ಸನ್ಯಾಸಿ ಆಗುವುದು ಸುಲಭ - ಹಾಸ್ಯ

ಸನ್ಯಾಸಿ ಆಗುವುದು ಸುಲಭ - ಹಾಸ್ಯ

ಬರಹ

 ನಂಗೆ ಯಾರೂ ಹೆಣ್ಣು ಕೊಡ್ತಾ ಇಲ್ಲ. ವಯಸ್ಸು ಬೇರೆ ಆಗಿ ಹೋಗಿದೆ ಅದಕ್ಕೆ ನಾನು ಸನ್ಯಾಸಿ ಆಗ್ಬೇಕು ಅಂತಾ ಇದೀನಿ ಅಂದಾ ಸುಬ್ಬ. ಬಂಡ್ವಾಳ ಇಲ್ಲದ ದುಡಿಮೆ, ಬೇಡ ಕಲಾ ಒಂದ್ ಕಿತ ಸನ್ಯಾಸಿ ಆದ್ರೆ ಅಟೆಯಾ. ಏ ಒಂದು ನೂರು ರೂಪಾಯಿ ಕೊಡು. ಯಾಕಲಾ. ಒಂದು ಕೆಂಪು ನೈಟಿ ತೊಗಬೇಕು ಅಂದಾ ಸುಬ್ಬ. ಮಾರನೆ ದಿನ ನೋತ್ತೀನಿ ಶ್ರೀ ಶ್ರೀ ಶ್ರೀ ಸುಬ್ಬ ಸ್ವಾಮೀಜಿ ಅಂತಾ ಸಿದ್ದೇಸನ ಗುಡಿಗೆ ಬಂದವ್ರೆ ಎಲ್ಲೂ ದರ್ಸನ ಪಡೆಯವಾ ಅಂತಾ ಹೋಯ್ತಾ ಇದ್ರು. ಹೋಗಿ ನೋಡಿದ್ರೆ ನಮ್ಮ ಸುಬ್ಬ. ತಲೆ, ಮೀಸೆ, ಹುಬ್ಬು ಎಲ್ಲಾ ಬೋಲ್ಸಕಂಡ್ ಬಿಟ್ಟಾವ್ನೆ. ಹಣ್ಯಾಗೆ ಮೂರು ಪಟ್ಟೆ.  ಉದ್ದನೆ ನೈಟಿ ಹಾಕಿದ್ದ. ಕಾಲಿಗೆ ಸಿಕ್ಕಾಂತತೆ ಅಂತಾ ಎಡಗೈನಾಗೆ ನೈಟಿ ಎತ್ಕಂಡು. ಕೈ ಹತ್ರಾ ಹೊಲಿಗೆ ಬೇರೆ ಬಿಟ್ಟಿತ್ತು. ಅದೇ ಕೈನಾಗೆ ಬೀಟೆ ಮರದ್ದು ದಂಡ, ಕಮಂಡಲ ಅಂತಾ ದೊಡ್ಡ ನೀರಿನ ಜಗ್ ಹಿಡ್ಕಂಡ್ ಬತ್ತಾ ಇದ್ದ. ಭಾರ ಜಾಸ್ತಿಯಾಗಿ ಎಡಗೈ ನಡಗೋದು. ಜನಾ ದೇವರು ಬಂದೈತೆ ಅಂತಾ ಕೈ ಮುಗಿಯೋದೆಯಾ. ಲೇ ಏನ್ಲಾ ಇದು. ಲೇ ನೈಟಿ ಮುಲಮುಲಾ ಅಂತದಲಾ ಅಂದ, ಏ ಥೂ.

ಸರಿ ಎಲ್ಲಾ ಪಾದ ಪೂಜೆ ಮಾಡಿದ್ವು. ಹೆಣ್ಣು ಐಕ್ಳು ಬಂದರೆ ಬೆನ್ನು ಸವರಿ ಆಸೀರ್ವಾದ ಮಾಡೋನು. ಅದೇ ಗಂಡು ಐಕ್ಳು ಹೋದರೆ ದೂರದಿಂದನೇ ಅಕ್ಕಿ ಎಸೆಯೋನು. ಗೌಡಪ್ಪನ ಹೋಗಿ ಕಾಲಿಗೆ ಬಿದ್ದ. ಹಳೇ ಸಿಟ್ಟು. ದಂಡದಾಗೆ ನೆತ್ತಿಗೆ ಒಂದು ಬಿಟ್ಟ ನೋಡಿ. ಗೌಡಪ್ಪ ಅರೆಮರೆವು ಆಗು ಹೋಗಿದ್ದ. ತಲೆ ಬಾತ್ಕೊಂಡಿತ್ತು. ಒಂದು ಬಾಟ್ಲ್ ಅಮೃಂತಾಜನ ಬಳಿದಿದ್ವಿ. ಮುಗ್ಗಲು ಹಿಡಿದಿದ್ದ ಕಾಯಿನ್ನ ಪ್ರಸಾದ ಅಂತಾ ಯಾರಿಗೋ ಕೊಟ್ಟಿದ್ನಂತೆ. ಬಡ್ಡೇ ಹತ್ತಾವು ತಿಂದು, ಫುಡ್ ಪಾಯಿಸನ್ ಆಗಿ ಆಸ್ಪತ್ರೆ ಸೇರ್ಕಂಡಿದ್ವು. ಈಗ ಬರೀ ಸೊಸೈಟಿ ಅಕ್ಕಿ ಮಾತ್ರನೇ ಪ್ರಸಾದ. ಒಂದು ತಿಂಗ್ಳಾಗೆ ಸಾನೆ ಪೇಮಸ್ ಆದ. ಸಿದ್ದೇಸನ ಗುಡಿನೇ ಮನೆ. ಬೆಳಗ್ಗೆ ಕೆರೆತಾವ ಹೋಗ್ ಬೇಕಂದ್ರೆ. ಬೆಳಗ್ಗೆ 4ಕ್ಕೆ ಎದ್ದು ಚೆಡ್ಡಿ ಮ್ಯಾಕೆ ಹೋಗೋನು. ಬೇಗ ಬಂದು ಗುಡಿ ಸೇರ್ಕಳ್ಳೋನು. ಯಾರಾದ್ರು ತಕ್ಸಣಕ್ಕೆ ಬಂದ್ರೆ ತೀರ್ಥ ಅಂತಾ ಅದೇ ಚೊಂಬಿನ ನೀರೇ ಕೊಡೋನು. ಸರಿ ಊರ್ನಾಗೆ ಯಾವುದೇ ಪಂಚಾಯ್ತಿ ಇದ್ರೂ ಅದೂ ಸುಬ್ಬ ಸ್ವಾಮಿಗಳ ನೇತೃತ್ವವೇ. ಊರಗಿನ ಅರಳಿ ಮರದ ಕೆಳಗೆ.

ಅದು ಭಾನುವಾರ ಮಾತ್ರ. ಮಿಕ್ಕಿದ್ದಿನ ಸುಬ್ಬ ಫುಲ್ ಬಿಸಿ.

ಅದೊಂದು ದಿನ ಪಂಚಾಯ್ತಿ. ಅತಳ ಸುತಳ ಪಾತಾಳ ವಿತಳ,ಅಂಡ ಪಿಂಡ ನಿಂಬೇ ಹಣ್ಣಿನ ಗುಂಡ ಮನಿಪ ಶ್ರೀ ಸುಬ್ಬು ಸ್ವಾಮಿಗಳು ಬತ್ತಾ ಇದಾರೆ ದಾರಿ ಬುಡಿ. ಅಂತಾ ಚರ್ಮ ಹಾಕಿ ಕೂರಿಸಿದ್ವಿ. ಅವಾಗ ಅವಾಗ ಕೆರಕ್ಕಳೋನು. ಯಾಕಲಾ, ಸ್ವಾಮಿ ಅನ್ನಲೇ. ಲೇ ತಂಡಿಗೆ ಚರ್ಮಕ್ಕೆ ಇರುವೆ ಹತ್ಕಂಡಾವೆ ಕಲಾ. ಸರಿ ಡಿಡಿಟಿ ಹಾಕಿ ಕೂರಿಸಿದ್ದಾತು. ಸಾನೆ ಜನಾ ಸೇರಿದ್ವು. ಸ್ವಾಮಿ ನನ್ನ ಮಗಳನ್ನ ಈ ಬಡ್ಡೆ ಹೈದ ಮದುವೆ ಮಾಡ್ಕಂಡು ಸಂಸಾರವೂ ಮಾಡಿ ಈಗ ಬೇಡ ಅಂತಾವ್ನೆ. ನೀವೇ ಒಸಿ ಇವನಿಗೆ ಬುದ್ದಿ ಹೇಳಿ. ಹೌದೇನಲಾ. ನೋಡ್ಲಾ ನಿಂಗೆ ನೋಡ್ಕಳಕ್ಕೆ ಆಗಕ್ಕಿಲ್ಲಾ ಅಂದ್ರೆ ನಂಗೆ ಹೇಳು. ಸ್ವಾಮೀಜಿ. ಅಂದರೆ ನಾವು ನಮ್ಮ ಸಿಸ್ಯೆ ಅಂತಾ ಸ್ವೀಕರಿಸುತ್ತೀನಿ ಅಂದ ಸುಬ್ಬ. ಏನು ಬೇಡ ಮಗಳು ನಮ್ಮ ಮನ್ಯಾಗೆ ಇರ್ಲಿ. ಹಾವು ಹೊಡೆದು ಹದ್ದಿಗೆ ಹಾಕದಂಗೆ ಆಯ್ತದೆ ಅಂದ್ಲು ಹುಡುಗಿ ಅಮ್ಮ. ಪ್ರಸಾದ ತಗೋ ಅಂತಾ ಒಂದಿಷ್ಟು ಮುಗ್ಗಲು ಬಂದಿದ್ದು ಸೊಸೈಟಿ ಅಕ್ಕಿಯೇ ಕೊಟ್ಟ. ಲೇ ಸುಬ್ಬ ನೈಟಿ ಒಕ್ಕಂಡ್ ಹಾಕದಲ್ವಾ. ಇರೋದು ಒಂದೇ ಕನ್ಲಾ. ಅದು ತೆಳ್ಳಗೆ ಐತೆ. ಅದಕ್ಕೆ ಅದೇ ಬಣ್ಣದ್ದು ಚೆಡ್ಡಿ ಹಾಕೀವ್ನಿ. ಏ ಥೂ. ಸರಿ ನಿಂಗ ಎರಡು ಎತ್ತು ಹಿಡಕಂಡು ದಾರ್ಯಾಗೆ ಹೊಂಟಿದ್ದ. ಸುಬ್ಬ ನೋಡ್ದೋನೆ, ನೋಡ್ರೀ ಇವನು ಎತ್ತುಗಳನ್ನು ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದಾನೆ ಅಂತಿದ್ದಾಗೆನೇ ಅಲ್ಲಿದ್ದ ಜನಾ ಎಲ್ಲಾ ನಿಂಗಂಗೆ ದಬಾ ದಬಾ ಅಂತಾ ಹೊಡಿದ್ವು. ಲೇ ಸ್ವಾಮಿ ಎತ್ತು ಉಸಾರಿಲ್ಲಾ ಅಂತಾ ಆಸ್ಪತ್ರೆಗೆ ಹೋಯ್ತಾ ಇದ್ರೆ ನಂಗೆ ಒಡೆಸ್ತೀಯಾ ನಿನಗೆ ಐತೆ ಕನ್ಲಾ ಅಂತಾ ಎತ್ತಿನ ಜೊತೆ ಅವನು ಕುಂಟ್ಕಂಡು ಹೋದ.

ಅಟ್ಟೊತ್ತಿಗೆ ಗೌಡಪ್ಪ ಅಂಡ್ ಪ್ಯಾಮಿಲಿ ಬಂತು. ಗೌಡಪ್ಪ ಎಡವಿ ಸುಬ್ಬನ ಮುಖಕ್ಕೆ ಡಿಕ್ಕಿ ಹೊಡೆದ. ನೋಡಿದ್ರೆ ಸುಬ್ಬನ ಹಣ್ಯಾಗೆ ಇದ್ದ ವಿಭೂತಿ, ಕುಂಕುಮ ಗೌಡಪ್ಪನ ಹಣ್ಯಾಗೆ ಸೇಮ್ ಟು ಸೇಮ್. ಏನ್ನ್ಲಾ ಇದು ಸುಬ್ಬ. ಬೆಳಗ್ಗೆ ವಿಭೂತಿ ಸಿಕ್ಕಿರಲಿಲ್ಲ. ಅದಕ್ಕೆ ವೈಟ್ ವಾಸ್ ದೇವಸ್ಥಾನಕ್ಕೆ ಅಂತಾ ತಂದಿದ್ರು. ಅದನ್ನೇ ಬಳ್ಕಂಡ್ ಬಂದಿದ್ದೆ ಕಲಾ. ಸ್ವಾಮೀಜಿ ಸುಬ್ಬನವರೇ ನನ್ನ ಹೆಂಡರು, ನನ್ನನ್ನ ಬಿಟ್ಟು ಬೇರೆ ಗಂಡುಸರನ್ನ ಜಾಸ್ತಿ ನೋಡ್ತಾಳಲ್ಲಾ ಯಾಕೆ ಅಂತಾ ಕಿವ್ಯಾಗೆ ಹೇಳ್ದ. ಮೊದಲು ನೀನು ವಿವಿಧ ಸೋಪುಗಳನ್ನು, ಪೆಸೆಲ್ ಆಗಿ ರಿನ್ ಸೋಪು ಹಾಕ್ಕೊಂಡು ಸ್ನಾನ ಮಾಡು ಎಲ್ಲಾ ಸರಿ ಹೋಯ್ತದೆ. ಅರೆ, ಸ್ನಾನದ ವಿಸ್ಯಾ ಈ ಸ್ವಾಮೀಜಿಗೆ ಹೆಂಗೆ ಗೊತ್ತಾತು ಅಂತಾ ಗೌಡಪ್ಪ. ಸರಿ ಅಡಿಕೆ ಫಸಲು ಕಮ್ಮಿಯಾಗೈತೆ ಏನು ಮಾಡಬೇಕು ಸ್ವಾಮೀಜಿ ಅಂದಾ ಗೌಡಪ್ಪ. ಅದನ್ನ ಜಾಸ್ತಿ ಮಾಡು ಅಷ್ಟೆಯಾ. ಇಲ್ಲಾ ಅಂದ್ರೆ ಅಡಿಕೆ ತೆಗೆದು ತೆಂಗು ಹಾಕು ಸರಿ ಹೋಯ್ತದೆ, ಅಲಾ ಇವನು ಎಲ್ಲಾ ಉಲ್ಟಾ ಉತ್ತರ ಕೊಡ್ತಾನಲ್ಲಾ ಅಂದು.

ಸ್ವಾಮೀಜಿ ನಮ್ಮ ಮನ್ಯಾಗೆ ರಾತ್ರಿ ಹೊತ್ತು ದೆವ್ವ ಓಡಾಡಿದಂಗೆ ಆಯ್ತದಲ್ಲಾ ಯಾಕೆ. ನೀನೇ ಪಡಂ ಭೂತದ ತರಾ ಇರುವಾಗ ಮತ್ತೊಂದು ದೆವ್ವವೆ, ಮೂಢ. ಮಾತ್ತೀನಿ ತಾಳು ಅಂದ ಗೌಡಪ್ಪ. ಸ್ವಾಮೀಜಿ ನನಗೆ ಮತ್ತೊಂದು ಮದುವೆಯಾದಂತೆ ಕನಸು ಬೀಳುತ್ತದಲ್ಲಾ. ಅಯ್ಯೋ ಗೌಡ, ನಿನಗೆ ಮತ್ತೊಂದು ಮದುವೆಯೇ. ಹುಡುಗಿಯನ್ನು ಮೊದಲು ನಮಗೆ ತೋರಿಸು. ಮೊದ್ಲು ಇರೋದನ್ನ ಬಾಳಸಲೇ ಅಂದು ಸೊಸೈಟಿ ಅಕ್ಕಿ ಕೊಟ್ಟ. ಆಹಾ, ಆಹಾ ಸ್ವಾಮೀಜಿ. ಪ್ರಸಾದ ಸ್ವೀಕರಿಸಿ ಗೌಡಪ್ಪ ತಿರುಗ್ತಿದ್ದಾಗೆನೇ ಹಿಂದಗಡೆ ಇದ್ದ ಕಲ್ಲಿನ ಕಂಬ ಮುಖಕ್ಕೆ ಬಡಿದು ರಕ್ತ. ಹಚ್ರಲೇ ಅರಿಸಿನ ಅಂದಾ ಸುಬ್ಬ. ಗೌಡಪ್ಪ ಲೇ ಸುಬ್ಬನ ವಾಯ್ಸ್ ಇದ್ದಂಗೆ ಐತಲ್ಲಾ. ಸುಬ್ಬ ಸುಮ್ನೆ ಧ್ಯಾನ ಮಾಡೋರ್ ತರಾ ಕೂತಿದ್ದ. ಸ್ವಾಮೀಜಿ ಇನ್ನೊಮ್ಮೆ ನೀವು "ಹಚ್ರಲೇ ಅರಿಸಿನ" ಅನ್ನಿ, ಹೇಳಕ್ಕಿಲ್ಲಾ ಗೌಡ್ರೆ. ಅಂತಿದ್ದಾಗೆನೇ ಗೌಡಪ್ಪ, ಮಗನೇ ನಿನ್ನ ಕೆಟ್ಟ ಕಾಲು ಹಿಡಿದು ನಮ್ಸಕಾರ ಮಾಡಿ, ಕೆಟ್ಟ ಸೊಸೈಟಿ ಅಕ್ಕಿ ತಿಂದು ಹೊಟ್ಟೆ ನೋವು ಬಂದೈತೆ ಅಂತಾ ಜನನ್ನ ಸೇರ್ಸಿ ಸಾನೆ ಹೊಡೆದ. ಸುಬ್ಬ ಸ್ವಾಮೀಜಿ ಆಗಲೇ ಅಂದ್ರೆ. ನೈಟ್ಯಾಗೆ ಒಂದು 20 ಕರ್ಚೀಫ್ ಮಾಡ್ಕಂಡ್ಯಾನೆ. ಅದನ್ನ ತಲೆ ಮ್ಯಾಕೆ ಹಾಕ್ಕೊಂಡು ಈ ಊರ್ನಗಂತೂ ಬೇಡ ಕನ್ಲಾ ಅಂತಾನೆ.