ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು
ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು
ಅರಿತರೆ ಅರಿವಿತ್ತು.
ಅದ ತಿಳಿಯದೆ ಮರುಗಿತ್ತು
ಶತ ಶತಮಾನದ ಹಿಂದಿನ ಕೆಚ್ಚಿನ
ಬಲುಮೆಯ ಮರೆವಿತ್ತು
ಸೋಗಿನ ಮೋಜಿನ ದುರ್ವ್ಯಸನದಲಿ
ಸಮಾಜ ಸಾಗಿತ್ತು ||
ಸಾರ್ಥಕ ಬಾಳಿನ
ನೀತಿ ರೀತಿಗಳು ನಗೆಗೀಡಾಗಿತ್ತು
ರೋಗ ರುಜಿನದ ಚೋರ ಕೋರಭಯ
ಬಿಡದಲೆ ಕಾಡಿತ್ತು ||
ದೇಶದೆಲ್ಲೆಡೆ ಲಂಚಗುಳಿತನ
ಅವ್ಯಾಹತವಿತ್ತು
ಧನಿಕರಿಗಷ್ಟೇ ಬದುಕುವ ಹಕ್ಕು
ಎನ್ನುವ ತೆರವಿತ್ತು ||
ಶಾಂತಿಯ ಬೋಧಿಸಿ ಭ್ರಾಂತಿಯ ಹರಡುವ
ಕೆಲಸವು ಕೆಲವರದು
ವಂಚನೆ ಮಾನ್ಯತೆ ಗಳಿಸಿದ ಕಾಲದ
ಯಜಮಾನಿಕೆಯವರು ||
ಸಾಮರ್ಥ್ಯವ ತಾತ್ಸಾರದಿ ಕಾಣುವ
ಬಲು ಭೀಕರ ಕಾಲ
ಅಂತೂ ದಾಟುತ ಬಂದಿಹೆವಲ್ಲ
ಖಳ ರಾಕ್ಷಸ ಜಾಲ ||
ಕೋಮು ಗಲಾಟೆ ಕುದಿಯುತಲಿತ್ತು
ಪ್ರತಿಭೆ ಪಲಾಯನ ಮಾಡುತಲಿತ್ತು
ವಿಕೃತಿಯಾಳ್ವಿಕೆ ನಡೆಸುತಲಿತ್ತು
ಸುಕೃತಿ ಎಂಬುದು ಒಳಗಡಗಿತ್ತು
ಅಜ್ಞಾನವೆ ಮೆರೆದಾಡುತಲಿತ್ತು
ವಿಜ್ಞಾನಕೆ ಬೆರಗಾಗುತಲಿತ್ತು ||
ಎಲ್ಲೋ ಕೆಲವರ ಸಾಹಸ ದುಡಿಮೆ
ಮಾದರಿಯಾಗಿತ್ತು |
ಆಶಾಕಿರಣದಂತೆ ಇತ್ತು ||
ಪ್ರಳಯದ ಭೀತಿಯ ನಡುವೆಯು ಮೂಕರ
ಜೀವನ ಸಾಗಿತ್ತು
ಜೀವನ ತಿಳಿಸದೆ ದುಡಿಸಿತ್ತು ||
ಮುಳುಗಡೆಯಾಗದ ಆಸರೆಗಾಗಿ
ಹುಡುಕಾಡುತಲಿತ್ತು |
ಜನಮನ ಹುಡುಕಾಡುತಲಿತ್ತು ||
- ಸದಾನಂದ
- Log in to post comments