ದಾವಣಗೆರೆಯಲ್ಲೊಂದು ಜಲಿಯನ್‌ವಾಲಾ ಬಾಗ್ ದುರಂತ

ದಾವಣಗೆರೆಯಲ್ಲೊಂದು ಜಲಿಯನ್‌ವಾಲಾ ಬಾಗ್ ದುರಂತ

ಬರಹ


  ಸ್ವಾತಂತ್ರ್ಯ ಚಳವಳಿಯು ತಾರಕಾವಸ್ಥೆ ತಲುಪಿದ್ದ ಕಾಲ. ಸೇಂದಿ ವಿರೋಧಿ ಹೋರಾಟಗಾರರು ನನ್ನೂರಾದ ದಾವಣಗೆರೆಯ ಹೊಳೆಹೊನ್ನೂರು ತೋಟದಲ್ಲಿ ಈಚಲಮರದಿಂದ ಭಟ್ಟಿ ಇಳಿಸುವುದರ ವಿರುದ್ಧ ಪಿಕೆಟಿಂಗ್ ಹಮ್ಮಿಕೊಂಡಿದ್ದರು. ನೂರಾರು ಮಂದಿ ಚಳವಳಿಗಾರರು ಅಂದು ಪಿಕೆಟಿಂಗ್‌ನಲ್ಲಿ ಭಾಗವಹಿಸಿದ್ದರು. ಗುತ್ತೂರು ಕ್ಯಾಂಪ್ ಮತ್ತು ಹನಗವಾಡಿ ಕ್ಯಾಂಪ್ ಎಂದು ದಾವಣಗೆರೆ ಸನಿಹದಲ್ಲೇ ಎರಡು ಕಡೆ ಆಗ ಬ್ರಿಟಿಷ್ ಸೇನೆಯ ಶಿಬಿರಗಳಿದ್ದವು. ನನ್ನ ತಂದೆಯವರು ಒಪ್ಪಂದದ ಮೇರೆಗೆ ಈ ಶಿಬಿರಗಳ ಛಾಯಾಚಿತ್ರಕಾರರಾಗಿದ್ದರು.
  ಇದ್ದಕ್ಕಿದ್ದಂತೆ ಆ ದಿನ ಬ್ರಿಟಿಷ್ ಸೇನಾ ತುಕಡಿಯೊಂದು ಹೊಳೆಹೊನ್ನೂರು ತೋಟಕ್ಕೆ ಧಾವಿಸಿ ಅಲ್ಲಿ ನೆರೆದಿದ್ದ ಚಳವಳಿಗಾರರಮೇಲೆ ಗುಂಡಿನ ಮಳೆ ಸುರಿಸತೊಡಗಿತು. ಜೀವ ಉಳಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡತೊಡಗಿದರು. ಆ ಪ್ರದೇಶವು ಮಿನಿ ಜಲಿಯನ್‌ವಾಲಾ ಬಾಗ್ ಆಗಿ ಪರಿವರ್ತಿತವಾಗಿತ್ತು. ವ್ಯತ್ಯಾಸವೆಂದರೆ, ಜಲಿಯನ್‌ವಾಲಾ ಬಾಗ್‌ನ ಮೈದಾನದ ಸುತ್ತಲೂ ಗೋಡೆಯಿದ್ದುದರಿಂದಾಗಿ ಜನರು ಪಾರಾಗಿ ಹೋಗಲಾರದೆ ಭಾರಿ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳಬೇಕಾಯಿತು; ಆದರೆ ದಾವಣಗೆರೆಯ ಹೊಳೆಹೊನ್ನೂರು ತೋಟದ ಬಯಲಿನಲ್ಲಿ ಆ ದಿನಗಳಲ್ಲಿ ಇಟ್ಟಿಗೆ ಭಟ್ಟಿಗಳಿದ್ದು ಇಟ್ಟಿಗೆ ರಾಶಿಗಳನ್ನು ಪೇರಿಸಿಟ್ಟದ್ದರಿಂದಾಗಿ ಅವುಗಳ ಮರೆಗೆ ಹೋಗಿ ಅವಿತುಕೊಂಡು ನೂರಾರು ಮಂದಿ ಚಳವಳಿಗಾರರು ಪ್ರಾಣ ಉಳಿಸಿಕೊಂಡರು. ಐದು ಜನರು ಬ್ರಿಟಿಷ್ ಸೈನ್ಯದ ಗುಂಡಿಗೆ ಅಂದು ಹುತಾತ್ಮರಾದರು.