ಶಂಕರ ಮತ್ತು ಅಲ್ಲಮ ಪ್ರಭು
ಎನ್.ಬೋರಲಿಂಗಯ್ಯ ಎಂಬುವರು ತಮ್ಮ "ವಚನ ಕಟ್ಟಿದ ಅಲ್ಲಮ" ಎಂಬ ಪುಸ್ತಕದಲ್ಲಿ, ಶಂಕರಾಚಾರ್ಯನನ್ನು ಉದ್ಧರಿಸಿರುವ ಅಲ್ಲಮಪ್ರಭುವಿನ ಕೆಲವು ವಚನಗಳನ್ನು ಪ್ರಸ್ತಾಪಿಸಿದ್ದಾರೆ. ಆ ಪುಸ್ತಕದ, "ಆತ್ಮದರ್ಶನದ ಆತ್ಯಂತಿಕತೆ" ಎಂಬ ಅಧ್ಯಾಯದಲ್ಲಿ, 'ಶಂಕರನದ್ದು ಅನುಭವವಿಲ್ಲದ ಜ್ಞಾನ ಎಂದು ಅಲ್ಲಮಪ್ರಭುವು ವ್ಯಂಗ್ಯವಾಡಿದ್ದಾನೆ' ಎಂದಿದ್ದಾರೆ.
-------------------- ಎಸಳು (excerpts) ಶುರು -----------------
........ಈ ವಚನ ಕೇಳಿ-
ಅದ್ವೈತನ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು
ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು
ಓದಿತ್ತು ಅಗಣಿತ ಪುರಾಣವ, ಅನಾಮಯ ಶಾಸ್ತ್ರವನು,
ಅನುಪಮ ವೇದವೆಂದು.-
ನಿಃಸ್ಥಲವ ಸ್ಥಲವಿಡಲು,
ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ !
ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ
ಸರ್ವಾಂಗ ಲಿಂಗವು ! (೫೯೭)
...........................'ಅದ್ವೈತನ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು' ಇಲ್ಲಿಯ 'ಅದ್ವೈತನ' ಎಂಬ ಪದ ಪ್ರಯೋಗ ಗಮನಾರ್ಹ. ತತ್ವವೊಂದನ್ನು ವ್ಯಕ್ತಿಯಾಗಿಸುತ್ತಿದ್ದಾನೆ ಪ್ರಭು. ಒಂದು ವೇಳೆ ಯಾರನ್ನಾದರೂ ಮನಸ್ಸಿನಲ್ಲಿಟ್ಟುಕೊಂಡು ಈ ವಚನ ರಚನೆಯಾಗಿದೆ ಎನ್ನುವಾದರೆ ಇದು ಶಾಂಕರಾದ್ವೈತಕ್ಕೆ ಸಂಬಂಧಿಸಿದ ವಿಚಾರ ಎನಿಸುತ್ತದೆ. ಶಂಕರನನ್ನು ಕುರಿತಂತೆ ಪ್ರಭುವಿನ ವಚನಗಳಲ್ಲಿ ಅಲ್ಲಲ್ಲಿ ಪ್ರಸ್ತಾಪಗಳಿವೆ. ಶಂಕರ ಒಬ್ಬ ಕಾಶ್ಮೀರ ಶೈವ ಶಾಖೆಯ ಗಂಭೀರ ಟೀಕಾಕಾರ ಎಂಬುದನ್ನು ಯಾರೂ ಬಿಟ್ಟುಕೊಡುವಂತಿಲ್ಲ. ಅವನನ್ನು ಬಿಟ್ಟು ಅದ್ವೈತದ ವಿಷಯ ಮಾತಾಡುವುದೂ ಸಾಧ್ಯವಿಲ್ಲ. ಹಾಗೆ ನೋಡಿದರೆ ಅದ್ವೈತದ ವಿಷಯ ಬಂದಾಗಲೆಲ್ಲಾ ಅಲ್ಲಮನ ಜಗಳವಿರುವುದು ಶಂಕರಾಚಾರ್ಯನ ಜತೆಯಲ್ಲಿಯೆ. ಶಂಕರನ ತಿಳಿವಿಳಿಕೆಯೇನಿದ್ದರೂ ಓದಿನದ್ದು, ಅನುಭವದ್ದಲ್ಲ ಎನ್ನುತ್ತಾನೆ ಪ್ರಭು. ಈ ವಚನ ಆ ವಿಚಾರವನ್ನು ನೇರವಾಗಿಯೇ ಪ್ರಸ್ತಾಪಿಸುತ್ತದೆ.
ಈ ವಚನದ ಮೊದಲ ಅರ್ಥ ಗಿಳಿಯನ್ನು ಕೇಂದ್ರದಲ್ಲಿಟ್ಟುಕೊಂಡ ಒಂದು ಅದ್ಭುತ ಪ್ರತಿಮೆ. ಓದಿದ ಜ್ಞಾನ ಅನುಭವವಲ್ಲ. ಗಿಳಿಯಂತೆ ಕಲಿತ ಪಾಠ. ಅದು ಭೂತ, ಭವಿಷ್ಯ. ವರ್ತಮಾನಗಳ ಕುರಿತ, 'ಕೊರೆಕೂಳು'(ತಂಗಳು). ಕೊರೆ ಎನ್ನುವ ಶಬ್ದ ಏಕಕಾಲದಲ್ಲಿಯೇ ಚಳಿಯೂ ಆಗುತ್ತದೆ. ಅರೆಬರೆಯೂ ಆಗುತ್ತದೆ. ಈ ಹಿನ್ನೆಲೆಯಿಂದ ವಚನದ 'ಅದ್ವೈತನೆಂಬ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣವಸ ಅನಾಮಯ ಶಾಸ್ತ್ರವ, ಅನುಪಮ ವೇದವೆಂದು..' ಎಂಬಲ್ಲಿಯ ಕಟುವ್ಯಂಗ್ಯ ಅರ್ಥವಾಗುತ್ತದೆ. ಈ ವಾಕ್ಯ ಪೂರ್ಣಗೊಂಡಿಲ್ಲದಿರುವುದನ್ನೂ ಗಮನಿಸಬೇಕು. ಇದು ಗಿಳಿಯ ಓದಿನ ವಿಸ್ತಾರದ ಅಪಾರತೆಯನ್ನು ಸೂಚಿಸುತ್ತಿರುವ ಸಮಯದಲ್ಲಿಯೇ ಅದಿನ್ನೂ ಮುಂದುವರಿಯುತ್ತಿರುವುದನ್ನೂ ಹೇಳುತ್ತಿರುವಂತಿದೆ. ಶಿವತತ್ವದಂತೆ ಮಾಯಾತತ್ವನ್ನೂ ಒಂದೇ ರೀತಿಯಲ್ಲಿ ಸ್ಥಿರೀಕರಿಸುತ್ತಿರುವುದನ್ನು ಪ್ರಭು ಓದಿನ ಫಲ ಎನ್ನುತ್ತಿದ್ದಾನೆ. ಅನುಭವದ ಫಲವಾಗಿದ್ದಿದ್ದರೆ ಅದು ಬೇರೆಯಾಗಿರುತ್ತಿತ್ತು.
-------------------- ಎಸಳು ಕೊನೆ -----------------
ಪುಸ್ತಕ - ವಚನ ಕಟ್ಟಿದ ಅಲ್ಲಮ (ವಚನ ವಿವೇಚನೆ)
ಬರಹ - ಎನ್.ಬೋರಲಿಂಗಯ್ಯ
ಮುನ್ನುಡಿ - ಲಿಂಗದೇವರು ಹಳೆಮನೆ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು.
ಅಚ್ಚು - ೬-೧೨-೨೦೦೫
ಬೆಳಗು - ದಾರಿದೀಪ ಪ್ರಕಾಶನ
ದಾರಿದೀಪ ಸಂಶೋಧನಾ ಕೇಂದ್ರ
೧೧೪; ಬೋಗಾದಿ ಬಡಾವಣೆ(ದಕ್ಷಿಣ)
ಮೈಸೂರು - ೫೭೦೦೨೬

- Login or register to post comments
- 472 hits
- Email this forum





RSS:
ಉ: ಶಂಕರ ಮತ್ತು ಅಲ್ಲಮ ಪ್ರಭು
ಇಲ್ಲಿ ಶಂಕರಾಚಾರ್ಯನ ಬಗ್ಗೆ ವ್ಯಂಗ್ಯ ನನಗಂತೂ ಕಾಣುತ್ತಿಲ್ಲ! ಶರಣರ ಚಿಂತನಾ ರೀತಿಯ ಹಿನ್ನಲೆಯಿಲ್ಲದೆ ಕೇವಲ ದ್ವೈತಿ-ಅದ್ವೈತಿಗಳ ಜಗಳವನ್ನೇ ಕಂಡು ಕೇಳೇ ಬೆಳೆದಿರಿವ ನಮಗೆ ವ್ಯಂಗ- ಮೂದಲಿಕೆ ಕಂಡರೆ ಆಶರ್ಯವಿಲ್ಲ!!
>>ಅದ್ವೈತನ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು
ಇಲ್ಲಿ ಅದ್ವೈತನ ಅಂದರೆ ಶಂಕರಾಚಾರ್ಯ ಅಲ್ಲ. ಶರಣ ಪರಂಪರೆ ಹೊಳಗೆ ಕಾಲಿಟ್ಟ ... ಪೂರ್ವದಲ್ಲಿ ಅದ್ವೈತಿಯಾಗಿದ್ದವ ಎಂದು .
ಸವಿತೃ
ಉ: ಶಂಕರ ಮತ್ತು ಅಲ್ಲಮ ಪ್ರಭು
>ಅದ್ವೈತನ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು
ಅದ್ವೈತನ........ತನ್ನ ಮೂಲ ಅದ್ವೈತ ವಾಸನೆಯನ್ನು ಬಿಡದ ಶರಣ
ಕರಸ್ಥಲ.....ಇಷ್ಟ ಲಿಂಗ ದ ಬಗ್ಗೆ ಓದಿಕೊಂಡಿದ್ದರೆ ಇದನ್ನುಅರಿಯಬಹುದು... ಎರಡು ವಾಕ್ಯಗಳಲ್ಲಿ ವಿವರಿಸುವುದು ಕಷ್ಟ.
ಅನಂತ.......ಘನ = ಪರಬ್ರಹ್ಮ
ಗಿಳಿ .... ಹೇಗೆ ಹಂಸ ವನ್ನು ಪರಬ್ರಹ್ಮ ಕ್ಕೆ ಹೊಲಿಸಿದ್ದಾರೋ ಹಾಗೆಯೇ ಬಹಳಷ್ಟು ಸಾಹಿತ್ಯದಲ್ಲಿ ಗಿಳಿಯನ್ನು ಆತ್ಮಕ್ಕೆ ರೂಪಕವಾಗಿ ಬಳಸಿದ್ದಾರೆ. ಇಲ್ಲಿ ಗಿಳಿಯೆಂದರೆ ಘನ ವೆಂದು ಅರಿಯಬಹುದು.
ಈ ವಚನದ ಅರ್ಥ ಇಷ್ಟೇ .... ಏನೆಲ್ಲ ಓದಿ ಯಾಕೆ ತಲೆ ಕೆಡಿಸಿಕೊಂಡು ಕೂಚು ಭಟ್ಟ ರಾಗುತೀರಿ... ಆ ದೇವರು .. ಈ ಮಂತ್ರ.. ಆ ಯಜ್ಞ... ಈ ವ್ರತ ಅಂತ ಅಲೆಯುತೀರಿ... ಸುಮ್ನೆ ಏಕದೆವೊಪಸಕಾನಾಗಿ .. ಶರನನಾಗಿ ಎಂದು!!..
ಇದು ನನ್ನ ಮನಸ್ಸಿಗೆ ಈ ಕ್ಷಣಕ್ಕೆ ಹೊಳೆದಂತೆ!!... ಅಲ್ಲದೆ ಈ ವಚನದ ಹಿಂದು ಮುಂದು ನನಗೆ ತಿಳಿದಿಲ್ಲ.
ಸವಿತೃ
ಉ: ಶಂಕರ ಮತ್ತು ಅಲ್ಲಮ ಪ್ರಭು
ವೈಭವ, ಖಂಡಿತ ಓದುವೆ. ಅಂದ ಹಾಗೆ, ಆ ಪುಸ್ತಕ ನೆಟ್ಟಿನಲ್ಲಿ ಎಲ್ಲಿಯಾದರೂ ಇದ್ದರೆ ಕೊಂಡಿಯನ್ನು ನೀಡು.
ಸವಿತೃ, ನಿಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ನನ್ನಿ. ಅಲ್ಲಮನ ಬಗ್ಗೆ ಹಾಗು ಆತನ ವಚನಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲವಿದೆ. ನನ್ನ ಬಳಿ ಇದ್ದದ್ದು ಇದೊಂದೇ ಪುಸ್ತಕದ. ಆ ಪುಸ್ತದಲ್ಲಿ ಏನಿತ್ತೋ ಅದನ್ನು ಯಥಾವತ್ ಹಾಕಿದ್ದೇನೆ. ಅಷ್ಟೇ.
ಉ: ಶಂಕರ ಮತ್ತು ಅಲ್ಲಮ ಪ್ರಭು
ಸುನಿಲ,
ಮಿಂಬಲೆಯಲ್ಲಿ ನನಗೆ ಸಿಕ್ಕಿಲ್ಲ. ಅಂಕಿತದಲ್ಲಿ ಈ ಹೊತ್ತಿಗೆಯಿದೆ. ಅಲ್ಲಿಂದಲೆ ಕೊಂಡು ಓದಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶಂಕರ ಮತ್ತು ಅಲ್ಲಮ ಪ್ರಭು
ಸುನಿಲ,
ಡಿ.ಆರ್. ನಾಗರಾಜ್ ರವರ 'ಅಲ್ಲಮ ಪ್ರಬು ಮತ್ತು ಶಯ್ವ ಪ್ರತಿಬೆ' ಓದಪ್ಪ. ನಿನಗೆ ಇದರ ಬಗ್ಗೆ ಹೆಚ್ಚು ತಿಳಿಯುತ್ತದೆ. ಅಲ್ಲೂ ಶಂಕರ ಮತ್ತು ಅಲ್ಲಮರನ್ನು ಹೋಲಿಸಿ ನೋಡಿ ವಿಚಾರಗಳನ್ನು ಹೇಳಿದ್ದಾರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶಂಕರ ಮತ್ತು ಅಲ್ಲಮ ಪ್ರಭು
ನನಗೆ ಅಲ್ಲಮಪ್ರಭುವಿನ ತತ್ವಗಳ ಬಗ್ಗೆ ಏನೇನೂ ಪರಿಚಯವಿಲ್ಲ. ಆದರೆ ಈ ರೀತಿಯ ವಿಮರ್ಶೆಗಳಿಂದ ಕನ್ನಡದ ಸಮಾಜದ ಮೇಲೆ ಆಗುವ ಪರಿಣಾಮ ನೋಡಿ. ಕರ್ನಾಟಕದಲ್ಲಿ ಶಂಕರನ ಅನುಯಾಯಿಗಳೂ ಇದ್ದಾರೆ, ಅಲ್ಲಮ ಪ್ರಭುವಿನ ಅನುಯಾಯಿಗಳೂ ಇದ್ದಾರೆ. ಇಂತಹ ವಿಮರ್ಶೆಗಳಿಂದ ಅವರಿಬ್ಬರಿಗೂ ತಂದಿಟ್ಟ ಹಾಗೆ ಆಗುವುದಿಲ್ಲವೇ ? ತಂದಿಟ್ಟು ತಮಾಶೆ ನೋಡೋದು ಅಂದರೆ ಇದೇ ಇರಬೇಕು.
ಇಲ್ಲಿ ಅಲ್ಲಮಪ್ರಭು ಬರೆದಿರೋದೇ ಒಂದು, ವಿಮರ್ಶಕರು ಹೇಳುತ್ತಿರುವುದೇ ಮತ್ತೊಂದು.
ಉ: ಶಂಕರ ಮತ್ತು ಅಲ್ಲಮ ಪ್ರಭು
ಸುನಿಲ,
ಅದಕ್ಕೆ ನಾನು ಹೇಳಿದ್ದು ನಿನಗೆ ದಿಟವಾಗಲೂ ಅವರಿಬ್ಬರನ್ನು ಹೋಲಿಸಿ ವಿಚಾರಗಳನ್ನು ಕಡೆಯುವ ಬಯಕೆಯಿದ್ದರೆ ಡಿ.ಆರ್.ನಾಗರಾಜರ ಹೊತ್ತಿಗೆ ಓದಪ್ಪ ಅಂತ. ಅದರಲ್ಲಿ ನಾಗರಾಜರು ತುಂಬ ಆಳವಾಗಿ ಬರೆದಿದ್ದಾರೆ.
ಎಲ್ಲರೂ ಎಲ್ಲಾನೂ ಸರಿಯಾಗಿ ಹೇಳಿರಲ್ಲ. ಕೆಲವು ಕಡೆ ಅಲ್ಲಮ ಸರಿಯಿರಬಹುದು ಇನ್ನುವ ಕೆಲವು ಕಡೆ ಶಂಕರರು.
ಒಳ್ಳೇದು ಅಂತ ಅನ್ನಿಸಿದರೆ/ತೋರಿಬಂದರೆ(ಪ್ರೂವ್) ವಿಚಾರಗಳು ಎಲ್ಲಿಂದ ಬಂದರೇನು. ಪಡೆಯೋದಕ್ಕೆ ಅಡ್ಡಿ ಇರಬಾರದು ಅಲ್ವ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶಂಕರ ಮತ್ತು ಅಲ್ಲಮ ಪ್ರಭು
ಅಲ್ಲಮ ಮತ್ತು ಶಂಕರ ...ಎರಡೂ ಗೌರೀ-ಶಂಕರಗಳೇ.. ಅವರ ಎತ್ತರಕ್ಕೆ ಬರಲು ಬೇರೆಯವರಿಂದ ಕಷ್ಟ ಸಾಧ್ಯ.
ಅಲ್ಲಮನ ಅನುಭಾವ... ಮತ್ತೆ ಅದನ್ನು ಕೃತಿಗಿಳಿಸುವ ಕಲೆ .. ಮತ್ತಾರಿಗೂ ಒಲಿದಿರಲು ಸಾಧ್ಯವಿಲ್ಲ. ಅವನಿಗೆ ಸಾಟಿಯಿಲ್ಲ. ಶಂಕರನ ಜ್ಞಾನ ..ಅಬ್ಬಾ !.. ... ಶಂಕರನಿಗೆ ಶಂಕರನೇ ಸಾಟಿ!.
ಇಲ್ಲಿ ನಾವು ಅಲ್ಲಮ ಮತ್ತು ಶಂಕರರನ್ನು ಎದುರು ಬದುರು ನೋಡುವುದಕ್ಕಿಂತ ಪಕ್ಕ-ಪಕ್ಕ ಇಟ್ಟು ನೋಡಿದರೆ ಚೆನ್ನ. ಅಲ್ಲಲ್ಲಿ ಅವರ ತತ್ವಗಳು ಎದರ ಬದುರ ಆದರೂ ತೀರ ಡೆಡ್ ಅಪೋಸಿಟ್ ಏನೂ ಅಲ್ಲ.
ಒಮ್ಮೆ ನನ್ನ ದೃಷ್ಟಿಯಲ್ಲಿ ಅವ್ರಬ್ಬಿರನ್ನು ಹೋಲಿಸಿ ಬರೆಯಲು ಯತ್ನಿಸುತ್ತೇನೆ.
ಇನ್ನು ತಪ್ಪುಗಳು....
ಇವು ಸಹಜ.... ಕುರಾನ್ ತಪ್ಪು interpretation ಗೆ ಒಳಗಾಗಿದೆ.
ಶಂಕರನ ಅದ್ವೈತ ...ಕೇವಲ ಮಾಯಾವಾದ ಅಷ್ಟೆ ಎಂಬ ತಪ್ಪು ಗ್ರಹಿಕೆಗೆ ಒಳಗಾಗಿದೆ.
ಮಧ್ವನ ದ್ವೈತ ವಂತೂ ಸಮಾಜದಲ್ಲಿ ಮೇಲು ಕೀಳು ಎನ್ನುವ ಭೇಧವನ್ನು ಉಟ್ಟು ಹಾಕುವಷ್ಟು ತಪ್ಪು ಗ್ರಹಿಕೆಗೆ ಒಳಗಾಗಿದೆ.
ಹಾಗೇನಾದರೂ ದುರುದ್ದೇಶ ಪೂರ್ವಕವಾಗಿದ್ದರೆ ಅವುಗಳನ್ನು ಬಿಟ್ಟು ಒಳ್ಳೆಯದನ್ನು ಅಷ್ಟೆ ತೆಗೆದುಕೊಡು ಸಾಗಬೇಕಷ್ಟೆ ?!
ಸವಿತೃ
ಉ: ಶಂಕರ ಮತ್ತು ಅಲ್ಲಮ ಪ್ರಭು
ಸವಿತೃ, ನಿಮ್ಮ ಮಾತು ನಿಜ. ನನಗೆ ಅನ್ನಿಸೋದು. "ಈ ಅಲ್ಲಮ ಮತ್ತು ಶಂಕರ, ಇವರುಗಳು ಏನಾದರೂ ಹೇಳಿರಲಿ. ಅವರ ಅನುಯಾಯಿಗಳು ಏನಾದರು ನಂಬಿಕೊಂಡಿರಲಿ. ಆದರೆ, ಮೇಲಿನ ರೀತಿಯ ವಿಮರ್ಶೆಗಳು, 'ಕನ್ನಡ-ಸಮಾಜದ' ಬೇರೆ ಬೇರೆ ಜನರ ನಡುವೆ ಬೌದ್ಧಿಕ ನೆಲೆಯನ್ನು ಮೀರಿದ (ಇಂಟಲೆಕ್ಚುಯಲ್ ಕಾನಫ್ಲಿಕಟ ಅಲ್ಲದ) ಜಗಳ ತಂದುಹಾಕುವುದರಿಂದ ಕನ್ನಡ ಮನಸ್ಸುಗಳು ದೂರವಾಗುವುತ್ತದೆ."
ಮೊದಲೇ ಕರ್ನಾಟಕದಲ್ಲಿ, ಬ್ರಾಹ್ಮಣರು, ಲಿಂಗಾಯತರು (ಮತ್ತು ಬೇರೆಯವರು ಕೂಡ) ಒಂದು ಸಮಾನವಾದ 'ಕನ್ನಡ-ಚೌಕಟನ್ನು' ಕಟ್ಟಿಕೊಳ್ಳದೆ ಜಗಳ ಆಡೀ ಆಡೀ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ತುಂಬಾ ಸೊರಗಿದ್ದೇವೆ/ಸೊರಗುತ್ತಾ ಇದ್ದೇವೆ. ಸನ್ನಿವೇಶ ಇಂತಿರುವಾಗ ಇಂತಹ ವಿಮರ್ಶೆಗಳು ಜನರನ್ನು ತಪ್ಪುದಾರಿಗೆ ಎಳೆಯುವುದಿಲ್ಲವೇ ?