ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೩ ಯಾವುದು ಸರಿ?

ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೩ ಯಾವುದು ಸರಿ?

ಬರಹ

(ಹಿಂದಿನ ಭಾಗ http://www.sampada.net/article/17670)
ಕೊಂಚ ಹೊತ್ತಾದ ಮೇಲೆ ಅವಳ ಅಳು ನಿಂತಿತು

ಹೇಳಲಾರಂಭಿಸಿದಳು

"ದೊಡ್ಡಮ್ಮ ನೀವೆಲ್ಲಾ ಹೇಳಿದವರನ್ನ ನಾನು ಮದುವೆಯಾದೆ. ಅವರಿಗೆ ಸುಖ ಪಡೆಯಲು ಹೆಂಗಸೇ ಬೇಕಿಲ್ಲ. ಕೇವಲ ಮನೆಯಲ್ಲಿ ಹೇಳಿದರಂತ ನನ್ನನ್ನು ಮದುವೆ ಆದರಂತೆ. ಮನೆಯಲ್ಲಿ ಇದ್ದೇನಲ್ಲ ಎಂದು ನನ್ನನ್ನು ಮುಟ್ಟುತ್ತಿದ್ದರಷ್ಟೆ.ಅವರಿಗೆ ಸುಂದರವಾದ ಹುಡುಗರಲ್ಲೇ ಆಸಕ್ತಿ ಜಾಸ್ತಿ. ಇಂಥಾ ವಿಕೃತ ಕಾಮಿಯ ಜೊತೆ ವಾಸಿಸೋಕೆ ನಂಗೆ ಆಗ್ತಾ ಇಲ್ಲ. ಆಗಲೇ ಹೇಳೋಣ ಅಂದ್ಕೊಂಡ್ರೂ ನೀವೆಲ್ಲಾ ನೋಡಿ ಮಾಡಿದ ಮದುವೆ. ಹೇಳಿದರೆ ನಿಮಗೆಲ್ಲಾ ಬೇಸರ ಆಗುತ್ತೇಂತ ಸುಮ್ಮನೆ ಇದ್ದೆ. ಆದ್ರೂ ನಂಗೆ ತಡೆಯೋಕೆ ಆಗ್ಲಿಲ್ಲಾ . ಇದೆಲ್ಲಾ ಅಸಹ್ಯ ನನ್ನ ಕೈಲಿ ನೋಡ್ಕೊಂಡು ಇರೋಕೆ ಆಗಿಲ್ಲ. ಹೇಗೋ ಸುಮ್ಮನೆ ಇದ್ರೆ ಈಗ ಅವರು ಯಾವದೋ ಹುಡುಗನ್ನ ಬಯಸಿದ್ದಾರೆ. ಅವನೋ ಅವರ ಜೊತೇಲಿ ಇದ್ದುಕೊಂಡು ನಂಗೂ ಹಿಂಸೆ ಕೊಡ್ತಿದಾನೆ. ಅವನು ಅವರ ಜೊತೆ ಮಲಗಬೇಕೆಂದರೆ ನಾನು ಅವನ ಜೊತೆ ಮಲಗಬೇಕಂತೆ. ಇದೆಲ್ಲಾ ನಂಗೆ ಹಿಡಿಸಲಿಲ್ಲ ದೊಡ್ಡಮ್ಮಾ ಅದಕ್ಕೆ ನಾನು ಹೇಗೋ ತಪ್ಪಿಸಿಕೊಂಡು ಬಂದ್ಬಿಟ್ಟೆ."

ಅವಳ ಕಣ್ಣಲ್ಲಿ ಧಾರಾಕಾರ ನೀರು. ನನಗೋ ಬೆಟ್ಟ ತಲೆ ಮೇಲೆ ಬಿದ್ದ ಹಾಗೆ ಅನುಭವವಾಯ್ತು.

ಅವಳನ್ನು ಸಮಾಧಾನಿಸಿದೆ.

ಹೊರಗಡೆ ಬಂದು ಗೀತಾಗೆ ವಿಷಯ ತಿಳಿಸಿದೆ.

"ಈಗೇನು ಮಾಡೋದೆ. "

"ಡೈವೋರ್ಸ್‌ಗೆ ಅಪ್ಪ್ಲೈ ಮಾಡೋದಷ್ಟೆ ಮತ್ತಿನ್ನೇನು? "

"ಈಗ ಗಾಯಿತ್ರಿ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ .ಅದೂ ಹೇಗೆ ಸಾಧ್ಯ "ಗೀತಾಳ ಆತಂಕ ಅರ್ಥವಾಯ್ತು

"ಇರಲಿ ಬಿಡೆ ಅಂಥಾ ಗಂಡನ ಜೊತೆ ಬಾಳೋದಿಕ್ಕಿಂತ ಒಬ್ಬಳೇ ಬಾಳೋದೆ ಬೆಟರ್. ಬೇಕಿದ್ರೆ ಮುಂದೆ ಬೇರೆ ಮದುವೆ ಮಾಡೋಣ"

ಮನೆಯವರೆಲ್ಲಾ ಒಪ್ಪಿದರು.

ಆದರೆ ಈ ಡೈವೋರ್ಸ್‌ಗೆ ರಾಮಕೃಷ್ಣ ಒಪ್ಪಲಿಲ್ಲ. ಅವನ ಉದ್ದೇಶ ಈಡೇರಲಿಲ್ಲವೆಂಬ ಸಿಟ್ಟು ಅವನನ್ನು ಹೀಗೆ ಮಾಡಿಸಿತೇನೋ

ಅವನ ತಂದೆಗೂ ಮಗನ ಮೇಲಿನ ಈ ನಿಂದನೆಗಳನ್ನೂ ಸಹಿಸಲಾಗಲಿಲ್ಲವೇನೋ . ಅವರು ಪ್ರಖ್ಯಾತ ಲಾಯರ್. ಸೇಡಿನ ಬೆನ್ನಹಿಂದೆ ಬಿದ್ದ ಅವರ ಕುಟುಂಬದವರಿಗೆ ಗಾಯತ್ರಿಯ ನೋವು ಅರ್ಥವಾಗಲಿಲ್ಲ.

ಅವರ ವಾದದ ಮುಂದೆ ನಮ್ಮ ದೂರುಗಳೆಲ್ಲಾ ಕುಸಿದು ಬಿದ್ದವು.

ಡೈವೋರ್ಸ್ ಪಡೆಯುವುದು ಎಷ್ಟು ಕಷ್ಟ ಎನ್ನುವುದು ನನಗೆ ಈಗ ತಿಳಿಯಿತು

ಗಾಯಿತ್ರಿಯ ಯಾವ ಅರೋಪಕ್ಕೂ ಸಾಕ್ಷಿಗಳಿರಲಿಲ್ಲ

ಗಂಡ ಹೆಂಡತಿ ಇಬ್ಬರೂ ಒಪ್ಪಿದರೆ ಡೈವೋರ್ಸ್ ಕೊಡುವುದು ಎಂಬ ಕಾನೂನಿನ ಒಡಕು.

ನಮ್ಮೆಲ್ಲಾರಿಗೂ ಸಾಕು ಸಾಕೆನಿಸಿತು.

ಕೋರ್ಟ್ಸನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಗಾಯತ್ರಿ ಅಳುತ್ತಿದ್ದಳು. ಎಂಟು ತಿಂಗಳ ಗರ್ಭಿಣಿ ಉಬ್ಬಿದ ಹೊಟ್ಟೆ ಹೊತ್ತು ಕೋರ್ಟ್ ಹಾಗು ಮನೆಗೂ ಅಲೆದಲೆದು ಸಾಕಾದಳು

ಈ ಮಧ್ಯೆ ಸ್ಮಿತಾಳ ಬಗ್ಗೆ ನೆನಪೂ ಬರುತ್ತಿತ್ತಾದರೂ ಹಾಗೆ ನೋಡಿದರೆ ಮದುವೆಯಾದ ನಮ್ಮ ಎಲ್ಲರಿಗಿಂತ ಅವಳೇ ಖುಷಿಯಾಗಿದ್ದಾಳೆ ಎಂದೆನಿಸುತ್ತಿತ್ತು. ಅವಳೂ ಈಗ ಕಾಣುತ್ತಿರಲಿಲ್ಲ
ಮೂರುತಿಂಗಳ ಕಾಲ ನಡೆದ ವಾದ ವಿವಾದಗಳೆಲ್ಲಾ ಮುಗಿದು ಕೊನೆಗೂ ಎಲ್ಲಾ ಖರ್ಚು ಮಾಡಿ ಡೈವೊರ್ಸ್ ಸಿಕ್ಕಿತು.

ಆದರೆ ಗಾಯಿ ಜರ್ಝರಿತಳಾಗಿದ್ದಳು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಳು.

ಡೈವೋರ್ಸ್ ಸಿಕ್ಕಿತೆಂಬ ಖುಷಿ ಬಹಳದಿನ ಉಳಿಯಲಿಲ್ಲ. ಹೆರಿಗೆಯಲ್ಲಿ ತೀರ ರಕ್ತಸ್ತ್ರಾವ ಹಾಗು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಾಯಿತ್ರಿ ಇಹವನ್ನು ತ್ಯಜಿಸಿದ್ದಳು. ಜೊತೆಗೆ ಅವಳ ಹೊಟ್ಟೆಯಲ್ಲಿದ್ದ ಮಗುವೂ ಸಹಾ

ಮನಸಿಗೆ ಬಹಳ ಬೇಸರವಾಗಿ ಹೋಗಿತ್ತು.

ನಾನಂದುಕೊಂಡ ರೀತಿಯಲ್ಲೇ ಗಾಯಿತ್ರಿ ಬೆಳೆದಿದ್ದಳು. ಆದರೂ ಅವಳ ಬಾಳು ಹೀಗೇಕಾಯ್ತು? ಜೊತೆಗೆ ಗೀತಾಳ ಸಂಸಾರವೂ ನೆಮ್ಮದಿಯಿಂದೇನು ಇಲ್ಲ. ತಾನು ಮದುವೆಯ ಚೌಕಟ್ಟಿನಲ್ಲಿ ಇದ್ದರೂ ಸಾಂಸಾರಿಕ ಸಂತೋಷ ಸಿಗಲೇ ಇಲ್ಲ

ನನ್ನ ನಿಲುವೇ ತಪ್ಪೇನೋ . ಮದುವೆ ಎಂಬ ಈ ಸಂಬಂಧದ ಗತಿಯೇ ಇಷ್ಟೆ?

ನನ್ನ ಚಿಂತನೆ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು

ಹೀಗೆ ವರ್ಷ್ಗವೊಂದು ಉರುಳಿತು. ಈ ನಡುವೆ ಸ್ಮಿತಾ ಡೆಲ್ಲಿಯಲ್ಲಿ ಯಾವುದೋ ಕೆಲಸ ಸಿಕ್ಕಿತೆಂದು ಹೋಗಿದ್ದು ತಿಳಿಯಿತು.

ಅತ್ತೆ ಹೇಳಿದ ಮಾತು ನೆನಪಿಗೆ ಬರುತ್ತಿತ್ತು.

"ಶ್ವೇತಾ. ಬದಲಾವಣೆ ಅನ್ನೋದು ತುಂಬಾ ಮುಖ್ಯ. ಮನುಷ್ಯ ಬೆಳಿತಾ ಇದ್ದ ಹಾಗೆಲ್ಲಾ ಅವನ ಆಲೋಚನೆಗಳು ಬದಲಾಗ್ತಾ ಇದೆ. ನೀನೆ ನೋಡು ಮದುವೆ ಎನ್ನೋದರಿಂದ ಬಿಡುಗಡೆ ಬಯಸಿದ ಜೀವಕ್ಕೆ ಅದು ಸಿಗೋದು ಎಷ್ಟು ಕಷ್ಟ ಆಯ್ತು. ಕೊನೆಗೆ ಆಮಗುನೇ ಪ್ರಾಣಕಳ್ಕೊಂಡಿತು. ನೀನು ಸ್ಮಿತಾನ ಮನೆಗೆ ಕರ್ಕೊಂಡು ಬಾ ಹೇಗೋ ಮೂರು ವರ್ಷ ಜೊತೆಗೆ ಇದ್ದಾರೆ . ಮದುವೆ ಮನಸ್ಸು ಬಂದಿರ್ಬೋದು. ಇಬ್ಬರನ್ನು ಕರೆಸು ಇನ್ನೂ ಮದುವೆ ಆಗಲ್ಲಾ ಅಂದ್ರೂ ಸುಮ್ನೆ ಇದ್ದು ಬಿಡು. ನಾವು ಉದುರಿ ಹೋಗೋ ಎಲೆಗಳು. ಅವಳೋ ಚಿಗುರುತ್ತಿರುವ ಎಲೆ ಅವಳಿಗೆ ಅವಕಾಶ ಕೊಡೋಣ"

ಅತ್ತೆಯ ಮಾತುಗಳು ಆಶ್ಚರ್ಯವೇನೋ ತಂದಿರಲಿಲ್ಲ ಏಕೆಂದರೆ ಅವರು ಇತ್ತೀಚಿಗೆ ಹಾಗೆ ಮಾತಾಡುತ್ತಿದ್ದುದು

ಈ ಸಲ ಸ್ಮಿತಾ ಫೋನ್ ಮಾಡಿದರೆ ಮನೆಗೆ ಬಾ ಎಂದು ಹೇಳೋಣ ಎಂದುಕೊಂಡೆ. ಹೊಸ ನೀರಲ್ಲಿ ಬೆರೆಯೋ ಮನಸ್ಸು ಮಾಡಿದೆ.

ತುಂಬಾ ದಿನವಾದರೂ ಫೋನ್ ಬರಲಿಲ್ಲ

ಅವಳ ಮೊಬೈಲ್‌ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಆಗಿದ್ದು ಗೊತ್ತಾಯಿತು.

ಕೊನೆಗೆ ಸ್ಮಿತಾಳ ಗೆಳೆಯನೊಬ್ಬನಿಂದ ಅವಳ ಹಳೇ ಕಂಪೆನಿಯ ಅಡ್ರೆಸ್ ತೆಗೆದುಕೊಂಡು ನಂತರ ಅವಳು ಮತ್ತೆ ಬೆಂಗಳೂರಿಗೆ ವಾಪಾಸಾಗಿದ್ದುದನ್ನು ತಿಳಿದೆ.

ಕೊನೆಗೂ ಯಾರ್ಯಾರಿಂದಲೋ ಸ್ಮಿತಾಳ ವಿಳಾಸವನ್ನು ತೆಗೆದುಕೊಂಡು ಅವಳ ಮನೆಗೆ ಅತ್ತೆಯನ್ನು ಕರೆದುಕೊಂಡೆ ನಡೆದೆ.
ಕಾರ್ ಅವಳು ಹೇಳಿದ ವಿಳಾಸದಲ್ಲಿ ನಿಂತಾಗ ಆ ಸುತ್ತಲಿನ ಪರಿಸರ ಕಂಡು ಕಕ್ಕಾಬಿಕ್ಕಿಯಾಯ್ತು

ಅವಳು ವಾಸವಾಗಿದ್ದು ವಠಾರವೊಂದರಲ್ಲಿ . ಕಿಶ್ಕಿಂದೆಗಿಂತ ಚಿಕ್ಕ್ದಾದಾದ ಜಾಗ ಉಸಿರಾಡಲೂ ತೊಂದರೆ. ಇದೇನಾಯ್ತು ಇವಳ್ಯಾಕೆ ಇಲ್ಲಿದಾಳೆ . ಅತ್ತೆಗೆ ನಡೆಯಲು ಕಷ್ಟವಾಗುತ್ತಿತ್ತಾದ್ದರಿಂದ ಕೈ ಹಿಡಿದು ಒಳಗೆ ಕರೆದುಕೊಂಡು ಹೋದೆ. ಅವಳ ಮನೆ ಎಲ್ಲಿ ಎಂದುಕೇಳಿದ್ದಕ್ಕೆಕಿಸಕ್ ಎಂದು ನಕ್ಕ ಹುಡುಗನೊರ್ವ ಒಂದು ಮನೆಯತ್ತ ಕೈ ತೋರಿದ

ಬಾಗಿಲು ಬಡಿದೆ . ಬಾಗಿಲು ತೆರೆಯಿತು

ಮೂಳೆ ಚಕ್ಕಳಗಳೇ ಮೈತುಂಬಿದಂತ ಹೆಣ್ಣೊಬ್ಬಳು ಅಲ್ಲಿ ನಿಂತಿದ್ದಳು. ಅವಳ ಗುರುತು ಹಿಡಿಯಲು ಸುಮಾರು ಕ್ಷಣಗಳೇ ಬೇಕಾದವು.

ಅತ್ತೆ "ಸ್ಮಿತಾ ಎಂದು ಚೀರಿದರು. ಬವಳಿ ಬಂದಂತಾಯ್ತು
ಸ್ಮಿತಾ ನನ್ನ ಮುದ್ದು ಕಣ್ಮಣಿಯ ಕಣ್ಣೆಲ್ಲಾ ಒಳಗೆ ಹೋಗಿದೆ, ನೋಡಲು ಸಾಧ್ಯವಾಗದಷ್ಟು ಸಣ್ನಗೆ ಹೋಗಿದ್ದಾಳೆ

ಇಪ್ಪತ್ತು ನಾಲ್ಕರ ತರುಣಿ ಈಗ ಐವತ್ತರ ಗಡಿ ದಾಟಿದವಳಂತೆ ಕಾಣುತ್ತಿದ್ದಾಳೆ.

ಕರುಳೆಲಾ ಕಿವುಚಿ ನೋವಾದಂತಾಯ್ತು

ನನ್ನನ್ನುನೋಡಿ ನಕ್ಕಳು

"ಬಾ ಅಮ್ಮ. ನಾನು ಚೆನ್ನಾಗಿರ್ವಾಗ ನೀನು ಬರಲಿಲ್ಲ ಈಗ ಬಂದ್ಯಾಮ ನಿನ್ನ ಮಗಳನ್ನ ನೋಡಿ ಏನಂತ ಅನ್ನಿಸ್ತಿದೆ"

ನಕ್ಕರೆ ಗುಳಿ ಬೀಳುತ್ತಿದ್ದ ಕೆನ್ನೆಗಳೆರೆಡು ಈಗ ಅವು ಇದ್ದಾವೆಯೇ ಎಂದು ಹುಡುಕುವಷ್ಟು ಒಳಗೆ ಹೋಗಿದ್ದವು

ಆ ನಗು ನೋಡಲಾಗಲಿಲ್ಲ

"ಏನೆ ಇದು ಸ್ಮಿತಾ ಈ ಅವಸ್ಥೆ"

ಶುಷ್ಕ ನಗೆ ನಕ್ಕಳು ಮತ್ತೆ

"ಇದೆಲ್ಲಾ ನಾನು ಇಟ್ಟ ಹೆಜ್ಜೆ . ಹೂವಿನ ಮೇಲೆ ಹೆಜ್ಜೆ ಇಡ್ತಾ ಇದೀನಿ ಅಂದುಕೊಂಡೆ . ಆದರೆ ನಾನಿಡ್ತಾ ಇದ್ದುದ್ದು ಹೂವಿನ ರೂಪದಲ್ಲಿದ್ದ ಮುಳ್ಳಿನ ಮೇಲೆ"

" ಕೂತ್ಕೋಮ", ಚಾಪೆ ಹಾಸಿ ಕೈ ತೋರಿದಳು

ಕೂತುಕೊಂಡೆ

ಮಗಳನ್ನ್ಜು ಈ ರೂಪದಲ್ಲಿ ನೋಡುವುದಕ್ಕಾ ನಾನಿಲ್ಲಿಗೆ ಬಂದದ್ದು.

"ಸ್ಮಿತಾ ಏನಾಗಿದೆ .ಏನಿದೆಲ್ಲಾ" ಅತ್ತೆ ನಡುಗುವ ದ್ವನಿಯಲ್ಲಿ ಕೇಳಿದರು

"ಅಮ್ಮಾ . ನನ್ನ ಜೀವನ ತುಂಬಾ ಚೆನ್ನಾಗಿ ಇತ್ತು. ಯಾವ್ದೇ ರೀತಿ ಒತ್ತಡ ಆಗಲಿ ಅಥವಾ ಗೊಂ’ದಲವಾಗಲಿ ಇರಲಿಲ್ಲ. ರಾಕೇಶ್ ಒಳ್ಳೆಯವನೇ ಆದರೆ ತುಂಬಾ ಪೊಸೆಸ್ಸೀವ್ ಅನ್ನಿಸ್ತಿತ್ತು. ಆದರೂ ನಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆ ಬಂದಿರಲಿಲ್ಲ. ಇಬ್ವರೂ ಮೋಜು ಉಡಾಯ್ಸಿತ್ತಿದ್ವಿ ಕೈ ತುಂಬಾ ಹಣ ,ಪ್ರಾಯ. ನಾಳೇ ಏನು ಎಂಬ ಭಯ ಇರಲಿಲ್ಲ ಹೇಗಿದ್ದರೂ ಕೈನಲ್ಲಿ ಕೆಲಸ ಇತ್ತಲ್ಲ ವೀಕೆಂಡ್ ಬಂದರೆ ಹೊರಗಡೆ ಹೋಗ್ತಿದ್ವಿ . ಚೆನ್ನಾಗಿ ಖರ್ಚು ಮಾಡ್ತಾ ಇದ್ದೆ. ಆದರೂ ದುಡ್ಡು ಕೂಡಿಡ್ತಾ ಇದ್ದೆ

ಈಗ ಸುಮಾರು ಆರು ತಿಂಗಳ ಹಿಂದೆ , ರಾಕೇಶ್ ಬಂದು ನನ್ನನು ಮದುವೆಯಾಗು ಅಂದ . ಆದರೆ ನಂಗೆ ರಾಕೇಶ್‍‌ನ ಮದುವೆಯಾಗೋದು ಇಷ್ಟ ಇರಲಿಲ್ಲ. ಯಾಕೆಂದರೆ ಅವನು ತುಂಬಾ ಅಗ್ರೆಸ್ಸೀವ್, ಜೊತೆಗೆ ಸಿಡುಕು ಎಲಾ ನೋಡ್ತಾ ನೋಡ್ತಾ ನಂಗೆ ಅವನು ನಂಗೆ ಸರಿಯಾದ ಜೋಡಿ ಅಲ್ಲ ಅಂತನ್ನಿಸಿತು. ಆಗಲ್ಲ ಅಂದೆ . ತುಂಬಾ ಪೊಸೆಸ್ಸೀವ್ ಆಗಿ ಮಾತಾಡಿದ. ಈವನ್ ಲೋ ಲೆವೆಲ್‌ನಲ್ಲಿ ಮಾತಾಡೋಕೆ ಶುರು ಮಾಡಿದ. ಅವನಿಗೆ ಗುಡ್ ಬಾಯ್ ಹೇಳೋ ಸಮಯ ಅಂತನ್ನಿಸಿತು. ಆಗಲೇ ನಂಗೆ ಡೆಲ್ಲಿನಲ್ಲಿ ಇನ್ನೂ ಹೆಚ್ಚು ಸಂಬಳ ಬರೋ ಕೆಲಸ ಸಿಕ್ತು. ರಾಕೇಶ್‌ಗೆ ಬಾಯ್ ಹೇಳಿ ಡೆಲ್ಲಿಗೆ ಧಾವಿಸಿದೆ. ಅಲ್ಲಿ ನಂಗೆ ಪರಿಚಯ ಆಗಿದ್ದು ಅನುಭವ್ ಅಂತ ಒಬ್ಬ ನಾರ್ತ್ ಹುಡುಗ. ಕಾಣದ ಊರಿನಲ್ಲಿ ನನ್ನ ಚೆನ್ನಾಗಿ ಗೈಡ್ ಮಾಡಿದ . ಅವನೂ ಯಾವುದೋ ಒಂದು ಕಡೆ ಕೆಲಸ ಮಾಡ್ತಿದ್ದ ಅಂತ ಹೇಳಿದ. ನಾವಿಬ್ಬರೂ ಪರಸ್ಪರ ಆಕರ್ಷಿತರಾದ್ವಿ. ಇಬ್ಬರೂ ಒಟ್ಟಿಗೆ ವಾಸ ಮಾಡಲಾರಂಭಿಸಿದೆವು. ಅನುಭವ್‌ನ ಮಾತು ನಡೆ ನಂಗೆ ತುಂಬಾ ಹಿಡಿಸಿತು. ಕೊನೆಗೆ ಇಬ್ಬರೂ ಮದುವೆ ಆಗೋಣ ಅಂದುಕೊಂಡೆ. ಊರಿಗೆ ವಾಪಸ್ ಬಂದು ಈ ವಿಷ್ಯ ನಿಂಗೆ ಹೇಳೋಣ ಅನ್ಕೊಂಡೆ ಆ ಸಮಯಕ್ಕೆ ಅನುಭವ್ ಕೆಲಸ ಕಳೆದುಕೊಂಡ. ಅವನಿಗೆ ಬಿಸಿನೆಸ್ ಮಾಡಲು ಹಣ ಬೇಕಿತ್ತು. ನಾನು ದುಡಿದು ಕೂಡಿಟ್ಟ ಹಣಾನೆಲ್ಲಾ ಅವನಿಗೆ ಕೊಟ್ಘೆ ಹೇಗಿದ್ದರೂ ನಾನು ಮದುವೆಯಾಗೋನು ತಾನೆ ಅಂತ.

ಅವನೇನು ಓಡಿ ಹೋಗಲಿಲ್ಲಾಮ್ಮ ಆದರೆ ಇದ್ದಕಿದ್ದ ಹಾಗೆ ಅವನ ರೀತೀನೆ ಚೇಂಜ್ ಆಯ್ತು . ರಾತ್ರಿಯ ಇಂಟಿಮೇಟ್ ಕ್ಷಣದಲ್ಲೂ ರಾಕೇಶ್ ಏನ್ಮಾಡ್ತಿದ್ದ ಅಂತ ಕೇಳುತ್ತಿದ್ದ .ನಾನು ಎಂಜಲು ಎಂದು ಹೇಳುವ ಯಾವುದೇ ಘಳಿಗೆಯನ್ನ ಅವನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾನು ಮೋಸ ಹೋಗಿದ್ದೆ ಅಮ್ಮ. " ಬಿಕ್ಕಳಿಸಿ ಅಳಲಾರಂಭಿಸಿದಳು.

ನಾನು ಮಾತಾಡಲಿಲ್ಲ . ಅವಳ ತಲೆ ನೇವರಿಸುತ್ತಿದ್ದೇ: ತಗ್ಗಿಸಿದ ತಲೆ ಎತ್ತಿದಳು

"ಅಮ್ಮ ನಂಗೆ ಮೋಸ ಮಾಡಿದ್ದು ಯಾರೂ ಅಲ್ಲ ನಂಗೆ ನಾನೆ ಮೋಸ ಮಾಡಿಕೊಂಡೆ. ಹೊಸದೇನೋ ಸಾಧಿಸ್ತೀನಿ ಅನ್ನೋ ಹುಚ್ಚಲ್ಲಿ ನಾನು ನನ್ನ ಜೀವನಾನೆ ಪ್ರಯೋಗಕ್ಕೆ ಒಡ್ಡಿಕೊಂಡೆ"

"ಎರೆಡು ತಿಂಗಳ ಹಿಂದೆ ಅವನ ಕಾಟ ತಡೀಲಾರದೆ ಅವನಜೊತೆ ಜಗಳವಾಡಿ ಅವನ್ನ ಬಿಟ್ಟು ಬೇರೆಡೆ ಹೋದೆ. ಆದರೆ ಅಲ್ಲೂ ಮತ್ತದೇ ಕಾಟ . ಈ ಲೀವ್ ಇನ್ ಟುಗೆದರ್ ಅನ್ನೋ ಕಾನ್ಸೆಪ್ಟ್ ಎಲ್ಲಾ ಕಡೆ ಹರಡಿದೆ. ಆದರೆ ಈ ಸಲ ನಾನು ಯಾರ ಜೊತೆನು ವಾಸ ಮಾಡಲಿಲ್ಲ. ನನ್ನ ಬದುಕು ನನ್ನದು ಅಂತ ಅಂದ್ಕೊಂಡಿರ್ಬೇಕಾದಾಗಲೇ ಈಗ ಹೋದ ತಿಂಗಳು ನನ್ನನ್ನ ಕೆಲಸದಿಂದ ಮನೆಗೆ ಅಟ್ಟಿದರು. "

ಮತ್ತೇನು ಮಾಡಲಾದೀತು ನಾನು ಆ ಡೆಲ್ಲೀನಲ್ಲಿ . ಮೂರುವಾರಕ್ಕೆ ಮುಂಚೆ ಬೆಂಗಳೂರಿಗೆ ಬಂದೆ. ಕೆಟ್ಟು ನಿನಗೆ ಮುಖ ತೋರಿಸಬಾರದು ಅಂತ ನಿರ್ಧಾರ ಮಾಡಿದೆ. ಕೈನಲ್ಲಿದ್ದ ಕಾಸನ್ನು ಮನಸಲ್ಲಿದ್ದ ಭಾವನೇನ, ಮೈನಲ್ಲಿದ್ದ ರೋಚಕತೆಯನ್ನೆಲ್ಲಾ ಅನುಭವ್ ದೋಚಿದ್ದ .

ಮಾಡಲು ಏನೂ ಉಳಿಯಲಿಲ್ಲ. ಇಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟ ಆಗಿದೆ. ಕೊನೆಗೆ ಯಾವುದಾದರೂ ಆಫೀಸಲ್ಲಿ ಕೆಲಸ ಮಾಡಲು ಹೋದರೂ ಈಗೀಗ ಡಿಗ್ರಿ ಕೇಳ್ತುತಾ ಇದ್ದಾರೆ. ಕೊನೆಗೆ ಇಲ್ಲೇ ಒಂದು ಸ್ಕೂಲಲ್ಲಿ ಟೀಚರ್ಆಗಿದೀನಿ.ಮುಂದೆ ಏನಾಗುತ್ತೋ ಗೊತ್ತಿಲ್ಲ"

ಅವಳ ಮಾತು ಮುಗಿಯಿತೆಂಬಂತೆ ಮತ್ತೆ ನನ್ನ ಮಡಿಲಿನಲ್ಲಿ ಮುಖವಿಟ್ಟು ಮಲಗಿದಳು

ಅತ್ತೆಯ ಮುಖ ನೋಡಿದೆ . ಅವರು ಸುಸ್ತಾಗಿದ್ದರು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಇಂತಹದನ್ನೆಲ್ಲಾ ತಾಳುವ ಶಕ್ತಿ ಇದೆಯೇ?

"ಸ್ಮಿತಾ ಮನೆಗೆ ಹೋಗೋಣ ಬಾ" ದೃಡ ನಿರ್ಧಾರದಲ್ಲಿ ಹೇಳಿದೆ

"ಇಲ್ಲಾಮಾ ನಾನು ಬರಲ್ಲ,ಹಣ, ವಯಸ್ಸು ಇವುಗಳ ಮದದಲ್ಲಿ ನಾನು ಆಡಿದ ಮಾತುಗಳು ಆಮನೇಲಿ ಪ್ರತಿಧ್ವನಿಸ್ತಾ ಇದೆ. ಬದುಕ್ತೀನಿ ನಾನು. ನನ್ನನೋಡೋಕೆ ನೀನು ಬಂದೆಯಲ್ಲ ಸಾಕು"

"ಹೌದು ಶ್ವೇತಾ ಸ್ಮಿತಾ ಹೇಳೋದು ನಿಜಾ ಆ ಮನೆಗೆ ಅವಳು ಬರೋದು ಬೇಡ" ಅತ್ತೆಯ ದ್ವನಿ ಕೇಳುತ್ತಲೇ ಚಕಿತಳಾದೆ

"ಅತ್ತೆ "

"ಈಗಲೆ ಆ ಏರಿಯಾದಿಂದ ದೂರವಾಗಿ ಮತ್ತೊಂದು ಮನೆ ಮಾಡು. ನಾವೆಲ್ಲಾ ಬೇರೆ ಮನೆಯಲ್ಲಿ ವಾಸಿಸೋಣ. ಮುಂದಿನ ಬದುಕು ಹೇಗಿರುತ್ತೇ ಅಂತ ಗೊತ್ತಿಲ್ಲ. ಆದರ್ ಈಗ ನಾವೆಲ್ಲರೂ ಒಟ್ಟಿಗೆ ಇರೋಣ .ಸ್ಮಿತಾ ಏನಂತೀಯಾ?"

ಅತ್ತೆಯ ಮಾತಿಗೆ ಮೂಕಳಾಗಿದ್ದೆ. ಅವರ ಔದಾರ್ಯತೆಗೆ ತಲೆ ಬಾಗಿದ್ದೆ. ಸ್ಮಿತಾ ಅವಳ ಅಜ್ಜಿಯನ್ನು ತಬ್ಬಿಕೊಂಡಳು

ಹಾಗಾಗುತ್ತಿದ್ದಂತೆ ಒಂದೆಡೇ ಗಾಯತ್ರಿಯ ಮುಖ ಹಾಗು ಮತ್ತೊಂದೆಡೇ ಸ್ಮಿತಾಳ ಮುಖ ಕಣ್ಣೆದುರಿಗೆ ಬಂತು

ಯಾರ ಆಯ್ಕೆ, ಯಾವ ನಿಲುವು ಸರಿ ಈ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ