ಪುಸ್ತಕಗಳ ಬಿಡುಗಡೆ ಸಮಾರಂಭ....

ಪುಸ್ತಕಗಳ ಬಿಡುಗಡೆ ಸಮಾರಂಭ....

ಬರಹ

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.  ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು.  ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರೊ.ಬಿ ಕೆ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಕೆ ವಿ ಅಕ್ಷರ ಮತ್ತು ಶ್ರೀಮತಿ ನೇಮಿಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಡೆಯಿತು ಪುಸ್ತಕಗಳ ಲೋಕಾರ್ಪಣಾ ಸಮಾರಂಭ.  ಎಂದಿನಂತೆ ಅಂಕಿತದವರು ಉಪಹಾರವನ್ನೂ ಏರ್ಪಡಿಸಿ ಬಿಟ್ಟಿದ್ದರು.  ಈ ಸಮಾರಂಭದಲ್ಲಿ ನನ್ನನ್ನು ಆಕರ್ಷಿಸಿದ ವಿಚಾರಗಳೆಂದರೆ ಭೂಮಿ ಬುಕ್ಸ್ ಪ್ರಕಾಶನದವರ ಪ್ರತಿ ಪುಸ್ತಕಕ್ಕೆ ಬದಲು ಒಂದು ಗಿಡ ನೆಡುವ ಸಂಕಲ್ಪ ಮತ್ತು ಅತಿಥಿಗಳಿಗೆ ಪ್ರೀತಿಯಿಂದ ಕೊಟ್ಟ ಸಸಿಗಳು.  ಹಸಿರು ಸಸಿಗಳು ಒಬ್ಬರಿಂದೊಬ್ಬರಿಗೆ ವಿನಿಮಯವಾಗುವ ವಿಷಯವೇ ನನ್ನನ್ನು ಬಹಳ ಸಂತೋಷ ಪಡಿಸಿತ್ತು.  ಎರಡು ವರ್ಷಗಳ ಹಿಂದೆ ನಮ್ಮ ಚಿಕ್ಕಮ್ಮನ ಮನೆಯಲ್ಲಿ ನರಸಿಂಹ ಹೋಮ ಮಾಡಿದಾಗ, ನಾವು ಉಡುಗೊರೆಯಾಗಿ ಪುಟ್ಟ ಪುಟ್ಟ ಸಸಿಗಳನ್ನು ಕೊಟ್ಟಾಗ, ಅಲ್ಲಿ ನೆರೆದಿದ್ದ ಎಲ್ಲಾ ಸಾರ್ವಜನಿಕರೂ (ಎಲ್ಲರೂ ನಮ್ಮ ಬಳಗವೆಂಬ ವರ್ಗಕ್ಕೆ ಸೇರಿದವರೇ...!! :-) ನಮ್ಮನ್ನೇ ವಿಚಿತ್ರವಾಗಿ ನೋಡಿದ್ದರು.  ಆದರೆ ಪುಸ್ತಕ ಬಿಡುಗಡೆಯಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಈ ಆಚರಣೆ ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು.

ಎಲ್ಲಾ ಅತಿಥಿಗಳ ಮಾತುಗಳ ನಂತರ ಶ್ರೀ ನಾಗೇಶ ಹೆಗಡೆಯವರು ತಮ್ಮ ಚಿಕ್ಕ ಚೊಕ್ಕವಾದ ಮಾತುಗಳನ್ನು ಆಡಿದರು.  ಅವರು ಅಲ್ಲಿ ನೆರೆದಿದ್ದವರಿಗೆಲ್ಲಾ "ನಿಮ್ಮ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆಗಳು ನಡೆದಾಗಲೆಲ್ಲಾ (ಅಂದರೆ ನಮ್ಮ ಜನ್ಮ ದಿನಗಳಂದು, ಮದುವೆಯ ವಾರ್ಷಿಕೋತ್ಸವ, ಮಕ್ಕಳ ಹುಟ್ಟು ಹಬ್ಬ, ಅನ್ನಪ್ರಾಶನ ಹೀಗೆ.......) ನೀವು ನೆನಪಾಗಿ ಒಂದೊಂದು ಗಿಡ ನೆಟ್ಟರೆ, ಬೆಂಗಳೂರು ಮತ್ತೆ ಹಸಿರು ವನವಾಗುತ್ತದೆ ಎಂದು ಕರೆ ಕೊಡುವುದರ ಮೂಲಕ   ತಮ್ಮ ಪರಿಸರ ಮತ್ತು ಹಸಿರು ಕಾಳಜಿಯನ್ನು ವ್ಯಕ್ತಪಡಿಸಿದರು.  ನನಗೆ ಅವರ ಈ ವಿಧಾನ ಅತ್ಯಂತ ಪ್ರಭಾವಕಾರಿ ಅನ್ನಿಸಿತು.  ಸರಕಾರ ತಿಪ್ಪಗೊಂಡನಹಳ್ಳಿಯ ಸಮೀಪ ’ಸ್ಫೂರ್ತಿ ವನ’ಕ್ಕೆ ಜಾಗ ಕೊಟ್ಟಿದೆಯೆಂದೂ ಮತ್ತು ಭೂಮಿ ಪ್ರಕಾಶನ ಹೊರ ತರುವ ಪ್ರತಿಯೊಂದು ಪುಸ್ತಕಕ್ಕೆ ಬದಲಾಗಿ ಅಥವಾ ನೆನಪಾಗಿ ಈ ಸ್ಫೂರ್ತಿವನದಲ್ಲಿ ಒಂದೊಂದು ಗಿಡ ನೆಡಲಾಗುತ್ತದೆಂದು ಭರವಸೆಯಿತ್ತರು.  ಇದರ ಶುರುವಾತು ಶ್ರೀಮತಿ ನೇಮಿಚಂದ್ರರವರು, ತಾವೇ ನೆಟ್ಟ ನೇರಳೆ ಸಸಿಯನ್ನು ಶ್ರೀ ನಾಗೇಶ ಹೆಗಡೆಯವರಿಗೆ ಕಾಣಿಕೆಯಾಗಿ ನೀಡುವ ಮೂಲಕ ಮಾಡಿದರು.

ಸಮಾರಂಭದ ಚಿತ್ರ ’ಅವಧಿ’ಯಲ್ಲಿದೆ.  ಶ್ರೀ ನಾಗೇಶ ಹೆಗಡೆಯವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿತು.....

ಕೊನೆಯದಾಗಿ ಹೇಳಲೇಬೇಕಾದ ಒಂದು ಮಾತು.... ಸಮಾರಂಭದಲ್ಲಿ ನಾನು ಭೇಟಿಯಾದ ನಮ್ಮ ಸಂಪದ ಮಿತ್ರರು... ಹರಿ, ಶ್ರೀಹರ್ಷ,  ವಿನಯ್..... ಮತ್ತು ಬ್ಲಾಗ್ ಲೋಕದ ಗೆಳೆಯರು ಕ್ಷಣ ಚಿಂತನೆ ಖ್ಯಾತಿಯ ಚಂದ್ರಶೇಖರ್, ಛಾಯಾ ಕನ್ನಡಿ ಖ್ಯಾತಿಯ ಶಿವು ಮತ್ತು ಮಲ್ಲಿ ಕಣ್ಣಲ್ಲಿ (ಕ್ಯಾಮೆರಾ) ಖ್ಯಾತಿಯ ಡಿ ಜಿ ಮಲ್ಲಿಕಾರ್ಜುನ್.... ನನಗೆ ನಿಜಕ್ಕೂ ಕಾರ್ಯಕ್ರಮಕ್ಕೆ ಹೋಗಿದ್ದು ಸಂತಸ ತಂದಿತ್ತು........