ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್

ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್

ಮಣಿಪಾಲದಿಂದ ಪರ್ಕಳ ರಸ್ತೆಯಲ್ಲಿ ಒಂದೂವರೆ ಕಿಮೀ ಸಾಗಿ, ಬಲಕ್ಕೆ ತಿರುಗಿದರೆ ಸಿಗುವ ಈಶ್ವರ ನಗರ ಬಡಾವಣೆಯಲ್ಲಿದೆ ಮಣಿಪಾಲ ಹಾಲಿನ ಡೈರಿ. ಅದನ್ನು ದಾಟಿ ಮುಂದಕ್ಕೆ ಹೋಗಿ, ಕೊನೆಯ ಅಡ್ಡರಸ್ತೆಗೆ ತಿರುಗಿ ಗುಡ್ಡವೇರಿದರೆ ಡಾ.ಕೆ. ಎನ್. ಪೈ ಅವರ ಮನೆ ತಟಕ್ಕನೆ ಕಣ್ಸೆಳೆಯುತ್ತದೆ – ಮನೆಯ ಸುತ್ತಲು ಇರುವ ಹಸುರು ಮರಗಳಿಂದಾಗಿ. ಹದಿನೈದು ಸೆಂಟ್ಸ್ ಜಾಗದ ಆ ನಿವೇಶನದಲ್ಲಿರುವ “ಕೈತೋಟ ನೋಡಲು ಸಂಜೆ ೫ ಗಂಟೆಗೆ ಬನ್ನಿ” ಎಂಬ ಡಾ. ಪೈ ಅವರ ಆಹ್ವಾನಕ್ಕೆ ಸ್ಪಂದಿಸಿ ನಾವು ಮಂಗಳೂರಿನಿಂದ ೧೯ ಮಾರ್ಚ್ ೨೦೧೭ರಂದು ಹೋಗಿದ್ದೆವು.
 
“ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡಾಕ್ಟರಾಗಿದ್ದೆ. ಹದಿನೇಳು ವರುಷದ ಮುಂಚೆ ಡಾಕ್ಟರ್ ವೃತ್ತಿಯಿಂದ ನಿವೃತ್ತನಾದೆ. ಅನಂತರ ಇಲ್ಲೇ ಹತ್ತಿರ ಒಂದು ಫ್ಲಾಟಿನಲ್ಲಿ ಕೆಲವು ವರುಷ ಇದ್ದೆ. ಅಲ್ಲಿ ದಿನವಿಡೀ ಬೇಜಾರು ಅನ್ನಿಸ್ಲಿಕ್ಕೆ ಶುರುವಾಯ್ತು. ಆ ಮೇಲೆ ಈ ಸೈಟ್ ತಗೊಂಡು ಮನೆ ಕಟ್ಟಿದೆ. ಮನೆಯ ಸುತ್ತಲಿನ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಿಕ್ಕೆ ಶುರು ಮಾಡಿದೆ. ಅದಾದ ಮೇಲೆ ನನಗೆ ಬೇಜಾರೇ ಇಲ್ಲ. ಆಗ ನೆಟ್ಟ ಸಸಿಗಳೆಲ್ಲ ಈಗ ಮರಗಳಾಗಿವೆ. ನೀವೇ ನೋಡಿ. ಮಾವು, ಗೇರು, ಹಲಸು, ಪೇರಳೆ, ಚಿಕ್ಕು, ಸ್ಟಾರ್ ಆಪಲ್, ಬೆಟ್ಟದ ನೆಲ್ಲಿ, ನುಗ್ಗೆ ಮರಗಳು ಇಲ್ಲಿವೆ. ಅನಾನಸು, ಬಾಳೆ, ಹರಿವೆ, ಬದನೆ, ಬೆಂಡೆ, ಬೀನ್ಸ್ ತರಕಾರಿ ಗಿಡಬಳ್ಳಿಗಳು, ಹೂವಿನ ಗಿಡಗಳು ಎಲ್ಲ ಇವೆ. ಎಲ್ಲದರಲ್ಲೂ ಫಲ ಬಿಟ್ಟಿದೆ. ನೀವೂ ಹೀಗೆ ಗಿಡ ಬೆಳೆಸಬಹುದು. ಹೆಚ್ಚೇನೂ ಖರ್ಚಿಲ್ಲ” ಎಂದು ಆಹ್ವಾನಿತರೊಡನೆ ಮಾತಿಗೆ ಶುರುವಿಟ್ಟರು ಡಾ. ಪೈ.
 
ಮನೆಯೆದುರಿನ ಪೇರಳೆ ಮರದ ಆರಡಿ ಉದ್ದಗಲದ ಕಟ್ಟೆಯ ಮಣ್ಣನ್ನು ಕೈಯಲ್ಲಿ ತೆಗೆದು ತೋರಿಸುತ್ತಾ ಅವರು ಮಣ್ಣಿನೊಳಗಿನ ಸೂಕ್ಷ್ಮ ಜಗತ್ತನ್ನು ತೆರೆದಿಟ್ಟ ಪರಿ ಹೀಗಿದೆ: ಯಾವುದೇ ಜಾಗದಲ್ಲಿ ಮೇಲಿನ ಮೂರಿಂಚಿನ ಮಣ್ಣಿನಲ್ಲೇ ಹ್ಯೂಮಸ್ ಇರುವುದು. ಅದಿದ್ದರೆ ಮಾತ್ರ ಗಿಡಮರಗಳು ಚೆನ್ನಾಗಿ ಬೆಳೆಯುತ್ತವೆ. ಹ್ಯೂಮಸ್ ತಯಾರು ಮಾಡುವುದು ಮಣ್ಣಿನಲ್ಲಿರುವ ಎರೆಹುಳಗಳು ಮತ್ತು ಸೂಕ್ಷ್ಮಜೀವಿಗಳು. ನಾನು ಈ ಸೈಟಿಗೆ ಎರೆಹುಳಗಳನ್ನು ಎಲ್ಲಿಂದ ತರುವುದು ಅಂತ ಯೋಚನೆ ಮಾಡ್ತಿದ್ದೆ. ಒಂದಿವಸ ಮನೆಯೆದುರಿನ ಚಪ್ಪಡಿ ಕಲ್ಲನ್ನು ಬದಿಗೆ ಸರಿಸಿದಾಗ, ಅದರ ಅಡಿಯಲ್ಲಿದ್ದವು ನೂರಾರು ಎರೆಹುಳಗಳು. ಹೀಗೆ ಎಲ್ಲ ಜಮೀನಿನಲ್ಲಿಯೂ ಎರೆಹುಳಗಳು ಇರುತ್ತವೆ. ನಾವು ಎರೆಹುಳಗಳಿಗೆ ಆಹಾರ ಒದಗಿಸಿದರೆ ಸಾಕು. ಅವು ಮೊಟ್ಟೆ ಇಟ್ಟು ಮರಿಮಾಡಿ ಸಾವಿರಸಾವಿರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ.
 
ಗಿಡಮರಗಳು ಪೌಷ್ಠಿಕಾಂಶ ಪಡೆಯುವ ರೀತಿಯನ್ನು ಡಾ. ಪೈ ಸರಳವಾಗಿ ವಿವರಿಸಿದ್ದು ಹೀಗೆ: ನಾವು ತಿಂದದ್ದು ನಮ್ಮ ಹೊಟ್ಟೆಯಲ್ಲಿ ಜೀರ್ಣ ಆಗುತ್ತದೆ. ಆದರೆ ಗಿಡಮರಗಳ ಹೊಟ್ಟೆ ಅವುಗಳ ಒಳಗಿಲ್ಲ; ಅದು ಹೊರಗಿದೆ – ಮಣ್ಣಿನಲ್ಲಿ. ಅಂದರೆ ಎರೆಹುಳಗಳು ಮತ್ತು ಸೂಕ್ಷ್ಮಜೀವಿಗಳೇ ಗಿಡಮರಗಳ ಹೊಟ್ಟೆ ಇದ್ದ ಹಾಗೆ. ನಾವು ಕೊಟ್ಟ ಗೊಬ್ಬರವನ್ನು ಇವು ತಿಂದು, ಪೋಷಕಾಂಶವಾಗಿ ಬದಲಾಯಿಸಿ, ಗಿಡಮರಗಳಿಗೆ ಕೊಡ್ತವೆ.
 
“ತರಕಾರಿ ಮತ್ತು ಹಣ್ಣಿನ ಗಿಡಮರಗಳನ್ನು ಬೆಳೆಸಲಿಕ್ಕೆ ನಿಮಗೆ ಮುಖ್ಯವಾಗಿ ಬೇಕಾಗುವುದು ನೀರು ಮತ್ತು ಗೊಬ್ಬರ. ನೀವು ಅಡುಗೆಮನೆಯ ಕಸ ಮತ್ತು ತರಗೆಲೆಗಳಿಂದ ಒಳ್ಳೆಯ ಗೊಬ್ಬರ ಅಂದರೆ ಕಂಪೋಸ್ಟ್ ಮಾಡಿಕೊಳ್ಳಬಹುದು. ಆದರೆ ಅದಕ್ಕೆ ದನದ ಸೆಗಣಿ ಮತ್ತು ಮೂತ್ರ ಬೇಕೇ ಬೇಕು. ಹತ್ತು ಸೆಂಟ್ಸ್ ಜಾಗದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಮರಗಳಿಗೆ ಬೇಕಾದ ಕಂಪೋಸ್ಟ್ ಮಾಡಲಿಕ್ಕೆ ತಿಂಗಳಿಗೆ ಒಂದು ಕಿಲೋ ಸೆಗಣಿ ಇದ್ದರೆ ಸಾಕು. ಹಾಗೆಯೇ ೨ – ೩ ಲೀಟರ್ ಗೋಮೂತ್ರ ಬೇಕು – ಇಡೀ ವರುಷಕ್ಕೆ ಅಷ್ಟೇ ಸಾಕು. ದನಸಾಕುವವರಿಂದ ಸೆಗಣಿ ಮತ್ತು ಗೋಮೂತ್ರ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು” ಎಂದು ವಿವರಿಸುತ್ತಾ ಕಂಪೋಸ್ಟ್ ಕೋಣೆಗೆ ನಮ್ಮನ್ನು ಕರೆದೊಯ್ದು, ಅಲ್ಲಿದ್ದ ಕಂಪೋಸ್ಟನ್ನು ಕೈಯಲ್ಲಿ ತೆಗೆದು ತೋರಿಸಿದರು ಡಾ. ಪೈ. “ನಾನು ಡಾಕ್ಟರ್ ವೃತ್ತಿ ಮಾಡುತ್ತಿದ್ದಾಗ ಇದನ್ನೆಲ್ಲ ಮುಟ್ಟುತ್ತಿರಲಿಲ್ಲ ;ಈಗ ಇದನ್ನು ಮುಟ್ಟದ ದಿನವೇ ಇಲ್ಲ” ಎಂದು ಹೇಳಲು ಅವರು ಮರೆಯಲ್ಲಿಲ್ಲ.
 
“ಜೀವಾಮೃತ ಹಾಕಿದರೆ ತರಕಾರಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ; ಅರ್ಧ ಲೀಟರ್ ಜೀವಾಮೃತಕ್ಕೆ ಹತ್ತು ಲೀಟರ್ ನೀರು ಬೆರೆಸಿ ಸಿಂಪಡಿಸಿದರೆ ಸಾಕು. ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ” ಎಂಬ ಮಾತಿಗೆ ಪೂರಕವಾಗಿ ಅವರು ಹೇಳಿದ್ದು: “ಇಲ್ಲಿದೆ ನೋಡಿ ಪಡುವಲದ ಬಳ್ಳಿ. ಮುಂಚೆ ಒಂದು ಬಳ್ಳಿಯಿಂದ ಐದಾರು ಪಡುವಲಕಾಯಿ ಸಿಗ್ತಾ ಇತ್ತು. ಕಳೆದ ವರುಷ ಜೀವಾಮೃತ ಹಾಕಿದಾಗ ಒಂದೇ ಬಳ್ಳಿಯಿಂದ ಸಿಕ್ಕಿದ್ದು ೧೨೫ ಪಡುವಲಕಾಯಿ.”.
 
ಕಂಪೋಸ್ಟಿಗೆ ಬೇವಿನಹಿಂಡಿ ಬೆರೆಸಿದರೆ ಗಿಡಗಳ ಬೆಳವಣಿಗೆಗೆ ಒಳ್ಳೆಯದು. ಬದನೆ ಮತ್ತು ಬೆಂಡೆ ಸಸಿಗಳನ್ನು ಮಣ್ಣಿನಲ್ಲಿ ಅಥವಾ ಮಣ್ಣು ತುಂಬಿಸಿದ ಗೋಣಿಚೀಲಗಳಲ್ಲಿ ಬೆಳೆಸಬಹುದು. ಗಿಡಮರಗಳ ಬುಡದಲ್ಲಿ ತರಗೆಲೆಗಳ ಹೊದಿಕೆ ಇರಲೇ ಬೇಕು (ಮಲ್ಚಿಂಗ್) ಅದು ಮಗುವಿಗೆ ತಾಯಿಯ ಸೆರಗು ಇದ್ದ ಹಾಗೆ; ಮಣ್ಣಿನಲ್ಲಿ ತೇ॑ವಾಂಶ ಉಳಿಸುತ್ತದೆ. ನೀರನ್ನು ಗಿಡಮರಗಳ ಬುಡಕ್ಕೆ ಸುರಿಯಬಾರದು. ಗಿಡಮರಗಳ ಎತ್ತರ ನೋಡಿಕೊಂಡು, ಬುಡದಿಂದ ಒಂದರಿಂದ ಮೂರಡಿ ದೂರದಲ್ಲಿ ನೀರು ಹಾಕಬೇಕು. ಆಗ ನೀರು ಹುಡುಕಿಕೊಂಡು ಬೇರುಗಳು ಬೆಳೆಯುತ್ತವೆ; ಇದರಿಂದಾಗಿ ಬೇರುಗಳ ಮತ್ತು ಗಿಡಮರಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ” ಎಂದು ಪೂರಕ ಮಾಹಿತಿ ನೀಡಿದರು ಡಾ. ಪೈ.
 
ಅವರ ಮನೆಸೈಟ್ ಮಣಿಪಾಲದ ಗುಡ್ಡೆಯ ಜಂಬಿಟ್ಟಿಗೆಯ ಜಮೀನು. ಆ ಕಲ್ಲುನೆಲದಲ್ಲಿ ಗಿಡಮರಗಳನ್ನು ಬೆಳೆಸುವ ಕಾಯಕಕ್ಕೆ ಧಾರೆ ಎರೆಯಬೇಕು ಅಪಾರ ಸಮಯ ಮತ್ತು ಶ್ರದ್ಧೆ. ತಮ್ಮ ಇಳಿವಯಸ್ಸಿನಲ್ಲಿಯೂ ಪ್ರತಿ ದಿನ ಆರೇಳು ತಾಸು ಆ ಕಾಯಕದಲ್ಲಿ ತೊಡಗಿಸಿಕೊಂಡು ಮೈಮನಗಳಲ್ಲಿ ಉತ್ಸಾಹ ತುಂಬಿಕೊಳ್ಳುತ್ತಾರೆ ಡಾ. ಪೈ. ಅಂದು ಅಲ್ಲಿ ನೆರೆದಿದ್ದ ಅರುವತ್ತು ಆಸಕ್ತರೊಂದಿಗೆ ಒಂದು ತಾಸಿನ ಅವಧಿ ತನ್ಮಯತೆಯಿಂದ ಉತ್ಸಾಹದಿಂದ ತಮ್ಮ ಕಾಯಕದ ಮಾಹಿತಿ ಹಂಚಿಕೊಂಡಿದ್ದರು ಡಾ. ಕೊಚ್ಚಿಕಾರ್ ನರೇಂದ್ರನಾಥ್ ಪೈ. “ಗಿಡಮರಗಳನ್ನು ಬೆಳೆಸುವುದು ನನಗಂತೂ ಆತ್ಮಾನಂದದ ಕೆಲಸ” ಎನ್ನುತ್ತಾ ಅವರು ಮಾತು ಮುಗಿಸಿದಾಗ, ಅಲ್ಲಿ ನೆರೆದಿದ್ದವರಿಗೆಲ್ಲ ಕಾಣಿಸಿತ್ತು ಅದರ ಝಲಕ್ – ಡಾ. ಪೈಯವರ ನಗುಮುಖದಲ್ಲಿ ಮತ್ತು ಅಲ್ಲಿದ್ದ ಗಿಡಮರಬಳ್ಳಿಗಳ ಎಲೆಎಲೆಯಲ್ಲಿ.  
                                                                                                                                                                                                                -- ಅಡ್ಡೂರು ಕೃಷ್ಣ ರಾವ್