ಅಬ್ಬಬ್ಬಾ! ಎಷ್ಟು ಮಂದಿಯಪ್ಪಾ, ಮಣ್ಣು ತಿಂದವರು!
’ಕೃಷ್ಣ, ಧರಮ್, ಎಚ್ಡಿಕೆ ಕೊರಳಿಗೆ ಗಣಿ ಉರುಳು’ ಈ ಅರ್ಥದ ಸುದ್ದಿ ಶಿರ್ಷಿಕೆಯೇ, ಇಂದಿನ ಎಲ್ಲಾ ಪತ್ರಿಕೆಗಳದ್ದು.
ಒಮ್ಮೆ ಹೀಗಾಯಿತು. ಮಧ್ಯರಾತ್ರಿ ತಲೆದಿಂಬಿನ ಮೇಲೆ ಒಂದೇ ತಿಗಣೆ ಕಾಣಿಸಿತು. ಹೌಹಾರಿ ಅದನ್ನು ಹಿಡಿದು ಹಿಸುಕಿಹಾಕಿದೆ. ಸದ್ಯ ಗುಣಿಸಿಕೊಳ್ಳುವ ಮುನ್ನವೇ ಸಿಕ್ಕಿಬಿತ್ತಲ್ಲಾ ಎಂದು ನೆಮ್ಮದಿ ಅನುಭವಿಸಿದೆ. ಮರುದಿನ ಎರಡು ತಿಗಣೆಗಳು! ಇನ್ನೂ ಮಾರನೆದಿನ ಎಂತ್ಹತ್ತು! ಬೆಚ್ಚಿಬಿದ್ದೆದ್ದು ಹಾಸಿಗೆ ದಿಂಬಿ ಸಂಧಿಗಳಲ್ಲಿ ನೋಡಿದರೆ ಅಲ್ಲಲ್ಲಿ ತಿಗಣೆಗೂಡುಗಳ! ಕೂಡಲೇ ಹಿಟ್ ಹೊಡೆದು ಎಲ್ಲಾ ಸಾಯಿಸಿಬಿಟ್ಟೆ. ನಿಟ್ಟುಸಿರು ಬಿಟ್ಟು ಮಲಗಿದರೆ ಮತ್ತೆ ತಿಗಣೆ ಹಿಂಡು! ಮನೆಯ ಗೂಡು, ಮಾಡ, ಮಚ್ಚುಗಳಲ್ಲೇ ತಿಗಣೆ ಸಂತಾನ-ಸಂತತಿ! ವೃತ್ತಿಪರ ವಿಷವಾಹಿಕರನ್ನು ಕರೆದು ಔಷಧಿ ಹೊಡೆಸಿದ್ದಾಯಿತು. ’ಪ್ರಯೋಜನವಿಲ್ಲ, ಸಾರ್, ಎಎಂಸಿ ತೆಗೆದುಕೊಂಡುಬಿಡಿ ಎಂದು ದುಂಬಾಲು ಬಿದ್ದಿದ್ದಾರೆ!
ತಿಂದು ತೇಗಿದವರನ್ನು ಪತ್ತೆ ಹಚ್ಚಿ ಬೇಡಿಹಾಕುವ ಭರದಲ್ಲಿ, ಹಾಲಿ ತಿನ್ನುತ್ತಿರುವವರನ್ನು ಬಿಟ್ಟುಬಿಡುತ್ತಿದ್ದೇವೆಯೋ ಎನಿಸುತ್ತದೆ!
ರಾಜಕೀಯದವರು, ರಾಜಕೀಯದವರನ್ನು ಹಣಿಯಲು, ಆರ್ಟಿಐ, ಅಚ್ಚುಕಟ್ಟಾದ ಆಯುಧವಾಗಿ ಕೈಗೆಟುಕಿದೆ. ನಿಜವಾದ ನೆಲಗಳ್ಳರು, ನೆಲಗರ್ಭ ಕಳ್ಳರೂ ಇಲ್ಲವೆಂದಲ್ಲ; ಆದರೂ ಸಣ್ಣ ಪುಟ್ಟ ಸಹಜ ಕ್ರಿಯಾಲೋಪಗಗಳನ್ನೇ ದೊಡ್ಡ ಅಪರಾಧದ ಸೆಕ್ಷನ್ಗಳಡಿ ಕೇಸ್ ಜಡಿಯುವ ಸಾಧ್ಯತೆಯೂ ಇಲ್ಲದಿಲ್ಲ! ರಾಜಕೀಯವೆಂಬುದೇ ’ಅಪರಾಧೀ ಕ್ಷೇತ್ರ’ವಾಗಿದೆ. ಇದಕ್ಕೆ ಸಭ್ಯರು ಬರುವುದುಂಟೇ? ನೈತಿಕ ಸುಭಿಕ್ಷ ಕಾಣಸಿಗುವುದುಂಟೇ?