ಹೇಳಿ, ಇವರು ಜಾತಿವಾದಿಗಳೇ ?
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕ.ರ.ವೇ ಹೋರಾಟ ನಡೆಸುತ್ತಲೇ ಬಂದಿದೆ. ಆದ್ರೆ ಕೆಂಪೇಗೌಡರ ಹೆಸರಿಡಬೇಕು ಅನ್ನುವ ಕೂಗು ಕೇಳಿದ್ದೆ ತಡ, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಸುವರ್ಣ ಅವಕಾಶ ಸಿಕ್ಕಿತು ಅಂತ ಕೆಲವರು ಕಪೋಲಕಲ್ಪಿತ ವರದಿ ಬರೆದು, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಎಲ್ಲ ಪ್ರಯತ್ನ ಮಾಡಿದರು. ಕೆಂಪೇಗೌಡರ ಹೆಸರಿಗೆ ಒತ್ತಾಯಿಸುವ ಮೂಲಕ ಕ.ರ.ವೇ ಒಂದು ಒಕ್ಕಲಿಗರ ಸಂಘಟನೆ, ಜಾತಿವಾದಿ ಎಂದು ಸಾಬಿತಾಗಿದೆ, ಅವರಿಗೆ ನಾಡು ನುಡಿಯ ಬಗ್ಗೆ ಯಾವ ದೂರ ದೃಷ್ಟಿಯೂ ಇಲ್ಲ ಎಂಬ ಒಕ್ಕಣಿಕೆಯ ಬರಹಗಳು ಅಲ್ಲಲ್ಲಿ ಬಂದಿವೆ. ಕಳೆದ ಕೆಲ ವರ್ಷದಿಂದ ನಾಡಿನ ಒಬ್ಬ ಸಾಮಾನ್ಯ ಪ್ರಜೆಯಾಗಿ ಕ.ರ.ವೇ ಹಾಗೂ ಅವರ ಹೋರಾಟವನ್ನು ಟಿ.ವಿ, ಪತ್ರಿಕೆಗಳಲ್ಲಿ ನೋಡಿ ಬಲ್ಲ ನಾನು ಈ ಸಂದರ್ಭದಲ್ಲಿ ಕೆಲ ಮಾತು ಬರೆಯೋಣ ಅಂತ ಈ ಉತ್ತರ .
ಮೊದಲಿಗೆ ಕಳೆದ ೫ ವರ್ಷದಲ್ಲಿ ಕ.ರ.ವೇ ಮಾಡಿರುವ ಕೆಲವು ಪ್ರಮುಖ ಹೋರಾಟಗಳನ್ನು, ಅವುಗಳ ಪರಿಣಾಮವನ್ನು ನೋಡೋಣ:
ಕಾವೇರಿ ನ್ಯಾಯ ಮಂಡಳಿ ತೀರ್ಪು ಬಂದಾಗ, ಈ ಕರುನಾಡಿನ ಒಬ್ಬೆ ಒಬ್ಬ ರಾಜಕಾರಣಿ ಬಾಯಿ ಬಿಟ್ಟು ನಮ್ಮ ರೈತರ ಪರ ಮಾತಾಡದೆ ಹೋದಾಗ, ೨೫೦೦೦ ರೈತರನ್ನ ಸಂಘಟಿಸಿ ದೆಹಲಿಗೆ ಕರ್ಕೊಂಡು ಬಂದು ದೆಹಲಿಯ ಜಂತರ ಮಂತರ್ ಭಾಗದಲ್ಲಿ ಕನ್ನಡದ ಮಣ್ಣಿನ ಮಕ್ಕಳ ಪ್ರತಿಭಟನೆಯ ಬಿಸಿಯನ್ನು ಪ್ರಧಾನಿಗೆ ತಲುಪಿಸಿದ್ದು ನಾರಾಯಣ್ ಗೌಡರ ಕ.ರ.ವೇ.. ಅವತ್ತು ಆ ಪ್ರತಿಭಟನೆ ಆಗದೆ ಹೋಗಿದ್ರೆ ಇವತ್ತಿಗಾಗ್ಲೆ ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗಿ, ಕನ್ನಡಿಗರೆಲ್ಲ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮಲ್ಕೊಬೇಕಿತ್ತು. ಹೇಳಿ, ಕಾವೇರಿ ನೀರು ಬರಿ ಒಕ್ಕಲಿಗರು ಕುಡಿಯುತ್ತಾರೆ ಅಂತ ಕ.ರ.ವೇ ಹೋರಾಟ ಮಾಡಿತೇ??
ಮೈಸೂರು, ಬೆಂಗಳೂರು, ಹುಬ್ಬಳ್ಳಿ ಕೇಂದ್ರಗಳಿಗಾಗಿ ನಡೆದ ರೈಲ್ವೆಯ ಗ್ರೂಪ್ ಡಿ ಹುದ್ದೆಗಳ ನೇಮಕದಲ್ಲಿ ಬಿಹಾರಿಗಳನ್ನೂ ಟ್ರೈನ್ ನಲ್ಲಿ ತಂದು ತುಂಬುವ ಕ್ರಮವನ್ನು ಪ್ರಶ್ನಿಸಿ, ಕನ್ನಡದ ಮಕ್ಕಳಿಗೆ ಆ ಹುದ್ದೆಗಳು ಸಿಗಬೇಕು ಅಂಥ ಪೊಲೀಸ್ ಲಾಠಿ ಏಟು ತಿಂದು ಆಯ್ಕೆ ಪ್ರಕ್ರಿಯೆ ನಿಲಿಸಿದ್ದು ಮತ್ತದೇ ನಾರಾಯಣ ಗೌಡರ ಕ.ರ.ವೇ. ಹೇಳಿ, ಗ್ರೂಪ್ ಡಿ ಹುದ್ದೆಗಳು ಬರಿ ಒಕ್ಕಲಿಗರಿಗೆ ಸಿಗಲಿವೆ ಎಂದು ಕ.ರ.ವೇ ಹೋರಾಟ ಮಾಡಿತ್ತೆ??
ಬಹಳ ಹಿಂದೇನು ಅಲ್ಲ, ಕೇವಲ ೬-೭ ವರ್ಷಗಳ ಹಿಂದೆ ಬೆಳಗಾವಿಯ ನಿಪ್ಪಾಣಿ ಭಾಗದಲ್ಲಿ ಕನ್ನಡ ಪತ್ರಿಕೆಗಳನ್ನು ಮರಾಠಿ ಪತ್ರಿಕೆಗಳ ಮಧ್ಯೆ ಇರಿಸಿ ತಂದು ಓದುವಂತ ಪರಿಸ್ಥಿತಿ ಇತ್ತು. ಅಂತ ಪರಿಸ್ಥಿತಿಯಲ್ಲಿ ಅಲ್ಲಿನ ಕನ್ನಡಿಗರನ್ನು ಸಂಘಟಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ೧೮ ವರ್ಷದ ನಂತರ ಕನ್ನಡತಿಯೊಬ್ಬರು ಬೆಳಗಾವಿ ಪಾಲಿಕೆಯ ಮೇಯರ್ ಆಗುವಂತೆ ಮಾಡಿದ್ದು ಬೇರಾರು ಅಲ್ಲ, ನಾರಾಯಣ ಗೌಡರ ಕ.ರ.ವೇ. ಬೆಳಗಾವಿಯಲ್ಲಿ ಹುಡುಕಿದರೂ ಒಬ್ಬೆ ಒಬ್ಬ ಒಕ್ಕಲಿಗ ಸಿಗಲಾರ, ಹಾಗಿದ್ದಲ್ಲಿ ಜಾತಿವಾದಿ ಕ.ರ.ವೇ, ಒಕ್ಕಲಿಗರ ಕ.ರ.ವೇ ಅಲ್ಯಾಕೆ ಹೋರಾಟ ಮಾಡಿದರು?
ಒಂದು ಊರಿನ ಭಾಷೆ, ಸಂಸ್ಕುತಿಯನ್ನು ವಲಸಿಗರಿಗೆ ಪರಿಚಯಿಸುವಲ್ಲಿ ಸಮೂಹ ಮಾಧ್ಯಮಗಳ ಜವಾಬ್ದಾರಿ ಗುರುತರವಾದದ್ದು. ಬೆಂಗಳೂರೆಂಬ ವಲಸಿಗರ ಸ್ವರ್ಗದಲ್ಲಿ ಶುರುವಾದ ಎಫ್.ಎಂ ರೇಡಿಯೋ ವಾಹಿನಿಗಳು ಇಲ್ಲಿನ ಭಾಷೆಗೆ ನಯಾ ಪೈಸೆ ಬೆಲೆ ಕೊಡದೆ, ನಮ್ಮದಲ್ಲದ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾಗ ಕನ್ನಡ ಕಾರ್ಯಕ್ರಮಕ್ಕಾಗಿ ಆಗ್ರಹಿಸಿ, ಪ್ರತಿಭಟಿಸಿ ಇವತ್ತು ಎಲ್ಲ ಎಫ್.ಎಂ ವಾಹಿನಿಗಳು ಕನ್ನಡವನ್ನು ಅಪ್ಪಿಕೊಳ್ಳುವಂತೆ ಮಾಡುವಲ್ಲಿ ಕ.ರ.ವೇ ಪಾತ್ರವು ಮಹತ್ವದ್ದು. ಇಂದು, ಎಫ್.ಎಂ ವಾಹಿನಿಗಳ ಮೂಲಕ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಕನ್ನಡದ ಕಂಪು ಹರಡುತ್ತಿದ್ದರೆ ಅದರ ಹಿಂದೆ ಕ.ರ.ವೇ ಪಾತ್ರವಿರುವುದನ್ನು ಮರೆಯಬಾರದು. ಹೇಳಿ, ಒಕ್ಕಲಿಗರು ಮಾತ್ರ ಕನ್ನಡ ಹಾಡು ಕೇಳುತ್ತಾರೆ ಎಂದು ಕ.ರ.ವೇ ಈ ಹೋರಾಟ ಮಾಡಿತೇ?
ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಕ.ರ.ವೇ ಸಂಘಟಿಸಿದ್ದ ಸಭೆಯಲ್ಲಿ ಸೇರಿದ್ದು ಸುಮಾರು ೧೦ ಸಾವಿರ ಜನ. ಅಂದು ಮಾತಾಡಿದ ಹುಬ್ಬಳ್ಳಿ ಭಾಗದ ಪ್ರಭಾವಿಗಳು, ಏಕೀಕರಣ ಹೋರಾಟಗಾರರು ಆದ ಪಾಟೀಲ್ ಪುಟ್ಟಪ್ಪ ಹೇಳಿದ್ದು" ಕ.ರ.ವೇ ಅಂದ್ರೆ ಯಾವುದೋ ಬೆಂಗಳೂರು ಮೂಲದ ಹೋರಾಟಗಾರರು, ಅವರಿಗೆ ಇಡೀ ಕರ್ನಾಟಕದ ಬಗ್ಗೆ ಕನಸಾಗಲಿ, ಸಮಸ್ಯೆಗಳ ಬಗ್ಗೆ ಹೋರಾಡೋ ಸಾಮರ್ಥ್ಯ ಆಗಲಿ ಇಲ್ಲ ಅನ್ಕೊಂಡಿದ್ದೆ, ಆದರೆ ಇಲ್ಲಿ ಸೇರಿರುವ ಜನರು ನನ್ನ ಮಾತನ್ನು ಸುಳ್ಳಾಗಿಸಿದ್ದಾರೆ. ಇವರ ಮೇಲೆ, ಇವರ ಹೋರಾಟದ ಮೇಲೆ ನನಗೆ ನಂಬಿಕೆ ಬಂದಿದೆ." ಹೇಳಿ, ಹುಬ್ಬಳ್ಳಿ ಭಾಗದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನದಿಂದ ಮೈಸೂರು, ಮಂಡ್ಯ ಭಾಗದಲ್ಲಿರುವ ಒಕ್ಕಲಿಗರಿಗೆ ಹೇಗೆ ಉಪಯೋಗವಾದಿತು? ಹಾಗಿದ್ದಲ್ಲಿ, ಜಾತಿವಾದಿ ಕ.ರ.ವೇ ಯಾಕೆ ಹೋರಾಟ ಮಾಡಿತು ?
ಇಂತ ಉದಾಹರಣೆಗಳು ನೂರಿವೆ. ಜಾತಿಯ ಸೊಂಕಿಲ್ಲದೆ, ಕನ್ನಡವೇ ಜಾತಿ, ಕನ್ನಡವೇ ಧರ್ಮ ಎಂದು ಹೋರಾಟ ಮಾಡುತ್ತಾ ಬಂದಿರುವ ಕ.ರ.ವೇ ಅವರ ಬದ್ಧತೆಯನ್ನು ಇಲ್ಲಿ ಕೆಲವರು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ. ಕಣ್ಣ ಮುಂದೆ ಕೋಟಿ ಕೋಟಿ ನುಂಗಿ, ಮತ್ತೆ ಮತ್ತೆ ವಿಧಾನಸೌಧಕ್ಕೆ ಒಕ್ಕರಿಸಿ, ನಾಡು ನುಡಿಗಾಗಿ ನಯಾ ಪೈಸೆ ಕೆಲಸ ಮಾಡದ ಒಬ್ಬೆ ಒಬ್ಬ ರಾಜಕಾರಣಿಯನ್ನು ಪ್ರಶ್ನಿಸದ ನಾವು, ಪೊಲೀಸರಿಂದ ಲಾಠಿ ಏಟು ತಿಂದು, ಕೇಸ್ ಮೇಲೆ ಕೇಸ್ ಹಾಕಿಸಿಕೊಂಡು ನಾಡು-ನುಡಿಗಾಗಿ ಹೋರಾಡುವ ಈ ಧೀರರ ಬದ್ಧತೆಯನ್ನೇ ಪ್ರಶ್ನಿಸುವುದನ್ನು ಕಂಡಾಗ ಅನಿಸೋದು " ಕನ್ನಡಿಗರಿಗೆ ಕನ್ನಡಿಗರೇ ಮೊದಲ ಹಾಗೂ ಕೊನೆಯ ಶತ್ರು ಎಂದು"

- Login or register to post comments
- 351 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಹೇಳಿ, ಇವರು ಜಾತಿವಾದಿಗಳೇ ?
ಗುಱುಱಾಜ
www.kannadaguru.blogspot.com
ಶೋಭಾ ಅವರೇ, ಉತ್ತಮ ಚಿ೦ತನೆ ,ಯಾರೂ ಕರವೇಯನ್ನು ಜಾತಿವಾದಿಗಳು ಎ೦ದುಕೊ೦ಡಿಲ್ಲ.(ಬೆರಳೆಣಿಕೆಯ ಜನರನ್ನು ಹೊರತುಪಡಿಸಿ).ಇನ್ನೂ ಪತ್ರಕರ್ತರೊಬ್ಬರು ಬರೆದ ಲೇಖನವನ್ನು ಜನ ಯಾವ ಪ್ರಕಾರ ಖ೦ಡಿಸಿದರೆ೦ದರೇ,ಇ - ಪತ್ರಿಕೆಯೊ೦ದು ಇವರ ಲೇಖನವನ್ನು ಮೊದಲು ಪ್ರಕಟಿಸಿ ಆ ನ೦ತರ ಜನರು ಆಕ್ಷೇಪ ವ್ಯಕ್ತ ಪಡಿಸಿದ್ದರಿ೦ದ ಲೇಖನವನ್ನೇ ತೆಗೆದು ಹಾಕಿದರು.ಆ ನ೦ತರ ಈ ಲೇಖನವನ್ನು ಬರೆದ ಲೇಖಕರು ತಮ್ಮ orkut blog ನಲ್ಲಿ ಈ ರೀತಿಯ ಹೇಳಿದರು:
"ಸ್ನೇಹಿತರೇ, ಆ ಟಾಪಿಕ್ ಡಿಲೀಟ್ ಮಾಡಿದ್ದು ನಾನೇ. ಅದಕ್ಕೂ ಕಾರಣವಿದೆ. ನಾನು “ಹೆಸರಲ್ಲೇನಿದೆ, ಎಲ್ಲವೂ ಹೆಸರಲ್ಲೇ ಇದೆ" ಎಂಬ ಲೇಖನ ಬರೆದಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರಿಗಿಂತ ವಿಶ್ವೇಶ್ವರಯ್ಯನವರ ಹೆಸರೇ ಏಕೆ ಸೂಕ್ತ ಎಂಬುದನ್ನು ಮನವರಿಕೆ ಮಾಡಿಕೊಡಲು ಹಾಗೂ ಕೆಂಪೇಗೌಡರ ಹೆಸರಿಡದಿದ್ದರೆ ಉದ್ಘಾಟನೆಗೆ ಬಿಡುವುದಿಲ್ಲ ಎನ್ನುತ್ತಿದ್ದ ಕೆಲವರ ತೀವ್ರವಾದಿ ಹೇಳಿಕೆಗಳ ಪ್ರತಿಕೂಲ ಪರಿಣಾಮಗಳ ಬಗ್ಗೆ ಜನರ ಗಮನ ಸೆಳೆಯುವುದಕ್ಕಾಗಿ. ಜತೆಗೆ ಚಳವಳಿ ಅಥವಾ ಸಂಘಟನೆಗಳು ಜಾತಿ ಪ್ರೇರಿತವಾಗಬಾರದು ಎಂಬ ಅಂಶವನ್ನು ಮನದಟ್ಟು ಮಾಡಿಕೊಡಲು. ಆದರೆ ಆಗಿದ್ದೇ ಬೇರೆ. ನನ್ನ ಲೇಖನ ಕೆಂಪೇಗೌಡ ಹಾಗೂ ವಿಶ್ವೇಶ್ವರಯ್ಯನವರಲ್ಲಿ ಯಾವ ಹೆಸರು ಸೂಕ್ತ ಎಂಬ ಚರ್ಚೆಗೆ ನಾಂದಿಯಾಗುವ ಬದಲು, ಜಾತಿ ವಿಚಾರವೇ ದೊಡ್ಡದಾಗಿ ಚರ್ಚೆಯನ್ನೇ ದಿಕ್ಕು ತಪ್ಪಿಸಿತು. ‘ಒಕ್ಕಲಿಗರ ಅಡ್ಡ’, ‘ಬ್ರಾಹ್ಮಣರ ಅಡ್ಡ’ ಎನ್ನುವ ಪದಪ್ರಯೋಗಗಳು ವಿಷಯವನ್ನೇ ಮರೆಮಾಚಿದ್ದನ್ನು ನೀವೆಲ್ಲ ಗಮನಿಸಿದ್ದೀರಿ. ನಾನು ಜಾತಿರಹಿತ ಹಿಂದೂ ಸಮಾಜ ನಿರ್ಮಾಣದ ಬಗ್ಗೆ ಒಲವು ಹೊಂದಿರುವವನು. ನನ್ನ ಲೇಖನ ಜಾತಿ ಬಣ್ಣ ಪಡೆದುಕೊಂಡು, ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ ಎಂಬುದರ ಊಹೆ ನನಗಿದ್ದಿದ್ದರೆ ಖಂಡಿತ ಈ ಲೇಖನ ಬರೆಯುತ್ತಿರಲಿಲ್ಲ. ಒಂದು ವೇಳೆ ಜಾತಿ ವಿವಾದ ಹುಟ್ಟುಹಾಕುವ ಮನಸ್ಥಿತಿ ನನಗಿದ್ದಿದ್ದರೆ ಇಂದಿಗೂ ಉಡುಪಿ, ಶೃಂಗೇರಿ, ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ನಮ್ಮ ಬಹುತೇಕ ಎಲ್ಲ ಮಠ-ಮಂದಿರಗಳಲ್ಲಿರುವ ಜಾತೀಯತೆ, ಢಾಂಬಿಕತೆಯ ಬಗ್ಗೆ ವರ್ಷದ ೫೨ ಶನಿವಾರಗಳೂ ಬರೆಯುತ್ತಿದ್ದೆ. ವಿವೇಕಾನಂದರ ಮಾತುಗಳನ್ನು ಕೇಳಿದರೆ ಸಮಾಜವನ್ನು ಒಡೆದಿದ್ದು ಯಾರು ಎಂಬುದು ಎಲ್ಲರಿಗೂ ತಿಳಿಯುತ್ತದೆ. ಹಾಗಾಗಿ ಜಾತಿ ವಿಚಾರ, ಚರ್ಚೆ ಬೇಡ. ಸಮಾಜವನ್ನು ಒಂದುಮಾಡಲು ಪ್ರಯತ್ನಿಸಿದ ರಾಜಾರಾಮ್ ಮೋಹನ್ ರಾಯ್, ಶ್ರೀ ನಾರಾಯಣಗುರು, ಶಂಕರಾಚಾರ್ಯರು ನಮಗೆ ಮಾದರಿಯಾಗಿರಲಿ. ನಾವು ನಾವೇ ಬಡಿದಾಡಿ ೯೦೦ ವರ್ಷ ಮುಸ್ಲಿಮರ ಆಳ್ವಿಕೆಗೆ, ೧೫೦ ವರ್ಷ ಬ್ರಿಟಿಷರ ಆಳ್ವಿಕೆಗೆ ತುತ್ತಾಗಿದ್ದು ಸಾಕು. ಆ ವಿಷಯ ಹಾಗಿರಲಿ. ಇನ್ನು ಕರವೇ ವಿಚಾರಕ್ಕೆ ಬರುವುದಾದರೆ ‘ಕೆಂಪೇಗೌಡರ ಹೆಸರಿಡದಿದ್ದರೆ ಉದ್ಘಾಟನೆಗೆ ಬಿಡುವುದಿಲ್ಲ’ ಎಂಬ ಧಮಕಿಯನ್ನು ಬಿಟ್ಟರೆ ಕರವೇ ಮಾಡುತ್ತಿರುವ ಹೋರಾಟದ ಬಗ್ಗೆ ನನಗೂ ಅತೀವ ಗೌರವವಿದೆ. ಹಾಗಾಗಿಯೇ ನನ್ನ ಲೇಖನದಲ್ಲಿ ವಿಮಾನ ನಿಲ್ದಾಣದ ವಿಚಾರ ಬಿಟ್ಟರೆ ಬೇರಾವ ವಿಷಯವನ್ನೂ ನಾನು ಪ್ರಸ್ತಾಪಿಸಿರಲಿಲ್ಲ. ಸರಕಾರ ಮಾಡಬೇಕಾದ ಕೆಲಸವನ್ನು ಕರವೇ ಮಾಡುತ್ತಿದೆ."
ಇದನ್ನು ಅವರ ತಪ್ಪೊಪ್ಪಿಗೆ ಅನ್ನಿ,ಸಮರ್ಥನೆ ಅನ್ನಿ,ಏನೇ ಅ೦ದರೂ ಜನ ಆ ಲೇಖಕನಿಗೆ ತಮ್ಮ feedback ನ ಮೂಲಕ ಬಿಸಿ ಮುಟ್ಟಿಸಿದ್ದಾರೆ.ಈಗ ಇಷ್ಟೆಲ್ಲಾ ಏಕೆ ಹೇಳಿದೆನೆ೦ದರೇ,ಯಾರೂ ಏನೇ ಹೇಳಿದರೂ ,ಏನೇ ಬರೆದರೂ ಜನರಿಗೆ ಯಾರು ಮತಾ೦ಧರು,ಯಾರು ಅಲ್ಲ ಎ೦ದು ತಿಳಿಯುತ್ತದೆ.
ಉ: ಹೇಳಿ, ಇವರು ಜಾತಿವಾದಿಗಳೇ ?
ಸರಿಯಾಗಿ ಹೇಳಿದ್ದೀರ.