21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇದು ರಾಧೆಯ ಪ್ರೀತಿಯ ರೀತಿ...

December 7, 2010 - 3:50pm
ಪುಟ್ಟಕೊಳ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು..

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೇಗೋ
ಪಡುತಿರುವನು ಪರಿತಾಪ...

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ..

ಮಹಾ ಪ್ರವಾಹ ಮಹಾ ಪ್ರವಾಹ
ತಡೆಯುವರಿಲ್ಲ...ಪಾತ್ರವಿರದ  ತೊರೆ ಪ್ರೀತಿ...
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ನೀತಿ ..
ಇದು ರಾಧೆಯ ಪ್ರೀತಿಯ ರೀತಿ...

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ ಪ್ರೀತಿಯೂ ನೀಡಿದ ಕಣ್ಣು...

ಪ್ರತಿಕ್ರಿಯೆಗಳು

Submitted by Iynanda Prabhukumar on

ಸುಂದರ ಕವನ.
ಆದರೆ ಇನ್ನೊಮ್ಮೆ ನೀವೇ ಪರೀಕ್ಷಿಸಿ ಒಂದೆರಡು ಕಾಗುಣಿತ ಸರಿಪಡಿಸಿದರೆ ಅರ್ಥವ್ಯಾಪ್ತಿ ಹೆಚ್ಚೀತೆಂದು ನನ್ನ ಅನ್ನಿಸಿಕೆ.
ಎಲ್ಲೋ ಕೇಳಿದಂತೆ ಭಾಸವಾಗುತ್ತದೆ.
ಚಿತ್ರದ ಬಗ್ಗೆ... ಯಾರ ರಚನೆ, ಯಾವಾಗಿನದು, ಇತ್ಯಾದಿ ತಿಳಿಸಬಹುದಿತ್ತೇ?

Submitted by ಪುಟ್ಟಕೊಳ on

ಮೊದಲಿಗೆ ಪ್ರತಿಕ್ರಿಯೆಗೆ ವಂದನೆಗಳು ,
ಕಾಗುಣಿತ ಎಲ್ಲಿ ತಪ್ಪಾಗಿದೆ ಎಂದು ನನಗೆ ತಿಳಿಯುತ್ತಿಲ್ಲ...ದಯವಿಟ್ಟು ತಾವು ತಿಳಿಸಿದರೆ ನಾನು ಸರಿಪಡಿಸುವೆ..:)
ಇದು ಎಚ್.ಎಸ್.ವೆಂಕಟೇಶ್ ಮೂರ್ತಿ ಯವರ ರಚನೆ...ಇವರು ಕವಿ ಹಾಗು ನಾಟಕಕಾರರು ಹೌದು ..
ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವವರು ಶ್ರೀಯುತ ಮೈಸೂರು ಅನಂತಸ್ವಾಮಿಯವರು ಹಾಗು ಇದನ್ನು ಹಾಡಿರುವವರು ಶ್ರೀಮತಿ ಎಂ.ಡಿ.ಪಲ್ಲವಿ ಅರುಣ್ ರವರು.
ಈ ಹಾಡನ್ನು ನೀವು www.kannadaaudio.com ನ ಭಾವಗೀತೆ ವಿಭಾಗದಲ್ಲಿರುವ Live Concert 3 by Pallavi Arun ನಲ್ಲಿ ಕೇಳಬಹುದು.( http://www.kannadaau...)
ಚಿತ್ರ ರಚನೆಯ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ..ಗೂಗಲ್ ನಲ್ಲಿ ರಾಧ-ಕೃಷ್ಣರ ಚಿತ್ರವನ್ನು ಹುಡುಕುತ್ತಿದ್ದಾಗ ಸಿಕ್ಕ ಹಲವು ಚಿತ್ರಗಳಲ್ಲಿ ನನ್ನ ಮನಸ್ಸಿಗೆ ಈ ಕವನಕ್ಕೆ ಸಮಂಜಸವೆಂಬಂತೆ ಅನಿಸಿದ ಚಿತ್ರ ಇದು.
ಈ ಕವನದಲ್ಲಿ ಹುಣ್ಣಿಮೆಯ ರಾತ್ರಿ, ತೊರೆ, ದೀಪ ಇವುಗಳನ್ನು ರಾಧಾ-ಕೃಷ್ಣರ ಪ್ರೀತಿಗೆ ಸಾಕ್ಷಿಯಾಗಿ ಕವಿ ಬರೆದಿರುವುದು ಬಹಳ ಚೆನ್ನಾಗಿದೆ.
ಎಲ್ಲ ಬಂಧನಗಳನ್ನು ಬಿಟ್ಟು ಕೃಷ್ಣನ ಪ್ರೀತಿಗಾಗಿ ಓಡೋಡಿ ಬರುವ ರಾಧೆಯ ಚಿತ್ರಣ ಮೈ ನವಿರೇಳಿಸುತ್ತದೆ.
ಈ ಕವನದಲ್ಲಿ ನನಗೆ ತುಂಬಾ ಇಷ್ಟವಾದ ಸಾಲೆಂದರೆ " ತೊರೆದರು ತನ್ನ ತೊರೆಯದು ಪ್ರಿಯನ ...ರಾಧೆಯ ಪ್ರೀತಿಯ ನೀತಿ ...ಇದು ರಾಧೆಯ ಪ್ರೀತಿಯ ರೀತಿ..."

ಧನ್ಯವಾದಗಳೊಂದಿಗೆ