ಕಸವಾದ ಕಾಪು ಸಮುದ್ರ ತೀರ
ಪ್ರತಿ ಬಾರಿ ಊರಿಗೆ ಹೋದಾಗ ಕಾಪು ಸಮುದ್ರ ತೀರಕ್ಕೆ ಹೋಗದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಈ ಬಾರಿ ಚಾಂದ್ರಮಾನ ಯುಗಾದಿಯಂದು ಊರಿಗೆ ಹೋದಾಗ ಕೂಡ ಸಮುದ್ರ ತೀರಕ್ಕೆ ಭೇಟಿ ನೀಡಿದ್ದೆ. ಚಿತ್ರದಲ್ಲಿರುವುದು ದಿನೇ ದಿನೇ ಪ್ರಸಿದ್ಧಿ ಪಡೆಯುತ್ತಿರುವ ಕಾಪು ಸಮುದ್ರ ತೀರದ ಒಂದು ದೃಶ್ಯ. ದೀಪ ಸ್ತಂಭ ಪ್ರವೇಶಕ್ಕೆ, ವಾಹನ ನಿಲುಗಡೆಗೆ ೧೦ ರುಪಾಯಿ ಕೀಳುವ ಪ್ರವಾಸೋದ್ಯಮ ಇಲಾಖೆಗೆ ಒಂದು ಕಸದ ದಭ್ಭಿ ಇಡಲಾಗದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು/ಸ್ಥಳೀಯರು ಸ್ವಲ್ಪ ಮನಸ್ಸು ಮಾಡಿ ಕಂಡ ಕಂಡಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬಾರದೆ. ರಾತ್ರಿ ಹೊತ್ತಿಗೆ ಸುರಾಪಾನ ಮಾಡುವವರು ಬಾಟಲಿಯನ್ನು ಸಮುದ್ರಕ್ಕೆ ಎಸೆಯುವುದಕ್ಕೆ ಅಲ್ಲಿ ಸಿಗುವ ಅವುಗಳ ಅವಶೇಷಗಳೇ ಸಾಕ್ಷಿ. ಮಧ್ಯಪಾನ ಮಾಡುವವರು ಮಾಡಿ, ಸಂತೋಷ ಪಡಿ ಆದರೆ ದಯವಿಟ್ಟು ಸಮುದ್ರದ ಸೊಬಗನ್ನು ಹಾಳು ಮಾಡಬೇಡಿ. ಸಮುದ್ರ ತೀರಕ್ಕೆ ಭೇಟಿ ಕೊಡುವ ಪ್ರತಿಯೊಬ್ಬರೂ ದಯವಿಟ್ಟು ಶುಚಿತ್ವವನ್ನು ಕಾಪಾಡಿ. ಕೆಲವೊಮ್ಮೆ ಯಾಕದರೂ ನನ್ನ ಊರು ಪ್ರಸಿದ್ಧಿ ಪಡೆಯಿತೋ ಅನ್ನುವಷ್ಟು ಬೇಸರವಾಗುತ್ತದೆ. ಮುರ್ಡೇಶ್ವರ ಸಮುದ್ರ ತೀರವಂತೂ ಸಂಪೂರ್ಣ ಕಲುಷಿತವಾಗಿದೆ. ಇನ್ನು ಮಲ್ಪೆ, ತಣ್ಣೀರುಬಾವಿ, ಮರವಂತೆ ಸಮುದ್ರ ತೀರಗಳ ಬವಣೆ ಏನಿದೆಯೋ?