ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.
ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್ಖಾನ್ ಹಾಗೈ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.
ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.
ಮಾಧ್ಯಮದಲ್ಲಿ ನನ್ನ ಗೆಳತಿಯರು ಹಾಗೂ ಗೆಳೆಯರು ತುಂಬ ಜನ ಇದ್ದಾರೆ. ಅವರೊಂದಿಗೆ ಅನೇಕ ಸಾರಿ ಈ ಬಗ್ಗೆ ಚರ್ಚಿಸಿದ್ದೇನೆ. ವಾದಿಸಿದ್ದೇನೆ. ಮುನಿಸಿಕೊಂಡಿದ್ದೇನೆ. ಆದರೂ, ನನ್ನ ಅಭಿಪ್ರಾಯ ಬದಲಾಗಿಲ್ಲ. ಇಷ್ಟು ದಿನದ ಬೆಳವಣಿಗೆಗಳನ್ನು ನೋಡಿದ ನಂತರ ಅವು ಬದಲಾಗುವ ಸಾಧ್ಯತೆಗಳೂ ಕಾಣುತ್ತಿಲ್ಲ.
ಖಾಸಗಿ ಬದುಕೆಂಬುದು ಪ್ರತಿಯೊಬ್ಬನ ವೈಯಕ್ತಿಕ ಸ್ವತ್ತು. ಅದರಲ್ಲಿ ಕೈ ಹಾಕಲು ಸರ್ಕಾರಕ್ಕೇ ಅಧಿಕಾರವಿಲ್ಲ. ಇನ್ನು ಮಾಧ್ಯಮಕ್ಕಂತೂ ಅವಕಾಶವೇ ಇಲ್ಲ. ಆದರೂ ಕೈ ಹಾಕುತ್ತಾರೆ. ನಾವು ನೋಡಿಕೊಂಡು ಸುಮ್ಮನೇ ಕೂಡುತ್ತೇವೆ. ಕ್ರೈಂ ವರದಿಗಳು, ಕಾರ್ಯಕ್ರಮಗಳು ಬರತೊಡಗಿದನಂತರ, ಖಾಸಗಿ ಬದುಕೆಂಬುದು ಜನಸಾಮಾನ್ಯರ ಪಾಲಿಗೂ ಇಲ್ಲವಾಗಿದೆ.
ಇದಕ್ಕೆ ಸ್ವಯಂ ನೀತಿ ಸಂಹಿತೆ ಬೇಕು. ಏಕೆಂದರೆ, ಕಾನೂನು ಮಾಡಿದರೆ, ಅದರಡಿ ತೂರಿಕೊಳ್ಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಇದರಿಂದ ಇನ್ನಷ್ಟು ವಿಕೃತಿ ಸೃಷ್ಟಿಯಾಗುವ ಅಪಾಯವಿದೆ. ಮಾಧ್ಯಮದಲ್ಲಿರುವವರೂ ನಮ್ಮಂತೆ ಸಾಮಾನ್ಯ ಮನುಷ್ಯರೇ. ನಮ್ಮ ರಾಗದ್ವೇಷಗಳು ಅವರಲ್ಲೂ ಇವೆ. ಆದರೆ, ಅವರ ರಾಗದ್ವೇಷ ಖಾಸಗಿಯಾಗಿ ಉಳಿಯದೇ ನಾಡಿನಾದ್ಯಂತ ಹರಡುವುದರಿಂದ, ಅವರ ಭಾವನೆಗಳು ಅವರ ನಿಯಂತ್ರಣದಲ್ಲಿ ಇದ್ದರೆ ಉತ್ತಮ.
ಆದ್ದರಿಂದ, ಮಾಧ್ಯಮಮಿತ್ರರು ಈ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲಿ. ಆಯಾ ಪತ್ರಿಕೆಗಳು ಹಾಗೂ ಚಾನೆಲ್ಗಳ ಸಂಪಾದಕರೂ ಇತ್ತ ಯೋಚಿಸಬೇಕು.
- ಪಲ್ಲವಿ. ಎಸ್.

- Login or register to post comments
- 231 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ಪಲ್ಲವಿಯವರೆ,
ನಿಮ್ಮ ಮಾತು ನಿಜ. ಮಾಧ್ಯಮದವರು ಅತಿಯಾಗಿಯೇ ಖಾಸಗಿ ಜೀವನದಲ್ಲಿ ಮೂಗು ತೂರಿಸುತ್ತಿದ್ದಾರೆ.
ಸಾಮಾನ್ಯ ಜನರ ಬೇಡಿಕೆಗಳು, ಸಮಸ್ಯೆಗಳು ಪ್ರಕಟವಾಗದಿದ್ದರೂ, ವಿಕಟ ವಿರಾಟರೂಪವಾಗಿ ಒಬ್ಬರ ಬದುಕನ್ನು ಬಯಲು ಮಾಡುತ್ತಾರೆ. ಇದೆಂತಹ ವಿಕೃತ ಮಾಧ್ಯಮ ಪ್ರಚಾರ!!!!
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ನಿಜ ಗಿರೀಶ್, ಕ್ರಿಯೆ-ಪ್ರತಿಕ್ರಿಯೆ ಜೊತೆಜೊತೆಗೇ ಹೋಗುತ್ತವೆ. ಮಾಧ್ಯಮದ ವಿಷಯದಲ್ಲಿಯೂ ಇದು ಸ್ಪಷ್ಟ. ನಾವು ಓದಲು ಆಸಕ್ತಿ ತೋರಿಸಿದರೆ, ಅವರು ಅಂಥವೇ ವಿಷಯಗಳನ್ನು ಕೊಡುತ್ತಾ ಹೋಗುತ್ತಾರೆ. ನಮ್ಮ ಆಸಕ್ತಿ ಬದಲಾದಂತೆ ಅವರೂ ಬದಲಾಗುತ್ತಾರೆ. ಬದಲಾಗಲೇಬೇಕು.
ಆದರೆ ಸಮೂಹ ಬದಲಾಗುವುದು ನಿಧಾನ ಮತ್ತು ಕಷ್ಟಕರ. ಹೀಗಾಗಿ, ಕೆಲವೇ ಸಂಖ್ಯೆಯಲ್ಲಿರುವ ಮಾಧ್ಯಮವನ್ನೇ ಬದಲಾಯಿಸಲು ಯತ್ನಿಸುವುದು ಉತ್ತಮ. ಸೃಜನಶೀಲತೆ ಮತ್ತು ಉತ್ಪಾದಕ ಸಾಮರ್ಥ್ಯ ಇಲ್ಲದಿರುವ ಬರವಣಿಗೆ, ಕಾರ್ಯಕ್ರಮ, ಯೋಜನೆ ಕಾಲಾಂತರದಲ್ಲಿ ವ್ಯರ್ಥವಾಗುತ್ತವೆ. ಇವತ್ತಿನ ಟೊಳ್ಳು ಕಾರ್ಯಕ್ರಮಗಳು, ಬರವಣಿಗೆ, ಬಡಬಡಿಕೆಗಳು ಕೆಲವೇ ದಿನಗಳಲ್ಲಿ ಮಾಸಿದಂತೆ, ಹಳಸಿದಂತೆ ಕಾಣುತ್ತವೆ. ಇವತ್ತು ಬಂದು ನಾಳೆ ಇಲ್ಲವಾಗುವ ಸಿನಿಮಾ ತಾರೆಯರಂತೆ, ಇವೆಲ್ಲ ಬಲುಬೇಗ ಇಲ್ಲವಾಗುತ್ತವೆ.
ನಮ್ಮ ಅಭಿರುಚಿಗಳನ್ನು ಹದಗೊಳಿಸಿಕೊಳ್ಳುವ, ಸುಧಾರಿಸಿಕೊಳ್ಳುವುದೊಂದೇ ಸಮಸ್ಯೆ ಎದುರಿಸುವ ಉತ್ತಮ ಮಾರ್ಗ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ಸ್ವಯಂ ನಿಯಂತ್ರಣ ಅನುಸರಿಸಬೇಕಾದ್ದು ಅವರ ಅನಿವಾರ್ಯತೆ ಇಲ್ಲವಾದಲ್ಲಿ ಅವರ ಮೇಲೊಬ್ಬ ಆಮ್ಬುಡ್ಸ್ಮನ್ ಬಂದು ಕುಳಿತುಕೊಳ್ಳುತ್ತಾನೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ಖಂಡಿತ ಸುಪ್ರೀತ್. ಸ್ವತಃ ಒಡೆಯರಾಗದಿದ್ದರೆ ಬೇರೊಬ್ಬರು ಒಡೆಯರಾಗುವುದು ಅನಿವಾರ್ಯ, ಅಲ್ಲವೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...