ಗರಬಡಿಸಿದ ದಾರುಣ ಘಟನೆ 9/11....

ಗರಬಡಿಸಿದ ದಾರುಣ ಘಟನೆ 9/11....

ಕವನ

      ಗರಬಡಿಸಿದ ದಾರುಣ ಘಟನೆ 9/11....
 
ಲೋಹದ ಹಕ್ಕಿಗಳಿಗೇನು ಗೊತ್ತಿತ್ತು 
ತಾವಾಗುವೆವು ಮಾರಣ ಹೋಮಕ್ಕೆ ಕಾರಣ 
ಮುಗ್ಧತೆಯ ಪ್ರಾಣಹರಣ ಕ್ರೂರತೆಯ ಸೋದಾಹರಣ
ಭಯದ ಉತ್ಪಾದಕರು ಮಾಡಿದ ಕಿಡಿಗೇಡಿ ಕಾರ್ಯ
ನಾಚಿಕೆಯಿಲ್ಲದ ಹೇಡಿತನದ ಹೊಂಚು 
ಸದ್ದಿಲ್ಲದೆ ಮಾಡಿದ ಕುಲಗೆಡಿಸುವ ಆ ಸಂಚು 
ಕೊಂಚವು ಅಂಜಿಕೆಯಿಲ್ಲದ ಅಮಾನುಷ ಕ್ರೌರ್ಯ
ದಿನಂಪ್ರತಿಯ ರೂಢಿಯಂತೆ ತನ್ನೊಡಲಲಿ 
ಯಾನಿಕರ ಹೊತ್ತು ನೀಲನಭದ ಕಡಲಲಿ 
ಚಾಲಕ ಹಿಡಿದ ಚುಕ್ಕಾಣಿಯ ದಿಕ್ಕು 
ಬದಲಿಸಿತು ಬೆದರಿಕೆಯ ದನಿಗೆ ಸಿಕ್ಕು
ಪಯಣಿಗರ ಕಣ್ಣಂಚಿನ ಕರೆಗೆ ಕೊರಗಿ ಮರುಗಿ 
ಕೊಂಚವು ಕರಗದ ಸಂಚುಗಾರರ ಭಯಕ್ಕೆ ಶಿರಬಾಗಿ 
ನುಗ್ಗಿಸಿ ಗೋಪುರಗಳ ನಡುವೆ ತೂರಿ
ನಗರಿಯ ಹೃದಯದ ಮುದ್ದು ಅವಳಿ ಶಿಖರಗಳು ಬವಳಿ
ಫಟ್ಟನೆ ಆರ್ಭಟಿಸುತ್ತಾ ದಟ್ಟ ಜ್ವಾಲೆಯ ಅಲೆಗಳ ಸುರುಳಿ
 ನೆಲಮುಗಿಲನ್ನು ಆವರಿಸಿ ನಖಶಿಖಾಂತ ನಲುಗಿ ನೆಲಕ್ಕುರುಳಿ 
ದಿನ ರೊಟ್ಟಿಗಾಗಿ ರಟ್ಟೆ ಮುರಿದು ದುಡಿವವರು 
ಮಡಿದರಲ್ಲ  ದಡಬಡನೆ ಗರಬಡಿದು  
ಇತಿಹಾಸಕೆ ಸಾಕ್ಷಿಯಾಯಿತು ದಾರುಣ ಘಟನೆ
ಯಾರು ಕೊಟ್ಟರು ಮಾನವತೆಯ ತುಳಿಯುವ ಈ ಹಕ್ಕು
ಬಗ್ಗಿಸಿ ಮುರಿಯಬೇಕು ಒಗ್ಗೂಡಿ ಪಣತೊಟ್ಟು ಪುಕ್ಕರ ಸೊಕ್ಕು
 
—-Rukku 

ಚಿತ್ರ್