ಹೊಳೆನರಸೀಪುರ ಮಂಜಣ್ಣನ ಹುಟ್ಟು ಹಬ್ಬದ ಆಚರಣೆ..

ಹೊಳೆನರಸೀಪುರ ಮಂಜಣ್ಣನ ಹುಟ್ಟು ಹಬ್ಬದ ಆಚರಣೆ..

ಬರಹ

ನೋಡ್ಲಾ ಮಂಜಣ್ಣ ದುಬೈನಾಗಿದ್ರು, ಕನ್ನಡದ ಬಗ್ಗೆ ಸಾನೇ ಅಭಿಮಾನ ಇಟ್ಟಾವ್ರೆ. ಹಂಗೇ ಅವರ ಮಗಳನ್ನ ಸದಸ್ಯದಲ್ಲೇ ಕಿರುತೆರೆ ನಟಿ ಮಾಡುವ ಮೂಲಕ ಕನ್ನಡಕ್ಕೆ ಸಾನೇ ಕೊಡುಗೆ ಕೊಟ್ಟವ್ರೆ ಇಂತವರ ಹುಟ್ಟು ಹಬ್ಬ ನಾವು ಮಾಡಕ್ಕಿಲ್ಲ ಅಂದ್ರೆ ಕನ್ನಡಕ್ಕೆ ದ್ರೋಹ ಬಗೆದಂಗೆ ಆಯ್ತದೆ ಅಂದ ನಮ್ಮ ಊರಿನ ಪೇಮಸ್  ಗಬ್ಬುನಾಥ ಗೌಡಪ್ಪ. ಅಣ್ಣಾ ಅವರು ಇರೋದು ದುಬೈನಾಗೆ ಇಲ್ಲಿ ಹುಟ್ಟು ಹಬ್ಬ ಆಚರಿಸಿದರೆ ಅವರಿಗೆ ಹೆಂಗೆ ತಲುಪುತ್ತದೆ ಅಂದಾ ಸುಬ್ಬ. ಲೇ ಸೋನಿಯಾ ಗಾಂಧಿ, ಯಡಿಯೂರಪ್ಪ, ದೇವೆಗೌಡ ಇವರದೆಲ್ಲಾ ಹುಟ್ಟು ಹಬ್ಬ ಮಾತ್ತೀವಿ. ಅವರೇ ಬಂದು ಕೇಕ್ ಕೊಯ್ದು ಬಾಯಿಗೆ ಇಟ್ಟತಾರೇನ್ಲಾ. ಸುಮ್ಕೆ ನಾಳೆ ಸಂಜಿಕೆ ಎಲ್ಲಾ ಸಿದ್ದ ಮಾಡ್ರಿ ಅಂದ ಗೌಡಪ್ಪ. ಅಟ್ಟೊತ್ತಿಗೆ ನಿಂಗನ ಟೀ ಅಂಗಡಿಯಿಂದ ಸುಗರ್ ಲೆಸ್ ಚಾನ ಪ್ಲಾಸ್ಟಿಕ್ ಕಪ್ನಾಗೆ ಬಂತು ಕುಡಿದು ಹೊಂಟ್ವಿ.

ಸರೀ ಬೆಳಗ್ಗೆ ಎದ್ದೋರೆ ಸುಬ್ಬ ಅಂಡ್ ಗ್ಯಾಂಗ್ ಸಿದ್ದೇಸನ ಗುಡಿತಾವ ಹಾಗೇ ಊರ್ನಾಗೆಲ್ಲಾ ತಳಿರು ತೋರಣ ಕಟ್ಟಿದ್ದ. ಆದರೆ ಮಾವಿನ ಸೊಪ್ಪೇ ಇರ್ಲಲ್ಲ. ಬದಲಾಗಿ ಬಾಳೆ ಎಲೆನಾ ಸಣ್ಣಗೆ ಹರಿದು. ಅದಕ್ಕೆ ಸ್ಟೆಪ್ಲರ್ ಹೊಡೆದಿದ್ದ ಸುಬ್ಬ. ಯಾಕಲಾ ಸುಬ್ಬ ಮಾವಿನ ಎಲೆ ಇಲ್ವೇನ್ಲಾ. ಹಂಗಂತಿದ್ದಾಗೆನೇ ಹನುಮಂತನ ತರಹ ಸಲ್ಟು ತೆಗೆದು ಎದೆ ತೋರ್ಸಿದ. ಎದೆ ತುಂಬಾ ಗಾಯ. ಅರಿಸಿನ ಹಚ್ಚಬಾರದೇನ್ಲಾ.ನಿನ್ನ ಅರಿಸಿನಕ್ಕೆ ಒಂದಿಷ್ಟು ಬೆಂಕಿ ಹಾಕ. ಮಳೆ ಬಂದಿತ್ತು ಕಲಾ. ಮರ ಹತ್ತಿ ಸ್ವಲ್ಪ ಎತ್ತರ ಹೋಗ್ತಿದ್ದಾಗೆನೇ ಜಾರಿ ಹಿಂಗೆ ಆಗಯ್ತಲಾ ಅಂದ.

ಅಟ್ಟೊತ್ತಿಗೆ ಕಟ್ಟಿಗೆ ಒಡೆಯೋ ಕಿಸ್ನ ಬಂದ. ಪೆಂಡಾಲ್ ರೆಡಿ ಮಾಡ್ತಾ ಇದ್ದ. ಬೀಡಿ ಸೇದಕ್ಕೆ ಅರ್ಧ ದಿನಾ ಹೋಗಿತ್ತು. ಮಗಾ ಗೌಡರ ತೋಟದ್ದು ಎಳೇ ಸಾಗ್ವಾನಿ ಮರ ಕೊಯ್ಕಂಡು ಬಂದು ಪೆಂಡಾಲ್ ಹಾಕ್ತಾ ಇದ್ದ. ಗೌಡಪ್ಪ ಬಂದೋನೆ ಅಯ್ಯೋ ನಿನ್ ಮನೆ ಕಾಯ್ವೋಗ. ಲೇ ನೀಲಗಿರಿ ಪೋಲ್ಸ್ ತೊಗಂಡು ಬಾರಲಾ ಅಂದ್ರೆ ಏನಲಾ ನನ್ನ ಮನೇನ ತೊಳೆದು ಬಿಟ್ಯಲಾ ಅಂತಾ ಕಿಸ್ನಂಗೆ ಸಾನೆ ಉಗ್ದ. ಲೇ ಮಂಜಣ್ಣ ಅಂದ್ರೆ ಯಾರಲಾ ಅಂದಾ ಕಿಸ್ನ. ಅದೇ ಕಲಾ ಹೊಳೆನರಸೀಪುರದೋರು. ಓಹ್ ನಮ್ಮ ರೇವಣ್ಣನ ಕ್ಸೇತ್ರದೋರು. ಲೇ ದುಬೈನಾಗೆ ಹೋಗಿ ಅದೇನ್ ಮಾಡ್ತಾರಲ್ಲಾ. ಹೌದು ದುಬೈ ಅಂದ್ರೆ ಎಲ್ಲಿ ಐಯ್ತಲಾ, ಮಂಡ್ಯಾದ ಪಕ್ಕ ಇರೋ ದೊಡ್ಡಿ ತಾವ ಬತ್ತದೆ. ಓಹ್ ಇಲ್ಲೆಯಾ. ಲೇ ಬಡ್ಡೆ ಐದ್ನೆ ಅವರ ಬಗ್ಗೆ ನಿನಗೆ ಗೊತ್ತಿಲ್ಲ ಅದರ ಬಗ್ಗೆ ಸಂಜೆ ಭಾಸಣ ಮಾಡ್ತೀನಿ ಕೇಳುವಂತೆ ಆಮ್ಯಾಕೆ ನಿನಗೆ ಗೊತ್ತಾಯ್ತದೆ ಅಂದೆ. ಅಷ್ಟರಾಗೆ ಭಾರ ತಡಿಲಾರದೆ ಒಂದು ಬೊಂಬು ಕಿಸ್ನ ತಲೆಮ್ಯಾಕೆ ಬಿತ್ತು. 10 ಅಡಿ ಪೋಲ್ಸ್ಗೆ ಬರೀ ಅರ್ಧ ಅಡಿ ಗುಂಡಿ ತೆಗೆದಿದ್ದ, ತಲೆ ಬಾತು ಕೊಳ್ಳದೊರಳಗೆ ಅಂಗೇ ಟವಲ್ ಸುತ್ತಿ ಆಸ್ಪತ್ರಗೆ ಒಯ್ದಿವಿ. ಇನ್ನು ಸಂಜೆ ಯಾರಿಗೆ ಗ್ರಹಚಾರ ಐತೋ ಅಂತಾ.

ಸರಿ ಸಂಜೆ ಎಲ್ಲಾ ಪೆಂಡಾಲ್ ತಾವ ಸೇರಿದ್ವಿ. ಎಲ್ಲಾ ನಿಂಗನ ಕ್ಯಾಂಟೀನ್ ನಿಂದಲೇ ಆರ್ಡರ್ ಮಾಡಿದ್ವಿ. ಕೆಟ್ಟ ಚಾ, ಮುಗ್ಗಲು ಹೀಗಿದ್ದು ಖಾರ. ಅದಕ್ಕೆ ಪ್ಲಾಸ್ಟಿಕ್ ಪ್ಲೇಟ್ ಬೇರೆ ತರಸ್ ಇದ್ದ. ತಿಂಡಿಗಿಂತ ಅದರ ಬೆಲೆನೇ ಜಾಸ್ತಿ ಆಗಿತ್ತು. ಊರು ಜನಾ ಎಲ್ಲಾ ಸೇರಿತ್ತು. ಮಂಜಣ್ಣನಿಗೆ ಜೈ ಅನ್ಕೋತ್ತಾ, ಎಲ್ಲಾ ಬಂದ್ವು. ಲೇ ಈ ಮಂಜಣ್ಣನಿಗೆ ಇರೋ ಬೆಂಬಲ ನೋಡಿದ್ರೆ. ಅವರನ್ನ ಮುಂದಿನ ದಪಾ ಗ್ರಾ.ಪಂ ಚುನಾವಣೆಗೆ ನಿಲ್ಲಿಸಿದ್ರೆ ಎಂಗಲಾ ಅಂದಾ ಗೌಡಪ್ಪ. ಏ ಅವರು ಮುಖ್ಯಮಂತ್ರಿ ಆಗ್ಬೇಕು ಅಂತಾವ್ರೆ. ಅವರನ್ನ ತಂದು ಗ್ರಾ.ಪಂ ಏ ಥೂ ಗೌಡ್ರೆ ಅಂದೆ. ಅವರು ಬೆಂಗಳೂರಿಗೆ ಬಂದ್ರೆ ಸಾನೆ ಟೂರ್ ಮಾಡ್ತಾವ್ರೆ, ನೀವು ಅವರನ್ನ ಹಳ್ಳಿ ರಾಜಕೀಯಕ್ಕೆ ತರಬೇಡ್ರಿ ಗೌಡ್ರೆ ಅಂದಾ ಸುಬ್ಬ.

ಸರಿ ಕ್ಯಾಂಡಲ್ ಇಲ್ಲಾ ಅಂತಾ ಕೇಕ್ ಮೇಲೆ ಸೀಮೆ ಎಣ್ಣೆ ಬುಡ್ಡಿ ಮಡಗಿದ್ವಿ. ಸಾನೆ ಹೊಗೆ, ಎಲ್ಲರ ಮುಖನೂ ಕಪ್ಪಾಗಿತ್ತು. ಗೌಡರ ಹೆಂಡರು ಬೆಳ್ಳಗಿದ್ದೋಳು ಆಫ್ರಿಕಾದವರು ತರಾ ಆಗಿ ಹೋಗಿದ್ಲು. ಸರಿ ಎಂದಿನಂತೆ ನಂದು ಸಿದ್ದೇಸನ ಪ್ರಾರ್ಥನೆ ಆತು. ಈಗ ಗೌಡರ ಭಾಸಣ. ನೋಡ್ರಲಾ ಮಂಜಣ್ಣ, ಕನ್ನಡಕ್ಕೋಸ್ಕರ ಸಾನೆ ದುಡಿತಾವ್ರೆ. ಅವರ ಹುಟ್ಟು ಹಬ್ಬ ಹಳ್ಳ್ಯಾಗೆ ಆಚರಿಸಲಿಲ್ಲಾ ಅಂದ್ರೆ ನಮಗೆ ಅವಮಾನ ಕನ್ರಲಾ. ಹೊರ ದೇಸದಾಗೆ ಇದ್ರೂ ಕೂಡ ಕನ್ನಡದ ಬಗ್ಗೆ ಸ್ಯಾನೆ ಅಭಿಮಾನ ಇಟ್ಟಾವ್ರೆ. ನೀವು ಇದೀರಾ ಅದೇನೋ ಇಂಗ್ಲೀಸ್ ಕಲಿಬೇಕೂಂತ ಒದ್ದಾಡ್ತೀರಾ, ಮಂಜಣ್ಣನ ನೋಡಿ ಕಲ್ತಕಳ್ರಲಾ ಅಂದಾ ಗೌಡಪ್ಪ. ಬುಡ್ಡಿದು ಹೊಗೆ ಜಾಸ್ತಿ ಆಗ್ತಾ ಇತ್ತು. ಸರಿ ಈಗ ಗೌಡ್ರು, ಬುಡ್ಡಿ ಆರಿಸಿ ಕೇಕ್ ಕಟ್ ಮಾಡ್ತಾರೆ. ಎಲ್ಲಾ ಚಪ್ಪಾಳೆ.

ಗೌಡಪ್ಪ ಬುಡ್ಡಿನ ಆರಿಸಕ್ಕೆ ಅಂತಾ 10kg/cm2ನಾಗೆ ಗಾಳಿ ಊದಿದ. ಬೆಂಕಿ ಆರಿದಂಗೆ ಆಗಿ ಮತ್ತೆ ಉರಿಯೋದು. ಊದಿ, ಊದಿ ಗೌಡಪ್ಪಂಗೆ ಗ್ಯಾಸ್ ಬಂದಂಗೆ ಆಗಿ ಏನಲಾ ಕೋಮಲ್ ಆರ್ತಾನೇ ಇಲ್ಲ. ಗೌಡ್ರೆ ನೀವು ಊದ್ದಂಗೆ ಮಾಡಿ. ಹಿಂದಿಂದ ನಾನು ಆರಿಸ್ತೀನಿ ಅಂದೆ. ಗೌಡಪ್ಪ ಜೋರಾಗೆ ಊದ್ದ,ಹಿಂದಿಂದ ಬೆಂಕಿಗೆ ನೀರು ಹುಯ್ದೆ. ಕೇಕ್ ಕಟ್ಟ್ ಮಾಡಬೇಕಾದ್ರೆ ಗೌಡಪ್ಪನ ಕೈ ನಡುಗೋದು. ಊದಿ ಹಂಗಾಗಿದ್ದ. ಸರಿ ಐಕ್ಳೆಲ್ಲಾ ಕ್ಯೂನಾಗೆ ಬನ್ನಿ ಅಂದ್ವಿ. ಎಲ್ಲಾವೂ ತಿಂದ್ ಮ್ಯಾಕೆ ಏನ್ರಲಾ ಸೀಮೇ ಎಣ್ಣೆ ವಾಸ್ನೇ ಬತ್ತದೆ ಅನ್ನೋವು. ಎಲ್ರೂ ಮುಖನೂ ಕಪ್ಪಾಗಿತ್ತು. ಮೈಕ್ ಸೆಟ್ ರಂಗ ಮಾತ್ರ ತನಗೇನೂ ಸಂಬಂಧ ಇಲ್ಲ ಅಂತಾ ಹೆಣ್ಣು ಐಕ್ಳಿಗೆ ಲೈನ್ ಹೊಡಿತಾ ಇದ್ದ. ಸರಿ ನಿಂಗನ ಅಂಗಡಿ ಕೆಟ್ಟ ಚಾ, ಖಾರ ಬಂತು. ಇನ್ನೇನು ಕುಡಿ ಬೇಕು. ದಪ್ಪ ಅಂತಾ ಒಂದು ಗೂಟ ಗೌಡಪ್ಪನ ತಲೆ ಮ್ಯಾಕೆ ಬಿತ್ತು. ಅಮ್ಮಾ, ಲೇ ಕಿಸ್ನ ಅಂದಾ. ಇದು ಕಿಸ್ನನ ಎಫೆಕ್ಟ್ ಅಲ್ಲಾ. ನೀವು ಮಂಜಣ್ಣನ ಗ್ರಾ.ಪಂ ನಿಲ್ಲಿಸಬೇಕು ಅಂದ್ರಲಾ ಅದರ ಎಫೆಕ್ಟ್. ಏನ್ಲಾ ಮಂಜಣ್ಣನೂ ಒಂದು ತರಾ ಸಣ್ಣ ಸಿದ್ದೇಸ ಅನ್ನೂ. ನಾವು ಇಲ್ಲಿ ಮಾತಾಡೋದು ದುಬೈಗೆ ತಲುಪೈತಲ್ಲಾ ಆಹಾ ಆಹಾ ಅಂದ ಗೌಡಪ್ಪ. ಈಗ ವಂದನಾರ್ಪಣೆ. ನೋಡ್ರಲಾ ನಾ ಹೇಳ್ದಂಗೆ ಹೇಳಬೇಕು. ಸರಿ ಅಣ್ಣಾ.

ಮಂಜಣ್ಣ ನೀವು ಎಲ್ಲೇ ಇದ್ದರೂ ನಮ್ಮೆಲ್ಲರ ಅಭಿಮಾನವಂತೂ ನಿಮ್ಮ ಮೇಲೆ ಇದ್ದೇ ಇರುತ್ತದೆ. ನೀವು ನೂರ್ ವರ್ಷ ಬದುಕಿ ಎಲ್ಲರ ಪ್ರೀತಿಯನ್ನು ಗಳಿಸಿ ಸದಾ ಹೀಗೆ ನಗುತ್ತಿರಿ ಎನ್ನುವುದು ನಮ್ಮಲ್ಲೆರ ಹಾರೈಕೆ. ನಿಮ್ಮ ಕನ್ನಡದ ಅಭಿಮಾನ ಹೀಗೆ ಇರಲಿ. ಮುಖ್ಯಮಂತ್ರಿ ಆಗೋದು ಯಾವಾಗ ಮಂಜಣ್ಣ.

"ಮಂಜಣ್ಣ ಮತ್ತೊಮ್ಮೆ ನಿಮಗೆ ಜನ್ಮ ದಿನದ ಶುಭಾಷಯಗಳು" ಎಲ್ಲಾ ಸಿದ್ದೇಸನ ಲೀಲೆ.