ಸಲ್ಲೇಖನ
ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾರ್ಗೆಂದು . . .
ಮುಂದೆ ನೆನಪಿಗೆ ಬರುತ್ತಿಲ್ಲ.
ಯಾರಾದರೂ ಪೂರ್ಣಗೊಳಿಸಿ.
ಹಾಗೆಯೇ ಅರ್ಥ ತಿಳಿಸಿ.
ಒಂದು ಸಣ್ಣ ಕ್ಲೂ: ಇದು ಶ್ರವಣಬೆಳಗೊಳದ ಬೆಟ್ಟದ ಮೇಲಿನ ಒಂದು ಸ್ವಹತ್ಯಾ ಘೋಷಣೆ.
ಪ್ರೀತಿಯಿಂದ
ಸಿ ಮರಿಜೋಸೆಫ್

- Login or register to post comments
- 482 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಸಲ್ಲೇಖನ
ಸುರಚಾಪಂಬೋಲೆ ವಿದ್ದುಲ್ಲತೆಗಳ ತೆಱವೋಲ್ಮಂಜುವೋಲ್ತೋಱಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ನಿಲ್ಲವಾರ್ಗಂ
ಪರಮಾರ್ತ್ಥಂ ಮೆಚ್ಚೆನಾನೀ ಧರಣಿಯುಳಿರವಾನೆನ್ದು ಸನ್ಯಾಸನಂ ಗೆ-
ಯ್ದುರುಸತ್ವನ್ನನ್ದಿಸೇನಪ್ರವರ ಮುನಿವರನ್ದೇವಲೋಕಕ್ಕೆ ಸಂದಾನ್||
ಇದೊಂದು ಪೂರ್ವದ ಹೞಗನ್ನಡದ ಪದ್ಯ
ಇದಱರ್ಥ:
ಸುರಚಾಪಂ +ಪೋಲೆ= ಕಾಮನ ಬಿಲ್ಲಿನಂತೆ, ವಿದ್ದ್ಯುಲ್ಲತೆಗಳ ತೆಱವೋಲ್=ಮಿಂಚಿನ ಬಳ್ಳಿಯ ತೆಱದಂತೆ ಬೇಗಂ =ಬೇಗ ತೋಱಿ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್, ಪರಮಾರ್ತ್ಥಂ= ರೂಪ ಲೀಲೆ ಹಣ ಐಶ್ವರ್ಯದ ರಾಶಿಗಳು ಹಾಗೂ ವಿಶೇಷ ಸಂಪತ್ತುಗಳು ಪಿರಿಗುಂ= ಬಹಳ ಕಾಲದವರೆಗೆ ಆರ್ಗಂ=ಯಾರಿಗೂ ನಿಲ್ಲವು=ನಿಲ್ಲುವುದಿಲ್ಲ. ಆನ್= ನಾನು ಈ ಧರಣಿಯುಳ್= ಈ ಭೂಮಿಯಲ್ಲಿ ಇರವಾನ್=ಇರುವುದನ್ನು(ಇರುವಿಕೆಯನ್ನು) ಮೆಚ್ಚೆನ್=ಇಷ್ಟಪಡುವುದಿಲ್ಲ. ಎನ್ದು=ಎಂದು ಉರುಸತ್ವನ್=ಮಹಾಶಯನಾದ ನನ್ದಿಸೇನಪ್ರವರ ಮುನಿವರನ್= ನಂದಿಸೇನ ಎಂಬ ಹೆಸರಿನ ಮಹಾಮುನಿಯು ದೇವಲೋಕಕ್ಕೆ ಸಂದಾನ್=ಸೇರಿದನು.
ಉ: ಸಲ್ಲೇಖನ
ಉತ್ತರ ಹೇಳುವವರು ಒಬ್ಬರಾದರೂ ಸಿಕ್ಕಿದರಲ್ಲ, ಅದೇ ಸಂತೋಷ!!
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಲ್ಲೇಖನ
ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ ಶಾಸನಸಂಗ್ರಹಪುಸ್ತಕದಲ್ಲಿ ಈ ಪದ್ಯದ ಪೂರ್ಣಪಾಠ ಸಿಕ್ಕಿತು. ಆಮೇಲೆ ಇದಱ ಅರ್ಥವನ್ನು ಹೀಗೆ ಹೇೞಬಹುದೆಂದು ಪ್ರೊ. ಜಿ ವೆಂಕಟಸುಬ್ಬಯ್ಯನವರೊಡನೆ ವಿಚಾರಿಸಿ ಬರೆದೆ.
ಉ: ಸಲ್ಲೇಖನ
ಯಪ್ಪಾ, ಈ ಎಳೆಯಲ್ಲಿ ಸೀಮರಿಜೋಸೇಫ್ ಮತ್ತು ಕನ್ನಡಕಂದರಿಗೆ ಹೇಗೆ "ನನ್ನಿ" ಹೇಳಬೇಕೋ ನನಗೆ ತಿಳಿದಿಲ್ಲ. ಅದೇನ್ ಘಟಾನುಘಟಿಗಳಪ್ಪಾ ಇವರಿಬ್ರೂ...!!!!
ಮರಿಜೋಸೆಫ್ - ತುಂಬಾ ಚೇಷ್ಟೆಪುಟ್ಟ ನೀವು. "ಸಲ್ಲೇಖನ!!!!!!" ಬಳಕೆಯನ್ನು ಸಖತ್ತಾಗಿ ಮಾಡಿದ್ದೀರಾ
ಕನ್ನಡಕಂದ - ತುಂಬಾ ಸಂತೋಷ ಆಗತ್ತೆ, ಕಣ್ರೀ, ನೀವು ಪದ್ಯವನ್ನು ಬಿಡಿಸಿದ ರೀತಿ. ಕುತೂಹಲಕ್ಕೆ ಕೇಳ್ತಾ ಇದ್ದೀನಿ. ಇದೆಲ್ಲ ಯಾವಾಗ ಓದಿದ್ರೀ ನೀವು ?
ಸಾಯೋವಾಗ್ಲೂ ಕನ್ನಡಜನರು ಹೀಗೆ ಕವನ ಗಿವನ ಗೀಚ್ತಾ ಇದ್ರು ಅಂದ್ರೆ!!!!!! "ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್"!!!!!! ಸಾರ್ಥಕವಾಯಿತು.
ಉ: ಸಲ್ಲೇಖನ
ನನಗೆ ನನ್ನ ೮ನೇ ತರಗತಿಯಿಂದಲೇ ಕನ್ನಡ ಅದಱಲ್ಲೂ ಹೞಗನ್ನಡ ತುಂಬಾ ಇಷ್ಟ ಹಾಗೂ ತುಂಬಾ ಸವಾಲಿನ ವಿಷಯ. ನನ್ನ ಪ್ರಥಮ ಭಾಷೆ ಪ್ರೌಢಶಾಲೆಯಲ್ಲಿ ಸಂಸ್ಕೃತವಾಗಿದ್ದರೂ ಓದುತ್ತಿದ್ದೆ ಹಾಗೂ ಗೆಳೆಯರೊಡನೆ ವಿಮರ್ಶಿಸುತ್ತಿದ್ದೆ. ಬೆಳೆದಂತೆ ಹೞಗನ್ನಡದಲ್ಲಿ ಆಸಕ್ತಿಯಿರುವವರ ಸಂಖ್ಯೆ ಕಡಿಮೆಯಿರುವುದನ್ನು ಕಂಡಿದ್ದೇನೆ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ವಿಚಾರಕ್ಕೆ ಜನ ಸಿಗುತ್ತಾರೆ. ಅಂದ ಹಾಗೆ ಭರತೇಶವೈಭವದ ಪ್ರತಿ ಯಾವಾಗ ಕಳಿಸುತ್ತೀರಿ. ರತ್ನಾಕರವರ್ಣಿ ತನ್ನ ಭರತೇಶವೈಭವದ ಪ್ರಾರಂಭದಲ್ಲಿ ಹೀಗನ್ನುತ್ತಾನೆ.
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯ ಮಂಚಿದಿಯೆನೆ ತೆಲುಗ-
ರಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ
ಎನ್ನುತ್ತಾನೆ ತನ್ನ ಭರತೇಶವೈಭವ ಕುಱಿತು. ಅದು ಸತ್ಯ ಕೂಡ.
ಉ: ಸಲ್ಲೇಖನ
ಕನ್ನಡಕಂದರೆ, ನಿಮ್ಮ ಆಸಕ್ತಿಯ ನನಗೆ ತುಂಬಾ ಸಂತೋಷವನ್ನುಂಟುಮಾಡುತ್ತಿದೆ. ನೀವು ಉದಾಹರಿಸಿದ ಪದ್ಯ ಇಲ್ಲಿದೆ. ನೋಡಿ.
ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು ?
ಉ: ಸಲ್ಲೇಖನ
ಪಿರಿಗುಂ ಶಬ್ದಕ್ಕೆ ನಾಶವಾಗುತ್ತದೆಯೇ ಎಂದು ಅರ್ಥವಿದೆಯೇ ಎಂದು ವಿಚಾರಿಸಿ ಇನ್ನೂ ಸುಸ್ಪಷ್ಟ ಉತ್ತರೆ ಹೇೞುತ್ತೇನೆ. ಹೞಗನ್ನಡ ನಿಘಂಟು ಹಾಗೂ ಸಮಗ್ರ ಕನ್ನಡ ನಿಘಂಟು ನನ್ನ ಬೞಿ ಈಗ ಇಲ್ಲ. ನೋಡಿ ಹೇೞುತ್ತೇನೆ.
ಉ: ಸಲ್ಲೇಖನ
ಪಿರಿಗುಂ ಬೇಗಂ= ಬಹಳ ಕಾಲದವರೆಗೆ ಎಂದು ಅರ್ಥ ಮಾಡಬಹುದು
ಉ: ಸಲ್ಲೇಖನ
ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ಮಂಜುವೋಲ್ತೋಱಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ನಿಲ್ಲವಾರ್ಗಂ
ಪರಮಾರ್ತ್ಥಂ ಮೆಚ್ಚೆನಾನೀ ಧರಣಿಯುಳಿರವಾನೆನ್ದು ಸನ್ಯಾಸನಂ ಗೆ-
ಯ್ದುರುಸತ್ವನ್ನನ್ದಿಸೇನಪ್ರವರ ಮುನಿವರನ್ದೇವಲೋಕಕ್ಕೆ ಸಂದಾನ್||
ಇದು ಸರಿಯಾದ ಪಾಠ. ಹಾಗೆಯೆ ಸಂನ್ಯಾಸನಂ ಗೆಯ್ದು= ಸನ್ಯಾಸಿ ಜೀವನವನ್ನು ಮಾಡಿ ಎಂಬ ಅರ್ಥವನ್ನು ಈ ಹಿಂದೆ ಅರ್ಥ ಹೇೞುವಾಗ ಬಿಟ್ಟಿದ್ದೆ. ದಯವಿಟ್ಟು ಸೇರಿಸಿಕೊಳ್ಳಿ.
ಉ: ಸಲ್ಲೇಖನ
ಇದಱರ್ಥ:
ಸುರಚಾಪಂ +ಪೋಲೆ= ಕಾಮನ ಬಿಲ್ಲಿನಂತೆ, ವಿದ್ಯುಲ್ಲತೆಗಳ ತೆಱವೋಲ್=ಮಿಂಚಿನ ಬಳ್ಳಿಯ ತೆಱದಂತೆ ತೋಱಿ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್, ಪರಮಾರ್ತ್ಥಂ= ರೂಪ ಲೀಲೆ ಹಣ ಐಶ್ವರ್ಯದ ರಾಶಿಗಳು ಹಾಗೂ ವಿಶೇಷ ಸಂಪತ್ತುಗಳು ಬೇಗಂ ಪಿರಿಗುಂ= ಬಹಳ ಕಾಲದವರೆಗೆ ಆರ್ಗಂ=ಯಾರಿಗೂ ನಿಲ್ಲವು=ನಿಲ್ಲುವುದಿಲ್ಲ. ಆನ್= ನಾನು ಈ ಧರಣಿಯುಳ್= ಈ ಭೂಮಿಯಲ್ಲಿ ಇರವಾನ್=ಇರುವುದನ್ನು(ಇರುವಿಕೆಯನ್ನು) ಮೆಚ್ಚೆನ್=ಇಷ್ಟಪಡುವುದಿಲ್ಲ. ಎನ್ದು=ಎಂದು ಸಂನ್ಯಾಸನಂ ಗೆಯ್ದು=ಸನ್ಯಾಸೀಜೀವನವನ್ನು ಮಾಡಿ ಉರುಸತ್ವನ್=ಮಹಾಶಯನಾದ ನನ್ದಿಸೇನಪ್ರವರ ಮುನಿವರನ್= ನಂದಿಸೇನ ಎಂಬ ಹೆಸರಿನ ಮಹಾಮುನಿಯು ದೇವಲೋಕಕ್ಕೆ ಸಂದಾನ್=ಸೇರಿದನು.
ಉ: ಸಲ್ಲೇಖನ
ಮತ್ತೆ ಮಂಜುವೋಲ್=ಮಂಜಿನಂತೆ ಬಿಟ್ಟು ಹೋಯ್ತು ದಯವಿಟ್ಟು ಸೇರಿಸಿಕೊಳ್ಳಿ.
ಉ: ಸಲ್ಲೇಖನ
ಇದು ಮಹಾಸ್ರಗ್ಧರಾವೃತ್ತದಲ್ಲಿದೆ.
ಉ: ಸಲ್ಲೇಖನ
ನೀವು ತೆಗೆದುಕೊಂಡ ಶ್ರಮಕ್ಕೆ ತುಂಬಾ ಧನ್ಯವಾದಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಲ್ಲೇಖನ
ಈಗ ಹೀಗೊಂದು ಸುಯಿಸಯ್ಡ್ ನೋಟ್ ಬಿಟ್ರೇ ಹಿಂಗಿರತ್ದೆ..
ಆಂಗೊಂದೆನೆನ್ನಂ.ಉವರ ವೊಣೆಯಿಲ್ಲಂಮಿಲ್ಲಿ