲ್ಲಿ ಈ ಸುದ್ದಿ ಬರುವುದಕ್ಕೆ ಕಾರಣವನ್ನು ಕಂಡುಕೊಂಡು ಅದಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನಮ್ಮ ಈಗಿನ ಭಾರತ ತಂಡವನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿರವರು ಮುಂದಿನ ವಿಶ್ವಕಪ್ ಗೆ ಅಂದರೆ 2011ಕ್ಕೆ ದೂರದೃಷ್ಟಿಯಿಂದ ಯುವ ಆಟಗಾರರನ್ನು ತಂಡದಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಯುವ ಆಟಗಾರರನ್ನು ಸುಮಾರು 60 ರಿಂದ 100 ಪಂದ್ಯವಾಡಿಸಬೇಕು ಎಂದು ಸಹ ನುಡಿದಿದ್ದಾರೆ. ಆದರೆ ಯುವ ಆಟಗಾರರು 100 ಪಂದ್ಯವಾಡಿದರೆ ಚೆನ್ನಾಗಿ ಆಡಬಲ್ಲರೇ...? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಮೂಡುವಂತಹುದು.
ಈ ಹಿಂದೆ ನಾಯಕನಾಗಿ ಜವಾಬ್ದಾರಿಯುತ ಆಟವಾಡುತ್ತಾ ಹಿರಿಯ ಬ್ಯಾಟ್ಸ್ ಮನ್ ಗಳು ಹಾಗೂ ಯುವ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡು ಭಾರತ ತಂಡದ "ಗೋಡೆ" ಎಂದು ಹೆಸರುವಾಸಿಯಾದ, ತನ್ನದೇ ಆದ ಶೈಲಿಯಲ್ಲಿ ಆಟವಾಡುತ್ತಾ ಎದುರಾಳಿಯನ್ನು ತಂಡದ ಬೌಲರ್ ಗಳನ್ನು ಚತುರತೆಯಿಂದ ದಂಡಿಸುತ್ತಿದ್ದ, ಇದೆಲ್ಲದರ ನಡುವೆ ತಂಡವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಕರ್ನಾಟಕದ ಹುಡುಗ 'ರಾಹುಲ್ ದ್ರಾವಿಡ್' ರವರು ಸಹ ಎಷ್ಟೊಂದು ಪಂದ್ಯವನ್ನಾಡಿದ್ದರು. ಅವರು ಸಹ ಹಿರಿಯ ಬ್ಯಾಟ್ಸ್ ಮನ್ ಗಳ ಜೊತೆ ಯುವ ಆಟಗಾರರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿದ್ದರ ಫಲವಾಗಿ ಸತತವಾಗಿ ಗೆಲುವನ್ನು ಪಡೆದುಕೊಂಡಿದ್ದಕೆ ಸಾಕ್ಷಿ ಇದೆ. ಅವರು ಭಾರತ ತಂಡದಲ್ಲಿದ್ದಿದ್ದರೆ ಸೋಲಿನ ಸುಳಿಯಲ್ಲಿ ಸಿಲುಕುವ ಪಂದ್ಯವನ್ನು ಸಹ ಗೆಲ್ಲಿಸಿಕೊಡುವಂತ ಚಾತುರ್ಯತೆ ಅವರಲ್ಲಿದೆ. ಆಗ ಇವರು ಬರೀ ಯುವ ಆಟಗಾರರೇ ಇರಲಿ ಎಂದು ಯೋಚಿಸಿದ್ದರೆ, ನಮ್ಮ ತಂಡವು ಏನಾಗುತ್ತಿತ್ತೋ ಎಂದು ಒಮ್ಮೆ ಊಹೆ ಮಾಡಿಕೊಳ್ಳಿ. ನಾನು ಇವರೊಬ್ಬರ ಬಗ್ಗೆಯೇ ಮಾತನಾಡುತ್ತಿಲ್ಲ. ಭಾರತ ತಂಡದ ಹಿರಿಯ ಕ್ರೀಡಾಪಟುಗಳಾದ ಮೊಹಮ್ಮದ್ ಕೈಫ್, ವಿ.ವಿ.ಎಸ್. ಲಕ್ಷ್ಮಣ್ ಇನ್ನೂ ಮುಂತಾದವರುಗಳು ಒಳ್ಳೆಯ ಕ್ರೀಡಾಪಟುಗಳೇ... ಈಗಿನ ಭಾರತ ತಂಡವನ್ನು ವೀಕ್ಷಿಸಿದರೆ ಈಗಿನಿಂದಲೇ ದೂರದೃಷ್ಟಿಯನ್ನು ಇಟ್ಟುಕೊಂಡು ಪಂದ್ಯವನ್ನು ಸೋಲಿನ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ.
ಬಹಳ ಮುಖ್ಯವಾದ ಅಂಶವೆಂದರೆ ನಮ್ಮ ಭಾರತ ತಂಡದ ಕೆಲವು ಪ್ರಮುಖ ಆಟಗಾರರು ಜಾಹೀರಾತಿನ ಕಡೆ ಮನವೊಲಿದಂತೆ ಕಾಣುತ್ತಿದೆ. ಕೆಲವು ಆಟಗಾರರು ಕ್ರೀಡೆಯ ಕಡೆ ಹೆಚ್ಚು ಗಮನವನ್ನು ಹರಿಸದೇ ಜಾಹೀರಾತಿನಲ್ಲೇ ಮುಳುಗುತ್ತಿದ್ದಾರೆ ಅನ್ನಿಸುತ್ತಿದೆ.
ಈಗಿನ ಭಾರತ ತಂಡದಲ್ಲಿ ಕೆಲವು ಪ್ರಮುಖ ಬ್ಯಾಟ್ಸ್ ಮನ್ ಗಳು (ಹಿರಿಯ ಆಟಗಾರರು) ಲಯ ಕಳೆದುಕೊಳ್ಳುತ್ತಿದ್ದರೆ, ಯುವ ಬೌಲರ್ ಗಳು ಲಯವನ್ನು ಕಂಡುಕೊಳ್ಳುತ್ತಿದ್ದಾರೆ. ವಿಶ್ವ ಚಾಂಪಿಯನ್ನರುಗಳಾದ ಆಸ್ಟ್ರೇಲಿಯಾ ತಂಡದಲ್ಲಿ ರಿಕಿ ಪಾಂಟಿಂಗ್, ಗಿಲ್ ಕ್ರಿಸ್ಟ್, ಲೀ, ಹೇಡನ್ ರಂತ ಹಿರಿಯ ಆಟಗಾರರ ಜೊತೆ ಕ್ಲಾರ್ಕ್, ಜಾನ್ಸನ್ ರಂತ ಕಿರಿಯ ಆಟಗಾರರನ್ನು ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಲುತ್ತಾ ಆಸ್ಟ್ರೇಲಿಯಾ ತಂಡವು ತನ್ನ ಸ್ಥಾನವನ್ನು (ಸಂಖ್ಯೆ 1) ಭದ್ರಪಡಿಸಿಕೊಳ್ಳುತ್ತಿದೆ, ಭದ್ರಪಡಿಸಿಕೊಳ್ಳುತ್ತಾ ಬಂದಿದೆ. ಅಲ್ಲದೇ ಇನ್ನೂ ಯಾವುದೇ ತಂಡದಲ್ಲಿಯೇ ನೋಡಿ, ಶ್ರೀಲಂಕಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಈ ತಂಡದಲ್ಲಿ ಹಿರಿಯ ಆಟಗಾರರ ಜೊತೆ ಕಿರಿಯ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಭಾರತ ತಂಡದಲ್ಲಿ ಮಾತ್ರ ಯುವ ಆಟಗಾರರಿಗೆ ಪ್ರಾಮುಖ್ಯತೆ ಕೊಟ್ಟಿರುವುದು (ಬಿಸಿಸಿಐ ಮತ್ತು ಧೋನಿ) ಸರಿಯಿಲ್ಲವೆಂದು ಅನ್ನಿಸುತ್ತಿದೆ ಅಲ್ಲವೇ...?
ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನಮ್ಮ ತಂಡಕ್ಕೂ ಸಹ ಹಿರಿಯ ಆಟಗಾರರನ್ನು ಸೇರ್ಪಡೆ ಮಾಡಿಕೊಂಡು ಪಂದ್ಯವನ್ನಾಡಿಸಿದರೆ ಎದುರಾಳಿ ತಂಡಕ್ಕೆ ಜಯ "ಕಬ್ಬಿಣದ ಕಡಲೆ" ಯಾಗುವುದಂತೂ ನಿಜ. ಇದೆಲ್ಲ ಗಮನದಲ್ಲಿರಿಸಿಕೊಂಡು ತಂಡದಲ್ಲಿ ಬದಲಾವಣೆ ಮಾಡಿದರೆ ಜಯಲಕ್ಷ್ಮಿ ಭಾರತ ತಂಡಕ್ಕೆ ಒಲಿದು, ಆಸ್ಟ್ರೇಲಿಯಾ (ವಿಶ್ವ ಚಾಂಪಿಯನ್ನರು) ಹಿಂದಿಕ್ಕಿ ಭಾರತ ತಂಡವು ಆ ಸ್ಥಾನದಲ್ಲಿ ಕೂರಲೆಂದು ಹಾರೈಸೋಣ....
![]()

- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕ್ರಿಕೆಟ್... ಕ್ರಿಕೆಟ್ಟು... ಕ್ರಿ......ಕೆಟ್ಟು!!!
ಈಗಿನಿಂದಲೇ ದೂರದೃಷ್ಟಿ ಎಂಬುದರ ಅರ್ಥವೇನು? ವರ್ಲ್ಡ್ ಕಪ್ ಶುರುವಾದಾಗ ದೂರ ದೃಷ್ಟಿ ಹೊಂದಲು ಸಾಧ್ಯವೇ? ಬದಲಾವಣೆಗಳಿಗೆ ಸ್ವಲ್ಪ ಸಮಯ ಕೊಟ್ಟು ನೋಡಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com