ಸೂಕ್ತ ಬಸಿಗಾಲುವೆ ವ್ಯವಸ್ಥೆಯಿಂದ ರೋಗ ಕಮ್ಮಿ, ಇಳುವರಿ ಹೆಚ್ಚು

ಸೂಕ್ತ ಬಸಿಗಾಲುವೆ ವ್ಯವಸ್ಥೆಯಿಂದ ರೋಗ ಕಮ್ಮಿ, ಇಳುವರಿ ಹೆಚ್ಚು

ಬಹಳ ರೈತರ ತೋಟಗಳಲ್ಲಿ ಮರಗಳು ಆರೋಗ್ಯವಾಗಿರುವುದಿಲ್ಲ, ಉತ್ತಮ ಫಸಲು ಇಲ್ಲ. ಇಂತಹ ಅನಾರೋಗ್ಯ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಬಸಿ ವ್ಯವಸ್ಥೆ, ಹೆಚ್ಚಿನ ಇಳುವರಿ  ಪಡೆಯಲು ಕೇವಲ ಗೊಬ್ಬರ, ನೀರಾವರಿ ಮಾಡಿದರೆ ಸಾಲದು. ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಮಣ್ಣಿನ ಸ್ವಾಸ್ಥ್ಯ ಸುಧಾರಣೆಗೆ ನಾವು ಗೊಬ್ಬರ ಹಾಕುತ್ತೇವೆ, ಉಳುಮೆ ಮಾಡುತ್ತೇವೆ. ಆದರೆ ಇದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಮಣ್ಣಿನಲ್ಲಿ ಸಮರ್ಪಕ ಹಬೆಯಾಡುವಿಕೆ, ಉಷ್ಣತೆಯ ಸಮತೋಲನ, ಇದ್ದರೆ ಮಾತ್ರ ನಾವು ಕೊಡುವ ನೀರು, ಗೊಬ್ಬರ ಫಲ ಕೊಡುತ್ತದೆ.

ಬಹಳ ಜನ ನನ್ನ ತೋಟದಲ್ಲಿ ನೀರು ನಿಲ್ಲುವುದಿಲ್ಲ, ಮತ್ತೆ ಯಾಕೆ ಬಸಿಗಾಲುವೆ ಎಂದು ಅದನ್ನು ಮಾಡದೆ ತೋಟ ಮಾಡುತ್ತಾರೆ. ಕೆಲವೇ ವರ್ಷಗಳಲ್ಲಿ ಆ ತೋಟ ಅನುತ್ಪಾದಕವಾಗುತ್ತದೆ. ಇದಕ್ಕೆ ಬೇರೆ ಯಾವುದೇ ಕಾರಣ ಅಲ್ಲ. ಬಸಿಗಾಲುವೆಯೇ ಕಾರಣ. ಸರಿಯಾದ ಬಸಿಗಾಲುವೆ ಇದ್ದರೆ ಬೊಂಬಾಟ್ ಫಸಲು ಮತ್ತು ಮರಗಳಿಗೆ ಧೀರ್ಘಾಯುಸ್ಸು.

ನೀರಾವರಿ ಅಥವಾ ಬೆಳೆಗಳಿಗೆ ನೀರು ಹೇಗೆ ಬೇಕೆಂದರೆ ಅದು ಕೇಶಾಕರ್ಷಕವಾಗಿರಬೇಕು. ಅದು ಗುರುತ್ವಾಕರ್ಷಕವಾಗಿರಬಾರದು. ಸಸ್ಯಗಳಿಗೆ ಕೇಶಾಕರ್ಷಕ ನೀರು ಬೇಕು, ಮಳೆಗಾಲದಲ್ಲಿ ಗುರುತ್ವಾಕರ್ಷಕ ನೀರು ಸರಾಗವಾಗಿ ಬಸಿಯದಿದ್ದಾಗ ಬೆಳೆಗಳಿಗೆ ಯಾವಾಗಲೂ ಅದು ತೊಂದರೆ ಉಂಟುಮಾಡುತ್ತಲೇ ಇರುತ್ತದೆ..

ಬಸಿ ಗಾಲುವೆ ಯಾಕೆ ಅಗತ್ಯ:

ನಾವು ಕೊಡುವ ನೀರು, ಹಾಗೆಯೇ ಮಳೆಯ ಪರಿಣಾಮದಿಂದ ಭೂಮಿಯಲ್ಲಿ ಏರುವ ಜಲಮಟ್ಟ  ಹೆಚ್ಚಿನ ಸಂದರ್ಭಗಳಲ್ಲಿ ಮಣ್ಣಿನ ಗುಣವನ್ನು ವಿಷಕಾರಕವನ್ನಾಗಿ ಮಾರ್ಪಡಿಸುತ್ತದೆ. ಬೇರುಗಳಿಗೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಬೇರುಗಳು ಘಾಸಿಯಾದಾಗ ಸಸ್ಯಗಳ ಆರೊಗ್ಯ ಕೆಡುತ್ತದೆ. ನಮ್ಮಲ್ಲಿ ಬಹಳಷ್ಟು ರೈತರ ಅಡಿಕೆ ತೋಟಗಳಲ್ಲಿ ಮರದ ಕಾಂಡಕ್ಕೆ ಬಿಸಿಲು ಬಡಿದು ಅದರ ಕಾಂಡ  ಶಿಥಿಲವಾಗಿ ಆಯುಷ್ಯವೇ ಕಡಿಮೆಯಾಗುತ್ತದೆ.

ಇದು ಮುಖ್ಯವಾಗಿ ಆರೋಗ್ಯ ಸಮಸ್ಯೆ. ಸಮರ್ಪಕ ಬಸಿ ವ್ಯವಸ್ಥೆ ಇರುವ ತೋಟಗಳಲ್ಲಿ ಇಂತಹ ಸಮಸ್ಯೆ ತುಂಬಾ ಕಡಿಮೆಯಾಗುತ್ತದೆ.

ಬಹಳಷ್ಟು ಬೆಳೆಗಾರರ ಅಡಿಕೆ ತೋಟಗಳಲ್ಲಿ ಮರದ ಸುಳಿ ಮುರುಟುವುದು, ಶಿರಭಾಗ ಸಣಕಲಾಗುವುದು ಆಗುತ್ತದೆ. ಇದಕ್ಕೂ ಕಾರಣ ಬೇರಿಗೆ ಆಗುವ ಹಾನಿ. ರೋಗ, ರೋಗ ಯಾವಾಗಲೂ ರೋಗ. ಇದಕ್ಕೆ ಕಾರಣ ಮಣ್ಣು ಅಧಿಕ ಶೀತಕ್ಕೆ ಒಳಗಾಗಿರುವುದು. ಇದನ್ನು ತಪ್ಪಿಸಿದರೆ ಮಾತ್ರ ಬೆಳೆಯನ್ನು ರೋಗಮುಕ್ತವಾಗಿರಿಸಲು ಸಾಧ್ಯ.

ತೆಂಗು, ಅಡಿಕೆ ಮುಂತಾದ ಬೆಳೆಗಳಲ್ಲಿ ಬೇರುಗಳು ಮೇಲ್ಮಟ್ಟದಲ್ಲಿ ಹಬ್ಬುವ ಕಾರಣ, ಬೇರುಗಳು ತುಂಬಾ ಕೋಮಲ ಹಾಗೂ ಸಣ್ಣ ಪ್ರಮಾಣದ ಘಾಸಿಯನ್ನೂ ಸಹ ಅವು ಸಹಿಸಿಕೊಳ್ಳಲಾರವು. ಬೇರಿನ ಮೇಲ್ಪ್ಭಾಗ ಕೊಳೆಯುವುದು, ಬೇರಿನ ಕವಲು ಅಥವಾ ಆಹಾರ ಸಂಗ್ರಹಿಸುವ ಸಣ್ಣ ಬೇರುಗಳು ಹಾನಿಗೊಳಗಾಗುತ್ತದೆ.

ಯಾವುದೇ ಬೆಳೆಗಳ ಆರೋಗ್ಯ ಮತ್ತು ಇಳುವರಿ ನಿಂತಿರುವುದು, ಅದರ ಬೇರುಗಳ ವೈಶಾಲ್ಯತೆಯ ಮೇಲೆ. ವಿಶಾಲ ಪ್ರದೇಶಕ್ಕೆ ಬೇರುಗಳು ಹಬ್ಬಲು ಯಾವ ತಡೆಯೂ  ಇರಬಾರದು. ಅಧಿಕ ಜೌಗು ಬೇರುಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ.

ತೋಟದಲ್ಲಿ ಬಸಿಗಾಲುವೆ ಮಾಡುವುದರಿಂದ ಲಾಭಗಳು:

ಜಮೀನಿನಲ್ಲಿ ( ಭತ್ತವನ್ನು ಹೊರತುಪಡಿಸಿ) ಎಲ್ಲಾ ಬೆಳೆಗಳಿಗೂ, ಬೆಳೆಯಲು ಹಿತವಾದ ವಾತಾವರಣ ಬಸಿಗಾಲುವೆಯಿಂದ ದೊರೆಯುತ್ತದೆ. ಮಣ್ಣು ಕ್ಷಾರವಾಗಿದ್ದಲ್ಲಿ ಕ್ಷಾರೀಯತೆ ಕಡಿಮೆಯಾಗುತ್ತದೆ. ಆಮ್ಲೀಯತೆ ಹೆಚ್ಚಾಗುವುದಿಲ್ಲ.

ನೀರು ಹೆಚ್ಚಾದಾಗ ಬೆಳೆಗಳಿಗೆ ಅಗತ್ಯವಾದ ಉಷ್ಣತೆಯ ಕೊರತೆ ಉಂಟಾಗುತ್ತದೆ. ಆಗ ರೋಗ ರುಜಿನಗಳು , ಹೆಚ್ಚಾಗುತ್ತದೆ. ಸಸ್ಯಗಳು ಸಾಯುವ ಸಾಧ್ಯತೆಯೂ ಇದೆ. ಈ ಅಪಾಯಗಳನ್ನು ಬಸಿಗಾಲುವೆ ಮಾಡಿ ನಿವಾರಿಸಬಹುದು.

ಅಧಿಕ ಮಳೆಯಾಗುವ ಕಡೆಗಳಲ್ಲಿ  ಮಳೆಗಾಲದಲ್ಲಿ ಭೂ ಜಲಮಟ್ಟ ಮೇಲೆ ಬರುತ್ತದೆ. ಬಸಿಗಾಲುವೆ ಮಾಡುವುದರಿಂದ ಸಸ್ಯಗಳ ಬೇರು ವಲಯಕ್ಕಿಂತ ಮೇಲೆ ಬಾರದಂತೆ ತಡೆಯಬಹುದು. ಬೇರುಗಳಿಗೆ ಪೋಷಕಗಳನ್ನು ಹೀರಿಕೊಳ್ಳಲು ಅನುಕೂಲವಾಗುತ್ತದೆ.

ಪ್ರತಿಯೊಂದು ಬೆಳೆಯಲ್ಲೂ ಬೇರುಗಳಿಗೆ ಆಮ್ಲಜನಕ ದೊರೆಯಲೇ ಬೇಕು. ಆಮ್ಲಜನಕ ದೊರೆಯದಿದ್ದ ಬೆಳೆಗಳಿಗೆ ಬೇರೆ ನೀವು ಏನು ಕೊಟ್ಟರೂ ಪ್ರಯೋಜನ ಇರಲಾರದು. ಬಸಿಗಾಲುವೆಯ ಇಕ್ಕೆಲಗಳಲ್ಲಿ ಇಳಿಯುವ ಬೇರುಗಳು ಸಸ್ಯಕ್ಕೆ ಬೇಕಾಗುವ ಆಮ್ಲಜನಕವನ್ನು ಬೇಕಾದಷ್ಟು ಒದಗಿಸಿಕೊಡುತ್ತದೆ.

ಬಸಿಗಾಲುವೆ ಒಂದನ್ನು ಮಾಡಿ ಉಳಿದೆಲ್ಲಾ ನಿರ್ವಹಣೆಗಳನ್ನು ಸ್ವಲ್ಪ ಕಡಿಮೆ ಮಾಡಿದರೂ ಮರದ ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ಇಳುವರಿಯೂ ಹೆಚ್ಚು ಬರುತ್ತದೆ. ನಾವು ಕೊಡುವ ಪೋಷಕಗಳು ಚೆನ್ನಾಗಿ ಲಭ್ಯವಾಗಿ ಅದರ ಪೂರ್ಣ ಪ್ರತಿಫಲ ಲಭ್ಯವಾಗುತ್ತದೆ. 

(ಮಾಹಿತಿ ಸಂಗ್ರಹ)

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ