ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

ಆರು ಜರಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ

ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ  ಹಗೆಗಳೆಂಬುದೆ ಸಮತೆ

ಇಂತಿದು ಗುರುಕಾರುಣ್ಯ

ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ

ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನವರ ನೀನೆಂಬುದೆ ಸಮತೆ.

[ಕಾಳಿಕೆ-ಕಲ್ಮಶ, ಸ್ತೌತ್ಯ-ಸ್ತುತಿ, ಅವಿತತ-ವಂಚನೆ]

ಯಾರು ಜರಿದರೂ ಅವರು ನನ್ನ ಮನಸ್ಸಿನ ಕಲ್ಮಶ ಕಳೆದರು ಅನ್ನುವುದೇ ಸಮತೆ.. ಯಾರಾದರೂ ಹೊಗಳಿದರೆ ಅವರು ನನ್ನ ಜನ್ಮಾಂತರದ ಹಗೆಗಳೆಂದು ತಿಳಿಯುವುದು ಸಮತೆ. ಹೀಗೆ ಇರುವುದು ಗುರುಕರುಣೆಯಿಂದಷ್ಟೆಸಾಧ್ಯವಾದೀತು. ನಮ್ಮ ಮನಸ್ಸು, ಮಾತು,ದೇಹದಲ್ಲಿ ಸುಳ್ಳು, ವಂಚನೆ ಇರದಿದ್ದರೆ ದೇವರಿಗೆ ಸೇರಿದವರೆಲ್ಲರನ್ನೂ ದೇವರೆಂದೇ ತಿಳಿಯುವುದುಸಮತೆ.

ದೇವರು ಎಲ್ಲೆಡೆಯಲ್ಲೂ ಇದ್ದಾನೆ ಎಂಬುದು ಬಲುಮಟ್ಟಿಗೆ ನಾವು  ಕಲಿತ ಮಾತು, ಹೊರತು ನಮ್ಮ ಅನುಭವವಲ್ಲ.ಅದು ಒಂದು ವೇಳೆ ಅನುಭವವೇ ಆದರೆ, ಆಗ ನಾನು ಮಾತ್ರವಲ್ಲ ಲೋಕದಲ್ಲಿ ಕಾಣುವುದೆಲ್ಲವೂ ದೇವರೇ  ಅನ್ನುವುದು ಅನುಭವವೇ ಆದರೆ, ಆಗ ಪ್ರತ್ಯೇಕತೆಗೆ, ಭೇದಭಾವಕ್ಕೆ  ಅವಕಾಶವೆಲ್ಲಿ? ಸಿದ್ಧರಾಮನ ಸಮತೆಯ  ಕಲ್ಪನೆಯ ಇನ್ನೊಂದು ಮುಖ ಇದು.

ತೆಗಳಿಕೆ, ಹೊಗಳಿಕೆಗಳು ನಮ್ಮನ್ನು ಹಿಗ್ಗಿಸುವುದೂ ಇಲ್ಲ, ಕುಗ್ಗಿಸುವುದೂ ಇಲ್ಲ. ಅವಕ್ಕೆ ನಾವು ತೋರುವ ಪ್ರತಿಕ್ರಿಯೆಗಳು ಮಾತ್ರ ನಮ್ಮವೇ ಹೌದು. ಅಂದಮೇಲೆ ಸಮತೆ ಅನ್ನುವ ಗುಣ ನಮ್ಮೊಳಗೇ ಹುಟ್ಟುವುದು, ಹುಟ್ಟಬೇಕಾದದ್ದು ಎಂದು ಸಿದ್ಧರಾಮ ಹೇಳುತ್ತಿರುವಂತಿದೆ.  

Rating
No votes yet

Comments