ನೇತ್ರಾವತಿಯನ್ನು ದಾಟುವಾಗ
ಕವನ
ಅಸ್ತಂಗಮ ಭಾಸ್ಕರನಿಗೆ
ಮುಗಿಲೊಡ್ಡಿದೆ ಛತ್ರಿ
ನದಿ ನೀರಲಿ ಪಡಿಮೂಡಿದೆ
ನೀಲಿಯ ಗಿರಿಧಾತ್ರಿ ||1||
ಇದು ನೆಳಲೊ,ಇದು ಮುಗಿಲೊ
ಹಿನ್ನೀರಲಿ ಚಿತ್ರ
ನಿಜ ಯಾವುದೊ,ಹುಸಿ ಯಾವುದೊ
ಮುನ್ನೀರು ವಿಚಿತ್ರ ||2||
ಹೊಳೆ ನೀರಿನ ಅಲೆಅಲೆಯಲಿ
ಮಂದಾನಿಲ ನ್ಱುತ್ಯ
ಹುರುಪಳಿಯದೆ ನುಡಿಯುತ್ತಿದೆ
ಈ ಕ್ಷಣವೇ ಸತ್ಯ ||3||
ಸಾಗುತ್ತಿದೆ ನಮ್ಮಯ ಪಥ
ಈ ಪರಿಸರ ದಾಟಿ
ಬಗೆಗಣ್ಣಿಗೆ ಗೋಚರಿಸುವ
ಬಣ್ಣಕದೇನ್ ಸಾಟಿ? ||4||
ಕಣ್ಣನು ಮುಚ್ಚಲು ಮಿಂಚಿತು
ಕ್ಷಣ ಕಾಲದಿ ಮಾಯ
ಹಿಡಿಬೊಗಸೆಗೆ ಸಿಕ್ಕಷ್ಟೇ
ಹರ್ಷಕೆ ತಳಪಾಯ ||5||
- Log in to post comments