ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !

"ಹೊಳಲ್ಕೆರೆ ತೂಗ್ತಲೆ ಗಣೇಶ" ನ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆಯೇ, ಚಿತ್ರದುರ್ಗದ ಕಾಮಗೇತಿ ವಂಶದ ಪಾಳೆಯಗಾರರು ನಮ್ಮ ಮನಸ್ಸಿನಲ್ಲಿ ಹೊರಹೊಮ್ಮುತ್ತಾರೆ. ಅವರು ಹೊಳಲ್ಕೆರೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ ದಿನಗಳಲ್ಲಿ ಇದನ್ನು ಕಟ್ಟಿಸಿ ಕೃತಾರ್ಥರಾಗಿರಬಹುದು. ಎಲ್ಲಾ ಪಾಳೆಯಗಾರರೂ ದೈವಭಕ್ತರಾಗಿದ್ದರು. ಪ್ರಜೆಗಳ ಹಿತಾಸಕ್ತಿಯಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲಾ ಗಂಡುಗಲಿಗಳು. ಆ ಸಂತತಿಯಲ್ಲಿ ಬಂದ ಹಲವಾರು ಮದಕರಿನಾಯಕರುಗಳ ಹೆಸರುಗಳು ಇದನ್ನು ಖಚಿತಪಡಿಸುತ್ತವೆ.
ಮೇಲಿನ ಚಿತ್ರ , ನಮ್ಮ ಮನೆಯ ಫೋಟೊ ಆಲ್ಬಮ್ ನಿಂದ ಪ್ರಸ್ತುತ ಪಡಿಸಿದ್ದು. ಆಗಿನ ದಿನಗಳಲ್ಲಿ ಗಣೇಶ ಬಟ್ಟ ಬಯಲಿನಲ್ಲಿ ಸರ್ವರಿಗೂ ದರ್ಶನಕೊಟ್ಟು ನಮ್ಮ ಮನೋಕಾಮನೆಗಳನ್ನು ಈಡೇರಿಸುವ ದೇವನಾಗಿದ್ದ. ಈಗಲೂ ಮತ್ತು ಮುಂದಿನ ಅನಂತಾನಂತ ವರ್ಷಗಳಲ್ಲೂ ಅವನ ಕೃಪಾದೃಷ್ಟಿ ನಮ್ಮೆಲ್ಲರ ಮೇಲೆ ಇರುವುದರಲ್ಲಿ ಸಂಶಯವಿಲ್ಲ. ಗಣೇಶನಿಗೆ ಉದ್ದವಾದ ಜಡೆಯಿದೆ. ಅದಕ್ಕೆ ಭಕ್ತಾದಿಗಳು ಬೆಣ್ಣೆಹಚ್ಚಿ, ಪ್ರಸಾದವನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ. ಡಾ. ಬಾತ್ರ ರವರ ಭಾರಿಬಿಲ್ಲು ತೆತ್ತು ಬುದ್ಧಿಕಲಿತವರಿಗೆ, ಗಣೇಶನ ಸನ್ನಿಧಿ ಮನಸ್ಸಿಗೆ ಮುದನೀಡುತ್ತದೆ. ನಂಬಿಕೆ, ಭಕ್ತಿ, ಶ್ರದ್ಧೆ ಎಲ್ಲಾ ಒಳಿತಿಗೂ ಮೂಲ ಮಂತ್ರ. ಪ್ರಯತ್ನಿಸಬಹುದು. ಆ ಮಂಗಳಮೂರ್ತಿ ಗಣರಾಯನ ಅನುಗ್ರಹ ನಿಮ್ಮ ಮೇಲೆ ಇರಲಿ.
ಈಗ ಸುಮಾರು ೧೦ ವರ್ಷಗಳಿಂದೀಚೆಗೆ ಭಕ್ತರ ಮನೋಕಾಮನೆಯ ಮೇರೆಗೆ ಒಂದು ಗುಡಿಯನ್ನು ಕಟ್ಟಿದ್ದಾರೆ. ಇದಕ್ಕೆ ಬೀಗ ಇರುವುದಿಲ್ಲ. ದಿನವಿಡೀ ಅರ್ಚಕರು ಅಲ್ಲಿರುತ್ತಾರೆ. ಭಕ್ತರಿಗೆ ಹಣ್ಣು ಕಾಯಿ ಮಾಡಿಸಲು ಅನುವುಮಾಡಿಕೊಡುತ್ತಾರೆ.
ಪೌಳಿ ನಾಲ್ಕುಕಡೆಗೂ ಇದ್ದು, ಅಲ್ಲಿ ಪಕ್ಕದಲ್ಲೇ ಹಾಕಿರುವ ಕಲ್ಲು ಮಂಚಗಳ ಮೇಲೆ ಹುಣಸೇಮರದ ತಂಪು ಛಾಯೆಯಡಿಯಲ್ಲಿ ಬಂದವರು ದಣಿವಾರಿಸಿಕೊಳ್ಳಬಹುದು. ಈಗ ಭಕ್ತಾದಿಗಳಿಗಾಗಿ ಗಣಪತಿ ದೇವರ ಸನ್ನಿಧಾನದಲ್ಲಿ ಮದುವೆ ಮಾಡಲು ಒಂದು ಛತ್ರವನ್ನೂ ಕಟ್ಟಿಸುತ್ತಿದ್ದಾರೆ. ಅದು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಈಗ ನಮ್ಮ ಕಾಲದ ಬಯಲು ಗಣಪತಿ ಹೋಗಿ, ಗಣಪತಿ ದೇಗುಲ ಎಲ್ಲರನ್ನೂ ಆಕರ್ಶಿಸುತ್ತಿದೆ. ಬನ್ನಿ, ಗಣೇಶನ ಅನುಗ್ರಹಕ್ಕೆ ಪಾತ್ರರಾಗಿ. ನಿಮಗೆ ಮಂಗಳವಾಗಲಿ. ನಮ್ಮೆಲ್ಲರ, ನಿಮ್ಮೆಲ್ಲರ ಇಷ್ಟ ಕಾಮನೆಗಳು ನೆರವೇರಲಿ.

- Login or register to post comments
- 547 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS:
ಪ್ರತಿಕ್ರಿಯೆಗಳು
ಉ: ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !
veena.
ಧನ್ಯವಾದಗಳು ವೆಂಕಟೇಶ್ ಅವರೆ, ಫೋಟೋ ನೋಡಿ ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು.
ಈಗ್ಗೆ ಇಪ್ಪತ್ತು ವರ್ಷಗಳ ಕೆಳಗೆ ನಾವು ಪ್ರತಿ ಭಾನುವಾರ ಅಲ್ಲಿಗೆ ಹೋಗಿ ಪಕ್ಕದ ತೋಟದಲ್ಲಿ ಆಟವಾಡುತಿದ್ದುದು ನೆನಪಿಗೆ ಬಂದಿತು.
ಉ: ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !
veena.
ಅಷ್ಟೆ ಅಲ್ಲ, ಈ ಗಣಪತಿಯ ಇನ್ನೊಂದು ವಿಶೇಷವೆಂದರೆ ಇದಕ್ಕೆ ಉದ್ದನೆಯ ಜಡೆ ಇದೆ.
ಉ: ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !
ಹೌದು. ಅದನ್ನು ಇಲ್ಲಿ ಸೇರಿಸಿದ್ದೇನೆ. ನೆನಪಿಸಿದ್ದಕ್ಕೆ ಧನ್ಯವಾದಗಳು ; ವೀಣಾ ರವರೆ.