ಹಕ್ಕಿಯ ಲೋಕದ ಮಕ್ಕಳೆ
ಹಕ್ಕಿಯ ಲೋಕದ ಮಕ್ಕಳೆ
ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ?
ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ
ಬಿಕ್ಕಿ-ಬಿಕ್ಕಿ ಅಳುವುದು ಏಕೆ?
ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ
ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ
ಅಣ್ಣ-ಅಕ್ಕರನು ನಿಮ್ಮ ಕಣ್ಣೆದುರೀಗೆ
ಹರಣವಾ ಮಾಡಿದ್ದ ನೆನೆದೀರೇನು?
ಉಂಡು ಆಡಿದ್ದ ನಿಮ್ಮ ಪ್ರೀತಿಯ ಮರವ
ತುಂಡು ಗೋಲಿಂದ ಕಡಿದಿದ್ದಾ ನೆನೆದೀರಾ
ದುಂಡೀಯ ಹಾಗಿದ್ದ ಆ ದೊಡ್ಡ ಮರವನ್ನು
ಕೆಂಡಾವ ಮಾಡಿದ್ದ ನೆನೆದೀರೇನು?
ಸೃಷ್ಠಿಕರ್ತನು ಅವನು ಎಲ್ಲವನು ಕೊಟ್ಟಾರು, ಕೆಟ್ಟ
ದೃಷ್ಠಿಬಿದ್ದೀತು ಮನುಜನದು
ಕಷ್ಟ ಎಂಬುದು ಬರುವೂದು ಎನ್ನಾದೆ, ತನ್ನ
ಇಷ್ಟ ಬಂದಂಗೆ ಬಳಸಿದನು
ಹಸಿರಿದ್ದ ಈ ತಿರೆಯ ಹಾಳು ಮಾಡಿದನು
ಉಸಿರಲ್ಲಿ ವಿಷವ ತುಂಬಿದನು
ಹೆಸರು ಹೆಸರೆಂಬ ಹೆಸರೀನ ಆಸೆಗೆ
ಕೆಸರಲ್ಲಿ ಸಿಕ್ಕೀದ ಮೀನಾದನು
ಕೆಡುವುದು ಮನುಜ ಒಬ್ಬಾನೆ ಅಲ್ಲ
ಎಡವುದೂ ಮಾತ್ರಾ ಒಬ್ಬಾನೆ
ಅಡಿಗಡಿಗೂ ತಪ್ಪನ್ನು ಮಾಡುತ್ತ ಕೊನೆಗೆ
ಕೆಡಿಸಿದ ಜಗದ ಚೆಲುವನ್ನು
ಬೋಳಾದ ಮರಗಳನು ಕಂಡು ಕೊರಗುವಿರೇನು?
ಹಾಳಾದ ಭುವಿಯನ್ನು ಕಂಡರಿತು
ಏಳಿಗೆ ಹೇಗೆ ಎಂಬುದು ಅರಿಯಾದೆ
ಬಾಳೀನ ಚಿಂತೆಯಲಿ ಮುಳುಗಿಹಿರೇನು?
- ಜಯಪ್ರಕಾಶ ನೇ ಶಿವಕವಿ