rajeshnaik111 (ಲೇಖನಗಳು)
ನಗರೇಶ್ವರ ದೇವಸ್ಥಾನ - ಬಂಕಾಪುರ
September 22, 2008 - 2:12pm — rajeshnaik111
ನಗರೇಶ್ವರ ದೇವಸ್ಥಾನ ತಲುಪಿದಾಗ ನನಗೆ ಕಂಡದ್ದು ಒಂದು ಭವ್ಯ ದೇವಸ್ಥಾನದ ಮುಖಮಂಟಪದಲ್ಲಿ ಕೂತು ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ಜತನದಿಂದ ದೇವಾಲಯವನ್ನು ಕಾಯುವ ಕಾಯಕದಡಿ ಸುತ್ತಲೂ ಗುಡಿಸುತ್ತಿದ್ದ ಪುರಾತತ್ವ ಇಲಾಖೆಯ ಉದ್ಯೋಗಿ ಗುರುರಾಜ. ಆ ವಿದ್ಯಾರ್ಥಿಯೇನೋ ನನ್ನನ್ನು ನೋಡಿದ ಆದರೆ ಗುರುರಾಜ ತನ್ನ ಕೆಲಸದಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ ನಾನು ದೇವಾಲಯದ ಒಂದು ಸುತ್ತು ಹಾಕಿ ನಂತರ ದೇವಾಲಯವನ್ನು ಪ್ರವೇಶಿಸುವವರೆಗೂ ಅವರು ನನ್ನನ್ನು ಗಮನಿಸಿಯೇ ಇರಲಿಲ್ಲ.
ಅದೆಷ್ಟೋ ದಿನಗಳ ಬಳಿಕ ದೇವಾಲಯ ನೋಡಲು ಒಬ್ಬ ಪ್ರವಾಸಿಗ ಬಂದ ಎಂದು ನನ್ನನ್ನು ಕಂಡು ಗುರುರಾಜರಿಗೆ ಎಲ್ಲಿಲ್ಲದ ಸಂತೋಷ. ೧೧ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ವಿಷಯ ಬಿಟ್ಟರೆ ಇವರಿಗೆ ಈ ದೇವಾಲಯದ ಬಗ್ಗೆ ಬೇರೇನೂ ಗೊತ್ತಿಲ್ಲ. ಮುಂದೆ ಓದಿ »

ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿದ್ದು ...
September 18, 2008 - 10:13pm — rajeshnaik111
ಲಾಲ್ಗುಳಿ ಮಿಶನ್ ವೈಫಲ್ಯದ ಬಳಿಕ ಹಿಂತಿರುಗುವಾಗ ಕುಳಿ ಮಾಗೋಡು ಜಲಧಾರೆಯ ಬಗ್ಗೆ, ’ಕುಳಿ ಮಾಗೋಡು ಜಲಧಾರೆ ಇದೆ’ ಎಂದು ನಾಲ್ಕು ಶಬ್ದಗಳ ಮಾಹಿತಿಯನ್ನು ಉತ್ತರ ಕನ್ನಡದ ಜಲಧಾರೆಗಳ ಬಗ್ಗೆ ಬಂದಿದ್ದ ಲೇಖನವೊಂದರಲ್ಲಿ ಓದಿದ್ದ ನೆನಪಾಯಿತು. ಅನಿಲನಲ್ಲಿ ಹೇಳಿದಾಗ ಹುಡುಕೋಣವೆಂದು ಉತ್ಸಾಹದಿಂದಲೇ ಒಪ್ಪಿದ.
ಮಾಹಿತಿ ಪಡೆಯಲು ಕುಳಿ ಮಾಗೋಡಿನಲ್ಲಿ ಮನೆಯೊಂದಕ್ಕೆ ತೆರಳಿದೆವು. ಅಲ್ಲೊಬ್ಬ ನಾಲ್ಕನೇ ತರಗತಿ ಓದುವ ಪೋರ, ಬಲಕ್ಕೆ ಹೋಗಿ ಎಡಕ್ಕೆ ಹೋಗಿ ನೇರಕ್ಕೆ ಹೋಗಿ ಎಡಕ್ಕೆ ಹೋಗಿ ಎಂದು ಕನ್ಫ್ಯೂಸ್ ಮಾಡಿಬಿಟ್ಟ. ನಂತರ ಆತನ ಅಜ್ಜ, ದಾರಿ ಸರಿಯಾಗಿ ಹೇಳಲು ಆಗುದಿಲ್ಲವೆಂದೂ, ಬಹಳ ಕಡೆ ಅಲ್ಲಲ್ಲಿ ಎಡಕ್ಕೆ ಬಲಕ್ಕೆ ತಿರುಗಬೇಕೆಂದು ಹೇಳಿ ಪ್ರಮುಖ ರಸ್ತೆಯಿಂದ ಎಲ್ಲಿ ತಿರುವು ಪಡೆಯಬೇಕೆಂಬ ಮಾಹಿತಿ ನೀಡಿದರು.
ಆ ಹಿರಿಯರು ಹೇಳಿದಲ್ಲಿ ತಿರುವು ತಗೊಂಡು ನೇರವಾಗಿ ಮುನ್ನಡೆದೆವು. ಒಂದು ಕಿ.ಮಿ. ಬಳಿಕ ಅಲ್ಲೊಂದಷ್ಟು ಮನೆಗಳು. ವಿಚಾರಿಸಿದಾಗ, ಸ್ವಲ್ಪ ಮೊದಲೇ ಸಿಗುವ ನಾವು ನಿರ್ಲಕ್ಷಿಸಿ ಬಂದಿದ್ದ ಕವಲು ದಾರಿಯಲ್ಲಿ ತೆರಳಬೇಕೆಂದು ತಿಳಿಯಿತು. ಹಾಗೆ ಹಿಂದೆ ಬಂದರೆ ಅಲ್ಲಿ ಒಂದೇ ಪಾರ್ಶ್ವದಲ್ಲಿ ೩ ದಾರಿಗಳು. ಆದದ್ದಾಗಲಿ ಎಂದು ಒಂದು ರಸ್ತೆಯಲ್ಲಿ ತೆರಳಿದೆವು. ಸ್ವಲ್ಪ ಮುಂದೆ ಮತ್ತೆ ೪ ಕವಲುಗಳು! ಇಲ್ಲೊಂದು ರಸ್ತೆಯನ್ನು ಆಯ್ಕೆ ಮಾಡಿ ಅದರಲ್ಲಿ ತೆರಳಿದೆವು. ಮುಂದೆ ಮತ್ತೆರಡು ಕಡೆ ದಾರಿಗಳು ಕವಲೊಡೆದಿದ್ದವು. ಆದರೂ ನೇರ ರಸ್ತೆಯಲ್ಲೇ ಮುಂದೆ ಸಾಗಿದಾಗ, ರಸ್ತೆ ಕೊನೆಗೊಂಡು ಕಾಲುದಾರಿ ಆರಂಭವಾಯಿತು. ಮುಂದೆ ಓದಿ »

ಕಲ್ಲೇಶ್ವರ ದೇವಾಲಯ - ಬಾಗಳಿ
September 13, 2008 - 9:09pm — rajeshnaik111ಬಾಗಳಿಯಲ್ಲಿರುವ ಕಲ್ಲೇಶ್ವರ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎನ್ನುತ್ತಾರೆ. ಕೆರೆಯ ಬದಿಯಲ್ಲಿರುವ ದೇವಾಲಯವನ್ನು ನವೀಕರಿಸಿ ಪುರಾತತ್ವ ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದೆ. ನವರಂಗ ಚಾಳುಕ್ಯ ಶೈಲಿಯಲ್ಲಿದೆ. ಮುಖಮಂಟಪ/ಸುಖನಾಸಿ ಹೊಯ್ಸಳ ಶೈಲಿಯಲ್ಲಿದೆ. ಕಡೆಯದಾಗಿ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕು ಶೈಲಿಗಳ ಮಿಲನ ಬೇರೆಲ್ಲಾದರೂ ಕಾಣಸಿಕ್ಕೀತೆ?
ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವನ್ನು ಇಸವಿ ೧೧೧೮ರಲ್ಲಿ ಚಾಲುಕ್ಯ ದೊರೆ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಶಾಸನಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಸಿಕ್ಕಿರುವ ೧೬ ಶಾಸನಗಳಲ್ಲಿ ೧೨ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನ ಕಾಲದ್ದಾಗಿವೆ. ಬಾಗಳಿ ಊರಿನಲ್ಲಿ ಸುಂದರ ವೀರಗಲ್ಲುಗಳೂ ದೊರೆತಿವೆ. ಗರ್ಭಗುಡಿಯಲ್ಲಿರುವ ಕಲ್ಲೇಶ್ವರನ ಮೇಲೆ ಯುಗಾದಿಯ ಶುಭ ದಿನದಂದು ಸೂರ್ಯನ ಕಿರಣಗಳು ಬೀಳುತ್ತವಂತೆ. ಗರ್ಭಗುಡಿಯ ಮೇಲೆ ಗೋಪುರವಿದ್ದರೂ ಯುಗಾದಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ಹೇಗೆ ಒಳಗೆ ತೂರಿ ಬರುತ್ತವೆಂದು ಕಾರಣವನ್ನು ಕಂಡು ಹಿಡಿಯಲು ಇದುವರೆಗೆ ಆಗಿಲ್ಲವಂತೆ. ಆದರೆ ಇದನ್ನು ವೀಕ್ಷಿಸಲು ಯುಗಾದಿಯಂದು ಬಹಳಷ್ತು ಜನರು ಇಲ್ಲಿ ಸೇರುತ್ತಾರೆ. ಮುಂದೆ ಓದಿ »

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
April 1, 2008 - 9:10pm — rajeshnaik111
ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.
ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.
ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ. ಮುಂದೆ ಓದಿ »





RSS: