22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ

May 25, 2006 - 2:25pm
ismail

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ ತೊಡಗಿಕೊಂಡವರು ಜನಪ್ರಿಯ ಮಾಧ್ಯಮಗಳನ್ನು ಕೈಗೆತ್ತಿಕೊಂಡಾಗ ಸೋಲುತ್ತಾರೆ ಎಂಬುದನ್ನೂ ಸೀತಾರಾಂ ಸುಳ್ಳು ಮಾಡಿದರು. ಮೊದಲೆರಡು ಧಾರಾವಾಹಿಗಳ ಯಶಸ್ಸಿನಾಚೆಗೆ ಅವರ `ಮುಕ್ತ' ಸಾಗಿದೆ. ಮೆಗಾ ಧಾರಾವಾಹಿಗಳ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಅವರು ಇತ್ತೀಚೆಗೆ ಎರಡು ಚಲನಚಿತ್ರಗಳನ್ನು ಪ್ರಕಟಿಸಿದ್ದಾರೆ. ಈ‌ ಸಮಯದಲ್ಲಿ ಸಂಪದದ ಕೆಲ ಪ್ರಮುಖ ಸದಸ್ಯರು ಸೀತಾರಾಂರವರ ಸಂದರ್ಶನ ಮಾಡಬೇಕು ಎಂದು ಬಹಳ ಹಿಂದೆಯೇ ಆಲೋಚಿಸಿದ್ದರು, ಆದರೆ ಸಾಧ್ಯವಾಗಿದ್ದು ಹಲವು ತಿಂಗಳುಗಳ ನಂತರವೇ.

 

ಪ್ರತೀ ಬಾರಿಯೂ ಸಂದರ್ಶನ ನಡೆಸಲು ಹೋಗುವವರಷ್ಟೇ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡು ಕೇಳುತ್ತಿದ್ದರು. ಈ ಬಾರಿ ಸಂಪದ ಬಳಗದ ಸದಸ್ಯರಿಂದ ಪ್ರಶ್ನೆಗಳನ್ನು ಆಹ್ವಾನಿಸಿ ಅವುಗಳಿಗೂ ಉತ್ತರ ಪಡೆಯಲು ಪ್ರಯತ್ನಿಸಿದ್ದೇವೆ. ಸಮಯದ ಅಭಾವ ಮುಂತಾದ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಮಿತಿಯೊಳಗೆ ಒಳ್ಳೆಯದನ್ನು ನೀಡುವ ನಮ್ಮ ಪ್ರಯತ್ನ ವಿಫಲವಾಗಿಲ್ಲ ಎನಿಸುತ್ತಿದೆ. ಇದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ನೀವೇ ತಿಳಿಸಬೇಕು.

> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ (೧೯ MB). ಸಂದರ್ಶನದ ದಿನ ತೆಗೆದ ಕೆಲವು ಫೋಟೋಗಳು:

ಟಿ ಎನ್ ಸೀತಾರಾಂರವರ ಮನೆ ಹುಡುಕುವುದರಲ್ಲಿ ಬ್ಯುಸಿ ಟಿ ಎನ್ ಸೀತಾರಾಂT N Seetharam

ಸಂದರ್ಶನ ಇಲ್ಲೇ ಕೇಳಿ: 
ಲೇಖನ ವರ್ಗ (Category): 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by srivathsajoshi on
ಸಂದರ್ಶನ ಚೆನ್ನಾಗಿ ಬಂದಿದೆ. ಕೇಳಿದ ಪ್ರಶ್ನೆಗಳೂ ಸೂಕ್ತವಾಗಿವೆ; ಅವಕ್ಕೆ ಸೀತಾರಾಮ್ ಕೊಟ್ಟ ಉತ್ತರಗಳೂ ಸಮರ್ಪಕವಾಗಿವೆ. ಸಂದರ್ಶನವನ್ನು ಸಾಧ್ಯವಾಗಿಸಿದ 'ಸಂಪದ' ಬಳಗಕ್ಕೆ ಧನ್ಯವಾದ. - ಶ್ರೀವತ್ಸ ಜೋಶಿ

Submitted by tvsrinivas41 on
ಸಂಪದಕ್ಕೆ ಮತ್ತೊಂದು ಗರಿ ಮೂಡಿದೆ. ಎಲ್ಲ ಅಂಶಗಳನ್ನೂ ಒಳಗೊಂಡ, ಚಿಕ್ಕದಾದ ಚೊಕ್ಕದಾದ ಸಂದರ್ಶನ ಮನ ತಣಿಸಿತು. ಸೀತಾರಾಂ ಅವರ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಸಂಪದದ ತಂಡಕ್ಕೆ ಧನ್ಯವಾದಗಳು. ಟಿವಿ ಧಾರಾವಾಹಿಯನ್ನು ನೋಡದ ನನಗೂ ಈಗ ನೋಡುವ ಮನಸ್ಸಾಗುತ್ತಿದೆ. ಇಲ್ಲಿಯವರೆವಿಗೆ ಸೀತಾರಾಂ ಅವರ ಚಿಂತನೆಗಳನ್ನು ತಪ್ಪಿಸಿಕೊಂಡೆನಲ್ಲ ಎನ್ನಿಸುತ್ತಿದೆ. ಮತ್ತೊಮ್ಮೆ ತಂಡಕ್ಕೆ ವಂದನೆಗಳು. ವಂದನೆಗಳೊಂದಿಗೆ --- ತವಿಶ್ರೀನಿವಾಸ [:http://asraya.net]

Submitted by ismail on
ಸೀತಾರಾಂ ಅವರ ಸಂದರ್ಶನ ಚೆನ್ನಾಗಿದೆ ಎಂದು ಹಲವರು ಹೇಳಿದ್ದಾರೆ. ಈ ಹಿಂದೆ ನಾವು ನಡೆಸಿದ ಸಂದರ್ಶನಗಳಿಗೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈ ಸಂದರ್ಶನಗಳನ್ನು ಕೇಳುವುದಕ್ಕೆ ಅಗತ್ಯವಿರುವ ತಾಂತ್ರಿಕ ಸೌಕರ್ಯಗಳಿಲ್ಲದವರಿಗೆ ಅನುಕೂಲವಾಗುವಂತೆ ಇವುಗಳನ್ನು ಟ್ರಾನ್ಸ್ ಸ್ಕ್ರೈಬ್ ಮಾಡಬಹುದು. ಸಂಪದ ಸದಸ್ಯರು ಮನಸ್ಸು ಮಾಡಿದರೆ ಇದೇನು ದೊಡ್ಡ ವಿಷಯವಲ್ಲ. ಯಾರಾದರೂ ಈ ಕೆಲಸ ವಹಿಸಿಕೊಳ್ಳಲು ಸಿದ್ಧರಿದ್ದೀರಾ?

Submitted by ismail on
ತಮ್ಮ ಪ್ರಶ್ನೆ ನನಗೆ ಅರ್ಥವಾಗಲಿಲ್ಲ. ನೀವು ಆ ಪದದ ಅರ್ಥ ಕೇಳುತ್ತಿದ್ದೀರಾದರೆ ಅದು ಹೀಗಿದೆ. transcribe - write out from speech, notes, etc. put down in writing; of texts, musical compositions, etc. ಅಥವಾ ಇನ್ನೂ ಸ್ಪಷ್ಟವಾಗಿ ಬೇಕೆಂದರೆ ಹೀಗೂ ಹೇಳಬಹುದು. Linguistics To represent (speech sounds) by phonetic symbols. ಇದರ ಮೂಲ Latin trnscrbere : trns-, trans- + scrbere. ಇಸ್ಮಾಯಿಲ್

Submitted by venkatesh on
ನನ್ನ "ಆಡಿಯೊ" ಕೆಟ್ಟಿದ್ದರಿಂದ ಇದುವರೆಗು ಇದನ್ನು ಕೇಳಲು ಆಗಿರಿಲಿಲ್ಲ. ಈ ದಿನ ಸಾಧ್ಯವಾಯಿತು !! ನಿಮ್ಮ ಎಲ್ಲ 'ಶ್ರಾವ್ಯ' ಗಳು ಅತ್ಯಂತ ಮಧುರ ! ಏಕೆಂದರೆ ಅದರಲ್ಲಿ ನೀವು ಜೀವತುಂಬುವುದರಿಂದ ! ಸೀತಾರಾಮ್ ,ನನಗೆ ಬಹು ಪ್ರಿಯರು ! ಅವರ ಧಾರಾವಾಹಿ 'ಮಾಯಾಮೃಗ' ನಮ್ಮ ನೆಯವರನ್ನೇನು "ಪಕ್ಕದ ವಠಾರ ದವರನ್ನು, ಗಾಢವಾಗಿ ಕಾಡಿತ್ತು" ಎಂದರೆ ಅತಿಶಯೋಕ್ತಿಯಲ್ಲ ! ಸಂದರ್ಶನದ ಬಗ್ಯೆ ನನ್ನ ಅನಿಸಿಕೆ : ೧. ಕನ್ನಡದ ಮಹಾಮಹಿಮರ ಮನೆಮಾತು "ಕನ್ನಡ" ಆಗಲು ಹೇಗೆ ಸಾಧ್ಯ ? ಎಂದು ನನಗೆ ಬಹಳ ಬಾರಿ ಅನ್ನಿಸಿತ್ತು. ನೋಡಿ, ಡಿ.ವಿ.ಜಿ, ಕೈಲಾಸಂ, ರಾಜರತ್ನಂ, ಆರ್.ಕೆ.ಲಕ್ಷ್ಮಣ್, ರಾಶಿ, ನಾ.ಕಸ್ತೂರಿ, ಕೆ.ವಿ.ಐಯ್ಯರ್, ಪುತಿನ, ಮಾಸ್ತಿ, ಎ.ಕೆ.ರಾಮಾನುಜಂ ಇತ್ಯಾದಿ... ಗಳೇ ಸಾಕ್ಷಿ ! ನನಗೆ ಅವರುಗಳಬಗ್ಯೆ ಹೆಮ್ಮೆ. ಅವರೆಲ್ಲಾ ಶ್ರೇಷ್ಟ ಕನ್ನಡಿಗರು ! ಸೀತಾರಾಂ ಅದಕ್ಕೆ ಹೊರತಲ್ಲ. ೨. ಅವರು ಜಾಗತೀಕರಣದ ವಿರೋಧಿಯಲ್ಲ.ಆದರೆ ಅದರಿಂದ ನಮ್ಮಜನರಿಗೆ, ಕೃಷಿಕರಿಗೆ ಒಳ್ಳೆಯದಾಗಬೇಕಷ್ಟೆ ಎಂದಿರುವುದು ಶ್ಲಾಘನೀಯ ! ೩. ಶುದ್ಧ ಕನ್ನಡದ ಉಪಯೋಗಕ್ಕೆ ಶ್ರಮಿಸುತ್ತಿರುವುದು ನಮಗೆ ಆದರ್ಶಪ್ರಾಯವಾಗಿದೆ.ಭಾವನಾತ್ಮಕ ಪ್ರತಿಕ್ರಿಯಗಳಿಗೆ ಒತ್ತುಕೊಡುತ್ತಾರೆ. ೪. ಅನಿವಾಸಿ ಭಾರತೀಯರನ್ನು ಹತ್ತಿರದಿಂದ ನೋಡಿ ಸ್ಪಂದಿಸಿ ನಮಗೆ ಮಾಹಿತಿ ದೊರಕಿಸಿದ್ದಾರೆ. ೫. ನನ್ನಂತೆ, ಸಂಪದ ಬಳಗದ ಸದಸ್ಯರಿಗೆ ಉತ್ತರಿಸಿರುವುದು,ಬಹಳ ಚಿನ್ನಾಗಿದೆ; ಏಕೆಂದರೆ ನಾವೆಲ್ಲಾ ಅವರ ಭಂಟರು !! ೬. ಹೀಗೆಯೆ ಇನ್ನು ಉತ್ತಮ ಸಂದರ್ಶನಗಳು ಮೂಡಿಬರಲೆಂದು ಹಾರೈಸುತ್ತೇನೆ. ೭. ಒಂದು ಸವಿನಯ ಪ್ರಾರ್ಥನೆ : ನಿಮ್ಮ ಸಂದರ್ಶನಕಾರರ ದ್ವನಿ ಬಹಳ 'ಕ್ಷೀಣ' ವಾಗಿದ್ದು ನನ್ನಂತಹ ವಯಸ್ಸಾದವನಿಗೆ ಸ್ವಲ್ಪ ಕಷ್ಟವಾಯಿತು !ಏನಾದರು ಮಾಡಿ !!

Submitted by ismail on
ಸಂದರ್ಶನಕಾರರ ಧ್ವನಿ ಕ್ಷೀಣವಾಗಿರುವುದು ನಮ್ಮ ಅರಿವಿಗೂ ಬಂದಿದೆ. ನಿಮ್ಮ ಸಲಹೆಗೆ ಧನ್ಯವಾದಗಳು. ಮುಂದಿನ ಬಾರಿ ಈ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ.

Submitted by venkatesh on
ಕರ್ನಾಟಕ ಸಂಗೀತ ವಿದುಷಿ ಯರಾದ ಇಬ್ಬರು ಪ್ರಸಿದ್ಧ ಗಾಯಕಿಯರ ಸಂದರ್ಶನ ಮಾಡಿ ಅವರ ಧ್ವ ನಿಯನ್ನು ಸೆರೆಹಿಡಿದು ಕನ್ನಡದ ಜನತೆಗೆ ಒದಗಿಸಿ. ೧. ಶ್ರೀಮತಿ. ಡಾ.ಸುಕನ್ಯ :- ಇವರು ತಮ್ಮ ಪಿ.ಎಚ್.ಡಿ ಗೆ 'ಜಯಚಾಮರಾಜೇಂದ್ರ ಪೊಡೆಯರ ರಚನೆಗಳನ್ನು ತೆಗೆದುಕೊಂಡು, ಅವುಗಳ ಪರಿಚಯಮಾಡಿಕೊಟ್ಟಿದ್ದರು. ೨. ಶ್ರೀಮತಿ. ಡಾ.ಸತ್ಯವತಿಯವರು:- ಇವರು ಸಂಗೀತವನ್ನು, ಕರಗತ, ಕಂಠಗತ ಮಾಡಿಕೊಂಡು ಅತ್ಯಂತ ವಿದ್ವತ್ ಪೂರ್ಣವಾಗಿ, ಸಾಮಾನ್ಯರಿಗೂ ತಿಳಿಯುವಂತೆ ರಾಗಗಳ ಜಾಡನ್ನು ಪರಿಚಿಯಿಸುತ್ತಾ ಹಲವಾರು ಕೃತಿಗಳನ್ನು ಹಾಗೆಯೆ ಹೇಳಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದರು. ಈ ಇಬ್ಬರು ಮಹಾನ್ ಕಲಾಕಾರರು ಮುಂಬೈ ಗೆ ಹೋದ ವರ್ಷ ಬಂದಿದ್ದರು. ಅವರ ಈ "ಗಾಯನ-ಉಪನ್ಯಾಸ ಗಳ ಸಾಮರ್ಥ್ಯ" ವನ್ನು ಜೀವಂತವಾಗಿ ಸೆರೆಹಿಡಿಯುವ ಮೂಲಕ ಬಳಸಿಕೊಳ್ಳಿ ! ಕರ್ನಾಟಕ ಸಂಗೀತದ ಪ್ರೇಮಿಗಳು ಅಪಾರ ! ಸ್ವಲ್ಪ ದ್ವನಿಯನ್ನು ಎತ್ತರಿಸ ಬೇಕು,ಮತ್ತು ಸಂಸ್ಕರಿಸಬೇಕು.

Submitted by ಮಹೇಶ ಭೋಗಾದಿ on
ಸಂಪದಿಗರೆ, ನನ್ನ ಅನಿಸಿಕೆಯಲ್ಲಿ, ಸಂಪದವು ಮುಖ್ಯವಾಗಿ ಕನ್ನಡ ನುಡಿ ಹಾಗು ಅದರ ಬರಹಗಳ ಮೇಲೆ ಒತ್ತುಕೊಡುವ ತಾಣವೆಂದುಕೊಂಡಿದ್ದೇನೆ. ಸಾಹಿತ್ಯ ಪ್ರಕಾರಗಳಲ್ಲಿ ನಾಟಕವೊಂದು ಬಗೆ. ಈಗೀನ ಧಾರಾವಾಹಿ, ಸಿನಿಮಾಗಳನ್ನು ನಾಟಕಗಳೆಂದೆ ಎಣಿಸಬೇಕು. ಆದ್ದರಿಂದ ಆದಷ್ಟು ಬರಹಗಾರರೊಂದಿಗೆ, ನುಡಿತಜ್ಞರೊಂದಿಗೆ, ಮಾತುಕತೆಗಳನ್ನು ನಡೆಸಿ ಇಲ್ಲಿ ಹೊಮ್ಮಿಸೋಣ. ಆದಷ್ಟು ನಮ್ಮ ಗಮನ ಸಂಪದದ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೆಚ್ಚು ಭಾಷೆ ಮತ್ತು ಸಾಹಿತ್ಯದ ಮೇಲಿರಲಿ, ಎಂದು ನನ್ನ ಬಿನ್ನಹ. ಮಹೇಶ

Submitted by venkatesh on
ಭಾಷೆ, ಒಂದು ವಿಶಾಲ ವೃಕ್ಷ. ಅದರ ಅಡಿ ಹಾಗು ಶಿಖರದ ಬಳಿ ಎಲ್ಲಾ ಪ್ರಕಾರಗಳೂ ಪ್ರಫುಲ್ಲಿತವಾಗಿ ಬೆಳೆದು ಮುದನೀಡುತ್ತವೆ.ಸಾಹಿತ್ಯ, ನುಡಿ ಒಂದು ಭಾಗವಾದರೆ, ಸಂಗೀತ ಬರುವುದೂ ಭಾಷೆಯ ಮಾಧ್ಯಮದಿಂದಲೆ. ಅದು ಆನಂದದ ಸೀಮೆಯನ್ನು ದಾಟಿ ಬರುವುದು, (ಹಷೋಲ್ಲಾಸ) ನಮ್ಮೆಲ್ಲರಿಗೂ ಅನುಭವಕ್ಕೆ ಬಂದ ಸಂಗತಿ ! 'ಶ್ರಾವ್ಯ'ದಲ್ಲಿ ಇಂತಹ ಸಂಕೀರ್ಣತೆಯನ್ನು ಸೊಗಸಾಗಿ ನಮ್ಮದಾಗಿಸ ಬಹುದೇನೊ ಎನ್ನುವ ಮತ ನನ್ನದು. ಇದು ಸಹೃದಯರಿಗೆ, ಮೇಧಾವಿಗಳ ತೀರ್ಮಾನಕ್ಕೆ ಬಿಟ್ಟ ವಿಷಯ !

Submitted by bhatpp on
ವೆಂಕಟೇಶರೆ, ನೀವು ಹೇಳಿದ್ದು ಅಕ್ಷರಶಃ ನೆರವೇರಲಿ! ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು, ಶ್ರಾವ್ಯಗಳು! ನಾಟಕಕಾರನೋ, ಕವಿಯೋ, ಪ್ರಬಂಧಕರ್ತೃವೋ, ಯಕ್ಷಗಾನ ಕಲಾವಿದನೋ, ಟೀಕಾಕಾರನೋ, ಚಲನಚಿತ್ರ ನಿರ್ದೇಶಕನೋ, ನಟನೋ, ನಟಿಯೋ, ವರ್ತಕನೋ, ರಾಜಕಾರಣಿಯೋ, ಅಥವಾ ಯಾವುದೇ ವಿಶೇಷಣವಿಲ್ಲದ ಸಾಮಾನ್ಯ ಪ್ರಜೆಯೋ, ಯಾರೇ ಇರಲಿ, ಬರಲಿ ಇಂತಹ ಸಂದರ್ಶನಗಳು! ಎಲ್ಲರ ಅಭಿಪ್ರಾಯಗಳನ್ನು ಆಲಿಸೋಣ, ಅರಿಯೋಣ, ಅವರಿಂದ ಕಲಿಯಲು ಏನಾದರೂ ಇದ್ದರೆ ಕಲಿಯೋಣ! ಇದರಿಂದ ನಮ್ಮ ಅರಿವು ಹೆಚ್ಚುವುದೇ ಹೊರತು ಕುಂದುವುದಿಲ್ಲ! "ಆನೋ ಭದ್ರಾಃ ಕೃತವೋ ಯಂತು ವಿಶ್ವತಃ", ಎಲ್ಲೆಡೆಯಿಂದ ಬರಲಿ ಜ್ಞಾನ ಭಂಡಾರ, ಅದನ್ನು ಸೂರೆಗೊಳ್ಳುವ! ಕುವೆಂಪುರವರ ನುಡಿಯಂತೆ, ಎಲ್ಲಿಯೂ ನಿಲ್ಲದಿರೋಣ, ಮನೆಯನೆಂದೂ ಕಟ್ಟದಿರೋಣ, ಕೊನೆಯನೆಂದೂ ಮುಟ್ಟದಿರೋಣ!

Submitted by ahoratra on

ಸಂಪದಕ್ಕೆ ಕನ್ನಡವೊಂದೆ ಮಿತಿಯೆಂದು ತಿಳಿಯೋಣ, ಮತ್ಯಾವ ಬಂದನಗಳೂ ಬೇಡ. ಶ್ರೀ ವೆಂಕಟೇಶರ ಮತ್ತು ಶ್ರೀ ಭಟ್ಟರ ಮಾತು ಸಮಂಜಸವೆನಿಸುತ್ತದೆ, ಮತ್ತು ಯಾರನ್ನು ಸಂಧರ್ಶಿಸುವುದು ಎನ್ನುವುದು ಸಂಪದಕ್ಕೆ ಬಿಟ್ಟದ್ದು. ನಿಮಗೆ ಗೊತ್ತಿರುವವರನ್ನು ಹೆಸರಿಸುವಲ್ಲಿ ಸಂಪದಕ್ಕೆ ಉಪಕಾರವೇ ಆದೀತು. ಕಲಾವಿದರಿಗೆ ಪ್ರೋತ್ಸಾಹವೂ ಸಿಗುವುದು.

ಮುನಿಸಿದ್ದಲ್ಲಿ ಮನ್ನಿಸಿ, 

ಅಹೋರಾತ್ರ

Submitted by venkatesh on
ಭಟ್ಟರಿಗೆ ನಮಸ್ಕಾರಗಳು . "ನಹಿ ಜ್ಞಾನೇನ ಸದೃಶಂ" ಎಲ್ಲೆಡೆಯಿಂದಲೂ ನಮ್ಮ ಜೀವನದಲ್ಲಿ ಹೊಸ ಹೊಸ ವಿಚಾರ ವಾಹಿನಿಗಳು ಬಂದು ನಮ್ಮ ಬದುಕನ್ನು ಸಮೃದ್ಧ ಗೊಳಿಸಲಿ. 'ಯಕ್ಷಗಾನ'ದ ಬಗ್ಯೆ ಓದಿದರೆ ಸಾಲದು.ಶಿವರಾಮಕಾರಂತರ ಕನಸುಗಳನ್ನು ನನಸು ಮಾಡಬೇಕಾದರೆ ಬಲವಾದ 'ಸಂಪದ'ದಂತಹ ಮಾಧ್ಯಮವನ್ನು ಮೊರೆಹೋಗದೆ ಸಾಧ್ಯವಿಲ್ಲ.ನಾಡಿಗರಂತಹ, ಹೊಸ ಹೊಸ ವಿಷಯಗಳಿಗೆ ಸ್ಪಂದಿಸುವಂತಹ ಯುವಕರು ಖಂಡಿತ ಈ ಕೆಲಸ ಮಾಡೇಮಾಡುತ್ತಾರೆ ಎಂಬ ನಂಬಿಕೆ ನನಗೆ !