ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?
ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳು ಈ ಎರಡು ಚಿತ್ರಕ್ಕೆ ಕೊಟ್ಟ ಪ್ರಚಾರದಲ್ಲಿ ಅಜಗಜಾಂತರ ವ್ಯತ್ಯಾಸ.ಎಂಧಿರನ್ ಚಿತ್ರ ಬಿಡುಗಡೆಗೆ ಸಿದ್ಧವಾದ ದಿನದಿಂದ ಹಿಡಿದು ಇವತ್ತಿನ ತನಕ ಈ ಪತ್ರಿಕೆಗಳ ಮುಖಪುಟದಲ್ಲೆಲ್ಲಾ ಎಂಧಿರನ್ ಚಿತ್ರ ಹಾಗು ರಜನಿಕಾಂತ್ ಮುಖಸ್ತುಥಿ. ಇನ್ನು ಟಿ.ವಿ.ಚ್ಯಾನಲ್ ಗಳಲ್ಲಿ ಎಂಧಿರನ್ ಪ್ರಚಾರಕ್ಕೆಂದೇ ವಿಶೇಷ ಕಾರ್ಯಕ್ರಮಗಳು.ಜಾಕಿ ಬಿಡುಗಡೆಯಾಗಿ ಇವತ್ತಿಗೆ ೫ ದಿನ ಆಗಿದ್ದು ಪ್ರತಿ ದಿನವು ಎಲ್ಲ ಚಿತ್ರಮಂದಿರಗಳು ಭರ್ತಿಯಾಗುತ್ತಿದೆ. ಮೊದಲ ವಾರದ ಗಳಿಕೆ ಸುಮಾರು ೮ ಕೋಟಿ ದಾಟುವುದು ಖಚಿತವಾಗಿದ್ದು ಅದರಲ್ಲಿ ಲಾಭವೇ ೪ ಕೊಟಿಯಷ್ಟಿರಲಿದೆ ಅನ್ನುವುದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಕನ್ನಡ ಮಾಧ್ಯಮಗಳು ಈ ಚಿತ್ರದ ಯಶಸ್ಸಿನ ಬಗ್ಗೆ ಆಸಕ್ತಿಯೇ ತೋರದಿರುವುದು ಕನ್ನಡಿಗರ ಪಾಲಿಗೆ ವಿಪರ್ಯಾಸವೇ ಸರಿ. ರಾಜ್ಯದ ಅತಿ ಹೆಚ್ಚು ಮಾರಾಟವಾಗುವ ಕನ್ನಡ ದಿನಪತ್ರಿಕೆಯಲ್ಲಿ ಜಾಕಿ ವಿಮರ್ಶೆಯಲ್ಲಿ ಜಾಕಿಗಿಂತ ಹೆಚ್ಚು ಎಂಧಿರನ್ ಬಗ್ಗೆಯೇ ಇತ್ತು.ಕನ್ನಡಿಗರಿಂದಲೇ ನಡೆಯುತ್ತಿರುವ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳು ಕನ್ನಡಿಗರ ಮೇಲೆ ಮಾಡುತ್ತಿರುವ ಈ ಪರಭಾಷಾ ಚಿತ್ರಗಳ ಹೇರಿಕೆಯನ್ನು ಪ್ರಶ್ನಿಸಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡ ಚಿತ್ರಗಳು ಮಕಾಡೆ ಮಲಗಿದರೂ ಪರವಾಗಿಲ್ಲ, ಪರಭಾಷೆ ಚಿತ್ರಗಳನ್ನು ಮೆರೆಸಿ ಆ ಚಿತ್ರದ ನಿರ್ಮಾಪಕರು/ವಿತರಕರು ಕೊಡುವ ಪುಡಿಗಾಸಿಗೆ ಕೈಯೊಡ್ಡುವ ಪತ್ರಕರ್ತರನ್ನು, ಟಿ.ವಿ.ಮಾಧ್ಯಮಗಳನ್ನು ಇವತ್ತು ಜನರು ಪ್ರಶ್ನಿಸಬೇಕಿದೆ.ಗೆಳೆಯರೇ, ಎಲ್ಲ ಪತ್ರಿಕೆಗಳಿಗೆ, ಟಿ.ವಿ ಚ್ಯಾನಲ್ ಗಳಿಗೆ ಪತ್ರಗಳನ್ನು ಬರೆದು ಅವರು ಮಾಡುತ್ತಿರುವ ಕನ್ನಡ ದ್ರೋಹದ ವಿರುದ್ಧ ಪ್ರತಿಭಟಿಸೋಣ.