ಕಗ್ಗ ದರ್ಶನ – 27 (2)

ಕಗ್ಗ ದರ್ಶನ – 27 (2)

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ?
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು
ಸರಸತೆಯೆ ಸಿರಿತನವೊ – ಮರುಳ ಮುನಿಯ
ಖುಷಿಯಿಂದಿರುವುದಕ್ಕೆ ಸಂಪತ್ತು ಬೇಕೇ? ಎಂಬ ಪ್ರಶ್ನೆಯ ಮೂಲಕ ನಮ್ಮ ಚಿಂತನಾ ಲಹರಿಗೆ ಚುರುಕು ಮುಟ್ಟಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಬೇಡವೇ ಬೇಡ. ಸೂರ್ಯನ ಹೊಂಗಿರಣಗಳಿಗೆ ಬಾಡಿಗೆ ಕೊಡಬೇಕೇ? ಭೂಮಿಯಲ್ಲಿ ದಿನದಿನವೂ ಕಾಣಿಸುವ ಬಣ್ಣಗಳಿಗೆ ಹಣ ತೆರಬೇಕೇ? ಸಾವಿರಾರು ಹೂಗಳ ಸಾವಿರಸಾವಿರ ಬಣ್ಣಗಳು, ಎಲೆಗಳ ಭಿನ್ನಭಿನ್ನ ಬಣ್ಣಗಳು, ಸೂರ್ಯ ಮೂಡುವಾಗ ಮತ್ತು ಮುಳುಗುವಾಗ ಆಕಾಶದಲ್ಲಿ ಎದ್ದು ಬರುವ ಚಿತ್ತಾರಗಳ ಬಣ್ಣಗಳು, ವಿವಿಧ ಹಕ್ಕಿಗಳ ಪುಕ್ಕಗಳ ವಿಸ್ಮಯ ಬಣ್ಣಗಳು – ಇವನ್ನೆಲ್ಲ ಕಾಣುತ್ತ ಸಂತೋಷ ಪಡಲು ಕಾಸು ಕೊಡಬೇಕಾಗಿಲ್ಲ.
ಯಾಕೆಂದರೆ, ಹರುಷವೆಂಬುದು ಅಂಗಡಿಯಲ್ಲಿ ಮಾರಾಟಕ್ಕಿರುವ ಸರಕಲ್ಲ. ಹರುಷವೆಂಬುದು ಹೃದಯದ ಒಳಗಿನ ಚಿಲುಮೆ. ನಾವು ಹೆಚ್ಚೆಚ್ಚು ನೀರು ನುಗ್ಗಿಸಿದರೆ, ಆ ಕಾರಂಜಿ ಹೆಚ್ಚೆಚ್ಚು ಎತ್ತರಕ್ಕೆ ಪುಟಿಯುತ್ತದೆ.
ಮೊಗ್ಗೊಂದು ಹೂವಾಗಿ ಅರಳುವುದನ್ನು, ಚಿಗುರೊಂದು ಎಲೆಗೊಂಚಲಾಗಿ ನಳನಳಿಸುವುದನ್ನು, ಹಸುರು ಎಲೆಗಳನ್ನು ಹೊದ್ದ ಮರದ ತುಂಬ ಧಿಗ್ಗನೆ ಹೂಗೊಂಚಲುಗಳು ತುಂಬುವುದನ್ನು, ಒದ್ದೆ ಮಣ್ಣಿನಲ್ಲಿ ಬಿದ್ದ ಬೀಜವೊಂದು ಚಿಗುರಿ ತಲೆಯೆತ್ತುವುದನ್ನು, ಹಕ್ಕಿಗೂಡಿನಲ್ಲಿರುವ ಮೊಟ್ಟೆಗಳಿಂದ ಪುಟ್ಟಪುಟ್ಟ ಮರಿಗಳು ಜೀವ ತಳೆದು ಚಿಂವ್-ಚಿಂವ್ ಸದ್ದು ಮಾಡುವುದನ್ನು, ಗಗನದಲ್ಲಿ ಮುಗಿಲುಗಳ ಚಿತ್ತಾರಗಳನ್ನು, ಹಕ್ಕಿಗಳ ಹಾರುಹಾದಿಯ ವಿನ್ಯಾಸಗಳನ್ನು, ಜೇನ್ನೊಣಗಳ ನರ್ತನವನ್ನು, ಚಿಟ್ಟೆಗಳ ನಾಟ್ಯವನ್ನು ತದೇಕ ಚಿತ್ತದಿಂದ ಕಂಡಿದ್ದೀರಾ? ಇವೆಲ್ಲದರ ಚೈತನ್ಯ ಕಾಣುತ್ತಾ ರೋಮಾಂಚನ ಅನುಭವಿಸಿದ್ದೀರಾ? ಅದುವೇ ಪ್ರಕೃತಿಯ ಸಂಭ್ರಮಗಳಿಗೆ ಸ್ಪಂದಿಸುವ ನಿಮ್ಮ ಹೃದಯದ ಒಳಚಿಲುಮೆ.
ಸಂತೋಷ ಪಡಲಿಕ್ಕಾಗಿ ನಾವು ಹಬ್ಬಗಳಿಗಾಗಿ, ಜಾತ್ರೆಗಳಿಗಾಗಿ ಕಾಯಬೇಕಾಗಿಲ್ಲ. ಸಣ್ಣಪುಟ್ಟ ಸಂಗತಿಗಳಲ್ಲೂ ಹರುಷದ ಸೆಲೆ ಕಾಣಲು ಕಲಿತರೆ, ನಮಗೆ ದಿನದಿನವೂ ಹಬ್ಬ. ಬಿಸಿಲಿಗೆ ನಡೆದು ಬಂದು ಬೆವರೊರೆಸುತ್ತ ಕುಡಿಯುವ ಬೆಲ್ಲ-ನೀರಿನಲ್ಲಿ, ಚಳಿಗಾಲದ ಮುಂಜಾನೆ ಮೈಗೆ ಸುರಿದುಕೊಳ್ಳುವ ಉಗುರು ಬೆಚ್ಚಗಿನ ನೀರಿನಲ್ಲಿ, ದೂರದೂರಿನಿಂದ ಹಸಿದು ಮನೆಗೆ ಬಂದಾಗ ಊಟದ ಬಟ್ಟಲಿನಲ್ಲಿ ಚಪ್ಪರಿಸುವ ಗಂಜಿ-ಚಟ್ನಿಯಲ್ಲಿ ಎಂತಹ ಸುಖವಿದೆ! ಇವನ್ನೆಲ್ಲ ಸವಿಯುವ ಸರಸತೆಯೇ ಸಿರಿತನ.
 

Comments