ಕೆಣಕು ನೋಟ!

ಕೆಣಕು ನೋಟ!

ಬರಹ

* ಆರು ತಿಂಗಳು ಮಾತ್ರ ವಿಪಕ್ಷ ನಾಯಕನಾಗಿರಲು ಒಪ್ಪಿದ್ದಾರೆ ಆಡ್ವಾಣಿ.
- ಸಿದ್ರಾಮಯ್ಯ ಈ ಸುದ್ದಿ ಓದಬೇಕು!
***
* ಪ್ರತಿಪಕ್ಷದಲ್ಲಿ ಕೂರಲು ಮುಲಾಯಂ ಸಿದ್ಧ.
- ದ್ರಾಕ್ಷಿ ಹಿಡಿಯಲು ಹೋಗಿ ಹೊತಗೊಂಡು ಬಿದ್ದ!
***
* ಲಾಲೂ ಲೆಕ್ಕಾಚಾರ ಯಾಕೆ ತಲೆಕೆಳಗಾಯಿತು?
- ಮಾಜಿ ಮುಖ್ಯಮಂತ್ರಿಯಾದ ರಾಬ್ಡಿದೇವಿಯ ಮಾತು ಕೇಳಿರಬೇಕು!
***
* ಡಿಎಂಕೆ ಸಂಸದರಲ್ಲಿ ತನ್ನ ಬಂಧುಗಳೇ ಏಳು ಮಂದಿ ಇದ್ದಿದ್ದರೆ ಆಗ ಕರುಣಾನಿಧಿಯು ಮಂತ್ರಿ ಪದವಿ ಅರಸಿ ಬರುವ ಇತರ ಸಂಸದರಿಗೆ ಏನು ಹೇಳುತ್ತಿದ್ದರು?
- ’ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಏಕೆ ಬಂದೆಯೋ ಎಲೆ ಕೋತಿ!’
***
* ಲೋಕಸಭೆಯಲ್ಲಿನ್ನು ನಾಲ್ವರು ಗಾಂಧಿಗಳು.
- ಅಲ್ಲ. ಎರಡು ಜೋಡಿ.
***
* ದೆಹಲಿಯಲ್ಲಿ ಕುಮಾರಸ್ವಾಮಿ ಮಂತ್ರಿ ಪದವಿ ವಿಷಯ ಮಾತಾಡಿಲ್ಲವಂತೆ.
- ಹಾಗಾದರೆ ದೆಹಲಿಯಲ್ಲಿ ಅವರು ಮಾಡಿದ್ದು ಡ್ರಾಮ ವಾಸ್ತವ್ಯ!
***
* ಕುಮಾರನ ದೆಹಲಿ ಯಾತ್ರೆ ವಿಷಯ ದೇವೇಗೌಡ್ರಿಗೆ ಗೊತ್ತಿರಲೇ ಇಲ್ಲವಂತೆ!
- ತಾನು ಪ್ರಧಾನಿಯಾಗೋದೇ ಗೊತ್ತಿರ್‍ಲಿಲ್ಲ ಪಾಪ! (ಪ್ರಧಾನಿಯಾದಮೇಲೂ ಏನೂ ಗೊತ್ತಾಗ್ತಿರ್‍ಲಿಲ್ಲ, ಆ ಮಾತು ಬೇರೆ.)
***
* ’ಕುಮಾರಸ್ವಾಮಿ ತನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಿ’, ಎಂದು ಸದಾನಂದಗೌಡರು ವ್ಯಂಗ್ಯವಾಡಿದ್ದಾರೆ.
- ವೈಎಸ್‌ವಿ ದತ್ತನ್ನ ಕೇಳಿ ಈ ಮಾತಿಗೆ ಉತ್ತರ ಕೊಡ್ತಾರೆ ಕುಮಾರಸ್ವಾಮಿ ಸ್ವಲ್ಪ ಇರಿ.
***
* ಕಾಂಗ್ರೆಸ್ ಹಿನ್ನಡೆಯ ಕಾರಣ ಗುರುತಿಸಲು ರಾಜಶೇಖರನ್ ನೇತೃತ್ವದಲ್ಲಿ ಸಮಿತಿ.
- ಅಂತೂ ರಾಜಶೇಖರನ್‌ಗೆ ಒಂದು ಕೆಲಸ ಸಿಕ್ಕಿತು.
***
* ಯಡಿಯೂರಪ್ಪನವರು ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ.
- ’ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ’ವು ಫ್ಲೆಕ್ಸ್‌ಗಳನ್ನು ಹಾಕಲು ಸ್ಥಳಗಳನ್ನು ಗುರುತಿಸತೊಡಗಿದೆ.
***
* ಪಾಪಿ ಪ್ರಭಾಕರನ್ ಹತ್ಯೆಯಾಗಿಹೋದ ಪಾಪ!
- ತಮಿಳುನಾಡಿನಲ್ಲಿ ಎಲೆಕ್ಷನ್ ರಿಸಲ್ಟ್ ಏರುಪೇರು ಮಾಡಿ ಸತ್ತ ಭೂಪ!
***
* ಕ್ರಿಕೆಟ್ ಹುಚ್ಚಿನ ಹುಡುಗರನ್ನು ಎಲೆಕ್ಷನ್ ರಿಸಲ್ಟ್ ಬಗ್ಗೆ ಕೇಳಿದರೆ ಏನಂತ ಉತ್ತರ ಕೊಡ್ತಾರೆ?
- ’ಇಟಲಿ ಗೆದ್ದಿತು, ಇಂಡಿಯಾ ಸೋತಿತು.’
ಎಷ್ಟು ಅರ್ಥಪೂರ್ಣ ಈ ಉತ್ತರ!
***
* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!
- ಅನಂತರ ಕೋಡಿಮಠದ ಆಡಳಿತ.
***
* ಸಿಂಗ್ ನಂತರ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?
- ಆಗಿದ್ದಾದರೆ ಆತ ಮುಂದಿನ ಪ್ರಧಾನಿಯೇ. ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯಲಾರ.
***
* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲಬಹುದೇ?!
- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಪರ್ಮಿಷನ್ ನೀಡಲಾಗಿದೆ.
***
* ಮೊಯ್ಲಿ ಒಂದುವೇಳೆ ಚುನಾವಣೆಯಲ್ಲಿ ಸೋತಿದ್ದರೆ?
- ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ರಚನೆ ಆರಂಭಿಸುತ್ತಿದ್ದರು!
***
* ಕೇಂದ್ರ ಮಂತ್ರಿಮಂಡಲದಲ್ಲಿ ಈ ಸಲ ರಾಜ್ಯದ ನಾಲ್ವರಿಗೆ ಸ್ಥಾನ. (ಜೈರಾಮ್ ರಮೇಶ್ ಸೇರಿ ಐದು.)
- ’ಕೈ’ಗಾರಿಕಾ ರಂಗದಲ್ಲಿ ಕರ್ನಾಟಕದ ಪ್ರಗತಿ!
***
* ಎಂಎಂ ಸಿಂಗ್ ಮತ್ತು ಎಸ್‌ಎಂ ಕೃಷ್ಣ ಇವರ ನಡುವೆ ಇರುವ ಹೋಲಿಕೆಗಳು:
- ಇಬ್ಬರೂ ಜನರಿಂದ ಚುನಾಯಿತರಾಗದೆಯೇ ಮಂತ್ರಿಪದವಿ ಗಿಟ್ಟಿಸಿದ ಅದೃಷ್ಟವಂತರು!
(ಮಂತ್ರಿಪದವಿ ಇಲ್ಲದೆಯೇ ಸೂಪರ್ ಪ್ರಧಾನಮಂತ್ರಿ ಸೋನಿಯಾ ಮೇಡಂ!)
- ಎಂಎಂ, ಎಸ್‌ಎಂ ಇಬ್ಬರೂ ಫಾರಿನ್ ಸ್ಟಡೀಡ್ ಮತ್ತು ಫಾರಿನ್ ಮೈಂಡೆಡ್!
(ಮೇಡಂ ಫಾರಿನ್ ಬ್ರ್ಯಾಂಡೆಡ್!)
- ಎಂಎಂ ಎಸ್‌ಎಂ ಇಬ್ಬರೂ ಮೇಡಮ್‌ನ ಆಜ್ಞಾನುವರ್ತಿಗಳು!
(ಆದ್ದರಿಂದಲೇ ಮೇಡಂ ಇವರನ್ನು ಮಂತ್ರಿ ಮಾಡಿದ್ದು! ಅದೂ ಕೂಡ ಫಾರಿನ್ ಮಂತ್ರಿ!)
***
* ಕಮಲನಾಥ್ ಅವರು ರಾಷ್ಟ್ರಪತಿ ಬೋಧಿಸುವ ಮೊದಲೇ ಪ್ರಮಾಣವಚನ ಆರಂಭಿಸಿದರು! ಸಹಿಮಾಡದೇ ವಾಪಸಾದರು! ಯಾಕೆ ಹೀಗೆಲ್ಲ?
- ’ಬಿಜೆಪಿ ಚಿಹ್ನೆಯ ಹೆಸರಿಟ್ಕೊಂಡಿದ್ದೀರಲ್ಲಾ’, ಅಂತ ಅದೇ ತಾನೇ ಯಾರೋ ಛೇಡಿಸಿದ್ದರು! ಹಾಗಾಗಿ ಮೈಂಡ್ ಆಫ್ ಆಗಿಬಿಟ್ಟಿತ್ತು!
***
* ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ಧನಂಜಯಕುಮಾರ್ ನೇಮಕ.
- ರಣಾಂಗಣದ ಒಳಗೆ (ಲಾಲ್)ಕೃಷ್ಣ, ಹೊರಗೆ ಧನಂಜಯ!
***
* ರಾಷ್ಟ್ರ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ?
- ’ಅಲ್ಲ, ಲೋಬಾನದ ಹೊಗೆ’, ಅನ್ನುತ್ತಿದ್ದಾರೆ ವೆಂಕಯ್ಯ ನಾಯ್ಡು.
***
* ಚುನಾವಣೆಯಲ್ಲಿ ದುಡಿದದ್ದಕ್ಕೆ ಪ್ರತಿಫಲವಾಗಿ ಕೆಲವರಿಗೆ ಯಡಿಯೂರಪ್ಪ ನಿಗಮ-ಮಂಡಳಿ ಸ್ಥಾನ ಕೊಡಲಿದ್ದಾರೆ.
- ಕೋ-ಆಪರೇಷನ್ ಕಮಲ!
***
* ಯತ್ನಾಳ್‌ಗೆ ಬಿಜೆಪಿಯಿಂದ ಗೇಟ್‌ಪಾಸ್.
- ಆಪರೇಷನ್ ಕಪಾಲ(ಮೋಕ್ಷ)!
- ಯತ್ನಾಳ್ ಪಾಲಿಗಿದು ಆಪರೇಷನ್ ಕರಾಲ!
***
* ಪಾಕ್‌ಗೆ ಅಮೆರಿಕದ ನೆರವು ಮೂರುಪಟ್ಟು ಹೆಚ್ಚಳ.
- ಅಮೆರಿಕದ ಗುರಿ ಭಾರತ ಎಂಬುದು ಇದರಿಂದ ಇನ್ನೊಮ್ಮೆ ನಿಚ್ಚಳ.
***
* ಎಸ್.ಎಂ. ಕೃಷ್ಣ ಹೆಗಲಿಗೆ ವಿದೇಶಾಂಗ ಖಾತೆ.
- ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದ ’ವಿಶ್ವಾಮಿತ್ರ’ನಿಗೆ ಈಗ ವಿಶ್ವದೆದುರು ಭಾರತವನ್ನು ಸಿಂಗರಿಸುವ ಸದವಕಾಶ. ಫಲಿತಾಂಶ ಕಾದುನೋಡೋಣ.
***
* ಖಾತಾವಾರು ಮುನ್ನೋಟ:
- ಪ್ರಣಬ್ ಮುಖರ್ಜಿ ಇನ್ನು ಜೆಟ್ ಏರಿ ವಿದೇಶಗಳಿಗೆ ಹಾರುವುದನ್ನು ನಿಲ್ಲಿಸಿ ಬಜೆಟ್ ಮಂಡಿಸಬಹುದು.
- ಶರದ್ ಪವಾರ್ ಕ್ರಿಕೆಟ್ ವ್ಯವಸಾಯಕ್ಕೆ ಮರಳಬಹುದು.
- ಎ.ಕೆ.ಆಂಟನಿ ಎ.ಕೆ.೪೭ ಹಿಡಕೊಂಡು, ’ಏಕೆ ಹೀಗಾಡ್ತಿ?’ ಅಂತ ಪಾಕಿಸ್ತಾನವನ್ನು ಗದರಬಹುದು.
- ಚಿದಂಬರಂ ಗೃಹಖಾತೆಯ ಉಗ್ರದಮನವೈಫಲ್ಯದ ಚಿದಂಬರ ರಹಸ್ಯವನ್ನು ಅರಿಯಲೆತ್ನಿಸಬಹುದು.
- ಮಮತಾ ಬ್ಯಾನರ್ಜಿ ನ್ಯಾನೊ ಕಾರು ಬಿಟ್ಟು ಟ್ರೈನ್ ಏರಬಹುದು. ’ಅಷ್ಟು ಸಣ್ಣ ಕಾರು ಹೋದರೇನಾಯ್ತು, ಇಷ್ಟು ದೊಡ್ಡ ಟ್ರೈನನ್ನೇ ತಗೊಂಡ್ಬಂದಿದೀನಿ ನೋಡಿ’, ಅಂತ ಬಂಗಾಳಿ ಬಾಬುಗಳನ್ನು ಸಮಾಧಾನಪಡಿಸಬಹುದು.
- ಎಸ್.ಎಂ.ಕೃಷ್ಣ ಆರಾಮಾಗಿ ವಿದೇಶಯಾತ್ರೆ ಮಾಡಿಕೊಂಡಿರಬಹುದು. ಸಮುದ್ರ ದಾಟಿ ವಿದೇಶಯಾತ್ರೆ ಮಾಡಿಬಂದವರು (ಉಡುಪಿಯ) ಕೃಷ್ಣಪೂಜೆ ಮಾಡಬಾರದೆಂದಿದೆಯೇ ಹೊರತು ಕೃಷ್ಣನು ವಿದೇಶಯಾತ್ರೆ ಮಾಡಬಾರದೆಂದೇನಿಲ್ಲ. ವಿದೇಶಗಳಲ್ಲಿ ಇನ್ನೂ ಆಕರ್ಷಕ ಕೂದಲ ಕುಲಾವಿ (ವಿಗ್) ಸಿಕ್ಕೀತು. ಟ್ರೈ ಮಾಡಲಡ್ಡಿಯಿಲ್ಲ.
***
* ಮಂತ್ರಿಗಿರಿಯ ವಿಷಯವಾಗಿರಲಿ, ಕಾವೇರಿಯ ವಿಷಯವಾಗಿರಲಿ, ಡಿಎಂಕೆಯದು
- ’ದ್ರಾವಿಡ ಮುನ್ನೇತ್ರ ಕಾಳಗಂ’!
***
* ಹೆಂಗಸು ಪ್ರಧಾನಿ ಆಗ್ತಾರೆ ಅಂದಿದ್ದರು ಕೋಡಿಮಠದ ಸ್ವಾಮೀಜಿ!
- ಕರೆಕ್ಟ್ ಹೇಳಿದ್ದಾರೆ. ಹೆಂಗಸೇ ತಾನೆ ಪ್ರಧಾನಿ!
***
* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!
- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!
***
* ವಿರೋಧದ ನಡುವೆಯೂ ಗುಂಡ್ಯ ಯೋಜನೆಗೆ ಯಡಿಯೂರಪ್ಪನವರಿಂದ ಶಿಲಾನ್ಯಾಸ.
- ಪ್ರಚಾರದ ನಡುವೆಯೂ ಮಂಡ್ಯ ಯೋಜನೆಯಲ್ಲಿ ಅಂಬರೀಷ್‌ಗೆ ಸೋಲಿನ ಸಹವಾಸ!
***
* ರೆಡ್ಡಿ ಸೋದರರು ಯಡ್ಯೂರ್ ಸರ್ಕಾರ ಉರುಳಿಸಲೆತ್ನಿಸುತ್ತಿದ್ದಾರೆಯೆ?
- ಬುದ್ಧಿವಂತರು ತಾವು ಕುಳಿತ ರೆಂಬೆಯನ್ನೇ ಕಡಿಯಲೆತ್ನಿಸುತ್ತಾರೆಯೆ?
***
* ದಲಿತರು ಅಸಮರ್ಥರಲ್ಲ, ನಾನು ಭ್ರಷ್ಟಾಚಾರಿಯಲ್ಲ: ಸುಭಾಷ್ ಭರಣಿ
- ಪೂರ್ವಾರ್ಧವನ್ನು ಒಪ್ಪಲಾಗುವುದು
***
* ಈಶ್ವರಪ್ಪ, ನಾನು ಭಾಯಿ ಭಾಯಿ: ಯಡಿಯೂರಪ್ಪ
- ಭಾಯಿ ಭಾಯಿ ಅಲ್ಲ, ಬಾಯಿ ಬಾಯಿ: ತಿಪ್ಪೇಶಿ
***
* ಸಿಖ್ ಪಂಗಡಗಳ ಘರ್ಷಣೆ, ಪ್ರತಿಭಟನೆ, ಹಿಂಸೆ.
- ಅಪ್ರತಿಮ ರಾಷ್ಟ್ರಪ್ರೇಮಿ ಸಿಖ್ಖರೇ ಅಂತಃಕಲಹದ ಸುಳಿಗೆ ಸಿಕ್ಕರೇ?!
***
ಕಳೆದ ಸಲ ಲಾಸ್ಟು, ಈ ಸಲ ಫಸ್ಟು
’ಚಾರ್ಜರ್ಸ್’ ಎದುರು ’ಚಾಲೆಂಜ್’ ವೇಸ್ಟು
’ರಾಜಸ್ತಾನ್ ರಾಯಲ್ಸ್’ ಈಗ ’ರಾಜಸ್ತಾನ್ ಡೆಸರ್ಟು’
ಇದು ಕಣ್ರೀ ಈ ಸಲದ ಐಪಿಎಲ್ ರಿಸಲ್ಟು
***
ಬ್ಯಾಟಿಂಗ್‌ನಲ್ಲಿ ಕಚ್ಕೊಂಡ್ನಿಲ್ತಾನಂತೆ
ರಾಹುಲ್ ದ್ರಾವಿಡ್ ಎಂಬ ಗೋಡೆ.
ಐಪಿಎಲ್ ಫೈನಲ್‌ನಲ್ಲಿ ಮಾತ್ರ ಒಂಬತ್ತಕ್ಕೌಟಾಗಿ
’ವಿಜಯ’ಕ್ಕಾದ ಅಡ್ಡಗೋಡೆ!
***
* ಮಂತ್ರಿಪದವಿಗಾಗಿ ಕರುಣಾನಿಧಿಯ ಕುಟುಂಬದೊಳಗೆ ಜಟಾಪಟಿ ನಡೆಯುತ್ತಿದ್ದಾಗ ತಿಪ್ಪೇಶಿ ಈ ಕೆಳಗಿನ ದಾಸರಪದ ಗುನುಗುತ್ತಿದ್ದ:
ಯಾತರ ಕಟಿಪಿಟಿ, ಒಂದಿನ ಹೋಗತಿದಿ ಲಟಪಿಟಿ.

ಹದಿನೆಂಟು ಸೀಟ್ ಹೊಂದಿ, ಮಂತ್ರಿಗಿರಿ, ಒಂಬತ್ತು ನನಗೆಂದಿ;
ಏಳಕ್ಕೇ ಕಾಂಗ್ರೆಸ್ಸು ಕೈಚೆಲ್ಲಿಬಿಟ್ಟಾಗ ಅಳೆದು ಸುರಿದು ಅದರ ಕಾಲ್ಹಿಡಕೊಂಡಿ, ಯಾತರ ಕಟಿಪಿಟಿ...

ಸಂಸಾರ ಬಲು ಖೊಟ್ಟಿ, ಬಹುಪತ್ನೀವ್ರತನಾಗಿ ನೀ ಕೆಟ್ಟಿ;
ಅವರಾಸೆ ನಿನ್ನಾಸೆ ಪೂರೈಸೋ ಭರದಾಗ ನಿನ್ ಪದವಿ ಘನತೇನೇ ನೀ ಕಳೆದ್ಬಿಟ್ಟಿ, ಯಾತರ...
***
* ಈ ಪಾಟಿ ವಿನಾಶ ಮಾಡಿತಲ್ಲಾ ಚಂಡಮಾರುತ ’ಐಲಾ’!
- ಅದಕ್ಕೇನು ಐಲಾ?!
- ಐಪಿಎಲ್‌ನಲ್ಲಿ ’ಕತ್ರಿನಾ’, ಇಲ್ಲಿ ’ಐಲಾ’!
***
* ಮತ್ತಷ್ಟು ಮಂದಿ ಭ್ರಷ್ಟಾಚಾರಿಗಳನ್ನು ಲೋಕಾಯುಕ್ತರು ಹಿಡಿದಿದ್ದಾರೆ.
- ’ಏನು ಮಾಡಿದರೇನು ಚಟ ಹಿಂಗದು, ದಾನವಾದಿಗಳಿವರ್ಗೆ ಜೈಲಾಗದನಕ.’
***
* ಬೆಂಗಳೂರಿನಲ್ಲಿ ಒಳಚರಂಡಿ ಶುಚಿಗೊಳಿಸುವ ಯಂತ್ರವನ್ನು ಯಡಿಯೂರಪ್ಪನವರು ಬಾವುಟ ಬೀಸುವ ಮೂಲಕ ಉದ್ಘಾಟಿಸಿದರು.
- ಸ್ವಯಂ ಈಜುವ ಮೂಲಕ ಈಜುಕೊಳವನ್ನು ಉದ್ಘಾಟಿಸಿದ್ದ ಗುಂಡೂರಾವ್ ಆಗಿದ್ದಿದ್ದರೆ.....!
***
* ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಗೆ ಪ್ರಧಾನಿಯವರು ತುಂಬಾ ತಿಣುಕಾಟ ಅನುಭವಿಸಿದರು ಪಾಪ!
- ತಿಣುಕಾಟಕ್ಕೆ ಕಾರಣ ’ದುರ್ಬಲ ಪ್ರಧಾನಿಗೆ ಪ್ರಬಲರ ಕಾಟ’?
- ಅಥವಾ, ’ಪ್ರಬಲ ಪ್ರಧಾನಿ’ಯ ದುರ್ಬಲ ಆಟ?
***
* ’ಇನ್ನೊಂದು ವರ್ಷದೊಳಗೆ ಸಿಂಗ್ ಅನಾರೋಗ್ಯದಿಂದಾಗಿ ರಾಹುಲ್ ಪ್ರಧಾನಿಯಾಗ್ತಾರೆ’ ಅಂತ ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
- ಇದನ್ನು ಹೇಳೋಕೆ ಜ್ಯೋತಿಷಿ ಬೇಕೇ?
***
* ರಾಜ್ಯ ಸರ್ಕಾರದ ವಾರ್ಷಿಕೋತ್ಸವಕ್ಕೆ ಬಿಬಿಎಂಪಿ ಹಣ ಖರ್ಚುಮಾಡಿದ್ದು ಅಕ್ರಮ: ಮಾಜಿ ಮೇಯರ್ ರಮೇಶ್
- ಅಕ್ರಮ-ಸಕ್ರಮ ಯೋಜನೆಯಡಿ ಆ ಖರ್ಚನ್ನು ಸಕ್ರಮಗೊಳಿಸಲಾಗುವುದು: ಸಚಿವ ಅಶೋಕ್
***
* ಇನ್ನೆರಡೂವರೆ ವರ್ಷದಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಐದು ವರ್ಷದಲ್ಲಿ ಸಾಕಷ್ಟು ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.
- ಅದರರ್ಥ, ’ಇನ್ನೆರಡೂವರೆ ವರ್ಷ ನೀರು ಕೇಳ್ಬೇಡಿ; ಐದು ವರ್ಷ ಕರೆಂಟ್ ಕೇಳ್ಬೇಡಿ’!
***
* ಈಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ಪೋಲೀಸ್ ಅಧಿಕಾರಿಗೆ ಇನ್ನೊಂದು ತಿಂಗಳಲ್ಲಿ ಪ್ರೊಮೋಷನ್ ಆಗುವುದಿತ್ತು.
- ಅಷ್ಟರಲ್ಲಿ ಲೋಕಾಯುಕ್ತರು ಮೋಷನ್ ಗುಳಿಗೆ ಕೊಟ್ಟುಬಿಟ್ಟರು!
***
* ’ಬಡವಾ ನೀ ಮಡಗಿದಂಗಿರು’ ಅಂತ ಗಾದೆ ಇದೆ. ಆದರೆ ಕರ್ನಾಟಕದ ಬಡವರು ಇನ್ನು ಮಡಗಿದಂಗಿರಬೇಕಾಗಿಲ್ಲ.
- ಜುಮ್ಮಂತ ತೀರ್ಥಯಾತ್ರೆ ಮಾಡಿಕೊಂಡಿರಬಹುದು! ಕೃಷ್ಣ(ಯ್ಯ)ನ ಕೃಪೆ!
***
* ಮಲ್ಲಿಕಾರ್ಜುನ ಖರ್ಗೆಗೆ ಕ್ಯಾಬಿನೆಟ್ ಯೋಗ.
- ’ನಚ್ಚುಗೆ ಮನ ನಿಮ್ಮಲ್ಲಿ. ಮೆಚ್ಚುಗೆ ಮನ ನಿಮ್ಮಲ್ಲಿ. ಕರಗುಗೆ ಮನ ನಿಮ್ಮಲ್ಲಿ. ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಗಳು ತಾಯೇ ನಿಮ್ಮ ಪದತಲದಲ್ಲಿ. ಪೊಡಮಡುವನೀ ಚೆನ್ನ-ಮಲ್ಲಿಕಾರ್ಜುನ ಖರ್ಗೆ’, ಎಂದದ್ದಕ್ಕೂ ಸಾರ್ಥಕವಾಯ್ತು!
- ಇದೇ ವೇಳೆ, ’ಹಸಿವಾದೊಡೆ ಮೃಷ್ಟಾನ್ನಗಳುಂಟು. ತೃಷೆಯಾದೊಡೆ ಪಾನೀಯಗಳುಂಟು. ಶಯನಕ್ಕೆ ತೂಲಿಕಾತಲ್ಪಗಳುಂಟು. ಎಸ್ಸೆಸ್ಸ್ ಮಲ್ಲಿಕಾರ್ಜುನಾ, ಮಂತ್ರಿಗಿರಿ ಮಾತ್ರ ನಿನಗಾಯ್ತು ಕನಸಿನ ಗಂಟು’, ಎಂದು ದಾವಣಗೆರೆ ಶಿವ(ಶಂಕರ)ಶರಣರಿಂದ ಕ್ಷೀಣ ದನಿಯೊಂದು ಹೊರಟಿದೆ!
- ಮುನಿಯಪ್ಪ ಮಾತ್ರ, ’ಸಹಾಯಕ ಖಾತೆಯೆಂದು ಮುನಿಯೆನು ನಾನು. ಕನಿಕರದಿಂದ ಕೊಟ್ಟವ್ರೆ. ತೃಪ್ತಿಪಟ್ಟೇನು’, ಎಂದು ಮುನಿಯ ಪೋಸು ಕೊಟ್ಟಿದ್ದಾರೆ!
- ಇನ್ನು, ಧರ್ಮಸಿಂಗ್! ಮೇಡಂ ಮನೆಬಾಗಿಲಲ್ಲಿ ನಿಂತು, ’ಧರುಮಾರೀ ತಾಯಿತಂದೆಮ್ಮಾ. ಓ ಶಿವನೇ ಭಗವಂತ, ’ಕೈ’ಕಾಲ್ ಮುಗಿತೀನಿ ಮಂತ್ರಿ ಮಾಡಮ್ಮಾ’, ಅಂತ ಬೇಡಿಕೊಂಡರೂ ಪ್ರಯೋಜನವಾಗದಿದ್ದಾಗ, ’ಧರಂ-ಕರಂ ಕೀ ಬಾತ್ ಹೈ; ಬ್ಯಾಡ್‌ಲಕ್ ಮೇರಾ ಸಾಥ್ ಹೈ. ಕ್ಯಾ ಕರೂ ರಾಮ್ ಮೈನೆ ಬುಡ್ಢಾ ಹೋಗಯಾ!’ ಎಂದು ಕಣ್ಣೊರೆಸಿಕೊಂಡಿದ್ದಾರೆ.
- ಮಂತ್ರಿಪದವಿ ಸಿಗದೆ ನಿರಾಶರಾದ ಕುಮಾರಸ್ವಾಮಿ ತಮ್ಮಷ್ಟಕ್ಕೇ ಹಾಡಿಕೊಳ್ಳುತ್ತಿದ್ದಾರೆ, ’ಏನಿದೀ ಗ್ರಹಚಾರವೋ! ಏನಿದೀ ವನವಾಸವೋ! ಏನು ಮಾಡಿದೆನೆಂದು ಈ ಗತಿ ಎನಗೆ ತಂದೆಯೊ ಪಶುಪತಿ!’
- ಕ್ಯಾಬಿನೆಟ್ ದರ್ಜೆ ಸಿಕ್ಕರೂ ಖರ್ಗೆ ಮುಖದಲ್ಲಿ ನಗೆ ಇಲ್ಲ! ಖರ್ಗೆ ನಗುಮೊಗ(ದ ಸೇವೆ) ಏನಿದ್ದರೂ ಹೈಕಮಾಂಡ್ ಮಾತಾಸುತರಿಗೆ ಮೀಸಲು!
***
* ಕೇಂದ್ರ ಮಂತ್ರಿಮಂಡಲದಲ್ಲಿರುವ ಅತಿ ದಡೂತಿ ವ್ಯಕ್ತಿ ಆಂಧ್ರಪ್ರದೇಶದ ಪನಬಾಕ ಲಕ್ಷ್ಮಿ.
- ’ಪನ’ ಅಂದರೆ ತೆಲುಗಿನಲ್ಲಿ ’ಹೊಟ್ಟೆ’ ಎಂದರ್ಥವಲ್ಲ.
***
* ಲಾಹೋರ್‌ನಲ್ಲಿ ಸೈತಾನರ ದಾಳಿ.
- ಭಸ್ಮಾಸುರನಿಗೀಗ ಸ್ವಯಂವಿನಾಶದ ಪಾಳಿ!
***
* ಉತ್ತರ ಕೊರಿಯಾದಿಂದ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ಉಡಾವಣೆ.
- ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಅಣುಬಾಂಬು!
***
* ಖಾತೆ ಕತೆ:
- ಖರ್ಗೆಗೆ ಕಾರ್ಮಿಕ ಖಾತೆ ಸಿಕ್ಕಿದೆ. ಹೈಕಮಾಂಡ್‌ನ ನಿಷ್ಠಾವಂತ ಕಾರ್ಮಿಕನಿಗೆ ಕರೆಕ್ಟ್ ಖಾತೆಯೇ ಸಿಕ್ಕಿದೆ! ಇನ್ನೀಗ, ಮಿತ್ರ ಎಸ್.ಕೆ.ಕಾಂತಾ ಒಡನೆ ಎಂದಿನಂತೆ ’ಕಾಂತಾಸಮ್ಮಿತಿ’(’ಮಿತ್ರಸಮ್ಮಿತಿ’)ಯೋ ಅಥವಾ ಕಾರ್ಮಿಕ ಸಮಸ್ಯೆಗಳನ್ನು ಹಿಡಕೊಂಡು ಜಟಾಪಟಿಯೋ ನೋಡಬೇಕು.
- ಮೊಯ್ಲಿ ಕಾನೂನು ಸಚಿವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಇವರಿಂದ ದೇಶಕ್ಕೆ ಕಾನೂನು ಸುಧಾರಣಾ ಯೋಗ ಇದೆಯೇ ನೋಡಬೇಕು. ಈಗಿರುವ ಹಳಸಲು ಕಾನೂನುಗಳೇ ಮುಂದುವರಿಯುವುದಾದರೆ ಆ ಹುದ್ದೆಗೆ ’ಮಹಾಕವಿ’ ಯಾಕೆ ಬೇಕು?
- ಮುನಿಯಪ್ಪ ರೈಲ್ವೆ ಮಂತ್ರಿ. ರಸ್ತೆಗೆ ಬಿದ್ದಿದ್ದರು, ಈಗ ಟ್ರೈನ್ ಹತ್ತಿಸಲಾಗಿದೆ! (’ಮುನಿಯಬೇಡಿ ಬಾಸ್, ಭೂಸಾರಿಗೆಯಿಂದ ರೈಲ್ವೆಗೆ ಬಂದ್ರಿ’, ಅಂದೆ ಅಷ್ಟೆ!) ಮುನಿ ಈಗ ರೈಲ್ವೆ ಮಂತ್ರಿ; ’ಕೋಲ್ಕತ್ತಾ-ಕೋಲಾರ ಮಮತಾಮುನಿ ಎಕ್ಸ್‌ಪ್ರೆಸ್’ ಸ್ಟಾರ್ಟ್ ಆಗ್ತದಂತ್ರೀ? (ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರೋ ರೂಟ್‌ಗಳು ಸ್ಟಾರ್ಟ್ ಆದ್ರೆ ಸಾಕು, ಸ್ವಾಗತಿಸ್ತೀವಿ ಮಂತ್ರೀ, ಬಾರಿಸಿ ಬಾಜಾಬಜಂತ್ರಿ!)
- ರಾಹುಲ್‌ನ ಯುವಮಿತ್ರರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ’ಗೆದ್ದಿದ್ದರೆ ನಾನೂ ಮಿನಿಸ್ಟರ್ ಆಗ್ತಿದ್ದೆ’ ಅಂತ ’ಯುವತೇಜ’ಮ್ಮ ’ಕೈಕೈ’ ಹಿಸುಕಿಕೊಳ್ಳುತ್ತಿದ್ದಾರಂತೆ! ಭ್ರಮೆಯ ಪರಾಕಾಷ್ಠೆ! ’ಬುದ್ಧಿವಂತರಿಗೆ ಮಾತ್ರ ಮಂತ್ರಿಪದವಿ ನೀಡಲಾಗಿದೆ’ ಎಂಬ ಪ್ರಧಾನಿಯ ಹೇಳಿಕೆಯನ್ನು ತೇಜಮ್ಮ ಪೇಪರಲ್ಲಿ ಓದಿಲ್ಲವೆನ್ನಿಸುತ್ತದೆ!
***
* ಮಂತ್ರಿಮಂಡಲ ’ಹೊಸ ಚಿಗುರು ಹಳೆ ಬೇರು’ ಅಂತೆ.
- ’ಹುಸಿ ಚಿಗುರು ಕೊಳೆ ಬೇರು’ ಆಗದಿದ್ದರೆ ಸಾಕು! ’ಹೊಸ ಒಗರು ಹಳೆ ಪೊಗರು’ ಕೂಡ ಆಗದಿರಲಿ.
***
* ನಿನ್ನೆ ಬೆಂಗಳೂರಿನಲ್ಲಿ ನಡೆದ ’ವಿಕಾಸ ಸಂಕಲ್ಪ ಉತ್ಸವ’ದ ಕೆಲವು ಕಾರ್ಯಕ್ರಮಗಳು ಇಂತಿದ್ದವು:
- ಮುಖ್ಯಮಂತ್ರಿಗಳ ’ಕಮಲವಿಕಾಸ ಸಂಕಲ್ಪ’ಕ್ಕೆ ’ಧನಾಧನ್’ ಸಾಥ್ ನೀಡಿದ ಬಳ್ಳಾರಿ ಗಣಿದಣಿಗಳಿಗೆ in absentia ಸನ್ಮಾನ ಮಾಡಲಾಯಿತು.
- ’ಪಂಚ್ ತಂತ್ರ’ ಪ್ರತಿಷ್ಠಾನದ ವತಿಯಿಂದ ಕಟ್ಟಾ-ಅಶೋಕ್ ಜೋಡಿಗೆ ’ಕಮಲಕ-ದಮಲಕ’ ಬಿರುದು ನೀಡಲಾಯಿತು.
- ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಆಗಮಿಸಿದ್ದ ಶಿಲ್ಪಾಶೆಟ್ಟಿಯ ’ಅಮೃತಹಸ್ತ’ದಿಂದ ಶೋಭಾ ಮೇಡಮ್‌ಗೆ ’ಬಿಗ್ ಸಿಸ್ಟರ್’ ಬಿರುದು ಕೊಡಿಸಲಾಯಿತು.
- ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಮ್ಮ ಡಾಕ್ಟರೇಟನ್ನು ಸಜಿನೋವಾ ವಿಶ್ವವಿದ್ಯಾಲಯಕ್ಕೆ ವಾಪಸ್ ಮಾಡಿದರು. ಅದರ ಬದಲಿಗೆ ಅವರಿಗೆ ಸಂಸ್ಕೃತ ವಿವಿ ವತಿಯಿಂದ ’ಕಮಲಕೇಸರಿ’ ಬಿರುದು ಪ್ರದಾನ ಮಾಡಲಾಯಿತು. ಸದಾ ’ಆಪರೇಷನ್ ಕಮಲ’ದ ಧ್ಯಾನ ಮಾಡುವ ಸದಾನಂದಗೌಡರಿಗೆ ’ಕಮಲಕ್ಕೇ ಸರಿ’ ಬಿರುದು ನೀಡಲಾಯಿತು.
- ೩೬೫ ಶಾಲಾಮಕ್ಕಳು ಕಮಲದ ಆಕಾರದಲ್ಲಿ ನಿಂತು, ’ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು; ಬಳ್ಳಾರಿ ದಣಿಗೆ ಭಾಗ್ಯ ತಂದ ಗಣಿಯ ಬೀಡಿದು’ ಹಾಡನ್ನು ಹಾಡಿದರು. (ಸಂಗೀತ ಸಂಯೋಜನೆ ಮಾಡಿದ್ದು ಅನು ಮಲಿಕ್.)
- ಸಮಾರಂಭದ ಅತಿ ವಿಶೇಷ ಆಕರ್ಷಣೆ ಯಾವುದಾಗಿತ್ತು ಗೊತ್ತೆ? ’ಹುಟ್ಟಿದರೇ ಬಳ್ಳಾರಿಯಲ್ಲ್ ಹುಟ್ಟಬೇಕು; ಮುಟ್ಟಿದರೇ ಬಳ್ಳಾರಿ ಮಣ್ಣ್ ಮುಟ್ಟಬೇಕು’ ಹಾಡಿಗೆ ಶ್ರೀರಾಮುಲು ನೃತ್ಯ! ಎನ್‌ಟಿಆರ್ ಸ್ಟೈಲ್‌ನಲ್ಲಿ!
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ಪತ್ರಕರ್ತರು ದೇವೇಗೌಡರ ಅಭಿಪ್ರಾಯ ಕೇಳಿದರು.
- ದೇವೇಗೌಡರು ಏನೇನೋ ಇಷ್ಟುದ್ದ ಗೊಣಗಿದರು. ಯಾರಿಗೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಕೇಳಲು ಅಂಜಿಕೆಯಾಗಿ ಪತ್ರಕರ್ತರು ಹಾಗೇ ವಾಪಸಾದರು!
***
* ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕರುಣಾನಿಧಿ ತಮ್ಮ ಪುತ್ರ ಸ್ಟಾಲ್-ಇನ್ ಅನ್ನು ಇನ್-ಸ್ಟಾಲ್ ಮಾಡಿದ್ದಾರೆ.
- ’ಅಕ್ಕರೆಯುಳ್ಳ ಅಳಗಿರಿ ರಂಗ’ನ ದೆಹಲಿಗೆ ಸಾಗಹಾಕಿ ’ಚಿಕ್ಕ ಧುರಂಧರ ಸ್ಟಾಲಿನ್ ಮಾಣಿ’ಗೆ ಉತ್ತರಾಧಿಕಾರದ ಸೌಟು ನೀಡಿದ್ದಾರೆ. ’ಎನ್ನ ಪಾಲಿಸೋ, ಕರುಣಾನಿಧಿ, ಪಲ್ಲಂಗಶಯನ ದಯಾವಾರಿಧಿ’, ಎಂದು ಸ್ಟಾಲಿನ್ ಮಾಣಿ ಇಷ್ಟು ಕಾಲ ಬೇಡಿಕೊಂಡದ್ದು ಸಾರ್ಥಕವಾಯ್ತು.
***
* ಭಾರತೀಯರಮೇಲೆ ಆಸ್ಟ್ರೇಲಿಯನ್ ಯುವಕರು ದೌರ್ಜನ್ಯ ಎಸಗುತ್ತಿದ್ದಾರೆ.
- ಬ್ರಿಟನ್‌ನಿಂದ ಗಡಿಪಾರಿಗೊಳಗಾಗಿ ಹೋದ ಅಪರಾಧಿಗಳ ಸಂತತಿ ತಾನೆ ಆ ಯುವಕರು!
***
* ಬಿಜೆಪಿ ಸರ್ಕಾರದ ಸಾಧನೆ ಪ್ರಶಂಸಿಸಿ ತಿಪ್ಪೇಶಿ ರಚಿಸಿರುವ ಕವನ (’ಜಯತು ಜಯ ವಿಠಲಾ’ ಧಾಟಿಯಲ್ಲಿ):

ಜಯತು ಜಯ ಕಮಲಾ, ನಿನ್ನ ಪಕ್ಷವು ಕಲ್ಪವೃಕ್ಷವು ಅದುವೆ ದೊಡ್ಡಾಲ!

ಆಪರೇಷನ್ ಕಮಲದ ಸೆಳೆತ, ಅನ್ಯರೆಲ್ಲರು ಬರುವರು ಇತ್ತ,
ಆಸೆಯ ತೋರ್‍ಸಯ್ಯ, ಪಕ್ಷಕೆ ಸೇರ್‍ಸಯ್ಯ,
ನೀ ಬಲೆ ಚೂಟಿಯಯ್ಯ, ’ಬೂಸಿಯ’ಯ್ಯ, ಸದಾನಂದಯ್ಯಾ!
***
* ಸರ್ಕಾರದ ’ವಿಕಾಸ ಸಂಕಲ್ಪ ಉತ್ಸವ’ಕ್ಕೆ ಎದಿರೇಟಾಗಿ ದೇವೇಗೌಡರು ತಾವೂ ಒಂದು ಉತ್ಸವ ಹಮ್ಮಿಕೊಂಡಿದ್ದಾರೆ.
- ’ಅವಕಾಶ ಸಂಕಲ್ಪ ಉತ್ಸವ’! ಆ ಉತ್ಸವಕ್ಕಾಗಿ ದತ್ತ ಅವರು ಗೀತೆಯೊಂದನ್ನು ರಚಿಸಿದ್ದಾರೆ:
- ’ಜೇನಿನ ಹೊಳೆಯೊ, ಹಾಲಿನ ಮಳೆಯೊ, ಮುದ್ದೆಯೊ, ನಂತರ ಸವಿನಿದ್ದೆಯೊ!’ ಇದು ಗೀತೆಯ ಪಲ್ಲವಿ. ನುಡಿಜೇನಿನ ಹೊಳೆ ಹರಿಸುವ ಕುಮಾರಸ್ವಾಮಿ, ನಂದಿನಿ ಹಾಲಿನ ಮಳೆ ಸುರಿಸುವ ರೇವಣ್ಣ ಮತ್ತು ಮುದ್ದೆ-ನಿದ್ದೆ ಯಜಮಾನರು ಮೂವರನ್ನೂ ’ಕಸ್ತೂರಿ’ ಕನ್ನಡದಲ್ಲಿ ಸ್ತುತಿಸಲಾಗಿದೆ. ಗೀತೆಯ ಚರಣದಲ್ಲಿ ಅನಿತಕ್ಕ-ಭವಾನಿಯಕ್ಕರನ್ನು ಈ ಕೆಳಗಿನಂತೆ ನೆನೆಯಲಾಗಿದೆ:
’ಕುಮಾರಸ್ವಾಮಿಯ ಸತಿ ಅನಿತಕ್ಕ,
ಭವಿ ರೇವಣ್ಣಗೆ ಭವಾನಿ ಪಕ್ಕ,
ದಾಸರು ಪತಿಗಳು ನಾಡಿಗೆ ನೀಡಿದ
ನಾಳಿನ ನಾಯಕಿಮಣಿಗಳು ತಕ್ಕಾ!’
***
* ನಾವೇನು ಕಮ್ಮಿ ಅಂತ ಆರ್‌ವಿಡಿ-ಡಿಕೆಶಿ ಕೂಡ ಉತ್ಸವದ ತಯಾರಿ ನಡೆಸಿದ್ದಾರೆ.
- ಇವರದು ’ಪ್ರಕಾಶರಹಿತೋತ್ಸವ’! ಈ ಉತ್ಸವದಲ್ಲಿ ಸಾಮೂಹಿಕವಾಗಿ ಹಾಡಲು ಎಂ.ಪಿ.ಪ್ರಕಾಶ್ ರಚಿಸಿರುವ ಗೀತೆ ಈ ಕೆಳಗಿನಂತೆ ಪ್ರಾರಂಭವಾಗುತ್ತದೆ:
’ಒಂದೇ ಒಂದೇ ಒಂದೇ, ಹೈಕಮಾಂಡು ಒಂದೇ.
ವಂದೇ ವಂದೇ ವಂದೇ, ಮೇಡಮ್ಮಿಗೆ ವಂದೇ’.
***
* ಆಸ್ಟ್ರೇಲಿಯಾದ ಗೌರವ ಡಾಕ್ಟರೇಟನ್ನು ಅಮಿತಾಭ್ ನಿರಾಕರಿಸಿದ್ದಾರೆ.
- ’ದೇಶ್‌ಪ್ರೇಮಿ’ ’ಮಹಾನ್’ ನಟ ದೇಶದ ಬಗ್ಗೆ ’ಅಭಿಮಾನ್’ ಮೆರೆಯುವ ಮೂಲಕ ’ಹಮ್ ಕಿಸೀಸೇ ಕಮ್ ನಹೀ’ ಎಂಬ ಸಂದೇಶವನ್ನು ಆಸ್ಟ್ರೇಲಿಯಾಕ್ಕೆ ರವಾನಿಸಿದ್ದಾರೆ!
***
* ಲೋಕಸಭೆಗೆ ಮಹಿಳಾ ಸ್ಪೀಕರ್.
- ’ನನ್ನ ಮನೆಗೂ ಮಹಿಳಾ ಸ್ಪೀಕರೇ. ಬರೀ ಸ್ಪೀಕರಲ್ಲ, ಲೌಡ್ ಸ್ಪೀಕರ್!’ ಅಂತಾನೆ ತಿಪ್ಪೇಶಿ!
***
* ಜಗಜೀವನರಾಮ್ ಮಗಳು ಲೋಕಸಭಾಧ್ಯಕ್ಷೆ.
- ಅಪ್ಪನ ಪ್ರಧಾನಿ ಪಟ್ಟದ ಬಯಕೆ ಈಡೇರಲಿಲ್ಲ; ಮಗಳಿಗೆ ಸ್ಪೀಕರ್ ಪಟ್ಟ ಬಯಸದೆಯೇ ಬಂತಲ್ಲ! ಇದುವೇ ಜಗ-ಜೀವನ-ರಾಮ್!
***
* ರಾಷ್ಟ್ರಪತಿ, ಸೂಪರ್ ಪ್ರಧಾನಿ, ಸ್ಪೀಕರ್ ಎಲ್ಲ ಮಹಿಳೆಯರೇ!
- ಪ್ರಧಾನಿಯೂ ಮಹಿಳೆಯೇ ಆಗಿಬಿಟ್ಟರೆ ಅಲ್ಲಿಗೆ ಪ್ರಮೀಳಾ ರಾಜ್ಯ ಸಂಪೂರ್ಣಂ! ಪ್ರಿಯಾಂಕಾ ಏನಂತಾರೆ?
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಸರೀಕರಣ: ವೈಎಸ್‌ವಿ ದತ್ತ
- ಜೆಡಿಎಸ್‌ನ ಇದುವರೆಗಿನ ಸಾಧನೆ? ರಾಜಕಾರಣ, ರಾಜಕಾರಣ ಮತ್ತು ರಾಜಕಾರಣ!
- ಕಾಂಗ್ರೆಸ್‌ನ ಸಾಧನೆ? ಉಗ್ರಪ್ಪನ ಅತ್ಯುಗ್ರ ಭಾಷಣ!
***
* ’ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡ್ತೀವಿ’, ಅಂತಾರೆ ಯಡಿಯೂರಪ್ಪ.
- ’ಅವರೆಲ್ಲಿ ಕೊಡ್ತಾರೆ, ಪರಮಾಧಿಕಾರಿಯೂ ಅವರೇ, ಸರ್ವಾಧಿಕಾರಿಯೂ ಅವರೇ’, ಅಂತಾರೆ ಈಶ್ವರಪ್ಪ!
***
* ರಾಜ್ಯ ಬಿಜೆಪಿಯಲ್ಲಿ ಒಡಕು?
- ಈಶ್ವರ(ಪ್ಪ), ಎದುರುಗಡೆ ಬಸವಣ್ಣ(ಗೌಡ), ಹಿಂದುಗಡೆ (ಗಣಿ) ಪ್ರಮಥ ಗಣ, ಇದೇ ನೋಡಿ ಕೆಡುಕು!
***
* ಪೋಲೀಸರು ಜನಸ್ನೇಹಿಗಳಾಗಬೇಕೆಂಬ ಉದ್ದೇಶದಿಂದ ರಾಜ್ಯ ಪೋಲೀಸ್ ಇಲಾಖೆಯು ಹಲವು ಜನಪರ ಯೋಜನೆಗಳನ್ನು ಘೋಷಿಸಿದೆ.
- ಪೋಲೀಸರ ’ಸಂಸ್ಕೃತಿ’ ಮತ್ತು ’ಸಂಸ್ಕೃತ’ ಸುಧಾರಿಸದೆ ಯಾವ ಜನಪರ ಯೋಜನೆಯಿಂದಲೂ ಏನೂ ಪ್ರಯೋಜನವಿಲ್ಲ.
***
* ’ಇಷ್ಟ ಇಲ್ಲಾಂದ್ರೆ ಎದ್ದುಹೋಗಿ’: ಪತ್ರಿಕಾಗೋಷ್ಠಿಯಲ್ಲಿ ನಟಿ ರಮ್ಯಾ ಸೊಕ್ಕಿನ ಮಾತು!
- ’ಥಿಯೇಟರ್‌ನಿಂದಲೂ ಎದ್ದುಹೋಗಬಹುದೇ?’: ಪ್ರೇಕ್ಷಕನ ಪ್ರಶ್ನೆ.
***
* ಹೆಸರು ರಮ್ಯ.
- ಅವತಾರ ರೌದ್ರ!
***
* ತಮ್ಮ ಬಡಾವಣೆಯಲ್ಲಿ ಬೀದಿನಾಯಿಗಳು ಹಿಂಡುಹಿಂಡಾಗಿ ಓಡಾಡುತ್ತಿರುತ್ತವೆಂದು ನಾಗರಿಕರೊಬ್ಬರು ದೂರಿದ್ದಾರೆ.
- ಅವರಿಗೆ ಗೊತ್ತಿಲ್ಲ ಅವುಗಳ ’ಜನ್ಮಜನ್ಮದಾ ಅನುಬಂಧ, ಹೃದಯ ಹೃದಯಗಳ ಪ್ರೇಮಾನುಬಂಧ’!
***
* ಮುಖ್ಯಮಂತ್ರಿಯಲ್ಲದ ’ಮುಖ್ಯಮಂತ್ರಿ’ ಚಂದ್ರು!
- ’ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ’ಹಲ್ಲಿಲ್ಲದ ಹಾವು’!
***
* ಕೊನೆ ಹನಿ:
ಪಾಲಿಗೆ ಬಂದದ್ದು
ಪಂಚಾಮೃತ
ನಾಲಿಗೆ ಬಂಡೆದ್ದು
ಚಂಪಾಮೃತ!
(’ಚಂಪಾ’ ಗೊತ್ತಲ್ಲ?)