ಅಬ್ರಹಾಂ ಲಿಂಕನ್ ಅವರ ಸಜ್ಜನರ ವ್ಯಾಖ್ಯಾನ

ಅಬ್ರಹಾಂ ಲಿಂಕನ್ ಅವರ ಸಜ್ಜನರ ವ್ಯಾಖ್ಯಾನ

ಅಬ್ರಹಾಂ ಲಿಂಕನ್ (೧೮೦೯-೧೮೬೫) ಅಮೇರಿಕಾದ ೧೬ನೇಯ ರಾಷ್ಟ್ರಪತಿಯಾಗಿದ್ದರು. ಕಡು ಬಡತನದ ಹಿನ್ನಲೆಯಿಂದ ಬಂದು, ತನ್ನ ಸ್ವಂತ ಪರಿಶ್ರಮದಿಂದ ವಕೀಲರಾದವರು. ೧೮೫೪ರಲ್ಲಿ ರಿಪಬ್ಲಿಕ್ ಪಾರ್ಟಿ ಸೇರಿ, ನಂತರ ೧೮೬೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರೋರ್ವ ಕಠಿಣ ಪರಿಶ್ರಮಿ ಹಾಗೂ ಅಪಾರ ಜ್ಞಾನಿಯೂ ಆಗಿದ್ದರು. ೧೮೬೫ ಎಪ್ರಿಲ್ ೧೪ರಂದು ಅಧ್ಯಕ್ಷರಾಗಿದ್ದಾಗಲೇ ಓರ್ವ ದುಷ್ಕರ್ಮಿ ಇವರನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಾನೆ. ಇವರ ಬದುಕಿನ ಒಂದು ಪ್ರಸಂಗವನ್ನು ‘ಕಸ್ತೂರಿ' ಪತ್ರಿಕೆಯ ಹಳೆಯ ಸಂಗ್ರಹದಿಂದ ಆಯ್ದು ಇಲ್ಲಿ ನೀಡಲಾಗಿದೆ. ಒಮ್ಮೆ ಓದಿ ಬಿಡಿ.

ಅಬ್ರಹಾಂ ಲಿಂಕನ್ ಅಮೇರಿಕಾದ ರಾಷ್ಟ್ರಪತಿಗಳಾಗಿದ್ದ ಸಂದರ್ಭ. ಒಮ್ಮೆ ಅವರು ವಿದ್ವಾಂಸರ ಸಭೆಯಲ್ಲಿ ಕುಳಿತಿದ್ದರು. ಅಲ್ಲಿ ಒಬ್ಬರಿಗಿಂತ ಒಬ್ಬರು ತಮ್ಮ ಜ್ಞಾನ ಪ್ರದರ್ಶನ ಮಾಡುತ್ತಿದ್ದರು. ಆ ಸಭೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಒಬ್ಬೊಬ್ಬರು ವಿದ್ವಾಂಸರಿದ್ದರು. ಸಕಲ ವಿಷಯಗಳ ಬಗ್ಗೆ ಸವಿಸ್ತಾರವಾದ ಚರ್ಚೆಗಳು ನಡೆಯುತ್ತಿದ್ದವು. 

ಲಿಂಕನ್ ಅತ್ಯಂತ ಆಸಕ್ತಿಯಿಂದ ಈ ಚರ್ಚೆಗಳನ್ನು ಕೇಳುತ್ತಾ ಕುಳಿತಿದ್ದರು. ಅವರು ಸದ್ದಿಲ್ಲದೇ ಕೇಳಿಕೊಳ್ಳುತ್ತಿದ್ದುದನ್ನು ನೋಡಿದ ವಿದ್ವಾಂಸರೊಬ್ಬರು, ‘ ಸರ್, ತಾವೂ ಏನಾದರೂ ಹೇಳಿ. ನಿಮ್ಮ ಮಾತುಗಳನ್ನು ಕೇಳುವ ಮನಸ್ಸಾಗಿದೆ ನಮಗೆ. ನೀವ್ಯಾಕೆ ಸುಮ್ಮನಿದ್ದೀರಿ?’ ಎಂದು ಪ್ರಶ್ನಿಸಿದರು. ಅಬ್ರಹಾಂ ಲಿಂಕನ್ ಮಾರ್ಮಿಕವಾಗಿ ಹಾಸ್ಯ ಮಾಡುತ್ತಾ, ‘ಇಂದು ನಾನು ಹೇಳುವುದಕ್ಕೆ ಬದಲಾಗಿ, ಏನೋ ಕೇಳುವುದಕ್ಕೆ ಆಸೆ ಪಡುತ್ತಿದ್ದೇನೆ'. ಎಂದರು.

ಅವರ ಮಾತುಗಳನ್ನು ಕೇಳಿ ಎಲ್ಲರಿಗೂ ಆಶ್ಚರ್ಯ. ಪ್ರಶ್ನಾರ್ಥಕ ದೃಷ್ಟಿಯಿಂದ ಎಲ್ಲರೂ ಅವರತ್ತ ನೋಡಿದರು. ಲಿಂಕನ್ ವಿದ್ವಾಂಸರನ್ನು ಕುರಿತು ‘ಸಜ್ಜನ ಪುರುಷನ ವ್ಯಾಖ್ಯಾನವನ್ನು ತಿಳಿಸುವಿರಾ?’ ಎಂದು ಕೇಳಿದರು.

ಒಬ್ಬ ವಿದ್ವಾಂಸ, ತನ್ನ ವಿದ್ವತ್ತನ್ನು ಪರಿಚಯಿಸುತ್ತಾ ‘ಏನು ತಿನ್ನಲು ದೊರಕುತ್ತದೆಯೋ ಅದನ್ನು ತಿಂದು ಸಂತೋಷ ಪಡುವವನು, ತಿನ್ನಲು ಸಿಗದಿದ್ದರೂ ಸಂತೋಷವಾಗಿಯೇ ಇರುವವನೇ, ಸಜ್ಜನ' ಎಂದು ನುಡಿದ.

‘ಇಲ್ಲ, ಇದು ಸರಿಯಾದ ವ್ಯಾಖ್ಯಾನವಲ್ಲ' ಎಂದು ತಲೆಯಾಡಿಸುತ್ತಾ ಹೇಳಿದ ಲಿಂಕನ್ ‘ ಸಜ್ಜನರ ವ್ಯಾಖ್ಯಾನ ನನ್ನ ಅಭಿಪ್ರಾಯದಂತೆ ಇದಲ್ಲ. ನೀವು ಅಂದದ್ದು ಸಾಧಾರಣ ವಿಷಯ. ಇದನ್ನು ಯಾರಾದರೂ ಹೇಳುತ್ತಾರೆ. ಅದಕ್ಕೆ ವಿದ್ವತ್ ಅಗತ್ಯವಿಲ್ಲ.’

ರಾಷ್ಟ್ರಪತಿಯವರಿಂದ ಹೊಗಳಿಕೆಯನ್ನು ನಿರೀಕ್ಷೆ ಮಾಡಿಕೊಂಡಿದ್ದ ಆ ವಿದ್ವಾಂಸರ ಮುಖ ಕಪ್ಪಿಟ್ಟಿತು. ಆದರೂ ತನ್ನ ಮರ್ಯಾದೆಯನ್ನು ಕಾಪಾಡಿಕೊಳ್ಳಲು ‘ಹಾಗಾದರೆ ನಿಮ್ಮ ಪ್ರಕಾರ, ಸರಿಯಾದ ಸಜ್ಜನರ ವ್ಯಾಖ್ಯಾನ ಏನು?’ ಎಂದನು.

‘ಸಜ್ಜನರು ಸಿಕ್ಕಿದನ್ನು ಜೊತೆಗಾರರೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ಸಿಗದಿದ್ದರೂ ಸಹಜಭಾವದಿಂದಲೇ ಇರುತ್ತಾರೆ' ಎಂದರು ಲಿಂಕನ್.

ಲಿಂಕನ್ ಅವರ ಮಾತು ಎಲ್ಲಾ ವಿದ್ವಾಂಸರಿಗೂ ಮೆಚ್ಚುಗೆಯಾಯಿತು. ಎಲ್ಲರೂ ಅವರ ನುಡಿಯನ್ನು ಸಮರ್ಥಿಸಿಕೊಂಡರು. 

ಚಿತ್ರ ಕೃಪೆ: ಅಂತರ್ಜಾಲ ತಾಣ