rasheed (ಲೇಖನಗಳು)
ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ
March 14, 2007 - 8:25pm — rasheedನನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’ ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.
ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ.
ಇಟ್ಟರೆ ಸಗಣಿ ಯಾದೆ ತಟ್ಟಿದರೆ ಬೆರಣಿಯಾದೆ ನೀನಾರಿಗಾದೆಯೋ ಎಲೆಮಾನವಾ ಎಂದು ಯಾರಿಗೂ ಕ್ಯಾರೇ ಅನ್ನದೆ ನಾನು ಬರೆಯುತ್ತಲೇ ಇರುತ್ತೇನೆ.
ಈಗಲೂ ಅಷ್ಟೇ. ಆಮಿತಾತ ತೀರಿಹೋದರು ಅಂತ ಸುದ್ದಿ ಗೊತ್ತಾದಾಗ ನಾನು ಎಲ್ಲೋ ಬೀದಿ ಸುತ್ತುತ್ತಿದ್ದೆ. ಆಮೇಲೆ ಸುಮ್ಮನೆ ಮನೆಗೆ ಬಂದು ನಿದ್ದೆ ಹೋದೆ.ಇನ್ನೂ ಮಳೆ ಸುರಿಯುತ್ತಲೇ ಇತ್ತು. ಹಗಲು ಸುಸ್ತು ಹೊಡೆದಂತೆ ಮಂಕಾಗಿ ಹೋಗಿತ್ತು.
ಬಾಗಿಲು ಬಡಿಯುವ ಕರ್ಕಶ ಸದ್ದಿಗೆ ಹೆದರಿ ಎದ್ದು ಬಂದರೆ ಯಾವನೋ ಒಬ್ಬ ಜಮೀನು ದಲ್ಲಾಳಿ ಕಮಿಷನ್ ವಿಷಯಕ್ಕೆ ಜಗಳ ಕಾಯಲು ಬಂದು ಕೂತಿದ್ದ. ಹಳ್ಳಿಯ ದಲ್ಲಾಳಿ. ಆತನಿಗೆ ಜಮೀನು ವ್ಯವಹಾರದ ಆದುನಿಕೋತ್ತರ ನಯ ನಾಜೂಕು ಒಂದೂ ಗೊತ್ತಿದ್ದಂತಿರಲಿಲ್ಲ.ಕುರಿ ಮರಿ ವ್ಯಾಪಾರದವನಂತೆ ಜಗಳಕ್ಕೇ ನಿಂತು ಕೊಂಡಿದ್ದ.ನಾನೂ ಅಷ್ಟೆ. ಅಷ್ಟೇ ಮೊಂಡನಂತೆ ಇದಕ್ಕಿಂತ ಹೆಚ್ಚು ಒಂದು ಕಾಸು ಕೊಡುವುದಿಲ್ಲ.ಅದೇನು ಕಿಸೀತೀಯಾ ಕಿಸಿ ಅಂತ ನಿದ್ದೆಗಣ್ಣಲ್ಲಿ ಜಗಳಕ್ಕೆ ನಿಂತಿದ್ದೆ.
ಆತನೂ ಹೆಗಲಲ್ಲಿದ್ದ ಕೊಳಕು ಟವಲ್ಲು ಕೊಡವಿ `ಅದೆಂಗಾದಾತೂ.. ದೇಸದಲ್ಲಿ ನಡೀತಿರೋ ವ್ಯವಹಾರ ಬುಟ್ಟು ನಾನು ಬೇರೇನಾದ್ರೂ ಕೇಳಿವ್ನಾ? ನನ್ ಕೂಲಿ ಕೊಡಿ. ಇಲ್ಲಾ ನ್ಯಾಯ ತೀರ್ಮಾನ ಆಗ್ಲಿ" ಅಂತ ದಲ್ಲಾಳಿ ಕೆಲಸವನ್ನು ಕೂಲಿ ಕೆಲಸದ ಜೊತೆ ಸಮೀಕರಿಸಿಕೊಂಡು ಜಾಗತೀಕರಣ ಮುಕ್ತ ಮಾರುಕಟ್ಟೆ ಇತ್ಯಾದಿಗಳ ವಕ್ತಾರನಂತೆ ಸಡ್ಡು ಹೊಡೆಯುತ್ತಿದ್ದ. ಮುಂದೆ ಓದಿ »

ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ
February 19, 2007 - 7:51pm — rasheed
ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,
ವಿಟನಂತಹ ಬೇಜವಾಬ್ಧಾರಿಯ ಗಂಡಸು, ಹಾಗೆಲ್ಲಾ
ಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದು
ಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ. ಮುಂದೆ ಓದಿ »

ಒಂದು ರೇಡಿಯೋ ಕವಿತೆ
February 9, 2007 - 6:22pm — rasheedಆಗ ರೇಡಿಯೋ ಇರಲಿಲ್ಲ . ಆದರೆ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು
ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,
ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,
ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ
ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.
ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .
ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ
ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ
ಅವರ ಸದ್ದು, ಆಕಾರ, ರೇಡಿಯೋ ಪೆಟ್ಟಿಗೆಯಂತಿರುವ ಅವರ ನೆನಪುಗಳು
ಎಲ್ಲ ಕೇಳಿಸುತ್ತಿದೆ.. ಅವರ ಕೈ ಹಿಡಿದು ಕೊಳ್ಳಲು ಸಿಗುತ್ತಿಲ್ಲ ಮುಂದೆ ಓದಿ »





RSS: