ಆಂಟೀ...ಬೊಂಬೆ ಕೂಡ್ಸಿದೀರಾ??

ಆಂಟೀ...ಬೊಂಬೆ ಕೂಡ್ಸಿದೀರಾ??

ಬರಹ

ದಸರಾ - ನವರಾತ್ರಿ...ಇಂದಿನಿಂದ ಆರಂಭ...ದಸರಾ ಎಂದರೆ ಮೊದಲು ಅಂದರೆ ೨೦ ವರ್ಷಗಳ ಕೆಳಗೆ ನನಗೆ ತುಂಬಾ ಅಚ್ಚುಮೆಚ್ಚು..ಈಗ ಇಲ್ವಾ ಅಂದರೆ


ಈಗಲೂ ಇದೆ ಆದರೆ ವ್ಯತ್ಯಾಸ ಇದೆ...@@@@@@@@@ ಏನಿದು ಅನ್ಕೊಂಡ್ರಾ ಫ್ಲಾಶ್ ಬ್ಯಾಕ್...೨೦ ವರ್ಷದ ಕೆಳಗೆ...


 


ಆಗೆಲ್ಲ ಬೇಸಿಗೆ ರಜೆ ಮುಗಿದ ಮೇಲೆ ಮತ್ತೆ ನಮಗೆ ದೀರ್ಘಾವಧಿ ರಜೆ ಸಿಗುತ್ತಿದ್ದದ್ದು ಈ ನವರಾತ್ರಿಗೆ ಮಾತ್ರ..ಸುಮಾರು ಹದಿನೈದು - ಇಪ್ಪತ್ತು ದಿನ ರಜೆ 


ಸಿಗುತ್ತಿತ್ತು...ಆಗ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ...ರಜೆಯಾ ಖುಷಿ ಒಂದೆಡೆಯಾದರೆ, ಅದನ್ನು ಮೀರಿದ ಸಂಭ್ರಮವೆಂದರೆ ಆ ಒಂಭತ್ತು ದಿನಗಳು


ವಿಧ ವಿಧವಾದ ತಿಂಡಿ ತಿನಿಸುಗಳು ಸಿಗುತ್ತಿದ್ದವು...


 


ಹೇಗೆಂದರೆ ಆಗೆಲ್ಲ ನವರಾತ್ರಿಗೆಂದು ಮನೆಗಳಲ್ಲಿ "ಬೊಂಬೆ ಕೂಡಿಸುವ" ಸಂಪ್ರದಾಯ ಇತ್ತು (ಈಗಲೂ ಇದೆ, ಆದರೆ ಮುಂಚಿನ ಹಾಗೆ ಇಲ್ಲ ), ನಮ್ಮ ಮನೆಯಲ್ಲೂ


ಕೂಡಿಸುತ್ತಿದ್ದೆವು...ಬೊಂಬೆ ಕೂಡಿಸುವುದು ಎಂದರೆ ಎಲ್ಲಿಲ್ಲದ ಸಂಭ್ರಮ...ಅಟ್ಟದ ಮೇಲೆ ಧೂಳು ಹಿಡಿದು ಕೂತಿದ್ದ ಡಬ್ಬಗಳನ್ನು ಕೆಳಗಿಳಿಸಿ ಅದರಲ್ಲಿದ್ದ ಬೊಂಬೆಗಳನ್ನು


ತೆಗೆದು ಸ್ವಚ್ಛ ಮಾಡಿ...ಅದಕ್ಕೆ ಒಂದು ಸ್ಥಳ ನಿರ್ಧರಿಸಿ  ಅಲ್ಲಿ ಇಡಲು ಅಣಿ ಮಾಡುತ್ತಿದ್ದೆವು...ಅಪ್ಪ ಅಮ್ಮನ ಹತ್ತಿರ ೨-೫ ರೂಪಾಯಿ ತೆಗೆದುಕೊಂಡು ಹೋಗಿ


ಅಂಗಡಿಯಿಂದ ಬಣ್ಣ ಬಣ್ಣದ ಕಾಗದಗಳನ್ನು ತಂದು ಬೊಂಬೆ ಇಡುವ  ಜಾಗವನ್ನು ಸಿಂಗರಿಸಿ ಸಿದ್ಧ ಪಡಿಸಿದರೆ ಒಂದು ಕೆಲಸ ಮುಗಿದಂತೆ...ನಂತರ ಆ ಜಾಗದ


ಸುತ್ತ ಹೊಲ(೧ - ೧ ಅಡಿ ಜಾಗದಲ್ಲಿ) ಬೆಳೆಸಬೇಕಲ್ಲ ಅದಕ್ಕೆ ಆಚೆಯಿಂದ ಸ್ವಲ್ಪ ಮಣ್ಣು ತಂದು ಆ ಜಾಗದಲ್ಲಿ ಹಾಕಿ ಅದರಲ್ಲಿ ರಾಗಿಯನ್ನು ಹಾಕಿ ಅದು ಪೈರು ಬರುವವರೆಗೂ ನಮಗೆ


ನಿದ್ದೆ ಬರುತ್ತಿರಲಿಲ್ಲ...


 


ಸರಿ, ಬೊಂಬೆ ಕೂಡಿಸಿ ಆಯಿತು ಇನ್ನೇನು...ಈಗ ಅಸಲಿ ಕಥೆ ಶುರು...ಆಗೆಲ್ಲ ಪ್ರತಿ ಮನೆಯಲ್ಲೂ ನವ ರಾತ್ರಿಗಳಂದು ವಿಧ ವಿಧವಾದ ತಿಂಡಿ ತಿನಿಸುಗಳನ್ನು ಮಾಡುವರು...


ಸಂಜೆ ಆಗುತ್ತಿದ್ದಂತೆ ನಾನು, ನಮ್ಮ ವಟಾರ, ಪಕ್ಕದ ವಟಾರದ ಹುಡುಗರು, ಹುಡುಗಿರು ಸುಮಾರು ೧೫ ಜನ ಒಂದೆಡೆ ಸೇರಿ ಡಬ್ಬಿಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೆವು...


೫ ಗಂಟೆಗೆ ನಮ್ಮ ಮನೆಯಿಂದ ಶುರು ಪ್ರಯಾಣ...ನಮಗೆ ತಿಳಿದಿರುವ ಮನೆಗಳಿಗೆ ಹೋಗೋದು "ಬೊಂಬೆ ಕೂಡ್ಸಿದಿರ" ಅಂತ ಕೇಳೋದು...ಬೊಂಬೆ ಕೂಡಿಸಿದರೆ


ಅವರ ಮನೆಗೆ ಹೋಗಿ ಬೊಂಬೆಗಳನ್ನು ನೋಡಿ ಅವರು ಕೊಟ್ಟ ತಿಂಡಿ ತಿನಿಸುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು, ಹೀಗೆ ಎಲ್ಲ ಮನೆ ಮುಗಿಸಿ ಮನೆ ಸೇರುವ ಹೊತ್ತಿಗೆ


೭ ಗಂಟೆ ಆಗಿರೋದು...ಮನೆಗೆ ಬಂದು ಎಲ್ಲರು ತಮ್ಮ ತಮ್ಮ ಡಬ್ಬಿಗಳನ್ನು ತೆಗೆದು ನನಗೆ ಜಾಸ್ತಿ ಬಂದಿದೆ, ನನಗೆ ಜಾಸ್ತಿ ಬಂದಿದೆ ನಮ್ಮ ನಮ್ಮಲ್ಲೇ ಸುಳ್ಳು ಸುಳ್ಳೇ ಕಿತ್ತಾಡಿ


ಅದೆಲ್ಲವನ್ನು ತಿನ್ನುತ್ತಿದ್ದೆವು... ಆ ಒಂಭತ್ತು ದಿನಗಳು ರಾತ್ರಿಯ ಹೊತ್ತು ಊಟವೇ ಮಾಡುತ್ತಿರಲಿಲ್ಲ...


 


ಏಳನೇ ದಿನ ಅಂದರೆ ದುರ್ಗಾಷ್ಟಮಿಯಂದು ಪೂಜೆ ಮಾಡಿ ಹಳ್ಳಿಗೆ ಹೊರಟುಬಿಡುತ್ತಿದ್ದೆವು..ಏಕೆಂದರೆ ಹಳ್ಳಿಯಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿಯ ಸಂಭ್ರಮ


ಬಲು ಜೋರಾಗಿರುತ್ತಿತ್ತು...ಆ ಮೂರು ದಿನ ಮಾತ್ರ ನಮಗೆ ತಿಂಡಿ ಸಿಗುತ್ತಿರಲಿಲ್ಲ...ಮತ್ತೆ ಊರಿಂದ ಬಂದ ಮೇಲೆ ಮಿಕ್ಕ ಹುಡುಗರು ನಾವು ಆ ಮೂರು ದಿನಗಳಲ್ಲಿ


ಏನೇನು ತಿಂಡಿ ಕಳೆದುಕೊಂಡೆವು ಎಂದು ಹೇಳಿ ಹೊಟ್ಟೆ ಉರಿಸುತ್ತಿದ್ದರು...


 


ಕಾಲಕ್ರಮೇಣ ಒಂದೊಂದೇ ಬದಲಾಯಿತು...ಹುಡುಗರು ಬೆಳೆಯುತ್ತಿದ್ದಂತೆ ಬೇರೆ ಮನೆಗಳಿಗೆ ಹೋಗಲು ನಾಚಿಕೆ, ಸಂಕೋಚ ಶುರುವಾಯಿತು...ನಂತರದಲ್ಲಿ


ನಿಂತೇ ಹೋಯಿತು...


 


ಇಂದಿನಿಂದ ನವರಾತ್ರಿ ಶುರು ಆಗುತ್ತಿದೆ...ಈ ಸಂಗತಿಯನ್ನು ನೆನೆಸಿಕೊಂಡು ನಗು ಬಂತು ಹಾಗೆ ಬೇಸರವು ಆಯಿತು...ಈಗಿನ ಮಕ್ಕಳಿಗೆ ಬೊಂಬೆ ಕೂಡಿಸಬೇಕು


ಅಂದರೆ ಬೊಂಬೆ ಇರುವುದು ಆಡುವುದಕ್ಕೆ ಕೂಡಿಸುವುದಕ್ಕಲ್ಲ ಎಂದು ತಿರುಗುತ್ತರ ನೀಡುತ್ತಾರೆ


.