೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

ಬರಹ
ನಾಗೇಶ ಹೆಗಡೆಯವರೊಂದಿಗೆ ಪ್ರಶಾಂತ ಪಂಡಿತ್

ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ. ಅವರ ಬರಹಗಳನ್ನು ಓದುತ್ತಾ ಬೆಳೆದಿರುವ ನನಗೆ ಅವರು ಕನ್ನಡದ ಸಂದರ್ಭದಲ್ಲಿ ಶಿವರಾಮ ಕಾರಂತ, ಗೌರೀಶ ಕಾಯ್ಕಿಣಿ, ಮೂರ್ತಿರಾಯರ ವೈಚಾರಿಕ ಪರಂಪರೆಯ ಮುಂದುವರಿಕೆಯಾಗಿ ಕಾಣುತ್ತಾರೆ. ಆದರೆ ಈ ಹಿರಿಯರಂತೆ ಕತೆ, ಕಾವ್ಯ, ಕಾದಂಬರಿಗಳನ್ನು ಬರೆಯದ ನಾಗೇಶ ಹೆಗಡೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಸತ್ವವನ್ನು ಹೀರಿ ಭಾಷೆಯ ಸೊಗಡನ್ನೂ ಶಕ್ತಿಯನ್ನೂ ವೈಜ್ಞಾನಿಕ ಬರಹಗಳಲ್ಲಿ ತಂದವರು. ವೈಚಾರಿಕ ಲೇಖನ, ವೈಜ್ಞಾನಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದು ಎಂದು ತೋರಿಸಿದವರು. ಗಂಭೀರ ವಿಷಯಗಳನ್ನು ಸರಳಗೊಳಿಸದೇ ಸರಳವಾಗಿ ಬರೆದವರು.

ಅವರ ಪ್ರಬಂಧವೊಂದು ನಮಗೆ ಹನ್ನೆರಡನೇ ತರಗತಿಯಲ್ಲಿ ಕನ್ನಡದ ಪಠ್ಯವಾಗಿತ್ತು. ಅದರಲ್ಲಿ ಚೆರ್ನೋಬಿಲ್ ಅಣು ದುರಂತ, ಭೋಪಾಲ್ ವಿಷಾನಿಲ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಆಧುನಿಕ ಅಭಿವೃದ್ಧಿ ಮಾದರಿಗಳ ಸಾಧಕ ಬಾಧಕಗಳನ್ನು ಚರ್ಚಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ನಿಧಾನವಾಗಿ ಚಳುವಳಿಗಳೆಲ್ಲಾ ಕಾವು ಕಳೆದುಕೊಳ್ಳತೊಡಗಿದ್ದು, ನೋಡನೋಡುತ್ತಲೇ ಗ್ಲೋಬಲ್ ಎಕಾನಮಿ, ಡೆವಲಪ್ಮೆಂಟು ಇತ್ಯಾದಿಗಳು ನಮ್ಮನ್ನು ಆವರಿಸತೊಡಗಿದ್ದು ಶಾಪಿಂಗ್ ಸಂಸ್ಕೃತಿ ಇನ್ನಿಲ್ಲದಂತೆ ಹಬ್ಬುತ್ತಿರುವುದು, ಇವನ್ನೆಲ್ಲಾ ಹೇಗೆ ಅರ್ಥಮಾಡಿಕೊಳ್ಳುವುದು, ಹೇಗೆ ನಿಭಾಯಿಸುವುದು ಎಂದು ಗೊಂದಲಕ್ಕೊಳಗಾದಾಗಲೆಲ್ಲ ನನಗೆ ಅವರ ಅಂಕಣ ಬರಹಗಳು ಒಮ್ಮೊಮ್ಮೆ ಹೊಸದಾರಿಯನ್ನು ತೋರಿವೆ ಕೆಲವೊಮ್ಮೆ ಇನ್ನಷ್ಟು ಬೆಚ್ಚಿಬೀಳಿಸಿವೆ. ಅವರನ್ನು ಹಲವು ವರ್ಷಗಳಿಂದ ತಪ್ಪದೇ ಓದುತ್ತಾ ಬಂದಿರುವ ನಾನು ಬಹಳ ದಿನದಿಂದ ಈ ಎಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸಬೇಕು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹರಿ ಪಾಡ್ಕಾಸ್ಟಿನ ಐಡಿಯಾ ಮುಂದಿಟ್ಟರು. ಮೂರ್ನಾಲ್ಕು ತಿಂಗಳಿಂದ ಆಗ ಹೋಗೋಣ, ಈಗ ಹೋಗೋಣ ಎನ್ನುತ್ತಾ ಕೊನೆಗೂ ಜನವರಿಯ ಮೊದಲ ಭಾನುವಾರ ಮುಂಜಾನೆ ಅವರ ಹಳ್ಳಿಗೆ ಹೊರಟೇಬಿಟ್ಟೆವು. ಮಧ್ಯಾಹ್ನ ಅವರ ಮನೆ ತಲುಪಿದಾಗ ಸ್ವಾಗತಿಸಿದ್ದು ಹಕ್ಕಿಗಳ ಚಿಲಿಪಿಲಿ, ನಾಯಿಯ ಬೌಬೌ, ತಂಪಾದ ಗಾಳಿ. ನಾವು ಬೆಂಗಳೂರಿನ ಹೊರವಲಯದಲ್ಲೇ ಇದ್ದೇವೆಯೇ ಎಂದು ಆಶ್ಚರ್ಯಪಡುವಂತೆ ಇತ್ತು ಅಲ್ಲಿಯ ವಾತಾವರಣ. ಅವರ “ಮೈತ್ರಿ” ಫಾರಂನಲ್ಲಿ ಕುಳಿತು ನಾವು informal ಆಗಿ ಚರ್ಚಿಸಿದ್ದು ಇದೀಗ ನಿಮ್ಮ ಮುಂದಿದೆ.

~